ಕಿತ್ತಳೆ ಹಣ್ಣಿನ ಋಣ!?
– ನಿತ್ಯಾನಂದ.ಎಸ್.ಬಿ
ಆಗಲೇ ನಾಲ್ಕು ಘಂಟೆ ಆಗಿಬಿಟ್ಟಿತ್ತು. ಇನ್ನು ಐದು-ಹತ್ತು ನಿಮಿಷದಲ್ಲಿ ರೈಲು, ನಿಲ್ದಾಣಕ್ಕೆ ಬರುವುದರಲ್ಲಿತ್ತು. ಕಾಲೇಜಿನಲ್ಲಿ ಕಬಡ್ಡಿ ತಂಡಕ್ಕೆ ಸೇರಿದ್ದ ಭರತ ಅಭ್ಯಾಸ ಮುಗಿಸಿ ಬರುವುದು ತಡವಾಗಿಬಿಟ್ಟಿತ್ತು. ರೈಲು ಸಿಗದಿದ್ದರೆ ಬಸ್ಸಿನಲ್ಲಿ ಹೋಗಬೇಕು. ಜೇಬಿನಲ್ಲಿ ನಯಾಪೈಸೆ ದುಡ್ಡಿಲ್ಲ. “ದೇವ್ರೇ ರೈಲು ಮಿಸ್ಸು ಮಾಡಿಸಬೇಡಪ್ಪಾ” ಅಂತ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾ, ಒಂದೇ ಉಸಿರಿಗೆ ರೈಲು ನಿಲ್ದಾಣದ ಕಡೆಗೆ ಓಡುತ್ತಿದ್ದ. ಮದ್ಯಾಹ್ನ ಊಟ ಮಾಡದಿದ್ದುದರಿಂದ ಹೊಟ್ಟೆ ಬೇರೆ ಚುರುಗುಡುತ್ತಿತ್ತು. ರೈಲು ಸಿಕ್ಕಿಬಿಟ್ಟರೆ ಸಾಕೆಂದು ಶರವೇಗದಲ್ಲಿ ನಿಲ್ದಾಣದೆಡೆಗೆ ಧಾವಿಸುತ್ತಿದ್ದ.
ಭರತ ಹಳ್ಳಿಯ ಹುಡುಗ. ತೀರಾ ಬಡವನಲ್ಲದಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಅಂಥಾ ಉತ್ತಮವಾಗೇನೂ ಇರಲಿಲ್ಲ. ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸಲು ತಂದೆ ಹಗಲು ರಾತ್ರಿ ದುಡಿಯುತ್ತಿದ್ದರೆ, ಅಮ್ಮ ಮನೆಯ ಖರ್ಚನ್ನು ಸರಿಹೊಂದಿಸಲು ಬಟ್ಟೆ ಹೊಲಿಯುತ್ತಿದ್ದಳು. ತಂದೆ ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಭರತ, ಹೈಸ್ಕೂಲು ಮುಗಿದ ನಂತರ ಸ್ವಂತ ಖರ್ಚಿನಲ್ಲೇ ಓದಲು ತೀರ್ಮಾನಿಸಿದ್ದ. ಅದಕ್ಕಾಗಿಯೇ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಪೇಪರ್ ಹಾಕಿ, ಹಾಲು ಮಾರಿ, ಗಂಧದಕಡ್ಡಿ ಫ್ಯಾಕ್ಟರಿಗೆ ಹೋಗಿ ಒಂದಷ್ಟು ಹಣವನ್ನು ಸಂಪಾದಿಸಿದ್ದ. ಅದೇ ಹಣದಲ್ಲಿ ಕಾಲೇಜಿನ ಫೀಜು ಕಟ್ಟಿ, ಪುಸ್ತಕ, ಪೆನ್ನು, ಬ್ಯಾಗನ್ನು ಕೊಂಡುಕೊಂಡಿದ್ದ. ಒಂದು ರೈಲು ಪಾಸನ್ನೂ ಮಾಡಿಸಿಕೊಂಡಿದ್ದ. ಹೀಗಾಗಿ ಸದ್ಯ ಭರತನ ಹತ್ತಿರ ಒಂದು ಬಿಡಿಗಾಸೂ ಉಳಿದಿರಲಿಲ್ಲ. ಬೆಳಿಗ್ಗೆ ಊಟವನ್ನು ಡಬ್ಬಿಗೆ ಹಾಕಿಸಿಕೊಳ್ಳುವುದಕ್ಕೆ ತಡವಾಗುತ್ತದೆಂದು ಹಾಗೆಯೇ ಬಂದಿದ್ದರಿಂದ ಮದ್ಯಾಹ್ನದ ಊಟ ಖೋತಾ ಆಗಿತ್ತು.
“ಅಬ್ಭಾ.. ರೈಲು ಇನ್ನೂ ಬಂದಿಲ್ಲ”. ಎಂದು ನಿಟ್ಟುಸಿರು ಬಿಟ್ಟ ಭರತ, ದೂರದಿಂದಲೇ ಕಂಡ ಸ್ನೇಹಿತರ ಬಣ್ಣಬಣ್ಣದ ಬ್ಯಾಗುಗಳನ್ನು ನೋಡಿ ರೈಲು ಇನ್ನೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ. ಬಹಳ ಆಯಾಸವಾಗಿದ್ದುದರಿಂದ ಓಡುವುದನ್ನು ನಿಲ್ಲಿಸಿ ನಡೆಯಲು ಪ್ರಾರಂಭಿಸಿದ.ಭರತ ಒಳ್ಳೆಯ ಕಬಡ್ಡಿ ಆಟಗಾರ. ಮುಂದಿನ ವಾರ ಚಿತ್ರದುರ್ಗದಲ್ಲಿ ನಡೆಯಲಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದ. ಅದಕ್ಕಾಗಿಯೇ ದಿನನಿತ್ಯ ಕಠಿಣ ತಯಾರಿ ನಡೆದಿತ್ತು. ಜೊತೆಗೆ ಚಿತ್ರದುರ್ಗಕ್ಕೆ ಹೋಗಿಬರಲು ಬೇಕಾದ 340 ರೂಪಾಯಿಗಳನ್ನು ಒಟ್ಟು ಮಾಡಬೇಕಾಗಿತ್ತು. ಹೇಗೋ ಹೊಂದಿಸಿದರಾಯ್ತು ಎಂದುಕೊಂಡೇ ನಿಲ್ದಾಣ ಸೇರಿದ.
ಭರತನ ಬರುವಿಕೆಯನ್ನೇ ಕಾಯುತ್ತಾ ನಿಂತಿದ್ದ ಪ್ರಿಯಮಿತ್ರ ರಾಜೇಶ, ಭರತ ಹತ್ತಿರವಾಗುತ್ತಿದ್ದಂತೆ ಕೇಳಿದ. “ಏನೋ ಭರತ. ಇಷ್ಟು ಹೊತ್ತು ಮಾಡಿಬಿಟ್ಟೆ. ಕಬಡ್ಡಿ ಪ್ರಾಕ್ಟೀಸ್ ಮಾಡ್ತಿದ್ದಾ..?
ಭರತ ಹೂಂ ಎಂಬಂತೆ ತಲೆ ಆಡಿಸಿದ.
ಮತ್ತಷ್ಟು ಓದು 




