ವಿಷಯದ ವಿವರಗಳಿಗೆ ದಾಟಿರಿ

ಜುಲೈ 26, 2017

ಕಾರ್ಗಿಲ್ ಕಥನವೆಂದರೆ ಅದ್ಯಾವುದೋ ಹಾಲಿವುಡ್, ಬಾಲಿವುಡ್ ಸಿನೆಮಾ ಕಥೆಯಲ್ಲ!

‍ನಿಲುಮೆ ಮೂಲಕ

– ಶಿವಾನಂದ ಶಿವಲಿಂಗ ಸೈದಾಪೂರ.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಕಾಮೇಂಟ್ಸ್ ಚಕಮಕಿಗಳನ್ನು ಪ್ರತಿಯೊಬ್ಬರು ನೋಡಿಯೇ ನೋಡುತ್ತೆವೆ. ಸಾಕಷ್ಟು ದುಡ್ಡು ತೆಗೆದುಕೊಂಡು ನಟಿಸುವ ಹೆಸರಿಗೆ ಮಾತ್ರ ಹೀರೊಗಳಾಗಿರುವ ನಟರಿಗೆ ಇಂದು ಪ್ಯಾನ್ಸ್ ಕ್ಲಬ್‍ಗಳು ಬೇಕಾಬಿಟ್ಟಿಯಾಗಿ ಬೆಳೆದಿವೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಮೇಲೆ ಎಗರಾಡುವುದು ಏರಾಡುವುದು ಮಿತಿ ಮಿರಿದೆ. ರೀಲ್ ಕಥೆಯ ನಾಯಕರಿಗೆ ರಿಯಲ್ ಬಿಲ್ಡಪ್ ಅಂತು ಅತಿಯಾಗಿದೆ. ಕಟೌಟ್ ಮೇಲೆ ಬೀಳುವ ಹಾಲಿನ ಕ್ಯಾನ್ ಗಳಿಗೇನು ಕೊರತೆಯಿಲ್ಲ. ಪ್ರತಿಯೊಂದು ಭಾಷೆಯಲ್ಲಿ ವಾರಕ್ಕೆ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಸಿನೇಮಾ ಬಿಡುಗಡೆಯಾದರೂ ಕೂಡ ಸಾಮಾನ್ಯವಾಗಿ ಎಲ್ಲವನ್ನೂ ನೋಡುತ್ತೆವೆ. ಮತ್ತೆ ಮುಂದಿನ ವಾರದ ಹೋಸ ಸಿನೆಮಾ ಬರುವರೆಗೂ ಅದನ್ನು ಮೆಲುಕು ಹಾಕುತ್ತೆವೆ. ಬಿಡುಗಡೆಗೊಂಡ ಸಿನೇಮಾದ ನಾಯಕ, ನಾಯಕಿ, ಕಳನಾಯಕ, ನಿರ್ದೇಶಕ, ನಿರ್ಮಾಪಕನಿಂದ ಹಿಡಿದು ಪೋಷಕ ನಟನವರೆಗೂ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ…!

….ಕಾರ್ಗಿಲ್ ಹೀರೋಗಳು ಮಾತ್ರ ಇಂದು ನೆನಪಿನಲ್ಲಿ ಇಲ್ಲ!

ಕಾರ್ಗಿಲ್ ಕಥನವೆಂದರೆ ಅದೇನು ಯಾವುದೋ ಎರಡುವರೆ ತಾಸಿನ ಹಾಲಿವುಡ್, ಅಥವಾ ಬಾಲಿವುಡ್ ಸಿನೆಮಾನು ಅಲ್ಲ. ಕಾಲ್ಪನಿಕ ಕಥೆಯು ಅಲ್ಲ. ಕಾರ್ಗಿಲ್ ವೀರರೆಂದರೆ ಜೇಮ್ಸ್ ಬಾಂಡ, ಅದ್ಯಾವುದೋ ಖಾನ್‍ಗಳಲ್ಲ! ನಿರಂತರವಾಗಿ ಎಪ್ಪತ್ತನಾಲ್ಕು ದಿನಗಳ ಕಾಲ ಕಾರ್ಗಿಲ್ ಪ್ರದೇಶದಲ್ಲಿ ನಡೆದಂತಹ ಸತ್ಯಕಥೆಯೇ ಕಾರ್ಗಿಲ್ ಕಥನ. ವಾಸ್ತವ ಜಗತ್ತಿಗೆ ಭಾರತವು ತನ್ನ ಕ್ಷಾತ್ರ ಪರಂಪರೆಯನ್ನು ಇನ್ನು ಕಳೆದುಕೊಂಡಿಲ್ಲವೆಂಬುದನ್ನು ಪುನಃ ತೊರಿಸಿಕೊಟ್ಟಿದ್ದೇ ಕಾರ್ಗಿಲ್ ಯುದ್ಧ. ಆಕ್ರಮಣಕ್ಕಾಗಿ ಬಂದರೆ ಸಿಗಿದು ತೋರಣ ಕಟ್ಟಿ ಎದುರುತ್ತರ ಕೊಡಲು ಸಿದ್ಧವೆಂಬುವ ಪರಾಕ್ರಮವನ್ನು ತೋರಿಸುವ ಕಥೆಯೇ ಕಾರ್ಗಿಲ್ ಕಥೆ. ಭಾರತದ ಇತಿಹಾಸದಲ್ಲಿ ತಲಾ ತಲಾಂತರದವರೆಗೂ ಸಾರಿ ಹೇಳುವ ಕಥನವೇ ಕಾರ್ಗಿಲ್ ಕಥನ. ಭಾರತ-ಪಾಕಿಸ್ತಾನಗಳ ಮದ್ಯೆ ನಾಲ್ಕು ಯುದ್ಧಗಳಾದರೂ ಪಾಕಿಸ್ತಾನ ನಿದ್ದೆಗೆಟ್ಟು ಕೈ ಮುಗಿದು ಅಂಗಲಾಚುವ ಕಾಲ ಬಂದದ್ದೆ 1999ರ ಕಾರ್ಗಿಲ್ ಕಥನದಲ್ಲಿ.

ಕಾರ್ಗಿಲ್ ಕದನವೇನು ಹದಿನೆಂಟು ದಿನಗಳ ಕಾಲ ನಡೆದ ಮಹಾಭಾರತದ ಕದನವಲ್ಲ. ಬರೊಬ್ಬರಿ ಎಪ್ಪತ್ತನಾಲ್ಕು ದಿನ ನಡೆದ ಭೀಕರ ಯುದ್ಧ. ಹದಿನೈದು ನೂರು ಕೋಟಿಯಷ್ಟು ವೆಚ್ಚ, ಐನೂರಾ ಇಪ್ಪತ್ತೇಳು ಜನ ಸೈನಿಕರು ಕಾಶ್ಮೀರದ ಕಣಿವೆಯಲ್ಲಿ ಪ್ರಾಣಾರ್ಪನೆ ಮಾಡಿ ಭಾರತದ ಮುಡಿಗೆ ವಿಜಯಿ ಕೀರಿಟ ತೋಡಿಸಿದ್ದು ಸಾಮಾನ್ಯದ ಮಾತಲ್ಲ.

ಅದು 1999ರ ಫೆಬ್ರುವರಿ 21ರ ದಿನ. ಹಳೆಯ ಎಲ್ಲ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ಬ್ರಾತೃತ್ವದಿಂದ ಬದುಕಿದರಾಯಿತೆಂದು ಈ ದೇಶದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಸ್ವತಃ ಲಾಹೋರ ಬಸ್ಸು ಹತ್ತಿ ಪಾಕಿ ನವಾಜ್ ಷರೀಪರನ್ನು ಭೇಟಿಯಾಗಿ ಕೈ ಕುಲುಕಿದ್ದು ಅಮೇರಿಕಾ, ಚೀನಾದಂತ ರಾಷ್ಟ್ರಗಳನ್ನು ಆಶ್ಚರ್ಯಚಕಿತರನ್ನಾಗಿಸಿತು. ಅದಕ್ಕೆ ಕಾರಣವೂ ಇತ್ತು. ಪರಮಾಣು ಸ್ಪೋಟಿಸಿದ್ದ ಭಾರತ ಪಕ್ಕದ ಶತ್ರುವಿನ ಜೊತೆ ಬ್ರಾತೃತ್ವ ಬಾಂಧವ್ಯದಿಂದ ಬದುಕಲು ಬಯಸಿದ್ದರೆ ಯಾರಿಗೆ ತಾನೇ ಆಶ್ಚರ್ಯವಾಗದಿರಲು ಸಾಧ್ಯ.

ಇಷ್ಟೆಲ್ಲಾ ಆದ ನಂತರ ನಡೆದಿದ್ದಾದರೂ ಏನು?
1999ರ ಮೇ 8ರ ಹೊತ್ತಿಗೆ ಪಾಕಿಸ್ತಾನ ಮತ್ತೆ ತನ್ನ ಕಂತ್ರಿ ಬುದ್ಧಿಯನ್ನು ಶುರು ಹಚ್ಚಿಕೊಂಡಿತು. ಮುಜಾಹೀದಿನಗಳನ್ನು, ಅಫಘನಿನ ಬಾಡಿಗೆ ಚೇಲಾಗಳನ್ನು, ಸೈನಿಕರನ್ನು, ಸೈನಿಕ ಮುಖದ ಉಗ್ರರನ್ನು ಭಾರತದೊಳಗೆ ನುಗ್ಗಿಸಿ ಕಾಶ್ಮೀರ ಕೆಂಡವಾಗುವಂತೆ ಮಾಡಿತು. ಪಹರೆಯಿಲ್ಲದ ವೇಳೆಯಲ್ಲಿ ಕಾರ್ಗಿಲ್, ದ್ರಾಸ್, ಮುಸ್ಕೋ ಕಣಿವೆ ಪ್ರದೇಶಗಳಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲೆತ್ನಿಸಿತು. ಮೇ 26ರ ಹೊತ್ತಿಗೆ 700 ರಿಂದ 800 ಜನ ಅಂದರೆ ಅತಿ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಆಕ್ರಮಣಕಾರರು ಕಾಶ್ಮೀರದೊಳಗೆ ನುಸುಳಿದರು.

ಕುತಂತ್ರಿ ಪಾಕಿಸ್ತಾದ ಈ ನಾಟಕಕ್ಕೆ ಪ್ರತ್ಯುತ್ತರ ನೀಡಲು ಆಪರೇಶನ್ ವಿಜಯ ಆಗಬೇಕಿತ್ತು. ಉಗ್ರಗಾಮಿಗಳು ಕುಟಿಲತೆಯಿಂದ ಗಡಿಯೊಳಕ್ಕೆ ನುಗ್ಗಿದರೆಂಬುದನ್ನು ದನಗಾಹಿಗಳಿಂದ ತಿಳಿದ ಸೌರಭ್ ಕಾಲಿಯಾ ಮತ್ತು ಐವರು ಸುಳಿವು ಅರಿಸುತ್ತ ಹೋದ ನಂತರ ಅವರು ಪತ್ತೆಯಾದದ್ದು 22 ದಿನ ಕಳೆದ ನಂತರ. ಅವರ ಮೇಲೆ ಎಂತಹ ಪೈಶಾಚಿಕ ಕೃತ್ಯ ನಡೆದಿತ್ತೆಂದರೆ ಒಬ್ಬ ಮನುಷ್ಯನಿಗೆ ಇರಬೇಕಾದ ಯಾವ ಅಂಗಾಂಗಳು ಮೃತ ದೇಹದಲ್ಲಿರಲಿಲ್ಲ. ಕಣ್ಣುಗುಡ್ಡೆಗಳನ್ನು ಕೀಳಲಾಗಿತ್ತು, ಮೂಗು, ಕಿವಿ ಮತ್ತು ಮರ್ಮಾಂಗಳನ್ನು ಕತ್ತರಿಸಲಾಗಿತ್ತು. ಸೀಗರೇಟಿನಿಂದ ದೇಹದ ಸೆನ್ಸಿಟಿವ್ ಭಾಗಗಳನ್ನು ಸುಟ್ಟು ಅತ್ಯಂತ ಭೀಕರ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಸೌರಭ್ ಕಾಲಿಯಾ ಮತ್ತು ಐವರು ಸೈನಿಕರ ಮೇಲೆ ಪಾಕಿಗಳು ಅಮಾನವೀಯ ಕ್ರೌರ್ಯವನ್ನು ಮೆರೆದಿದ್ದರು. ವಿಕ್ರಮ್ ಬಾತ್ರಾ, ವಿಜಯ ಕಾಂತ, ಥಾಪರ್, ಜೆರಿ ಪ್ರೇಮ್ ರಾಜ್, ಮೇಜರ್ ಪದ್ಮಪಾಣಿ ಆಚಾರ್ಯ, ಸೋನಮ್ ವಾಂಗ್‍ಚುಕ್ಕ್ ಲೆಪ್ಟಿನೆಂಟ್ ಕನಂದನ್ ಭಟ್ಟಾರ್ಯ, ಬಲವಾನ್ ಸಿಂಗ್, ಕೀಸಿಂಗ್ ಕ್ಲಿಫರ್ಟ್‍ನಿಂಗ್ರುಮ್, ಸಜು ಚೆರಿಯನ್, ಗ್ರೇನೆಡಿಯರ್ ಯೋಗೇಂದ್ರ ಸಿಂಗ್‍ರಂತಹ ಹಲವಾರು ಸೌನಿಕರು ಪಾಪಿ ಪಾಕಿಗಳ ಕ್ರೌರ್ಯಕ್ಕೆ ಬಲಿಯಾದರು. ಅಷ್ಟೇಯಲ್ಲ ಭಾರತೀಯ ವಾಯುಪಡೆಯ ಫ್ಲಟ್ ಲೆಫ್ಟಿನೆಂಟ್ ಬೆಳಗಾವಿಯ ಎಂ. ಸುಬ್ರಮ್ಮಣ್ಯಮ್, ಸೌದತ್ತಿ ತಾಲೂಕಿನ ಆಸುಂಡಿ ಗ್ರಾಮದ ನಾಯ್ಕರ ಮಡಿವಾಳಪ್ಪ, ಸಿ.ಆರ್.ಪಿ,ಎಫ್‍ನ ಯೋಧರಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಿದ್ದನಗೌಡ ಪಾಟೀಲ, ಅಪ್ಪಾಸಾಹೇಬ್ ಧನವಾಡೆ, ಖಾನಪೂರದ ಧೋಂಡಿಬಾ ದೇಸಾಯಿ, ಬೈಲಹೊಂಗಲ ತಾಲೂಕಿನವರಾದ ಲಾನ್ಸ್‍ನಾಯಕ ಯಸವಂತ ಕೋಲಕಾರ, ಬಾಗಲಕೊಟ್ ಜಿಲ್ಲೆಯ ಬದಾಮಿ ತಾಲೂಕಿನ 20ನೆಯ ರಾಷ್ಟ್ರೀಯ ರೈಪಲ್ಸ್ ನಾಯಕ ಶಿವಬಸಯ್ಯ ಕುಲಕರ್ಣಿ, ಜಮಖಂಡಿ ತಾಲೂಕಿನ ದಿಲೀಪ್ ಪೋತರಾಜ, ಬಿ.ಎಸ್.ಎಫ್ ಯೋಧ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ದಾವಲ್‍ಸಾಹೇಬ್ ಅಲಿಸಾಬ್ ಕಂಬಾರ್, ಬಿದರ್ ಜಿಲ್ಲೆಯ ಸಿದ್ದರಾಮಪ್ಪ, ಗೋವಿಂದ್ ಶೇಡೋಳೆ, ಲ್ಯಾನ್ಸ್ ಹವಿಲ್ದಾರನಾದ ಕೊಪ್ಪಳ ಜಿಲ್ಲೆಯ ಚನ್ನಬಸಯ್ಯ ಮೇಗಳಮಠ, ಕೊಡಗು ಜಿಲ್ಲೆಯವರಾದ ಮರಾಠ ಲೈಟ್ ಇನ್‍ಫೆಂಟ್ರಿನ ಎಸ್. ಕೆ. ಮೇದಪ್ಪ, ಸುಭೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ, ಹಾಸನ ಜಿಲ್ಲೆಯ ಅರಕಲೂಗೂಡಿನವರಾದ ಲಾನ್ಸ್‍ನಾಯಕ ಎಚ್.ವಿ. ವೆಂಕಟ್‍ರಂತಹ ಸಾಕಷ್ಟು ಜನ ಕನ್ನಡ ವೀರಯೋದರು ಈ ಕಾರ್ಗಿಲ್ ಕದನಕ್ಕೆ ಹುತಾತ್ಮರಾದರು.

ಒಟ್ಟು 150 ಕೀ.ಮೀ ಜಾಗದಲ್ಲಿ 74 ದಿನಗಳ ಕಾಲ ಯುದ್ಧ ನಡೆಯಿತು. 20000 ಭಾರತಿಯ ಸೈನಿಕರಿದ್ದರೆ, ಉಗ್ರರನ್ನು ಸೇರಿ ಅಘೋಷಿತ ಪ್ರಮಾಣದಲ್ಲಿ ಪಾಕಿಗಳಿದ್ದರು. ಪಾಕಿಸ್ತಾನ ಪ್ರೇರೇಪಿತ ಉಗ್ರರ ಗುಂಪು ನಮ್ಮ ಸೈನಿಕರ ಮೇಲೆ ಎಷ್ಟೇ ಭಯಂಕರ ಕೌರ್ಯ ಮೆರೆದರೂ ಕೂಡ ನಮ್ಮ ಸೈನಿಕರು ಎದೆಗುಂದಲಿಲ್ಲ. ಎಪ್ಪತ್ನಾಲ್ಕು ದಿನದಲ್ಲಿ ಯಾವತ್ತು ನಮ್ಮ ಸೈನಿಕರು ಯುದ್ಧಕ್ಕೆ ಬೆನ್ನು ತೋರಿಸಲಿಲ್ಲ. ಮಡಿದರೆ ವೀರ ಸ್ವರ್ಗವೆಂದು, ಬದುಕಿದರೆ ತಾಯ್ನಾಡಿನ ಸೇವೆಯೆಂದು ತಲೆಯೆತ್ತಿ ಎದೆಯುಬ್ಬಿಸಿ ಮುನುಗ್ಗಿ ಪಾಕಿಸ್ತಾನಿಗಳನ್ನು ಹೋಡೆದುರುಳಿಸಿದರು. ಅಂತಹ ಬಲಿದಾನಿ ವೀರಾಧಿವೀರರಿಗೆ ಜೈ ಜವಾನ್‍ವೆಂದು ಜೈಕಾರ ಹಾಕುವ ದಿನವೇ ಜುಲೈ 26 ದಿನ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments