ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು, ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕøತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಾಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು( ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.
ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು. ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.
ಮತ್ತಷ್ಟು ಓದು 
ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩
– ಷಣ್ಮುಖ ಎ
ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
- ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧
- ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೨
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಚಿತ್ರಣ– ಕಾಯಿದೆ ಮತ್ತು ವಾಸ್ತವ ಸ್ಥಿತಿಗಳು
ಈ ವರದಿಯಲ್ಲಿ ಸಂಗ್ರಹಿಸಿರುವ ಅಂಕಿ-ಅಂಶ ಮತ್ತು ಉಲ್ಲೇಖಿತವಾಗಿರುವ ವಿವರಣೆಗಳನ್ನೇ ಗಮನಿಸಿದರೂ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯು ಏಕೆ ವಿಫಲವಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ. ಈ ವರದಿಯಲ್ಲಿನ ಅಂಶಗಳು ಸ್ಪಷ್ಟಪಡಿಸುವ ಹಾಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಜಾತಿವ್ಯವಸ್ಥೆಯ ಚೌಕಟ್ಟಿನಡಿಯಲ್ಲಿ ನಿರೂಪಿಸಲಾದ ಸಾಮಾಜಿಕ ತಾರತಮ್ಯದ ಅಥವಾ ಅಸ್ಪೃಷ್ಯತೆಯ ಆಚರಣೆಯ ಹೆಸರಿನಲ್ಲಿ ದಾಖಲಾಗುತ್ತಿರುವುದು ಕೆಲವೇ ಪ್ರಕರಣಗಳು. ಅದರಲ್ಲೂ ನೇರವಾಗಿ ಈ ರೀತಿಯ ಪ್ರಕರಣಗಳಲ್ಲಿ ನಿಂದನೆ ಮತ್ತು ಹಲ್ಲೆಗಳನ್ನೊಳಗೊಂಡ ಪ್ರಕರಣಗಳೇ ಹೆಚ್ಚಿನವು. ಉಳಿದಂತೆ ಈ ವರದಿಯು ನಿಜಕ್ಕೂ ಸಾಮಾಜಿಕ ತಾರತಮ್ಯ, ಅಸ್ಪೃಷ್ಯತಾಚರಣೆ ಎನ್ನುವುಂತಹ ಪ್ರಕರಣಗಳನ್ನು ವಿರಳವಾಗಿ ಹೆಸರಿಸುತ್ತದೆ. ಉಳಿದಂತೆ ನಿಂದನೆ, ಹಲ್ಲೆ, ಭೂ ವಿವಾದ, ಗೋಮಾಳ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಕರಣಗಳೇ ಹೆಚ್ಚಾಗಿವೆ.
ಈ ರೀತಿಯ ವ್ಯಾಜ್ಯಗಳು ಸಾಮಾನ್ಯವಾಗಿ ಜನರ ನಡುವೆ ದಲಿತರೆನಿಸಿಕೊಂಡಿರುವವರ ನಡುವೆ, ದಲಿತರಲ್ಲದವರ ನಡುವೆ ಮತ್ತು ದಲಿತರೆನಿಸಿಕೊಂಡವರು ಮತ್ತು ಅಲ್ಲದವರ ನಡುವೆ ನಡೆಯುತ್ತಲೇ ಇರುತ್ತವೆ. ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ ಇದು ಸಾಮಾನ್ಯ ಸಂಗತಿ. ಆದರೆ,ಈ ರೀತಿಯಲ್ಲಿ ಸಾಮಾನ್ಯವಾಗಿ ದಾಖಲಾಗುವ ಪ್ರಕರಣಗಳಲ್ಲಿ ವಾದಿ ಪ್ರತಿವಾದಿಗಳು ದಲಿತರು ಮತ್ತು ದಲಿತೇತರರು ಆಗಿದ್ದರೆ, ಅದು ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ ಅಷ್ಟೇ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಪ್ರಕರಣವೆಂದು ದಾಖಲಾಗುತ್ತದೆಯಷ್ಟೆ.
ಸಾಮಾನ್ಯವಾಗಿ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ ಅದರಲ್ಲಿ ತಪ್ಪಿತಸ್ಥರು ಮತ್ತು ಮುಗ್ದರ ತೀರ್ಮಾನ ಸಾಧ್ಯವಿಲ್ಲ. ಅದರೆ ಅದೇ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದ ತಕ್ಷಣ ಅಲ್ಲಿ ಅಪರಾಧಿ ಮತ್ತು ಮುಗ್ದರ ತೀರ್ಮಾನವಾಗಿರುತ್ತದೆ. ಹಾಗಾಗಿಯೇ ಅಲ್ಲವೇ? ಇಲ್ಲಿ ಕೇವಲ ಪ್ರಕರಣ ದಾಖಲಾಗಿ ಕನ್ವಿಕ್ಷನ್ ಆಗದಿದ್ದರೂ, ಪೆಂಡಿಂಗ್ ಇದ್ದರೂ, ರಾಜಿಮಾಡಿಕೊಂಡಿದ್ದರೂ ಸಹ ಸರ್ಕಾರದ ಹಣಕಾಸಿನ ಪರಿಹಾರ ನೀಡಲಾಗಿರುತ್ತದೆ. ಅಲ್ಲದೆ ದೂರದಾರರೆನಿಸಕೊಂಡ ಮತ್ತು ದೌರ್ಜನ್ಯಕ್ಕೆ ಒಳಗಾದವರೆನಿಸಿಕೊಂಡ ದಲಿತರೂ ಸಹ ಪ್ರಕರಣಗಳನ್ನು ದಾಖಲು ಮಾಡಿ ಪರಿಹಾರ ಪಡೆದನಂತರ ಇಡೀ ಪ್ರಕರಣದ ಬಗ್ಗೆ ಆಸಕ್ತಿಯನ್ನೇ ತೋರದೆ ಕೆಲಸ ಮುಗಿಯಿತೆಂದು ಸುಮ್ಮನಿದ್ದುಬಿಡುತ್ತಿರುತ್ತಾರೆ.
ಈ ಕಾಯ್ದೆಯಡಿಯಲ್ಲಿ ದಲಿತರ ದೌರ್ಜನ್ಯ ಪ್ರಕರಣಗಳನ್ನು ಪರಿಭಾವಿಸುವುದರಲ್ಲಿಯೇ ಸಮಸ್ಯೆಗಳಿವೆ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಹಳ್ಳಿಯ ದೀನರ ನಿಜವಾದ ಜಾತಿ ತಾರತಮ್ಯ ಅಥವಾ ಅಸ್ಪೃಷ್ಯತೆಯ ಆಚರಣೆಗಳ ಸಮಸ್ಯೆಗಳನ್ನು ಇದು ಹೇಗೆ ಪರಿಹರಿಸುತ್ತದೆ? ಎನ್ನುವ ಪ್ರಶ್ನೆ ಏಳುತ್ತದೆ. ಹೇಳಬೇಕೆಂದರೆ ಅಸ್ಪೃಷ್ಯತೆಯ ಆಚರಣೆಗಳ ಸಂದರ್ಭಕ್ಕಿಂತ ಅತಿಹೆಚ್ಚಾಗಿ ಈ ಕಾಯ್ದೆಯು ಬಳಕೆಯಾಗಿರುವುದೇ ಬೇರೆ ಸಂದರ್ಭಗಳಲ್ಲಿ. ಹಾಗಿದ್ದಪಕ್ಷದಲ್ಲಿ ಮಂತ್ರಿಗಳು ಮತ್ತು ಬುದ್ಧಿಜೀವಿ ವರ್ಗಗಳು ಈ ಕಾಯ್ದೆಯು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ, ಈ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಅತ್ಯಂತ ಕಡಿಮೆ ಇದೆಯೆಂದು ಕಳವಳ ಪಡುವುದರ ಹಿಂದೆ ಯಾವ ವಾಸ್ತವ ಸಮಸ್ಯೆಯ ಕಾಳಜಿ ಇದೆ?
ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೨
– ಷಣ್ಮುಖ ಎ
ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ಕ್ಷೇತ್ರಾಧ್ಯಯನ ಆಧಾರಿತ ಮಾಹಿತಿಗಳು ಮತ್ತು ವಿಶ್ಲೇಷಣೆ:
ಈ ಮೇಲಿನ ಪ್ರಶ್ನೆಯನ್ನು ಪರಿಶೀಲಿಸಲು ಒಂದು ಕ್ಷೇತ್ರಾಧಾರಿತ ಸಂಶೋಧನಾ ಪ್ರಾಜೆಕ್ಟ್ನ ಮಾಹಿತಿಗಳು ಕೆಲವು ವಿಶೇಷವಾದ ಆಸಕ್ತಿಕರ ಅಂಕಿ-ಅಂಶಗಳನ್ನು ಕೊಡುತ್ತವೆ. ಈ ಕ್ಷೇತ್ರಾಧ್ಯಯನದ ಮಾಹಿತಿಗಳು, ದಾಖಲಾಗುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಅವುಗಳು ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣದ ನಡುವಿನ ಅಂತರಕ್ಕೆ ಕಾರಣಗಳ ಬಗ್ಗೆ ಬೇರೆಯದೇ ರೀತಿಯಲ್ಲಿ ಯೋಚಿಸಲು ದಾರಿ ಮಾಡಿಕೊಡುತ್ತದೆ.
ಮೈಸೂರು ವಿಶ್ವವಿದ್ಯಾನಿಲಯದ ಆಂತ್ರೋಪಾಲಜಿ ವಿಭಾಗದ ಅಧ್ಯಾಪಕರೊಬ್ಬರು ತಮ್ಮ ಏಳುಜನ ಸಂಶೋದನಾ ಸಹಾಯಕರೊಂದಿಗೆ ಕರ್ನಾಟಕ ಸರ್ಕಾರದ ಪರವಾಗಿ ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಕೇಂದ್ರದ ವತಿಯಿಂದ ಒಂದು ಸಂಶೋಧನಾ ಅಧ್ಯಯನ ಕೈಗೊಂಡಿದ್ದರು. ಇದು ‘ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಮತ್ತು ದೌರ್ಜನ್ಯಕ್ಕೆ ಬಲಿಯಾದವರಿಗೆ ನೀಡಲಾಗಿರುವ ಪರಿಹಾರಗಳ’ ಬಗ್ಗೆ ಮಾಡಲಾದ ಒಂದು ಮೌಲ್ಯಮಾಪನ ಅಧ್ಯಯನವಾಗಿದೆ. ಇದು ಬಾಗಲಕೋಟೆಯೊಂದನ್ನುಳಿದು ಉಳಿದ ಕರ್ನಾಟಕದ ಎಲ್ಲಾ 26 ಜಿಲ್ಲೆಗಳಿಂದ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಪರಿಹಾರಗಳನ್ನು ಪಡೆದ ಫಲಾನುಭವಿ ದಲಿತರನ್ನು ಮತ್ತು ಅಪರಾಧಿಗಳನ್ನು ಗುರುತಿಸಿ ಅವರುಗಳಲ್ಲಿ ಪ್ರತಿಜಿಲ್ಲೆಯಿಂದ ಶೇ. 10ರಷ್ಟು ಜನರನ್ನು ಸಂದರ್ಶನ ನಡೆಸಿದ್ದಾರೆ.
ಮೊದಲಿಗೆ ಅವರ ಅಧ್ಯಯನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಮೂಲಕಾರಣ (Root Cause) ವಾದ ಅಂಶಗಳಾವುವು ಮತ್ತು ಅವುಗಳಲ್ಲಿ ಯಾವ ಯಾವ ರೀತಿಯ ನಡವಳಿಕೆಗಳು ಬರುತ್ತವೆ ಎಂಬುದನ್ನು ಯಾವ ರೀತಿ ಗುರುತಿಸುತ್ತಾರೆ ಎನ್ನುವುದನ್ನು ನೋಡೋಣ.
ದಲಿತರ ಮೇಲಿನ ದೌರ್ಜನ್ಯಕ್ಕೆ ಮೂಲಕಾರಣಗಳು: ಈ ವರದಿಯಲ್ಲಿ ನಮೂದಿಸಿರುವಂತೆ ಪೋಲೀಸರು ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಕಾರಣಗಳು ಮತ್ತು ಅಧ್ಯಯನದ ಸಂದರ್ರ್ಭದಲ್ಲಿ ಸಂದರ್ಶಿತ ಮಾಹಿತಿದಾರರು ನೀಡಿದ ಕಾರಣಗಳನ್ನು ತುಲನೆ ಮಾಡಿ ಅವುಗಳನ್ನು ವರ್ಗೀಕರಿಸಿದ್ದಾರೆ. ಅವುಗಳೆಂದರೆ: ಸಾಮಾಜಿಕ ತಾರತಮ್ಯ, ಭೂವಿವಾದ, ರಾಜಕೀಯ ವೈಷಮ್ಯ, ಹಿಂದಿನ ವೈರತ್ವ, ಆರ್ಥಿಕ ವ್ಯವಹಾರಗಳು, ಕಾರ್ಮಿಕ ವ್ಯಾಜ್ಯಗಳು, ಮತ್ತು ಇತರೆ. ಅವುಗಳ ಕುರಿತು ಸಂಕ್ಷಿಪ್ರವಾಗಿ ನೋಡುವುದಾದರೆ,
- ಸಾಮಾಜಿಕ ತಾರತಮ್ಯ (Social Discrimination): ಈ ವರ್ಗೀಕರಣದಡಿಯಲ್ಲಿ ಅಸ್ಪೃಷ್ಯತೆ ಆಚರಣೆಗಳು ಎನ್ನಬಹುದಾಂತಹ ಅಂಶಗಳನ್ನು ಪಟ್ಟಿಮಾಡಲಾಗಿದೆ ಎನ್ನುತ್ತದೆ ವರದಿ. ಮುಖ್ಯವಾಗಿ, ಸಮಾಜದ ಪ್ರತಿಯೊಂದು ಜಾತಿಗಳು ಪರಸ್ಪರ ವ್ಯವಹರಿಸುವಂತಹ ಪ್ರದೇಶಗಳಾದ ಶಾಲೆಗಳು, ಆಸ್ಪತ್ರೆಗಳು, ಗ್ರಾಮ ಅಥವಾ ಪಟ್ಟಣ ಪಂಚಾಯಿತಿಗಳು, ಮತ್ತಿತರೆ ಕಾರ್ಯಕ್ಷೇತ್ರಗಳಲ್ಲಿ ಮೇಲ್ಜಾತಿಗಳ ಸದಸ್ಯರಿಂದ ಅಸ್ಪೃಷ್ಯತೆಯ ಆಚರಣೆಗಳೆಂದು ಕಂಡುಬಂದ ಅಂಶಗಳು. ಅವುಗಳೆಂದರೆ:
- ಶಾಲೆಗಳಲ್ಲಿ ಪರಿಶಿಷ್ಟಜಾತಿಯ ಮಕ್ಕಳನ್ನು ಪ್ರತ್ಯೇಕ ಬೆಂಚ್ಗಳಲ್ಲಿ ಕುಳಿತುಕೊಳ್ಳುವಂತೆ ಮಾಡಿರುವುದು.
- ವಿಶೇಷ ಸಮಾರಂಭಗಳು, ವಿಧಿ ಆಚರಣೆಗಳು ಹಬ್ಬಗಳ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ಊಟಕ್ಕೆ ಪ್ರತ್ಯೇಕ ಸಾಲಿನಲ್ಲಿ ಕೂರಿಸುವುದು.
- ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯದಂತೆ ಪರಿಶಿಷ್ಟ ಜಾತಿಯ ಸದಸ್ಯರನ್ನು ತಡೆಯುವುದು.
- ಗ್ರಾಮೀಣ ಪ್ರದೇಶಗಳ ಕೆಲವು ಹೊಟೇಲುಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರುಗಳಿಗೆ ಪ್ರತ್ಯೇಕ ಲೋಟ ಮತ್ತು ತಟ್ಟೆಗಳಲ್ಲಿ ಉಪಾಹಾರ ಪಾನಿಯಗಳನ್ನು ನೀಡಿರುವುದು.
- ಹಲವು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ದೇವಾಲಯ ಪ್ರವೇಶಕ್ಕೆ ನಿರಾಕರಿಸುವುದು.
- ಸಾರ್ವಜನಿಕ ಕೊಳವೆಗಳಿಂದ ನೀರು ಪಡೆಯುವಾಗ ಉನ್ನತ ಜಾತಿಯ ಸದಸ್ಯರು ಪರಿಶಿಷ್ಟ ಜಾತಿಯ ಸದಸ್ಯರೊಂದಿಗೆ ಜಗಳವಾಡುವುದು ಕಂಡುಬರುತ್ತದೆ. ಮೇಲ್ಜಾತಿಯವರು ಕೆಳಜಾತಿಯವರಿಗೆ ಕೆಲವು ಪ್ರದೇಶಗಳಲ್ಲಿ ನೀರು ಹಿಡಿದುಕೊಳ್ಳಲು ಬಿಡುವುದಿಲ್ಲ.
ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧
– ಷಣ್ಮುಖ ಎ
ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ-577451
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಮೂಲಕ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಇವೆ. ಈ ರೀತಿಯ ದೌರ್ಜನ್ಯಗಳಿಂದ ದಲಿತರನ್ನು ರಕ್ಷಿಸಿ ಅವರನ್ನು ಅಸ್ಪೃಷ್ಯತೆಯ ಆಚರಣೆಗಳಿಂದ ಮುಕ್ತಿಗೊಳಿಸುವ ಒಂದು ಮಹಾಅಸ್ತ್ರವೆಂಬಂತೆ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆಯನ್ನು ಭಾರತ ಸರ್ಕಾರ 1989ರಲ್ಲಿ ಜಾರಿಗೆ ತಂದಿದೆ. ಈ ಕಾಯಿದೆಯ ಜಾರಿಯಾದ ಎರಡು ದಶಕಗಳ ತರುವಾಯ ಈ ಕಾಯಿದೆಯ ಜಾರಿ ಮತ್ತು ಅದರ ಪರಿಣಾಮದ ಕುರಿತು ಚರ್ಚೆಗಳು ಮತ್ತು ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಈ ಚರ್ಚೆಗಳಲ್ಲಿನ ಸಾಮಾನ್ಯ ನಿಲುವೆಂದರೆ ಅಸ್ಪೃಷ್ಯತೆ ಆಚರಣೆಯ ವಿರುದ್ದ ಪ್ರಬಲವಾದ ಕಾಯಿದೆ ಇದ್ದರೂ ಇದರ ಪರಿಣಾಮಕಾರಿ ಜಾರಿಯಲ್ಲಿ ಅಧಿಕಾರಿಗಳು ಆಸಕ್ತಿವಹಿಸದಿರುವುದರಿಂದ ಈ ಕಾಯಿದೆಯಿಂದ ದಲಿತರಿಗೆ ಸಿಗಬೇಕಾದ ನ್ಯಾಯ ದೊರೆಯುತ್ತಿಲ್ಲ ಎನ್ನುವ ಸಾಮಾನ್ಯ ಆತಂಕ-ಕಾಳಜಿಗಳು ವ್ಯಕ್ತವಾಗುತ್ತಿವೆ.
ಪ್ರಸ್ತುತ ಲೇಖನವು ಈ ಆತಂಕಗಳ ವಾಸ್ತವತೆಯನ್ನು ಪರೀಕ್ಷಿಸಲು ಪ್ರಯತ್ನಿಸಿದೆ.ಸರ್ಕಾರವೇ ನಡೆಸಿರುವ ಈ ಕಾಯಿದೆಯ ಮೌಲ್ಯಮಾಪನ ಅಧ್ಯಯನ ವರಧಿಯ ಅಂಕಿಅಂಶಗಳು ಮತ್ತು ಅದರಲ್ಲಿನ ವಿವರಣೆಗಳನ್ನು ಆದರಿಸಿ ಈ ಕಾನೂನಿನಡಿಯಲ್ಲಿ ದಾಖಲಾಗಿರುವವ ಪ್ರಕರಣಗಳ ವಾಸ್ತವ ಸ್ಥಿತಿಯನ್ನು ಇಲ್ಲಿ ಪರೀಕ್ಷಿಸಲಾಗಿದೆ.
ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ, ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ದಲಿತರು ಈ ಕಾನೂನಿನಿಂದ ದೊರೆಯುವ ಪರಿಹಾರ ಪಡೆದ ನಂತರ ಪ್ರಕರಣದ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುವುದೇ ಪ್ರಕರಣಗಳು ಇತ್ಯರ್ಥಗೊಳ್ಳದಿರಲು ಮುಖ್ಯ ಕಾರಣವೆಂದು ಗುರುತಿಸುತ್ತದೆ. ಜೊತೆಗೆ, ಈ ಕಾನೂನಿನಡಿಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಕಾರಣಕ್ಕೆ ದಾಖಲಾಗುವ ಪ್ರಕರಣಗಳು ಅತಿಕಡಿಮೆ ಇದ್ದು ಇತರೇ ಜಗಳ-ವ್ಯಾಜ್ಯಗಗಳೇ ಈ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವ ಅಂಶವನ್ನು ಎತ್ತಿ ತೋರಿಸುತ್ತವೆ.ಈ ರೀತಿಯಲ್ಲಿ ಈ ಕಾಯಿದೆಯು ಅಸ್ಪೃಷ್ಯತೆಯ ಆಚರಣೆಯಲ್ಲದ ವಿಚಾರಗಳಿಗೆ (ದುರು)ಉಪಯೋಗವಾಗುತ್ತಿರುವುದಕ್ಕೆ ಈ ಕಾಯಿದೆ ರೂಪುಗೊಂಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿಯೆ ಸಮಸ್ಯೆ ಇರಬೇಕೆಂದು ಈ ಲೇಖನವು ತರ್ಕಿಸುತ್ತದೆ.
ಮುಖ್ಯವಾಗಿ, ಭಾರತೀಯ ಸಮಾಜದ ಕುರಿತ ಜಾತಿವ್ಯವಸ್ಥೆಯ ಚೌಕಟ್ಟಿನ ಹಿನ್ನೆಲೆಯಲ್ಲಿ ಕೆಳಜಾತಿ-ಮೇಲ್ಜಾತಿಗಳ ಕುರಿತು ವಸಾಹತುಶಾಹಿ ಸ್ಟೀರಿಯೋಟೈಪುಗಳು ಸಮಾಜವಿಜ್ಞಾನದಲ್ಲಿ ಹರಡಿಕೊಂಡಿದೆ. ಜಾತಿಗಳ ಕುರಿತ ಈ ರೀತಿಯ ಸ್ಟೀರಿಯೋಟೈಪುಗಳನ್ನು ಆಧರಿಸಿದ ನಿರೂಪಣೆಗಳಿಂದ ಹುಟ್ಟಿಕೊಂಡಿರುವ ಬೌದ್ಧಿಕ ವಲಯದಲ್ಲಿನ ಸಾಮಾನ್ಯ ಗ್ರಹಿಕೆಗಳು ಈ ಕಾಯಿದೆ ರೂಪಿತಗೊಳ್ಳಲು ಕಾರಣವಾಗಿದೆ. ಈ ಸಾಮಾನ್ಯಗ್ರಹಿಕೆಗಳು ಇಲ್ಲಿಯ ವಾಸ್ತವ ಸ್ಥಿತಿಯಾಗಿರದೇ ಇರುವುದರಿಂದ ಈ ಕಾಯಿದೆಯಿಂದ ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನ್ಯಾಯಪಡೆಯುವುದಕ್ಕಿಂತ ಹೆಚ್ಚಾಗಿ ಲಾಭ ಪಡೆಯುವ ಕಡೆಗಷ್ಟೇ ಒಲವಿದೆ. ಅಲ್ಲದೆ ದಲಿತರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಈ ಕಾಯಿದೆಯು ಹಲವು ಹೊಸ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂದು ಈ ಲೇಖನವು ವಾದಿಸುತ್ತದೆ. ಮತ್ತಷ್ಟು ಓದು 
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3
– ಪ್ರೊ.ರಾಜಾರಾಮ್ ಹೆಗಡೆ,
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.
ಕರ್ನಾಟಕದ ಕುರಿತಂತೆ ವೃತ್ತಿಪರ ಇತಿಹಾಸಕಾರರ ಒಂದು ಇತಿಹಾಸ ಬಂದಿದ್ದೇ 1970 ರಲ್ಲಿ. ಅಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಇತಿಹಾಸಕ್ಕೇ ಪ್ರತ್ಯೇಕ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ. ಕರ್ನಾಟಕದ ಕುರಿತ ವೃತ್ತಿಪರ ವ್ಶೆಜ್ಞಾನಿಕ ಇತಿಹಾಸವು ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸದ ಚೌಕಟ್ಟಿನಲ್ಲಿ ಮೂಡಿಬಂದಿದೆ. ಏಕೀಕೃತ ಕರ್ನಾಟಕದ ಇತಿಹಾಸವಾಗಿ ಪಿ. ಬಿ. ದೇಸಾಯಿ ಮತ್ತಿತರರು 1970ರಲ್ಲಿ ಹೊರತಂದ A History of Karnataka ದ ಮುನ್ನುಡಿಯಲ್ಲಿ ಈ ಕರ್ನಾಟಕದ ಗಾಥೆಯನ್ನು ಈ ರೀತಿ ಇಡಲಾಗಿದೆ: ‘ ಈ ಶತಮಾನದ ಪ್ರಾರಂಭದ ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸವು ಅತ್ಯಂತ ಕತ್ತಲೆಯ ಕಾಲವಾಗಿದೆ, ಇದಕ್ಕೆ ನೆಲವಿರಲಿಲ್ಲ, ಭಾಷೆಯಿರಲಿಲ್ಲ, ಇತಿಹಾಸವಿರಲಿಲ್ಲ.. ಆದರೆ ಈಗ ಕರ್ನಾಟಕಕ್ಕೆ ಇತಿಹಾಸವರುವುದೊಂದೇ ಅಲ್ಲದೇ, ಅದು ವೈಭವೊಪೇತವೂ, ಅಸೂಯೆ ಹುಟ್ಟಿಸುವಂಥದ್ದೂ ಆಗಿದೆ ಎಂಬುದು ಗೊತ್ತಾಗಿದೆ.. ಆದಿಮ ಗತಕಾಲದಿಂದ ಅನೇಕ ಶತಮಾನಗಳ ಸುದೀರ್ಘ ಕಾಲದವರೆಗೆ ಅಡೆತಡೆಯಿಲ್ಲದೇ ಅಭಿಮುಖವಾಗಿ ಅದು ಚಲಿಸುತ್ತಿದೆ… ಕರ್ನಾಟಕದ ಜನತೆಗೆ ಯಾವುದೇ ನಾಗರಿಕ ರಾಷ್ಟ್ರವು ನ್ಯಾಯೋಚಿತವಾಗಿ ಹೆಮ್ಮೆಪಡಬಹುದಾದಂಥ ಉನ್ನತ ಸಾಧನೆಗಳಿವೆ.’ (ಸಂಕ್ಷಿಪ್ತಗೊಳಿಸಲಾಗಿದೆ) ಇಷ್ಟೇ ಅಲ್ಲದೆ, ಪ್ರಸ್ತುತ ಇತಿಹಾಸವು ಏನನ್ನು ನಿರ್ದೇಸುತ್ತದೆ? ಇದು ಒಂದು ಜನತೆಯು ನಾಗರೀಕ ಪೂರ್ವ ಅವಸ್ಥೆಯಿಂದ ನಾಗರೀಕ ಅವಸ್ಥೆಗೆ ಪದಾರ್ಪಣ ಮಾಡಿದ ಕಥನವಾಗಿದೆ. ಸದಾಕಾಲವೂ ಮಹೋನ್ನತ ಭಾರತ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡೇ ಒಂದು ಒಟ್ಟಂದದ ಸಾಂಸ್ಕೃತಿಕ ಘಟಕವಾಗಿ ಅವರ ವಿಕಾಸ, ಏಳ್ಗೆ, ಅವನತಿ ಮತ್ತು ವಿಘಟನೆಗಳು, ಹಾಗೂ ಆಧುನಿಕ ಕಾಲದಲ್ಲಿ ಮತ್ತೆ ಒಂದು ಏಕೀಕೃತ ಪ್ರಭುತ್ವದ ಜನತೆಯಾಗಿ ಅವರ ಪುನರುತ್ಥಾನ..(ಗಳ ಕಥನವಾಗಿದೆ)’ ಇವುಗಳ ಜೊತೆಗೇ ಇಂದಿನ ಕರ್ನಾಟಕದ ಹೊರಗಿನ ಪ್ರದೇಶಗಳ ಮೇಲೆ ಹಿಂದೆ ಅದಕ್ಕಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ‘ಮಹಾನ್ ಕರ್ನಾಟಕ’ (Greater Karnataka) ಎಂಬ ಪರಿಭಾಷೆಯಲ್ಲಿ ವರ್ಣಿಸಲಾಗಿದೆ. ‘ ಅತ್ಯಂತ ಹೆಚ್ಚಿನ ರಾಜರನ್ನು ಸೃಷ್ಟಿಸಿದ ಏಕಮೇವ ಪ್ರದೇಶ ಇದಾಗಿದೆ. ಇಲ್ಲಿನ ರಾಜರು ಓರಿಸ್ಸಾ, ಗೋವಾ, ಗುಜರಾಥ್, ಬಿಹಾರ, ರಾಜಸ್ಥಾನ, ಬೆಂಗಾಲ ಇತ್ಯಾದಿ ಪ್ರದೇಶಗಳಲ್ಲಿ ಆಳಿದ್ದಾರೆ. ಅದರ ಸಂಸ್ಸೃತಿಯ ಪ್ರಭಾವ ಹೊರಭಾಗಗಳಮೇಲೆ ಹೇಗಾಯಿತು, ಹಾಗೂ ‘ಮಹಾನ್ ಭಾರತ’ ಕ್ಕೆ ಕರ್ನಾಟಕದ ಕಾಣಿಕೆ ಏನು? ಇತ್ಯಾದಿಗಳ ಕುರಿತೂ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ.
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2
– ಪ್ರೊ.ರಾಜಾರಾಮ್ ಹೆಗಡೆ,
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’- ಭಾಗ 1
3. ಇಪ್ಪತ್ತನೆಯ ಶತಮಾನದ ನಾಲ್ಕನೆಯ ದಶಕದಿಂದ ಆರನೆಯ ದಶಕದ ವರೆಗೆ ಕನ್ನಡ ರಾಷ್ಟ್ರೀಯತೆಯ ಇತಿಹಾಸವನ್ನು ನಿರ್ವಚಿಸಿದ ಶಂಬಾ ಜೋಶಿಯವರು ಈ ಇತಿಹಾಸದ ಒಂದು ಮಹತ್ವಪೂರ್ಣ ಘಟ್ಟವನ್ನು ಪ್ರತಿಬಿಂಬಿಸುತ್ತಾರೆ. ಅವರು ಈ ಇತಿಹಾಸದ ರೂಪುರೇಷೆಗಳನ್ನು ಆಲೂರರ ಮಾದರಿಯಿಂದ ಪಡೆದುಕೊಂಡು ಅದನ್ನು ವಿಭಿನ್ನ ದಿಕ್ಕುಗಳಲ್ಲಿ ವಿಸ್ತರಿಸುತ್ತಾರೆ. ಈ ಪ್ರಯತ್ನದಲ್ಲಿ ಕನ್ನಡ ಎಂಬ ಗುರುತನ್ನು ಮತ್ತಷ್ಟು ಸತ್ವಪೂರ್ಣ ಪ್ರಭೇದವನ್ನಾಗಿ ರೂಪಿಸಿ ಅದಕ್ಕೆ ಇತಿಹಾಸವು ಒಂದು ಮೂಲಭೂತವಾದ ಅಗತ್ಯ ಎಂಬುದನ್ನು ನಿರೂಪಿಸಲಿಕ್ಕೆ ಇತಿಹಾಸದ ದರ್ಶನವನ್ನು ತಂದು ಅದಕ್ಕೆ ಸೇರಿಸುತ್ತಾರೆ. ಅವರ ‘ಕನ್ನಡದ ನೆಲೆ’ ಕೃತಿಯಲ್ಲಿ (1939) ಇದು ವ್ಯಕ್ತವಾಗಿದೆ. ಇಲ್ಲಿನ ಅವರ ಪ್ರಾರಂಭಿಕ ಜಿಜ್ಞಾಸೆಯ ಪ್ರಕಾರ ಕನ್ನಡಿಗರ ಮೂಲ ಜನಾಂಗವು ಯಾವುದು? ಅವರ ಗುಣಸ್ವಭಾವಗಳು ಎಂಥವು? ಎಂಬುದನ್ನು ತಿಳಿಯದೇ ಕನ್ನಡ ಸಂಸ್ಕೃತಿ ಸ್ಪಷ್ಟವಾಗಿ ಅರಿವಿಗೆ ಬಾರದು. ಈ ಅರಿವನ್ನು ಹೊಂದಲಿಕ್ಕೆ ಇತಿಹಾಸ ಅತ್ಯಗತ್ಯ. ಇತಿಹಾಸ ಎಂದರೆ ಸತ್ಯಶೋಧನೆ, ಅದು ಸ್ವ ಸ್ವರೂಪ ಜ್ಞಾನ, ಇದರ ಜ್ಞಾನವಿಲ್ಲದೇ ನಾಡನ್ನು ಕಟ್ಟುವುದು ಸಾಧ್ಯವಿಲ್ಲ. ಈ ರೀತಿ ಶಂಬಾ ಜೋಶಿಯವರು ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ದರ್ಶನವನ್ನು ತಿಳಿಸುತ್ತಾರೆ. ಅವರ ಇತರ ಕೃತಿಗಳಲ್ಲಿಯೂ ಪ್ರಾರಂಭದಲ್ಲಿ ಇಂಥ ಹೇಳಿಕೆಗಳು ಬರುತ್ತವೆ. ಅಂದರೆ ಕನ್ನಡತ್ವದ ಸ್ವ ಸ್ವರೂಪ ದರ್ಶನ ಇಂದು ಆಗಬೇಕಾದ ಮೂಲಭೂತ ಕೆಲಸವಾಗಿದ್ದು, ತಾವು ಆ ಕಾಯಕದಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಭಾವಿಸಿಕೊಂಡಿದ್ದು ಸ್ಪಷ್ಟ. ಈ ಸ್ವ-ಸ್ವರೂಪ ಐತಿಹಾಸಿಕ ವಿವರಗಳಿಂದ ಎದ್ದು ಬರುತ್ತದೆ. ಈ ವಿವರಗಳಲ್ಲಿ ರಾಜಮನೆತನಗಳ ಇತಿಹಾಸಕ್ಕೆ ಪ್ರಮುಖ ಸ್ಥಾನವಿಲ್ಲ, ಬದಲಾಗಿ ಕನ್ನಡತ್ವದ ಶೋಧನೆಯೇ ಅದರ ಪ್ರಮುಖ ಗುರಿ.
ಅವರ ‘ ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಯಲ್ಲಿ ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ಮತ್ತೊಂದು ಗ್ರಹಿಕೆ ಕಾಣಿಸಿಕೊಂಡಿದೆ: ಇತಿಹಾಸ ಒಂದು ಮಾನವವಾದೀ ಹುಡುಕಾಟವಾಗಿದೆ. ನೆನ್ನೆಯ ಸಂಗತಿಗಳು ನಮ್ಮ ಬಾಲ್ಯಸಂಗತಿಗಳಿದ್ದ ಹಾಗೇ. ಇಲ್ಲಿ ದೈವವಾದಕ್ಕೆ ಶರಣಾದರೆ ನಮ್ಮ ಕತೃತ್ವವನ್ನು ಕಳೆದುಕೊಂಡುಬಿಡುತ್ತೇವೆ. ‘ಇಂದು ತಮ್ಮ ನಾಡಿನ ಹೆಸರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಇವರು ಅಂದು ಅದು ಹೇಗೆ ಮಹೋನ್ನತ ಕತೃತ್ವವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಲು ಇತಿಹಾಸ ಜ್ಞಾನ ಬೇಕು. ರಾಷ್ಟ್ರ ಚರಿತೆ ವ್ಯಕ್ತಿ ಚರಿತೆಯ ಸಮಷ್ಟಿ ಆಬಿವ್ಯಕ್ತಿಯಾಗಿದೆ. ಪುರಾಣಕಥೆಗಳನ್ನು ನಂಬಿ ಇತಿಹಾಸವನ್ನು ಸೃಷ್ಟಿಸಿದರೆ ಮನುಷ್ಯ ಸಾಮರ್ಥ್ಯದ ನಿಜ ಸಂಗತಿ ತಿಳಿಯಲಾರದು. ಈ ರೀತಿ ಕನ್ನಡ ನಾಡು ಇನ್ನೂ ನಿರ್ಮಾಣವಾಗಬೇಕಾದ ವಾಸ್ತವವಾಗಿರುವುದರಿಂದ ಇತಿಹಾಸವನ್ನು ಮನುಷ್ಯ ಕತೃತ್ವವನ್ನು ಜಾಗೃತಿಗೊಳಿಸುವ ಸಾಧನವನ್ನಾಗಿ ಬಳಸಿಕೊಳ್ಳಬೇಕಾದರೆ ಅದನ್ನೂ ಮಾನವವಾದೀ ನೆಲೆಯಮೇಲೇ ನಿಲ್ಲಿಸುವ ಅಗತ್ಯವನ್ನು ಜೋಶಿಯವರು ಗುರುತಿಸುತ್ತಾರೆ. ಅಂದರೆ ಇತಿಹಾಸವು ಮನುಷ್ಯ ಸತ್ಯಗಳ ಶೋಧನೆಯೇ ಆಗಬೇಕು. ಆದರೆ ಈ ಮಾನವವಾದೀ ಇತಿಹಾಸವು ಪಾಶ್ಚಾತ್ಯ ಮಾನವವಾದದ ಇತರ ಮುಖಗಳನ್ನೂ ಹೊತ್ತೇ ಬರುವುದನ್ನೂ ಗಮನಿಸಬಹುದು. ಉದಾಹರಣೆಗೆ, ಈ ಇತಿಹಾಸವು ಮಾನವರ ಉಗಮ, ವಿಕಾಸಗಳ ಕುರಿತು ಶೋಧಿಸುತ್ತದೆ, ಇದು ಮಾನವ ಜ್ಞಾನೋಪಲಬ್ಧಿಯ ಇತಿಹಾಸವಾಗಿದೆ. ಮತ್ತಷ್ಟು ಓದು 
ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1
ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.
ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.
ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು. ಮತ್ತಷ್ಟು ಓದು 
ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?
– ರಾಕೇಶ್ ಶೆಟ್ಟಿ
ಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…
ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.
ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.
ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.
ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:೧
-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)
ರಾಜಕಾರಣಿಗಳಾದ ನಾವು ಒಂದು ತರಹ ವಿಚಿತ್ರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಹೊರಜಗತ್ತಿನಲ್ಲಿ ನಾವು ಬರುತ್ತಿರವಾಗ ನಮಸ್ಕಾರ ಎನ್ನುತ್ತಾರೆ. ನಾವು ದಾಟಿದ ಮೇಲೆ ನಮ್ಮನ್ನು ಬಯ್ಯುತ್ತಾರೆ. ನನ್ನಿಂದ ಅವನಿಗೆ ಏನೋ ಆಗಬೇಕು ಆದ್ದರಿಂದ ಅವನು ನಮಗೆ ಬಹಳ ಗೌರವ ಕೊಡುತ್ತಾನೆ. ಇಲ್ಲವಾದರೆ ನಮಗೆ ಗೌರವ ಕೊಡುವುದಿಲ್ಲ. ಇಂದು ಸಮಾಜದಲ್ಲಿ ನಮ್ಮ ಬಗ್ಗೆ ಗೌರವಗಳು, ಪ್ರೀತಿಗಳು ಪ್ರಾಮಾಣಿಕವಾಗಿ ಪ್ರಕಟವೆ ಆಗುತ್ತಿಲ್ಲ. ಜನರಿಗೆ ನಮ್ಮ ವಿರುದ್ಧವಾದ ಭಾವನೆಗಳು ಇದ್ದಲ್ಲಿ ಅ ಭಾವನೆಗಳನ್ನು ನಮ್ಮ ವಿರುದ್ಧ ವ್ಯಕ್ತಪಡಿಸಿದರೆ ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳವುದಕ್ಕೆ, ಅದನ್ನು ಸರಿಪಡಿಸಿಕೊಳ್ಳವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬಹುದು. ಅಥವಾ ನಾವು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನೇರವಾಗಿ ಹೇಳಿದರೆ ಮತ್ತಷ್ಟು ಪುಷ್ಟಿಕರಿಸಿಕೊಂಡು ಬೆಳೆಸಬಹುದು. ಆದರೆ ಸಮಾಜವೇ ಹೈ ಡಿಗ್ರಿಯ ಹಿಪೋಕ್ರಟಿಕ್ ಪರಿಸರದಲ್ಲಿ ಬದುಕುತ್ತಿದೆ. ಜನರು ತಮಗೆ ನೇರವಾಗಿ ಅನ್ನಿಸಿದ್ದನ್ನು ಹೇಳುತ್ತಿಲ್ಲ. ಹಿಪೋಕ್ರಟಿಕ್ ಜನರ ಮಧ್ಯೆ ಬೆಳದು ಬರುವ ನನ್ನಂತ ರಾಜಕಾರಣಿ ಇನ್ನೂ ಎಷ್ಟು ಹಿಪ್ರೋಕ್ರಟಿಕ್ ಆಗಿರಬಹುದು ನೀವೆ ಯೋಚನೆ ಮಾಡಿ.
ಈ ಜನರ ಮಧ್ಯೆಯೇ ರಾಜಕಾರಣಿಗಳಾದ, ನಾವು ಇರಬೇಕು. ವಿದ್ಯಾವಂತ ಅವಿದ್ಯಾವಂತರ ಮಧ್ಯೆ, ಜಾತಿ ಪ್ರೇಮಿಗಳ ಮಧ್ಯೆ, ಜಾತಿ ಮೀರದವರ ಮಧ್ಯೆ, ನಾನು ಅನ್ನುವವರ ಮಧ್ಯೆ, ಊರು ಅನ್ನುವವರ ಮಧ್ಯೆ, ಅನ್ಯಾಯವನ್ನ ಮಾಡುವವರ ಮಧ್ಯೆ, ಅನ್ಯಾಯವನ್ನು ವಿರೋಧಿಸುವವರ ಮಧ್ಯೆ, ಈ ರೀತಿಯ ವ್ಯವಸ್ಥೆಯ ಮಧ್ಯೆ ಜನಪ್ರತಿನಿಧಿ ಬೆಳೆದುಬರಬೇಕಾದರೆ, ಭವಿಷ್ಯ ನಮ್ಮ ಕಷ್ಟ ಅ ದೇವರಿಗೆ ಪ್ರೀತಿ. ಇತ್ತೀಚೆಗೆ ಬಹಳ ಸುಲಭವಾಗಿದೆ. ಸಮಾಜ ಹೇಗೆ ಭ್ರಷ್ಟವಾಗುತ್ತದೆಯೋ ಅದರ ಮಧ್ಯೆ ಅದೇ ರೀತಿಯ ಪ್ರತಿನಿಧಿಯು ಹುಟ್ಟಿಬರುತ್ತಿದ್ದಾನೆ. ಮತ್ತಷ್ಟು ಓದು 
ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-2
– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ
ಸಾರ್ವಭೌಮ ಪ್ರಭುತ್ವ(State) ಮತ್ತು ಸಾರ್ವಜನಿಕ ವಲಯ
ಇಂದಿನ ಭಾರತೀಯ ಪ್ರಭುತ್ವ ಎನ್ನುವ ಕಲ್ಪನೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲಾಗಿ ಬಂದಿದೆ. ಈ ವಿಷಯವು ನಿಸ್ಸಂಶಯವಾಗಿ ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು, ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಭಾರತದ ಸಂವಿಧಾನ ಕರ್ತೃಗಳು ಪಡೆದು ಭಾರತಕ್ಕೆ ಅಳವಡಿಸಿದ್ದಾರೆ ಎನ್ನುವುದೇ ಆ ಹೆಗ್ಗಳಿಕೆಯಾಗಿದೆ. ಆದರೆ ಈ ಹೆಗ್ಗಳಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು, ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅವುಗಳಿಗೆ ಪೂರಕವಾಗಿ ನಡೆದುಕೊಳ್ಳದೇ ಇರುವುದರಿಂದ, ಅವು ಇಲ್ಲಿ ಅಪಭ್ರಂಶ (distortion) ಕ್ಕೆ ಒಳಗಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ನಮಗೆ ಗೊತ್ತಿರುವ ಹಾಗೆ ಸ್ಟೇಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಿಸಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸ್ಟೇಟ್ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸ್ಟೇಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸ್ಟೇಟ್ ಬೆಳೆದು ಬಂದಿದ್ದು ಪಶ್ಚಿಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಕಡಿಮೆ 17-18ನೇ ಶತಮಾನದ ನಂತರ ಎಂದೇ ಹೇಳಬಹುದು (Mukherji, Partha Nath, 2010). ಮತ್ತಷ್ಟು ಓದು 





