ಸ್ಥಿರತೆಯತ್ತ… ಸರ್ಕಾರವೋ? ಮಾಧ್ಯಮವೋ?
-ಕಾಲಂ ೯
ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡ ಕಳೆದ ೧೫ ದಿನಗಳ ಘಟನಾವಳಿ ಈಗ ಒಂದು ಮಜಲಿಗೆ ಬಂದು ನಿಂತಂತೆ ಗೋಚರಿಸುತ್ತದೆ.
2008ರ ಚುನಾವಣೆ ನಡೆದಿದ್ದೇ ‘ನನಗಾದ ಅನ್ಯಾಯ’ಕ್ಕೆ. ಜನತೆ ಓಟು ಹಾಕಿದ್ದೇ ನನಗಾದ ಅನ್ಯಾಯ ಸರಿಪಡಿಸಲು. ನನಗೆ ಸಿಕ್ಕ ಜನತಾ ನ್ಯಾಯವನ್ನು ಯಾವ ಹೈಕಮಾಂಡು ಕಿತ್ತುಕೊಳ್ಳುವ ಹಾಗಿಲ್ಲ ಎಂಬಂತೆ ಸೆಟೆದು ನಿಂತಿದ್ದ ಯಡಿಯೂರಪ್ಪ 15 ದಿನ ಕನ್ನಡದ ಮಾಧ್ಯಮಗಳಿಗೆ ಭವಿಷ್ಯದ ಕೆಲಸ ಕೊಟ್ಟಿದ್ದರು.
ಕನ್ನಡ ಸುದ್ದಿವಾಹಿನಿಗಳ ಎಳಸುತನ, ಗಂಭೀರ ವರದಿಗಾರಿಕೆಯ ಕೊರತೆ, ಮತ್ತೆ ಮತ್ತೆ ಪ್ರದರ್ಶನಕ್ಕೆ ಬಂದಿತೆನ್ನಬೇಕು.
ರೇಸ್ ಕೋರ್ಸ್ ರಸ್ತೆಯತ್ತ ಎರಡು ಬಸ್ಗಳು ಕಾಣಿಸಿಕೊಂಡಿದ್ದೇ ತಡ, ವಾಹಿನಿಯೊಂದು ‘ಶಾಸಕರು ರೆಸಾರ್ಟ್ನತ್ತ’ ಎಂದು ‘ಬ್ರೇಕಿಂಗ್ ನ್ಯೂಸ್’ ಬಿತ್ತರಿಸಿತು. ಕೆಲವೇ ಕ್ಷಣಗಳಲ್ಲಿ ಉಳಿದ ವಾಹಿನಿಗಳೂ ಅದನ್ನೇ ಹೇಳತೊಡಗಿದವು. ಯಾರೊಬ್ಬರೂ ಇಂತಹ ಸುದ್ದಿಗಳ ನೈಜತೆ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಯಾವುದೋ ನಾಯಕರ ವಾಹನ ಚಾಲಕರು, ಅಲ್ಲೆಲ್ಲೋ ನಿಂತ ಪೋಲಿಸ್ ಕಾನ್ಸ್ಟೇಬಲ್ಗಳೇ ಸುದ್ದಿಯ ಸೋರ್ಸ್ಗಳಾಗಿರೋದು ಮಾಧ್ಯಮದ ದುರಂತವಾಗಿದೆ. ಮೂರೋ, ಆರೋ ತಿಂಗಳ ಅನುಭವದ ಪತ್ರಕರ್ತರ ದಂಡನ್ನೂ ಕಟ್ಟಿಕೊಂಡು ಮುಖ್ಯಮಂತ್ರಿ ನಿವಾಸ, ಅಶೋಕ ಹೋಟೆಲ್, ಬಿಜೆಪಿ ಕಛೇರಿ, ಕೇಶವಕೃಪಾ… ಇಲ್ಲೆಲ್ಲ ಒಬ್ಬೊಬ್ಬರನ್ನು ನಿಲ್ಲಿಸಿಕೊಂಡು ಕ್ಷಣ, ಕ್ಷಣದ ಸುದ್ದಿ ಬಿತ್ತರಿಸುವ ಕನ್ನಡ ಸುದ್ದಿ ವಾಹಿನಿಗಳ ಪಾಡು ಹೇಳತೀರದು. ಸುದ್ದಿ ಯಾವುದು? ಅಂದಾಜು ಯಾವುದು? ಸುಳ್ಳು ಯಾವುದು? ಆ ಕ್ಷಣದಲ್ಲೇ ಬೆತ್ತಲಾಗಿ ಸುದ್ದಿ ವಾಹಿನಿಗಳ ವಿಶ್ವಾಸಾರ್ಹತೆ ಮೂರಾಬಟ್ಟೆ ಯಾಗಿದೆ. ಮತ್ತಷ್ಟು ಓದು 
ಈ ಕಥೆ ಮುಂದಿನ ರಾಜಕಾರಣಿಗಳಿಗೆ ಒಂದು ಪಾಠವಾಗಲಿ
– ರಾಕೇಶ್ ಎನ್ ಎಸ್
ಅದು ೧೯೬೦ನೇ ದಶಕದ ಕೊನೆಯ ಭಾಗ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವೆಂಬ ಪುಟ್ಟ ಪಟ್ಟಣದಲ್ಲಿ ಬೂಕನೆಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಎಂಬ ವ್ಯಕ್ತಿ ಒಂದು ಅಕ್ಕಿ ಮಿಲ್ನಲ್ಲಿ ಸಾಮಾನ್ಯ ಗುಮಾಸ್ತನಾಗಿ ತಿಂಗಳಿಗೆ ಕೇವಲ ೧೩೦ ರೂ ಸಂಬಳ ಪಡೆದುಕೊಂಡು ದಿನ ಸಾಗಿಸುತ್ತಿದ್ದ. ಅಷ್ಟರಲ್ಲೇ ಆ ವ್ಯಕ್ತಿ ಒಂಚೂರು ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕನಾಗಿ, ಜನಸಂಘದ ಮುಖಂಡನಾಗಿ, ಆ ಬಳಿಕ ಶಿಕಾರಿಪುರ ಪುರ ಸಭೆಯ ಸದಸ್ಯನಾಗಿ, ತುರ್ತು ಪರಿಸ್ಥಿತಿ ಘೋಷಿಸಿದ ಅದಕ್ಕೆ ಸಡ್ಡು ಹೊಡೆದ ಹೋರಾಟಗಾರನಾಗಿ, ರಾಜ್ಯದಲ್ಲಿ ಬಿಜೆಪಿಯ ಮುಖವಾಣಿಯಾಗಿ, ರೈತಾಪಿ ಜನರ ದನಿಯಾಗಿ, ರಾಜ್ಯದ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತ ಕತೆ ಈ ದೇಶದ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಮುಕುಟ ಪ್ರಾಯವಾದದ್ದಾಗಿರಬೇಕಾಗಿತ್ತು. ಆದರೆ ಈ ನಾಡಿನ ದುರದೃಷ್ಟವೆಂದರೆ ಆ ವ್ಯಕ್ತಿ ಇಂದು ಈ ನಾಡು ಕಂಡು ಕೇಳರಿಯದ ರಾಕ್ಷಸ ರಾಜಕಾರಣದ ವಾರಸುದಾರನಾಗಿ ಬಿಟ್ಟಿದ್ದಾರೆ. ಪ್ರಜಾಪ್ರಭುತ್ವದ ಚೆಲುವನ್ನು ಹೀರಿದ ಬಂದಣಿಕೆಯಾಗಿ ಇತಿಹಾಸದ ಪುಟ ಸೇರಿದ್ದಾರೆ.

ಪೌರ ಕಾರ್ಮಿಕರ ಬದುಕು ಹಸನಾಗುವುದು ಯಾವಾಗ?
– ಪವನ್ ಯಂ.ಟಿ
ನಾಳೆ ಬೆಳಗ್ಗೆ ೫ ಗಂಟೆಗೆ ಅಲಾರಾಮ್ ಇಡು ಮಗಳೆ ೫:೩೦ ರ ಬಸ್ಸು ಮಿಸ್ ಆಗೋದ್ರೆ ಕಸವೆಲ್ಲ ಅಲ್ಲೇ ಉಳಿದು ಬಿಡುತ್ತೆ, ನಿನ್ನೆ ದಿನ ಸಂತೆ ಬೇರೆ ಇತ್ತು. ಕಸದ ರಾಶಿಯೇ ಬಿದ್ದಿರ ಬಹುದು. ಬೇಗ ಹೋಗಿ ಕ್ಲೀನ್ ಮಾಡಬೇಕು…! ಎಂದು ಪೌರಕಾರ್ಮಿಕೆ ಮಲ್ಲಮ್ಮ ತನ್ನ ಮಗಳಿಗೆ ಹೇಳಿ ಮಲಗಿಕೊಂಡಳು. ಮಲ್ಲಮ್ಮನಿಗಿರುವ ಒಂದೇ ಆಲೋಚನೆ ತನಗೆ ವಹಿಸಿದ ವಾರ್ಡನಂಬರ್ ೭ರಲ್ಲಿ ಬಿದ್ದಿರುವ ಕಸವನ್ನು ತೆಗೆದು ಶುಚಿಗೊಳಿಸುವುದು. ಎಲ್ಲಿ ಬೆಳಗ್ಗೆ ಬಸ್ಸು ಮಿಸ್ಸಾದರೆ ಕಸದ ರಾಶಿ ಅಲ್ಲಿಯೇ ಉಳಿದು ಮೇಲಾಧಿಕಾರಿಗಳು, ಗುತ್ತಿಗೆದಾರರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಯೋ ಅನ್ನುವ ಭಯ ಮಲ್ಲಮ್ಮನಿಗೆ. ಇದು ಕೇವಲ ಒಬ್ಬ ಪೌರಕಾರ್ಮಿಳ/ನ ಚಡಪಡಿಕೆಯಲ್ಲ. ನಮ್ಮ ದೇಶದಲ್ಲಿ ಅಥವಾ ರಾಜ್ಯದಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರ ಚಡಪಡಿಕೆಯಾಗಿದೆ. ಪೌರ ಕಾರ್ಮಿಕರಿಗೆ ದಿನಬೆಳಗಾದರೆ ಸ್ವಚ್ಚತೆಯದ್ದೇ ಚಿಂತೆ. ಅವರು ಈ ಕೆಲಸವನ್ನು ತಮ್ಮ ಒಟ್ಟೆ ಪಾಡಿಗಾಗಿ ಮಾಡಿದರೂ ಸಹ ಅದರ ಹಿಂದೆ ಪ್ರತಿಯೊಬ್ಬ ನಾಗರೀಕನ ಆರೋಗ್ಯದ ಕುರಿತ ಕಾಳಜಿ ಅವರಲ್ಲಿ ಮನೆ ಮಾಡಿರುತ್ತದೆ.
ನಾವು ಬೆಳಗ್ಗೆ ಎದ್ದು ಸುಮಾರು ೭ ಗಂಟೆಯ ಸಮಯಕ್ಕೆ ಪಟ್ಟಣಕ್ಕೆ ಒಂದು ಸುತ್ತು ಬಂದರೆ ಸಾಕು ಪೌರ ಕಾರ್ಮಿಕರು ಪಡುವ ಕಷ್ಟ, ಅವರು ಮಾಡುವ ಕೆಲಸ, ನಮ್ಮ ಕಣ್ಣಿಗೆ ಕಾಣುತ್ತದೆ. ನಮಗೆ ಅಸಯ್ಯ ಎನ್ನಿಸುವ ಕೆಲಸವನ್ನು ಅವರು ಮಾಡಿದಂತೆ ಕಂಡರೂ ಅವರೆಲ್ಲ ನಮ್ಮ ಪಾಲಿನ ದೇವರಿದ್ದಂತೆ, ಇಂದು ನಾವೆಲ್ಲ ಒಳ್ಳೆಯ, ಕೈತುಂಬಾ, ಹಣ ಬರುವ ಕೆಲಸವನ್ನು ಮಾತ್ರ ಹುಡುಕುತ್ತೇವೆ. ಒಂದು ವೇಳೆ ಪೌರ ಕಾರ್ಮಿಕರೇ ಇಲ್ಲವೆಂದಿದ್ದರೇ ಇಂದು ನಮ್ಮ ಆರೋಗ್ಯದ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ನೀವೇ ಯೋಚಿಸಿ.




