Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
Artilce 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ
370ನೇ ವಿಧಿಯ ನಿಂದನೆ ಮತ್ತು ಪ್ರಜ್ಞಾಪೂರ್ವಕ ದುರುಪಯೋಗಗಳ ಮೇಲೆ ಗಮನಹರಿಸಿದರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ಸಂಘಾತ್ಮಕ ವಿಷಯಗಳ ಯಾದಿಯಲ್ಲಿ 99ರಲ್ಲಿ 6 ಮತ್ತು ಸಹವರ್ತಿ ಪಟ್ಟಿಯ 52ರಲ್ಲಿ 21 ವಿಷಯಗಳು ಇನ್ನೂ ಹೊರಪಟ್ಟಿರುವುದು ಗೋಚರವಾಗುತ್ತದೆ. ಜಮ್ಮು ಕಾಶ್ಮೀರದ ಪ್ರಮಾಣ ವಚನದ ಪಠ್ಯ ಉಳಿದವುಗಿಳಿಗಿಂತ ಭಿನ್ನವಾಗಿದೆ. ರಾಜ್ಯದ ಶಾಸನಸಭೆಯ ಕಾಲಾವಧಿ ಅರು ವರ್ಷ. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಶಬ್ದಗಳಿಗೆ ಜಾಗವಿಲ್ಲ. ಬ್ರಷ್ಟಾಚಾರ ನಿಯಂತ್ರಣ ಕಾಯಿದೆ (Prevention of Corruption) 1988, ಭಾರತೀಯ ದಂಡಸಂಹಿತೆ (Indian Penal Code), ಗೃಹೀಯ ಹಿಂಸಾ ಕಾಯಿದೆ(Domestic Violence Act), ಧಾರ್ಮಿಕ ಸಂಸ್ಥೆ (ದುರುಪಯೋಗ ನಿಯಂತ್ರಣ) ಕಾಯಿದೆ 1988, ಅರಣ್ಯ ಹಕ್ಕು ಕಾಯಿದೆ,ವನ್ಯಜೀವಿ ಸಂರಕ್ಷಣಾ ಕಾನೂನು, ನಗರ ಭೂ ಮಿತಿ ಕಾನೂನು ಇತ್ಯಾದಿಗಳು ಜಮ್ಮು ಕಾಶ್ಮೀರ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಜಮ್ಮು ಕಾಶ್ಮೀರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐನ ಅಧಿಕಾರ ಸೀಮಿತವಾಗಿದೆ, ಅಂದರೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ದಾಖಲಾದ ದೂರಿನ ಮೇಲೆ ತನಿಖೆ ನಡೆಸಲು ಸಿಬಿಐ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ರಾಜ್ಯಕ್ಕೆ ಸಂಭಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಕಾನೂನು ವ್ಯಾಪ್ತಿ ಅಪೀಲಿಗೆ ಮಾತ್ರ ಸೀಮಿತವಾಗಿದೆ ಮತ್ತು ಫೆಡರಲ್ ಕೋರ್ಟ ಆಗಿ ಕಾರ್ಯನಿರ್ವಹಿಸುವ ಅಧಿಕಾರ ಮೊಟಕುಗೊಂಡಿದೆ.
ಕಡೆಯಪಕ್ಷ ರಾಜ್ಯದ ಜನತೆಗೆ 370ನೇ ವಿಧಿಯು ನಿಜವಾಗಿ ಹಿತಕಾರಿಯಾಗಿದೆಯೇ? ಎನ್ನುವುದನ್ನು ವಿಶ್ಲೇಷಿಸಿದರೆ, ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಜನ ಪ್ರತಿನಿಧಿ ಕಾಯಿದೆ (People representation act 1950) ರಾಜ್ಯಕ್ಕೆ ಅನ್ವಯವಾಗದೇ ಇರುವುದರಿಂದ ಚುನಾವಣಾ ಕ್ಷೇತ್ರಗಳ ಮರುವಿಂಗಡನೆಯನ್ನು ಜಾರಿಗೆ ತರುವ ಯಾವುದೇ ಅಧಿಕಾರ ಕೇಂದ್ರಕ್ಕೆ ಇರುವುದಿಲ್ಲ. 2002ರಲ್ಲಿ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಕ್ಷೇತ್ರ ಪುನರ್ವಿಂಗಡನೆಯನ್ನು ಕೈಗೊಳ್ಳಲಾಯಿತು. ಕೆಲವು ಆಯ್ದ ಪ್ರದೇಶಗಳ ಹಿತಾಸಕ್ತಿಗನುಗುಣವಾಗಿ 370ನೇ ವಿಧಿಯ ದುರುಪಯೋಗ ನಡೆದಿದೆ.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
– ಮು.ಅ ಶ್ರೀರಂಗ, ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ 
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ದಾಟು ಕಾದಂಬರಿಯ ಬಗ್ಗೆ :
ಮುಖಾಮುಖಿ-೨ರಲ್ಲಿ ವಂಶವೃಕ್ಷ ಮತ್ತು ಸಂಸ್ಕಾರ ಕಾದಂಬರಿಗಳ ಬಗ್ಗೆ ನಾನು ಬರೆದ ಲೇಖನಕ್ಕೆ (ನಿಲುಮೆ–೧೫-೧೧-೧೩) ಓದುಗರು ಪ್ರತಿಕ್ರಿಯಿಸುವಾಗ”ದಾಟು” ಕಾದಂಬರಿಯ ಕೆಲವು ಅಂಶಗಳನ್ನು ತಿಳಿಸಿದ್ದರು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಮುಂದುವರಿಯುವುದು ಉತ್ತಮ ಎಂದು ಭಾವಿಸಿದ್ದೇನೆ. ಭೈರಪ್ಪ ಮತ್ತು ಅನಂತಮೂರ್ತಿಯವರ ವಂಶವೃಕ್ಷ -ಸಂಸ್ಕಾರ ಹಾಗು ದಾಟು-ಭಾರತೀಪುರ ಕಾದಂಬರಿಗಳ ವಸ್ತುವಿನಲ್ಲಿ ಕೆಲವು ಸಾಮ್ಯತೆಗಳಿವೆ. ಇವುಗಳ ತೌಲನಿಕ ಓದಿನಿಂದ ಕನ್ನಡದ ಈ ಇಬ್ಬರು ಮಹತ್ವದ ಸಾಹಿತಿಗಳಲ್ಲಿ ಸಾಮಾನ್ಯವಾದ (common ಎಂಬ ಅರ್ಥದಲ್ಲಿ ) ಒಳನೋಟಗಳು ಏನಾದರೂ ಇವೆಯೇ ಎಂಬುದನ್ನು ತಿಳಿಯಬಹುದು . ಇದನ್ನು ನಿಲುಮೆಯ ಓದುಗರು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜತೆಗೆ ಧರ್ಮ,ರಿಲಿಜನ್,ಒರಿಯಂಟಲಿಸಂನ ಪುನರುತ್ಪಾದನೆ,ಬ್ರಾಹ್ಮಣ ಪುರೋಹಿತಶಾಹಿ,ಸೆಕ್ಯುಲರಿಸಂ ……. ಈ ಮಾತುಗಳೂ ಬಂದಿವೆ. ಕಾದಂಬರಿಯೊಂದನ್ನು ಈ ರೀತಿಯ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ವಿಮರ್ಶಿಸುವುದು ಅನಿವಾರ್ಯವೇ?ಅವಶ್ಯವೇ?ಎಂಬುದು ಮುಖ್ಯವಾದ ಪ್ರಶ್ನೆ. ಕಾದಂಬರಿಯೊಂದನ್ನು ಸಾಹಿತ್ಯ ವಿಮರ್ಶೆಯ ಪರಿಧಿಯೊಳಗೆ ಚರ್ಚಿಸುವುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಜತೆಗೆ ಉತ್ತಮ ಸಾಹಿತ್ಯ ಕೃತಿಯ ವಿಮರ್ಶೆಯ ಪರಿಕರಗಳು ಆ ಕೃತಿಯ ಒಳಗೇ ಅಡಕವಾಗಿರುತ್ತದೆ ಎಂಬ ಒಂದು ಮಾತಿದೆ. ಹೀಗಾಗಿ ಸಾಹಿತ್ಯೇತರ ಪರಿಕರಗಳಿಂದ ಒಂದು ಕಾದಂಬರಿಯ ಗುಣ-ದೋಷಗಳನ್ನು ಪಟ್ಟಿಮಾಡುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ವಿವರವಾಗಿ ಬರೆಯಲು ಸದ್ಯದ ಮುಖಾಮುಖಿಗೆ ನಾನು ಹಾಕಿಕೊಂಡಿರುವ ಮಿತಿ ಅಡ್ಡ ಬಂದಿದೆ. ಸಾಧ್ಯವಾದರೆ ಮುಖಾಮುಖಿ ಲೇಖನಮಾಲೆಯ ಕೊನೆಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.
ಮತ್ತಷ್ಟು ಓದು 
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
ಹದಿಮೂರು ವರ್ಷದ ವಿಪುಲ್ ಕೌಲ್ ಜಮ್ಮು ಕಾಶ್ಮೀರ ರಾಜ್ಯದ ಲೋಕೋಪಯೋಗಿ ಇಲಾಖೆಯ ನಾಲ್ಕನೇ ವರ್ಗದ ನೌಕರರೊಬ್ಬರ ಮಗ. ಹಲವು ವ್ಯಾಧಿಗಳಿಂದ ಬಳಲುತ್ತಿರುವ ವಿಪುಲ ಅವನ ಕುಟುಂಬ ತನ್ನ ಭವಿಷ್ಯವನ್ನೇ ಬಲಿಕೊಟ್ಟು ಕೊಡಿಸುತ್ತಿರುವ ಚಿಕಿತ್ಸೆಯ ಕಾರಣದಿಂದಾಗಿ ಇಂದು ಬದುಕಿದ್ದಾನೆ. 2001ರಲ್ಲಿ ಆತನ ಕುಟುಂಬದವರು ಸಹಾಯಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ಅಂತೆಯೇ ಅವರಿಗೆ 20ಲಕ್ಷ ರೂ ಸಹಾಯ ಧನದ ಭರವಸೆಯನ್ನು ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಸಹಾಯ ನಿಂತುಹೋಯಿತು. ತತ್ಕಾಲಕ್ಕೆ ಗೃಹ ಮಂತ್ರಾಲಯ ಮಧ್ಯಪ್ರವೇಶಿಸಿ ನೆರವನ್ನು ಮುಂದುವರಿಸುವಂತೆ ಸೂಚಿಸಿತು. ಇಷ್ಟಾದ ಮೇಲೂ ಅವರಿಗೆ ದೊರಕಿದ್ದು ದಿ 24 ಜುಲೈ 2007ರ ಒಂದು ಪತ್ರ, ಪತ್ರದ ಒಕ್ಕಣೆಯಲ್ಲಿ “ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಕಾಶ್ಮೀರ ಸರ್ಕಾರ ಗೃಹ ಮಂತ್ರಾಲಯದ ಸೂಚನೆಯನ್ನು ಪಾಲಿಸುವ ಬಾಧ್ಯತೆಯನ್ನು ಹೊಂದಿರುವುದಿಲ್ಲ.” ಎಂದು ಉಲ್ಲೇಖಿಸಲಾಗಿತ್ತು !
ಇದೊಂದು 370ನೇ ವಿಧಿಯ ದುರುಪಯೋಗದ ಪ್ರತ್ಯೇಕ ಪ್ರಕರಣವಲ್ಲ. 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗಿನಿಂದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ಸ್ವಾರ್ಥ ಉದ್ಧೇಶಗಳ ಪೂರ್ತಿಗಾಗಿ 370ನೇ ವಿಧಿಯ ನಿಂದನೆ ಮತ್ತು ದುರುಪಯೋಗ ಮತ್ತೆ ಮತ್ತೆ ನಡೆಯಲ್ಪಟ್ಟಿದೆ.
ಆಗಿನ ತುರ್ತು ಸನ್ನಿವೇಶಕ್ಕೆ ಹಂಗಾಮಿ ಏರ್ಪಾಡಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು. ಜಮ್ಮು ಕಾಶ್ಮೀರದ ಮೇಲೆ ಆಕ್ರಮಣವೆಸಗಿದ್ದ ಪಾಕಿಸ್ತಾನ ರಾಜ್ಯದ ಭೂಭಾಗವನ್ನು ನ್ಯಾಯಬಾಹಿರವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲಾಗಿ ವಿಶ್ವಸಂಸ್ಥೆಯ ಭದ್ರತಾ ಮಂಢಳಿಯು ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿತು. ಆ ಷರತ್ತುಗಳೆಂದರೆ ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ತಾನು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ತಗೆದುಹಾಕಬೇಕು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು.
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
– ಮು.ಅ ಶ್ರೀರಂಗ,ಬೆಂಗಳೂರು
(“ನಿಲುಮೆ”ಯಲ್ಲಿ ೧೦-೧೦-೨೦೧೩ರಂದು ಪ್ರಕಟವಾದ ‘ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧‘ ಲೇಖನದ ಎರಡನೇ ಭಾಗ)
ವಂಶವೃಕ್ಷ ಮತ್ತು ಸಂಸ್ಕಾರ
—————————-
ಭೈರಪ್ಪನವರ ಮುಖ್ಯ ಕಾದಂಬರಿಗಳಲ್ಲಿ ಒಂದಾದ “ವಂಶವೃಕ್ಷ”ದ ವಸ್ತು,ಪಾತ್ರಗಳು,ಕಾದಂಬರಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ನಮ್ಮ ವಿಮರ್ಶಕರು ಈಗಾಗಲೇ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ; ವಿವೇಚನೆ ನಡೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆ ಕಾದಂಬರಿಯ ಪೂರ್ಣ ವಿಮರ್ಶೆ ನನ್ನ ಉದ್ದೇಶವಲ್ಲ.
“ವಂಶವೃಕ್ಷ”ದ ವಿಮರ್ಶೆಗಳಲ್ಲಿ ಸಹಜವಾಗಿ ಶ್ರೀನಿವಾಸ ಶ್ರೋತ್ರಿ ಮತ್ತು ಅವರ ಸೊಸೆ ಕಾತ್ಯಾಯನಿಯ ಜೀವನದಲ್ಲಿ ಅವರುಗಳು ಎದುರಿಸಬೇಕಾಗಿ ಬಂದಂತಹ ಸನ್ನಿವೇಶಗಳು ಮತ್ತು ಸಂಘರ್ಷಗಳು ವಿಶೇಷವಾಗಿ ಚರ್ಚೆಗೆ ಒಳಪಟ್ಟಿರುವ ಅಂಶಗಳು. ಶ್ರೋತ್ರಿಯವರು ತಮ್ಮ ಜೀವನಕ್ಕೆ ಸನಾತನ ಧರ್ಮವನ್ನು ಅಧಾರವನ್ನಾಗಿಟ್ಟುಕೊಂಡವರು. ಅದರಲ್ಲಿ ನಂಬಿಕೆಯಿಟ್ಟವರು. ಆದರೆ ಕರ್ಮಠರಲ್ಲ. ಧರ್ಮದ ಪದಶಃ,ವಾಕ್ಯಶಃ ಅರ್ಥಗಳಿಗೆಗಷ್ಟೇ ಅಂಟಿಕೊಂಡವರಲ್ಲ.ಧರ್ಮದ ಬಗ್ಗೆ ತಮಗಿರುವ ನಂಬಿಕೆ,ವಿಶ್ವಾಸಗಳನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಅವರ ಮಗ ಅಕಾಲ ಮರಣಕ್ಕೆ ತುತ್ತಾದಾಗ ವಿಧವೆಯಾದ ಸೊಸೆ ಕಾತ್ಯಾಯನಿ ಆ ಕಾಲದ(೧೯೨೪ರ ಆಸುಪಾಸಿನದು)ಪದ್ಧತಿಯಂತೆ ಮಡಿ ಹೆಂಗಸು” (ತಲೆಗೂದಲು ತೆಗೆಸುವುದು, ಕೆಂಪು ಸೀರೆ ಉಡುವುದು ಇತ್ಯಾದಿ)ಆಗಲಿಲ್ಲ.
ಬಸವ ಚಳುವಳಿಯನ್ನು ಕಾಡುತ್ತಿರುವ ಸಾಹಿತ್ಯ ಲೋಕದ ಬು(ಲ)ದ್ಧಿ ಜೀವಿಗಳು !
– ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ
ಇಷ್ಟು ದಿನಗಳವರೆಗೆ ಧಾರ್ಮಿಕ ಲೋಕದ ಗುಂಗಾಡುಗಳು ಬಸವಣ್ಣನರನ್ನು ಕಾಡುತ್ತಿದ್ದವು. ಅವರು ರಚಿಸಿದ ವಚನಗಳಿಗೆ ತದ್ವಿರುದ್ಧವಾಗಿ ತಾವು ಬದುಕಿದ್ದಲ್ಲದೆ ತಮ್ಮ ಭಕ್ತರ ಹಿಂಡನ್ನು ತಮ್ಮ ಹಿಂದೆ ಕಟ್ಟಿಕೊಂಡು ಬಸವಾದಿ ಶರಣರಿಗೆ ಸಾಕಷ್ಟು ಅಪಚಾರ ಮಾಡಿದ್ದರು. ಇದೀಗ ಸಾಹಿತ್ಯ ಲೋಕದ ಗುಂಗಾಡುಗಳೂ ತಾವೇನು ಕಡಿಮೆ ಇಲ್ಲ ಎಂದು ಬಸವಣ್ಣನವರನ್ನು ಹಾಗೂ ಅವರು ಬರೆದ ವಚನ ಸಾಹಿತ್ಯವನ್ನು ಪರಾಮರ್ಶಿಸುವ ಎಗ್ಗತನ ತೋರುತ್ತ, ಇಲ್ಲ ಸಲ್ಲದ ಕುಯುಕ್ತಿಗಳನ್ನು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಬಸವಣ್ಣನವರ ಕುರಿತು ಪರಾಮರ್ಶಿಸುವ ಬುದ್ದಿವಂತಿಕೆಯನ್ನು ತೋರುತ್ತಿರುವ ಬುದ್ಧಿಜೀವಿ ವೇಷದಾರಿ ಬರಹಗಾರರು ಸಮಯ ಸಿಕ್ಕಾಗಲೆಲ್ಲ ಬಸವಣ್ಣನವರ ಮೇಲೆ ಕೆಸರನ್ನು ಎರಚುತ್ತ ತಾವು ದೊಡ್ಡವರಾಗಬೇಕೆಂಬ ಹುನ್ನಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವಸಂಗತಿಯೆ ಆಗಿದೆ.
ಹಿಂದೊಮ್ಮೆ ಗುಲ್ಬರ್ಗಾದ ಕಪಟರಾಳ ಕೃಷ್ಣರಾವ್ ಎಂಬ ಸಂಶೋಧಕನೋರ್ವ ಅನುಭವ ಮಂಟಪವೇ ಇಲ್ಲ ಎಂದು ಸಂಶೋಧಿಸಿ ಹೇಳಿದ್ದ. ಆಗ ಲಿಂಗಾಯತ ಧರ್ಮದವರೆಂದು ಸೋಗುಹಾಕಿರುವ ಸೋಗಲಾಡಿ ಗುರು- ಜಗದ್ಗುರುಗಳೆಲ್ಲ ತಮ್ಮ ತುಟಿಗಳನ್ನು ಹೊಲಿದುಕೊಂಡು ತೆಪ್ಪಗಿದ್ದರು. ಅರೆಬರೆ ಜ್ಞಾನದ ಲಿಂಗವಂತ ಸಮಾಜದ ಜನಗಳು ‘ನಮಗೂ ಬಸವಣ್ಣನವರಿಗೂ ಯಾವ ಬಾದರಾಯಣ ಸಂಬಂಧ ?’ ಎಂದುಕೊಂಡು ಕಪಟರಾಳರ ಕಪಟತನವನ್ನು ಪ್ರಶ್ನಿಸಲು ಹೋಗಲಿಲ್ಲ. ಈಗೀಗ ಬುದ್ದಿಜೀವಿಗಳೆಂದು ತಮ್ಮಷ್ಟಕ್ಕೆ ತಾವೇ ಕರೆದುಕೊಂಡಿರುವ ಕೆಲವು ಸೋಕಾಲ್ಡ ಜನಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಸಂಶೋಧಿಸುತ್ತಿದ್ದೇವೆ ಎಂಬ ನೆವದಲ್ಲಿ ಸಾಕಷ್ಟು ಘಾಸಿಯನ್ನುಂಟುಮಾಡಿದ್ದಾರೆ. ‘ಮಹಾಚೈತ್ರ’ ಕೃತಿಯ ಮೂಲಕ ಎಚ್.ಎಸ್. ಶಿವಪ್ರಕಾಶ, ‘ಆನುದೇವ ಹೊರಗಣದವನು’ ಪುಸ್ತಕದ ಮೂಲಕ ಬಂಜಗೇರಿ ಜಯಪ್ರಕಾಶ, ‘ಧರ್ಮಕಾರಣ’ದ ಮೂಲಕ ಪಿ.ವಿ.ನಾರಾಯಣ ಮುಂತಾದವರು ತಮ್ಮ ಮೂಗಿನ ನೇರಕ್ಕೆ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಈಗಾಗಲೇ ಮೂತಿಗೆ ಇಕ್ಕಿಸಿಕೊಂಡಿದ್ದಾರೆ.
ಆದರೂ ಇತ್ತೀಚೆಗೆ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ಮಹಾಶಯರುಗಳು ವಚನಕಾರರು ಜಾತಿ ವಿರೋಧಿಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ ಎಂದೂ ಜೊತೆಗೆ ಅದು ಬ್ರಾಹ್ಮಣ ವಿರೋಧಿ ಚಳುವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೆಲವು ಜನ ಸೋಕಾಲ್ಡ ಬು(ಲ)ದ್ದಿ ಜೀವಿಗಳು ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದು ಅವರ ಎಬಡತನಕ್ಕೆ ಸಾಕ್ಷಿಯಾಗಿದೆಯೆಂದರೂ ತಪ್ಪಾಗುವುದಿಲ್ಲ.
CSLC ಯ ಸಂಶೋಧನೆ ಮತ್ತು ಪ್ರಗತಿಪರರ ಫ್ಯಾಸಿಸ್ಟ್ ಧೋರಣೆ
ಅಲ್ಲಿಯವರೆಗೂ ಸುಖಾ ಸುಮ್ಮನೆ ಭೂಮಿಯ ಸುತ್ತ ಗಿರಕಿ ಹೊಡೆಯುತಿದ್ದ ಸೂರ್ಯನಿಗೆ ಸುತ್ತುವುದರಿಂದ ಮುಕ್ತಿ ಕೊಡಿಸಿ,’ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ’ ಅಂದವನು ಕೋಪರ್ನಿಕಸ್. ಅವನ ಕೆಲಸವನ್ನ ಮುಂದುವರಿಸಿದವರು ಗೆಲಿಲಿಯೋ ಮತ್ತು ಬ್ರುನೋ.ಈ ಮೂವರು ಬರುವವರೆಗೂ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಅಂತಲೇ ಜನರು ನಂಬಿದ್ದರು.ಅದೇ ಜನರ ಮಧ್ಯದಿಂದ ಎದ್ದು ಬಂದು,’ಇಲ್ಲ ಸ್ವಾಮಿ ಭೂಮಿಯೇ ಸುತ್ತೋದು’ ಅಂದಿದ್ದ ಕೋಪರ್ನಿಕಸ್ ಅದೇ ಜನರಿಂದ ಹುಚ್ಚ ಅನ್ನಿಸಿಕೊಂಡಿದ್ದ.ಅವನ ನಂತರ ಬಂದ ಗೆಲಿಲಿಯೋ ಮತ್ತು ಬ್ರುನೋ ಸಹ ಕೋಪರ್ನಿಕಸ್ ವಾದಕ್ಕೆ ಸೈ ಅಂದರು.
ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆ-ತಡೆಗಳು ಎದುರಾಗಬೇಕಲ್ಲವೇ? ಗೆಲಿಲಿಯೋ,ಬ್ರೂನೋಗು ಅದೇ ಆಯಿತು. ಇವರ ಸಂಶೋಧನೆಯಿಂದ ಕನಲಿ ಕೆಂಡವಾದ ಪೋಪ್ ಎಂಟನೇ ಅರ್ಬನ್,“Heliocentric System” ಅನ್ನುವುದೇ ಸುಳ್ಳು ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡಿಸಿ, ಅವರಿಬ್ಬರ ಸಂಶೋಧನೆಗೂ ನಿರ್ಬಂಧವನ್ನೂ ಹೇರಿದರು.
ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು.1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ.ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ,೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.
ಜಾತಿವ್ಯವಸ್ಥೆ ಇಲ್ಲ ಎಂದರೆ…
-ಡಾ. ಷಣ್ಮುಖ ಮತ್ತು ಡಾ. ಪ್ರವೀಣ
ಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ? ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.
ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು! ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.
ಜಾತಿಯ ಕುರಿತ ನಮ್ಮ ವಾದವನ್ನು ಸರಳವಾಗಿ ಸಾರಾಂಶೀಕರಿಸುವುದಾದರೆ, ಭಾರತದಲ್ಲಿ ವಸಾಹತು ಪೂರ್ವದಿಂದಲೂ ಜಾತಿಗಳಿದ್ದವು, ಈಗಲೂ ಇವೆ.. ಇವುಗಳನ್ನು ಯೂರೋಪಿಯನ್ನರು ತೆಗೆದುಕೊಂಡು ಬಂದರು, ಇಲ್ಲಿ ಸೃಷ್ಟಿ ಮಾಡಿದರು ಎಂಬುದು ಸರಿಯಾದ ವಿವರಣೆಯಲ್ಲ. ಆದರೆ ಭಾರತೀಯ ಸಮಾಜವನ್ನು ನೋಡುವ ಒಂದು ನಿರ್ದಿಷ್ಟ ಚೌಕಟ್ಟನ್ನು ಯೂರೋಪಿಯನ್ನರು ನಿರ್ಮಿಸಿದರು. ಅದುವೇ “ಜಾತಿವ್ಯವಸ್ಥೆ”.
ಹಾಗಾದರೆ, ’ವ್ಯವಸ್ಥೆ’ಎಂದರೇನು? ಅವುಗಳ ಲಕ್ಷಣಗಳಾವುವು ?
ಸಾಮಾಜಿಕ ಸಂಶೋಧನೆ ಯಾಕಾಗಿ?
– ಪ್ರೊ.ಜೆ.ಎಸ್.ಸದಾನಂದ
{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.
ಹೇಗೆ ಹೇಳಲಿ? ಏನು ಹೇಳಲಿ?
– ಪ್ರೊ.ರಾಜಾರಾಮ ಹೆಗಡೆ
ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.
ಸಿದ್ಧಾಂತ ಮತ್ತು ಐಡಿಯಾಲಜಿ ಒಂದೇ ಅಲ್ಲ – “ಗೆಳೆಯ ಫಣಿರಾಜ್ ರವರ ಪತ್ರಕ್ಕೆ ಒಂದು ಪ್ರತಿಕ್ರಿಯೆ”
– ಪ್ರೊ.ಜೆ.ಎಸ್.ಸದಾನಂದ
ನಿಮ್ಮ ಪತ್ರ ಓದಿದ ನಂತರ ಒಂದು ತರದ ಹಿತಕರ ಅನುಭವವಾಯಿತು. ಹಿತಕರ ಏಕೆಂದರೆ ಇದೂವರೆಗೂ ನಮ್ಮ ಬಗ್ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿಗೆ ನಮ್ಮ ಸಂಶೋಧನೆಯ ಹಿಂದಿರುವ ಕುತಂತ್ರ, ಹುನ್ನಾರ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದಷ್ಟೇ ಕಾಣಿಸುತ್ತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನೀವು ನಮ್ಮ ಸಂಶೋಧನೆಯ ಬಗ್ಗೆ ನಿಮಗಿರುವ ಕೆಲವು ಸಂದೇಹಗಳ ಕುರಿತು ತುಂಬಾ (ಸಾಮಾಜಿಕ ಹೋರಾಟದಲ್ಲಿ ಬಹಳ ಕಾಲದಿಂದಲೂ ತೊಡಗಿಸಿಕೊಂಡ ಬದ್ಧತೆಯಿಂದ ಹುಟ್ಟಿದ) ಕಾಳಜಿಯಿಂದ ಚರ್ಚೆ ಮಾಡಲು ಹೊರಟಿದ್ದೀರಿ. ನಮ್ಮ ಉದ್ದೇಶವೂ ಸಹ ನಮ್ಮ ಕೇಂದ್ರದಲ್ಲಿ ಕ್ಯೆಗೊಳ್ಳುತ್ತಿರುವ ಸಂಶೋಧನೆಗಳು ಸಾರ್ವಜನಿಕ ವಿಮರ್ಶೆಗೊಳಪಡಬೇಕು ಮತ್ತು ಅದರ ಪರಿಣಾಮದಿಂದ ನಮಗೂ, ಈ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿರುವ, ಚಿಂತಿಸುತ್ತಿರುವ ಇತರರಿಗೂ ಪ್ರಚಲಿತ ಚಿಂತನೆಯಲ್ಲಿರುವ (ನಮ್ಮದನ್ನೂ ಒಳಗೊಂಡು) ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗಬೇಕು ಎನ್ನುವುದೇ ಆಗಿದೆ.
ನಮ್ಮ ಸಂಶೋಧನಾ ವಿಧಾನದ ಬಗ್ಗೆ ಈಗಾಗಲೇ ಹೇಳಿರುವುದರಿಂದ ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಆದರೆ ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಜಾತಿವ್ಯವಸ್ಥೆ, ಸೆಕ್ಯುಲರಿಸಂ, ಮಡೆಸ್ನಾನ ಇತ್ಯಾದಿಗಳ ಬಗ್ಗೆ ನಾವಾಗಲೀ ಬಾಲುವಾಗಲಿ ಯಾವುದೇ ವ್ಯೆಜ್ಞಾನಿಕ ಸಿದ್ದಾಂತವನ್ನು ಮಂಡಿಸುತ್ತಿಲ್ಲ. ಮುಂದಿನ ಸಂಶೋಧನೆಗಳು ಕ್ಯೆಗೆತ್ತಿಕೊಳ್ಳಬಹುದಾದ ಸಂಶೋಧನಾ ಪ್ರಶ್ನೆಗಳನ್ನಷ್ಟೇ ಮುಂದಿಡುತ್ತಿದ್ದೇವೆ. ಅದರ ಮೊದಲ ಹಂತವಾಗಿ ಅವುಗಳ ಕುರಿತಾಗಿ ಬರೆದ ಲೇಖನಗಳು ಈ ವಿದ್ಯಮಾನಗಳ ಸದ್ಯದ ಗ್ರಹಿಕೆಯ ಸ್ವರೂಪದಲ್ಲಿ ಇರುವ ಸಮಸ್ಯೆಗಳನ್ನು ಮಾತ್ರ ಗುರುತಿಸುವ ಪ್ರಯತ್ನ ಮಾಡುತ್ತವೆ. ನಾವು ಒಪ್ಪಿಕೊಂಡಿರುವ ಲಿಬರಲ್ ಪ್ರಜಾಪ್ರಭುತ್ವ, ಸೆಕ್ಯುಲರರ ಹಾಗೂ ವ್ಯೆಚಾರಿಕ ಸಿದ್ಧಾಂತಗಳ ಚೌಕಟ್ಟಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ಉದ್ಭವಿಸುವ ಸಮಸ್ಯೆಗಳೇನು ಎಂದು ಗುರುತಿಸಲು ಪ್ರಯತ್ನಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಮುಂದೊಂದು ದಿನ ಯಾರಾದರೂ ಸಂಶೋಧನೆ ಕ್ಯೆಗೊಂಡರೆ ನಾವು ಸಮಸ್ಯೆಯನ್ನು ಗುರುತಿಸಿರುವ ವಿಧಾನದಲ್ಲೂ ತಪ್ಪಿದೆ ಎಂದು ತೋರಿಸುವ ಸಾಧ್ಯತೆ ಇದೆ. ಹಾಗಾದಾಗ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ನೀವೇಕೆ ಇಂತಹ ವಿಷಯಗಳನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನಾವು ಖಂಡಿತಾ ಕೇಳುವುದಿಲ್ಲ.





