ದೇಶ ವಿಭಜನೆಯ ಕಾರ್ಯಕ್ರಮದ ಹೆಸರು ದ್ರಾವಿಡ ಸಮ್ಮೇಳನ
– ರಾಕೇಶ್ ಶೆಟ್ಟಿ
“ಯಾವುದರ ಉದ್ದೇಶ Constructive ಆಗಿರುತ್ತದೆಯೋ ಅಂತಹದ್ದು ಮಾತ್ರ ಈ ನೆಲದಲ್ಲಿ ಉಳಿಯುತ್ತದೆ. Destructive ಉದ್ದೇಶವಿರುವಂತವು ಒಂದಷ್ಟು ದಿನ ವಿಜೃಂಭಿಸಿದರೂ ಅಂತಿಮವಾಗಿ ಅವು ಇಲ್ಲಿಂದ ನಾಮಾವಶೇಷವಾಗುತ್ತವೆ”. ಭಾರತದಿಂದ ಬೌದ್ಧ ಮತವೇಕೆ ಹೊರಗೆ ಹೋಗಬೇಕಾಯಿತು ಎಂದು ಶಿಷ್ಯನೊಬ್ಬ ಕೇಳಿದ ಪ್ರಶ್ನೆಗೆ ಈ ಅರ್ಥದಲ್ಲಿ ಸ್ವಾಮಿ ವಿವೇಕಾನಂದರು ಉತ್ತರಿಸುತ್ತಾರೆ. ಅವರು ಹೇಳಿದ ಮಾತು ಎಷ್ಟು ಸತ್ಯವೆನ್ನಲು ಪಕ್ಕದ ತಮಿಳುನಾಡಿನಲ್ಲಿ ಶುರುವಾಗಿದ್ದ ದ್ರಾವಿಡ ಚಳವಳಿ ಎಂಬ ಅತಿರೇಕವು ಇಂದು ಕೊನೆಯುಸಿರುಳೆಯುತ್ತಿರುವುದೇ ಉದಾಹರಣೆ. ಕನ್ನಡ ಮನೆ ಭಾಷೆಯಾಗಿದ್ದ ರಾಮಸ್ವಾಮಿ ಅವರಿಂದ ಶುರುವಾದ ಈ ದ್ರಾವಿಡ ಚಳವಳಿಯ ಬೇರಿನಲ್ಲೇ ದ್ವೇಷದ ವಿಷ ತುಂಬಿಕೊಂಡಿತ್ತು.
ಹಾವು-ಹಾರವ ಎದುರಾದರೇ ಮೊದಲು ಹಾರವನನ್ನು ಕೊಲ್ಲು ನಂತರ ಹಾವನ್ನು ಎನ್ನುವ ವಿಷ ಚಿಂತನೆಯಿಂದ ಹುಟ್ಟಿಕೊಂಡ ಚಳವಳಿ ಹೇಗೆ ತಾನೇ ಇರಲು ಸಾಧ್ಯ? ದೇವರ ವಿಗ್ರಹಗಳನ್ನು ಹೊರಗೆ ಎಳೆದು ತಂದು ಚಪ್ಪಲಿ ಹಾರ ಹಾಕಿದರು. ಬ್ರಾಹ್ಮಣರ ಜುಟ್ಟು-ಜನಿವಾರಗಳನ್ನು ಕಿತ್ತುಹಾಕಿ ಎಂದು ಬೊಬ್ಬಿಟ್ಟರು.ತಮಿಳನ್ನು ಸಂಸ್ಕೃತದಿಂದ ಶುದ್ಧ ಮಾಡಬೇಕು ಎನ್ನುತ್ತಾ ತಮಿಳು ನಾಡನ್ನು ,ತಮಿಳರನ್ನು ಒಂದು ದ್ವೀಪವನ್ನಾಗಿ ಮಾಡಿಕೊಂಡರು. ಜೀವನವಿಡೀ ನಕಾರಾತ್ಮಕ ಚಿಂತನೆಯನ್ನೇ ಹೇಳಿಕೊಂಡು ಬಂದು,ತಮಿಳರಿಂದ ಪೆರಿಯಾರ್ ಎಂದು ಕರೆಸಿಕೊಂಡ ರಾಮಸ್ವಾಮಿಯವರ ಸಂಗ,ಅವರ ಒಂದು ಕಾಲದ ಶಿಷ್ಯರಿಗೆ ಸಾಕಾಯಿತು. ಅವರಿಂದ ಕಳಚಿಕೊಂಡು ಡಿಎಂಕೆ ಸ್ಥಾಪನೆಯಾಯಿತು. ಅದೇ ಡಿಎಂಕೆಯ ಒಡಲಿನಿಂದ ಎಐಡಿಎಂಕೆ ಹುಟ್ಟಿಕೊಂಡಿತು. ಮುಂದೆ ಅರ್ಧ ದಶಕಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕೀಯವೆಂಬ ಹೆಸರಿನ ಹೂವನ್ನೇ ತಮಿಳರ ಕಿವಿಗೆ ಮುಡಿಸಿ ಅಧಿಕಾರ ನಡೆಸಿದ್ದು ಇವೆರಡು ಪಕ್ಷಗಳೇ. ಅದರಲ್ಲೂ ಕರುಣಾನಿಧಿಯವರ ಕುಟುಂಬವಂತೂ ದೇಶಕ್ಕೆ ಅಮರಿಕೊಂಡ ನೆಹರೂ ಕುಟುಂಬದಂತೆಯೇ ಆಗಿ ಹೋಗಿತ್ತು. ದೊಡ್ಡ ಮಗನ ಕೋಟೆ ಮಧುರೈನಲ್ಲಿ,ಚಿಕ್ಕ ಮಗನ ರಾಜ್ಯಭಾರ ಚೆನ್ನೈನಲ್ಲಿ ಮತ್ತೊಬ್ಬ ಮಡದಿಯ ಮಗನದು ಕೊಂಗನಾಡು,ಹೀಗೆ ತುಂಡು ರಾಜರ ಕಾಲದ ಪಾಳೆಯಪಟ್ಟುಗಳಂತಹ ರಾಜಕೀಯವದು.ಇಂತಹ ರಾಜಕೀಯ ಅತಿರೇಕಗಳು ಮತ್ತು ನಕಾರಾತ್ಮಕ ಚಳವಳಿಯ ಪರಿಣಾಮ ಹೇಗಿರುತ್ತದೆ ಎನ್ನುವುದನ್ನು ಜಯಲಲಿತಾ ಸಾವು ಮೊದಲ ಬಾರಿಗೆ ತೋರಿಸಿಕೊಟ್ಟಿತು. ತಮ್ಮ ತಮಿಳು ದ್ವೀಪದಲ್ಲೇ ಕುಳಿತು ಅಮ್ಮಾ ಅಮ್ಮಾ ಎನ್ನುತ್ತ ಆಕೆಯ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದವರೇ ಪಕ್ಷವನ್ನು ಮೂರು ಹೋಳಾಗಿಸಿದರು.