– ಮು.ಅ ಶ್ರೀರಂಗ ಬೆಂಗಳೂರು
‘ಅನುದಿನವಿದ್ದು… ‘ ಕಿರು ಪುಸ್ತಕದಲ್ಲಿ ಒಂಭತ್ತು ಜನ ಲೇಖಕರ ಸಾವಿಗೆ ಮಿಡಿದ ಬರಹಗಳು ಮತ್ತು ಇಬ್ಬರು ಲೇಖಕರು ಬದುಕಿದ್ದಾಗಲೇ ಬರೆದ ಲೇಖನಗಳಿವೆ. ಇದರಲ್ಲಿ ರಾಘವೇಂದ್ರ ಖಾಸನೀಸ, ರಾಮಚಂದ್ರ ಶರ್ಮ,ಎಂ. ವ್ಯಾಸ, ಚಿ.ಶ್ರೀನಿವಾಸರಾಜು,ಸು.ರಂ.ಎಕ್ಕುಂಡಿ, ಕುಸುಮಾಕರ ದೇವರಗೆಣ್ಣೂರು,ಬೆಳಗೆರೆ ಕೃಷ್ಣಶಾಸ್ತ್ರಿ,ದೇಶಕುಲಕರ್ಣಿ,ಸ್ವಾಮಿನಾಥ,ಕಿ.ರಂ. ನಾಗರಾಜ ಮತ್ತು ನೀಲತ್ತಹಳ್ಳಿ ಕಸ್ತೂರಿ ಅವರುಗಳನ್ನು ಕುರಿತ ಅಪರೂಪದ ಬರಹಗಳಿವೆ. ಇಲ್ಲಿನ ಬರಹಗಳು ‘ಸಂಚಯ’ ಮತ್ತು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಗಳಲ್ಲಿಈ ಹಿಂದೆ ಪ್ರಕಟವಾಗಿದ್ದಂತಹವು. ಆಯಾ ಲೇಖಕರನ್ನು ಕುರಿತಂತೆ ಡಿ ವಿ ಪ್ರಹ್ಲಾದರ ಅಪರೂಪದ ಒಳನೋಟ ಮತ್ತು ಅವರುಗಳ ಬಗ್ಗೆ ಹಾಗೂ ಅವರ ಕೃತಿಗಳ ಬಗ್ಗೆ ವಿವರಗಳನ್ನು ಒಳಗೊಂಡ ‘ಅನುಬಂಧ’ ಈ ಪುಸ್ತಕದ ಪ್ಲಸ್ ಪಾಯಿಂಟ್. ಏಕೆಂದರೆ ಎಷ್ಟೋ ಸಲ ನಾವುಗಳು ಕೆಲವು ಲೇಖಕರ ಹೆಸರು ಕೇಳಿರುತ್ತೇವೆ ಆದರೆ ಅವರ ಪುಸ್ತಕಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ನಾವು ಓದಬೇಕಾದಂತಹ ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಯಾವ ಮಾಹಿತಿಯೂ ನಮಗಿರುವುದಿಲ್ಲ. ಆ ಕೊರತೆಯನ್ನು ‘ಅನುದಿನವಿದ್ದು … ‘ ತುಂಬಿಕೊಟ್ಟಿದೆ. ಈ ಒಂದು ಪ್ರಸ್ತಾವನೆಯ ನಂತರ ಇಲ್ಲಿನ ಕೆಲವು ಲೇಖನಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.
ರಾಘವೇಂದ್ರ ಖಾಸನೀಸ –ಬದುಕೆನ್ನುವ ಖಾಲಿ ಆಕಾಶದ ಎದುರು : ಕನ್ನಡದಲ್ಲಿ ಕೆಲವೇ ಕಥೆಗಳನ್ನು ಬರೆದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಪಾರ್ಕಿನ್ ಸನ್ಸ್ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಸನ್ನಿವೇಶದಿಂದ ಲೇಖನ ಪ್ರಾರಂಭವಾಗುತ್ತದೆ. ‘ಅದೊಂದು ವಿಚಿತ್ರ ಭೇಟಿ. ತಮ್ಮ ಕಥೆಗಳ ಮೂಲಕವಷ್ಟೇ ಪರಿಚಿತರಾಗಿದ್ದ ಅಪರೂಪದ ಕಥೆಗಾರರನ್ನು ನೋಡಲು ಹೋಗಿದ್ದೆವು. …… ಆ ಮಧ್ಯಾನ್ಹದ ಮೌನದಲ್ಲಿ ಇಂತಿಂಥವರು ಬಂದಿದ್ದಾರೆ, ನಿಮ್ಮನ್ನು ಕಾಣಬೇಕಂತೆ ಎನ್ನುವ ಒಳಮನೆಯ ಮಾತುಗಳು ನಮ್ಮ ಕಿವಿಗಳಿಗೂ ತಲುಪುತ್ತಿದ್ದವು. ನಿಧಾನವಾಗಿ ಬಾಗಿಲ ಹತ್ತಿರ ಬರುವ ಸದ್ದಾಗಿ ಉಳಿದಿಬ್ಬರು ಎದ್ದು ನಿಂತರು. ನಾನೂ ಎದ್ದವನು ಅವರನ್ನ ಕಂಡು ಅವಾಕ್ಕಾಗಿಬಿಟ್ಟೆ. ಅಕ್ಷರಶಃ ಕೋಲಿನ ಹಾಗಿದ್ದ ಅವರ ಮೈ ಒಂಚೂರೂ ಸ್ವಾಧೀನದಲ್ಲಿರಲಿಲ್ಲ…. ನಡುಗುತ್ತಿದ್ದ ಅವರ ದೇಹ, ದಟ್ಟನೆಯ ದಾಡಿ ಬೆಳೆದ ಅವರ ಮುಖ, ಹೊಳೆಯುತ್ತಿದ್ದದ್ದು ಕಣ್ಣುಗಳು ಮಾತ್ರ. ಔಷಧಿಗಳ ಪರಿಣಾಮ ಅವರ ಕಿವಿಯೂ ಕೇಳಿಸದಂತೆ ಆಗಿದೆ. ನಡುಗುತ್ತಾ ನಿಂತೇ ನಮ್ಮ ಪರಿಚಯ ಆದ ಮೇಲೆ ಪ್ರಯಾಸದಿಂದ ಕರೆತಂದು ಕುರ್ಚಿಯ ಮೇಲೆ ಕೂಡಿಸಲಾಯಿತು. ……… ನಡುಗುತ್ತಿದ್ದ ದೇಹವನ್ನು ಸ್ವಾಧೀನಕ್ಕೆ ತಂದುಕೊಳ್ಳಲು ಬಹಳ ಪ್ರಯತ್ನಪಟ್ಟರು. ……. ಸುಮ್ಮನೆ ನಡುಗುತ್ತಲೇ ಇದ್ದ ಅವರ ಕೈಗಳನ್ನು ಗಮನಿಸುತ್ತಿದ್ದೆ. ಜೀವದ ಹಾಗೆ ಅದು ಚಡಪಡಿಸುತ್ತಿತ್ತು. ….. ದುಗುಡ ಹೊತ್ತು ಅವರಿಂದ ಬೀಳ್ಕೊಂಡು ನಾವು ಹೊರಬಂದೆವು…. ಅವರನ್ನು ಕಂಡುಬಂದ ಒಂದಿಡೀ ದಿನ ಮನಸ್ಸು ಮುರಿದುಬಿದ್ದಿತ್ತು. ಯಾವುದನ್ನು ಮಾಡಲು ಹೊರಟರೂ ಅದೇ ಚಿತ್ರ ಕಣ್ಣಿಗೆ ಕಟ್ಟತೊಡಗಿತ್ತು. ಯಾವತ್ತೋ ಓದಿದ ಅವರ ಕಥೆಗಳನ್ನು ಮತ್ತೆ ಓದಬೇಕೆನಿಸಿ ಪುಸ್ತಕದ ಗೂಡಿನಲ್ಲಿ ತಡಕಾಡಿದೆ. ಆ ಪುಸ್ತಕ ಅವರ ಹಾಗೆ ಅಜ್ಞಾತವಾಗಿ ಇತ್ತು. ಭಾನುವಾರವಾದ್ದರಿಂದ ಆ ಇಡೀ ಪುಸ್ತಕ, ಏಳು ಕಥೆಗಳ ‘ಕಥಾ ಜಗತ್ತು ತೆರೆದಿಟ್ಟುಕೊಂಡಿತು. …. ‘ ತಬ್ಬಲಿಗಳು ಕಥೆ ಖಾಸನೀಸರ ಮಾಸ್ಟರ್ ಪೀಸ್. ನವ್ಯೋತ್ತರ ಕಾಲದ ಮುಖ್ಯ ಕಥೆಗಳಲ್ಲಿ ಒಂದು. ಕೌಟುಂಬಿಕ ಹಿನ್ನಲೆಯ ಆತ್ಮಹತ್ಯೆಯೊಂದರ ಸುತ್ತಾ ಬಿಡಿಸಿಟ್ಟುಕೊಳ್ಳುವ ಕಥೆಯ ಶಿಲ್ಪ ….. ಮಂತ್ರಾಲಯದ ಪರಿಸರದಲ್ಲಿ ಕುಟುಂಬದ ಎಲ್ಲರೂ ತಮ್ಮ ತಮ್ಮ ನಿಜಗಳನ್ನು ಕಂಡುಕೊಳ್ಳುತ್ತಾ ಮಾನಸಿಕವಾಗಿ ಹಾಗೂ ಭೌತಿಕವಾಗಿ ಛಿದ್ರಗೊಳ್ಳುತ್ತಾರೆ ….. ಖಾಸನೀಸರ ಕಥಾಜಗತ್ತು ಕುಟುಂಬ,ಕೌಟುಂಬಿಕ ಕ್ರೌರ್ಯ, ಇವೆಲ್ಲದರ ಜೊತೆಗೆ ಮನುಷ್ಯರ ಅಸಹಾಯಕತೆ, ಅಸಹನೀಯತೆಗಳನ್ನು ತನ್ನ ವಿವರಗಳಲ್ಲಿ ಎತ್ತಿ ತೋರುತ್ತದೆ. ಇಂಥ ಪ್ರಬುದ್ಧ ಹಾಗೂ ಸೂಕ್ಷ್ಮ ಕಥೆಗಾರರಾದ ಅವರು ಬರೆದದ್ದು ಕಡಿಮೆ ಆದರೂ ನಮ್ಮಲ್ಲಿ ಅದನ್ನು ಕುರಿತು ಗಮನಹರಿಸಿದ್ದು ಇನ್ನೂ ಕಡಿಮೆ.
ಮತ್ತಷ್ಟು ಓದು 
Like this:
Like ಲೋಡ್ ಆಗುತ್ತಿದೆ...