ಜೇನುಗೂಡಿಗೆ ಕಲ್ಲು ಹೊಡೆದ್ರೆ ಏನಾಗುತ್ತೆ ಅಂತ ಗೊತ್ತಾಯ್ತಾ!?
(ಇದೆ ಲೇಖನಗಳನ್ನ ನೋಡಿ ಬೋರ್ ಅನಿಸಬಹುದು,ಆದರೆ ಈ ಮನುಷ್ಯ ಮಾಡಿದ ಕೆಲಸ ಮೈ ಉರಿಯುವಂತದ್ದು,ನಾನು ಬರೆಯಬಾರದು ಅಂದುಕೊಂಡರು ಬರೆಯದಿರಲಾಗಲಿಲ್ಲ.ಇದನ್ನ
ಬರೆಯುವ ಹೊತ್ತಿಗೆ ಚಿಮೂ ಅವರಿಗೆ ಗೌರವ ಸಲ್ಲಲ್ಲಿದೆ ಅನ್ನುವ ಸಮಾಧಾನಕರ ಸುದ್ದಿ ಬಂದರೂ,ಅಂತ ಹಿರಿಯ ಜೀವದ ಮನ ನೋಯಿಸಿದವರ ಬಗ್ಗೆ ಬರೆಯದಿರಲು ಹೇಗೆ ಸಾಧ್ಯ? )
ಮರವಂಜಿ ಅನ್ನೋದು ಈ ರಾಜ್ಯದ ಒಂದು ಪುಟ್ಟಹಳ್ಳಿ.ಆ ಹಳ್ಳಿಯ ಬಯಲಲ್ಲಿ ಆಟವಾಡುತಿದ್ದ ಮಕ್ಕಳ ಬಳಿ ಒಬ್ಬ ಪೇಲವ ಶರೀರದ,ಮೃದು ಮಾತಿನ ವ್ಯಕ್ತಿ ಬಂದು ಕೇಳಿದರು ’ಮಕ್ಕಳೇ,ಈ ಹಳ್ಳಿಯಲ್ಲಿ ದೊಡ್ಡ ಮನೆ ಯಾರದಪ್ಪ?’ಅಲ್ಲಿ ಆಟವಾಡುತಿದ್ದ ದೊಡ್ಡ ಮನೆಯ ಮಕ್ಕಳು ಆ ವ್ಯಕ್ತಿಯನ್ನ ಮನೆಗೆ ಕರೆದುಕೊಂಡು ಹೋದರು.ಮನೆಯ ಹಿರಿಯರೊಂದಿಗೆ ಆ ವ್ಯಕ್ತಿ ’ತಾನು, ಕರ್ನಾಟಕ-ಕನ್ನಡದ ಬಗ್ಗೆ ಸಂಶೋಧನೆ ಮಾಡುತ್ತಾ ಇರುವುದಾಗಿಯೂ,ಅದಕ್ಕಾಗಿ ಹೀಗೆ ಹಳ್ಳಿ ಹಳ್ಳಿಗಳಿಗೊ ಭೇಟಿ ನೀಡುತ್ತಿರುವುದಾಗಿಯು ಮತ್ತು ಹೋದೆಡೆ ಹೀಗೆ ಉಳ್ಳವರ ಮನೆಯಲ್ಲಿ ವಿಶ್ರಾಂತಿ ಪಡೆದು ಸಾಗುತ್ತಿರುವುದಾಗಿ’ ಹೇಳಿದ್ದರು.ಹಾಗೆ ಮುಂದುವರೆದು ’ಉಚಿತವಾಗಿ ಈ ರೀತಿ ಉಳಿದುಕೊಳ್ಳುವುದು ನನಗೆ ಕಷ್ಟವಾಗುತ್ತದೆ, ನಿಮ್ಮ ಮನೆಯ ಮಕ್ಕಳನ್ನೆಲ್ಲ ಕರೆಯಿರಿ ನಾನವರಿಗೆ ಕಥೆಯನ್ನಾದರು ಹೇಳುತ್ತೇನೆ’ ಅಂದರಂತೆ.ಆ ವ್ಯಕ್ತಿ ಹಾಗೆ ಮನೆಗೆ ಬಂದು ಹೋದ ೪-೫ ವರ್ಷದ ಮೇಲೆ ಯಾವುದೋ ಪತ್ರಿಕೆಯಲ್ಲಿ ಅವರ ಫೋಟೊ ನೋಡಿದಾಗಲೆ ಆ ಮನೆಯವರಿಗೆ ಗೊತ್ತಾಗಿದ್ದು ಅಂದು ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದ ವ್ಯಕ್ತಿ, ಕನ್ನಡದ ಹಿರಿಮೆಯ ಸಂಶೋಧಕ,ವಿದ್ವಾಂಸರು ಅಂತ.
ಹಾಗೆ ಊರುರು ಸುತ್ತಿ ಕಷ್ಟಪಟ್ಟು ಕನ್ನಡಿಗರಿಗೆ,ಕನ್ನಡಕ್ಕೆ,ಕರ್ನಾಟಕಕ್ಕೆ ಕೊಡುಗೆ ನೀಡಿದ ಮಹನೀಯ ಡಾ|| ಚಿದಾನಂದ ಮೂರ್ತಿಯವರು.
ಇಂತ ಮಹನೀಯರಿಗೆ ರಾಜಕೀಯ ಕಾರಣಗಳಿಂದಾಗಿ ಅವಮಾನಿಸಿದ್ದ ’ಭಾರ’ಧ್ವಜ್ ಅವರಿಗೆ ಬಹುಷಃ ಸಂಶೋಧಕ/ವಿದ್ವಾಂಸರಾಗುವುದುದೆಂದರೆ ನೆಹರೂ ಕುಟುಂಬಕ್ಕೆ ಭೋ-ಪರಾಕ್ ಹೇಳಿ ಗಿಟ್ಟಿಸಿಕೊಂಡ ರಾಜ್ಯಪಾಲ ಹುದ್ದೆಯಷ್ಟೆ ಸುಲಭದ್ದು ಅನ್ನಿಸಿರಬೇಕು!ಇವ್ರಿಗೆ,ಯುಪಿಎ ಸರ್ಕಾರದ ಮೊದಲನೆ ಅವಧಿಯಲ್ಲಿ ಕೇಂದ್ರದ ಮಂತ್ರಿಯಾಗಿದ್ದಾಗ ರಾಮಸೇತು ವಿವಾದ ಬಳ್ಳಿ ಸುತ್ತಿಕೊಂಡಿತ್ತು,ಅದರ ಫ಼ಲವೋ ಅಥವಾ ನಮ್ಮ್ ಕರ್ಮವೋ ಕರ್ನಾಟಕದ ರಾಜ್ಯಪಾಲರಾಗಿ ಬಂದುಬಿಟ್ರು.ಇವರು ಬರುವಾಗಲೇ ಕನ್ನಡದ ಮಾಧ್ಯಮಗಳು,ಇಲ್ಲೊಂದು ’ಭಾರ’ವಾದ ಉದ್ದೇಶವಿದೆ ಅಂತ ಸೂಚ್ಯವಾಗೆ ಹೇಳಿದ್ದವು.ಅವರು ಬಂದವರೇ ವರಾತ ಶುರು ಹಚ್ಚಿಕೊಂಡೂ ಬಿಟ್ರು.ಬಾರಿಸೋಕೆ ಅಂತ ಬಂದವರ ಕೈಗೆ ಬಾರು ಕೋಲು ಕೊಟ್ಟು ಬೆನ್ನು ತಿರುಗಿಸಿ ನಿಂತಂತೆ ಯಡ್ಯೂರಪ್ಪನವರ ಸರ್ಕಾರವು ಮಾಡುತ್ತ ಬಂದಿತ್ತು.ತೀರಾ ಒಂದೆರಡು ವಾರಗಳ ಹಿಂದಷ್ಟೆ ’ಕರ್ನಾಟಕ ಬಂದ್’ ಕೂಡ ಆಗಿ ಬಿಜೆಪಿಯವರು ’ಗವರ್ನರ್ ಗೋ ಬ್ಯಾಕ್’ ಅಂದಾಗಲು ಅಷ್ಟಾಗಿ ಜನ ಬೆಂಬಲ ಸಿಕ್ಕಿರಲಿಲ್ಲ.
ಆದರೆ,ಯಾರನ್ನೋ ಸಿಂಹಾಸನದ ಮೇಲೆ ಕೂರಿಸಿದ್ರೂ ತಿಪ್ಪೆ ಕೆದಕೋದು ಬಿಡೋದಿಲ್ವಂತೆ’ ಅನ್ನೋ ಮಾತಿನಂತೆ,ರಾಜಕೀಯಕ್ಕೆ ಸೀಮಿತವಾಗಿದ್ದ ಇವರ ವಿವಾದದ ನಡೆಯನ್ನ ’ಕನ್ನಡ ಸಾರಸತ್ವ ಲೋಕದ ಹಿರಿಯ ಜೀವಿ ಚಿಮೂ’ ಅವರಿಗೆ ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ನೀಡುವುದನ್ನ ತಡೆದು ಸಾಹಿತ್ಯ ಲೋಕಕ್ಕು ರಾಜಕೀಯದ ರಾಡಿ ಎರಚಿ, ಜೇನುಗೂಡಿಗೆ ಕಲ್ಲು ಹೊಡೆದು ಬಿಟ್ಟರಲ್ಲ, ಪಾಪ! ಎಡ-ಬಲ ಪಂಥೀಯ ಸಾಹಿತಿಗಳಿಂದ,ಸಂಘಟನೆಗಳಿಂದ ಕಡೆಗೆ ಸಾಹಿತ್ಯ ಸಮ್ಮೇಳನದಲ್ಲಿ ಖಂಡನ ನಿರ್ಣಯ ಕೈಗೊಳ್ಳುವ ಮೂಲಕ ತಪರಾಕಿ ಹಾಕಿಸಿಕೊಂಡು, ಮೊದಲು ಚಿಮೂ ಅಂತವರನ್ನ ಕೋಮುವಾದಿ ಅಂದು ಅದಕ್ಕೆ ಮತ್ತಿನ್ನೊಂದಿಷ್ಟು ತಪರಾಕಿಗಳು ಬಿದ್ದಮೇಲೆ ಬುದ್ದಿ ಬಂದಂತೆ,ಮಾಡಿದ ತಪ್ಪನ್ನ ಸರಿ ಮಾಡಲು ಹೊರಟು ನಿಂತಿದ್ದಾರೆ.ಚಿಮೂ ಅವರ ಸಾಮಾಜಿಕ ಕಳಕಳಿ ಸರಿಯಿಲ್ಲ,ರಾಜ್ಯಪಾಲರು ಮಾಡಿದ್ದು ಸರಿಯಿದೆ ಅಂದಿದ್ದ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಅವ್ರು, ಈಗ ರಾಜ್ಯಪಾಲರ ನಿಲುವುನ್ನ ಟೀಕಿಸಬಲ್ಲರೇ?
ಈ ವಿಷಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಕಿತ್ತಾಡಿಕೊಳ್ಳುತಿದ್ದ ಸಾಹಿತಿಗಳೆಲ್ಲರು ದನಿಗೂಡಿಸಿದ್ದು ಖುಶಿ ನೀಡಿತು.ಆದರೆ ಕನ್ನಡ/ಕನ್ನಡಿಗರಿಗೆ ಮೋಸವಾದಗ ಮೂಂಚೂಣಿಯಲ್ಲಿ ನಿಂತು ದನಿಯೆತ್ತೋ ಸಂಘಟನೆ ಮೌನವಗಿದ್ದು ಏಕೆಂದು ತಿಳಿಯಲಿಲ್ಲ!
ಕನ್ನಡ/ಕರ್ನಾಟಕದ ಗಂಧ ಗಾಳಿಯಿಲ್ಲದ,ಕೇವಲ ಕೇಸರಿ-ಹಸಿರಿನ ರಾಜಕಾರಣದಲ್ಲೆ ಮುಳುಗುವವರಿಗೆ ಕೆಂಪು-ಹಳದಿಯ ಕಂಪೇಗೆ ಗೊತ್ತಾಗಬೇಕು?ಸದಾ ಸುದ್ದಿಯಲ್ಲಿರುವುದೆ ಉದ್ದೇಶವಾದರೆ ಇವರೇಕೆ ಮರಳಿ ದೆಹಲಿಗೆ ಹೋಗಬಾರದು?,ಕರ್ನಾಟಕದ ಜನತೆ ಹಿಂದೆಂದೂ ಸಹ ಸಾಹಿತ್ಯ ಲೋಕ ಹಾಗೂ ವಿವಿಯಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲರನ್ನ ಬಹುಷಃ ನೋಡಿಲ್ಲ.ಎಲ್ಲ ಅವರಂತೆಯೆ ಸಿಕ್ಯುಲರ್ಗಳಾಗಿ ಯೋಚಿಸಬೇಕು ಇಲ್ಲದಿದ್ದರೆ ಅವರು ’ಕೋಮುವಾದಿ’ ಸಾಮಾಜಿಕ ಕಳಕಳಿ ಇಲ್ಲ ಅನ್ನುವುದು ಸರ್ವಾಧಿಕಾರಿತನವಲ್ಲವೇ? ಇಂತ ರಾಜ್ಯಪಾಲರು ಕರ್ನಾಟಕಕ್ಕೆ ಇನ್ನು ಬೇಕಾ?
(ಚಿತ್ರ ಕೃಪೆ : samaylive.com)





satya niste antane ankondre… Kannadaku kai bidbeka…
ಎಡ-ಬಲ ಪಂಥೀಯ ಸಾಹಿತಿಗಳೆಲ್ಲರೂ ಚಿಮೂ ಪರವಾಗಿ ನಿಂತದ್ದೇನೋ ಖುಷಿ ಕೊಟ್ಟಿತು. ಆದರೆ ಚಿಮೂ ಅವರನ್ನು ಸಮರ್ಥಿಸುವಾಗ ಅವರ ಶಿಷ್ಯರೆನಿಸಿಕೊಂಡ ಕೆಲವು ಜನ “ಚಿಮೂ ಒಬ್ಬ ಒಳ್ಳೆಯ ಸಂಶೋಧಕರಾಗಿದ್ದರೂ ಈಗೀಗ ಅವರು ತೆಗೆದುಕೊಳ್ಳುತ್ತಿರುವ ನಿಲುವುಗಳು ಸರಿಯಿಲ್ಲ” ಎಂಬ ಕೊಂಕು ನುಡಿಗಳು ಕೇಳಿಬಂದವು. ಇಷ್ಟು ಹೇಳಿದವರು ಚಿಮೂ ಅವರ ಯಾವ ನಿಲುವುಗಳು ಯಾಕೆ ಸರಿ ಇಲ್ಲ ಎಂದು ಹೇಳುವ ಗೋಜಿಗೆ ಹೋಗುತ್ತಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಚಿಮೂ ಅವರನ್ನು ಸಮರ್ಥಿಸುವ ಗೊಡವೆ ಏಕೆ ಅವರಿಗೆ? ಒಂದೋ ಚಿಮೂ ಒಬ್ಬ ಕೋಮುವಾದಿಯೆಂದು ಒಪ್ಪಿಕೊಳ್ಳಬೇಕು ಅಥವಾ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವುದನ್ನು ಬಿಡಬೇಕು.
ಇವನ್ನೆಲ್ಲ ನೋಡಿದರೆ ಇಂತಹಾ ಮಹನೀಯರಿಗೆ ಚಿಮೂ ಒಬ್ಬ “ಬಗಲಲ್ಲಿರುವ ಮುಳ್ಳು” ಇರಬೇಕು – ಅಂತ ಅನಿಸುವುದರಲ್ಲಿ ತಪ್ಪಿಲ್ಲ ತಾನೆ!
ಕುಲಪತಿಯಾಗಿ ವಿಶ್ವ ವಿದ್ಯಾಲಯಲಯದ ಪ್ರತಿಷ್ಠೆ ಎತ್ತಿ ಹಿಡಿಯುವುದು ರಾಜ್ಯಪಾಲರ ಕರ್ತವ್ಯ. ಈಗ ವಿವಾದದಲ್ಲಿರುವ ವ್ಯಕ್ತಿಗೆ ಡಾಕ್ಟರೇಟ್ ಕೊಡದಿರಲು ಶ್ರೀಯುತ ಭಾರಧ್ವಜ್ ತಮ್ಮದೇ ಆದ ಕಾರಣ ಹೊಂದಿದ್ದರೆ ಅದಕ್ಕೆ ತಕ್ಕ ಸಮಜಾಯಿಷಿ ನೀಡಿ ಒಪ್ಪಿಸಬಹುದಿತ್ತು. ಅದನ್ನು ಬಿಟ್ಟು ಅವರ ಮೇಲೆ ಸಾರಾಸಗಟಾಗಿ ಎಗರಿ ಬಿದ್ದು ಅವರ ಚಾರಿತ್ರ್ಯಹರಣಕ್ಕೆ ಕೈ ಹಾಕುವುದು ತರವಲ್ಲ. ಪೂರ್ವಾಗ್ರಹ ಪೀಡಿತರಾಗಿ ರಾಜ್ಯಪಾಲರು ಮಾಡಿದ್ದನ್ನೆಲ್ಲಾ ತಪ್ಪು, ಕುಚೋದ್ಯಭರಿತ ಎಂದು ಟೀಕಿಸುತ್ತಾ ಕುಳಿತರೆ ಪ್ರಪಂಚದ ಮುಂದೆ ನಾವು ಅತಿ ಸಣ್ಣವರಾಗಿ ಬಿಡುತ್ತೇವೆ. ತನ್ನದೇ ಆದ ನಿಲುವು, ಸ್ವ ಅಭಿಪ್ರಾಯ ಇಲ್ಲದ ವ್ಯಕ್ತಿ ರಾಜ್ಯಪಾಲರಾಗಿ ನಮಗೆ ಬೇಡದಿದ್ದರೆ ಒಂದು puppet ನನ್ನು ಹಿಡಿದು ಆ ಸ್ಥಾನಕ್ಕೆ ಕೂರಿಸಿದರೆ ಹೇಗೆ?
ಅವರಿಗೊಂದು ನಿಲುವು ಇರುವುದೇ ತಪ್ಪು ಅನ್ನಲು ನಾನು ಭಾರಧ್ವಜ್ ಅಲ್ಲ.ಅವರ ನಿಲುವೇ ಎಲ್ಲರ ನಿಲುವಾಗಿರಬೇಕು ಅನ್ನುವ ರೀತಿ ನಡೆದುಕೊಂಡವರು ಅವರೆ ಅಲ್ವಾ ಅಬ್ದುಲ್? ಕರ್ನಾಟಕದ ಜನತೆಯ ಮುಂದೆ ಸಣ್ಣವರಾಗಿದ್ದು ಯಾರು ಅನ್ನುವುದು ಗೊತ್ತಾಗಿರಬೇಕಲ್ಲ.ಅಷ್ಟಕ್ಕೂ ತಪ್ಪನ್ನ ತಪ್ಪು ಅಂತ ಹೇಳಲು ಹಿಂಜರಿಕೆಯಾಕೆ ಬೇಕು ಹೇಳಿ.
ಚಿಮೂ ಡಾಕ್ಟರೇಟ್ ನಿರಾಕರಿಸಬೇಕಿತ್ತು. ಬರಗೂರು ಊಹಿಸಿದ ಹಾಗೆ. ಈಗಾಗ್ಲೆ ಡಾಕ್ಟರೇಟ್ ಇರುವುದರಿಂದ……….
ಹೌದು ಮೋಹನ್,ಬಹಳಷ್ಟು ಜನರು ಹಾಗೆ ನಿರೀಕ್ಷಿಸಿದ್ದರು ಅನ್ನಿಸುತ್ತೆ..
ಇಲ್ಲಿ ಚಿಮೂಗೆ ಕೊಟ್ಟಿದ್ದು ಸರಿನೋ, ತಡೆದಿದ್ದು ಸರಿನೋ ಅಂಬುದಕ್ಕಿಂತ ಬುಡಕ್ಕೆ ಹೋಗಿ ನಾವು ನೋಡಬೇಕಾಗಿರೋದು ರಾಜ್ಯಪಾಲರ ಹುದ್ದೆಯಾದರೂ ಯಾಕೆ ಬೇಕು ಅನ್ನೋದು..
ರಾಜ್ಯಪಾಲರ ಹುದ್ದೆ ಇರೋದೇ ಒಕ್ಕೂಟ ವ್ಯವಸ್ಥೆಯನ್ನು ಅಣಕ ಮಾಡಿದಂತೆ. ಒಂದು ರಾಜ್ಯದ ಸರ್ಕಾರ ತೆಗೆದುಕೊಳ್ಳುವ ನಿಲುವನ್ನು ಮನಸಿಗೆ ಬಂದಂತೆ ಬದಲಾಯಿಸುವ, ಆ ಸರ್ಕಾರ ತನ್ನ ನಾಡಿನ ತನ್ನ ವ್ಯಾಪ್ತಿಯ ವಿಷಯಗಳ ಬಗ್ಗೆ ತೆಗೆದುಕೊಳ್ಳುವ ನಿಲುವನ್ನು ತಿರುಚುವ ರಾಜ್ಯಪಾಲರ ಹುದ್ದೆಯಾದರೂ ಯಾಕೆ ಬೇಕಿದೆ? ಅದಿರಿವುದೇ ಕೇಂದ್ರ ಸರ್ಕಾರದ ಮೂಲಕ ಒಕ್ಕೂಟದ ಪಾಲುದಾರ ರಾಜ್ಯಗಳ ಮೇಲೆ ಬೇಕಿಲ್ಲದ ಹಿಡಿತ ಸಾಧಿಸುವುದಕ್ಕಾಗಿ.
ನಿಮ್ಮ ಬರಹ ಅದನ್ನು ಪ್ರಶ್ನಿಸುತ್ತೆನೋ ಅಂದುಕೊಂಡಿದ್ದೆ. ಆದ್ರೆ ಇದು ಹೆಚ್ಚಾಗಿ ಚಿಮೂ ಬಗೆಗಿನ ಎಮೋಷನಲ್ outburstಗೆ ಸೀಮಿತವಾಗಿದೆ ರಾಕೇಶ್ ಅವರೇ..
ಚಿಮೂ ಆಗಲಿ, ಅನಂತಮೂರ್ತಿ, ಕಾರ್ನಾಡ್ ಆಗಲಿ,, ಸೈದ್ಧಾಂತಿಕವಾಗಿ ಯಾವುದೇ ನಿಲುವು ತಳೆಯಲಿ, ಅದು ಅವರವರ ವೈಯಕ್ತಿಕ ಆಯ್ಕೆ.. ಆದ್ರೆ ನಾಡು-ನುಡಿಯ ವಿಚಾರ ಬಂದಾಗ ಒಮ್ಮೊಮ್ಮೆ ಅವರು ಸರಿಯಾಗಿ ನಡೆದುಕೊಂಡಿಲ್ಲ ಅಂಬುದು ಅಷ್ಟೇ ಸತ್ಯ.
ಕಾವೇರಿ ತೀರ್ಪು ಬಂದಾಗ ಅದನ್ನು ಸುಮ್ಮನೆ ಒಪ್ಪಿಕೊಳ್ಳಿ ಅಂದ ಕಾರ್ನಾಡ್ ಆಗಲಿ, ಇಲ್ಲವೇ ತಿರುವಳ್ಳುವರ್ ಮೂರ್ತಿ ಕೂರಿಸಿ ತಮಿಳು ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯ ಸರ್ಕಾರ ನಿಂತಾಗ ಅವರ ಪರ ವಹಿಸಿ, ಅಲ್ಲಿಯವರೆಗೂ ತಾವು ಕನ್ನಡ ಶಕ್ತಿ ಕೇಂದ್ರದ ಮೂಲಕ ಮಾಡಿದ್ದ ಕೆಲಸವನ್ನು ಬದಿಗೊತ್ತಿ, ನಾಡ ವಿರೋಧಿ ತಮಿಳು ಓಲೈಕೆಗೆ ಅಸ್ತು ಅಂದ ಚಿಮೂ ಆಗಲಿ ಮಾಡಿದ್ದು ತಪ್ಪೇ.
ಆದ್ರೆ ಚಿಮೂ ಸಂಶೋಧಕರಾಗಿ ಮಾಡಿರುವ ಕೆಲಸಗಳಿಗೆ ಅವರಿಗೆ ಡಾಕ್ಟರೇಟ್ ಸಿಗಬೇಕು. ಅಷ್ಟರ ಮಟ್ಟಿಗೆ ಒಂದು ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಒಕ್ಕೂಟ ಧರ್ಮಕ್ಕೆ ಅಪಚಾರವೆಸಗಿದ ರಾಜ್ಯಪಾಲರ ಕ್ರಮ ಖಂಡನೆಗೆ ಅರ್ಹವಾದದ್ದು.
-ವೆಂಕಿ
ರಾಕೇಶ್ ಶೆಟ್ಟಿಯವರೇ,
ಚೆನ್ನಾಗಿ ಹೇಳಿದ್ದೀರಿ, ಇದುವೇ ಅಲ್ಲವೇ ಅಧಿಕಾರದ ದುರುಪಯೋಗ ಅಂದರೆ ? ಯಾಕೆ ಯಾವ ರಾಜಕೀಯ ವ್ಯಕ್ತಿಗಳೂ ಸೊಲ್ಲೆತ್ತಲಿಲ್ಲ? ಜಿ.ಪರಮೇಶ್ವರ್ ಅವರಂತೂ ಸಮರ್ಥಿಸಿಕೊಂಡರು, ………… ಹೇ ಕನ್ನಡ ಮಾತೆ ನೀನು ಧನ್ಯೆ !!!!
—
ಜೇನುಗೂಡಿಗೆ ಕಲ್ಲು ಹೊಡೆದು ಕಚ್ಚಿಸಿಕೊಂಡರು , ಆದರೆ ಬುದ್ದಿಮಾತ್ರ ಬಂದ ಹಾಗಿಲ್ಲ , ಯಾಕಂದರೆ ಯಾರೋ ಹೇಳಿರಬೇಕು ಅದು ನಂಜು ನಿರೋಧಕ ಎಂದು !!!!!