ಪ್ರತ್ಯೇಕ ಪಂಕ್ತಿ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು
– ರಾಕೇಶ್ ಶೆಟ್ಟಿ
ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…! ಅಂತ ವರ್ಷದ ಹಿಂದೆ ಮಡೆಸ್ನಾನ ಅನ್ನುವ ವಿಕೃತಿಯನ್ನು ವಿರೋಧಿಸಿ ಬರೆದಿದ್ದು ನಿಜವಾಗಿದೆ.ನಿನ್ನೆ ಮತ್ತೆ ಕುಕ್ಕೆಯಲ್ಲಿ ಮಡೆಸ್ನಾನ ಸಾಂಗೋಪಾಂಗವಾಗಿ ನೆರವೇರಿದೆ.ತಾವು ತಿಂದು ಬಿಡುವ ಎಂಜಲ ಮೇಲೆ ಮನುಷ್ಯರು ಹೊರಳಾಡುತ್ತಾರೆ ಅಂತ ಗೊತ್ತಿದ್ದು ಉಣ್ಣುವ ರೋಗಗ್ರಸ್ತ ಅಹಂ ಮನಸ್ಸುಗಳು ಮತ್ತು ಇನ್ನೊಬ್ಬರ ಎಂಜಲೆಲೆಯೇ ಪರಮ ಪವಿತ್ರ ಅನ್ನುವ ಮೂಢರು ಎಂಜಲೆಲೆಯ ಸ್ನಾನದಲ್ಲಿ ಮಿಂದು ಪುನೀತರಾಗಿದ್ದಾರೆ.
ಇನ್ನೊಂದೆಡೆ “ನಾವೆಲ್ಲ ಹಿಂದೂ,ನಾವೆಲ್ಲ ಒಂದು” ಅನ್ನುವವರೆಲ್ಲ ಸದ್ದಿಲ್ಲದೆ ಹಿಂದೆಯೇ ನಿಂತು ಎಂಜಲೆಲೆಯ ಮೇಲೆ ದೇವರ ಹೆಸರಿನ ನಂಬಿಕೆ(ಹೆದರಿಕೆ?)ಯಲ್ಲಿ ಜಾಗೃತರಲ್ಲದವರನ್ನು ಉರುಳಾಡಿಸಿ ಕೃತಾರ್ತರಾಗಿದ್ದಾರೆ.ಅಲ್ಲಿಗೆ “ನಾವೆಲ್ಲ ಹಿಂದೂ – ನಾವಿನ್ನೂ ಹಿಂದು” ಎನ್ನಲಡ್ಡಿಯಿಲ್ಲ ಅಲ್ಲವೇ?
ಹೈಕೋರ್ಟ್ ಮಡೆ ಸ್ನಾನವನ್ನು ಎಡೆಸ್ನಾನವನ್ನಾಗಿಸಿ ತೀರ್ಪು ನೀಡಿದಾಗ ಸಂಪೂರ್ಣ ನಿಷೇಧವಾಗಲಿಲ್ಲವಾದರೂ ಎಂಜಲೆಲೆಯ ಮೇಲೆ ಉರುಳಾಡುವುದಿಲ್ಲವಲ್ಲ ಅನ್ನೋ ಸಮಾಧಾನವಿತ್ತು.ನಂಬಿಕೆ(ಹೆದರಿಕೆ?) ಯ ಹಾವು ಸಾಯದಂತೆ ಸಂಪ್ರದಾಯ(?)ದ ಕೋಲು ಮುರಿಯದಂತೆ ನೀಡಿದ ತೀರ್ಪಾಗಿತ್ತು ಅದು.ಆದರೆ ಸುಪ್ರೀಂ ಕೋರ್ಟ್ ಈ ಬಗ್ಗೆ ತಡೆಯಾಜ್ನೆ ನೀಡಿದ್ದು ಮತ್ತೆ ಬೇಸರ ಮೂಡಿಸಿದ್ದು ನಿಜ.ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲಲ್ಲಿದೆ ಹಾಗಾಗಿ ತೀರ್ಪು ಬರುವವರೆಗೂ ಕಾಯಲೇಬೇಕು.
ಆದರೆ,ಪ್ರಶ್ನೆಯಿರುವುದು ತೀರ್ಪಿನ ಬಗ್ಗೆಯಲ್ಲ.ಈ ಆಚರಣೆಯನ್ನು ಹಿಂದೆ ನಿಂತು ಬೆಂಬಲಿಸುತ್ತಿರುವ ಮನಸ್ಸುಗಳೆಂತವು? ಅನ್ನುವುದರ ಬಗ್ಗೆ.ಒಂದು ಕಡೆ ನಾವೆಲ್ಲ ಹಿಂದೂ ನಾವೆಲ್ಲ ಒಂದು ಅನ್ನುವ ತುತ್ತೂರಿ ಊದುವ ಮನಸ್ಸುಗಳೇ “ಹಿಂದೂ”ಗಳನ್ನು “ಹಿಂದ”ಕ್ಕೆ ತಳ್ಳುತ್ತಿರುವ ವಿಪರ್ಯಾಸವಿದು.ಬಲಪಂಥೀಯರು ಮಾಡಿದ್ದೆಲ್ಲವನ್ನೂ ವಿರೋಧಿಸಲೇಬೇಕು ಅನ್ನುವಂತೆ ಹೊರಡುವ ಎಡಪಂಥೀಯರಂತೆಯೇ.ಎಡಪಂಥೀಯರು ವಿರೋಧಿಸುತಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಬಲಪಂಥೀಯರು ಈ ಆಚರಣೆಯ ಪರವಾಗಿ ತಣ್ಣಗೇ ಹಿಂದೆ ನಿಂತಿರುವಂತಿದೆ.ಇಲ್ಲವಾದರೆ, ಮತಾಂತರದ ಬಗ್ಗೆ,ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಸಂಘಟನೆಗಳಿಗೇ ಈ ಮಡೆಸ್ನಾನದ ವಿಷಯದಲ್ಲಿ ಮಲೆಕುಡಿಯರಿಗೆ ಜಾಗೃತಿ ಮೂಡಿಸಬೇಕು ಅನ್ನಿಸಲಿಲ್ಲವೇ?. ಮಡೆಸ್ನಾನದಲ್ಲಿ ಮುಖ್ಯವಾಗಿ ಕಾಣುವುದು ಇಬ್ಬರು.ಒಂದು ತಾವು ತಿಂದು ಬಿಟ್ಟ ಎಲೆಯಲ್ಲಿ ಜನ ಬಿದ್ದು ಹೊರಳಾಡುತ್ತಾರೆ ಅಂತ ತಿಳಿದೂ ತಿಳಿದು ಉಣ್ಣುವ ಬ್ರಾಹ್ಮಣರು ಮತ್ತು ತಮ್ಮ ನಂಬಿಕೆ(ಹೆದರಿಕೆ)ಗಾಗಿ ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರು.ಇವರಿಬ್ಬರಲ್ಲಿ ಜಾಗೃತ ಮತ್ತು ವಿದ್ಯಾವಂತ ಸಮುದಾಯ ಯಾವುದು? ಅಸಲಿಗೆ ಮಲೆಕುಡಿಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಇದೇ ಬ್ರಾಹ್ಮಣರು (ಅಂದರೆ ಇಂತ ಎಲೆಗಳಲ್ಲಿ ಊಟ ಮಾಡುವ ಬ್ರಾಹ್ಮಣರು) ತಾನೇ?
ಕಳೆದ ಬಾರಿ ಮಡೆಸ್ನಾನದ ಬಗ್ಗೆ ಬರೆದಾಗ ಅಜಕ್ಕಳ ಗಿರೀಶ್ ಭಟ್ ಪ್ರತಿಕ್ರಿಯೆಯಲ್ಲಿ ಹೇಳಿದ್ದ ಈ ಮಾತು ಮಡೆಸ್ನಾನಕ್ಕೆ ಸುಲಭ ಪರಿಹಾರವೆನ್ನಿಸುತ್ತದೆ. “ಮಾನ್ಯರೆ, ಇಡೀ ಮಡೆಸ್ನಾನದ ಒಟ್ಟು ವಿವಾದವನ್ನು ಪರಿಹರಿಸಲು ಸುಲಭ ಉಪಾಯವೆಂದರೆ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡದೆ ಇರುವುದು ಅಷ್ಟೆ. ಸಾರ್ವಜನಿಕ ಬ್ರಾಹ್ಮಣರಿಗೆ ಬೇರೆ ಊಟ ಅಗತ್ಯವಿಲ್ಲ ಈ ಕಾಲದಲ್ಲಿ. ಅಲ್ಲಿಯ ಪುರೋಹಿತರು ಬೇಕಾದರೆ ಒಳಗೆ ಅವರಷ್ಟಕ್ಕೆ ಊಟ ಮಾಡಲಿ”
ಮೊದಲಿಗೆ ನಿಲ್ಲಬೇಕಾಗಿರುವುದು ದೇವಾಲಯಗಳಲ್ಲಿರುವ ಪ್ರತ್ಯೇಕ ಪಂಕ್ತಿ ಭೋಜನ.ಅದೊಂದು ನಿಂತರೆ ಅಲ್ಲಿಗೆ ಮಡೆಸ್ನಾನಕ್ಕೂ ಬ್ರೇಕ್ ಬೀಳುತ್ತದೆ.
ಪ್ರತ್ಯೇಕ ಪಂಕ್ತಿಯನ್ನು ಸಂಪ್ರದಾಯದ ಹೆಸರಿನಲ್ಲಿ ಬೆಂಬಲಿಸುವವರಿಗೆ,ಸಂಪ್ರದಾಯ ಅನ್ನುವುದು ನಿಮ್ಮ ನಿಮ್ಮ ಮನೆಯಲ್ಲಿರಲಿ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಡಿ ಅಂತೇಳಬೇಕಿದೆ.ಕನಿಷ್ಠ ಜೊತೆಗೆ ಕೂತು ಊಟ ಮಾಡಲಾಗದಿದ್ದರೆ ಸಮಾನತೆ/ಸಾಮರಸ್ಯ ಅಂತೆಲ್ಲ ಮಾತನಾಡುತ್ತ “ನಾವೆಲ್ಲ ಹಿಂದೂ-ನಾವೆಲ್ಲ ಒಂದು” ಅನ್ನಬಾರದು.ಹಾಗೇ ಅನ್ನುತ್ತಲೇ “ಹಿಂದೂ”ಗಳನ್ನು “ಹಿಂದ”ಕ್ಕೆ ತಳ್ಳಬಾರದಲ್ಲವೇ?
ಚಿತ್ರ ಕೃಪೆ : daijiworld.com





ಶ್ರೀ ರಾಜೇಶ್ ಶೆಟ್ಟಿಯವರ ನಿಲುವು – ‘ಪ್ರತ್ಯೇಕ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು – ವಿಚಾರಾರ್ಹವಾಗಿದೆ. ಅಂತೆಯೇ ಉಡುಪಿ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ಮಡೆ ಸ್ನಾನ ನಿಲ್ಲುವುದು ಎಂಬ ಅವರ ಲೇಖನದ ಉಲ್ಲೇಖ ವಾಕ್ಯವೂ ವಿಚಾರಪೂರಿತವೇ. ಸುಪ್ರೀಂಕೋರ್ಟ್ ತೀರ್ಪಿನ ನಂತರದ ಬೆಳವಣಿಗೆ ಮತ್ತು ಸಂಭ್ರಮಾಚರಣೆಗಳು ಇದಕ್ಕೆ ಸಾಕ್ಷಿಯಾಗಿವೆ. ಇಂತಹ ನಂಬಿಕೆಗಳು ಮಲೆಕುಡಿಯರಂತಹ ಜನಾಂಗಗಳಲ್ಲಿ ಎಷ್ಟು ಬಲವಾಗಿವೆ ಎಂಬುದರ ಮೇಲೆ ಇಂತಹ ಅರ್ಠವಿಲ್ಲದ ಸಂಪ್ರದಾಯಗಳ ಮುಂದುವರಿಕೆ ನಿರ್ಭರವಾಗಿವೆ. ಶ್ರೀ ರಾಜೇಶ್ ಶೆಟ್ಟಿಯವರ ಬ್ರಾಹ್ಮಣರಿಗೆ ಪ್ರತ್ಯೇಕ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು ಎಂಬುದು ಅವರ ಮಹದಾಶೆಯಂತೆಯೇ ಕಾಣುತ್ತದೆ ಕಾರಣ ಹಾಗೊಮ್ಮೆ ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಭೋಜನ ನಿಲ್ಲಿಸಿದಲ್ಲಿ ಆಗ ಇಂತಹ ಹಿಂದುಳಿದ ಜನಾಂಗದ ಜನಗಳೇ ಬ್ರಾಹ್ಮಣರನ್ನು ಕರೆಸಿ ಪ್ರತ್ಯೇಕ ಊಟ ಹಾಕಿ ಮಡೆ ಸ್ನಾನಕ್ಕೆ ಮುಂದಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಮೂಲ ಕಾರಣ ಅಂಥ ಹಿಂದುಳಿದ ಜನಾಂಗಗಳಲ್ಲಿರುವ ವಿದ್ಯೆ ಮತ್ತು ವಿಚಾರವಂತಿಕೆಗಳ ಕೊರತೆಯೇ. ಮೂಢನಂಬಿಕೆಗಳು ಮುಂದುವರೆಯುವವರೆಗೂ ಇಂತಹ ಅರ್ಥಹೀನ ಸಂಪ್ರದಾಯಗಳು ಮುಂದುವರೆಯುವು ಸಹಜ.
ನಿಜವಾದ ಒಂದು ಪರಿಹಾರವನ್ನು ಮುಂದಿಟ್ಟಿದ್ದಿರಿ . ನಮ್ಮ ಹಿಂದುಗಳಲ್ಲಿ ಒಂದು ಎಂಬ ಭಾವನೆ ಬರುವ ತನಕ ಇಂತಹ ಅನಿಷ್ಟ ನಿಲ್ಲುವುದು ಕಷ್ಟವೇ ಸರಿ . ಬ್ರಾಹ್ಮಣ ವರ್ಗ ಇಷ್ಟೊಂದು ಶಿಕ್ಷಿತರಾದ ಮೇಲೂ ಇಂತಹದೊಂದು ಅನಿಷ್ಟ ಕ್ಕೆ ಬೆಂಬಲ ನೀಡುತ್ತಿರುವುದು ವಿಷಾಧನೀಯ.
nice article rakesh
ಜಾತಿ ಅತೀಯರು ಇದರ ಬಗ್ಗೆ ಸುಮ್ನಾಗ್ಬಿಟ್ಟವ್ರೆ ಯಾಕೋ….
ಖಂಡಿತ ನೀವು ಹೇಳಿದಂತೆ ಇಬ್ಬರಲ್ಲೂ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ನೀವು ಹೇಳಿದ ಪರಿಹಾರ ಸಂಪೂರ್ಣ ಪ್ರಾಕ್ಟಿಕಲ್ ಆಗಿದೆ. ಮಡೆಸ್ನಾನ ನಿಷೇಧಕ್ಕಿಂತ ಮೊದಲು ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಯನ್ನು ಎಲ್ಲ ದೇವಸ್ಥಾನಗಳಲ್ಲಿ ನಿಷೇಧಿಸುವ ಅಗತ್ಯ ಇದೆ.
ನಮ್ಮ ವಿರೋಧಿಗಳು ವಿರೋಧಿಸಿದರೆ ನಾವು ಅದನ್ನು ಸಮರ್ಥಿಸಿಕೊಳ್ಳಬೇಕು ಅನ್ನೋ ಮನಸ್ಥಿತಿ ನಮ್ಮವರಲ್ಲಿ ಇತ್ತೀಚಿಗೆ ಜಾಸ್ತಿ ಆದಾ ಹಾಗೇ ಕಾಣುತಿದೆ. ನಮ್ಮ ತಪ್ಪು ಏನಾದರೂ ಇದ್ರೆ, ವಿರೋಧಿಗಳಿಗೆ ವಿರೋಧಿಸಲು ಅವಕಾಶ ಸಿಗದ ಹಾಗೇ ನಾವು ಮೊದಲಿಗೆ ತಿದ್ದಿಕೊಳ್ಳೋಣ. ಹೈಕೋರ್ಟ್ ಉಂಡು ಬಿಟ್ಟ ಎಂಜಲೇಲೆ ಬೇಡ ಬದಲಿಗೆ ದೇವರಿಗೆ ಅರ್ಪಿಸಿದ ನೈವೇದ್ಯ ದ ಪ್ರಸಾದ ವಿಡಿ. ಅವರ ಮೇಲೆ ಅವರು ಉರುಳು ಸೇವೆ ಮಾಡಲಿ ಎಂದು ಹೇಳಿದರೂ ಅದನ್ನು ಗೌರವಿಸದೇ,ಪ್ರತಿಷ್ಠೆ ಯಾಗಿ ತೆಗೆದುಕೊಂಡು ನಮ್ಮ ಎಂಜಲೇಲೇ ಮೇಲೆ ಉರುಳು ಸೇವೆ ಮಾಡಲಿ ಮಾಡಲಿ ಎನ್ನುವದು ಹಟಮಾರಿ ಧೋರಣೆ ಅಲ್ಲವೇ. ದೇವರಿಗೆ ಅರ್ಪಿಸಿದ ನೈವೇದ್ಯ ದ ಪ್ರಸಾದಕಿಂತ ಇವರ ಎಂಜಲೆಲೆ ಶ್ರೇಷ್ಟವೇ ?
“ಮಡೆಸ್ನಾನದಲ್ಲಿ ಮುಖ್ಯವಾಗಿ ಕಾಣುವುದು ಇಬ್ಬರು.ಒಂದು ತಾವು ತಿಂದು ಬಿಟ್ಟ ಎಲೆಯಲ್ಲಿ ಜನ ಬಿದ್ದು ಹೊರಳಾಡುತ್ತಾರೆ ಅಂತ ತಿಳಿದೂ ತಿಳಿದು ಉಣ್ಣುವ ಬ್ರಾಹ್ಮಣರು ಮತ್ತು ತಮ್ಮ ನಂಬಿಕೆ(ಹೆದರಿಕೆ)ಗಾಗಿ ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರು. ”
ಸರಿಯಾಗಿ ಹೇಳಿದಿರಿ, ರಾಕೇಶ್! ಎರಡೂ ಕಯ್ ಸೇರಿದರೇ ಚಪ್ಪಾಳೆ! ಉರುಳುವವರಿಗಾದರೋ ಹಿಂದುಳಿದ ಅರಿವುಗೆಟ್ಟವರು ಎಂಬ excuse ಇದೆ. ಎಂಜಲೆಲೆಗಳನ್ನು ಬಿಟ್ಟೆದ್ದು ನಡೆಯುವ ಮುಂದುವರಿದವರಿಗೆ ಯಾವ ಸಮರ್ತನೆ ಇದೆ?
hindu navella ondu antha hindakke thalludilla e acharane adu nivu andukondirudu swami……….namma acharane, sampradaya, paddthi….hindugale mathra bere darmadavarige avakashailla namma darmada bagge thale kediskollu agathya adarmariya nasthikargilla.devasthana andre adu hindu darmakke sambanda pattiddu adu sarvajanika stala alla.avarvara sampradaya acaristhare adrinda nimgenu thondre.paddathiyanna anusarisi barudu namma darma.nimma nimma parchathya shaili nimmathra erali adara agathya namagilla.