ಅಮೃತಾ
-ಮಾಲಿನಿ ಭಟ್
ಪ್ರೀತಿಯ ಕಂದ ನೀನು
ವಾತ್ಸಲ್ಯದ ಬಿಂದು ನೀ
ನಾ ಕಂಡ ಮೊದಲ ರಶ್ಮಿ,
ಮುಗ್ಧತೆಯ ಮೂರ್ತಿ ,
ಆ ಎಳೆ ಸ್ಪರ್ಶ,
ಆಹಾ!! ಅದೆಂತಹ ಮಧುರ
ಇರಲಿ ಸ್ಪರ್ಶ ನಿರಂತರ….
ಮುದ್ದು ಮುಖದ
ಏನೂ ಅರಿಯದ ಪುಟ್ಟ ಮೊಗ್ಗು ,
ಆ ನಿನ್ನ ನಗು ,
ಅದರಲ್ಲಿಯ ಅರ್ಥ ,
ನಾ ಏನೆಂದು ಊಹಿಸಲಿ,
ಮುಗ್ಧತನಡಿ ಹೇಗೆ ಗೃಹಿಸಲಿ,
ಆ ನೂತನ ನಗು ನಿರಂತರ ………..
ಪುಟ್ಟ – ಪುಟ್ಟ ಹೆಜ್ಜೆ ,
ಜಗವ ಗೆದ್ದ ಸಂಭ್ರಮ,
ಕಣ್ಣಲ್ಲಿ ಇನ್ನೇನೋ ತವಕ ,
ಮುಂದಿನದನ್ನು ಕಲಿಯುವ ಕಾತರ,
ಮೌನವಾಗೇ ಎಲ್ಲ ಗೆಲ್ಲುವೇ,
ಆ ತಾಳ್ಮೆ ನಿರಂತರ …………..
(ನನ್ನ ಪುಟ್ಟ ಮಗಳು ಅಮೃತಾ ಹುಟ್ಟಿದಾಗ , ಅವಳ ಆಟ , ನಗು , ಮಗುವಿನ ಆ ಮುಗ್ಧತೆಯನ್ನು ನೋಡಿ ಬರೆದ ಕವನ )
* * * * * * *
ಜಾತ್ಯಾತೀತ ‘ಜಿನ್ನಾ’ ಖಳ ನಾಯಕನಾದರೆ ‘ಗಾಂಧೀ’ ಯಾರು?..
– ಅಶ್ವಿನ್ ಅಮೀನ್
ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು ‘ಜಿನ್ನಾ ಒಬ್ಬ ಜಾತ್ಯಾತೀತ ನಾಯಕ’ ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು.ಆದರೆ, ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ – ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. ‘ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ’ ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರಣೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.
ಮಹಮ್ಮದ್ ಆಲಿ ಜಿನ್ನಾ… ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ… ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ… ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ… ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ…?





