ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ
– ಶೈಲೇಶ್ ಕುಲ್ಕರ್ಣಿ
ವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 16:
ಚಾಪೇಕರ್ ಸಹೋದರರು
– ರಾಮಚಂದ್ರ ಹೆಗಡೆ
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಇದೇ ಸರಣಿಯಲ್ಲಿ ಹಿಂದೆ ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಯಿಂದಾಗಿ ಕ್ರಾಂತಿಯ ಕಹಳೆ ಮೊಳಗಿಸಿ ಬಲಿದಾನಗೈದ ಕಥೆ ಇತಿಹಾಸದಲ್ಲಿ ಅಪರೂಪದ ಸಂಗತಿ. ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸ ಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸು ಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಮತ್ತಷ್ಟು ಓದು 
ಕಾಶ್ಮೀರದ ಐತಿಹಾಸಿಕ ಸತ್ಯಗಳು : ನಿಲುಮೆ ವಿಚಾರ ಸಂಕಿರಣ
– ಹರೀಶ್ ಆತ್ರೇಯ
ಕಾಶ್ಮೀರ ವಿವಾದಿತ ಪ್ರದೇಶವೇಕಾಗುತ್ತಿದೆ ಮತ್ತು ಅಲ್ಲಿನ ನಿಜ ಸ್ವರೂಪವೇನು ಎಂಬುದನ್ನು ತಿಳಿಯಲು ನಿಲುಮೆ ತಂಡ ಆಯೋಜಿಸಿದ ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿನ ಪ್ರೊ. ಪ್ರೇಮಶೇಖರ್ ರವರ ಕೆಲವು ವಿಚಾರಗಳನ್ನು ಹಂಚಿಕೊಳ್ಳುತಿದ್ದೇನೆ..
ಭಾರತದ ವಿಭಜನೆಯಾದಾಗ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತವೆಂದು ಮತ್ತು ಉಳಿದ ದೇಶೀಯ ಸ್ವತಂತ್ರ್ಯ ಪ್ರಾಂತ್ಯಗಳನ್ನು ಅವುಗಳ ಇಚ್ಚೆಯಂತೆ ಭಾರತದಲ್ಲಾಗಲೀ ಅಥವಾ ಪಾಕೀಸ್ತಾನದಲ್ಲಿಯಾಗಲೀ ಸೇರುವಂತೆ ಹೇಳಲಾಯ್ತು. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ “British paramount should relapse on the midnight of 14 Aug 1947. ಎಂದರೆ ಸುಮಾರು ಆರುನೂರು ಸ್ಥಳೀಯ ಸಂಸ್ಥಾನಗಳು ಬ್ರಿಟಿಷ್ ಕಾಲನಿಗಳಾಗುವದಕ್ಕೂ ಮುಂಚೆ ಇದ್ದ ರೀತಿಯಲ್ಲಿ ಸ್ವತಂತ್ರ್ಯವಾಗಿರಬಹುದು. ಅಲ್ಲಿನ ಸ್ಥಳೀಯ ನಾಯಕನ (ಆತ ನವಾಬನಾಗಿರಬಹುದು ಅಥವ ಅರಸನಾಗಿರಬಹುದು) ಆತನ ಆಜ್ಞೆ ಅಥವಾ ನಡೆಯಂತೆ ಆ ಸಂಸ್ಥಾನಗಳು ಪಾಕೀಸ್ತಾನದೊಳಗೆ ಅಥವಾ ಭಾರತದೊಳಗೆ ವಿಲೀನವಾಗಬಹುದು. ಅದರ ಜೊತೆಗೆ ಮತ್ತೂ ಒಂದು ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ ಅದೇನೆ೦ದರೆ ವಿಲೀನಗೊಳಿಸಿಕೊಳ್ಳುವಾಗ ಆ ಪ್ರಾಂತ್ಯದ ಭೌಗೋಳಿಕ ನೆಲೆ ಮತ್ತು ಪ್ರಜೆಗಳ ಧರ್ಮವನ್ನು ಪರಿಗಣಿಸಿ ಎಂಬುದಾಗಿತ್ತು. ಇದನ್ನು ಕೇಳಿದ ಕಾಶ್ಮೀರ ಮತ್ತು ತಿರುವನಂತಪುರಂ ಸಂಸ್ಥಾನಗಳು ಸ್ವತಂತ್ರ್ಯವಾಗುವ ಯೋಚನೆಯನ್ನು ಮಾಡಿದವು. ಅಂದರೆ ಯಾರ ಆಡಳಿತಕ್ಕೂ ಒಳಪಡದೆ (ಅತ್ತ ಪಾಕೀಸ್ತಾನವೂ ಅಲ್ಲ ಇತ್ತ ಭಾರತವೂ ಅಲ್ಲ) ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡುವುದು. ಇದು ಪಾಕೀಸ್ತಾನಕ್ಕೆ ಸಮ್ಮತವಾಗಲಿಲ್ಲ. ಏಕೆಂದರೆ PAKISTAN ನಲ್ಲಿನ K ಕಾಶ್ಮೀರವನ್ನ ಸೂಚಿಸುತ್ತೆ. PAKISTAN ಎನ್ನುವುದು ಒಂದು ಪೂರ್ಣ ಹೆಸರಲ್ಲ, ಹಲವು ಸ್ಥಳಗಳ ಅಕ್ಷರಗಳನ್ನು ಸೇರಿಸಿದ ಸಂಕ್ಷಿಪ್ತ ರೂಪ. ಇದನ್ನು ಕೊಡಮಾಡಿದವನು ಲಂಡನ್ನಿನ ವಿದ್ಯಾರ್ಥಿಯಾಗಿದ್ದ ಚೌದರಿ ರೆಹಮತ್ ಆಲಿ ಮತ್ತು ಪ್ರಕಟಿಸಿದ್ದು ೨೮ ಜನವರಿ ೧೯೩೩ರಂದು ನೌ ಆರ್ ನೆವರ್ ಎಂಬ ಪತ್ರಿಕೆಯಲ್ಲಿ, ಆತನ ಪ್ರಕಾರ ವಾಯುವ್ಯ ಭಾರತವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಭಿನ್ನವಾಗಿದೆ ಮತ್ತು ಧಾರ್ಮಿಕವಾಗಿ ಮಧ್ಯ ಏಷಿಯಾಕ್ಕೆ ಮತ್ತು ಪಶ್ಚಿಮ ಏಷಿಯ ಹತ್ತಿರವಾಗಿದೆ, ಆದ ಕಾರಣ ಈ ಭಾಗವನ್ನು ಭಾರತದಿಂದ ಪ್ರತ್ಯೇಕಿಸಿ ಮಧ್ಯ ಏಷಿಯಾದೊಂದಿಗೆ ಸೇರಿಸಿ ಹೊಸತೊಂದು ರಾಷ್ಟ್ರವನ್ನು ಮಾಡಬೇಕು ಎಂಬುದು. ಆತ ಸೇರಿಸಿದ ಪ್ರಾಂತ್ಯಗಳು ಈ ಕೆಳಗಿನಂತಿವೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 15:
ವಾಸುದೇವ ಬಲವಂತ ಫಡಕೆ:
– ರಾಮಚಂದ್ರ ಹೆಗಡೆ
೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ ಇತ್ತು – ಹಣ , ಸುಖ, ಶಾಂತಿ, ನೆಮ್ಮದಿ. ಆದರೆ ದೇಶದಲ್ಲಿ ಇವ್ಯಾವುದೂ ಇಲ್ಲ ಎಂಬ ಕಾರಣಕ್ಕೆ ಆತ ಕ್ರಾಂತಿಗಿಳಿದ. ಚಿಕ್ಕಂದಿನಿಂದಲೇ ಅಜ್ಜ ಹಾಗೂ ತಂದೆಯಿಂದ ದೇಶಭಕ್ತಿಯ ಕಥೆಗಳನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯಮುಕ್ತಗೊಳಿಸಬೇಕು ಎಂಬ ಹಂಬಲವಿತ್ತು. 1859 ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಆತ ಪುಣೆಯ ಮಿಲಿಟರಿ ಫೈನಾನ್ಸ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬ್ರಿಟಿಷ್ ಸರ್ಕಾರದ ಕೆಲಸವಾದರೂ ಒಳಗೊಳಗೇ ಆತನ ಸ್ವಾತಂತ್ರ್ಯದ ಆಸೆ ಬಲಗೊಳ್ಳುತ್ತಲೇ ಇತ್ತು. ಅದೇ ಸಮಯಕ್ಕೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದಾಗ ಆತ ಕೆಲಸಕ್ಕೆ ರಜೆ ಕೇಳಿದ, ಬ್ರಿಟೀಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡದ ಬ್ರಿಟಿಷರ ವಿರುದ್ಧ ಸಿಡಿದೆದ್ದ ವಾಸುದೇವ ‘ಇವರು ನನ್ನ ತಾಯಷ್ಟೇ ಅಲ್ಲ, ಭಾರತಮಾತೆಯಿಂದಲೂ ನಮ್ಮನ್ನು ದೂರಮಾಡುತ್ತಿದ್ದಾರೆ’ ಎಂಬ ಭಾವದಿಂದ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯರ ಎಲ್ಲ ಕಷ್ಟಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮಗಿರಿಯ ಜೊತೆಗೆ ಶಿಕ್ಷಣದ ಕೊರತೆ ಎಂಬುದನ್ನು ಗುರುತಿಸಿ “ಪೂಣಾ ನೇಟಿವ್ ಇನಿಸ್ಟಿಟ್ಯೂಷನ್ ” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ ‘ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ’ ಎಂಬ ಹೆಸರಿನಿಂದ ಭವ್ಯ ಸ್ವರೂಪ ತಾಳಿತು. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 14:
ಸಂಗೊಳ್ಳಿ ರಾಯಣ್ಣ
– ರಾಮಚಂದ್ರ ಹೆಗಡೆ
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷ್ ಸಾಮ್ರಾಜ್ಯದ ಎದೆ ನಡುಗಿಸಿದ, ತನ್ನ ಅಪಾರ ಶೌರ್ಯ ಪರಾಕ್ರಮಗಳಿಂದ ಬ್ರಿಟಿಷರಿಗೆ ಸವಾಲಾಗಿ ನಿಂತು ಕ್ರಾಂತಿಯ ರಣಕಹಳೆ ಮೊಳಗಿಸಿದ ಕನ್ನಡ ನಾಡಿನ ಗಂಡುಗಲಿ, ನಮ್ಮೆಲ್ಲರ ಹೆಮ್ಮೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬಹುತೇಕರಿಗೆ ತಿಳಿಯದ ಅಚ್ಚರಿಯೆಂದರೆ, ನಮ್ಮ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ರಂದು ಮತ್ತು ದೇಶಕ್ಕಾಗಿ ಬಲಿದಾನಗೈದದ್ದು ಜನವರಿ 26 (15 ಆಗಸ್ಟ್ 1798 – 26 ಜನವರಿ 1831). ಒಂದು ಸ್ವಾತಂತ್ರ್ಯ ದಿನ, ಮತ್ತೊಂದು ಗಣರಾಜ್ಯ ದಿನ, ಎರಡೂ ದಿನಗಳೂ ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನಗಳು. ಬ್ರಿಟಿಷರ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಕೆಚ್ಚೆದೆಯಿಂದ ಅವರ ವಿರುದ್ಧ ಸಮರ ಸಾರಿದ ಕನ್ನಡದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮಳ ಬಲಗೈ ಬಂಟ ರಾಯಣ್ಣ. ತನ್ನವರದೇ ಮೋಸಕ್ಕೆ ಒಳಗಾಗಿ ಚೆನ್ನಮ್ಮ ಬ್ರಿಟಿಷರ ಸೆರೆಗೆ ಸಿಕ್ಕಾಗ ಕಿತ್ತೂರಿನ ಪರವಾಗಿ ಕ್ರಾಂತಿ ಕಹಳೆ ಮೊಳಗಿಸಿದ ಗಂಡುಗಲಿ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 13
ವೀರಪಾಂಡ್ಯ ಕಟ್ಟಬೊಮ್ಮನ್
– ರಾಮಚಂದ್ರ ಹೆಗಡೆ
ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅವರ ವಿರುದ್ಧ ಸಿಡಿದೆದ್ದು ಅವರಿಗೆ ಸೆಡ್ಡು ಹೊಡೆದು ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ತಕ್ಷಣ ತಮ್ಮ ದಬ್ಬಾಳಿಕೆಯನ್ನು ಆರಂಭಿಸಿದರು. ಸಣ್ಣ ಪುಟ್ಟ ರಾಜರುಗಳಿಗೆ ಕಿರುಕುಳ ನೀಡುತ್ತಾ ಅಧಿಕಾರ ಚಲಾಯಿಸಲು ಶುರುಮಾಡಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ ರಾಜರುಗಳು ಅವರ ಅಡಿಯಾಳುಗಳಾದರು. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಂಚಾಲಂಕುರುಚ್ಚಿಯ ಪಾಳೆಯಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಮಾತ್ರ ಅವರೆದುರು ಬಗ್ಗಲಿಲ್ಲ. ಪಾಂಚಾಲಂಕುರುಚ್ಚಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಮ್ಯಾಕ್ಸ್ವೆಲ್ ಎಂಬಾತ ಆಗಿನ ಕಂಪೆನಿಯ ಅಧಿಕಾರಿ. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಲು ಹಲವು ಬಾರಿ ನೋಟೀಸ್ ಕಳಿಸಿದರೂ ವೀರಪಾಂಡ್ಯ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದನ್ನರಿತ ಮ್ಯಾಕ್ಸ್ವೆಲ್ ಬೊಮ್ಮುವಿಗೆ ಹಲವಾರು ಬೆದರಿಕೆ ಪತ್ರಗಳನ್ನು ಬರೆದ. ‘ಕಪ್ಪ ಸಲ್ಲಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಬರುತ್ತೇವೆ’ ಎಂದು ಹೆದರಿಸಿದ. ‘ನಾವೀ ಮಣ್ಣಿನ ಮಕ್ಕಳು. ಇದು ನಮ್ಮ ಭೂಮಿತಾಯಿ. ನಾವು ಘನತೆ ಗೌರವಗಳಿಂದ ಬಾಳುವವರು. ನಮ್ಮ ಭೂಮಿಯ ಮರ್ಯಾದೆಯ ಸಲುವಾಗಿ ನಾವು ಪ್ರಾಣ ನೀಡುವೆವೇ ಹೊರತು ವಿದೇಶಿ ಶತ್ರುಗಳಿಗೆ ತಲೆಬಾಗುವುದಿಲ್ಲ. ಬನ್ನಿ ಹೋರಾಡೋಣ’ ಎಂದು ವೀರಪಾಂಡ್ಯ ಯುದ್ಧಕ್ಕೆ ಆಹ್ವಾನ ನೀಡಿದ. ಮತ್ತಷ್ಟು ಓದು 
ಅರ್ಧ ನಿಮಿಷದ ಅಂತರದಲ್ಲಿ ಕಂಚು ಕೈತಪ್ಪಿತು!
– ರೋಹಿತ್ ಚಕ್ರತೀರ್ಥ
ನಸುಕಿನ ನಾಲ್ಕು ಗಂಟೆ. ಬದರಿನಾಥದ ಗಡಗಡ ಚಳಿಯಲ್ಲೂ ಇಪ್ಪತ್ತನಾಲ್ಕರ ಯುವಕನೊಬ್ಬ ಅಲಾರಂ ಇಲ್ಲದೆ ದಡ್ಡನೆದ್ದು ಕೂತಿದ್ದಾನೆ. ಒಂದೇ ಒಂದು ನಿಮಿಷವನ್ನು ವ್ಯರ್ಥ ಮಾಡದೆ; ಉದಾಸೀನವೆಂದು ಮತ್ತೆ ರಗ್ಗುಹೊದ್ದು ಮಲಗದೆ; ಅಯ್ಯಯ್ಯಪ್ಪ ಥಂಡಿ ಎಂದು ನೆಪ ಹೇಳದೆ ಎದ್ದು ಮುಖಪ್ರಕ್ಷಾಲನ ಮಾಡಿ ತನ್ನ ಎಂದಿನ ತೆಳು ಸಡಿಲ ಅಂಗಿ ತೊಟ್ಟು, ಕಾಲುಗಳಿಗೆ ಶೂ ಧರಿಸಿ ಮನೆಯಿಂದ ಹೊರಬಿದ್ದಿದ್ದಾನೆ. ಮೊದಲು ಅಂಗಳ, ಬೀದಿ, ಕೇರಿ ಎನ್ನುತ್ತ ಕೊನೆಗೆ ಬದರಿಯ ಮುಖ್ಯರಸ್ತೆಗಳಲ್ಲಿ ಅವನ ಪಯಣ ಸಾಗಿದೆ. ಅತ್ತ ನಡಿಗೆಯೆನ್ನಲಾಗದ ಇತ್ತ ಓಟ ಎನ್ನಲೂ ಬಾರದ ವಿಚಿತ್ರವಾದೊಂದು ಗತಿಯಲ್ಲಿ ಅವನ ಚಲನೆಯಿದೆ. ಬಾತುಕೋಳಿಯೊಂದು ತನ್ನ ಇಕ್ಕೆಲಗಳನ್ನು ಬಾಗಿಸುತ್ತ ಬಳುಕಿಸುತ್ತ ಪುತುಪುತು ನಡೆದಂತೆ ತನ್ನ ಇಡೀ ಮೈಯನ್ನು ರಬ್ಬರಿನ ಕೋಲಿನಂತೆ ಅತ್ತಿತ್ತ ಬಾಗಿಸುತ್ತ ಅವನು ನಡೆಯುವುದನ್ನು ಬೆಳಗ್ಗೆ ಪೇಪರು, ಹಾಲು ತರಲು ಹೊರಟವರು ಕ್ಷಣಕಾಲ ನಿಂತು ವಿಸ್ಮಯದಿಂದ ನೋಡುತ್ತಾರೆ. ಬದರಿಗೆ ಪ್ರವಾಸಿಗಳಾಗಿ ಬಂದವರು ಇವನ ನೃತ್ಯದಂಥ ನಡಿಗೆಯೋಟ ಕಂಡು ಮುಸಿಮುಸಿ ನಗುತ್ತಾರೆ. ಇನ್ನು ಕೆಲವರು ಇಂಥದೊಂದು ದೃಶ್ಯ ಮತ್ತೆ ಜನ್ಮದಲ್ಲಿ ಸಿಕ್ಕದೇನೋ ಎಂಬಂತೆ ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಆತನನ್ನು ದಾಖಲಿಸಿಕೊಳ್ಳುತ್ತಾರೆ. ಇದ್ಯಾವುದರ ಪರಿವೆಯೂ ಇಲ್ಲದೆ; ದೊಗಳೆ ಬನಿಯನ್ನು ಬೆವರಿಂದ ತೊಯ್ದು ತೊಪ್ಪೆಯಾದ್ದನ್ನೂ ಲೆಕ್ಕಿಸದೆ ಆ ತರುಣ ಓಡಿಯೇ ಓಡಿದ್ದಾನೆ. ಸುತ್ತಲಿನ ಜಗತ್ತು ಅವನ ಪಾಲಿಗೆ ನಗಣ್ಯ. ನಡಿಗೆಯ ದಾರಿ ಬಿಟ್ಟರೆ ಮಿಕ್ಕಿದ್ದೇನೂ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಏಕಾಗ್ರಚಿತ್ತದಿಂದ ಹೋಗುತ್ತಿರುವ ಆ ಯುವಕನ ಕಣ್ಮುಂದೆ ಅತ್ತಿತ್ತ ಕದಲದೆ ನಿಶ್ಚಲವಾಗಿ ನಿಂತುಬಿಟ್ಟಿರುವುದೊಂದೇ – ರಿಯೋ ಒಲಿಂಪಿಕ್ಸ್ನ ಪದಕ! ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 12
ಅಲ್ಲೂರಿ ಸೀತಾರಾಮರಾಜು
– ರಾಮಚಂದ್ರ ಹೆಗಡೆ
ಭಾರತದ ಸ್ವಾತಂತ್ರ್ಯಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ, ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒಡಿಶಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ ೧೯೨೦ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮ ರಾಜು. ಇವರ ತಂದೆ ವೆಂಕಟರಾಮರಾಜು ಮಹಾ ದೇಶಭಕ್ತರಾಗಿದ್ದರಿಂದ ಮಗನಿಗೆ ದೇಶಭಕ್ತಿಯ ಮೊದಲ ಪಾಠ ಅವರಿಂದಲೇ ನಡೆಯಿತು. ಮತ್ತಷ್ಟು ಓದು 
ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1
ನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ. ಮತ್ತಷ್ಟು ಓದು 
ಬ್ರಹ್ಮರ್ಷಿ ನಾರಾಯಣ ಗುರುಗಳ ಮೇಲೇಕೆ ಬೌದ್ಧಿಕ ವಿಧ್ವಂಸಕರ ವಕ್ರದೃಷ್ಟಿ?
– ಸಂತೋಷ್ ತಮ್ಮಯ್ಯ
ಕೆಲವರ್ಷಗಳ ಹಿಂದೆ ಉತ್ತರ ಭಾರತದ ಎಲ್ಲೋ ಬಾಂಬ್ ಸ್ಪೋಟಿಸಿದವರನ್ನು ಹಿಡಿಯಲು ಭಯೋತ್ಪಾದನಾ ನಿಗ್ರಹ ದಳ ಮಂಗಳೂರಿಗೆ ಆಗಮಿಸಿತ್ತು. ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಉಲ್ಲಾಳ ಪ್ರದೇಶದ ಒಂದು ಊರೊಳಗೂ ಅವರು ನುಗ್ಗಿ ಭಯೋತ್ಪಾದಕರನ್ನೂ ಹಿಡಿದಿದ್ದರು. ಆದರೆ ಭಯೋತ್ಪಾದನಾ ನಿಗ್ರಹ ದಳವೆಂಬ ಚಾಲಾಕಿಗಳ ತಂಡವನ್ನು ಸ್ಥಳೀಯರು ಊರಿಂದ ಜಪ್ಪಯ್ಯ ಎಂದರೂ ಹೊರಹೋಗಬಿಡಲಿಲ್ಲ. ಜನರು ಕಾಶ್ಮೀರದಲ್ಲಿ ಕಲ್ಲೆಸೆಯುವವರಂತೆ ಅಧಿಕಾರಿಗಳಿದ್ದ ಕಾರುಗಳತ್ತ ಕಲ್ಲೆಸೆದರು, ಟಯರುಗಳನ್ನು ಸುಟ್ಟು ರಸ್ತೆಗೆಸೆದರು. ಹೀಗೆ ಮಾಡಿದವರೇನೂ ಬಾಂಗ್ಲಾ ವಲಸಿಗರಲ್ಲ. ಲಷ್ಕರ್ ತೊಯಿಬಾದವರಲ್ಲ. ಎಲ್ಲರೂ ಕರಾವಳಿಯ ಬ್ಯಾರಿಗಳೆಂಬ ಸ್ಥಳೀಯ ಮುಸ್ಲಿಮರು. ಶಂಕಿತ ಭಯೋತ್ಪಾದಕನೂ ತಮ್ಮಂತೆ ಒಬ್ಬ ಮುಸಲ್ಮಾನ ಎಂಬ ಒಂದೇ ಒಂದು ಕಾರಣಕ್ಕೆ ಸ್ಥಳೀಯರು ಹಾಗೆ ವರ್ತಿಸಿದ್ದರು. ಆದರೂ ನಮ್ಮಲ್ಲಿ ಭಯೋತ್ಪಾದನೆಗೆ ಧರ್ಮವಿಲ್ಲ! ವಿಚಿತ್ರವೆಂದರೆ ಆಗ ಕರಾವಳಿಯ ರಕ್ಷಕರೆಂಬಂತೆ ವರ್ತಿಸುವ ಮಂಗಳೂರಿನ ಸಮಸ್ತ ಬುದ್ಧಿಜೀವಿಗಳು, ಬಾಂಬುಗಳನ್ನೇ ಅಕ್ಷರಗಳಾಗಿ ಬರೆಯುವವರಾರೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎಂದು ತಲೆಕೆಟ್ಟವರಿಗೆ ಬುದ್ಧಿಹೇಳಲಿಲ್ಲ. ಮತ್ತಷ್ಟು ಓದು 




