ಮುಂದಿನ ಪೀಳಿಗೆಗೆ ನಾವು (ಕನ್ನಡ ಮಾಧ್ಯಮ) ಏನಂತ ಹೇಳಬಹುದು….
-ಅರವಿಂದ್
ಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇತ್ತು. ಆಗ ನಾವುಗಳು ನಮ್ಮ ಗುರುಗಳನ್ನು ಬಹಳ ಗೌರವದಿಂದ, ಭಯಮಿಶ್ರಿತ ಪುಳಕದಿಂದ ಅವರು ನಮ್ಮೆದುರಿಗೆ ಬಂದರೆ ಭೂಮಿಯೇ ನಮ್ಮ ಮೇಲೆ ಬಿದ್ದಂತೆ ಭಾಸವಾಗಿ, ಅವರುಗಳು ಹೇಳಿದ ಪಾಠಗಳನ್ನು, ಪದ್ಯ-ಗದ್ಯಗಳನ್ನು, ಲೆಕ್ಕಗಳನ್ನು, ವ್ಯಾಕರಣವನ್ನು ಚಾಚೂ ತಪ್ಪದೆ ಓದಿಕೊಂಡು ಶಾಲೆಗೆ ಹೋಗುತ್ತಿದ್ದೆವು… ನಾವುಗಳೆಲ್ಲರೂ ಕನ್ನಡದಲ್ಲೇ ಪಾಠ ಕೇಳುತ್ತಿದ್ದೆವು ಮತ್ತು ನಾವುಗಳು ಅದ್ಯಾವುದೇ ಭಾಷೆಯವರಾಗಿದ್ರೂ ಕನ್ನಡದಲ್ಲೇ ಮಾತಾಡ್ತಿದ್ದೆವು.
ನಮ್ಮ ಗುರುಗಳು ತರಗತಿಗೆ ಬಂದ ಕೂಡಲೇ ಗೌರವ ಸೂಚಕವಾಗಿ ನಮಸ್ತೇ ಗುರುಗಳೇ… ಅಂತ ಒಕ್ಕೊರಲಾಗಿ ಹೇಳಿ, ಅವರೂ ಸೂಚಿಸಿದ ನಂತರವೇ ನಮ್ಮ ನಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮಾತೃಭಾಷೆಯಲ್ಲೇ ಪಾಠ ಕೇಳುತ್ತಿದ್ದ ನಾವು, ಜಗತ್ತಿನ ಅದೆಷ್ಟು ವಿಷಯಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳುತ್ತಿದ್ದೆವು ಗೊತ್ತಾ…
ಕನ್ನಡ, ಇಂಗ್ಲೀಷು, ಹಿಂದಿ, ಗಣಿತ, ವಿಜ್ಣಾನ, ಸಮಾಜವಲ್ಲದೆ ನೀತಿ ಶಿಕ್ಷಣ, ಪರಿಸರ ವಿಜ್ಣಾನ, ದಿನಕ್ಕೊಂದು ಕಥೆ, ದ್ಯೆಹಿಕ ಶಿಕ್ಷಣ ಹೀಗೆ ಎಲ್ಲವೂ ಕನ್ನಡದಲ್ಲೇ ಪಾಠ ಆಗ್ತಿತ್ತು. ಇಂಗ್ಲೀಷು ತರಗತಿಯಲ್ಲಿ ಅರ್ಥವಾಗದ ಅದೆಷ್ಟೋ ಪದಗಳನ್ನು ಗುರುಗಳು ಕನ್ನಡದಲ್ಲಿ ಅರ್ಥ ಸಹಿತ ಸಂದರ್ಭ ವಿವರಿಸಿ, ಸುಲಭವಾಗಿಸುತ್ತಿದ್ದರು.ಅದಲ್ಲದೇ ಪ್ರತಿವರ್ಷ ಸಾಮಾಜಿಕ ಕಳಕಳಿಯುಳ್ಳ ಕನ್ನಡ ಚಲನಚಿತ್ರಗಳು ತೋರಿಸುತ್ತಿದ್ದರು… ಇಂತಹ ಸಂದರ್ಭಗಳಲ್ಲೇ ನಾವು ದೇಶಭಕ್ತಿ ತೋರುವ ನವಭಾರತ, ಪ್ರಾಣಿಪ್ರಪಂಚದ ಬೆರಗನ್ನು ತೋರಿಸುವ ನಾಗರಹೊಳೆ… ಸಾಹಸಿ ಪುಟಾಣಿಗಳ ಸಿಂಹದ ಮರಿ ಸ್ಯೆನ್ಯ.. ಪುಟಾಣಿ ಏಜೆಂಟ್ ೧.. ೨…೩.. ಚಿತ್ರಗಳನ್ನು ನೋಡಿದ್ದು.
ಆಟಗಳಲ್ಲಿ ಚಿನ್ನಿಕೋಲು, ಬುಗುರಿ, ಮರಕೋತಿ ಆಟ, ಕಣ್ಣಾಮುಚ್ಚಾಲೆ, ಹುಲಿ-ಕುರಿ ಆಟ, ಒಬ್ಬ ಕಿವಿಯಲ್ಲಿ ಹೇಳಿದ ಪದಕ್ಕೆ ಒಂದು ಮತ್ತೊಂದು ಪದ ಸೇರಿಸಿ ವಾಕ್ಯರಚನೆ ಮಾಡುವ ಅದ್ಭುತ ವ್ಯಾಕರಣ ರಚನೆಯಾಟ, ನಮ್ಮ ಆಸಕ್ತಿಗಳನ್ನು ಹೆಚ್ಚಿಸುವ ಪದಬಂಧ, ದ್ಯೆಹಿಕವಾಗಿ ಗಟ್ಟಿಯಾಗುವ ಕಬಡ್ಡಿ ಆಟ…. ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್…… ಇದೆಲ್ಲಾ ೨೦೧೧ರವರೆಗೂ ಹೀಗೆ ನಡೆಯುತ್ತಿತ್ತು….
ಆದ್ರೆ ಈಗ….
ಸರ್ಕಾರವೇ ಕನ್ನಡ ಮಾದ್ಯಮವನ್ನು ಕನ್ನಡಿಗರನ್ನು ನಿರ್ಲಕ್ಷಿಸಿ.. ಎಲ್ಲ ಸರ್ಕಾರಿ… ಅರೆ ಸರ್ಕಾರಿ… ಖಾಸಗಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣ ನಡೆಯುವಂತೆ ವ್ಯವಸ್ಥಿತ ಪಿತೂರಿ ನಡೆಸಿದೆ. ಕನ್ನಡ ಭಾಷೆಯನ್ನು ರಾಜಕೀಯವಾಗಿ ಮುಗಿಸಿ… ದೊಡ್ಡವರ ಮನೆಯ ಮಕ್ಕಳಿಗೆ ಅನುಕೂಲವಾಗುವಂತೆ ಸರ್ವವೂ ಆಂಗ್ಲಮಯವಾಗುವಂತೆ ನೋಡಿಕೊಳ್ಳುತ್ತಿದೆ…ಶಾಲೆಗಳಲ್ಲಿ ಮಾತೃಭಾಷೆ ಮಾತನಾಡಿದರೆ ದಂಡವನ್ನೂ ಹಾಕುತ್ತಿದೆ. ಈಗಿನ ಗುರುವರ್ಯರಿಗೆ ಶಾಲೆಯ ಮಕ್ಕಳಿಗಿಂತ ಲಿಪ್ಸ್ಟಿಕ್, ಮೇಕಪ್, ಹೊಸ ಟ್ರೆಂಡಿನ ಫ್ಯಾಷನ್ನುಗಳ ಪರಿಚಯ ಹೆಚ್ಚಾಗಿದ್ದು.. ಅದನ್ನು ಮಕ್ಕಳಿಗೆ ಬೇಕೋ ಬೇಡ್ವೋ ಅವರಿಂದ ಕೊಡುಗೆಯಾಗಿ ನೀಡುತ್ತಿದ್ದಾರೆ.. ಒಂದು ಕಾಲಕ್ಕೆ ವಿಜ್ಣಾನದ ಪ್ರಯೋಗಗಳನ್ನು ನಮ್ಮ ಮುಂದೆ ಗುರುಗಳೇ ಮಾಡಿ ತೋರಿಸಿ, ಆಶ್ಚರ್ಯವಾಗುವಂತೆ ಮಾಡುತ್ತಿದ್ದವರೂ.. ಇಂದು ಯಾರೋ ಮಾಡಿದ ವಿಡಿಯೋ ತುಣುಕನ್ನು ತೋರಿಸಿ…ಈ ಪ್ರಯೋಗ ಹೀಗೆ ಎಂದು ವಿವರಿಸಿ ಅವರ ಜವಾಬ್ದಾರಿ ತೊಳೆದುಕೊಳ್ಳುತ್ತಿದ್ದಾರೆ.
ಇನ್ನು ಆಟದ ವಿಚಾರದಲ್ಲಿ ವಿಡಿಯೋಗೇಂ, ಕಂಪ್ಯೂಟರ್ ಗೇಂ ಬಂದಿದೆ, ಕ್ರಿಕೆಟ್ ಕೂಡ ಮ್ಯೆದಾನದಲ್ಲಿ ಆಡದೇ ಕಂಪ್ಯೂಟರಿನಲ್ಲೇ ಆಡುತ್ತಿದ್ದೇವೆ. ಕಂಪ್ಯೂಟರಿನಲ್ಲೇ ಕುಳಿತು ಕೊಟ್ಟ ಹೋಂವರ್ಕ್ ಮುಗಿಸಿ, ಅಲ್ಲೇ ಒಂದಷ್ಟು ಕೆಟ್ಟ ಸಿನಿಮಾಗಳನ್ನು ಕದ್ದು ನೋಡಿ, ಇನ್ಯಾವುದೇ ಬೇಡದ ಅಸಂಬಂದ್ದ ವಿಷಯಗಳ ಮೇಲೆ ಕಣ್ನಾಯಿಸಿ, ಓದು ಬಿಟ್ಟು ಮತ್ತೆಲ್ಲವೂ ಮಾಡೋದು.. ಒಳ್ಳೆಯ ಸಾಮಾಜಿಕ ಕಳಕಳಿಯಿರುವ ಚಲನಚಿತ್ರದ ಬದಲು ಜೋಗಿ, ಜಂಗ್ಲಿಯಂತಹ ವಿಕೃತ ಹಿಂಸೆಯ ಸಿನಿಮಾಗಳನ್ನು ನೋಡಿ.. ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನಾಡು ಅಂತ ಹೇಳೊ ಮುದ್ದು ಮುಖಗಳು.. ಹಳೇ ಪಾತ್ರೆ ಹಳೆ ಕಬ್ಬುಣ… ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ನ ಅನ್ನೋ ಹಾಡುಗಳು ತಳುಕು ಹಾಕ್ತಿವೆ…
ಕನ್ನಡ ಮಾಧ್ಯಮದಲ್ಲಿರೋರನ್ನ ಅಸ್ಪುರ್ಷರಂತೆ ನೋಡೋದು… ಕನ್ನಡ ಮಾತಾಡೊರನ್ನು ನಿರ್ಗತಿಕರಂತೆ ಕಾಣೋದು ಇವೆಲ್ಲಾ ಮಾಮೂಲು..
ಇವೆಲ್ಲಾ ನಮ್ಮ ಅಭಿವೃದ್ಧಿಯ ಸಂಕೇತ.. ನಾವು ಪ್ರಗತಿಪರರೂ.. ಅದ್ಭುತ ವಿಚಾರಶೀಲರೂ.. ಎಂಬಂತೆ ತೋರ್ಪಡಿಸುವ ಹಪಹಪಿ….
ಹೇಗಿದೆ.. ಕನ್ನಡದವರ ಕಥೆ ಇಷ್ಟಾ ಆಯ್ತಾ…
* * * * * * * * *
ಚಿತ್ರಕೃಪೆ : http://kannada.oneindia.in





ಜೊತೆಗೆ ಕರ್ನಾಟಕದ ತುಂಬೆಲ್ಲಾ ಸಿ.ಬಿ.ಎಸ್. ಇ. ಶಾಲೆಗಳನ್ನು ಬೆಳೆಸಿ ಕನ್ನಡವನ್ನು ಮೂರನೇ (ದರ್ಜೆಯ) ಭಾಶೆಯನ್ನಾಗಿ ಮಾಡುವ ಹುನ್ನಾರ ನಡೆದಿದೆ. ಮೆಡಿಕಲ್, ಎಂಜಿನಿಯರಿಂಗ್ ಮುಂತಾದ ಕಡೆ ರಾಷ್ಟೀಯ ಪ್ರವೇಶ ಪರೀಕ್ಷೆಗಳನ್ನು ಅಳವಡಿಸಿ ಸ್ಟೇಟ್ ಸಿಲಬಸ್ ನಲ್ಲಿ ಓದುವುದು ವೇಸ್ಟ್ ಎಂಬಂತಹ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ.
ತುಂಬಾ ಇಶ್ಟ ಆಯ್ತು. ಎಲ್ಲಾ ಮುಂದುವರೆದ ನಾಡುಗಳಲ್ಲಿ ಕಲಿಕೆ ತಾಯ್ನುಡಿಯಲ್ಲೇ ಆಗುತ್ತಿದೆ. ಈ ಒಂದು ಸಣ್ಣ ಸತ್ಯ ನಮ್ಮ ಮಂದಿಗೆ ಯಾಕೆ ಮನವರಿಕೆ ಆಗುವುದಿಲ್ಲವೋ ದೇವರೇ ಬಲ್ಲ. ನಿಜವಾದ ವಿದ್ಯೆ ಕಲಿಯುವುದಕ್ಕೆ ಹಾಕಬೇಕಾದ ಅಮೂಲ್ಯ ಸಮಯವನ್ನು ನಮ್ಮ ಮಕ್ಕಳು ಪರಕೀಯ ಬಾಶೆಯನ್ನು ಕಲಿಯುವುದರ ಮೇಲೆ ಹಾಕುವಂತೆ ಮಾಡುತ್ತಿದ್ದಾರೆ ಬುದ್ದಿ ಇಲ್ಲದ ತಂದೆ ತಾಯಿಗಳು. ನಾನು ಕನ್ನಡ ಮಾದ್ಯಮದಲ್ಲೇ ಮೊದಲ ಶಿಕ್ಶಣ ಪಡೆದೆ. ಮುಂದೆ ಕಾಲೇಜಿನಲ್ಲಿ ಇಂಗ್ಲೀಶಿಗೆ ಹೊಂದಿಕೊಳ್ಳುವುದು ಕೊಂಚ ತೊಡಕೆನಿಸಿತು, ಅಶ್ಟೆ. ಹೆಚ್ಚಿನ ತೊಂದರೆ ಏನೋ ಆಗಲಿಲ್ಲ. ಇಂಗೀಶಿನಲ್ಲಿ ಮಾತಾಡುವುದೂ ಕ್ರಮೇಣ ಬಂತು. ಹಿಂದಿನ ಪೀಳಿಗೆಯವರು ಕನ್ನಡದಲ್ಲೇ ಓದಿ ದೊಡ್ಡ ದೊಡ್ಡ ಕೆಲಸಗಳಲ್ಲಿ ಸೈ ಎನಿಸಿಕೊಳ್ಳಲಿಲ್ಲವೆ? ದೇವರು ಈಗಿನ ತಂದೆ ತಾಯಿಗಳಿಗೆ ಸ್ವಲ್ಪ ವಿವೇಚನೆಯನ್ನು ಕೊಡಲಿ ಎಂದು ಹಾರೈಸೋಣ.
ಅರವಿಂದರ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಮಾಧ್ಯಮದ ‘ನಿಲುವು’ ಚೆನ್ನಾಗಿ ಮೂಡಿಬಂದಿದೆ. ಈ ಪರಿಸ್ಥಿತಿಗೆ ಕಾರಣ ನನಗನ್ನಿಸುವುದು ನಾವುಗಳೇ, ಅಂದರೆ ತಂದೆ ತಾಯಿಗಳು. ನಮ್ಮ ಮುಂದಿನ ಮಕ್ಕಳ ಭವಿಷ್ಯ ಉಜ್ವಲವಾಗಿರಲು ಇಂಗ್ಲ್ಳೀಷ್ ಮಾಧ್ಯಮದಿಂದ ಮಾತ್ರ ಎಂಬ ನಂಬುಗೆಯಿಂದ ಅವರನ್ನು ಇಂಗ್ಲ್ಳೀಷ್ ಮಾಧ್ಯಮದ ಶಾಲೆಗೆ ಸೇರಿಸುವುದರಿಂದ ಹಿಡಿದು, ಅವರಿಗೆ ಪಾಕೆಟ್^ಮನಿ ಸಂಸ್ಕೃತಿ ಕೊಟ್ಟು, ಅವರಿಗೆ ಕಂಪ್ಯೂಟರ್ ಕೊಡಿಸಿ, ಇಂಟರ್ನೆಟ್ ಹಾಕಿಸಿಕೊಡುವವರು ತಂದೆತಾಯಿಗಳೇ ತಾನೆ? ಹಾಗೆ ಕಂಪ್ಯೂಟರ್ ಇಂಟರ್ನೆಟ್ ಕೊಡಿಸಿದ ಮೇಲೆ ಆ ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಹರಿಸದಿರುವುದೂ ಮತ್ತು ಅವರ ಟಿ.ವಿ. / ಮೊಬೈಲ್ ಮೊದಲಾದುವುಗಳ ಮೇಲೆ ನಿರ್ಬಂಧ ಹೇರದೆ, ದೈಹಿಕ ಆಟಗಳನ್ನು ಆಡಲು ಉತ್ತೇಜಿಸದೆ ಇರುವುದು ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಕಾರಣ. ಇದು ಉಳಿದ ಸಮಸ್ಯೆಗಳಾದ – ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುಮುವುದೇ ಮೊದಲಾದವು – ಹುಟ್ಟಿಗೆ ಕಾರಣವಾಗುತ್ತದೆ. ಸಮಸ್ಯೆಗಳ ಉದ್ಭವ ನಮ್ಮಲ್ಲೇ ಇದೆ. ಇದಕ್ಕೆ ಪರಿಹಾರವು ನಮ್ಮಲ್ಲೇ ಇವೆ. ಅದೇನೆಂದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಆದರೆ ಇದಕ್ಕೆ ಕಠಿಣ ಧೋರಣೆಗಳು ಮತ್ತು ಅವುಗಳ ಧೃಡ ಆಚರಣೆಗಳು ಮುಖ್ಯವೇ ಹೊರತು, ಯಾವುದೇ ಸರ್ಕಾರ ಅಥವಾ ಸಾಮಾಜಿಕ ಸಂಸ್ಥೆಗಳನ್ನು ಹೊಣೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ.
ಹೆಚ್ಚಿನ ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಉನ್ನತ ಶಿಕ್ಷಣವೂ ತಮ್ಮ ತಮ್ಮ ತಾಯ್ನುಡಿಯಲ್ಲೇ ನಡೆಯುತ್ತಿರುವಾಗ, ನಮ್ಮಲ್ಲಿ ಯಾಕೆ ಕನ್ನಡದಲ್ಲಿ ಕಲಿತರೆ ಬಡವರಾಗುತ್ತೇವೆ ಎಂಬ ಭಾವನೆ? ತಾಯ್ನುಡಿಯಲ್ಲಿ ಜ್ಞಾನದ ಕೊರತೆಯಾದರೆ ಖಂಡಿತವಾಗಿಯೂ ಅದು ನಮ್ಮನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದೆ ಬೀಳಿಸಬಹುದು
Nanantu nanna makalanna kannada shalege serisbeku anta iddene (allivaregu kannada madyama iddare)
ರವಿ, ಅಲ್ಲಿಯವರೆಗೂ ಅಲ್ಲ, ಈಗಾಗಲೇ ಹಲವಾರು ಕನ್ನಡ ಶಾಲೆಗಳು ಮುಚ್ಚಿದ್ದಾರೆ, ಅಲ್ಲೆಲ್ಲಾ ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ನನ್ನ ಮಗನಿಗೆ ಇನ್ನು ೨ ವರಷಕ್ಕೆ ಶಾಲೆಗೆ ಸೇರಿಸುವುದಾದರೂ ಕಳೆದ ಕೆಲವು ತಿಂಗಳ ಹಿಂದೆ ನಾನು ಓದಿದ ಹೆಮ್ಮೆಯ ಶಾಲೆಯ ಬಗ್ಗೆ ವಿಚಾರಿಸಿದಾಗ, ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿ ೨ ವರ್ಷಗಳೇ ಕಳೆದಿವೆ, ಜೊತೆಗೆ ಮುಂದಿನ ವರ್ಷಕ್ಕೆ ಹ್ಯೆಸ್ಕೂಲು ಮುಚ್ಚುವ ಇಂಗಿತ ವ್ಯಕ್ತಪಡಿಸಿದರು. ನಿಜಕ್ಕೂ ಕರ್ನಾಟಕದಲ್ಲಿ ಕನ್ನಡ ಶಾಲೆಗಳ ದುಸ್ಥಿತಿಗೆ ಸರ್ಕಾರವಷ್ಟೇ ಅಲ್ಲ, ಪಾಲಕರೂ ಕಾರಣ..