ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 16, 2014

6

ಸಾಮಾನ್ಯನ ಕಣ್ಣಲ್ಲಿ ಕರಾವಳಿ ಕೋಮುವಾದ

‍ನಿಲುಮೆ ಮೂಲಕ

-ಪ್ರಸಾದ್ ಗಣಪತಿ 

kOmuvaadaಪದೇ ಪದೇ ಕರಾವಳಿಯಲ್ಲಿ ಗಲಭೆಯಾದಾಗ ಕರಾವಳಿ ಕೋಮುವಾದ, ಕರಾವಳಿ ತಾಲಿಬಾನ್ ಎನ್ನುವ ಮಾತುಗಳು ಕೇಳಿ ಬರುತ್ತವೆ. ಪಕ್ಷವೊಂದರ ಆಡಳಿತಾವಧಿಯಲ್ಲಿ ನಡೆದ ಒಂದು ಸಮುದಾಯದ ಓಲೈಕೆ ನೀತಿಗಳು, ಹಾಗೂ ಒಂದು ಸಮುದಾಯದ ಮೇಲಿನ ಹಲ್ಲೆಗಳ ಬಗ್ಗೆ ತಳೆದ ಮೃದು ನೀತಿಗಳು ಈ ಅಸಹನೆ ಇದರ ಬೆನ್ನಿಗಿದ್ದಾವೆ ಎಂದು ಯಾರು ಹೇಳುವುದಿಲ್ಲ. ಪುತ್ತೂರಿನ ಹಿಂದೂ ಯುವತಿ ಸೌಮ್ಯ ಭಟ್ ಳನ್ನು ಇರಿದು ಕೊಂದಿದ್ದು, ಕಾಟಿಪಳ್ಳದಲ್ಲಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ, ಬಳ್ಕುಂಜೆ ರೇಪ್ ಮತ್ತು ಆತ್ಮಹತ್ಯೆ, ಲವ್ ಜಿಹಾದ್ ಮತ್ತು ಸಾಮಾಜಿಕ ತಾಣಗಳಲ್ಲಿ ಬೆತ್ತಲೆ ಚಿತ್ರಗಳ ( ಹಿಂದೂ ಯುವತಿಯರ ಚಿತ್ರ) ಈ ರೀತಿಯ ಪ್ರಕರಣಗಳಾದಗ ಸುಮ್ಮನಿರುವ ಬುದ್ಧಿ ಜೀವಿ ಬಳಗ, ಇನ್ನೊಂದು ಸಮುದಾಯದ ಮೇಲೆ ಹಲ್ಲೆ ನಡೆದಾಗ ಮಾತನಾಡುವುದು, ದೂರದೂರಲ್ಲಿ ಕುಳಿತು ಒಂದು ಪ್ರದೇಶದ ಜನರನ್ನು ಕೋಮುವಾದಿಗಳೆನ್ನುವುದು ಸತ್ಯಕ್ಕೆ ಅಪಚಾರವೆಸಗುವ ಕೆಲಸ. ಹಿಂದೆ ರೆಸಾರ್ಟ್ ಅಟ್ಯಾಕ್ ಆದಾಗ ಬರೆದ ಒಂದು ಲೇಖನದಲ್ಲಿ ನನ್ನ ಗ್ರಹಿಕೆಯನ್ನು ಬರೆದಿದ್ದೇನೆ.

ದೃಶ್ಯ ಮಾಧ್ಯಮದಲ್ಲಿ ಒಂದೇ ಸವನೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ಯುವಕ- ಯುವತಿಯರ ಮೇಲಿನ ಹಲ್ಲೆಯನ್ನು ನೋಡುತ್ತಾ ಯಾವುದು ಸರಿ ? ಯಾವುದು ತಪ್ಪು ? ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ಜನರು ಇರಬಹುದುದಾದ ಈ ಹೊತ್ತಿನಲ್ಲಿ ನನ್ನ ಅಭಿಪ್ರಾಯ ಬರೆಯುತ್ತಿರುವೆ. ಸಾಮಾನ್ಯವಾಗಿ ಕೋಮುವಾದ, ಧರ್ಮ ರಕ್ಷಣೆಯ ಕೃತ್ಯವೆಂದು ಹೇಳಲ್ಪಡುತ್ತಿರುವ ಇವು ಇನ್ನೊಂದು ಮಗ್ಗುಲಲ್ಲಿ ನೋಡಿದರೆ ಸಾಂಸ್ಕೃತಿಕ,ಸಾಮಾಜಿಕ, ಸಂಘರ್ಷವಾಗಿ ಗೋಚರಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಏನು ನಡೆಯುತ್ತಿದೆ ಎಂದು ಇತರೆ ಪ್ರದೇಶದಲ್ಲಿ ಕುಳಿತವರಿಗೆ ಅರ್ಥವಾಗುವುದು ಕೊಂಚ ಕಷ್ಟ.

ಅವರು ಮಾಧ್ಯಮದ ಮತ್ತು ಪ್ರಗತಿಪರರೆನಿಸಿಕೊಂಡವರ ಮಾತುಗಳನ್ನೆ ಅಂತಿಮವೆಂದು ನಂಬಬೇಕಾಗಿರುತ್ತದೆ.ಅದೇನೇ ಇರಲಿ ಈ ಕೃತ್ಯ ಖಂಡನೀಯವಾದುದ್ದು. ಇಲ್ಲಿ ಯಾರನ್ನು ಸಮರ್ಥಿಸದೆ, ನಾನು ನೋಡಿರುವ ಇಲ್ಲಿಯ ಬದುಕಿನ ಬಗ್ಗೆ ಹೆಚ್ಚು ಹತ್ತಿರದಿಂದ ಹೇಳಲು ಪ್ರಯತ್ನಿಸುತ್ತಿದ್ದೇನೆ.
ಪಡೀಲ್ ಮತ್ತು ಹಳೆಯ ಪಬ್ ಗಲಭೆಗಳನ್ನು ದೃಶ್ಯಮಾಧ್ಯಮಗಳು ದೇಶದ ಜನರ ಮುಂದೆ ತೋರಿಸಿವೆ. ಆದರೆ ಅಲ್ಲಿ ನಡೆಯುತ್ತಿರುವ ಇತರ ತಪ್ಪು; ಅದರ ಹಿಂದೆ ನಡೆಯುತ್ತಿದ್ದ ಇತರ ಬೆಳವಣಿಗೆಗಳು ಏನು ಅನ್ನುವುದನ್ನು ಯಾರೂ ಹೇಳಲೇ ಇಲ್ಲ. ಹಂಪನಕಟ್ಟೆಯ ಅಮ್ನೇಶಿಯ ಪಬ್ ಮತ್ತು ಈಗ ಪಡೀಲ್‌ಲ್ಲಿ ನಡೆದಿರುವ ಘಟನೆಯನ್ನು ನೋಡಿದಾಗ ಈ ರೀತಿಯ ಹಲ್ಲೆ ನಡೆಸಲು ಇವರಾರು? ಎಂದು ಖಂಡಿತ ಪ್ರಶ್ನಿಸಲೇಬೇಕು. ಆದರೆ ಏಕಮುಖ ಹೇಳಿಕೆಗಳನ್ನು ಕೊಟ್ಟು ಸುಮ್ಮನಾದರೆ ನಾವು ಕೂಡಾ ತಪ್ಪಿತಸ್ಥರಾಗುತ್ತೇವೆ.ಅದರ ಬದಲು ಇದಕ್ಕೆ ಕಾರಣವಾಗಿರುವುದನ್ನು ಆಳದಲ್ಲಿ ಸರಿ ಮಾಡುವುದರ ಬಗ್ಗೆ ಯಾರೂ ಯೋಚಿಸುವುದಿಲ್ಲ . ಮುಂದೆ ಮತ್ತೊಂದು ಇಂತಹ ಘಟನೆ ನಡೆದಾಗ ಮಾತ್ರ ಎಲ್ಲಾ ಎಚ್ಚರವಾಗುತ್ತಾರೆ.

ಇಲ್ಲಿ ಇಂತಹ ಕೆಲವು ಘಟನೆಗಳು ಹಲವು ಹಿನ್ನಲೆಗಳಲ್ಲಿ ನಡೆಯುತ್ತಲೇ ಇರುತ್ತವೆ.ಯಾರೂ ಅದನ್ನು ವಿಡಿಯೋ ಮಾಡುವುದಿಲ್ಲ.ಹೀಗಾಗಿ ಅದಾವುದು ದೊಡ್ಡ ವಿಚಾರಗಳೇ ಆಗುವುದಿಲ್ಲ. ಬದಲು ಕಡಲ ತೀರದ ಪತ್ರಿಕೆಗಳಲ್ಲಿ ಪ್ರಕಟವಾಗಿ ಮೌನವಾಗಿ ಬಿಡುತ್ತವೆ.ಕರಾವಳಿಯೆಂದರೆ ತಾಲೀಬಾನ್ ಎಂಬ ಪ್ರಖ್ಯಾತ ಕಟುಹೇಳಿಕೆ ಮತ್ತೆ ಮತ್ತೆ ಎಲ್ಲೆಡೆ ಕೇಳಿಬರುತ್ತದೆ.ಒಂದು ಪ್ರದೇಶದ ಸಮುದಾಯವನ್ನು ಹೀಗೆ ಸಾರಾಸಗಟಾಗಿ ತೀರ‍್ಮಾನಿಸುವುದು ಸರಿಯೆ?
ಯುವಕ- ಯುವತಿಯರು ಹಿಂದೂ ಮುಸ್ಲಿಂ ಎರಡೂ ಧರ್ಮದ ಸಂಘಟನೆಗಳಿಂದ ಹಲ್ಲೆಗೊಳಗಾಗುತ್ತಲೇ ಇರುತ್ತಾರೆ.ಪ್ರತಿ ಸಲ ಇಂತಹ ಘಟನೆಗಳು ನಡೆದಾಗ ಖಂಡನೆಗಳು ಕೇಳಿ ಬರುತ್ತವೆ ಹೊರತು ಇದು ಯಾಕೆ ನಡೆಯುತ್ತದೆ ಇದಕ್ಕೆ ವಾಸ್ತವದ ಮೂಲಕಾರಣ ಏನು ಎಂದು ಯೋಚಿಸಲೂ ಹೋಗುವುದಿಲ್ಲ. ಬದಲು ಸಿಧ್ಧ ಮಾದರಿಯ ವರದಿಗಳು ಎಲ್ಲಾ ಕಡೆಯಿಂದ ಬರುತ್ತವೆ.ಈ ಬಗ್ಗೆ ಸ್ಥಳೀಯರ ಪ್ರತಿಕ್ರಿಯೆ ಒಂದಿದ್ದರೆ ಇತರರ ಪ್ರತಿಕ್ರಿಯೆ ಇನ್ನೊಂದು ರೀತಿಯದ್ದಾಗಿರುತ್ತದೆ.
ಹೌದು.ಇಲ್ಲಿಯ ಹಲವು ಜನರ ಮನಸ್ಸಿನಲ್ಲಿ ಸುಪ್ತ ಅಸಮಧಾನಗಳಿವೆ.ಇದನ್ನೆಲ್ಲ ಕೋಮುವಾದ ಎಂದೆ ಸಾರಾಸಗಟಾಗಿ ಹೇಳಬಾರದು.ಅವು ಕೆಲವೊಮ್ಮೆ ಬಹಳಷ್ಟು ಉದ್ರಿಕ್ತವಾಗಿರುತ್ತವೆ. ಕೆಲವು ಬಾರಿ ಕೆಲವರಿಂದ ಉದ್ರೇಕಿಸಲ್ಪಟ್ಟಿರುತ್ತದೆ.ಮಂಗಳೂರು ನಗರದ ಒಳಗೆ, ಹೊರಗೆ- ಉಳ್ಳಾಳ, ಕಾಟಿಪಳ್ಳ, ಬಿ.ಸಿ.ರೋಡ್, ಕೈಕಂಬ, ಹಳೆಯಂಗಡಿ, ಬಜ್ಪೆ, ಸುರತ್ಕಲ್, ಕುಳಾಯಿ, ತಡಂಬೈಲ್, ಮುಲ್ಕಿ, ಉಡುಪಿಯ ಪಡುಬಿದ್ರಿ, ಮಲ್ಪೆ, ತೊಟ್ಟಂ, ಉಚ್ಚಿಲ, ಮೂಳೂರು, ಬೆಳಪು ಹೀಗೆ ಪಟ್ಟಿ ಮಾಡಬಹುದಾದ ಕೆಲವು ಪ್ರದೇಶಗಳಲ್ಲಿ ಆಯಾ ಧರ್ಮವನ್ನು ಪ್ರತಿನಿಧಿಸುವ ತೀವ್ರಗಾಮಿಗಳನ್ನು ಕಾಣಬಹುದು.ಅಲ್ಲಿರುವ ಜನರೆಲ್ಲ ಇಂತಹವರಲ್ಲ ಎನ್ನುವುದು ಮುಖ್ಯ. ಉದ್ರಿಕ್ತರಲ್ಲಿ ಕೆಲವರು ನಿರುದ್ಯೋಗಿಗಳು, ಕೆಲವರು ಸಣ್ಣ ಪುಟ್ಟ ಉದ್ಯೋಗ ಹೊಂದಿ ತಿರುಗಾಡುವ ಯುವಕರು.ಇವರೆಲ್ಲ ಕನ್ನಡ ಮಾಧ್ಯಮದಲ್ಲಿ ಓದಿದ ಮಧ್ಯಮವರ್ಗದವರು.ಮನೆಯಲ್ಲಿ ತಮ್ಮದೇ ಸಮಸ್ಯೆ ಹೊಂದಿದವರು.ಹಾಗೆಂದು ಊಟಕ್ಕಿಲ್ಲದ ಬಡತನವಿಲ್ಲ. ಇವರಲ್ಲಿ ಕೆಲವರು ಎಲ್ಲಿದ್ದರೂ ಅವರ ಕಮ್ಯೂನಲ್ ಸೆನ್ಸ್ ಜಾಗ್ರತವಾಗಿರುತ್ತದೆ.ಎಲ್ಲಿ ತಮ್ಮದಲ್ಲದ ಕೋಮಿನ ಯುವಕರೊಂದಿಗೆ ತಮ್ಮ ಕೋಮಿನ ಯುವತಿಯರು ತಿರುಗಾಡುತ್ತಾರೆ ಎಂದು ವಾಚ್ ಮಾಡುತ್ತಿರುತ್ತಾರೆ.ಮತ್ತು ಚಿಕ್ಕ ಪುಟ್ಟ ವಿಚಾರಕ್ಕೂ ಗಲಾಟೆ ಮಾಡಲು ಸಿದ್ದವಿರುತ್ತಾರೆ. ಇಲ್ಲಿ ಸಂವಹನಗಳು ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಕ್ಷಣದಲ್ಲಿ ಒಂದು ಹೊಡೆದಾಟಕ್ಕೆ ಜನರು ಸಿಧ್ಧವಾಗುವಷ್ಟು! ನಂಬುವುದು ಕೊಂಚ ಕಷ್ಟವಾಗಬಹುದು. ಆಟೋ ಚಾಲಕರಿಂದ ಹಿಡಿದು, ಬಸ್ ಕಂಡಕ್ಟರ್, ಡ್ರೈವರ್, ಅಂಗಡಿ ಮುಗ್ಗಟ್ಟುಗಳಲ್ಲಿ ಇರುವವರು ಕೂಡ ವಿರುದ್ಧ ಕೋಮಿನ ಯುವಕ-ಯುವತಿಯವರನ್ನು ಕಂಡ ಕೂಡಲೇ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸುವ ಚಾನೆಲ್‌ಗಳಾಗಿ ಕಾರ‍್ಯ ನಿರ್ವಹಿಸುತ್ತಾರೆ.

ಒಂದು ನೈಜ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ: ಅದೊಂದು ದಿನ ಮಂಗಳೂರಿನಲ್ಲಿ ಯುವಕ- ಯುವತಿಯರಿಬ್ಬರು ಬಸ್ಸನ್ನು ಏರಿದ್ದರು. ಆ ಸುದ್ದಿಯನ್ನು ಮಂಗಳೂರಿನ ಬಸ್ ಏಜೆಂಟರೊಬ್ಬರು ಕಳುಹಿಸಿದ್ದರು. ಆ ಬಸ್ಸು ಮುಂದಿನ ನಿಲ್ದಾಣದಲ್ಲಿನ ಸಂಘಟನೆಯವರಿಗೆ ರವಾನೆಯಾಗುವ ಹೊತ್ತಿಗೆ ಬಸ್ಸು ನಿಲ್ದಾಣ ಬಿಟ್ಟಿತ್ತು. ಮೂರನೆಯ ನಿಲ್ಧಾಣದಲ್ಲಿ ಇದರಾವುದರ ಅರಿವಿಲ್ಲದ ಅವರು ಸಿಕ್ಕಿಬಿದ್ದಿದ್ದರು. ಆ ಬಸ್ಸಿನಲ್ಲಿಯೇ ಅವರಿಬ್ಬರು ಥಳಿಸಲ್ಪಟ್ಟರು. ಅಲ್ಲಿಂದ ನಿರ್ಜನ ಪ್ರದೇಶದ ಕಡಲ ತೀರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಮತ್ತೆ ಥಳಿಸಲಾಯಿತು.ಅದರ ನಡುವೆ ಒಬ್ಬ ಕೇಳಿದ ‘ಬಾ ನನ್ನ ಜೊತೆ ಮಲಗು’ಅಂತ. ಅವಳು ಅಳುತ್ತಿದ್ದಳು. ಆತ ಮತತೆ, ‘ನಿನಗೆ ಅವನೊಡನೆ ತಿರುಗಲು ಆಗುತ್ತದೆ. ನನ್ನ ಜೊತೆ ಮಲಗಲು ಆಗುವುದಿಲ್ವಾ?’ ಎಂದು ಪ್ರಶ್ನಿಸುತ್ತಾ ಅವಳನ್ನು ಸ್ಪರ್ಶಿಸಲು ಮುಂದಾಗುತ್ತಾ ಥಳಿಸುತ್ತಿದ್ದರೆ ಆಕೆ ಅಳುವುದು ಬಿಟ್ಟು ಏನೂ ಮಾಡಲು ಸಾಧ್ಯವಿರಲಿಲ್ಲ.

ಘಟನೆ 2 : ಸಾಮಾಜಿಕ ಸಮಾನತೆ ಬಗ್ಗೆ ಮಾತನಾಡುವ ಕೆ.ಎಫ್.ಡಿಯಂತಹ ಸಂಘಟನೆಗಳಿಗೆ ಸೇರಿದ ಯುವಕರು ಬಾಬರಿ ಮಸೀದಿ ನಮಗೆ ಮರೆಯಲಾಗದು ಎನ್ನುವ ಬರಹವಿರುವ ಕೆಲವು ಪೋಸ್ಟರ್‌ಗಳನ್ನು ಮಧ್ಯರಾತ್ರಿಗಳಲ್ಲಿ ಅಂಟಿಸುತ್ತಾ ಹೋಗಿಬಿಟ್ಟಿದ್ದರು.ಅದು ಅಲ್ಲಿಯವರೆಗೆ ಯಾವುದೇ ಕೋಮುಗಲಭೆಗಳು ನಡೆಯದಿದ್ದ ಊರಾಗಿತ್ತು.ಮನಸ್ಸುಗಳ ನಡುವೆ ಗೋಡೆ ಇಡುವಂತಹ ಕೆಲಸ ಆಗಾಗ ಆಗುತ್ತಿರುತ್ತದೆ. ಇವು ನಡೆಯುತ್ತಿರುವುದು ಉದ್ರಿಕ್ತ ಯುವ ಮನಸ್ಸುಗಳಿಂದ ಇಂತಹ ಹಲವು ಘಟನೆಗಳು ನಡೆಯುತ್ತಲಿರುತ್ತವೆ. ಹಲವು ಬಾರಿ ಇಂತಹ ಪೋಸ್ಟರ್‌ಗಳನ್ನು ನಾವೇ ಹರಿದು ಬಿಸಾಕಿದ್ದಿದೆ.

ಘಟನೆ 3 : ಮಂಗಳೂರಿನ ಕೆಲವೆಡೆ ಆಯಾ ಕಟ್ಟಿನ ಸ್ಥಳಗಳಲ್ಲಿ ಪಾನಮತ್ತ ಕೆಲ ಯುವಕರು ಗುರಾಯಿಸುತ್ತಿರುವ ದೃಶ್ಯ ನೋಡಬಹುದು. (ಎರಡು ಧರ್ಮದವರೂ ಇರುತ್ತಾರೆ).ನೋಡಲು ಮುಸಲ್ಮಾನನಂತೆ ಕಾಣುವ ನಾನು ಹಂಪನಕಟ್ಟೆ, ಕೆ.ಎಸ್. ರಾವ್ ರಸ್ತೆ ಸಮೀಪದ ಐಡಿಯಲ್ ಐಸ್ ಕ್ರೀಂ ಬಳಿ ನನ್ನ ಕ್ರಿಶ್ಚಿಯನ್ (ಅವಳನ್ನು ಹಿಂದೂ ಎಂದು ಭಾವಿಸಿ) ಗೆಳತಿಯೊಬ್ಬಳ ಜೊತೆ ನಿಂತಿದ್ದಾಗ ಧರ್ಮ ಸಂರಕ್ಷಕರು ಸುತ್ತುವರಿದ ಘಟನೆ ಮೂರು ಬಾರಿ ನಡೆದಿದೆ. ಇಂತಹ ಘಟನೆಗಳು ನಡೆದಾಗ ಹೆಸರು ಕೇಳುತ್ತಲೇ ಯುವಕರ ಮೇಲೆ ಹಲ್ಲೆ ನಡೆದು ಬಿಡುತ್ತದೆ. ಮಾಧ್ಯಮಗಳು ಕೂಡಾ ಪ್ರವೇಶಿಸುತ್ತವೆ.ಪ್ರಸಾರ ಮಾಡುತ್ತವೆ. ಇದರಿಂದ ಅವಮಾನಿತರಾಗುವವರು. ಸಾಮಾನ್ಯವಾಗಿ ನಮ್ಮಂತಹ ಯುವಕ- ಯುವತಿಯರು.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯೆಂಬಂತೆ ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳು ವರ್ತಿಸುತ್ತಲೇ ಇರುತ್ತವೆ.

ಇನ್ನೂ ಪಡೀಲ್‌ನ ಘಟನೆಯ ಬಗ್ಗೆ ನೋಡಿದರೆ ನಿನ್ನೆಯ ಕೆಲವು ದೃಶ್ಯಗಳನ್ನು ನೋಡುವಾಗ ದಾಳಿ ನಡೆಸಿದವರು ಸ್ವತಃ ಲೈಂಗಿಕವಾಗಿ ಪೀಡಿಸುತ್ತಿರುವಂತಹ ದೃಶ್ಯಗಳು ಕಾಣಿಸುತ್ತಿತ್ತು. ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಹೇಳಿಕೊಂಡವರು ಮಾಡಿದ್ದನ್ನು ನೋಡಿದಾಗ ಇದೆಲ್ಲಾ ಹೊಸತಲ್ಲಾ ಇವರಿಗೆ ಎಂದು ಅನಿಸಿತು.
ನನ್ನ ಬದುಕಿನಲ್ಲಿ ಇಂತಹ ಹಲವಾರು ಘಟನೆಗಳನ್ನು ನೋಡಿರುವೆ. ಇಂತಹ ಘಟನೆಗಳಿಗೆ ಹಲವಾರು ಕಾರ‍್ಯಕರ್ತರು ಸಿದ್ದರಿದ್ದಾರೆ. ಪ್ರತಿಸಲ ಕೇಸುಗಳು ಹಾಕಲ್ಪಟ್ಟಾಗ ಕಾರ‍್ಯಕರ್ತರನ್ನು ಬಿಡಿಸಲು ನಾಯಕರುಗಳಿರುತ್ತಾರೆ. ಹಾಗೂ ನಾಯಕತ್ವದಿಂದ ಇಮೇಜನ್ನು ಸೃಷ್ಟಿಸಿಕೊಳ್ಳುತ್ತಾರೆ. ರಾಜಕೀಯವಾಗಿ ಈ ಮೂಲಕ ಮೇಲೇರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅವರ ಬೆನ್ನ ಹಿಂದಿನ ಹಿಂಬಾಲಕರು ಹಿಂಬಾಲಕರಾಗಿಯೇ ಉಳಿದು ಒಂದಷ್ಟು ಕೇಸುಗಳನ್ನು ತಗುಲಿಸಿಕೊಂಡಿರುತ್ತಾರೆ. ಬೇರೆ ಧರ್ಮದ ಬಗೆಗೆ ಜನರಲ್ಲಿರುವ ಅಸಹನೆಯನ್ನು ನಗದೀಕರಿಸಿಕೊಳ್ಳುತ್ತಾರೆ ಅಷ್ಟೇ. ಇದೆಲ್ಲರಿಂದ ಬಲಿಷ್ಠ ಸಮುದಾಯದ ಜನ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಈ ಸಂಘಟನೆಗಳಲ್ಲಿ ಇರುವವರಾರು ಸಮಾಜದ ಮುಖ್ಯವಾಹಿನಿಯಲ್ಲಿ ಐಷಾರಾಮದ ಬದುಕು ಸಾಗಿಸುವ ಜನರಲ್ಲ. ಸಾಮಾನ್ಯ ಮಧ್ಯಮ ವರ್ಗದ ಜನ.ಸಾಮಾನ್ಯವಾಗಿ ಬದುಕುತ್ತಾ ಕಾಲದ ಹರಿವಿನಲ್ಲಿ ಎದುರಾಗುವ ಸಾಮಾಜಿಕ, ಧಾರ್ಮಿಕ ಮತು ರಾಜಕೀಯ ಸಂಘರ್ಷಗಳಿಗೆ ಒಳಗಾಗುತ್ತಾ ಬದುಕುವ ಜನ.ಆದರೆ ಅವರೇ ಬದುಕಿನಲ್ಲಿ ಕಳೆದುಕೊಳ್ಳುವವರು ಕೂಡಾ.ಹೀಗೆ ಬದುಕು ಕಳೆದುಕೊಂಡ ಹಲವು ಬದುಕುಗಳು ಇಲ್ಲಿವೆ!

ಮಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಳ್ಳುವುದು ಸ್ಥಳೀಯ ಸಂಸ್ಕೃತಿಯನ್ನು ಉಸಿರಾಡುವ ಬದುಕುಗಳು. ಅದು ನಗರವಾದರೂ ಅಲ್ಲಿ ತುಳುನಾಡಿನ ಹಳ್ಳಿ ಮಿಡಿತ ಮರೆಯಾಗಿರುವುದಿಲ್ಲ, ಯಾಕೆಂದರೆ ದಶಕಗಳ ಹಿಂದೆ ಅವೆಲ್ಲ ಹಳ್ಳಿಗಳೇ ಆಗಿದ್ದುವಲ್ಲಾ. ಇಂತಹ ಪ್ರದೇಶದಲ್ಲಿ ರೆಸಾರ್ಟಗಳು ಅವರ ಶಾಂತಿಯನ್ನು ಕದಡಿಸುವುದರ ಜೊತೆಗೆ, ಅತ್ಯಾಧುನಿಕ ಶ್ರೀಮಂತಿಕೆಯ ನಗರದ ಅತ್ಯಾಧುನಿಕ ಯುವವರ್ತನೆ ಸ್ಥಳೀಯರಿಗೆ ಇರಿಸುಮುರಿಸು ಉಂಟುಮಾಡುತ್ತವೆ. ಇಂತಹ ಪ್ರದೇಶದಲ್ಲಿ ಇಂತಹದಕ್ಕೆಲ್ಲಾ ಅವಕಾಶ ಕೊಡುವ ಮೊದಲು ಜಿಲ್ಲಾ ಆಡಳಿತ ಆಲೋಚಿಸಿದ್ದರೆ ಈ ಸನ್ನಿವೇಶ ಇಂದು ಎದುರಾಗುತ್ತಿರುತ್ತಿರಲಿಲ್ಲ.

ಇನ್ನೊಂದು ವಿಚಾರ-ಸಂಘಟನೆಗಳು ಮಾಡಿದ್ದು ಹಲ್ಲೆ ಹೌದು. ಅದರ ಜೊತೆಗೆ ಯುವತಿಯರ ಮುಖದತ್ತ ಮತ್ತೆ ಪೋಕಸ್ ಮಾಡುತ್ತಿದ್ದ ಮಾದ್ಯಮದವರು ಮಾಡಿದ್ದು ಹಲ್ಲೆಯಲ್ಲದೆ ಇನ್ನೇನು!

ಪ್ರತಿ ಸಲ ಏನೇ ಘಟನೆ ನಡೆಯಲೀ ಕರಾವಳಿಯನ್ನು ಸಾಮಾನ್ಯವಾಗಿ ಕೋಮು ಹಿಂಸೆ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹಿಡಿದು ಕರೆಯುವುದು ಸಾಮಾನ್ಯವಾಗಿದೆ. ಇವುಗಳ ಹಿಂದೆ ಇರುವ ಸಾಂಸ್ಕೃತಿಕ, ಧಾರ್ಮಿಕ ಸಂಘರ್ಷಗಳು ಹಾಗೂ ರಾಜಕೀಯ ತಲ್ಲಣಗಳು ಯಾರಿಗೂ ಕಾಣುವುದಿಲ್ಲ. ಮತ್ತೆಮತ್ತೆ ಮಾಡಲಾಗುವ ಈ ಆಪಾದನೆ ಹುಂಬತನದತ್ತ ಯುವಕರನ್ನು ಒಯ್ಯುತ್ತದೆ. ಕರಾವಳಿಯ ಸಮುದಾಯವನ್ನು ಸಹಾನುಭೂತಿಯಿಂದ ಕಂಡು ಇಲ್ಲಿ ಹೀಗಾಗಲು ಹಲವು ಆಂತರಿಕ ಕಾರಣಗಳಿರಬಹುದು ಎಂದು ಯಾರೂ ಚಿಂತಿಸುವುದಿಲ್ಲ.ಇಂತಹ ಹೀಯಾಳಿಕೆಗಳಿಂದ ಯುವ ಮನಸ್ಸುಗಳು ಪ್ರಕ್ಶುಬ್ಧಗೊಳ್ಳುತ್ತಾ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಮುಸ್ಲಿಂ ಸಂಘಟನೆ ಕೆ.ಎಫ್.ಡಿಗಳತ್ತ ಆಕರ್ಷಿತಗೊಳ್ಳುತ್ತಿರುವುದನ್ನು ನೋಡುತ್ತಿರುವೆ. ಆತಂಕದ ವಿಚಾರವೆಂದರೆ ಪಿ.ಯು.ಸಿ ಓದುವ ಹುಡುಗರು ಕೂಡಾ ಅತ್ತ ವಾಲುತ್ತಿರುವುದು.
ರಾಜಕೀಯವಾಗಿ ಹೇಳಬೇಕಾದರೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾದ ಈ ಕರಾವಳಿಯಲ್ಲಿ ಒಂದು ಕೋಮುವಿನ ಒಲೈಕೆ ಇನ್ನೊಂದು ಕೋಮುವಿನಲ್ಲಿ ಅಸಹನೆಯನ್ನು ಸೃಷ್ಟಿಸಿತ್ತು. ಕಾಟಿಪಳ್ಳದಲ್ಲಿ ಮೂತ್ರ ಕುಡಿಸಿದ ಪ್ರಕರಣ ಇರಲೀ ಅಥವಾ ಬೇರೆ ಕೆಲವು ಪ್ರಕರಣಗಳು ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿಯೇ ನಡೆದಿದ್ದು. ಇಂತಹ ಪ್ರಕರಣಗಳ ಬಗ್ಗೆ ಆಡಳಿತ ಪಕ್ಷಗಳ ನಿರ್ಲಿಪ್ತತೆ ಇನ್ನೊಂದು ಸಮುದಾಯದಲ್ಲಿ ಅಸಹನೆಯನ್ನು ಹುಟ್ಟಸುವುದೇ ಹೊರತು ಸಹನೆಯನ್ನಲ್ಲ. ಇಂತಹ ಎಲ್ಲಾ ಅವಕಾಶಗಳನ್ನು ಅವಕಾಶವಾದದ ರಾಜಕಾರಣ ಉಪಯೋಗಿಸಿಕೊಂಡಿತು. ಅಸಹನೆಯನ್ನು ತೋರಿಸುವ ಮಟ್ಟಿಗೆ ಬೆಳೆದು ನಿಂತವು. ಇಲ್ಲಿ ನಾನು ಸ್ಪಷ್ಟಪಡಿಸುತ್ತಿರುವುದು ಕಾರಣಗಳನ್ನು ಹೊರತು ಸಮರ್ಥಿಸುವುದಲ್ಲ.

ಕರಾವಳಿ ತೀರದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೋಮು ಗಲಭೆಗಳು ಗೋ ಹತ್ಯೆ, ಮುಸ್ಲಿಂ – ಹಿಂದೂ ಪ್ರೇಮ ಪ್ರಕರಣದ್ದು ಮತ್ತು ಧಾರ್ಮಿಕ ಸಹಿಷ್ಣುತೆ ಬಗ್ಗೆ ಸಂಬಂದಿಸಿದ್ದು.

ದನದ ಮಾಂಸ ತಿನ್ನುವ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಆಕ್ಷೇಪವಿಲ್ಲ- ಕೆಲ ಸಂಘಟನೆಗಳನ್ನು ಹೊರತುಪಡಿಸಿ. ಆದರೆ, ಕೆಲವು ಘಟನೆಗಳು ಸಾಮಾನ್ಯರನ್ನು ಕೆರಳಿಸುವಂತೆ ಮಾಡುತ್ತದೆ. ಗೋ ಹತ್ಯೆ ಬಗ್ಗೆ ಹಲವಾರು ಬುದ್ಧಿಜೀವಿಗಳು ಮಾಧ್ಯಮಗಳಲ್ಲೂ ಬರೆದುಕೊಂಡಿದ್ದಾರೆ- ಅವರವರ ನೇರಕ್ಕೆ. ನಿಜವಾದ ಸಮಸ್ಯೆಯಿರುವುದು ದನದ ಮಾಂಸವನ್ನು ತಿನ್ನುವುದರಲ್ಲಿಯಲ್ಲ. ಹೆಚ್ಚಿನ ಬಾರಿ ಸಂಘರ್ಷಕ್ಕೆ ಕಾರಣವಾಗುವುದು ಗೋ ಕಳ್ಳತನ. ಈ ಬಗ್ಗೆ ಬುದ್ಧಿ ಜೀವಿಗಳು ಕೊಡುವ ಕಾರಣವೂ, ಸ್ಥಳಿಯರು ಕೊಡುವ ಕಾರಣವೂ ಬೇರೆ ಬೇರೆ. ಮಾಧ್ಯಮಗಳು ಕೇಳಿಸಿಕೊಳ್ಳುವುದು ಸ್ಥಳೀಯರ ಪ್ರತಿಕ್ರಿಯೆಯನ್ನಲ್ಲ.

ಕೆಲವೊಂದು ಸಲ ಹಟ್ಟಿಯಿಂದ ರಾತ್ರಿ ಕಟ್ಟಿದ ದನ ಕರುಗಳು ಮಾಯವಾಗಿ ಕಸಾಯಿಖಾನೆ ಸೇರಿದಾಗ ಸಾಕಿದವನ ಪ್ರತಿಕ್ರಿಯೆ ಹೇಗಿರಬಹುದು? ದ್ವೇಷ ಹುಟ್ಟದೆ ಇರುವುದೇ? ಈ ರೀತಿಯ ಮನಸ್ಸನೊಳಗಿನ ಅಸಹನೆಗಳು ಮೂರ್ತ ರೂಪದಲ್ಲಿ ಹೊರ ಬರುತ್ತವೆ. ಮತ್ತು ಸಂಘಟನೆಗಳತ್ತ ಸೆಳೆಯುತ್ತವೆ. ಇಲ್ಲದಿದ್ದರೆ ಬೆಳಗ್ಗಿನ ಜಾವ ಮೂರರ ಹೊತ್ತಿಗೆ ಸಾಗಿಸುವ ವಾಹನಗಳನ್ನು ಕಷ್ಟ ಪಟ್ಟು ಅಡ್ಡ ಹಾಕುವ ಪ್ರಮೇಯವೇನಿದೆ?? ಇಂತಹದನ್ನು ಆಡಳಿತವು ತಡೆಗಟ್ಟಿದರೆ ಈ ರೀತಿಯ ಅಸಹನೆಗೆ ಅವಕಾಶವಿರುತ್ತಿರಲಿಲ್ಲ.
ಒಂದು ಉದಾಹರಣೆ.ಅಂದು ಮೂಡುಬಿದಿರೆ ಸಮೀಪ ಅಕ್ರಮ ದನ ಸಾಗಾಟವನ್ನು ಪತ್ತೆ ಹಚ್ಚಿದ ಪೊಲೀಸ್ ತಂಡ ಅಡ್ಡ ಹಾಕಿದಾಗ ಪೊಲೀಸ್ ಪೇದೆಯ ಮೇಲೆ ತಲವಾರಿನಿಂದ ಹಲ್ಲೆ ನಡೆಯಿತು.ಆ ಸಂದರ್ಭದಲ್ಲಿ ಗುಂಡು ಹಾರಿಸಿದಾಗ ತೀರಿಕೊಂಡವನ ಬಗ್ಗೆ ಬುದ್ದಿಜೀವಿಗಳು ಮಾತನಾಡಿದರು ಆದರೆ ಅವರ ಹಲ್ಲೆಯ ಬಗೆಗಿನ ಮಾತು ಕ್ಷೀಣವಾಗಿ ಕೇಳಿಸಿತಷ್ಟೇ. ಇಂತಹ ಘಟನೆಗಳು ಯಾರ ಕೈ ಬಲಪಡಿಸುತ್ತವೆ?!!! ಕಾನೂನು ಪ್ರಕಾರವಾಗಿ ಸಾಗಿಸುವುದಾದರೆ ಆ ಹೊತ್ತಿನಲ್ಲಿ ಸಾಗಿಸುವ ಅಥವಾ ಅಕ್ರಮವಾಗಿ ಅಸ್ತ್ರಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆಯು ಇರುವುದಿಲ್ಲ.

ಇನ್ನೂ ಪ್ರೇಮ ಪ್ರಕರಣಗಳು, ಅನ್ಯಕೋಮಿನ ಯುವಕ-ಯುವತಿಯರ ಸಂಬಂಧದಗಳ ವಿಚಾರಗಳು.ಈ ಸಂಬಂಧ ಹಲ್ಲೆಗಳು ಸರ್ವೇ ಸಾಮಾನ್ಯ. ಇಂತಹ ಸನ್ನಿವೇಶಗಳಲ್ಲಿ ಮೇಲೆ ಹೇಳಿದಂತೆ ಪ್ರತಿಕ್ರಿಯೆಗಳಿರುವುದೇ ಹೆಚ್ಚು. ಈ ಬಗ್ಗೆ ಮಾತನಾಡುವಾಗ ಅವರ ಹೆಣ್ಣು ಮಕ್ಕಳನ್ನು ಬುರ್ಖಾ ಹಾಕಿಸಿ ಭದ್ರ ಪಡಿಸುತ್ತಾರೆ. ನಮ್ಮ ಹುಡುಗಿಯರಿಗೆ ಬಲೆ ಬೀಸುತ್ತಾರೆ ಎನ್ನುವ ಅಸಹನೆಯನ್ನು ತೋರಿಸುತ್ತಾರೆ. ಸುತ್ತ ಯುವತಿಯರಲ್ಲೆಲ್ಲ ಬುರ್ಖಾ ಕಾಣುವಾಗ ಈ ಮಾತು ಸಾಮಾನ್ಯರಿಗೆ ಸರಿಯೆಂದೇ ಅನಿಸುತ್ತದೆ. ಯಾವುದೇ ಎರಡು ಸಮುದಾಯಗಳ ಒಳಸಂಬಂಧಗಳು ತುಂಬಾ ಸಂಕೀರ್ಣವಾದದ್ದು-ವಿಚಿತ್ರವಾದದ್ದು.
ವಿಶೇಷವೆಂದರೆ ಇಲ್ಲಿ ಬರುವ ಹೆಣ್ಣು ಗಂಡಿನ ಸಮಸ್ಯೆಗಳು ಹಿಂದೂ-ಕ್ರಿಶ್ಚಿಯನ್ ನಡುವಿನ ಸಂಬಂಧಗಳಲ್ಲಿ ಬರುವುದಿಲ್ಲ. ಹಾಗಾದರೆ ಮೇಲಿನೆರಡು ಕೋಮುಗಳಲ್ಲಿ ಮಾತ್ರ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವೇನು? ಯಾವ ಬುದ್ದಿಜೀವಿಯು ಹೀಗೆ ಯೋಚಿಸಿಲ್ಲ.
ಒಂದು ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದದ್ದು ಏನೆಂದರೆ ಧರ್ಮದ ಹೆಸರಿಲ್ಲಿ ಸಮುದಾಯದ ಕೆಲವರು ಕಾಲದೊಂದಿಗೆ ಬದಲಾಗದೆ ಉಳಿದ ಜಿಗುಟು ಹಲವು ಸಮಸ್ಯೆಗಳ ಆಳದಲ್ಲಿದೆ. ಈ ಕಾರಣಕ್ಕೆ ಇನ್ನೊಂದು ಸಮುದಾಯವನ್ನು ದ್ವೇಷದಿಂದ ನೋಡುವ ಪ್ರವೃತ್ತಿ ಕೂಡ ಕರಾವಳಿಯ ಕೋಮು ಗಲಭೆಗಳಿಗೆ ಕಾರಣವಾಗುತ್ತದೆ. ಇಲ್ಲಿಯ ಕೋಮುಗಲಭೆಯ ಯಾವ ಇತಿಹಾಸವನ್ನು ತೆರೆದರೂ ಅದು ಸ್ಪಷ್ಟವಾಗಿ ಹೇಳುವುದು ಅದನ್ನೆ. ಈ ಮಾತನ್ನು ಹೇಳಿದರೆ ಯಾರು ಒಪ್ಪಿಕೊಳ್ಳಲೂ ತಯಾರಿಲ್ಲ. ಬುದ್ದಿಜೀವಿಗಳು ಪೋಲಿಟಿಕಲಿ ಕರೆಕ್ಟ್ ಅನ್ನುವಂಥದನ್ನೇ ಹೇಳುವುದು. ಅದು ಪೂರಾ ವಾಸ್ತವವಲ್ಲ. ಪ್ರಗತಿಪರ ಅನಿಸಿಕೊಂಡ ಮನಸ್ಸುಗಳು ಸಮುದಾಯದ ವರ್ತನೆಯನ್ನು ವಿವರಿಸುವಾಗ ತಾವು ಹೇಳುವುದೇ ಅಂತಿಮ ಸತ್ಯ ಎಂಬ ಹಠಮಾರಿತನ ತೋರಿಸುತ್ತವೆ, ಅವರಲ್ಲೂ ಇರುವ ಅಕ್ರೋಶ ಕಡಮೆಯಲ್ಲ, ಆದರೆ ಅದಕ್ಕೆ ಆ ಲೇಬಲ್ ಇರುವುದಿಲ್ಲ. ಮಾಧ್ಯಮಗಳೂ ಸಿದ್ದ ಮಾದರಿಯ ಅಭಿಪ್ರಾಯಗಳನ್ನು ಸೂಚಿಸುತ್ತವೆ.
ಕರಾವಳಿಯ ಸಂಜೆ ಪತ್ರಿಕೆಗಳು ಇಲ್ಲಿಯ ಕೋಮು ಬಾವನೆಗಳನ್ನು ಕೆರಳಿಸುವುದಕ್ಕೆ ತಮ್

ಮ ಕಾಣಿಕೆಯನ್ನು ನೀಡಿವೆ. ಧರ್ಮದ ಬಗ್ಗೆ ಚರ್ಚೆಗಳನ್ನು ನಡೆಸುತ್ತಾ, ಹೀಯಳಿಸುತ್ತಾ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾ ತಮಗೆ ಮಾರುಕಟ್ಟೆಯನ್ನು ಕಂಡುಕೊಂಡವು. ರಾಜ್ಯ ಮಟ್ಟದ ಮಾದ್ಯಮಗಳು ಕೂಡಾ ವಾಸ್ತವದ ಸಂವೇದನೆಯನ್ನು ಬರೆಯದೆ ಒಂದು ಸಿದ್ದ ಮಾದರಿಗೆ ಒಗ್ಗುವಂತೆ ಸುದ್ದಿ ಬರೆಯುತ್ತವೆ. ಹಲವು ಪತ್ರಕರ್ತರಿಗೆ ತಾವು ಬರೆದದ್ದು ಅವಾಸ್ತವಿಕ ಎಂಬ ಅರಿವು ಇರುತ್ತದೆ ಆದರೆ, ಪತ್ರಿಕೆ ತಮ್ಮಿಂದ ಬರೆಸುವುದೇ ಹೀಗೆ ಅಂತ ಖಾಸಗಿಯಾಗಿ ಹೇಳುತ್ತಾರೆ. ಹಾಗಿರುವಾಗ ಇಲ್ಲಿ ಸಾಮಾನ್ಯರಿಗೂ ಒಂದೊಂದು ಮಾತಿರುತ್ತದೆ.ಅದಕ್ಕೆ ಚಂದವಾಗಿ ತಲೆದೂಗಿಸುವಂತೆ ಕಾಣಿಸಲು ಬರುವುದಿಲ್ಲ.
ಇನ್ನು ನನ್ನ ಗೆಳೆಯರೊಬ್ಬರು ಹೇಳಿದಂತೆ ಕೇರಳದ ಕಲ್ಲಿಕೋಟೆಯಿಂದ ಕರ್ನಾಟಕದ ಕುಂದಾಪುರದವರೆಗೆ ಕರಾವಳಿಯ ನಮ್ಮ ಯುವಕರ ನಡತೆ ಬಹಳ ಭಿನ್ನವಾಗಿದೆ. ಅದು ಉನ್ಮಾದಮತ್ತವಾದುದಾಗಿದೆ. ಇದನ್ನು ಒಟ್ಟಾಗಿ ಯಾರೂ ನೋಡದೆ ಕೇವಲ

ಕರ್ನಾಟಕದ ಕರಾವಳಿ ಕೆಟ್ಟಿದೆ ಅನ್ನುತ್ತಾರೆ. ಇಲ್ಲಿಯ ಉನ್ಮಾದಿತ ಸಂಘಟನೆಗಳು ಕೇರಳದಿಂದ ಪಡೆಯುವ ವೈಚಾರಿಕ ವಿನ್ಯಾಸದ ಬಗ್ಗೆ ಇದುವರೆಗೆ ಯಾರು ಬರೆದಿಲ್ಲ. ಗಡಿಗೆ ತಾಗಿರುವ ಕೇರಳದ ಕರಾವಳಿಯ ರಾಜಕೀಯ ಹಿಂಸೆ ಇಲ್ಲಿಯ ಕೋಮುಹಿಂಸೆಯನ್ನೂ ಮೀರಿಸಿದ್ದು.

******************

6 ಟಿಪ್ಪಣಿಗಳು Post a comment
  1. ಆಗಸ್ಟ್ 18 2014

    “ಹಿಂದೂ ವ್ಯಾಪಾರ ಸ್ಥರು ತಮ್ಮ ಅಂಗಡಿಗಳ ಬೋರ್ಡುಗಳ ಮೇಲೆ ತಮ್ಮ ತಮ್ಮ ಜಾತಿಯ ದೇವರ ಹೆಸರನ್ನು ಹಾಕಿಕೊಂಡಿರುತ್ತಾರೆ. ವೆಂಕಟೇಶ್ವರ ಬೇಕರಿ ಗಳಿರುವಂತೆ, ಬಾಲಾಜಿ ಬಾರ್‌ಗಳು ಇಲ್ಲಿವೆ. ಆದರೆ ಮುಸಲ್ಮಾನ ವ್ಯಾಪಾರಸ್ಥರು ತಮ್ಮ ಅಂಗಡಿ ಗಳಿಗೆ ‘ಭಾರತ್ ಸ್ಟೋರ್ಸ್‌’, ‘ನ್ಯಾಷನಲ್ ಗ್ಯಾರೇಜ್’, ‘ಕರ್ನಾಟಕ ಲಾಡ್ಜ್’ ಎಂದು ಬೋರ್ಡು ಹಾಕಿರುತ್ತಾರೆ. ಅವರೆಂದು ತಮ್ಮ ಧಾರ್ಮಿಕ ಸಂಕೇತಗಳನ್ನು ಬಳಸಿ ಕೊಳ್ಳುವುದಿಲ್ಲ.”

    ಉತ್ತರ
    • ರವಿ
      ಆಗಸ್ಟ್ 18 2014

      ಅಂದರೆ ನಿಮ್ಮ ಪ್ರಕಾರ ವೆಂಕಟೇಶ್ವರ ಬೇಕರಿ, ಬಾಲಾಜಿ ಬಾರ್‌ ಅಂದು ಅಂಗಡಿಗೆ ಹೆಸರಿಡುವುದು ಕೋಮುವಾದವೇ? ಮುಸಲ್ಮಾನರು ಧಾರ್ಮಿಕ ಹೆಸರುಗಳಿರುವ ಬೋರ್ಡು ಏಕೆ ಹಾಕುವುದಿಲ್ಲ ಎಂದು ನಿಮಗೇ ಚೆನ್ನಾಗಿ ಗೊತ್ತಿದೆ. ಪಾಕಿಸ್ತಾನದಲ್ಲಿ “ಬಸವೇಶ್ವರ ಗಂಜಿ ಕೇಂದ್ರ” ಶುರು ಮಾಡಿದರೆ ಯಾರೂ ಊಟಕ್ಕೆ ಬರುವುದಿಲ್ಲ, ನಾಷನಲ್ ಮೆಸ್ ಎಂದೇ ಹೆಸರಿಡಬೇಕು. ಹಾಗೆ ನೋಡಿದರೆ ಹಿಂದೂಗಳು ಧಾರ್ಮಿಕ ಉಡುಪುಗಳನ್ನು ತಮ್ಮ ವ್ಯವಹಾರದ ಸ್ಥಳಗಳಲ್ಲಿ ಉಡುವುದಿಲ್ಲ, ಆದರೆ ಮುಸಲ್ಮಾನರು ಟೊಪ್ಪಿ, ಬುರ್ಖಾಗಳನ್ನು ಉಡುತ್ತಾರೆ, ಆಗ್ಗಾಗ ನಮಾಜ಼್ ಮಾಡುತ್ತಾರೆ. ಅದು ನಿಮಗೆ ಕೋಮುವಾದ ಅನಿಸುವುದಿಲ್ಲವೇ? ಬಿಟ್ಟರೆ ಪುಂಗಿ ಊದುತ್ತಲೆ ಇರುತ್ತೀರಿ

      ಉತ್ತರ
      • ಮಾರ್ಕ್ಸ್ ಮಂಜು
        ಆಗಸ್ಟ್ 19 2014

        Very Sensible observation Mr.Nagshetty Shetkar

        ಉತ್ತರ
        • ಆಗಸ್ಟ್ 19 2014

          Communist or so called progressive thinkers can say that it’s a sensible. But then it’s difficult abouts it. Because, including you also, people are not aware about the depth of the problem. If someone put their board as Bismilla, Hidayutulla nobody will go there, I mean, I am talking about Hindus. They will proceed to some other place. It’s true. In Mangalore long back it has revealed that merchants are investing in extremist idea of the one group.
          You cannot map anything by the board. Its a stupid progressive thinkers, idea.

          ಉತ್ತರ
  2. ಉಲ್ಲಾಸ್
    ಆಗಸ್ಟ್ 18 2014

    ನಿಮ್ಮ ಮಾತು ಸತ್ಯ.
    ಈ ಅಸಹನೆಗೆ ಒಂದು ಕಡೆ ತುಷ್ಟೀಕರಣ ಕಾರಣವಾದರೆ ಇನ್ನೊಂದೆಡೆ ಬುದ್ದಿ ಜೀವಿಗಳೂ ಬೆಂಕಿಗೆ ತುಪ್ಪ ಸುರಿಯುತ್ತಿರುವರು. ಅಲ್ಲದೆ ಒಂದು ವರ್ಗದ ಜನರ ಆಕ್ರೋಶಕ್ಕೆ ಸೈದ್ದಾಂತಿಕ ನೆಲೆ ಸಿಗದೆ ಮಾಧ್ಯಮಗಳು ಆ ವರ್ಗದ ಪತಿರೋಧವನ್ನು ಮೃಗೀಯವೆಂದು ಬಿಂಬಿಸುತ್ತಿರುವುದು ಅಲ್ಲದೆ ಪ್ರತಿರೋಧಕ್ಕೆ ಸರಿಯಾದ ಬೇರೆ ದಾರಿ ಅವರಲ್ಲಿ ಇಲ್ಲದಿರುವುದು. ಒಂದು ಕೋಮಿನ ಜನ ಕೆಲವು ಪ್ರದೇಶದಲ್ಲಿ ಅಲ್ಪಸಂಖ್ಯಾತರಾದರೆ ಇನ್ನೊಂದೆಡೆ ಇನ್ನೊಂದು ಕೋಮಿನ ಜನ ನೈಜ ಅಲ್ಪಸಂಖ್ಯಾತರು. ಹೀಗೆ ಉಂಟಾದ ಅಲ್ಪ ಸಂಖ್ಯಾತರಿಗೆ ಬದುಕುವುದಕ್ಕೆ ಶಾಸನದ ಸಹಕಾರ ಇಲ್ಲದಿರುವುದರಿಂದ ಅನಿವಾರ್ಯವಾಗಿ “ಪ್ರತಿರೋಧವನ್ನು ಮಾಡು ಇಲ್ಲವೇ ಗುಳೇ ಹೋಗು” ಎಂಬುದು ಅಲಿಖಿತ ಶಾಸನವಾಗಿರುವುದು. ಇಂತಹ ಕೆಲವೊಂದು ಪ್ರದೇಶಗಳು ಈಗಾಗಲೇ ವಿದೇಶೀ ನೆಲದ ಅಡ್ಡ ಹೆಸರು ಪಡೆದಿರುವುದು, ಮತ್ತು ಅಲ್ಲಿ ಕೆಲವೊಮ್ಮೆ ವಿದೇಶಿ ನೆಲದ ಬಾವುಟವು ಹಂಗಿಲ್ಲದೆ ಹಾರುವುದು. ಈ ನೆಲದ ರಾಷ್ಟ್ರೀಯತೆಯನ್ನು ಕೋಮುವಾದ ಎಂದು ಪರಿಗಣಿಸಿರುವುದು. ಜಾತಿ ಪದ್ದತಿಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ “ಜನ್ನ” ನಂತಹ ಜ್ಯಾತ್ಯಾತೀತವಾದಿ!!! ರಾಜಕಾರಣಿಗಳು ಒಂದೆಡೆ ಯಾದರೆ, ಒಂದು ಕೋಮಿನ ಜನರು ರಾಜಕೀಯ ಪೋಷಿತ ವಿಷೇಶ ಸ್ಥಾನ ಮಾನ ಹೊಂದಿರುವುದು. ಒಂದು ಕೋಮಿನ ಪುರೋಹಿತ ಶಾಹಿಗಳು ಹಿಂಸೆ, ದ್ವೇಷ ಮತ್ತು ಬೇಧವನ್ನು ಪ್ರತ್ಯೇಕವಾದ ಶಾಲೆಯಲ್ಲಿ ಪ್ರತ್ಯೇಕವಾದ ಭಾಷೆಯಲ್ಲಿ ಬಾಲ್ಯದಿಂದಲೇ ಬೋಧಿಸುತ್ತಿರುವುದು. ನೆಲದ ಭಾಷೆ ಶಾಲೆಗಳಲ್ಲಿ ಅಸ್ಪ್ರಶ್ಯ ಭಾಷೆಯಾಗಿದ್ದುದು ಅಲ್ಲದೆ ಅದೇ ಕಾಲದಲ್ಲಿ ಪರಕೀಯ ಭಾಷೆ ಮಾನ್ಯತೆ ಪಡೆದಿದ್ದುದು. ಸಮಾನ ಸಂಸ್ಕೃತಿ ಹೊಂದಿರುವ ನೆರೆ ರಾಜ್ಯದಲ್ಲಿ ಇರುವ ರಾಜಕೀಯ ಹಿತಾಸಕ್ತಿಗಳು. ಈ ನೆಲದ ದೇಶದ್ರೋಹಿ ಆ ನೆಲದಲ್ಲಿ ಅಳಿಯನ ಸ್ಥಾನ – ಮಾನ ಪಡೆಯುತ್ತಿದ್ದುದು. ಇನ್ನೊಂದು ಕೋಮಿನ ಮೇಲೆ ಮಾಡುವ ಅನಾಚಾರವನ್ನು ಸಾಮಾಜಿಕವಾಗಿ ಮಹತ್ಕಾರ್ಯ ಎಂದು ಬಿಂಬಿಸುತ್ತಾ ಬಂದಿರುವುದು….. ಬರೆಯುತ್ತಾ ಹೋದರೆ ಸಾವಿರ ಕಾರಣ ಇದೆ.

    ಉತ್ತರ

Trackbacks & Pingbacks

  1. ಸಾಮಾನ್ಯನ ಕಣ್ಣಲ್ಲಿ ಕರಾವಳಿ ಕೋಮುವಾದ – my article | Dairy of Traveller

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments