ರಾಷ್ಟ್ರದ ಹಿತ ದೃಷ್ಟಿಯಿಂದಾದರು ಈ ಭಯೋತ್ಪಾದನೆಯ ರಾಜಕೀಯಕ್ಕೆ ಅಂತ್ಯ ಹಾಡಬೇಕಲ್ಲವೇ?
– ಅನಿಲ ಚಳಗೇರಿ
ಡಿಸೆಂಬರ್ ೩೧ ರ ರಾತ್ರಿ ಶಂಕಿತ ಉಗ್ರರ ಹಡಗನ್ನು ನೌಕ ಪಡೆ ಪತ್ತೆ ಹಚ್ಚಿ ಅದನ್ನು ಹಿಂಬಾಲಿಸಿ ಹೋದಾಗ ಅದರಲ್ಲಿರುವವರು ಹಡಗನ್ನು ಸ್ಪೋಟಿಸಿದರು ಎನ್ನುವ ವಿಷಯ ತಿಳಿದೊಡನೆ ನಮ್ಮಲ್ಲಿ ಅನೇಕರಿಗೆ ನೌಕಾಪಡೆಗೆ ಒಂದು ಶಬ್ಭಾಶ್ ಹೇಳಬೇಕೆನ್ನಿಸಿರಬಹುದು, ಅದಾಗಲೇ ರಾಜಕೀಯ ಪಕ್ಷಗಳು ಇಂತಹ ಒಂದು ಹಡಗು ಇತ್ತಾ? ಅದರಲ್ಲಿ ನಿಜವಾಗಲು ಉಗ್ರರಿದ್ದರಾ ? ಅದು ಪಾಕಿಸ್ತಾನಕ್ಕೆ ಸೇರಿದ ಹಡಗಾಗಿತ್ತಾ ? ಹಾಗಿದ್ದರೆ ಅವುಗಳ ದಾಖಲೆ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿ, ನಮಗೆ ಇದರ ಮೇಲೆ ಶಂಕೆಯಿದೆಯೆಂದು ಪ್ರಶ್ನಿಸಲು ಪ್ರಾರಂಭಿಸಿದನ್ನು ನೋಡಿ ನೋಡಿ ನಮ್ಮಲ್ಲಿ ಅನೇಕರಿಗೆ ಬೇಜಾರಾಗಿರಬೇಕು. ಪ್ರತಿ ಬಾರಿ ಉಗ್ರಗಾಮಿಯೊಬ್ಬ ಸಿಕ್ಕಾಗ, ಬಾಂಬ್ ದಾಳಿಯಾದಾಗ ಅಥವಾ ಯಾವುದೇ ಉಗ್ರ ಚಟುವಟಿಕೆ ನಡೆದಾಗ, ತನಿಖೆಯ ಪ್ರಾರಂಭದಿಂದಲೇ ಒಂದಲ್ಲ ಒಂದು ರಾಜಕೀಯ ಪಕ್ಷಗಳು ಅಥವಾ ಬುದ್ಧಿ ಜೀವಿಗಳು ಈ ಶಕಿಂತ ಆರೋಪಿಗಳ ನಿಂತೇಬಿಡುತ್ತಾರೆ. ತನಿಖೆ ನಡೆಯುತ್ತಿರುವಾಗಲೇ ಕ್ಲೀನ್ ಚಿಟ್ ಕೊಡುವದು, ರಾಜಕೀಯ ಬಣ್ಣ ಕಟ್ಟಲು ಪ್ರಯತ್ನಿಸುವದು ಅಥವಾ ಇಂತಹ ಗಂಭೀರ ವಿಷಯದಲ್ಲಿ ಜಾತಿ ಅಥವಾ ಧರ್ಮದ ಮಾತುಗಳನ್ನು ಆಡುವದು ನೋಡುತ್ತಲೇ ಇರುತ್ತೇವೆ, ಕೆಲವಿರಿಗೆ ಇದು ಇದು ಓಲೈಕೆಯ ಒಂದು ಭಾಗವಾದರೆ ಇನ್ನು ಕೆಲವರಿಗೆ ಇದು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಒಂದು ಗಿಮಿಕ್. ಇಂತಹ ಹೇಳಿಕೆಗಳನ್ನು IC – 814 ಹೈ ಜಾಕ್ ನಿಂದ ಹಿಡಿದು ಅಫ್ಜಲ್ ಗುರು, ಬಾಟ್ಲ ಹೌಸ್ ಎನ್ಕೌಂಟರ್, ಇಶ್ರಾತ್ ಜಹಾ ಎನ್ಕೌಂಟರ್, ಹೈದರಾಬಾದ್ ಬ್ಲಾಸ್ಟ್, ಜರ್ಮನ್ ಬೇಕರಿ ಬ್ಲಾಸ್ಟ್ ಹಾಗು ಮುಂಬೈ ತಾಜ್ ಅಟ್ಯಾಕ್ ಆದಗಲು ಕೇಳುತ್ತಲೇ ಬಂದಿದ್ದೇವೆ. ಪ್ರತ್ಯೇಕತೆಯ ಹೆಸರಿನಲ್ಲಿ ಉಗ್ರವಾದ, ನಕ್ಸಲ್ ಹೆಸರಿನಲ್ಲಿ ಉಗ್ರವಾದ ಹಾಗು ಮಾವೋವಾದಿಗಳ ಉಗ್ರ ಚಟುವಟಿಕೆಯನ್ನು ವಹಿಸಿಕೊಂಡು ಮಾತನಾಡುವಂತಹ ಬುದ್ಧಿ ಜೀವಿಗಳು ಇಡೀ ದೇಶದಲ್ಲಿ ತುಂಬಿದ್ದಾರೆ. ಕೆಲವೊಮ್ಮ ರಾಜಕೀಯ ಪಕ್ಷಗಳ ಜೊತೆ, ಕೆಲವೊಮ್ಮೆ ಮಾಧ್ಯಮಗಳ ಜೊತೆ ಇನ್ನು ಕೆಲವೊಮ್ಮೆ ಮಾನವ ಹಕ್ಕು ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದಶಕಗಳ ಹಿಂದೆಯೇ ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಇಂಥಹ ಸಂಘಟನೆಗಳನ್ನು ಸಮರ್ಥಿಸಿಕೊಂಡ ಪಾಕಿಸ್ತಾನ, ಆಫ್ತಾನಿಸ್ತಾನ, ಇರಾಕ್ ಹಾಗು ಇಂತಹ ಅನೇಕ ರಾಷ್ಟ್ರಗಳು ತಾವೇ ಬೆಳಸಿದ ಈ ಉಗ್ರರಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಇಂದು ಕಷ್ಟಪಡುತ್ತಿರುವದನ್ನು ನಾವೆಲ್ಲ ನೋಡುತ್ತಿದ್ದೇವೆ.
ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಅಂದಿನಿಂದಲೂ ಇಂತಹ ರಾಜಕಾರಣ ಮಾಡುತ್ತಲೇ ಬಂದಿದೆ ೨೦೦೪ ರಿಂದ ೨೦೧೪ರ ವರೆಗೆ ಎಲ್ಲ ಚುನಾವಣೆಯಲ್ಲೂ ಕಂದಹಾರ ಹೈ ಜಾಕ್ ಪ್ರಕರಣವನ್ನು ಬಿಜೆಪಿ ವಿರುದ್ಧ ಉಪಯೋಗಿಸುತ್ತಲೇ ಬಂದಿದೆ, ಈ ಬಿಜೆಪಿ ಉಗ್ರರ ಜೊತೆ ಕೈಜೋಡಿಸಿದೆ ಎನ್ನುವದು ಕಾಂಗ್ರೆಸ್ಸಿನ ವಾದ, ಅಂದು ಒತ್ತೆಯಾಳುಗಳ ಬದಲಾಗಿ ಬಿಡುಗಡೆಗೊಂಡ ಪಾಕಿಸ್ತಾನದ ಉಗ್ರರು ಇಂತಹದೊಂದು ರಾಜಕೀಯ ಹೇಳಿಕೆಗೆ ನಕ್ಕಿರಬೇಕಲ್ಲವೇ? ದೇಶ ಕಂಡ ಅತ್ಯಂತ ಭೀಕರ ಮುಂಬೈ ದಾಳಿ ನಡೆದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಘ ” ಮುಂಬೈ ದಾಳಿಯ ಹಿಂದೆ ಆರ್ ಎಸ್ ಎಸ್ ಕೈವಾಡ” ಎನ್ನುವ ಪುಸ್ತಕ ಬಿಡುಗಡೆ ಮಾಡಿದರು, ಈ ವಿಷಯ ತಿಳಿದ ಮುಂಬೈ ದಾಳಿಯ ರೂವಾರಿ ಲಖ್ವಿ ಪುಸ್ತಕ ಬರೆದವಿರಿಗೆ ಥ್ಯಾಂಕ್ಸ್ ಹೇಳಿರಬೇಕಲ್ಲವೇ. ಕಳೆದ ಹಲವು ವರ್ಷಗಳ ಹಿಂದೆ ನಡೆದ ಸರಣಿ ಬಾಂಬ್ ದಾಳಿಗಳಿಗೆ ಕಾರಣವಾದ ಇಂಡಿಯನ್ ಮೂಜಾಹಿದ್ದಿನ್ ಉಗ್ರ ಸಂಘಟನೆಯನ್ನು ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್ಸಿನ ಶಕೀಲ್ ಅಹಮದ್, ಇದು ಗುಜರಾತ ದಂಗೆಗಳ ಪ್ರತಿಕಾರವಾಗಿ ಪ್ರಾರಂಭವಾದ ಸಂಘಟನೆಯೆಂದರು, ಹಾಗಿದ್ದಲ್ಲಿ ಇದೊಂದು ಉಗ್ರ ಸಂಘಟನೆ ಎಂದು ಭಾರತ ಸರ್ಕಾರ, ನ್ಯೂಜೀಲ್ಯಾಂಡ್ ಹಾಗು ಅಮೇರಿಕ ಸರ್ಕಾರಗಳು ಘೋಷಣೆ ಮಾಡಿದ್ದು ತಪ್ಪೇ?
ಮೊನ್ನೆ ಡಿಸೆಂಬರ್ ೩೧ಕ್ಕೂ ನಡೆದ್ದಿದ್ದು ಇಂತಹ ಪ್ರಕರಣವೇ, ಆದರೆ ಪಾಕಿಸ್ತಾನದ ಕೆಲವು ಮಾಧ್ಯಮಗಳು ಇದನ್ನು ಮರುದಿಂದದಿಂದಲೇ ಸುಳ್ಳು ಎಂದು ತೋರಿಸಿದವು, ಪಾಕಿಸ್ತಾನದ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಭಾರತದ ಬಹುತೇಕ ರಾಜಕೀಯ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತಲಿವೆ. ಆದಷ್ಟು ಬೇಗ ಎಲ್ಲ ಸಾಕ್ಷಿಗಳನ್ನು ಜನರ ಮುಂದೆ ಇಡಬೇಕೆನ್ನುವ ಬೇಡಿಕೆ ಮುಂದೆಯಿಟ್ಟಿವೆ, ಕಳೆದ ಎರಡು ದಿನಗಳಲ್ಲೇ ಪಾಕಿಸ್ತಾನದ ಉಗ್ರರು, ರಾಜಕಾರಣಿಗಳು ಹಾಗು ಬುದ್ಧಿಜೀವಿಗಳು ಇದೆ ಭಾರತೀಯ ನೇತಾರರ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಆರೋಪ ತಳ್ಳಿ ಹಾಕುತ್ತಿವೆ. ಒಬಾಮ ಅವರ ಭಾರತದ ಭೇಟಿಯ ಮೊದಲು ಪಾಕಿಸ್ತಾನ ಇಂತಹ ಆತಂಕ ಸೃಷ್ಟಿಸಲು ಪ್ರಯತ್ನ ಪಡುತ್ತಿದೆಯೇ ಎನ್ನುವ ಪ್ರಶ್ನೆಗೆ, “ನಿಮ್ಮ ಸರ್ಕಾರದ ಮೇಲೆ ನಿಮ್ಮದೇ ದೇಶದ ನಾಯಕರು ಹುಬ್ಬೆರಿಸುತ್ತಿರುವಾಗ, ನಾವ್ಯಾಕೆ ಇಂತಹ ಪುರಾವೆ ಗಳಿರದ ಪ್ರಶ್ನೆಗಳಿಗೆ ಉತ್ತರಿಸಬೇಕು?” ಎಂದು ಮರು ಪ್ರಶ್ನಿಸುತ್ತಿದ್ದಾರೆ. ರಾಜಕೀಯ ಕಾರಣಗಳಿಗೋಸ್ಕರ ಇಂತಹ ಸಂಶಯ ವ್ಯಕ್ತ ಪಡಿಸಿ, ತನಿಖೆ ನಡೆಯುವುದರ ಮೊದಲೇ ಆರೋಪಿಗಳ ಬೆನ್ನಿಗೆ ನಿಲ್ಲುವ ಇಂತಹ ಜನರನ್ನು ದೇಶ ವಿರೋಧಿಗಳೇನ್ನಬಹುದಲ್ಲವೇ? , ಅಷ್ಟಕ್ಕೂ ಕೆಲವು ದೇಶ ವಿರೋಧಿಗಳು ಕೇಳಿದರು ಎನ್ನುವದಕ್ಕೆ ಸೇನೆಯ ಸೂಕ್ಷ್ಮ ಸಾಕ್ಷಾಧಾರಗಳನ್ನು ಬಹಿರಂಗ ಪಡಿಸುವದಾಗಲಿ ಅಥವಾ ನಮ್ಮ ನೌಕ ಸೇನೆಯನ್ನು ಪ್ರಶ್ನಿಸುವದಾಗಲಿ ಮಾಡುವ ಯಾವ ಅವಶ್ಯಕತೆ ಸರ್ಕಾರವೊಂದಕ್ಕೆ ಇಲ್ಲವೇ ಇಲ್ಲ. ರಾಜಕೀಯ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ಇಂತಹ ಪ್ರಶ್ನೆ ಕೇಳುವಂತೆ ಮಾಡಿದ ಪಾಕಿಸ್ತಾನ ಗೆದ್ದಿದೆ ಎನ್ನುವದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಇಂತಹ ಹೇಳಿಕೆಗಳಿಂದ ನಮ್ಮ ದೇಶದ ದುರ್ಬಲ ಗೊಂಡಿದೆ ಎನ್ನುವ ಅರಿವು ನಮ್ಮವರಿಗಿಲ್ಲ.
ಅಷ್ಟಕ್ಕೂ ಇವರ ಆರೋಪ, ಡ್ರಗ್ಸ್ ಸಪ್ಲೈ ಅಥವಾ ಸ್ಮಗ್ಲರ್ ಗಳ ಹಡಗು ಇದಾಗಿರಬಹುದೆಂದು. ಯಾವುದೇ ಅವ್ಯವಹಾರದಲ್ಲಿ ತೊಡಗಿರುವ ಹಡಗುಗಳು ತಪ್ಪಿಸಿಕೊಳ್ಳಲು ಆಗದಿದ್ದಾಗ ಬಿಳಿ ಧ್ವಜವನ್ನು ತೋರಿಸಿ ಶರಣಾಗತಿಯಾಗುತ್ತವೆ ಆದರೆ ೬೦ ಕಿಲೋಮೀಟರು ದೂರದ ವರೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಆಮೇಲೆ ಸ್ಪೋಟಿಸಿಕೊಳ್ಳುವ ಉದಾಹರಣೆ ಹಿಂದೆಂದು ಇಲ್ಲ. ಕೆಲವು ಆಂಗ್ಲ ಮಾಧ್ಯಗಳು ಪಾಕಿಸ್ತಾನಿಗಳನ್ನೂ ಕ್ಯಾಮೆರಾ ಮುಂದೆ ಕೂಡಿಸಿಕೊಂಡು ಸರ್ಕಾರವನ್ನು ಪ್ರಶ್ನೆ ಮಾಡುತ್ತಲಿವೆ, ಅವರ ಆವೇಶ ಹಾಗು ಅವರ ಪ್ರಶ್ನೆಗಳನ್ನು ನೋಡಿದರೆ ಇವರು ಭಾರತೀಯರೇ ಅಥವಾ ಪಾಕಿಸ್ತಾನಿಗಳೇ ಎನ್ನುವಷ್ಟು ಸಂಶಯ ಉಂಟಾಗುತ್ತದೆ.
ಪರ ದೇಶಗಳಿಂದ ತನ್ನ ರಕ್ಷಣೆಗೆ ಹಾಗು ರಾಜಕೀಯ ಕಾರಣಗಿಳಿಗೋಸ್ಕರ ಬೆಳಸಿದ ತಾಲಿಬಾನ್ ಸಂಘಟನೆ ಇಂದು ಆಫ್ಗಾನಿಸ್ತಾನವನ್ನು ಬಂಜರು ಭೂಮಿ ಮಾಡಿ ನಿಲ್ಲಿಸಿದೆ, ಅಲ್ಲಿ ಪ್ರತಿ ನಿತ್ಯ ಸಾವು ನೋವು ತಪ್ಪಿದ್ದಲ್ಲ. ತಾನೇ ಸಾಕಿದ ಲಶ್ಕರ್, ಜಮಾತ್-ಉದ್ -ದಾವ, ಅಲ ಖೈದಾ ಅಂಥಹ ಉಗ್ರ ಸಂಘಟನೆಗಳು ಇಂದು ಸ್ವತಃ ಪಾಕಿಸ್ತಾನಿಗಳ ನಿದ್ದೆ ಕೆಡಿಸಿದೆ. ಅಮೇರಿಕಾದ ವಿರುದ್ಧ ಹೊರಾಡಲು ಖುದ್ದು ಹಿಂದನ ಸರ್ಕಾರ ಮತ್ತು ಸೈನ್ಯ ಸಾಕಿದ್ದ ಪಾಕಿಸ್ತಾನಿ ತಾಲಿಬಾನ್ ಮೊನ್ನೆ ೧೪೦ ಮುಗ್ದ ಮಕ್ಕಳ್ಳನ್ನು ಹಾಡು ಹಗಲೇ ನಿರ್ಧಾಕ್ಷಿಣ್ಯವಾಗಿ ಕೊಂದು ಹಾಕಿದ್ದು ಈಡೀ ಜಗತ್ತೇ ನೋಡಿದೆ. ತಾವೇ ಬೆಳಸಿದ್ದ ಸದ್ದಾಂನ ಸಾಮ್ರಾಜ್ಯದ ಕೆಲವು ಕುಡಿಗಳು ಇಂದು ಐಸಿಸ್ ಹೆಸರಿನಲ್ಲಿ ಬರ್ಬರತೆಯ ಪರಮಾವಧಿ ತೋರಿಸುತ್ತಿದೆ. ಧರ್ಮದ ಹೆಸರಿನಲ್ಲಿ ಉಗ್ರ ಸಂಘಟನೆಗಳು ಇಂದು ಸ್ವ ಧರ್ಮಿಯರನ್ನೇ ಬಲಿ ತೆಗೆದುಕೊಳ್ಳುತ್ತಿವೆ, ಒಮ್ಮೆ ಕೊಲ್ಲುವದನ್ನು ಕಲಿತವನಿಗೆ ತನ್ನವರು ಬೇರೆಯವರು ಅನ್ನುವ ಅರಿವೆಲ್ಲಿ? ಇದಕ್ಕೆ ದೊಡ್ಡ ಉದಾಹರಣೆಯೇ ಪ್ರಪಂಚದಲ್ಲಿ ನಡೆಯುತ್ತಿರುವ ಸುನ್ನಿ-ಶಿಯಾ ಪರಸ್ಪರ ಕಾದಾಟ.
ಹೌದು, ವಿರೋಧ ಪಕ್ಷದಲ್ಲಿರುವವರು ಪ್ರಶ್ನೆ ಮಾಡಿ ಸರಕಾರವೊಂದನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವದು ಅವರ ಧರ್ಮ ಆದರೆ, ಉಗ್ರರ ಚಟುವಟಿಕೆ, ಅಂತರಾಷ್ಟ್ರೀಯ ಸುರಕ್ಷತೆ ಮತ್ತು ಸೈನ್ಯದ ವಿಷಯ ಬಂದಾಗ ಸರಿಯಾದ ಮಾಹಿತಿಯಿಲ್ಲದೆ ಬಹಿರಂಗವಾಗಿ ಪ್ರಶ್ನಿಸುವದು ಬರಿ ತಪ್ಪಲ್ಲ ನೂರಕ್ಕೆ ನೂರರಷ್ಟು ದೇಶ ವಿರೋಧಿ ಚಟುವಟಿಕೆ, ಅಷ್ಟಕ್ಕೂ ಜನ ಬೆಂಬಲದಿಂದ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಇಂತಹ ದೇಶ ವಿರೋಧಿ ಪ್ರಶ್ನೆಗಳಿಗೆ ಉತ್ತರಿಸಲೆಬೇಕೆನ್ನುವ ಯಾವುದೇ ಅವಶ್ಯಕತೆಯಿಲ್ಲ. ದೇಶದ ಸುರಕ್ಷತೆಯಲ್ಲಿ ರಾಜಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಿಗೆ ಹಾಕುವಂತಹವರ ವಿರುದ್ಧವೂ ಕ್ರಮ ಜರಗಿಸಬೇಕಲ್ಲವೇ?
ಚಿತ್ರಕೃಪೆ :economictimes.indiatimes.com
ನಮ್ಮ ದೇಶದ ಸುರಕ್ಷತೆಗೆ ಬೇಕಾಗಿರುವುದು ನಿಜವಾದ ದೇಶಪ್ರೇಮಿಗಳೇ ಹೊರತು ಅವಿವೇಕೀ ರಾಜಕಾರಣಿಗಳಲ್ಲ.