ಇತಿಹಾಸದ ಅಚ್ಚರಿಗಳಲ್ಲಿ ಒಂದು ಇಣುಕು: ‘ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು’
– ರಾಘವೇಂದ್ರ ಅಡಿಗ ಹೆಚ್.ಎನ್
ಕಳೆದ ವಾರ ಕನ್ನಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮೌಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.
ಭೈರಪ್ಪನವರ ಆತ್ಮಕಥನ ‘ಭಿತ್ತಿ’ ಓದುತ್ತಾ…
– ಪ್ರಶಸ್ತಿ.ಪಿ, ಸಾಗರ
ಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.
ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.
ಮಹಿಳೆಯರ ಸಮಸ್ಯೆಗಳು – ಒಂದು ನೋಟ
– ಮು.ಅ ಶ್ರೀರಂಗ, ಬೆಂಗಳೂರು
ನಮ್ಮ ಬುದ್ಧಿಜೀವಿಗಳು ಸಾಹಿತಿಗಳು ಅದರಲ್ಲೂ ಮುಖ್ಯವಾಗಿ ಸ್ತ್ರೀವಾದಿ ಸ್ತ್ರೀಸಂವೇದನೆ ಎಂಬ ಹೆಸರುಗಳಿಂದ ಪ್ರಸಿದ್ಧರಾಗಿರುವ ಒಂದು ಸಾಕಷ್ಟು ದೊಡ್ಡ ಗುಂಪು ಮಾಡುತ್ತಿರುವ ಒಂದು ಪ್ರಮಾದವೆಂದರೆ,ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ಎಲ್ಲಾ ಸಮಸ್ಯೆಗಳಿಗೆ ಒಬ್ಬ ಊಹಾತ್ಮಕ ಶತ್ರುವನ್ನು ತಂದು ಜನತೆಯ ಮುಂದಿರಿಸಿ, ಆ ಎಲ್ಲಾ ಸಮಸ್ಯೆಗಳಿಗೂ ಈತನೇ ಕಾರಣ ಎಂದು ದೂಷಿಸುತ್ತಿರುವುದು. ಆ ಊಹಾತ್ಮಕ ಶತ್ರುವೇ “ಮನು”ಮತ್ತು ಆತನ ಹೆಸರಿನಲ್ಲಿದೆ ಎನ್ನಲಾಗುತ್ತಿರುವ “ಮನು ಸಂಹಿತೆ”. ಜತಗೆ ಆತನ ವಂಶಜರಂತೆ ವರ್ತಿಸುತ್ತಿರುವ ಇಂದಿನ ಮೇಲ್ಜಾತಿಗಳು. ಈ ಬುದ್ಧಿಜೀವಿಗಳು ತಮ್ಮ ವಾದಕ್ಕೆ ಪೂರಕವಾಗಿ “ಬ್ರಿಟೀಶ್ ಚರಿತ್ರಕಾರರು”ಬರೆದ “ನಮ್ಮ ಇತಿಹಾಸ”ವನ್ನು ತಮ್ಮ ವಾದಕ್ಕೆ ಸಾಕ್ಷ್ಯ ಎಂಬಂತೆ ತೋರಿಸುತ್ತಿದ್ದಾರೆ.
ಇಂದು ಆಗಾಗ ಚರ್ಚೆಗೆ ವಸ್ತುವಾಗಿರುವ ಎರಡು ವಿಷಯಗಳೆಂದರೆ:-
(೧) ಮಹಿಳೆಯರ “ಆ ಮೂರುದಿನಗಳ” ಮತ್ತು (೨) “ವಿಧವೆಯರ”ಸಮಸ್ಯೆಗಳು.
ಅನ೦ತಮೂರ್ತಿಯವರಿಗೆ ಅಭಿಮಾನಿಯೊಬ್ಬನ ಪತ್ರ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸನ್ಮಾನ್ಯ ಶ್ರೀ ಅನ೦ತಮೂರ್ತಿಗಳಿಗೆ,
ನಮಸ್ಕಾರಗಳು,
ಈಗ ಸದ್ಯದ ಪರಿಸ್ಥಿತಿಯಲ್ಲಿ ’ಹೇಗಿದ್ದೀರಿ..’? ಎ೦ದು ಕೇಳುವುದೇ ತಪ್ಪೇನೋ.ಇತ್ತೀಚಿನ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆಗೆ ತಮಗೊ೦ದು ಪತ್ರ ಬರೆಯೊಣವೆನಿಸಿತು.ಪತ್ರವನ್ನು ನೇರವಾಗಿ ತಮಗೆ ಕಳುಹಿಸೊಣವೆ೦ದುಕೊ೦ಡೆ.ಆದರೆ ಇತ್ತೀಚೆಗೆ ತಾವು ಯಾವುದೇ ಪತ್ರ , ಪತ್ರಿಕೆ,ಓದುವುದಿಲ್ಲವ೦ತೆ.ಮೊನ್ನೆಯೊ೦ದು ಟಿವಿ ಸ೦ದರ್ಶನದಲ್ಲಿ ತಾವೇ ಹೇಳಿದ್ದೀರಿ.ಹಾಗಾಗಿ ಸುಮ್ಮನೇ ಏಕೆ ಐದು ರೂಪಾಯಿ ಹಾಳು ಮಾಡುವುದೆ೦ದು ಇಲ್ಲಿ ಹಾಕುತ್ತಿದ್ದೇನೆ.ಸಾಧ್ಯವಾದರೇ ಓದಿ,ಓದದಿದ್ದರೂ ಚಿ೦ತೆಯಿಲ್ಲ.
ಏನಾಗಿದೆ ಸರ್ ನಿಮಗೆ..? ಮತಿಭ್ರಮಣೆಯಾ ..? ಹೊಸದೊ೦ದು ಪ್ರಶಸ್ತಿ ಪಡೆಯುವ ಉಮ್ಮೇದಿಯಾ…?ಅಥವಾ ಸುದ್ದಿಯಲ್ಲಿರುವ ರೋಗವಾ..? ಒ೦ದು ಗೊತ್ತಾಗುತ್ತಿಲ್ಲ ಒ೦ದು ಕಾಲದಲ್ಲಿ ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಿದ್ದವರು ನಾವು,ನಿಮಗಾಗಿ ಎಷ್ಟು ಸ೦ತೋಷಿಸುತ್ತಿದ್ದೇವು ಗೊತ್ತಾ…? ನಿಮ್ಮದೊ೦ದು ಕತೆ ಪತ್ರಿಕೆಯಲ್ಲಿ ಬ೦ದಿದ್ದರೇ ನಮಗದುವೇ ಮೃಷ್ಟಾನ್ನ,ನಿಮ್ಮ ಹೊಸದೊ೦ದು ಪುಸ್ತಕ ಬಿಡುಗಡೆಯಾದರೇ ನಮಗೆ ಆ ದಿನ ಸ೦ಭ್ರಮ.ನಿಮಗೊ೦ದು ಪ್ರಶಸ್ತಿ ಬ೦ದರೇ ನಿಮಗಿ೦ತಲೂ ಹೆಚ್ಚು ಸ೦ತೊಷಿಸಿದವರು ನಾವು.ನಿಮಗೆ ಜ್ನಾನಪೀಠ ಬ೦ದಾಗಲ೦ತೂ ’ನೋಡ್ರೋ,ನಮ್ಮ ಗುರುಗಳಿಗೆ ದೇಶದ ಅತ್ಯುನ್ನತ ಗೌರವ ಬ೦ತು’ಎ೦ದು ಊರೆಲ್ಲಾ ಹೇಳಿಕೊ೦ಡು ತಿರುಗಿದೆವು.ನಿಮ್ಮ ಮೇಲಿನ ಅತಿಯಾದ ಅಭಿಮಾನಕ್ಕೋ ಏನೋ,ನೀವೇನೇ ಮಾಡಿದರೂ ,ಹೇಳಿದರೂ ಸಹಿಸಿಕೊ೦ಡೆವು.ಅನೇಕ ಕಾದ೦ಬರಿಗಳಲ್ಲಿ ಬ್ರಾಹ್ಮಣ ಯುವತಿಗೆ ದಲಿತ ಯುವಕನೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ,ಅಥವಾ ಬ್ರಾಹ್ಮಣ ಯುವಕನೊಬ್ಬನಿಗೆ ,ದಲಿತ ಯುವತಿಯೊಬ್ಬಳೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ಚಿತ್ರಿಸಿದಿರಿ. ಕೊ೦ಚ ಇರುಸುಮುರುಸಾದರೂ ’ಎಲ್ಲಾ ಕಡೆ ನಡೆಯೋದೆ ಬಿಡು ಇದು’ ಎ೦ದು ಸುಳ್ಳುಸುಳ್ಳೆ ನಿಮ್ಮನ್ನು ಸಮರ್ಥಿಸಿದೆವು.’ಭೈರಪ್ಪ ,ಒಬ್ಬ ಡಿಬೇಟರ್ ಆತನನ್ನು ಕಾದ೦ಬರಿಕಾರನೆ೦ದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ’ ಎ೦ದಿರಿ.’ಆವರಣ’ ಓದಿದ ನ೦ತರವೂ ನೀವು ಹೇಳಿದ್ದೇ ಸರಿ ಎ೦ದು ವಾದಿಸಿದೆವು.’ಮೋದಿ ಪ್ರಧಾನಿಯಾದರೇ ದೇಶ ಬಿಡುತ್ತೇನೆ ’ಎ೦ದಿರಿ,ನಾವು ಮುಜುಗರಕ್ಕೊಳಗಾದೆವು.ಆದರೆ ಈಗ ಇದೇನಿದು ನಿಮ್ಮ ಹೊಸರಾಗ..? ಆರ್.ಎಸ್.ಎಸ್. ಎ೦ದರೇ ’ಹುಚ್ಚು ನಾಯಿ ರೋಗ’ಎ೦ದುಬಿಟ್ಟೀರಿಲ್ಲ ಈಗ.. ಹೇಗೆ ಸಮರ್ಥಿಸುವುದು ನಿಮ್ಮ ಇ೦ಥ ನೀಚ ತಪ್ಪನ್ನು ಗುರುಗಳೇ.ದಯವಿಟ್ಟು ಕ್ಷಮಿಸಿ,ನಮ್ಮಿ೦ದ ಸಾಧ್ಯವಿಲ್ಲ.
ಮತ್ತಷ್ಟು ಓದು
ಸೆಕ್ಸ್ ಗುರುವಿನ ಸನ್ನಿಧಿಯಲ್ಲಿ….
– ಚೇತನಾ ತೀರ್ಥಹಳ್ಳಿ
ಈ ಹೆಸರು ಕಿವಿಗೆ ಬಿದ್ದ ಕ್ಷಣಕ್ಕೆ ನೆನಪಾಗೋದು ಅಮ್ಮನ ಆ ಅವತ್ತಿನ ತಟವಟ. “ಆ ಹಾಳಾದ xyz ತಾನು ಕೆಡೋದಲ್ದೆ ಊರು ಹಾಳು ಮಾಡ್ತಾನೆ. ಆ ಮನುಷ್ಯನ್ನ ನೋಡಿದ್ರೆ ಸ್ವಾಮೀಜಿ ಥರ ಕಾಣ್ತಾನಾ?”
ಅಪ್ಪ ಸಹೋದ್ಯೋಗಿ ಬಳಿಯಿಂದ ಮನೆಯಲ್ಲಿ ತಂದಿಟ್ಟುಕೊಂಡಿದ್ದ ಓಶೋ ಪುಸ್ತಕವನ್ನ ನೋಡೀ ನೋಡೀ ಸಿಡುಕುತ್ತಿದ್ದಳು. ಯಾರಾದ್ರೂ ನೋಡಿದ್ರೆ ಏನು ತಿಳಿದಾರು! ಅನ್ನುವ ಆತಂಕ ಜೊತೆಗೆ. ನಾನು ಕೇಳೀಕೇಳೀ ರೇಜಿಗೆ ಬಿದ್ದು ಕೇಳಿದ್ದೆ, “ಯಾಕೆ?”
ಬಹಳಷ್ಟು ಜನ ಓಶೋ ಬಗ್ಗೆ ತಳೆದಿರುವ ಅಭಿಪ್ರಾಯವನ್ನೆ ನನ್ನ ಮುಗ್ಧ ಅಮ್ಮನೂ ಹೇಳಿದ್ದಳು. ಅದು ಎಂಭತ್ತರ ದಶಕ. ಓಶೋ ಎಂಬ ಮಹಾ ಸಂತನ ಬಗ್ಗೆ ಭಾರತ ಮಾತ್ರವೇನು, ಪಶ್ಚಿಮ ದೇಶಗಳಲ್ಲೂ ಸಾಕಷ್ಟು ಪುಕಾರು ಹಬ್ಬಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಅವಳ ಯೋಚನೆ ತಪ್ಪೇನೂ ಆಗಿರಲಿಲ್ಲ ಅನ್ನಿಸುತ್ತೆ. ಯಾಕಂದರೆ ಅದೇ ಅಮ್ಮ ಆಮೇಲೆ ನನ್ನ ಕಪಾಟಿನಿಂದ ಹಲವು ಓಶೋ ಪುಸ್ತಕಗಳನ್ನ ತೆಗೆದು ಕಣ್ಣಾಡಿಸಿದ್ದಾಳೆ; ಆಗೀಗ ಅದರ ಕೆಲವು ವಿಚಾರಗಳ ಉಲ್ಲೇಖವನ್ನೂ ಮಾಡುವಷ್ಟು ಬದಲಾಗಿದ್ದಾಳೆ.ಅದೇನೇ ಇರಲಿ, ನನಗೆ ಓಶೋ ಮೊದಲ ಬಾರಿ ಪರಿಚಯವಾಗಿದ್ದು ಹೀಗೆ. ಅದೇನು ತಿಕ್ಕಲುತನವೋ! ಅಮ್ಮ ಮಾಡಿದ್ದ ಆರೋಪವೇ ನನ್ನಲ್ಲಿ ಓಶೋ ಬಗ್ಗೆ ಕುತೂಹಲ ಹುಟ್ಟಿಸಿತ್ತು. ಇಷ್ಟೆಲ್ಲ ಬೈಸಿಕೊಳ್ಳುವ ಈ ಮನುಷ್ಯನ ಮಾತನ್ನ ಅಷ್ಟೊಂದು ಜನ ಕೇಳ್ತಾರೆ ಅಂದ್ರೆ ಸುಮ್ಮನೆನಾ? ಅನ್ನುವಂಥ ಕುತೂಹಲವದು. ಮುಂದೊಂದು ದಿನ ’ಶೂನ್ಯ ನಾವೆ’ ಏರಿ ಶುರುವಾದ ನನ್ನ ಓಶೋ ಯಾನ ಈ ಹೊತ್ತಿನವರೆಗೆ ಸೇರಿದೆ.
ವಿರೋಧಿಗಳೆಸೆದ ಕಲ್ಲನ್ನೇ ತನ್ನ ಏಳಿಗೆಯ ಮೆಟ್ಟಿಲಾಗಿಸಿಕೊಂಡ ಮೋದಿ
– ಪ್ರಸನ್ನ ಬೆಂಗಳೂರು
ಭಾರತದ ರಾಜಕೀಯ ಇತಿಹಾಸದಲ್ಲಿ ೧೦ ವರ್ಷಗಳಿಗೂ ಹೆಚ್ಚು ಕಾಲ ವಿರೋಧ ಪಕ್ಷಗಳು,ಮಾಧ್ಯಮಗಳು,ಪ್ರಗತಿಪರರು ಟಾರ್ಗೆಟ್ ಮಾಡಿರುವುದು ನರೇಂದ್ರ ಮೋದಿಯವರನ್ನು . ಮೋದಿಯವನರನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಮೇಲೆ ಅವರ ಮೇಲಿನ ಹಿಂದಿನ ಆರೋಪಗಳ ಜೊತೆ ಜೊತೆಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ವಿಶ್ಲೇಷಣೆಗೊಳಪಡಿಸಲಾಗುತ್ತಿದೆ. ಈ ಹಿಂದೆ ಪ್ರಧಾನಿಯಾದವರ ಬಗ್ಗೆ ಇಷ್ಟೊಂದು ವಿಶ್ಲೇಷಣೆ ವಿಮರ್ಶೆ ಪರೀಕ್ಷೆ ನಡೆದಿತ್ತೆ? ನಡೆದು ಅಂತಹ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದಿದ್ದರೆ ಬಹುಶಃ ಭಾರತವಿಂದು ಇಂತಹ ಪರಿಸ್ಥಿತಿಯಲ್ಲಿರುತ್ತಿರಲಿಲ್ಲ ಅಲ್ಲವೆ? ಮೋದಿ ಈ ಪರಿ ಬೆಳೆದಿದ್ದಕ್ಕೆ ಕಾರಣ ಹುಡುಕುತ್ತಾ ಹೊರಟವನಿಗೆ ಕಂಡದ್ದು ಈ ವಿಭಿನ್ನವಾದ ಆದರೆ ತೆರೆಮರೆಯ ಕಾರಣ.
ಅದು ತನ್ನ ಕುಕೃತ್ಯಕ್ಕೆ ತಾನೆ ಬಲಿಯಾದ ಆತನ ದ್ವೇಷ ವರ್ಗ.ಇವರ ದ್ವೇಷ,’ತನ್ನೊಡಲ ಬೆಂಕಿ ತನ್ನನ್ನಲ್ಲದೆ ಅನ್ಯರನ್ನು ಸುಡದು‘ ಎಂಬ ಜನಪ್ರಿಯ ವಚನದಂತೆ ದ್ವೇಷಿಗಳೇ ನಾಲಿಗೆ ಕಚ್ಚಿಕೊಳ್ಳುವಂತಾಗಿರುವುದು ಸುಳ್ಳಲ್ಲ. ತಾನು ವೈಭವೀಕರಿಸಿದ ಸುಳ್ಳು ತನಗೇ ತಿರುಗುಬಾಣವಾಗಿರುವುದು ಅವರ ಈಗಿನ ಬಡಬಡಿಕೆಗೆ ಕಾರಣವಾಗಿದೆ. ಈ ವರ್ಗ ಮೋದಿಯ ವಿರುದ್ದ ಮಾಡಿದ ಅಪಪ್ರಚಾರಗಳೇ ಅಪಚಾರಗಳೇ ಅವರಿಗೆ ಇಂದು ಮುಳುವಾಗಲು ಮೂಲ ಕಾರಣವೆಂದು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದರೂ ಅದು ಸತ್ಯವಲ್ಲವೆಂದು ತಳ್ಳಿ ಹಾಕಲು ಅವರಿಗೆ ಸಾಧ್ಯವಾಗುವುದಿಲ್ಲ.
ಮೋದಿ ಮಾಡದ ತಪ್ಪಿಗೆ ಅವನನ್ನು ಹೊಣೆಗಾರನನ್ನಾಗಿಸುವ ಮೂಲಕ ಆತನ ಬೆಳವಣಿಗೆ ದಾರಿ ಮಾಡಿಕೊಟ್ಟದ್ದು ಹೇಗೆ?
…ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ !!!
– ಅಭಿನಂದನ್.ಎಸ್
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…
ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಯಾರ ಸ್ವತ್ತು ಅನಂತ ಮೂರ್ತಿಗಳೇ?
– ನವೀನ್ ನಾಯಕ್
ಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರು ” ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ” ಎಂಬ ಹೇಳಿಕೆ ನೀಡಿ ಮೋದಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು.ತದನಂತರ ನಡೆದ ಸಂದರ್ಶನದಲ್ಲಿ ಅನಂತ ಮೂರ್ತಿಯವರು ” ಮೋದಿ ಪ್ರಧಾನಿಯಾಗಬಾರದೆಂದು ” ಎಂಬ ಉದ್ದೇಶದಿಂದ ಹಾಗೆ ಹೇಳಿದೆ. ಯೌವನದಲ್ಲಿಯಾಗಿದ್ದರೆ ಮೋದಿ ಪ್ರಧಾನಿಯಾಗಗೊಡವುದಿಲ್ಲ ಅಂತ ಹೇಳುತ್ತಿದ್ದೆ ಈಗ ವಯಸ್ಸಾಗಿದೆ ಅದಕ್ಕೆ ಹಾಗೆ ಹೇಳಿದೆ,ನನ್ನ ನಿಲುವೊಂದೆ ಮೋದಿ ಈ ದೇಶದ ಪ್ರಧಾನಿಯಾಗಬಾರದು. ಇದರರ್ಥ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಅರ್ಥವಲ್ಲ ವೆಂದು ಸಮಜಾಯಿಸಿ ನೀಡಿದರು.
ಹಾಗೆ ಮೋದಿ ಅಭಿಮಾನಿಗಳು ನೀಡುತ್ತಿರುವ ಉತ್ತರ ಮತ್ತು ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಅಧಿಕಾರವಿಲ್ಲದೇನೇ ಹೀಗೆ ಇನ್ನು ಮೋದಿ ಅಧಿಕಾರವಹಿಸಿಕೊಂಡ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಇರೋದೇ ಇಲ್ಲ, ಇದು ನಿಜವಾದ ಅಪಾಯವೆಂದಿದ್ದಾರೆ. ಅದೇ ಸಂದರ್ಶನದಲ್ಲಿ ಪ್ರಜಾಪ್ರಭುತ್ವವಾದಿಗೆ ಪ್ರಜಾಪ್ರಭುತ್ವವನ್ನು ಸಂಶಯದಿಂದ ನೋಡುವ ಶಕ್ತಿಯಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಮರುಳು ಮಾಡುವ ವಿಧಾನದಿಂದ ಆಯ್ಕೆಯಾಗಿ ಬರುವವರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಅನಂತ ಮೂರ್ತಿಯವರಿಗೆ ಮಾತ್ರವೇ ಅಥವಾ ಅವರನ್ನು ಬೆಂಬಲಿಸುವವರಿಗೆ ಮಾತ್ರವೇ ಇರುವುದಾ ಆಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಒಬ್ಬರ ಉದ್ದೇಶ ಮಾತ್ರ ಸ್ಪಷ್ಟಪಡಿಸಿಕೊಂಡರೆ ಅದು ಫ್ಯಾಸಿಸ್ಷ್ ಧೋರಣೆಯಾಗುತ್ತದೆ. ಕೇವಲ ಅನಂತಮೂರ್ತಿಯವರ ಹೇಳಿಕೆಗೆ ಅಥವ ಅವರನ್ನು ಸಮರ್ಥಿಸುವ ಹಿಂಬಾಲಕರಿಗೆ ಮಾತ್ರವಾ ಹಿಂದೆ ಉದ್ದೇಶವಿರುವುದು. ಆ ಹೇಳಿಕೆಯನ್ನು ಟೀಕಿಸುವವರಿಗೆ ಉದ್ದೇಶವಿಲ್ಲವೇ. ಅನಂತಮೂರ್ತಿಯವರು ನಾನು ಮೋದಿ ಪ್ರಧಾನಿಯಾದರೆ ಬದುಕಿರಲು ಇಷ್ಟಪಡುವುದಿಲ್ಲ ಎಂಬ ಹೇಳಿಕೆಗೆ ಅದಕ್ಕೆ ವಿರೋಧವಾಗಿ ನೀವು ಸಾಯಿರಿ ಎಂಬ ಹೇಳಿಕೆಯನ್ನು ಮೋದಿ ಅಭಿಮಾನಿಗಳು ಕೊಟ್ಟಿದ್ದಾರೆ. ಇಲ್ಲಿ ಮೋದಿ ಅಭಿಮಾನಿಗಳು ಕತ್ತಿ ಕುಡಾರಿ ಹಿಡಿದುಕೊಂಡು ಅನಂತಮೂರ್ತಿಯವರ ಹಿಂದೆ ಬಿದ್ದಿದ್ದಾರಾ, ಇಲ್ಲವಲ್ಲ. ಅವರ ಹೇಳಿಕೆಗೆ ಇದು ವಿರೋಧವಾಗುತ್ತೆ ವಿನಃ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಹೇಳಿಕೆಯ ಹಿಂದಿರುವ ಉದ್ದೇಶ ಎರಡೂ ಕಡೆ ಗಮನಿಸುವುದು ಉತ್ತಮ.
ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ
– ಎಸ್.ಸುನಿಲ್ ಕುಮಾರ್
ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION
ಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.
ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್ನೆಟ್ ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.
ಅನಂತ ಮುಖದ ಮೂರ್ತಿಯವರ ಕಾಲ್ಪನಿಕ ಸಂದರ್ಶನ
– ಮು ಅ ಶ್ರೀರಂಗ ಬೆಂಗಳೂರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಮ್ಮ ಹೆಮ್ಮೆಯ ಯು ಆರ್ ಅನಂತಮೂರ್ತಿಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಲೇಖನವೊಂದನ್ನು ಬರೆಯುವುದಕ್ಕಿಂತ ಒಂದು ಕಾಲ್ಪನಿಕ ಸಂದರ್ಶನದ ಮೂಲಕ ಅವರ ನಡೆ-ನುಡಿಗಳನ್ನು ತಿಳಿದುಕೊಳ್ಳಬಹುದು ಎಂದು ಅನಿಸಿತು. ಅನಂತಮೂರ್ತಿಯವರದ್ದು ಸಮ್ಮೋಹಕವಾದ ರೂಪ;ಅವರ ಭಾಷಣದ ಶೈಲಿ ಅನನ್ಯ. ಆ ಮಾತಿನ ಶೈಲಿಯನ್ನು ಜ್ಞಾಪಿಸಿಕೊಂಡು ಈ ಕಾಲ್ಪನಿಕ ಸಂದರ್ಶನವನ್ನು ಓದಿದರೆ ನಿಮಗೆ ಆಪ್ತವೆನಿಸಬಹುದು. ಒಮ್ಮೆ ಪ್ರಯತ್ನಿಸಿ.
ಪ್ರಶ್ನೆ: ನಿಮ್ಮನ್ನು ಗುಲ್ಬರ್ಗ ಕೇಂದ್ರಿಯ ವಿ. ವಿ. ಕುಲಪತಿಗಳನ್ನಾಗಿ ಈಗಾಗಲೇ ಕೆಂದ್ರ ಸರ್ಕಾರ ನೇಮಿಸಿದೆ. ಇದಕ್ಕೂ ಮತ್ತು ಹಿಂದೆ ನಡೆದ ಅಸ್ಸಾಂ ಹಾಗು ಮುಂಬೈ ಗಲಭೆಗಳ ಬಗ್ಗೆ ತಾವು ಇದುವರೆಗೂ ಏನೂ ಹೇಳಿಕೆ ನೀಡದೆ ಇರುವುದಕ್ಕೂ ಏನಾದರು ಸಂಬಂಧ,ಹಿಡನ್ ಅಜೆಂಡಾ ಉಂಟೆ? ಜತೆಗೆ ಇತ್ತೀಚಿನ ಉತ್ತರ ಪ್ರದೇಶದ ಗಲಭೆಗಳ ಬಗ್ಗೆಯೂ ತಾವು ಪ್ರತಿಕ್ರಿಯಿಸಿಲ್ಲ ಏಕೆ?
ಅನಂತಮೂರ್ತಿ: ನೋಡಿ ಇದಕ್ಕೆ ಹಿಡನ್ ಅಜೆಂಡಾ ಎಂಬ ಪದದ ಪ್ರಯೋಗ ಸರಿಯಲ್ಲ. ಈ ಪ್ರಶ್ನೆಗೆ ನಾನು ಎರಡು ಆಯಾಮಗಳ ಮೂಲಕ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ನಂಬಿರುವ ಸೆಕ್ಯುಲರಿಸಂ ಪ್ರಕಾರ ನಾವು ಅಂದರೆ ಬಹುಸಂಖ್ಯಾತರು ಯಾವಾಗಲು ಅಲ್ಪಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು. ಗಾಂಧೀಜಿಯವರು ಹೇಳಿದ್ದೂ ಇದನ್ನೇ. ನಮ್ಮ ಪ್ರಜಾತಂತ್ರದ ತಳಪಾಯ ನಿಂತಿರುವುದು ನಮ್ಮ ಹಿರಿಯರ ಈ ಆಶಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಳ್ಳುವುದರಲ್ಲಿ ಮಾತ್ರ. ಈ ಕಾರಣದಿಂದ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ತಾವು ಹೇಳಿದ ಆ ಎರಡೂ ಘಟನೆಗಳ ಬಗ್ಗೆ (ಅದು ಗಲಭೆಯಲ್ಲ) ಮೌನವಹಿಸಿದ್ದು. ಇನ್ನು ಎರಡನೇ ಆಯಾಮವೆಂದರೆ ನಾನು ಈ ನನ್ನ ೮೦ರ ವಯಸ್ಸಿನಲ್ಲಿ ಕುಲಪತಿಯಾಗಲು ಒಪ್ಪಿಕೊಂಡಿರುವುದಕ್ಕೆ ನನಗೆ “ಕುರ್ಚಿ”ಯ ವ್ಯಾಮೋಹ ಕಾರಣವೆಂದು ಅಲ್ಲಲ್ಲಿ ಕೆಲವರು ಅಂದು ಕೊಂಡಿರಬಹುದು. ಆದರೆ ಅವರು ಮರೆತಿರಬಹುದಾದ ಒಂದು ಸಂಗತಿಯೆಂದರೆ ನಾನು ಕುಲಪತಿಯಾಗಿರುವುದು ನಮ್ಮ ಸುವರ್ಣ ಕರ್ನಾಟಕದ ಒಂದು ಕೇಂದ್ರಿಯ ವಿ ವಿ ಗೆ. ಕುಲಪತಿಯಾಗಿ ಅಲ್ಲಿ ನನಗೆ ದೊರಕಬಹುದಾದಂತಹ ಅಧಿಕಾರ ಏನಿದೆ ಅದರಿಂದ ಆ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಬದಲಾವಣೆಯ ಒಂದು ವಾತಾವರಣ ನಿರ್ಮಿಸಲು ಪ್ರಯತ್ನಿಸುವ ಆಸೆ ಇದೆ. ಅದರ ರೂಪ-ರೇಷೆಗಳ ಬಗ್ಗೆ ನಾನು ಗಾಢವಾಗಿ ಯೋಚಿಸುತ್ತಿದ್ದೆ. ನಾನು “ಮೌನಿ”ಯಾಗಿರಲು ಇದೂ ಒಂದು ಕಾರಣವಾಗಿರಬಹುದು. ಇನ್ನು ಉತ್ತರ ಪ್ರದೇಶದ ಘಟನೆಗಳ ಬಗ್ಗೆ “ಸದ್ಯದ”ಪರಿಸ್ಥಿತಿಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದರೆ ಅದು ಸೆಕ್ಯುಲರ್ ಅನಿಸಿಕೊಳ್ಳಬಹುದುದೆಂದು ಯೋಚಿಸುತ್ತಿದ್ದೇನೆ.