ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2021

1

ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ

‍ರಾಕೇಶ್ ಶೆಟ್ಟಿ ಮೂಲಕ

– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.

ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.

ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.

ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?

ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .

ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.

ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.

ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?

ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.

ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.

ಚಿತ್ರಕೃಪೆ : Business Today

1 ಟಿಪ್ಪಣಿ Post a comment
  1. ನಾರಾಯಾಣ ರೆಡ್ಡಿ
    ಜೂನ್ 2 2021

    ಆಳುವ ಪಕ್ಷ ಮತ್ತು ವಿರೋಧಪಕ್ಷಗಳ ಕಣ್ಣು ತೆರೆಸುವ ಉತ್ತಮ‌ಲೇಖನ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments