ಕೇಸರೀಕರಣ: ದಾಯಾದಿಗಳ ಕಲಹ
– ಸಂತೋಷ್ ಕುಮಾರ್ ಪಿಕೆ
ಕರ್ನಾಟಕದ ಪ್ರಾಥಮಿಕ ಶಾಲಾಪಠ್ಯದಲ್ಲಿ ಹೊಸ ಪಠ್ಯಕ್ರಮವನ್ನು ಸೇರ್ಪಡೆ ಮಾಡುತ್ತಿರುವ ಕುರಿತು ಎರಡು ಬಣಗಳ ನಡುವೆ ವ್ಯಾಪಕವಾದ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಬಿ.ಜೆ.ಪಿಯವರು ಹೊಸಪಠ್ಯಕ್ರಮವನ್ನು ಕೇಸರೀಕರಣವೆಂದೂ ಆದರೆ ಅದು ವಿರೋಧಿ ಬಣಗಳು ತಿಳಿದುಕೊಂಡಿರುವ ರೀತಿಯದ್ದಲ್ಲ ಎಂತಲೂ ಹಾಗೂ ಅದರ ವಿರೋಧಿ ಗುಂಪು ಅದು ಕೇಸರೀಕರಣ ಪ್ರಕ್ರಿಯೆ ಎಂತಲೂ ನಿರಪಯುಕ್ತವಾದ ಚರ್ಚೆಯನ್ನು ಬಿರುಸಾಗಿ ನಡೆಸುತ್ತಿದ್ದಾರೆ. ಪ್ರಸ್ತುತ ಬರಹದಲ್ಲಿ ಆ ಚರ್ಚೆಯಲ್ಲಿ ಪಾಲ್ಗೊಂಡವರು ಬೇರೆ ಬೇರೆ ತುದಿಯಲ್ಲಿ ನಿಂತಂತೆ ಭಾಸವಾದರೂ ಇಬ್ಬರೂ ಒಂದೇ ಸೇತುವೆಯ ಮೇಲೆ ನಿಂತಿರುವುದನ್ನು ನಿದರ್ಶಿಸುವ ಪ್ರಯತ್ನವನ್ನು ಮಾಡಲಾಗುವುದು. ಮೊದಲನೆಯದಾಗಿ ಬಿ.ಜೆ.ಪಿ.ಬಣದ ವಾದದಿಂದ ಪ್ರಾರಂಭಿಸುತ್ತೇನೆ.
ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಡಗೆ ಕಾಗೇರಿಯವರು ಇತ್ತೀಚೆಗೆ ತಮ್ಮ ಲೇಖನದಲ್ಲಿ ಕೇಸರೀಕರಣದ ಕುರಿತು ಎಲ್ಲರಿಗೂ ಗೊಂದಲವಿದ್ದು, ಅದರ ಕುರಿತು ಸ್ಪಷ್ಟತೆ ಅದನ್ನು ವಿರೋಧಿಸುವ ವಿರೋಧಿಗಳಿಗಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ನನ್ನ ಪ್ರಕಾರ, ಕೇಸರೀಕರಣದ ಕುರಿತು ಅದರ ವಿರೋಧಿಗಳಿಗಿರಲಿ, ಅದರ ಸ್ವಯಂ ಪ್ರತಿಪಾದಕರಿಗೇ ಸರಿಯಾದ ಜ್ಞಾನ ಇರುವುದು ಅನುಮಾನ. ಏಕೆಂದರೆ ಇದುವೇ ಕೇಸರೀಕರಣ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ಯಾರಿಗೂ ಇದ್ದಂತಿಲ್ಲ, ಕೇವಲ ಭಗವಾಧ್ವಜ ಹಿಡಿದುಕೊಂಡು ಮಾಡುವ ಕೆಲಸಗಳು ಮಾತ್ರ ಕೇಸರೀಕರಣವಾಗುತ್ತದೆಯೇ? ಖಂಡಿತ ಇಲ್ಲ, ಏಕೆಂದರೆ ಕೇಸರೀಕರಣ ಎಂಬುದು ಒಂದು ಐಡಿಯಾಲಜಿ, ನಿದರ್ಶಿ ಷ್ಟವಾಗಿ ಇಂತಿಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡುವ ವಿಚಾರಗಳ ಗುಚ್ಚ ಅದಾಗಿದೆ. ಹಾಗೂ ಕೇಸರೀಕರಣದ ಕುರಿತು ಯಾವುದೇ ಸಿದ್ಧಾಂತ (ಥಿಯರಿ)ದ ಜ್ಞಾನಶಿಸ್ತು (ಜ್ಞಾನಶಿಸ್ತಿನ ಅಗತ್ಯ ಇಲ್ಲ ಎಂದು ಬಿ.ಜೆಪಿ ಯವರು ಭಾವಿಸಿದ್ದರೂ ಕೂಡ) ಇಲ್ಲದಿರುವುದರಿಂದ ಜನರು ತಮ್ಮ ಮನಸೋಇಚ್ಚೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ.





