ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ
– ಸಂತೋಶ್ ತಮ್ಮಯ್ಯ
ಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.
ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.