ಸೋತು ಗೆದ್ದ ಸ೦ತನ ಕತೆಯಿದು…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್ಬ ವಿಚಿತ್ರ ವ್ಯಕ್ತಿಯೆ೦ಬ೦ತೆ ಭಾವಿಸುತ್ತಿದ್ದರು. ನೋಡುಗನಿಗೆ ಅವರ ನಡುವಳಿಕೆ ಹುಚ್ಚುತನದ೦ತೆ ಕ೦ಡುಬ೦ದರೂ ಆತನ ವರ್ತನೆಯಲ್ಲೊ೦ದು ಸೌ೦ದರ್ಯವೂ ತು೦ಬಿರುತ್ತಿತ್ತು.ಪೆದ್ದತನದಿ೦ದ ಕೂಡಿದ೦ತೆನಿಸುವ ಅವರ ನಡೆನುಡಿಗಳಲ್ಲೊ೦ದು ಆಳವಾದ ಜೀವನಸತ್ಯವಡಗಿದೆ ಎ೦ಬುದನ್ನು ಕೆಲವರಾದರೂ ಕ೦ಡುಕೊ೦ಡಿದ್ದರು.ಅ೦ದಿಗೆ ಭಾರತದ ರಾಜಧಾನಿಯಾಗಿದ್ದ,ಮಹಾ ಬುದ್ದಿವ೦ತರ ನಾಡೆ೦ದೇ ಪ್ರಸಿದ್ಧವಾಗಿರುವ ಕಲ್ಕತ್ತೆಯ ಹೂಗ್ಲಿ ನದಿಯ ತೀರದಲ್ಲಿ ತಮ್ಮ ಬೆರಳೆಣಿಕೆಯಷ್ಟು ಶಿಷ್ಯರೊ೦ದಿಗೆ ಪರಮಹ೦ಸರು ವಾಸವಾಗಿದ್ದರು.ತಮ್ಮದೇ ಲೋಕದಲ್ಲಿ ,ಹಾಡುತ್ತ ಕುಣಿಯುತ್ತ ಕಾಲ ಕಳೆಯುತ್ತಿದ್ದ ಪರಮಹ೦ಸರು ಅದ್ಯಾವ ಪರಿ ದೈವ ಸ್ಮರಣೆಯಲ್ಲಿ ಮುಳುಗಿರುತ್ತಿದ್ದರೆ೦ದರೇ ತಮ್ಮ ವಿಲಕ್ಷಣವೆನಿಸುವ ಆದರೆ ಆಯಸ್ಕಾ೦ತೀಯ ವರ್ತನೆಯಿ೦ದ ದಿನದಿ೦ದ ದಿನಕ್ಕೆ ತಮ್ಮ ಅನುಯಾಯಿಗಳು ಹೆಚ್ಚುತ್ತಿರುವುದರ ಪರಿವೆಯೂ ಅವರಿಗಿರಲಿಲ್ಲ.
ಹೀಗೊಬ್ಬ ವಿಕ್ಷಿಪ್ತ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆ ಮತ್ತು ಆತ ದೇವರ ಇರುವಿಕೆಯನ್ನು ಕಲ್ಕತ್ತೆಯಲ್ಲಿಯೇ ಸಾರುತ್ತಿದ್ದಾನೆ ಎ೦ಬುದನ್ನು ಮೊದಲು ಗಮನಿಸಿದವರು ಪಶ್ಚಿಮ ಬ೦ಗಾಳದ ಮಹಾನ್ ಚಿ೦ತಕರಲ್ಲಿ ಒಬ್ಬರಾದ ಕೇಶವ ಚ೦ದ್ರ ಸೇನರು.ಬ್ರಹ್ಮೋಸಮಾಜದ ಸದಸ್ಯರಾಗಿದ್ದ ಕೇಶವ ಚ೦ದ್ರರು ಮೂರ್ತಿ ಪೂಜೆಯ ಕಟ್ಟಾವಿರೋಧಿಗಳು. ಪರಮ ನಾಸ್ತಿಕರು ಮತ್ತು ಚತುರ ವಾಗ್ಮಿ. ಕಾಳಿದೇವಿಯ ವಿಗ್ರಹಾರಾಧಕನೊಬ್ಬ ತಮ್ಮ ಊರಿನಲ್ಲಿಯೇ ದೇವರ ಮಹಿಮೆಯನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾನೆ,ಅ೦ಥವನಿಗೆ ಕೆಲವು ಕಾಲೇಜಿನ ಅಧ್ಯಾಪಕರು ಶಿಷ್ಯರಾಗಿದ್ದಾರೆನ್ನುವ ವಿಷಯವನ್ನು ಕೇಳಿದಾಗ ಕೇಶವ ಸೇನರಿಗೆ ನಖಶಿಖಾ೦ತ ಕೋಪ.
ಹೀಗೊ೦ದು ’ಆತ್ಮ’ಕಥನ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ ನ೦ತರ ಏನಾಗುತ್ತದೆ?ದೇಹ ನಶಿಸಿದ ನ೦ತರವೂ ಆತ್ಮವೆನ್ನುವುದು ಉಳಿಯಲಿದೆಯೇ? ಅಸಲಿಗೆ ಆತ್ಮವೆ೦ದರೆ ಏನು? ಇ೦ಥಹ ಹತ್ತಾರು ಪ್ರಶ್ನೆಗಳ ಉತ್ತರಕ್ಕಾಗಿ ಸಾವಿರಾರು ವರ್ಷಗಳಿ೦ದಲೂ ಮನುಷ್ಯ ಹುಡುಕಾಡುತ್ತಿದ್ದಾನೆ. ತನಗೆ ತಿಳಿದ೦ತೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮ,ಪ್ರೇತಾತ್ಮ,ಪವಿತ್ರಾತ್ಮ,ಪರಮಾತ್ಮ ಎ೦ದೆಲ್ಲ ವಿ೦ಗಡಿಸಿದ್ದಾನೆ.ಅವನಿಗೆ ಪ್ರೇತಾತ್ಮವೆ೦ದರೆ ಭಯ,ಪರಮಾತ್ಮನೆ೦ದರೆ ಭಕ್ತಿ.ಹೀಗೆ ಭಯಭಕ್ತಿಗಳಿದ್ದರೂ ಆತ್ಮದ ಅಸ್ತಿತ್ವದ ಬಗ್ಗೆ ಖಚಿತವಾಗಿ ಹೇಳಲಾರ.ತಿಳಿದುಕೊಳ್ಳುವ ಪ್ರಯತ್ನವನ್ನ೦ತೂ ಕೈಬಿಡಲಾರ.ಆತ್ಮಜ್ಞಾನಕ್ಕಾಗಿ ಪುರಾಣಗಳನ್ನು ತಡಕಾಡುತ್ತಾನೆ.ವಾಜಶ್ರವನ ಪುತ್ರ ನಚಿಕೇತನ೦ತೆ ಕಾಲಜ್ಞಾನಿಯಾಗ ಬಯಸುತ್ತಾನೆ. ಸಾಧ್ಯವಾಗದಿದ್ದಾಗ ಉತ್ತರಕ್ಕಾಗಿ ವಿಜ್ಞಾನದ ಮೊರೆ ಹೋಗುತ್ತಾನೆ.ಇಷ್ಟಾಗಿಯೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತಾ? ಗೊತ್ತಿಲ್ಲ.ಆದರೆ ಆತ್ಮಜ್ಞಾನದ ಅರ್ಥೈಸುವಿಕೆಯ ಹಾದಿಯಲ್ಲಿ ವಿಜ್ಞಾನ ಮತ್ತು ಧಾರ್ಮಿಕತೆಯ ಕವಲುಗಳು ಸಾಗಿರಬಹುದಾದ ದೂರದ ಸಣ್ಣದೊ೦ದು ಪರಾಮರ್ಶೆಯ ಉದ್ಧಟತನ್ನು ತೋರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ.
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೨
– ರಾಕೇಶ್ ಶೆಟ್ಟಿ
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು? – ಭಾಗ ೧
ಇಂಗ್ಲೀಷ್ ಶಿಕ್ಷಣ ಮಾಧ್ಯಮದಲ್ಲಿ ಓದುವ ನಮ್ಮ ಹಳ್ಳಗಾಡಿನ,ಚಿಕ್ಕ-ಪುಟ್ಟ ಪಟ್ಟಣದ,ಸರ್ಕಾರಿ ಶಾಲೆಯವರು ಅನುಭವಿಸುವ ಕೀಳರಿಮೆ,ಅವಮಾನಗಳೆಂತದ್ದು ಎನ್ನುವುದು,ಕನ್ನಡ ಮಾಧ್ಯಮದಲ್ಲಿ ೧೦ನೇ ತರಗತಿಯವರೆಗೆ ಓದಿಕೊಂಡು ನಂತರ ವಿಜ್ಞಾನ ವಿಷಯದ ಮೇಲೆ ಪಿಯುಸಿ ಓದಿ,ಇಂಜೀನಿಯರಿಂಗ್ ಮಾಡಿದ ನನ್ನಂತವರಿಗೆ ತಿಳಿದಿದೆ.ಮೊದಲನೇ ವರ್ಷದ ಪಿಯುಸಿ ತರಗತಿಯಲ್ಲಿ ಇಂಗ್ಲೀಷಿನಲ್ಲೇ ಪಾಠ ನಡೆಯುವಾಗ ಕನ್ನಡ ಮಾಧ್ಯಮದಿಂದ ಬಂದ,ನನ್ನನ್ನೂ ಸೇರಿದಂತೆ ಉಳಿದ ೭-೮ ಹುಡುಗರಿಗೆ ಏನು ಅರ್ಥವಾಗದೇ, ಆ ಕೀಳರಿಮೆಯಿಂದ ಕ್ಲಾಸಿನಲ್ಲಿ ಕೂರಲಿಕ್ಕೂ ಆಗದೇ,ಇಂತ ಪಾಠಕ್ಕಿಂತ ಕ್ರಿಕೆಟ್ಟೇ ಮೇಲೂ ಎನಿಸಿ.ಕ್ಲಾಸ್ ಬಿಟ್ಟು ಕ್ರಿಕೆಟ್ ಆಡಲು ಹೋಗುತಿದ್ದೆವು.ಕಡೆಗೆ ನಮ್ಮಲ್ಲಿ ೩-೪ ಜನ ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಅವರ ಶಿಕ್ಷಣಕ್ಕೇ ಎಳ್ಳು ನೀರು ಬಿಟ್ಟರು.ಅಲ್ಲಿಗೆ ಇಂಗ್ಲೀಷ್ ಅರಗಿಸಿಕೊಳ್ಳಲಾಗದೇ ಅವರ ಉನ್ನತ ವಿದ್ಯಾಭ್ಯಾಸ ಮರಿಚೀಕೆಯಾಯಿತು. ಹಾಗಂತ ಆ ವಿದ್ಯಾರ್ಥಿಗಳೇನು ಓದಿನಲ್ಲಿ ಹಿಂದೆ ಬಿದ್ದವರಲ್ಲ.ಇಂಗ್ಲೀಷ್ ನಮಗಲ್ಲ ಎನ್ನುವ ಕೀಳರಿಮೆಯಿಂದ ಅವರು ಪಿಯುಸಿಯಲ್ಲಿ ಹಿಂದೆ ಬಿದ್ದರು.ಕಡೆಗೆ ಉನ್ನತ ಶಿಕ್ಷಣವನ್ನೂ ಬಿಟ್ಟರು.
ಮಾಲಾವಿ ದೇಶದ ಉದಾಹರಣೆಗೆ ತದ್ವಿರುದ್ಧ ಉದಾಹರಣೆಯಾಗಿ,ಇಸ್ರೇಲ್ ದೇಶವನ್ನು ತೆಗೆದುಕೊಳ್ಳಬಹುದು.ರಾಜಕೀಯ ವಿಪ್ಲವ ಮತ್ತಿತ್ತರ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಹರಿದು ಅಂಚಿಹೋಗಿ,ವಿವಿಧ ದೇಶಗಳಲ್ಲಿ ನೆಲೆಸಿ ಕಡೆಗೆ ೨೦ನೇ ಶತಮಾನದಲ್ಲಿ ಒಂದುಗೂಡಿ ಇಸ್ರೇಲ್ ದೇಶ ರಚಿಸಿಕೊಂಡ,ಯಹೂದಿಯರು ತಮ್ಮ ದೇಶವನ್ನು ಕಟಿಕೊಳ್ಳುವುದರ ಜೊತೆಗೆ ನಶಿಸುವ ಹಂತ ತಲುಪಿದ್ದ ಹಿಬ್ರೂ ಭಾಷೆಯನ್ನೇ ಶಿಕ್ಷಣ ಸೇರಿದಂತೆ ತಮ್ಮೆಲ್ಲಾ ರಂಗಗಳಲ್ಲೂ ಬಳಸಿಕೊಂಡರು.ಇವತ್ತು ಇಸ್ರೇಲ್ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿದೆ. ಇಸ್ರೇಲಿನ “ಟೆಕ್ನಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ” ವಿಶ್ವದ ಉತ್ತಮ ವಿದ್ಯಾಲಯಗಳಲ್ಲಿ ಒಂದು.ಅಲ್ಲಿ ಚಳಿಗಾಲದ ಮತ್ತು ಬೇಸಿಗೆ ಕಾಲದ ತರಗತಿಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ೫ ವಾರಗಳ ಕಡ್ಡಾಯ ಹಿಬ್ರೂ ಭಾಷಾ ಕಲಿಕೆಯಾಗಬೇಕು.ಅದು ಮುಗಿದ ನಂತರವೇ ಮುಖ್ಯ ಪಠ್ಯಗಳು ಶುರುವಾಗುವುದು. ಮತ್ತಷ್ಟು ಓದು 
ಭಾರತೀಯ ಶಿಕ್ಷಣ ವ್ಯವಸ್ಥೆಯ ಮುಂದಿನ ಹಾದಿಯೇನು?
– ರಾಕೇಶ್ ಶೆಟ್ಟಿ
ಅಂಡಮಾನ್ ದ್ವೀಪದ,’ಬೋ’ ಎಂಬ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಹೆಸರು ಬೋ ಎಸ್ಸರ್.ಈಕೆ ‘ಬೋ’ ಭಾಷೆ ಮಾತನಾಡಬಲ್ಲ ಬುಡಕಟ್ಟು ಜನಾಂಗದ ಕೊನೆಯ ಕೊಂಡಿಯಾಗಿದ್ದರು.೨೦೧೦ರಲ್ಲಿ,ತನ್ನ ೮೫ನೇ ವಯಸ್ಸಿನಲ್ಲಿ ಬೋ ಎಸ್ಸರ್ ಮರಣಹೊಂದುವುದರೊಂದಿಗೆ “ಬೋ” ಎಂಬ ಬುಡಕಟ್ಟು ಭಾಷೆಯೂ ಮಣ್ಣಾಯಿತು.ಭಾರತದಂತಹ ಸಾವಿರಾರು ಭಾಷೆಗಳಿರುವ ನೆಲದಲ್ಲಿ ಇಂತ ಅದಿನ್ನೆಷ್ಟು ಭಾಷೆಗಳು ಹೀಗೆ ಮಣ್ಣಾಗಿವೆಯೋ ಗೊತ್ತಿಲ್ಲ.ಒಂದು ಭಾಷೆ ಮಣ್ಣಾಗುವುದೊರೊಂದಿಗೆ ಆ ಭಾಷೆಯ ಜೊತೆಗೆ ಬೆಸೆದುಕೊಂಡ ಸಂಸ್ಕೃತಿ,ಆಚರಣೆಗಳು,ನೋವು,ನಲಿವುಗಳೂ ಮಣ್ಣಾಗುತ್ತವೆ.
ಭಾರತದಂತ ಅಗಾಧ ವೈವಿಧ್ಯಮಯ ದೇಶದಲ್ಲಿ ಭಾಷೆಯ ಕುರಿತ ಚರ್ಚೆಗಳಲ್ಲಿ ಎದ್ದು ಕಾಣುವುದು,ಈ ದೇಶಕ್ಕೊಂದು ರಾಷ್ಟ್ರ ಭಾಷೆಯ ಅಗತ್ಯವಿದೆಯೇ ಅಥವಾ ಲಿಂಕಿಂಗ್ (ಸಂವಹನ) ಭಾಷೆಯ ಅಗತ್ಯವಿದೆಯೇ ಎನ್ನುವುದು.ಇದರ ಜೊತೆಗೆ ಶಿಕ್ಷಣದ ಮಾಧ್ಯಮ ಯಾವುದಿರಬೇಕು ಎನ್ನುವ ವಿಷಯ ಬಂದಾಗ,ಚರ್ಚೆಯನ್ನು ಎರಡು ಹಾದಿಯಲ್ಲಿ ತಂದು ನಿಲ್ಲಿಸಬಹುದು.
ಪರಿಸರದ ಭಾಷೆಯಲ್ಲಿ ಶಿಕ್ಷಣ ನೀಡುವುದು ಒಂದು ಹಾದಿಯಾದರೇ,ಇನ್ನೊಂದು ಹಾದಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮತ್ತು ಅದರ ಲಾಭ.
ಸಂವಹನ ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ಮತ್ತಷ್ಟು ಓದು 
ಎಲ್ಲ ರೋಗಗಳನ್ನು ಗುಣಪಡಿಸುವ ಯೋಗಕ್ಕೆ ಧರ್ಮಾ೦ಧತೆಯ ರೋಗವನ್ನು ಗುಣಪಡಿಸುವ ಶಕ್ತಿಯಿದೆಯೇ?
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಇಸ್ಲಾ೦ ತತ್ವಗಳ ಕುರಿತಾದ ನನ್ನ ಗ್ರಹಿಕೆ ಅತ್ಯ೦ತ ನಿಖರ ಮತ್ತು ಸ್ಪಷ್ಟ.ಯೋಗವೆನ್ನುವುದು ಮುಸ್ಲಿಮರಿಗೆ ನಿಷೇಧವೆ೦ದು ಖುರಾನಿನ ಯಾವುದೇ ಅಧ್ಯಾಯದಲ್ಲಿಯೂ ಹೇಳಿಲ್ಲವೆನ್ನುವುದನ್ನು ನಾನು ವಿಶ್ವಾಸದಿ೦ದ ನುಡಿಯಬಲ್ಲೆ.ಬದಲಿಗೆ ಯೋಗದಿ೦ದ ಅಲ್ಲಾಹನನ್ನು ಇನ್ನಷ್ಟು ಭಾವುಕವಾಗಿ ಪೂಜಿಸಬಹುದು ಎನ್ನುವುದು ನನ್ನ ನ೦ಬಿಕೆ. ತನ್ನ ದೈನ೦ದಿನ ಜೀವನದಲ್ಲಿ ಯೋಗಾಭ್ಯಾಸದ ಅಳವಡಿಕೆಯಿ೦ದ ಮುಸಲ್ಮಾನನೊಬ್ಬ ಇನ್ನಷ್ಟು ದೇವರಿಗೆ ಪ್ರಿಯನಾಗಬಲ್ಲ ಎನ್ನುವುದನ್ನು ನಾನು ಅನುಮೋದಿಸುತ್ತೇನೆ.ಬಾಲ್ಯದಿ೦ದಲೂ ಯೋಗವನ್ನು ಅಭ್ಯಸಿಸುತ್ತ ಬ೦ದವನು ನಾನು.ಹಾಗಾಗಿ ಇಸ್ಲಾ೦ ಮತ್ತು ಯೋಗದ ನಡುವಣ ಪಾರಮಾರ್ಥಿಕ ಸ೦ಬ೦ಧವನ್ನು ನಾನು ಅನುಭವದಿ೦ದ ಬಲ್ಲೆ.ಅನೇಕ ಮುಸ್ಲಿ೦ ಧರ್ಮಗುರುಗಳು ಯೋಗಾಭ್ಯಾಸ ನಡೆಸುವ ಮುಸಲ್ಮಾನರ ವಿರುದ್ಧ ಫತ್ವಾಗಳನ್ನು ಹೊರಡಿಸಿದ್ದಾರೆ೦ಬುದನ್ನು ನಾನು ಕೇಳಿದ್ದೇನೆ.ಖುರಾನ್ ಶ್ಲೋಕಗಳ ಅವರ ತಪ್ಪುಗ್ರಹಿಕೆಯೆ ಇ೦ಥಹ ಪ್ರಮಾದಕ್ಕೆ ಕಾರಣ.ಸರಿಯಾಗಿ ಪರಾಮರ್ಶಿಸಿದರೆ ಯೋಗವೆನ್ನುವುದು ಇಸ್ಲಾಮಿನ ಒ೦ದು ಭಾಗವೇ ಆಗಿರುವುದು ತಿಳಿಯುತ್ತದೆ.ಯೋಗ ಮತ್ತು ಇಸ್ಲಾ೦ಗಳ ನಡುವಣ ಸ೦ಬ೦ಧವೆನ್ನುವುದು ಪರಸ್ಪರಾವಲ೦ಬಿ ಪಾರಮಾರ್ಥಿಕ ಒಡಬ೦ಡಿಕೆಯ೦ಥದ್ದು.ಯೋಗ ಮತ್ತು ಇಸ್ಲಾಮ್ ತತ್ವಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ.ದೇಹವೆನ್ನುವುದು ಮೋಕ್ಷ ಸಾಧನೆ ಮತ್ತು ಧಾರ್ಮಿಕ ಅನುಭಾವಗಳ ಗ್ರಹಿಕೆಗೆ ಬಹುಮುಖ್ಯ ಅ೦ಗವೆನ್ನುವುದನ್ನು ಯೋಗದ೦ತೆ,ಇಸ್ಲಾ೦ ಸಹ ಒಪ್ಪಿಕೊಳ್ಳುತ್ತದೆ.ಮೋಕ್ಷ ಸಾಧನೆ ಅಥವಾ ಬ್ರಹ್ಮತ್ವವೇ ಯೋಗಸಾಧನೆಯ ಮುಖ್ಯ ಉದ್ದೇಶವಾಗಿದ್ದರೆ, ಸೂಫಿ ಜೀವನಶೈಲಿಯಾಗಿರುವ ’ತಾರೀಕ್-ಎ-ನಕ್ಷಬ೦ದಿ’ಯ ಮೂಲೋದ್ದೇಶ ಅಲ್ಲಾಹನಲ್ಲಿ ಮುಸಲ್ಮಾನನ ವಿಲೀನಿಕರಣ. ಸೂಫಿ ಪ೦ಥದ ಕೆಲವು ಆಚರಣೆಗಳು ಅಕ್ಷರಶ; ಯೋಗದ ಅನುಕರಣೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಖ್ಯಾತ ಮುಸ್ಲಿ೦ ಲೇಖಕ ಅಶ್ರಫ್ ನಿಝಾಮಿ ತಮ್ಮ ’ನಮಾಝ್’ ಎನ್ನುವ ಕೃತಿಯಲ್ಲಿ ಯೋಗವೆನ್ನುವುದು ಇಸ್ಲಾಮಿನ ಅವಿಭಾಜ್ಯ ಅ೦ಗವೆ೦ದು ಸ್ಪಷ್ಟವಾಗಿ ದಾಖಲಿಸಿದ್ದಾರೆ.ಈಜಿಪ್ಟಿನ ಅಬ್ದುಲ್ ಬಾಸಿತ್ ಯಾರಿಗೆ ತಾನೇ ಗೊತ್ತಿಲ್ಲ? ಜಗತ್ತಿನ ಶ್ರೇಷ್ಠ ಖುರಾನ್ ವಾಚಕನೆ೦ದು ಪರಿಗಣಿಸಲ್ಪಡುವ ಬಾಸಿತ್,ಹತ್ತಾರು ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ಖುರಾನಿನ ಅಧ್ಯಾಯಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕ೦ಡು ಅನೇಕ ವಿಜ್ನಾನಿಗಳೇ ಬೆರಗಾಗುತ್ತಾರೆ.ವಿಚಿತ್ರವೆ೦ದರೆ ಉಸಿರಿನ ಮೇಲೆ ಇ೦ಥದ್ದೊ೦ದು ಪಾರಮ್ಯವನ್ನು ಸಾಧಿಸಲು ಅಬ್ದುಲ್ ಬಾಸಿತ್,ಪ್ರಾಣಾಯಾಮದ ಅಭ್ಯಾಸ ನಡೆಸುತ್ತಾರೆನ್ನುವುದು ಅನೇಕರಿಗೆ ತಿಳಿದಿಲ್ಲ.ಹಾಗಾಗಿ ಇಸ್ಲಾಮಿನಲ್ಲಿ ಯೋಗಾಭ್ಯಾಸವೆನ್ನುವುದು ಅನೈತಿಕವೆನ್ನುವುದು ಅರ್ಥಹೀನ ವಾದ.”
ಮತ್ತಷ್ಟು ಓದು 
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
ದರ್ಶನಗಳಲ್ಲಿ ತರ್ಕ:
“ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.” ಎಂಬ ಈ ಸೆಮೆಟಿಕ್ ರಿಲಿಜನ್ನಿನ ವಾಕ್ಯವನ್ನು ಭಾರತೀಯ ದಾರ್ಶನಿಕನೊಬ್ಬನಿಗೆ ಹೇಳಿ ನೋಡಿ. ಆಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ? “ಛೇ! ಕೋಪ, ಆಸೆಗಳನ್ನು ಇಟ್ಟುಕೊಂಡವನು ಭಗವಂತ ಹೇಗಾದಾನು?” ಎಂದೇ ಪ್ರತಿಕ್ರಿಯೆ ನೀಡುತ್ತಾನಲ್ಲವೇ? ಕಾರಣ ನಮ್ಮ ಭಾರತೀಯ ದರ್ಶನಗಳ ತಳಹದಿಯೇ ಬೇರೆ. ದರ್ಶನಗಳಲ್ಲಿಯೂ ತರ್ಕಕ್ಕೆ ರಿಲಿಜನ್ನುಗಳಂತೆ ಪ್ರಥಮ ಪ್ರಾಶಸ್ತ್ಯವಿಲ್ಲ. ತರ್ಕದಿಂದ ಭಗವತ್ಪ್ರಾಪ್ತಿಯೂ ಇಲ್ಲ, ಮೋಕ್ಷವೂ ಇಲ್ಲ. ಆದರೆ “ಈ ಸಿದ್ಧಾಂತವೇ ಸತ್ಯ” ಎಂದು ಎದ್ದು ನಿಂತು ಒಬ್ಬ ಹೇಳಬೇಕಾದರೆ, ಆತ ಆ ತನ್ನ ಸಿದ್ಧಾಂತವನ್ನು ತರ್ಕಾಗ್ನಿಪರೀಕ್ಷೆಗೆ ದೂಡಿ ಪವಿತ್ರವಾಗಿ ಹೊರತರಬೇಕು. ರಿಲಿಜನ್ನುಗಳಂತೆ ಪುಸ್ತಕವೇ ಪರಮ ಸತ್ಯವಲ್ಲ ಈ ದರ್ಶನಗಳಲ್ಲಿ. ಅನುಭವವೇ ಪ್ರಧಾನ. “ವೇದಗಳು ಅಗ್ನಿ ತಣ್ಣಗಿದೆ ಎಂದು ಸಾವಿರ ಸಾರಿ ಹೇಳಿದರೂ ಅನುಭವವನ್ನೇ ಅನುಸರಿಸಬೇಕು” ಎಂದು ಶಂಕರರು ಹೇಳಿದ್ದಾರೆ. ಉಪನಿಷತ್ತುಗಳೂ ಕೂಡ “ಇಲ್ಲಿ ವೇದಗಳು ವೇದಗಳಾಗಿರುವದಿಲ್ಲ” ಎಂದು ಸಾರುತ್ತವೆ. ಅಂದರೆ ವೇದಕ್ಕಿಂತಲೂ ಅನುಭವಕ್ಕೇ ಪ್ರಥಮ ಪ್ರಾಶಸ್ತ್ಯ. ಸಹಸ್ರಾರು ಅನುಭವಿಗಳ ಅನುಭವದೊಂದಿಗೆ ತಾಳೆಯಾಗುವದರಿಂದಲೇ ವೇದ ಉಪನಿಷತ್ತು, ಗೀತೆಗಳಿಗೆ ನಮ್ಮಲ್ಲಿ ಹೆಚ್ಚು ಗೌರವ.
ಅನೇಕ ದರ್ಶನಗಳು ಅನೇಕ ತರ್ಕಗಳನ್ನನುಸರಿಸಿವೆ. ವೇದವನ್ನೊಪ್ಪದ ಬೌದ್ಧ ಮತ್ತು ಚಾರ್ವಾಕ ದರ್ಶನಗಳು ತಮ್ಮದೇ ತರ್ಕ ವ್ಯವಸ್ಥೆಯನ್ನು ಹಾಕಿಕೊಂಡಿವೆ. ವೇದಗಳನ್ನೊಪ್ಪುವ ಸಾಂಖ್ಯ, ಪೂರ್ವಮೀಮಾಂಸ ಮತ್ತು ವೇದಾಂತ ಮತಗಳೂ ಕೂಡ ವೇದ/ಉಪನಿಷತ್ತುಗಳಲ್ಲಿ ಬರುವ ತರ್ಕವನ್ನು ಆಧಾರವಾಗಿಟ್ಟುಕೊಂಡಿವೆ. ಇಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ದೇಶಾದ್ಯಂತ ಅನೇಕ ವಿದ್ವಜ್ಜನರು ಒಪ್ಪಿರುವ ಅದ್ವೈತ ವೇದಾಂತ ದರ್ಶನವನ್ನು ತೆಗೆದುಕೊಳ್ಳೋಣ. ಮುಖ್ಯವಾಗಿ ವೇದಾಂತಗಳಲ್ಲಿ ಕಾಣುವ ತರ್ಕ ಅತ್ಯಂತ ಜಟಿಲ. ಕಾರಣ ಉಪನಿಷತ್ತುಗಳು ಅನುಸರಿಸುವ ತರ್ಕ ರೋಮಾಂಚನಗೊಳಿಸುವಂಥದ್ದು. ಏಕೆಂದರೆ ಅದು ಮನುಷ್ಯನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುತ್ತದೆ. “ಆತ್ಮದ ವಿಷಯದಲ್ಲಿ, ಇದೆ ಎಂದು ಕೆಲವರು ಇಲ್ಲ ಎಂದು ಕೆಲವರು” ಎಂಬುದರೊಂದಿಗೆ ಆರಂಭವಾಗುವ ಕಠೋಪನಿಷತ್ತು, “ಆತ್ಮನು ಇದ್ದಾನೆ” ಎಂಬುದನ್ನು ತಾರ್ಕಿಕವಾಗಿ ಸಾಧಿಸಿ ಮುಕ್ತಾಯಗೊಳ್ಳುತ್ತದೆ. ಹಾಗೆಯೇ, ಶಂಕರರು “ಮನುಷ್ಯನಿಗೆ ಇಷ್ಟವಾದದ್ದನ್ನು ಪಡೆದುಕೊಳ್ಳುವದು ಮತ್ತು ಅನಿಷ್ಟವಾದದ್ದನ್ನು ಕಳೆದುಕೊಳ್ಳುವದು ಸ್ವಾಭಾವಿಕವಾಗಿದೆ. ಈ ಇಷ್ಟಪ್ರಾಪ್ತಿ-ಅನಿಷ್ಟಪರಿಹಾರವೆಂಬುದು ಜೀವಿಗಳ ಸ್ವಭಾವವು. ಉಪನಿಷತ್ತುಗಳ ಉದ್ದೇಶವೇ ಈ ಸ್ವಭಾವದ ಕಾರಣವನ್ನು ಅರಿಯುವದು” ಎಂದು ಹೇಳಿದ್ದಾರೆ. ಹೀಗೆ ಮನುಷ್ಯನ ಮೂಲ ನಂಬಿಕೆಯನ್ನೇ ತರ್ಕಕ್ಕೆ ಒಡ್ಡುವಲ್ಲಿ ಉಪನಿಷತ್ತುಗಳು ತೋರಿದ ಧೈರ್ಯ ಯಾವ ರಿಲಿಜನ್ನುಗಳಲ್ಲೂ ಕಂಡು ಬಂದಿಲ್ಲ.
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.
ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.
ಗೀತೆಯನ್ನು ಅರ್ಥೈಸಿಕೊಳ್ಳಲಾಗದವರು ಬದುಕಿನ ವಾಸ್ತವಗಳನ್ನು ಅರಗಿಸಿಕೊಳ್ಳಲಾರರು
– ಮಯೂರ ಲಕ್ಷ್ಮಿ
“ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು… ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” – ಆಲ್ಬರ್ಟ್ ಐನ್ ಸ್ಟೀನ್
ಭಗವದ್ಗೀತೆಯನ್ನು ಉದಾತ್ತ ಮನಸ್ಸುಗಳಿಂದ ವಿಶಾಲ ಹೃದಯಗಳಿಂದ ಅರ್ಥಮಾಡಿಕೊಳ್ಳುವವರಿಗೆ ಅದು ಸಕ್ಕರೆಯಂತೆ ಸಿಹಿ, ಅತ್ಯಂತ ಸರಳವಾದ ರೀತಿಯಲ್ಲಿ ಮನುಷ್ಯನು ಈ ಭೂಮಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸುವ ಸುಲಭ ಸಾಧನ, ಸಂಕುಚಿತ ಮನಸ್ಸುಗಳಿಂದ ಅದರ ವ್ಯಾಪ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ತಪ್ಪುಗಳನ್ನೇ ಹುಡುಕಿ ನೋಡುವವರಿಗೆ ಅದು ಅರ್ಥವಾಗದ ಕ್ಲಿಷ್ಟ ಗ್ರಂಥವೇ ಸರಿ! ಇನ್ನು ಗೀತೆ ಎಂದರೆ ಕೋಮುವಾದಿ ಗ್ರಂಥ ಶ್ರೀಕೃಷ್ಣನೆಂದರೆ ಸ್ತ್ರೀಲೋಲ ಎಂಬ ಭಾವನೆಯಿಂದಲೇ ನೋಡುವವರಿಗೆ ಇದು ಅರ್ಥವಾದೀತಾದರೂ ಹೇಗೆ? ಕೃಷ್ಣನ ರಾಜನೀತಿಯ ನೈಪುಣ್ಯತೆಯನ್ನು ಮುತ್ಸದ್ದಿತನವನ್ನೂ ಅವನ ಸಮಾಜ ಪರಿವರ್ತನೆಯ ಮತ್ತು ಧರ್ಮರಕ್ಷಣೆಯ ಸಂಕಲ್ಪವನ್ನು ಒಪ್ಪದವರು ಅವನ ವಾಣಿಯಾದ ಗೀತೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲಾ. ಹಿಂದೂ ಧರ್ಮಗ್ರಂಥಗಳನ್ನು ಟೀಕಿಸಿ ಬುದ್ಧಿವಂತರೆನಿಸಿಕೊಳ್ಳುವುದು ಕೆಲವರ ಹವ್ಯಾಸ.
ಪ್ರಪಂಚದ ಎಲ್ಲಾ ಮಹನೀಯರೂ ದಾರ್ಶನಿಕರೂ ಗೀತೆಯನ್ನು ಕೋಮುವಾದವನ್ನು ಪ್ರಚೋದಿಸುವ ಗ್ರಂಥವೆಂದೇ ನೋಡಿದ್ದಲ್ಲಿ ಭಗವದ್ಗೀತೆ ವಿಶ್ವವ್ಯಾಪಿ ಎನಿಸಿಕೊಳ್ಳುತ್ತಿತ್ತೇ? ಸಾಹಿತ್ಯವೆಂದರೆ ಜ್ಞಾನದ ಸಾಧನಗಳು,ಜಾಗೃತಿಯ ಚೇತನಗಳು.. ಇಂತಹ ಪುಸ್ತಕಗಳನ್ನೋದಿ ವಿವೇಕಿಗಳಾಗಲೂ ಬಹುದು, ವಿಮರ್ಶಕರಾಗಲೂಬಹುದು.ಪುಸ್ತಕಗಳ ವಿಮರ್ಶೆ ಓದುಗರಿಗೆ ಬಿಟ್ಟದ್ದು, ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಇದೆ ಎನ್ನವುದು ನಿಜವಾದರೂ ಅಭಿವ್ಯಕ್ತಿಯ ಹೆಸರಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ ಪುಸ್ತಕಗಳನ್ನು ಸುಡುವುದು ಪರಿಹಾರವೆಂದು ವಾದಿಸುವುದು ಭ್ರಮೆಯಲ್ಲದೇ ಇನ್ನೇನು? ಪ್ರತಿಯೊಂದನ್ನೂ ತಾರ್ಕಿಕ ಮಟ್ಟದಲ್ಲೇ ವಿಮರ್ಶಿಸುತ್ತಾ ಹೋದರೆ ಹೊಸ ಹೊಸ ರೀತಿಯ ‘ಇಸಂ’ಗಳ ಸೃಷ್ಟಿಯಾಗುತ್ತಾ ಹೋಗುವುದೇ ಹೊರತು ಬೌದ್ಧಿಕ ಪರಾಮರ್ಶೆಯಾಗದು.
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
– ವಿನಾಯಕ ಹಂಪಿಹೊಳಿ
ತರ್ಕ ಮನುಷ್ಯನಿಗಿರುವ ಒಂದು ಅತ್ಯುತ್ತಮ ಸಾಧನ. ಇದನ್ನು ಆಧರಿಸಿ ಮಾನವ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ವಿಜ್ಞಾನವಂತೂ ತರ್ಕದ ಆಧಾರದ ಮೇಲೆಯೇ ಬೆಳೆದಿರುವಂಥದ್ದು. ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕಕ್ಕೆ ವಿಜ್ಞಾನದಂತೆ ಮೊದಲನೇ ಪ್ರಾಶಸ್ತ್ಯವಿಲ್ಲವಾದರೂ, ತರ್ಕವನ್ನು ಸಂಪೂರ್ಣವಾಗಿ ಬಿಟ್ಟು ನಿಂತಿಲ್ಲ. ಪಾಶ್ಚಿಮಾತ್ಯ ರಿಲಿಜನ್ನುಗಳಿಗೂ ಭಾರತೀಯ ದರ್ಶನಗಳಿಗೂ ಇರುವ ಮುಖ್ಯ ವ್ಯತ್ಯಾಸ ಈಗಾಗಲೇ ನಿಲುಮೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹೀಗಾಗಿ ಅವುಗಳ ವ್ಯತ್ಯಾಸದ ಕಡೆಗೆ ಹೆಚ್ಚು ಗಮನ ಕೊಡದೇ ಇವೆರಡರಲ್ಲೂ ತರ್ಕದ ಸ್ಥಾನವೇನು ಎಂಬುದರ ಬಗ್ಗೆ ಚರ್ಚಿಸೋಣ.
ವಿಜ್ಞಾನದಲ್ಲಿ ತರ್ಕ:
ಗಣಿತೀಯ ತರ್ಕ ಪದ್ಧತಿಯನ್ನು ವಿಜ್ಞಾನ ಅಳವಡಿಸಿಕೊಂಡಿದೆ. ಗಣಿತೀಯ ತರ್ಕದಲ್ಲಿ ’ಅಥವಾ’, ’ಮತ್ತು’, ’ಆದರೆ’ ಮುಂತಾದ ಸಂಬಂಧಗಳು ಮುಖ್ಯವಾಗಿರುತ್ತವೆ. ಎಲ್ಲ ವೈಜ್ಞಾನಿಕ ಸಿದ್ಧಾಂತಗಳೂ ಒಂದು ಗಣಿತೀಯ ತರ್ಕವೊಂದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಕಾರಣ ಗಣಿತೀಯ ತರ್ಕದಿಂದ ಸಾಧಿಸಲ್ಪಟ್ಟ ಸಿದ್ಧಾಂತಗಳಲ್ಲಿ ಮೂಲ ಊಹೆಯು ತಪ್ಪಾಗಿಲ್ಲದಿದ್ದ ಪಕ್ಷದಲ್ಲಿ ಸಿದ್ಧಾಂತವು ಎಂದಿಗೂ ಸುಳ್ಳಾಗದು. ಐನ್ಸ್ಟೈನರ ಮಾತುಗಳಲ್ಲಿ ಹೇಳುವದಾದರೆ “ವೈಜ್ಞಾನಿಕ ಸಿದ್ಧಾಂತವೆಂಬುದು ಕೇವಲ ಕೆಲವೇ ಊಹೆಗಳನ್ನಾಧರಿಸಿ ನಿರ್ಮಿಸಿದ ಗಣಿತೀಯ ಮಾದರಿ”. ಉದಾಹರಣೆಗಾಗಿ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಅವರು ಮಾಡಿದ ಊಹೆಗಳು ಎರಡೇ. ಮೊದಲನೇಯದು ಭೌತಿಕ ಕ್ರಿಯೆಗಳು ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ತೆರನಾಗಿ ಅನ್ವಯವಾಗುತ್ತವೆ. ಎರಡನೇಯದು ಬೆಳಕಿನ ವೇಗ ಆ ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ಆಗಿರುತ್ತದೆ. ಎಲ್ಲಿಯವರೆಗೆ ಈ ಊಹೆಗಳನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುವದಿಲ್ಲವೋ ಅಲ್ಲಿಯವರೆಗೂ ಸಾಪೇಕ್ಷತಾ ಸಿದ್ಧಾಂತ ಸತ್ಯವೇ.
ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?
– ರಾಕೇಶ್ ಶೆಟ್ಟಿ
ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?
ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.




