ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….
-ಎಸ್.ಎನ್.ಭಾಸ್ಕರ್
ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ, ಜ್ಞಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಃ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಭೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅಥವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ್ಪಡಿಸುಚ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ ? ಸಕಲ ಜೀವಸಂಕುಲದ ವಿರುದ್ದವೇ ? ಈ ಪ್ರಕೃತಿಯ ವಿರುದ್ದವೇ ? ಜೀವಿ ಹಾಗೂ ಪ್ರಕೃತಿಯನ್ನು ಹೊತ್ತ ಭೂಮಂಡಳದ ವಿರುದ್ದವೇ ? ಭೂಮಿಯ ಅಸ್ತಿತ್ವದ ಆಧಾರವಾಗಿರುವ ಸೂರ್ಯವ ವಿರುದ್ದವೇ ? ಅದಕ್ಕೂ ಮೀರಿ ಇಡೀ ವಿಶ್ವದ ವಿರುದ್ದವೇ ? ಸುತ್ತಲೂ ಗೆರೆಯೊಂದನ್ನು ಗೀಚಿ ಮೀರಿ ನಡೆದರೆ ಶಿಕ್ಷಿಸಲು ಭ್ರಮೆಯೊಂದನ್ನು ಹುಟ್ಟಿಸಿ ಹತ್ತು ಹಲವು ನಿಷೇಧಗಳನ್ನು ತಾವೇ ಹೇರಿಕೊಂಡು, ತಿನ್ನಲೊಂದು ನಿಯಮ, ತೇಗಲೊಂದು ನಿಯಮಗಳನ್ನು ಹಾಕಿಕೊಂಡು ಬಾಳುವ ಬದುಕಿನ ಸಾರ್ಥಕ್ಯವಾದರೂ ಏನು ? ಡಾ.ಯು.ಆರ್. ಅನಂತ ಮೂರ್ತಿ ಯವರ ಸಂಸ್ಕಾರ ಕಾದಂಬರಿಯ ಒಟ್ಟು ಸಾರಾಂಶ ಸಹಾ ಇದೇ ಆಗಿದೆ. ಅರ್ಥವಿಲ್ಲದ ಆಚಾರಗಳನ್ನು, ತರ್ಕಹೀನ ಸಂಪ್ರದಾಯಗಳನ್ನು ಕಡೆಗಣಿಸಿ ಬದುಕಿನ ನೆಲೆಯನ್ನು ವಿಸ್ತರಿಸಿ ಅರಿಯುವ ಪ್ರಯತ್ನ ಈ ಕಾದಂಬರಿಯಲ್ಲಿ ಕಂಡು ಬರುತ್ತದೆ. ಹಲವು ವಿವಾದಗಳನ್ನೂ ಮೀರಿ ಉನ್ನತ ವೈಚಾರಿಕ ಚಿಂತನೆಯ ಹರಿವಿನೊಂದಿಗೆ ಡಾ. ಯು.ಆರ್. ಅನಂತ ಮೂರ್ತಿಯವರ ಬರಹಗಳು ಪ್ರಿಯವೆನಿಸುತ್ತದೆ.