ಯು ಟರ್ನ್ ತೆಗೆದುಕೊಂಡ ಸ್ತ್ರೀ ವಾದಿಗಳು !
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ಎಸ್ ಎಲ್ ಭೈರಪ್ಪ ಅವರ “ಕವಲು” ಕಾದಂಬರಿ ಪ್ರಕಟವಾದಾಗ ಸುಮಾರು ಎರಡು ಮೂರು ತಿಂಗಳು ಪತ್ರಿಕೆಗಳಲ್ಲಿ ಎಡಬಿಡದೆ ವಾದ-ವಿವಾದಗಳ ಸುನಾಮಿ! ಜತೆಗೆ ಸ್ತ್ರೀ-ಪುರುಷ ಎಂಬ ಭೇದ ಭಾವ ಇಲ್ಲದೆ ಎಲ್ಲಾ ಸ್ತ್ರೀವಾದಿ ಸಾಹಿತಿಗಳು “ಕವಲು”ಕಾದಂಬರಿ ಸ್ತ್ರೀ ವಿರೋಧಿ ಎಂದು ಟೀಕಿಸಿದ್ದೆ ಟೀಕಿಸಿದ್ದು. ಭೈರಪ್ಪನವರ ವಿರೋಧಿ ಬಣಕ್ಕಂತೂ ಹೊಸ ಅಸ್ತ್ರ ಸಿಕ್ಕಿತು. ಸುಮಾರು ೫೦ ವರ್ಷಗಳಿಂದ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿರುವ ಕಾದಂಬರಿಯಿಂದ ಕಾದಂಬರಿಗೆ ಬೆಳೆಯುತ್ತಿರುವ ಭೈರಪ್ಪನವರನ್ನು ನಮ್ಮ ಅಕಾಡೆಮಿಕ್ ವಲಯದ ಧೀಮಂತರುಗಳು ತಮ್ಮ ಪರಿಧಿಯಿಂದ ಹೊರಗೆ ಇಟ್ಟಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ. ನನ್ನ ಹಿರಿಯ ಸ್ನೇಹಿತರೂ ವಿಮರ್ಶಕರೂ ಮತ್ತು ಕಾಲೇಜೊಂದರಲ್ಲಿ ಕನ್ನಡದ ಪ್ರಾಧ್ಯಾಪಕರೂ ಆಗಿರುವ ಒಬ್ಬರು ಸ್ನಾತಕೋತ್ತರ ಕನ್ನಡದ ಸಿಲಬಸ್ಸಿನಲ್ಲಿ ಭೈರಪ್ಪನವರ ಬಗ್ಗೆ ಒಂದು ಪುಟದಷ್ಟೂ ಮಾಹಿತಿಗಳಿಲ್ಲ ಎಂದು ತಿಳಿಸಿದ್ದರು.ಈ ಮಾತು ಹೇಳಿ ಮೂರ್ನಾಲಕ್ಕು ವರ್ಷಗಳು ಕಳೆಯಿತು. ಈಗ ಪರಿಸ್ಥಿತಿ ಬದಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಿರುವವರು ಹೇಳಬೇಕು.
ಈ ಪೀಠಿಕೆಗೆ ಮುಖ್ಯ ಕಾರಣ ೨೬ ಆಗಷ್ಟ್ ೨೦೧೩ರ ಕನ್ನಡಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ “ಪುರುಷರ ಆತ್ಮಹತ್ಯೆಗೆ ಮಹಿಳೆಯರೇ ಕಾರಣ” ಎಂಬ ಸುದ್ದಿ. ಇದೇನೂ ಮುದ್ರಾರಾಕ್ಷಸನ ಹಾವಳಿಯಿಂದಾದ ತಪ್ಪು ಸುದ್ದಿಯಲ್ಲ. ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆಯ ಸುದ್ದಿ. ಈ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ಅವರು ಎಲ್ಲಾ ವರ್ಗದ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚಲು ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ ಕಾರಣ ಎಂದಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳೇ ಇದಕ್ಕೆ ಉದಾಹರಣೆ ಎಂದೂ ಹೇಳಿದ್ದಾರೆ.
ಮತ್ತಷ್ಟು ಓದು 
ಸಾ ನಿಗಮ..ಪಾದ ನೀ ಸಾ?
– ತುರುವೇಕೆರೆ ಪ್ರಸಾದ್
ಎಂಎಲ್ಎ ಮುಳ್ಳಪ್ಪನವರ ಏಕಮಾತ್ರ ಪುತ್ರಿ ಪದ್ಮಾವತಿ ‘ಸ…’ ಎಂದು ಬಾಯಿ ತೆರೆದಾಗ ಸಂಗೀತ ಮೇಷ್ಟ್ರು ಶಾಮಾ ದೀಕ್ಷಿತರು ‘ಸ್ವಲ್ಪ ಎಳೆಯಮ್ಮ..’ ಎಂದರು. ಕೂಡಲೇ ಪದ್ಮಾವತಿ ಬಾಯಲ್ಲಿದ್ದ ಚೂಯಿಂಗ್ ಗಮ್ನ ದೀಕ್ಷಿತರ ಮೂತಿಗೇ ಬರುವಂತೆ ಎಳೆದಾಗ ದೀಕ್ಷಿತರು ಅಸಹ್ಯದಿಂದ ಮುಖ ಹಿಂಡಿದರು. ‘ ಎಳೆಯೋದು ಅಂದ್ರೆ ಈ ಸುಡುಗಾಡು ಚೂಯಿಂಗ್ಗಮ್ನಲ್ಲ..ಸ್ವರನಮ್ಮ..’ ಎಂದರು ಅಸಹನೆಯಿಂದ. ಪದ್ಮಾ ತಾರಕ ಸ್ವರದಲ್ಲಿ ‘ ಸಾ…’ ಎಂದು ಬೊಬ್ಬೆ ಹೊಡೆದಾಗ, ಆ ಕರ್ಕಶ ಸ್ವರ ಕೇಳಲಾಗದೆ ‘ಶಿವ ಶಿವಾ’ಎಂದು ಕಿವಿ ಮುಚ್ಚಿಕೊಂಡರು.’ಅಷ್ಟೊಂದು ಎಳೀಬಾರದಮ್ಮ..’ ಎಂದು ಕಿವಿಯಲ್ಲಿ ಬೆರಳಿಟ್ಟುಕೊಂಡೇ ಬೇಡಿಕೊಂಡರು. ಪದ್ಮಾವತಿ ತಲೆಯಾಡಿಸಿ ದೀಕ್ಷಿತರ ಮುಖಕ್ಕೇ ಕೆಮ್ಮಿ, ಕ್ಯಾಕರಿಸಿ ಕಾಫಿ ಎಂಬ ಕಲಗಚ್ಚು ಹೀರಿ ಗಂಟಲು ಹದಮಾಡಿಕೊಂಡು ಬರಲು ಒಳಗೆ ಹೋದಳು. ದೀಕ್ಷಿತರು ಧೋತರದಿಂದ ಪದ್ಮಾವತಿ ಉಗಿದಿದ್ದನ್ನು ಒರೆಸಿಕೊಂಡು ನಿಟ್ಟುಸಿರಿಟ್ಟರು.
ಪಾಪ್, ರ್ಯಾಪ್, ರಾಕ್ ಅಬ್ಬರದಲ್ಲಿ ದೀಕ್ಷಿತರ ಶಾಸ್ತ್ರೀಯ ಸಂಗೀತ ಔಟ್ ಡೇಟೆಡ್ ಆಗಿಹೋಗಿತ್ತು. ಮನೆಯೊಳಗಿನ ಹೆಂಡತಿ ಮಕ್ಕಳೆಂಬ ಪಕ್ಕ ವಾದ್ಯಗಳ ಮಧ್ಯೆ ದೀಕ್ಷಿತರಿಗೆ ಮುತ್ತಯ್ಯ ದೀಕ್ಷಿತರ ಕೀರ್ತನೆಯನ್ನು ಮೆಲುಕು ಹಾಕಲೂ ಅವಕಾಶವಿರಲಿಲ್ಲ. ರಾಮನವಮಿ, ಶಂಕರ ಜಯಂತಿ ಮುಂತಾದ ಸಮಾರಂಭಗಳಲ್ಲಿ ಲೈಟ್ ಮ್ಯೂಸಿಕ್ ಎಂದು ಬಳ್ಳಿ ನಡುವಿನ ಲತಾಂಗಿ ಸ್ಟೇಜ್ ಹತ್ತಲು ಶುರುಮಾಡಿದ ಮೇಲಂತೂ ದೀಕ್ಷಿತರ ಆಲಾಪನೆಯನ್ನು ಕೇಳುವವರೇ ಇಲ್ಲದಾಗಿ ಹೋಯಿತು. ಅಸ್ತಮಾದಿಂದ ದೀಕ್ಷಿತರು ಅನವರತ ಗೊರ ಗೊರ ಎನ್ನುವಂತೆ ತಿದಿಯೊತ್ತಿದರೆ ಅವರ ಹಾರ್ಮೊನಿಯಂ ಪೆಟ್ಟಿಗೆಯೂ ಬುಸ ಬುಸ ಎಂದು ನಿಟ್ಟುಸಿರುಬಿಡುತ್ತಿತ್ತು. ದೀಕ್ಷಿತರು ಇಂತಹ ಸಂಕಷ್ಟ ಸಮಯದಲ್ಲಿ ಎಂಎಲ್ಎ ಮುಳ್ಳಪ್ಪನವರ ಮಗಳು ಪದ್ಮಾವತಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿತ್ತು. ತಾನೂ ಫಿಲಂ ಸ್ಟಾರ್ ರಮಯಾ ತರ ಆಗುತ್ತೇನೆಂದು ಅಪ್ಪನ ಬೆನ್ನು ಹತ್ತಿದ್ದಳು.




