ವಿಷಯದ ವಿವರಗಳಿಗೆ ದಾಟಿರಿ

Archive for

5
ಆಗಸ್ಟ್

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

– ಪ್ರೇಮಶೇಖರ
Terrorismತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ.
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.