– ಡಾ ಅಶೋಕ್ ಕೆ ಆರ್

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!
ಶನಿವಾರ ಜನವರಿ 3 : ಭಯವಾಗ್ತಿದೆ
ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾಟ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಾಗಿನಿಂದ ಈ ರೀತಿಯ ದುಸ್ವಪ್ನಗಳು ಮಾಮೂಲಾಗಿದೆ. ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಶಾಲೆಗೆ ಹೊರಟೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನಿಗಳು ನಿಷೇಧಿಸಿರುವುದರಿಂದ ನನಗೆ ಭಯವಾಗುತ್ತಿದೆ.
27 ಜನರಲ್ಲಿ 11 ಮಂದಿ ಮಾತ್ರ ಶಾಲೆಗೆ ಬಂದಿದ್ದೆವು. ತಾಲಿಬಾನ್ ಆದೇಶದಿಂದ ಹಾಜರಾತಿ ಕಡಿಮೆಯಾಗಿತ್ತು. ನನ್ನ ಮೂವರು ಗೆಳತಿಯರು ಈ ಆದೇಶದ ನಂತರ ತಮ್ಮ ಕುಟುಂಬದೊಡನೆ ಲಾಹೋರ್, ಪೇಷಾವರ, ರಾವಲ್ಪಿಂಡಿಗೆ ಹೊರಟುಹೋಗಿದ್ದಾರೆ.