ಆಳ್ವಾಸ್ ವಿರಾಸತ್ ಎಂಬ ಸಾಂಸ್ಕೃತಿಕ ವೈಭವ
ಡಾ.ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದಂತಹ ಒಬ್ಬರು ಹೇಳುತ್ತಿದ್ದರು, ಏನು ಚಂಡೆಯ ಶಬ್ದವೇ ಬರುತ್ತಿಲ್ಲ, ಆಳ್ವಾಸ್ ಎಂದರೆ ಯಾವುದಾದರೂ ಒಂದು ಕಾರ್ಯಕ್ರಮ ಜರುಗುವ ತಾಣ ಎಂಬುದೇ ನಮ್ಮ ಭಾವನೆ ಎನ್ನುತ್ತಿದ್ದರು. ಆ ಮಾತಿನ ಅರ್ಥ, ಆಳ್ವಾಸ್ ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿ ಮಾತ್ರ ತನ್ನನ್ನು ತಾನು ಗುರುತಿಸಿಕೊಳ್ಳದೆ, ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ವಿಷಯಗಳನ್ನೂ ಸಹ ವಿದ್ಯಾರ್ಥಿಗಳಲ್ಲಿ ಅಳವಡಿಸುವ ಕಾರ್ಯವನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಕಾರ್ಯಕ್ರಮಗಳು ಇಡೀ ಸಂಸ್ಥೆಯ ಬಹುದೊಡ್ಡ ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಸವಿಯನ್ನು ಒದಗಿಸುವ ವಿಶಿಷ್ಟ ಘಟನೆಗಳಾಗಿವೆ.
ಜನವರಿ 8 ರಿಂದ 11 ರವರೆಗೆ ಮೂಡಬಿದರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಸಾಂಸ್ಕೃತಿಕ ಹಬ್ಬವು ಭಾರತದ ವಿವಿದೆಡೆಯಿಂದ ಕಲಾವಿದರಿಗೆ ವೈಭವಯುತ ವೇದಿಕೆಯನ್ನು ಒದಗಿಸಿಕೊಟ್ಟಿತು. ಜುಗಲ್ ಬಂದಿ ಸಂಗೀತಗಳ ಆಸ್ವಾದನೆ, ಪಂಜಾಬಿ, ಗುಜರಾತಿ ಹಾಗೂ ಶ್ರೀಲಂಕಾದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನತಣಿಸಿದವು. ಡ್ಯಾನ್ಸ್ ಆನ್ ವ್ಹೀಲ್ಸ್, ಮಡಿಕೆಗಳ ಮೇಲಿನ ನೃತ್ಯ, ದೃಷ್ಟಿಮಾಂದ್ಯ 30 ಕಲಾವಿದರು ಏಕ ಕಾಲದಲ್ಲಿ ವೇದಿಕೆಯ ಮೇಲೆ ಗಾಯನ ಕಾರ್ಯಕ್ರಮ, ಯಕ್ಷಗಾನದ ಹಾಡು ಮತ್ತು ವೈಯಲಿನ್ ಸಂಗೀತದ ವಿಶಿಷ್ಟ್ಯ ಸಮ್ಮಿಶ್ರಣ ಇವೆಲ್ಲವೂ ವಿರಾಸತ್ ಗೆ ಮೆರುಗು ನೀಡಿದವು. ನಾಲ್ಕು ದಿನಗಳು ಹೇಗೆ ಕಳೆದವು ಎಂಬುದೇ ಪ್ರೇಕ್ಷಕರಿಗೆ ತಿಳಿಯದಾಗಿದೆ, ಆ ಮಟ್ಟಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನಸ್ಸನ್ನು ಆವರಿಸಿದ್ದವು.
ಒಂದು ಲಕ್ಷಕ್ಕೂ ಅಧಿಕ ಜನರು ಆಳ್ವಾಸ್ ವಿರಾಸತ್ನಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ವೈಭವವನ್ನು ವೀಕ್ಷಿಸಿದರು. ವಿದ್ಯಾಗಿರಿ ಪ್ಯಾಲೇಸ್ ಗ್ರೌಂಡ್ನ ಸುತ್ತಮುತ್ತ ಹಾಕಲಾಗಿದ್ದ ವಿದ್ಯುತ್ ಅಲಂಕಾರ, ಗೂಡುದೀಪಗಳ ಜೋಡಣೆ ಸಾಂಸ್ಕೃತಿಕ ರಸಮಯ ಗಳಿಗೆಯನ್ನು ಮತ್ತಷ್ಟು ರಂಗೇರಿಸಿದ್ದಿದು ದೊಡ್ಡ ಆಕರ್ಷಣೆಯಾಗಿತ್ತು.
ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ವಾಣಿಜ್ಯೋದ್ಯಮವಾಗಿ ಮಾರ್ಪಟ್ಟಿವೆ ಅಥವಾ ಅಂತಹ ಉದ್ದೇಶಕ್ಕಾಗಿಯೇ ಅಸ್ತಿತ್ವಕ್ಕೆ ಬಂದಿವೆ ಎಂಬುದು ಜನಜನಿತವಾದ ಮಾತು. ಆದರೆ ಅದರಿಂದ ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಪೂರ್ಣವಾಗಿ ಹೊರನಿಲ್ಲುತ್ತದೆ. ಒಂದು ಖಾಸಗಿ ಶಿಕ್ಷಣ ಸಂಸ್ಥೆಯಾಗಿ, ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ, ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವ ನಿಟ್ಟಿನಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ವಿಭಿನ್ನ ಹಿನ್ನೆಲೆಗಳಿಂದ ಬರುವಂತಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭ್ಯಾಸದ ಜೊತೆಗೆ ಸಾಂಸ್ಕೃತಿಕ ಅಂಶಗಳನ್ನೂ ಸಹ ಹೆಚ್ಚಿನ ಮಟ್ಟದಲ್ಲಿ ಅರಿವಿಗೆ ತಂದುಕೊಳ್ಳಲು ಕಟಿಬದ್ದವಾಗಿ ಶ್ರಮಿಸುತ್ತಿದೆ.
ಯಾವುದೇ ಶಿಕ್ಷಣ ಸಂಸ್ಥೆಯ ಗುರಿ ಶೇ100 ರಷ್ಟು ಫಲಿತಾಂಶವನ್ನು ಪಡೆಯುವುದೇ ಆಗಿರುತ್ತದೆ. ಆ ರಭಸದಲ್ಲಿ ವಿದ್ಯಾರ್ಥಿಗಳಿಗೆ ಓದು ಬರಹದ ಕುರಿತು ಹೆಚ್ಚಿನ ಒತ್ತಡವನ್ನೂ ಹೇರಲಾಗುತ್ತದೆ. ಇದು ಶೈಕ್ಷಣಿಕ ಉದ್ದೇಶದಿಂದ ಉತ್ತಮವೇ ಆಗಿದ್ದರೂ ಸಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಅಷ್ಟಾಗಿ ಹೊರತರುವಲ್ಲಿ ಸಹಕಾರಿಯಾಗಲಾರದು. ಏಕೆಂದರೆ ಪ್ರತಿಯೊಬ್ಬರ ಆಸಕ್ತಿ ಮತ್ತು ಪ್ರತಿಭೆ ಒಂದೊಂದು ತೆರನಾಗಿರುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯಾಸಕ್ತಿ, ಮುಂತಾದವುಗಳು ವಿದ್ಯಾರ್ಥಿಗಳನ್ನು ವಿಭಿನ್ನವಾಗಿ ಬೆಳೆಸುವಲ್ಲಿ ಸಹಾಯ ಮಾಡುತ್ತವೆ. ಶಿಕ್ಷಣ ಸಂಸ್ಥೆಯು ಉಳಿದ ಎಲ್ಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡದೆ ಕೇವಲ ಪರೀಕ್ಷೆ ಫಲಿತಾಂಶಗಳಿಗೆ ಹೆಚ್ಚಿನ ಒತ್ತನ್ನು ನೀಡಿದರೆ ಆ ಸಂಸ್ಥೆಯು ಶಿಕ್ಷಿತ ಯಂತ್ರಗಳನ್ನು ಮಾತ್ರ ಉತ್ಪಾದನೆ ಮಾಡುತ್ತದೆ ಎಂದು ಹೇಳಬಹುದು. ಏಕೆಂದರೆ ಪುಸ್ತಕದ ಬದನೆಕಾಯಿಗಿಂತ ಆಚೆಗೆ ಬದುಕನ್ನು ನಿರ್ವಹಿಸುವ, ಸಂತೋಷವನ್ನು ಕಂಡುಕೊಳ್ಳುವ ಮಾರ್ಗವು ಕೇವಲ ಪಠ್ಯದಿಂದ ಮಾತ್ರ ಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಬದುಕಿಗೆ ಅಗತ್ಯವಿರುವ ಬಹುತೇಕ ಕೌಶಲ್ಯಗಳನ್ನು ಕಲಿಯಲು ಆಳ್ವಾಸ್ ಸಂಸ್ಥೆಯು ಅವಕಾಶ ಕಲ್ಪಿಸುತ್ತಾ ಬಂದಿದೆ.
ಸುಪ್ರಸಿದ್ದ ವಿದ್ವಾಂಸರುಗಳು ತಮ್ಮ ಸಂಗೀತದ ವಿದ್ವತ್ ನ್ನು ರಸದೌತಣವಾಗಿ ಪ್ರೇಕ್ಷಕರಿಗೆ ಉಣಬಡಿಸಿದ್ದು ವಿರಾಸತ್ ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿದೆ. ಸುಪ್ರಸಿದ್ದ ವೈಯೋಲಿನ್ ವಾದಕಾರದ ಮೈಸೂರು ಮಂಜುನಾಥ್, ಡ್ರಮ್ಮಿಸ್ಟ್ ಆದ ಕಲೈಮಣಿ ಶಿವಮಣಿ, ಪಂಡಿತ್ ಸಾಲಿಲ್ ಭಟ್, ಪಂಡಿತ್ ಹಿಮಾಂಶು ಭಟ್ ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿ ಸಂಗೀತ ವಿದ್ವಾಂಸರುಗಳು ಮನೋಜ್ಞವಾದ ಪ್ರದರ್ಶವನ್ನು ನೀಡಿದ್ದು ಕಲಾಪ್ರೇಮಿಗಳಲ್ಲಿ ಅಚ್ಚಳಿಯದೇ ಉಳಿದಿದೆ. ಹಾಗೆಯೇ ಈ ಬಾರಿ ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿಖಾನ್ರವರು ವಿರಾಸತ್ ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ.
ಆಳ್ವಾಸ್ ವಿರಾಸತ್ ನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ ಆ ಸಂಸ್ಥೆಯ ಅಧ್ಯಕ್ಷರು ಮತ್ತು ಸಿಬ್ಬಂದಿವರ್ಗಕ್ಕೆ ನಮನಗಳನ್ನು ಸಲ್ಲಿಸುತ್ತಾ, ಇಂತಹ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಈ ಸಂಸ್ಥೆಯ ಅಡಿಯಲ್ಲಿ ಜರುಗಲಿ ಎಂದು ಆಶಿಸುತ್ತೇನೆ.
ಚಿತ್ರಕೃಪೆ: http://mangaloresnews.com/kannada/view.php?menu=110&id=14945&cat=tulunadu&loc=moodabidri
its high time we need such programs where in each talent is recognized. Today they are performing in Shimoga. All the best.
“ಒಂದು ಖಾಸಗಿ ಶಿಕ್ಷಣ ಸಂಸ್ಥೆಯಾಗಿ, ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ, ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವ ನಿಟ್ಟಿನಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ.”
ಆಳ್ವಾಸ್ ಎಂಬ ೭೦೦೦ ಮಕ್ಕಳ ಜೈಲಿನಿಂದ ಮೊದಲ ಪಿಯುನಲ್ಲೇ ಹೊರಬೀಳಲು ತನ್ನ ಮನೆಯಲ್ಲಿ ಇನ್ನಿಲ್ಲದಂತೆ ಬಂಡಾಯ ನಡೆಸಿಯೂ ವಿಫಲನಾದ ನನ್ನ ಸ್ನೇಹಿತರ ಮಗನು ನಿಮ್ಮ ಈ ವಾಕ್ಯವನ್ನು ಕೇಳಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಅಂತಂದನು. ಅಲ್ಲಿ ವಿಶೇಷವಾಗಿ ಪಿಯುಸಿಯ ವಿಜ್ನಾನ-ವಿದ್ಯಾರ್ಥಿಗಳಿಗೆ ಬೊರ್ಡ್-ಎಕ್ಸಾಮು/ಸಿಯಿಟಿ ಎಕ್ಸಾಮಿಗೆ ಓದುವುದನ್ನ ಹೊರತುಪಡಿಸಿ, ಆಟೋಟಗಳೇತ್ಯಾದಿ ಪಠ್ಯೇತರ ಚಟುವಟಿಕೆಗಳು ಹಾಗಿರಲಿ, ಮಂಡಕ್ಕಿ ಪೇಪರ್ ಮೇಲಿನ ಬರಹವನ್ನು ಒದುವುದನ್ನೂ ಸರ್ವರೀತ್ಯ ನಿಷೇಧಿಸಿರುವ ವಿದ್ಯಮಾನವಿದೆಯಂತಲ್ಲ. ಅವರದ್ದು ಶುದ್ಧ ವ್ಯಾಪಾರೀಕೃತ ಪದ್ದತಿಯೇ ಹೊರತೂ ನಿಮ್ಮ ನೆಚ್ಚಿನ “ಮೌಲ್ಯಾಧಾರಿತ ಶಿಕ್ಷಣ” ಪದ್ಧತಿಯಲ್ಲ!
ಆಳ್ವಂದಾನ್..
ಹ ಹ ಹ ಹ ನಿಮ್ಮ ಕಾಮೇಂಟ್ ನೋಡಿ ನಗದೆ ವಿಧಿಯಿಲ್ಲ, ಸ್ವಲ್ಪ ಸಾಮಾನ್ಯ ಜ್ಞಾನ ಉಪಯೋಗಿಸಿ, ಯಾವುದೇ ಒಂದು ತರಭೇತಿಯನ್ನು ನೀಡುವಾಗ ಕೆಲವು ನಿರ್ದಿಷ್ಟ ಕಠೋರ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ, ಅಲ್ಲಿ ಕಲಿಯುವುದಿದ್ದರೆ ಅದರದ್ದೇ ಕ್ರಮದಲ್ಲಿ ಕಲಿಯಬೇಕು, ಕೆಲವರಿಗೆ ಜೈಲು ಅನ್ನಿಸಿದರೆ ಅದು ಅವರ ಅನಾಸಕ್ತಿಯನ್ನು ತೋರಿಸುತ್ತದೆ ಅಷ್ಟೆ.