ಚಿಮೂ ಗೌರವ ಡಾಕ್ಟರೇಟ್ : ನಿಲುಮೆಯ ನಿಲುವು ಮತ್ತು ಕನ್ನಡ ಸಾಹಿತ್ಯ ಲೋಕದ ನಿಲುವು
ನಿಲುಮೆ
ಕನ್ನಡದ ಹಿರಿಯ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕ ಚಿಮೂ ಅವರಿಗೆ ರಾಜ್ಯಪಾಲ ಹಂಸ ಭಾರಧ್ವಾಜ್ ರಾಜಕೀಯ ಉದ್ದೇಶದಿಂದ ಗೌರವ ಡಾಕ್ಟರೇಟ್ ನಿರಾಕರಿಸಿದನ್ನ ಪ್ರಶ್ನಿಸಿ ನಿನ್ನೆ ನಿಲುಮೆ ತನ್ನ ನಿಲುವನ್ನ ಪ್ರಕಟಿಸಿತ್ತು.ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯವಲಯದಿಂದ ರಾಜ್ಯಪಾಲರ ನಿಲುವಿಗೆ ತಪರಾಕಿಗಳು ಬಿದ್ದಿವೆ.
ಇವರ ತಪರಾಕಿಗಳನ್ನ ನೋಡಿ ನಮಗಂತೂ ಬಹಳ ಸಮಧಾನವಾಗಿದೆ.ಇದೋ ನಿಮಗಾಗಿ
ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ :
‘ರಾಜ್ಯಪಾಲರು ಮಾಡಿದ್ದು ಬಹಳ ತಪ್ಪು. ಅವರು ಈ ರೀತಿ ನಡೆದುಕೊಂಡಿರುವುದು ವಿಪರ್ಯಾಸ. ಚಿದಾನಂದಮೂರ್ತಿ ಅವರು ವಯಸ್ಸಿನಲ್ಲೂ, ವಿದ್ವತ್ತಿನಲ್ಲೂ ನಮಗಿಂತ ಹಿರಿಯರು. ಈ ಬೆಳವಣಿಗೆಯನ್ನು ನೋಡಿದರೆ ಸ್ವಾಭಿಮಾನ ಇರುವ ಯಾವ ಸಾಹಿತಿಯೂ ಗೌರವ ಡಾಕ್ಟರೇಟ್ ಸ್ವೀಕರಿಸಬಾರದು ಎಂದೆನಿಸುತ್ತದೆ. ಅವರಿಗೆ ಡಾಕ್ಟರೇಟ್ ಕೊಡುವ, ಕೊಡದಿರುವ ಬಗ್ಗೆ ಗುಪ್ತವಾಗಿ ಚರ್ಚೆ ನಡೆಯಬೇಕಿತ್ತು. ಆದರೆ ಈ ವಿಷಯ ರಾಜ್ಯಪಾಲರ ತನಕ ಹೋಗಿ, ದಿನಪತ್ರಿಕೆಗಳಲ್ಲಿ ಅವರಿಗೆ ‘ಡಾಕ್ಟರೇಟ್ ತಿರಸ್ಕರಿಸಲಾಗಿದೆ’ ಎಂದು ಪ್ರಕಟವಾಗುವ ಹಂತ ತಲುಪಿದ್ದು ನೋವಿನ ಸಂಗತಿ. ಯಾವ ಸಾಹಿತಿಗಳೂ ಈ ರೀತಿ ನೀಡಲಾಗುವ ಡಾಕ್ಟರೇಟ್ ಸ್ವೀಕರಿಸಬಾರದು’
ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ :
‘ನಮ್ಮ ನಡುವಿನ ವೈಚಾರಿಕ ಭಿನ್ನತೆ ಏನೇ ಇರಬಹುದು. ಆದರೆ ಚಿದಾನಂದಮೂರ್ತಿಗಳಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಗದಂತೆ ಮಾಡಿರುವುದು ಸಾರಸ್ವತ ಲೋಕಕ್ಕೆ ಮಾಡಿದ ಅವಮಾನ’
ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕರಾದ ಡಾ.ಕೆ.ಮರುಳಸಿದ್ದಪ್ಪ :
‘ಕಾಂಗ್ರೆಸ್ ಏಜೆಂಟ್?’: ‘ರಾಜ್ಯಪಾಲರಿಗೆ ಸಾಹಿತ್ಯ, ಸಾಹಿತಿಗಳ ಬಗ್ಗೆ ಏನು ಗೊತ್ತಿದೆ? ಚಿದಾನಂದಮೂರ್ತಿ ಅವರು ನನ್ನ ಗುರುಗಳಾಗಿದ್ದರೂ, ಸಂಘ ಪರಿವಾರದ ವಿಚಾರಗಳನ್ನು ಬೆಂಬಲಿಸುವ ನಿರ್ಧಾರವನ್ನು ಖಂಡಿಸುತ್ತೇನೆ. ಆದರೆ ಅವರನ್ನು ಒಬ್ಬ ವಿದ್ವಾಂಸರಾಗಿ ಗೌರವಿಸುತ್ತೇನೆ. ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರ ಸೇರಿದಂತೆ ವಿಭಾಗಗಳಲ್ಲಿ ಸತತ 40 ವರ್ಷ ದುಡಿದಿದ್ದಾರೆ. ಕೆಲವರು ರಾಜ್ಯಪಾಲರನ್ನು ಕಾಂಗ್ರೆಸ್ ಏಜೆಂಟ್ ಎಂದು ಟೀಕಿಸುತ್ತಿದ್ದರು. ಈ ಪ್ರಕರಣದಲ್ಲಿ ನಡೆದುಕೊಂಡ ರೀತಿಯನ್ನು ನೋಡಿದರೆ ನಾನೂ ಹಾಗೆಯೇ ಕರೆಯಬೇಕಾಗುತ್ತದೆ’
ಕರ್ನಾಟಕ ಸಾಹಿತ್ಯ ಪರಿಷತ್ತಿನ ಡಾ.ಸಿ.ವೀರಣ್ಣ :
‘ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆಯೇ ಹೊರತು ಸರ್ವಾಧಿಕಾರಿ ಆಡಳಿತದಲ್ಲಿಲ್ಲ. ವಿರೋಧಿ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಗೌರವಿಸದಿದ್ದರೆ ಅದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ? ನಾನು ಎಡಪಂಥೀಯನಾದ್ದರಿಂದ ಅವರ ಹಾಗೂ ನನ್ನ ಮಧ್ಯೆ ವೈಚಾರಿಕ ಭಿನ್ನತೆಗಳಿವೆ. ಆದರೆ ಅವರೊಬ್ಬ ಹಿರಿಯ ಸಂಶೋಧಕರಾದ್ದರಿಂದ ಅವರನ್ನು ಗೌರವಿಸುತ್ತೇನೆ.
ಇಂದು ಬದುಕಿರುವ ಕೆಲವೇ ಕೆಲವು ಸಂಶೋಧಕರಲ್ಲಿ ಚಿ.ಮೂ ಅವರೇ ಮೊದಲನೇಯವರು.ಅವರಿಗೆ ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವದ ಲಕ್ಷಣ ಅಲ್ಲ.ಪತ್ರಿಕೆಯಲ್ಲಿ ವರದಿಯಾದಂತೆ, ಮೊದಲು ಡಾಕ್ಟರೇಟ್ ಪದವಿ ನೀಡಲು ಒಪ್ಪಿಗೆ ನೀಡಿ ನಂತರ ಒತ್ತಡಕ್ಕೆ ಒಳಗಾಗಿ ಅವರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕಿಂತ ಅಸಹ್ಯಕರವಾದ ಕೃತ್ಯ ಬೇರೊಂದಿಲ್ಲ.ರಾಜ್ಯಪಾಲರು ತಮ್ಮ ಗೌರವಕ್ಕೆ ತಕ್ಕಂತೆ ನಡೆದುಕೊಂಡಿಲ್ಲ’
ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ರಾಜ್ಯ ಅಧ್ಯಕ್ಷರಾದ ಬಿ.ಎಚ್.ಸುರೇಶ್ :
‘ರಾಜ್ಯಪಾಲರ ಕ್ರಮದಿಂದ 80ರ ಇಳಿವಯಸ್ಸಿನ ಚಿದಾನಂದಮೂರ್ತಿ ಅವರಿಗೆ ಅಪಮಾನ ಆಗಿದೆ. ಹಿಂದೆಲ್ಲ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಗೌರವ ದೊರಕುತ್ತಿತ್ತು.
ಆದರೆ ಶಿಫಾರಸುಗಳ ಮೇಲೆ ನೀಡಲಾಗುತ್ತಿರುವ ಪದವಿ ಇಂದು ಮಾನ್ಯತೆ ಕಳೆದುಕೊಳ್ಳುವಂತಾಗಿದೆ. ಈ ಕುರಿತು ವ್ಯಾಪಕ ಬದಲಾವಣೆ ಅತ್ಯವಶ್ಯಕ
ಇಷ್ಟು ದಿನ ಕೇವಲ ರಾಜಕೀಯ ದೊಂಬರಾಟಕ್ಕೆ ಸೀಮಿತವಾಗಿದ್ದ ರಾಜ್ಯಪಾಲರ ವರ್ತನೆಗಳು, ಇದೀಗ ಕನ್ನಡ ಸಾರಸತ್ವ ಲೋಕಕ್ಕೆ,ಆ ಮೂಲಕ ಕನ್ನಡಕ್ಕೆ,ಕನ್ನಡಿಗರಿಗೆ ಅವಮಾನ ಮಾಡುವಂತ ನಿಲುವುಗಳನ್ನ ತೆಗೆದುಕೊಂಡಾಗ ಪ್ರತಿಭಟಿಸಬೇಕಾದದ್ದು ಮತ್ತು ಪ್ರಶ್ನಿಸಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಅಲ್ಲವೆ?
ಕೃಪೆ : ಪ್ರಜಾವಾಣಿ





Its not the right and good decision.
ರಾಜ್ಯಪಾಲರು ಮತ್ತೊಮ್ಮೆ ಪಕ್ಷನಿಷ್ಟೆ ತೋರಿಸಿ ತನ್ನ ಸ್ಥಾನದ ಮಹಿಮೆ ತೋರಿಸಿದರು! ಇದು ಕನ್ನಡಿಗರಿಗೆ, ಸಾಹಿತಿಗಳಿಗೆ ಆದ ದೊಡ್ಡ ಅಪಮಾನ.
yareegu ee reethi maadbaaradu!