ಮಾಲ್ಡಾ ಗಲಭೆ ಮತ್ತು ಬಾಂಗ್ಲಾ ನುಸುಳುಕೋರರೆಂಬ ಟೈಂ ಬಾಂಬ್
– ರಾಕೇಶ್ ಶೆಟ್ಟಿ
ನಾಲಗೆಯನ್ನು ಎಕ್ಕಡದಂತೆ ಬಳಸುವ ರಾಜಕಾರಣಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಸಮಾಜವಾದಿ ಪಕ್ಷದ ಅಜಂ ಖಾನ್. ಇತ್ತೀಚೆಗೆ ಆರೆಸ್ಸಿನ ನಾಯಕರ ಲೈಂಗಿಕತೆಯ ಬಗ್ಗೆ ಈತ ಕೆಟ್ಟದಾಗಿ ಮಾತನಾಡಿದ್ದರು. ಈತನಿಗಿಂತ ನಾನೇನೂ ಕಮ್ಮಿಯೆಂಬಂತೆ ಕಮಲೇಶ್ ತಿವಾರಿಯೆಂಬ ಹಿಂದೂ ಮಹಾಸಭದ ವ್ಯಕ್ತಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಟೀಕೆ ಮಾಡಿದ್ದರು. ಮುಸ್ಲಿಮರು ಬೀದಿಗಿಳಿದರು,ತಿವಾರಿಯನ್ನು ಗಲ್ಲಿಗೇರಿಸಿ ಎಂದರು. ತಿವಾರಿಯ ಬಂಧನವಾಯಿತು.ಇದೆಲ್ಲಾ ನಡೆದಿದ್ದು ಕಳೆದ ಡಿಸೆಂಬರ್ ತಿಂಗಳಿನಲ್ಲಿ.
ಆದರೆ ಕಳೆದ ವಾರ ಜನವರಿ ೩ನೇ ತಾರೀಖು,ಬಂಗಾಳದ ಮಾಲ್ಡಾ ಜಿಲ್ಲೆಯ ಕಾಲಿಯಾ ಚಕ್ ಪ್ರದೇಶದಲ್ಲಿ ಈದ್ರಾ-ಈ-ಶರಿಯಾ ಎಂಬ ಸಂಘಟನೆ ಕಮಲೇಶನ ಹೇಳಿಕೆಯನ್ನು ಖಂಡಿಸಲೆಂದು ಪ್ರಚೋದನಕಾರಿ ಕರಪತ್ರವೊಂದನ್ನು ಹಂಚಿದೆ ಹಾಗೂ 3ನೇ ತಾರೀಖಿನ ಭಾನುವಾರ ಸುಮಾರು ಎರಡೂವರೆ ಲಕ್ಷದಷ್ಟು ಸಂಖ್ಯೆಯಲ್ಲಿದ್ದ ಗುಂಪು ಪ್ರತಿಭಟನೆಯಲ್ಲಿ ಹೊರಟಿದೆ.ಹಾಗೇ ಹೊರಡುವ ಮುನ್ನ ಪ್ರಚೋದನಕಾರಿ ಭಾಷಣವನ್ನು ಅವರ ತಲೆಗೆ ತುಂಬಲಾಗಿದೆ.ಮಾರಕಾಸ್ತ್ರಗಳನ್ನು ಹಿಡಿದು ಹೊರಟ ಉದ್ರಿಕ್ತ ಗುಂಪು ಕಾಲಿಯಾ ಚಕ್ ಪ್ರದೇಶದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಡುತ್ತ,ಮನೆಗಳಿಗೆ ದಾಳಿಯಿಡುತ್ತ,ಪೋಲಿಸ್ ಠಾಣೆಗೆ ನುಗ್ಗಿ ಅಲ್ಲಿದ್ದ ದಾಖಲೆಗಳು, ಪೋಲಿಸ್ ವಾಹನಗಳಿಗೂ ಬೆಂಕಿಯಿಟ್ಟು ದಾಂಧಲೆ ಮಾಡಿದ್ದರೆ.ಖುದ್ದು ಪೋಲಿಸರೇ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.ಮತಾಂಧರು ದಾಳಿಯೆಬ್ಬಿಸಿ ಹೋದ ಎರಡು ದಿನಗಳ ನಂತರ ಪೋಲಿಸರು ಬೀದಿಗಿಳಿರುವುದಾಗಿ ಅಲ್ಲಿನ ಜನರು ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ.
ದಾದ್ರಿಯಲ್ಲಿ ನಡೆದ ಹತ್ಯೆಯೊಂದನ್ನು ಹಿಡಿದುಕೊಂಡು ದೇಶದ ಹೆಸರಿಗೆ ಮಸಿಬಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಬುದ್ಧಿಜೀವಿಗಳು,ಸೆಕ್ಯುಲರ್ ಮೀಡಿಯಾಗಳು ಮಾಲ್ಡಾದ ಘಟನೆಯ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ.ಮೊದಲಿಗೆ ಬಾಯಿಬಿಟ್ಟಿದ್ದು ಜೀ ನ್ಯೂಸಿನ ಸುಧೀರ್ ಚೌದರಿ,ಆ ನಂತರವೇ ಉಳಿದ ಚಾನೆಲ್ಲುಗಳು ಅನಿವಾರ್ಯವಾಗಿ ಬಾಯಿ ತೆರೆದವು.ಇಷ್ಟಾದರೂ ಬುದ್ಧಿಜೀವಿಗಳು ಬಾಯಿ ತೆಗೆಯಲಿಲ್ಲ.
ಚೆಕಾಫ್ ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ.ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು.ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ.ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ.ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು.ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು.ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು.
’ಓಹ್.! ಸಂಜೆಯೆನ್ನುವುದು ಎಷ್ಟು ಸುಂದರವಲ್ಲವೇ ಸಾಶಾ’,ಎಂದು ಮೆಲ್ಲಗೆತನ್ನ ಗಂಡನ ಕಿವಿಯೊಳಗೆ ಉಸುರಿದಳು ಬೆಡಗಿ .’ಒಂದು ಚಂದದ ಕನಸಿನಂತಿದೆ ನೋಡು ಈ ವಾತಾವರಣ.ಅಲ್ಲಲ್ಲಿ ಕಾಣುವ ಪೊದೆಗಳು,ರೈಲಿಹಳಿಗಳ ಪಕ್ಕಕ್ಕೆ ಅಷ್ಟಷ್ಟು ದೂರಕ್ಕೆ ನಿಲ್ಲಿಸಲಾಗಿರುವ ಉದ್ದನೆಯ ಲೋಹದ ಕಂಬಗಳು ಎಲ್ಲವೂ ಅದ್ಭುತವೇ.ಮನುಕುಲದ ಪ್ರಗತಿಯ ಪ್ರತೀಕವಾಗಿರುವ ರೈಲು ಕೂಡ ಅಪರೂಪದ ಸೌಂದರ್ಯವತಿ.ದೂರದಲ್ಲೆಲ್ಲೋ ಬರುತ್ತಿರುವ ರೈಲಿನ ಶಿಳ್ಳೆಯ ಶಬ್ದವನ್ನು ನಮ್ಮ ಕಿವಿಗೆ ತಲುಪಿಸುವ ಗಾಳಿಯದ್ದೂ ಒಂದು ಬಗೆಯ ಸೊಗಸಾದರೆ,ಈ ಸಂಜೆಯ ತಂಪಿನಲ್ಲಿ ಆ ಶಬ್ದವನ್ನು ಕೇಳುವುದು ಸಹ ಎಷ್ಟು ಹಿತವಾಗಿದೆ ಅಲ್ಲವೇ..’? ಎಂಬ ಪ್ರಶ್ನೆ ಆಕೆಯದ್ದು.
ಮತ್ತಷ್ಟು ಓದು 
ಮೌಢ್ಯದ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
– ಮಹೇಶ ಕಲಾಲ್
ಮೌಢ್ಯದ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.ಕಸವು ರಸವಾಗಲಿ, ಧ್ಯೇಯೋದ್ದೇಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಟಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಟಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.
ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.
ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨
– ರೋಹಿತ್ ಚಕ್ರತೀರ್ಥ
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
ಮೊಳಗಿತು ಕಂಚಿನ ಕಂಠ
ಅಂದು, ಸೆಪ್ಟೆಂಬರ್ 11ನೇ ತಾರೀಖು, ಶಿಕಾಗೋದಲ್ಲಿ ಜಮಾಯಿಸಿದ್ದ ಧರ್ಮಜಿಜ್ಞಾಸುಗಳೆದುರು ಸರ್ವಧರ್ಮ ಸಂಸತ್ತಿನ ವೇದಿಕೆಯಲ್ಲಿ ನಿಂತ ವಿವೇಕಾನಂದರ ಮಾತು ಶುರುವಾಗಿದ್ದು “ಅಮೆರಿಕದ ಸೋದರ ಸೋದರಿಯರೇ” ಎಂಬ ಶಕ್ತಿಶಾಲಿಯಾದ ಪದಗಳ ಮೂಲಕ. ತನ್ನೆದುರು ಕೂತಿದ್ದ ಅಷ್ಟೂ ಜನರನ್ನು ಹಾಗೆ ಒಂದೇ ಉಸಿರಿನಲ್ಲಿ ತನ್ನವರನ್ನಾಗಿ ಮಾಡಿಕೊಂಡ ಯಾವ ಧರ್ಮಗುರುವೂ ಅಲ್ಲಿರಲಿಲ್ಲ. ಹಾಗಿದ್ದಾಗ ವಿವೇಕಾನಂದರು ಸೋದರ-ಸೋದರಿಯರೇ ಎಂದಿದ್ದೇ ತಡ ಇಡೀ ಸಭಾಂಗಣದಲ್ಲಿ ವಿದ್ಯುತ್ಸಂಚಾರವಾಯಿತು! ಸಭಿಕರು ಎದ್ದು ಮೂರ್ನಾಲ್ಕು ನಿಮಿಷಗಳ ದೀರ್ಘ ಕರತಾಡನ ಮಾಡಿದರು. ತನ್ನ ಕೇವಲ ಹದಿನೈದು ನಿಮಿಷಗಳ ಪುಟ್ಟ ಭಾಷಣದಲ್ಲಿ ವಿವೇಕಾನಂದರು ಭಾರತದ ಸನಾತನ ಸಂಸ್ಕøತಿಯ ಮೂಲ ಆಶಯವನ್ನು ಅನಾವರಣ ಮಾಡಿದ್ದರು. ಮರುದಿನದ ಪತ್ರಿಕೆಗಳಲ್ಲಿ ದೂರದ ಹಿಂದೂಸ್ತಾನದಿಂದ ಬಂದ ಈ ಯುವ ಸಂನ್ಯಾಸಿಯ ಸಿಂಹಗರ್ಜನೆಯದ್ದೇ ಸುದ್ದಿ! ದ ನ್ಯೂಯಾಕ್ ಹೆರಾಲ್ಡ್ ಪತ್ರಿಕೆ, “ಧರ್ಮ ಸಂಸತ್ತಿನ ಅತ್ಯಂತ ಪ್ರಮುಖ ಆಕರ್ಷಣೆ ಭಾರತದಿಂದ ಬಂದ ಸ್ವಾಮಿ ವಿವೇಕಾನಂದರು. ಅವರ ಮಾತುಗಳನ್ನು ಕೇಳಿದ ಮೇಲೆ, ಆ ಪುಣ್ಯಭೂಮಿಯತ್ತ ನಾವು ಮಿಷನರಿಗಳನ್ನು ಧರ್ಮಪ್ರಚಾರಕ್ಕಾಗಿ ಕಳಿಸುತ್ತಿರುವುದು ಅದೆಷ್ಟು ಹಾಸ್ಯಾಸ್ಪದ ಕಾರ್ಯ ಎಂಬುದು ಅರಿವಾಗುತ್ತದೆ” ಎಂದು ಬರೆಯಿತು. ಇನ್ನೊಂದು ಪತ್ರಿಕೆ, “ಜನರು ಉಳಿದವರ ಗಂಟೆಗಟ್ಟಲೆ ಉಪನ್ಯಾಸಗಳನ್ನು ಕೂಡ ಸಹಿಸಿಕೊಂಡು ಈ ಸ್ವಾಮೀಜಿಯ ಹದಿನೈದು ನಿಮಿಷಗಳ ಚಿಕ್ಕ ಭಾಷಣವನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದರು” ಎಂದು ವಿಮರ್ಶೆ ಬರೆದಿತ್ತು. ತನ್ನ ಹನ್ನೆರಡು ವರ್ಷಗಳ ಕಠಿಣ ತಪಸ್ಸು, ಸಾಧನೆ, ಅಧ್ಯಯನ, ಚಿಂತನಗಳಿಂದ ವಿವೇಕಾನಂದರು ಈಗ “ರಾತ್ರಿಬೆಳಗಾಗುವುದರಲ್ಲಿ” ತಾರೆಯಾಗಿದ್ದರು! ಭಾರತದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಕೂಡ ಅಮೆರಿಕನ್ ಪತ್ರಕರ್ತರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದವು. ವಿವೇಕಾನಂದರ ಅಮೆರಿಕಾ ದಿಗ್ವಿಜಯ ಭಾರತದಲ್ಲಿ ಬಲುದೊಡ್ಡ ಸುದ್ದಿಯಾಯಿತು. ರಾಮಕೃಷ್ಣ ಮಠದಲ್ಲಂತೂ ಸಂಭ್ರಮವೇ ಸಂಭ್ರಮ ಮನೆಮಾಡಿತು. ಅಮೆರಿಕೆಯ ಹತ್ತುಹಲವಾರು ಕಡೆಗಳಲ್ಲಿ ಸ್ವಾಮೀಜಿಯ ಭಾಷಣ ಏರ್ಪಾಟಾಯಿತು. ಭಾರತದ ಸನಾತನ ಧರ್ಮದ ಬಗ್ಗೆ ಅರಿಯುವ ಆಸಕ್ತಿ ಅಲ್ಲಿನ ಬಿಳಿತೊಗಲಿನ ಜಿಜ್ಞಾಸುಗಳಿಗೆ ಹೆಚ್ಚಾಯಿತು.
6ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…
ಕಳೆದ ವರ್ಷ ಈ ಸಮಯದಲ್ಲಿ, “5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ, ನಿಲುಮೆ ಪ್ರಕಾಶನ” ಎಂದು ನಾವು ಘೋಷಿಸಿದ್ದ ದಿನವೇ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು. ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.
ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು.ಕಳೆದ ವರ್ಷ ಸಾಧಿಸಲಾಗದ್ದನ್ನು ಈ ವರ್ಷದಲ್ಲಿ ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ.
ಮತ್ತಷ್ಟು ಓದು 
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧
– ಪ್ರೇಮಶೇಖರ
ಶ್ರೀಯುತ ದಿನೇಶ್ ಅಮೀನ್,
ನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.
ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
– ರೋಹಿತ್ ಚಕ್ರತೀರ್ಥ
ಕೆಲ ವರ್ಷಗಳ ಹಿಂದೆ ವಿವೇಕಾನಂದರ ಮೇಲೆ ಅದೊಂದು ಲೇಖನ ಪ್ರಕಟವಾಗಿತ್ತು. ಭಗವಾನ್ ಗೀತೆಯನ್ನು ಸುಟ್ಟು ಹಾಕುತ್ತೇನೆ ಎಂದಮೇಲೆ ಏಕಾಏಕಿ ಆ ಪುಸ್ತಕದ ಸೇಲ್ಸ್ ಹೆಚ್ಚಾದಂತೆ, ವಿವೇಕರ ಮೇಲೆ ಬರೆದಿದ್ದ ಈ ಲೇಖನ ಪ್ರಕಟವಾದ ಮೇಲೆ ಹಲವು ತರುಣರು ವಿವೇಕಾನಂದರನ್ನು ಆಳವಾಗಿ ಅಭ್ಯಾಸ ಮಾಡಲು ಕೂತುಬಿಟ್ಟಿದ್ದರು! ಯಾಕೆಂದರೆ ವಿವೇಕರ ನಿಜಬಣ್ಣ ಬಯಲು ಮಾಡುವ ಉತ್ಸಾಹದಲ್ಲಿ ಲೇಖಕ ಬರೆದಿದ್ದ ಸಾಲುಗಳು ಆಘಾತ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಲೇಖನದ ತೊಂಬತ್ತೊಂಬತ್ತು ಭಾಗ ವಿವೇಕಾನಂದರನ್ನು ವಾಚಾಮಗೋಚರವಾಗಿ ತೆಗಳಿ, ಕೊನೆಯ ಒಂದೆರಡು ಸಾಲುಗಳಲ್ಲಿ “ಇಷ್ಟೆಲ್ಲ ಇದ್ದರೂ ಯಕಶ್ಚಿತ್ ಮನುಷ್ಯನೊಬ್ಬ ವಿವೇಕಾನಂದ ಆಗಲು ಸಾಧ್ಯ” ಎಂಬ “ತಿಪ್ಪೆ ಸಾರಿಸಿ” ಲೇಖನವನ್ನು ಮುಗಿಸಲಾಗಿತ್ತು. ಹೆತ್ತತಾಯಿಯನ್ನು ಅಸಹ್ಯ ಪದಗಳಿಂದ ನಿಂದಿಸಿ ಕೊನೆಗೆ “ಅವೇನೇ ಇದ್ದರೂ ನೀನು ತಾಯಿ” ಎಂದು ಹೇಳುವ ಧಾಟಿಯಲ್ಲಿ ಲೇಖಕರು ತನ್ನ ಜಾಣಮಾತುಗಳನ್ನು ಹೊಸೆದಿದ್ದರು. ವಿವೇಕಾನಂದರ ಬಗ್ಗೆ ಸರ್ವೇಸಾಧಾರಣವಾದ ಒಂದಷ್ಟು ಜನರಲ್ ಸಾಹಿತ್ಯವನ್ನು ಓದಿಕೊಂಡದ್ದು ಬಿಟ್ಟರೆ ನನಗೂ ಆ ಧೀಮಂತನ ಜೀವನದ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಲೇಖನದ ಅಪಪ್ರಚಾರವೊಂದು ನೆಪವಾಗಿ ನಾನೂ ವಿವೇಕಾನಂದರ ಬಗ್ಗೆ ಓದಲು ಕೂತೆ!
ಆ ಅಪಪ್ರಚಾರದ ಲೇಖನವನ್ನು ಓದುತ್ತಿದ್ದಾಗ ನನ್ನನ್ನು ತಡೆದುನಿಲ್ಲಿಸಿದ ಒಂದು ಸಾಲು ಹೀಗಿತ್ತು: ವಿವೇಕಾನಂದರು ಇಂಗ್ಲೀಷಿನಲ್ಲಿ 46 ಅಂಕ ಪಡೆದಿದ್ದರು; ಶಾಲಾಶಿಕ್ಷಕನಾಗುವ ಅರ್ಹತೆಯೂ ಇಲ್ಲ ಎಂಬ ಕಾರಣಕ್ಕೆ ಸ್ವತಃ ಈಶ್ವರಚಂದ್ರ ವಿದ್ಯಾಸಾಗರರು ಅವರನ್ನು ಕೆಲಸದಿಂದ ತೆಗೆದುಹಾಕಿದ್ದರು.ಈ ಮಾತುಗಳನ್ನು ಓದಿದಾಗ,ನನಗೆ ಥಟ್ಟನೆ ಆರ್.ಕೆ.ನಾರಾಯಣ, ಬನ್ನಂಜೆ ಗೋವಿಂದಾಚಾರ್ಯ, ಶ್ರೀನಿವಾಸ ರಾಮಾನುಜನ್, ಎವಾರಿಸ್ಟ್ ಗ್ಯಾಲ್ವ ನೆನಪಿಗೆ ಬಂದರು. ನಿಮಗೆ ಗೊತ್ತಿದೆಯೋ ಇಲ್ಲವೋ, ಭಾರತೀಯ ಇಂಗ್ಲೀಷ್ ಸಾಹಿತ್ಯಲೋಕದ ದಿಗ್ಗಜ ಆರ್.ಕೆ. ನಾರಾಯಣ್ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿದ್ದರು! ಸಂಸ್ಕೃತದ ಪ್ರಕಾಂಡ ಪಂಡಿತ ಬನ್ನಂಜೆಯವರಿಗೆ ಎರಡು ಸಲ ಪ್ರವೇಶ ಪರೀಕ್ಷೆಗೆ ಕೂತರೂ ಸಂಸ್ಕೃತ ಕಾಲೇಜಿಗೆ ಸೇರಬೇಕಾದಷ್ಟು ಮಾರ್ಕು ಸಿಗಲಿಲ್ಲ! ಗಣಿತ ತಾರೆ ರಾಮಾನುಜನ್ ಎಫ್ಎ ಪರೀಕ್ಷೆಯಲ್ಲಿ ಫೇಲಾಗಿದ್ದ ಹುಡುಗ, ಮುಂದೆ ಕೇವಲ ಮೂವತ್ತು ವರ್ಷ ವಯಸ್ಸಲ್ಲೇ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಬಿ.ಎ. ಪದವಿ ಪಡೆದು ಫೆಲೋ ಆಫ್ ರಾಯಲ್ ಸೊಸೈಟಿ ಆದರು! ಗಣಿತದ ಇನ್ನೊಂದು ಅದ್ಭುತ ಪ್ರತಿಭೆ; ಗ್ರೂಪ್ ಸಿದ್ಧಾಂತವೆಂಬ ಹೊಸ ಶಾಖೆಯನ್ನು ಹುಟ್ಟಿಸಿದ ಗ್ಯಾಲ್ವನಿಗೆ ತನ್ನ ಹುಟ್ಟೂರು ಪ್ಯಾರಿಸ್ಸಿನ ಎಕೋಲ್ ಪಾಲಿಟೆಕ್ನಿಕ್ ಎಂಬ ಕಾಲೇಜಿನ ಸಂದರ್ಶನದಲ್ಲಿ ಎರಡು ಸಲ ಮಂಗಳಾರತಿಯಾಗಿತ್ತು. ಯಾವುದೇ ವ್ಯಕ್ತಿಯ ಜೀವನ ನಿಂತ ನೀರಾಗಿರುವುದಿಲ್ಲ; ಅದು ನಿರಂತರ ಚಲನಶೀಲ. ಹಾಗೊಂದು ಊಧ್ರ್ವಗತಿ ಇರುವುದರಿಂದಲೇ ಸಾಮಾನ್ಯವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂಬುದನ್ನು ಬಲ್ಲ ಯಾರಿಗೇ ಆಗಲಿ, ವಿವೇಕಾನಂದರು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಮಾರ್ಕು ಪಡೆದರು ಎನ್ನುವುದು ಅವರನ್ನು ಅಳೆಯುವ ಮಾನದಂಡ ಅನ್ನಿಸುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ತನ್ನ ಜೀವನದಲ್ಲಿ ಎದುರಾಗುತ್ತಹೋದ ಪಲ್ಲಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಮಹಾತ್ಮನಾಗಬಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆಯಲ್ಲಿ 46 ಮಾರ್ಕು ಪಡೆದರು ಎಂಬ ಕಾರಣ ಕೊಟ್ಟು ಓದುಗರನ್ನು ಆಘಾತಗೊಳಿಸಿದ ಲೇಖನದಲ್ಲಿ ವಿವೇಕಾನಂದರ ಔನ್ನತ್ಯವನ್ನು ಅರಿತುಕೊಳ್ಳಲು ದಾರಿಯಾಗುವ ಇನ್ನಷ್ಟು ಆಘಾತಗಳಿರಬಲ್ಲವು ಎಂದು ಮನದಟ್ಟಾಯಿತು. ಅಲ್ಲಿಂದ ಮುಂದಕ್ಕೆ ನಾನು ಕಂಡುಕೊಂಡ ವಿವೇಕಾನಂದರ ನಿಜಚಿತ್ರಣ ಇಲ್ಲಿದೆ.
ಮೊಬೈಲ್ ಕಳ್ಳ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಆ ವ್ಯಕ್ತಿ ಶೇಖರನನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ಶೇಖರನಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ? ಊಹು೦…ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಎನಿಸುತ್ತಾನೆ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ಶೇಖರ.ಅವನು ಶೇಖರನೆಡೆಗೆ ನೋಡುತ್ತಲೇ ಇದ್ದ.
ಶೇಖರನಿಗೆ ಈಗ ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ,ನಾನು ಅವನನ್ನು ನೋಡಿದ ತಕ್ಷಣ ಬೇರೆಡೆ ನೋಡುತ್ತಾನೆ,ಯಾರಿಗ್ಗೋತ್ತು ? ಡೀಸೆ೦ಟ್ ಆಗಿ ಕ೦ಡ ಮಾತ್ರಕ್ಕೆ ಮೊಬೈಲ್ ಕಳ್ಳ ಆಗಿರಬಾರದು ಎ೦ದೇನಿರಲ್ಲವಲ್ಲ,ಯಾವುದಕ್ಕೂ ಬೇಗ ಮನೆಗೆ ಹೋಗಿ ಬಿಡಬೇಕು ಎ೦ದುಕೊ೦ಡ.
ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಶೇಖರ,ಇಪ್ಪತ್ತು ಸಾವಿರ ರೂಪಾಯಿಗಳ ಮೊಬೈಲೊ೦ದನ್ನು ಕೊ೦ಡಿದ್ದ.ತು೦ಬಾ ಮುದ್ದಾದ ಮೊಬೈಲ್ ಅದು.ಅದನ್ನು ಆತ ತು೦ಬಾ ಹಚ್ಚಿಕೊ೦ಡುಬಿಟ್ಟಿದ್ದ. ದಿನವಿಡಿ ಅದರಲ್ಲಿ ಫೇಸ್ ಬುಕ್ ,ವಾಟ್ಸಪ್ಪುಗಳ ಚಾಟಿ೦ಗ್ ,ಎಫ್.ಎಮ್ ನಲ್ಲಿ ಸ೦ಗೀತ ಕೇಳುವುದು,ಗ೦ಟೆಗಟ್ಟಲೇ ಸ್ನೇಹಿತರೊ೦ದಿಗೆ ಮಾತನಾಡುವುದರಲ್ಲಿ ಕಾಲ ಕಳೆಯುತ್ತಿದ್ದ.ಮೊಬೈಲಿನ ಅಲಾರಾ೦ ಸದ್ದಿನಿ೦ದಲೇ ನಿದ್ದೆಯಿ೦ದೇಳುತ್ತಿದ್ದ ಶೇಖರ,ಮೊಬೈಲ್ ಕೆಳಗಿಡುತ್ತಿದ್ದುದು ರಾತ್ರಿ ಸ್ನೇಹಿತರಿಗೆ ’ಗುಡ್ ನೈಟ್’ಎಸ್ ಎಮ್ ಎಸ್ ಕಳುಹಿಸಿದಾಗಲೇ. ಇತ್ತೀಚೆಗೆ ಅವನ ಸ್ನೇಹಿತನೊಬ್ಬನ ಮೊಬೈಲನ್ನು ಯಾರೋ ಕೈಯಿ೦ದಲೇ ಕಸಿದು ಕದ್ದರು ಎ೦ಬ ಸುದ್ದಿ ಕೇಳಿದಾಗಿನಿ೦ದ ಮಾತ್ರ ಅವನು ತು೦ಬಾ ಗಾಬರಿಯಾಗಿದ್ದ.ಆ ಸುದ್ದಿ ಕೇಳಿದಾಗಿನಿ೦ದ ಅವನಿಗೆ ತನ್ನ ಸುತ್ತಲೂ ಯಾರೇ ಹೊಸಬರು ಕ೦ಡರೂ ಅವರು ಮೊಬೈಲ್ ಕಳ್ಳರೇನೋ,ತನ್ನ ಮೊಬೈಲ್ಲನ್ನು ಕದಿಯಲೆ೦ದೇ ಬ೦ದಿದ್ದಾರೇನೋ ಎ೦ದುಕೊಳ್ಳುತ್ತಿದ್ದ.ಬಸ್ ಸ್ಟಾ೦ಡಿನಲ್ಲಿ ನಿ೦ತಿದ್ದ ಆ ವ್ಯಕ್ತಿ ಇವನನ್ನೇ ನೋಡುತ್ತಿದ್ದರಿ೦ದ ಆ ವ್ಯಕ್ತಿಯೂ ಮೊಬೈಲ್ ಕಳ್ಳನಿರಬಹುದು ಎ೦ದು ಶೇಖರನಿಗೆ ಅನುಮಾನ ಉ೦ಟಾಗಿತ್ತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
– ನಾಗರಾಜ್ ಹೆತ್ತೂರು
ಕಾರ್ಯಾಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ
ವಿಷಯ: ಅಕಾಡೆಮಿ ಪ್ರಶಸ್ತಿ ಮೌಲ್ಯವನ್ನು ಉಳಿಸಲು ಮತ್ತು ವಾಪಾಸು ಮಾಡಿದ ಪ್ರಶಸ್ತಿಗಳನ್ನು ಆಯಾ ಸಾಲಿನ ಪ್ರಶಸ್ತಿ ವಂಚಿತ ಪ್ರತಿಭಾವಂತರಿಗೆ ನೀಡಲು ಒತ್ತಾಯ
ನಮ್ಮೆಲ್ಲರ ಪ್ರೀತಿಯ ಸಾಹಿತಿಗಳೂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿಪಟ್ಟಣಶೆಟ್ಟಿ ಅವರಿಗೆ ನಮಸ್ಕಾರಗಳು. ತಾವು ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ಇತರೆ ಎಲ್ಲಾ ಅಕಾಡೆಮಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಕೆಲವು ತಿಂಗಳಿಂದ ದೇಶದಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮೊಳಗಿನ ಪ್ರಮುಖ ಚಿಂತಕರಾದ ಕಲಬುರ್ಗಿ ಅವರ ಹತ್ಯೆ ನಂತರ ರಾಜ್ಯದಲ್ಲಿ ಈ ಕುರಿತು ದೊಡ್ಡ ಜನಾಭಿಪ್ರಾಯ ರೂಪಿತವಾಗಿದ್ದು ಕೆಲವು ಸಾಹಿತಿಗಳು ಪ್ರಶಸ್ತಿ ವಾಪಾಸ್ ನೀಡುವ ಮೂಲಕ ಪ್ರತಿಭಟನಾತ್ಮಕ ನಡೆ ಇಟ್ಟಿದ್ದಾರೆ. ಈಚೆಗೆ ಅಕಾಡೆಮಿ ಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕಿರಿಯ ಸಾಹಿತಿಯೊಬ್ಬರು ಪ್ರಶಸ್ತಿ ಬಹಿಷ್ಕರಿಸಿ, ನಿಮಗೆ ಮತ್ತು ಮಾಧ್ಯಮಗಳಲ್ಲಿ ಪತ್ರ ಬರೆದಿದ್ದನ್ನು ಗಮನಿಸಿದ್ದೇವೆ. ಅವರ ಪ್ರತಿಭಟನೆ ಹಕ್ಕನ್ನು ಗೌರವಿಸುತ್ತೇವೆ. ಕಲಬುರ್ಗಿ ಸೇರಿದಂತೆ ದೇಶದಲ್ಲಿ ನಡೆದ ಸಾಹಿತಿಗಳ ಅವರ ಹತ್ಯೆಯನ್ನು ಖಂಡಿಸುತ್ತೇವೆ ಮತ್ತು ಈ ಸಂಬಂಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ ಎಂಬುದನ್ನು ನಿಮಗೆ ನೆನಪಿಸುತ್ತಲೇ ಪ್ರಶಸ್ತಿ ವಾಪಾಸತಿ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಅಕಾಡೆಮಿ ಕೆಲವು ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.
ಭಾರತೀಯ ಆಹಾರ ಶೈಲಿಗಳ ಕುರಿತು ಒಂದು ವೈಜ್ಞಾನಿಕ ಚಿತ್ರಣ
– ವಿನಾಯಕ ಹಂಪಿಹೊಳಿ
ಆಹಾರದ ಶೈಲಿಗಳಲ್ಲಿ ಎಷ್ಟು ಪ್ರಕಾರಗಳು ಎಂಬ ಪ್ರಶ್ನೆಗೆ ಎಲ್ಲರೂ ಉತ್ತರಿಸುವದು ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಬಗ್ಗೆ. ಪಾಶ್ಚಿಮಾತ್ಯ ಲೋಕದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಕುರಿತು ಅನೇಕ ಚರ್ಚೆಗಳು ವಾದ ವಿವಾದಗಳಾಗಿವೆ. ನಮ್ಮ ದೇಶದಲ್ಲಿಯೂ ಸಂತರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುವ ಕೃತಿಗಳು ಕಾಣುತ್ತವೆ. ಆದರೂ ಸಸ್ಯಾಹಾರ v/s ಮಾಂಸಾಹಾರದಲ್ಲಿ ಯಾವದು ಸರಿ ಎಂಬಂಥ ಚರ್ಚೆಗಳು ಹಿಂದೆಂದೂ ಆದಂತೆ ಕಾಣುವದಿಲ್ಲವಾದರೂ ಈಗ ಅಂಥ ಚರ್ಚೆಗಳು ಚೆನ್ನಾಗಿಯೇ ನಡೆಯುತ್ತಿವೆ. ಇಂದು ನಮ್ಮ ದೇಶದಲ್ಲಿರುವ ಹೋಟೆಲ್ಲುಗಳ ರಚನೆಗಳು ಬಹುತೇಕ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಮೇಲೆಯೇ ಆಗಿರುತ್ತವೆ.
ನಮ್ಮ ದೇಶದ ಬುದ್ಧಿಜೀವಿಗಳು ಚರಿತ್ರೆಯಲ್ಲಿ ಆಗಿ ಹೋದ ಶ್ರೇಷ್ಠ ಸಂತರ ಜಾತಿ-ವಿರೋಧೀ ವಾಕ್ಯಗಳನ್ನು ಸಾಮಾಜಿಕ ಕ್ರಾಂತಿಗೆ ಸಮೀಕರಿಸಿ ಸಮಾನತೆ ಸ್ವಾತಂತ್ರ್ಯದ ಹಕ್ಕುಗಳ ಕಲ್ಪನೆ ಅವರಲ್ಲಿತ್ತು ಎಂದು ಹೇಳುತ್ತಾರಾದರೂ, ಅದೇ ಸಂತರು ವಿಧಿಸುವ ಆಹಾರ ಪದ್ಧತಿಯ ಕುರಿತು ದಿವ್ಯ ಮೌನವನ್ನು ತಾಳುತ್ತಾರೆ. ಕಾರಣ ಅದೇ ತರ್ಕದ ಅಡಿಯಲ್ಲಿ ಆ ವಿಧಿಯು ಹೇರಿಕೆಯಾಗಿ ಬಿಡುತ್ತದೆ ಇಲ್ಲವೇ ಸ್ವಾತಂತ್ರ್ಯದ ಹರಣವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಅದು ಬುದ್ಧಿಜೀವಿಗಳಿಗೆ ಇಷ್ಟವಿಲ್ಲ. ಪಾಶ್ಚಾತ್ಯರ ವಸಾಹತು ಶಿಕ್ಷಣ ಪಡೆದು ಹಿಂದೂ ಎಂಬ ರಿಲಿಜನ್ನನ್ನು ಒಪ್ಪಿಕೊಂಡ ಸಸ್ಯಾಹಾರಿಗೂ ಹಿಂದೂ ರಿಲಿಜನ್ನಿನ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಮಾಂಸಾಹಾರದ ಉಲ್ಲೇಖಗಳು ವಿಚಿತ್ರವಾಗಿ ಕಾಣುತ್ತವೆ.
ಹಾಗಿದ್ದರೆ ಭಾರತೀಯ ಆಹಾರ ಶೈಲಿ ಏನು? ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಎರಡು ರೀತಿಯಲ್ಲಿ ವಿಂಗಡಿಸಿ ಹೊರಟರೆ ನಮ್ಮ ಸಂಪ್ರದಾಯಗಳ ಆಹಾರದ ಶೈಲಿಗಳನ್ನು ವಿವರಿಸಬಲ್ಲದೇ? ಸಮರ್ಪಕವಾಗಿ ವಿವರಿಸುವ ಚಿತ್ರಣವನ್ನೇ ತಾನೇ ವೈಜ್ಞಾನಿಕವೆಂದು ಕರೆಯಲು ಸಾಧ್ಯ. ಆದ್ದರಿಂದ ಮೊದಲು ಈಗಿರುವ ಸಸ್ಯಾಹಾರ ಮತ್ತು ಮಾಂಸಾಹಾರವೆಂಬ ವಿಭಾಗಗಳ ಚಿತ್ರಣವನ್ನು ಮೊದಲು ಅವಲೋಕಿಸೋಣ. ಅದು ನಮ್ಮ ಸಂಪ್ರದಾಯಗಳ ಆಹಾರ ಪದ್ಧತಿಯನ್ನು ವಿವರಿಸಲು ಸಾಧ್ಯವೇ ಎಂಬುದನ್ನು ಅರಿಯೋಣ. ಇಲ್ಲವಾದಲ್ಲಿ ನಮ್ಮ ಸಂಪ್ರದಾಯಗಳಲ್ಲಿರುವ ವಿವಿಧ ಆಹಾರದ ಶೈಲಿಗಳನ್ನು ವಿವರಿಸುವ ಚಿತ್ರಣವನ್ನು ರಚಿಸಲು ಸಾಧ್ಯವೇ ಎನ್ನುವದನ್ನು ಚರ್ಚಿಸೋಣ.




