ವಿಷಯದ ವಿವರಗಳಿಗೆ ದಾಟಿರಿ

Archive for

31
ಆಕ್ಟೋ

ವಿಜ್ಞಾನಿಗಳೇಕೆ ಪೂಜೆ ಮಾಡಬಾರದು?

– ಡಾ. ಪ್ರವೀಣ್ ಟಿ. ಎಲ್

ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ

Isro Chief in Turupatiಮಂಗಳಯಾನದ ಯಶಸ್ವೀ ಕಾರ್ಯಾಚರಣೆ ಬಗ್ಗೆ ಇಡೀ ದೇಶವೇ ಸಂತಸಪಟ್ಟಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತರ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿರುವುದು ಮಹಾನ್ ಸಾಧನೆಯೇ ಸರಿ. ಆದರೆ ಕೆಲವು ‘ಚಿಂತಕರು’ ಈ ಇಡೀ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ರಾಧಾಕೃಷ್ಣನ್‍ರವರ ನಡೆಯ ಕುರಿತು ತಮ್ಮ ಕುಹಕ, ತಕರಾರುಗಳನ್ನು ಅಂತರ್ಜಾಲ, ಮತ್ತಿತರ ಕಡೆಗಳಲ್ಲಿ ಹರಿಯಬಿಡುತ್ತಿದ್ದಾರೆ. ರಾಧಾಕೃಷ್ಣನ್‍ರವರು ‘MOM’ ನ ಸಣ್ಣ ಮಾದರಿಯೊಂದನ್ನು ತಿರುಪತಿಗೆ ತಂದು, ತಮ್ಮ ಧರ್ಮಪತ್ನಿಯೊಡನೆ ಪೂಜಾ ಕಾರ್ಯಗಳನ್ನು ನೇರವೇರಿಸಿದ್ದು ಅವರ ಟೀಕೆಗೆ ಕಾರಣ.

ಉಡಾವಣೆಗೊಂಡ ‘MOM’ ಮಂಗಳನ ತಲುಪುವ ಮುಂಚೆಯೇ ಇದೊಂದು ವಿಫಲಯತ್ನವೇನೋ ಎಂಬಂತೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇನ್ನೂ ಕೆಲವರು ವಿಫಲವಾಗಿದೆ ಎಂಬ ತೀರ್ಮಾನಕ್ಕೂ ಬಂದಿದ್ದರು. ಅಷ್ಟೇ ಅಲ್ಲದೇ ಈ ವಿಫಲತೆಗೆ ವಿಜ್ಞಾನಿಗಳು ತಿರುಪತಿಗೆ ತೆರಳಿ ‘ತಲೆಬೋಳಿಸಿ’ಕೊಳ್ಳದೇ ವಾಪಾಸಾದುದೇ ಪ್ರಮುಖ ಕಾರಣ ಎಂಬಂತೇ ಕುಹಕವಾಡಲು ಶುರುಮಾಡಿದರು. ಕುಹಕಗಳಿಗೆಲ್ಲಾ ಉತ್ತರವನ್ನು ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ.

ಈ ‘ವೈಜ್ಞಾನಿಕ’ ಚಿಂತಕರ ಪ್ರಮುಖ ತಕರಾರೆಂದರೆ, ವಿಜ್ಞಾನಿಗಳು ದೇವಸ್ಥಾನಗಳಿಗೆ ತೆರಳಿ ತಾವು ತಯಾರಿಸಿದ ಆಯುಧದ ಪೂಜೆ ನೆರವೇರಿಸಿರುವುದು ಎಷ್ಟು ಸರಿ. ವಿಜ್ಞಾನಿಗಳಿಗೆ ವಿಶ್ವದ ಸೃಷ್ಟಿಯ ಕುರಿತು ವೈಜ್ಞಾನಿಕ ಕಾರಣಗಳು ತಿಳಿದಿದ್ದರೂ ಸಹಾ ದೇವರ ಅಸ್ತಿತ್ವವನ್ನು ನಂಬುತ್ತಾರೆ ಮತ್ತು ತಮ್ಮ ವೈಜ್ಞಾನಿಕ ಪ್ರಯೋಗಗಳಲ್ಲಿ ದೇವರ ಕೈವಾಡ ಇದೆ ಎಂದುಕೊಳ್ಳುವುದು ಅಜ್ಞಾನ/ ಮೂಢತೆ ಎಂಬುದವರ ವಾದ. ISRO ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ರಾಧಾಕೃಷ್ಣನ್‍ರವರು ನೆನಪಿಡಬೇಕು ಎಂದು ಅಪ್ಪಣೆ ಹೊರಡಿಸುತ್ತಾರೆ.

ಮೇಲಿನ ತಕರಾರುಗಳು ಭಾರತದ ಕುರಿತ ಈ ಚಿಂತಕರ ಅಜ್ಞಾನವನ್ನೂ, ಅವೈಜ್ಞಾನಿಕತೆಯನ್ನೂ, ಮೌಢ್ಯತೆಯನ್ನೂ ಪ್ರದರ್ಶಿಸುತ್ತಿವೆ. ಈ ಚಿಂತಕರುಗಳು ತಪ್ಪಾದ ‘ಯೂರೋಪಿನ ಗ್ರಹಿಕೆ’ಗಳಿಂದ ಕೂಡಿದ ತಮ್ಮ ವಿವರಣೆಗಳನ್ನೇ ವೈಜ್ಞಾನಿಕ ಎಂದು, ತಾವೇ ವಿಜ್ಞಾನದ ಪಿತಾಮಹರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಜೊತೆಗೆ ಯೂರೋಪಿನ ಸೆಕ್ಯುಲರ್ ಚಿಂತನೆಯ ನಕಲನ್ನು ಭಾರತದಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತದೆ. ವಿಜ್ಞಾನಿಗಳ ಈ ನಡೆಯನ್ನು ಅವೈಜ್ಞಾನಿಕ, ಮೌಢ್ಯ ಎನ್ನಲು ಕಾರಣ ಅವರ ಆಚರಣೆ ಮತ್ತು ನಂಬಿಕೆಗಳ ನಡುವಿನ ಸಂಬಂಧ. ಅಂದರೆ ಬಾಹ್ಯಾಕಾಶ ನೌಕೆಯ ಉಡಾವಣೆಗೂ ದೇವರ ಮೇಲಿನ ನಂಬಿಕೆಗೂ ಸಂಬಂಧ ಇದೆ ಎಂಬುದು. ದೇವರೇ ಬಂದು ಕ್ಷಿಪಣಿಯನ್ನು ಉಡಾವಣೆ ಮಾಡುತ್ತಾನೆ ಎಂದೇನೂ ವಿಜ್ಞಾನಿಗಳು ನಂಬಿಲ್ಲವಲ್ಲ. ಹಾಗಿದ್ದರೆ ಅವರು ವರ್ಷಗಟ್ಟಲೇ ಶ್ರಮಪಟ್ಟು ತಯಾರಿಸುವ ಅವಶ್ಯಕತೆಯಾದರೂ ಏನಿತ್ತು. ಅಲ್ಲದೇ ಅದಕ್ಕೆ ನಿರ್ದಿಷ್ಟ ಕಾಲಕ್ಕೆ ಬೇಕಾಗುವಷ್ಟು ಇಂಧನವನ್ನು, ಆಧುನಿಕ ತಂತ್ರಜ್ಞಾನವನ್ನು ಬಳಸುವ ಅಗತ್ಯವಾದರೂ ಏಕೆ?

ಮತ್ತಷ್ಟು ಓದು »

30
ಆಕ್ಟೋ

ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩

– ಷಣ್ಮುಖ ಎ

ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಚಿತ್ರಣಕಾಯಿದೆ ಮತ್ತು ವಾಸ್ತವ ಸ್ಥಿತಿಗಳು

The Scheduled Castes and Scheduled Tribes (Prevention of Atrocities) Act, 1989ಈ ವರದಿಯಲ್ಲಿ ಸಂಗ್ರಹಿಸಿರುವ ಅಂಕಿ-ಅಂಶ ಮತ್ತು ಉಲ್ಲೇಖಿತವಾಗಿರುವ ವಿವರಣೆಗಳನ್ನೇ ಗಮನಿಸಿದರೂ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯು ಏಕೆ ವಿಫಲವಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ. ಈ ವರದಿಯಲ್ಲಿನ ಅಂಶಗಳು ಸ್ಪಷ್ಟಪಡಿಸುವ ಹಾಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಜಾತಿವ್ಯವಸ್ಥೆಯ ಚೌಕಟ್ಟಿನಡಿಯಲ್ಲಿ ನಿರೂಪಿಸಲಾದ ಸಾಮಾಜಿಕ ತಾರತಮ್ಯದ ಅಥವಾ ಅಸ್ಪೃಷ್ಯತೆಯ ಆಚರಣೆಯ ಹೆಸರಿನಲ್ಲಿ ದಾಖಲಾಗುತ್ತಿರುವುದು ಕೆಲವೇ ಪ್ರಕರಣಗಳು. ಅದರಲ್ಲೂ ನೇರವಾಗಿ ಈ ರೀತಿಯ ಪ್ರಕರಣಗಳಲ್ಲಿ ನಿಂದನೆ ಮತ್ತು ಹಲ್ಲೆಗಳನ್ನೊಳಗೊಂಡ ಪ್ರಕರಣಗಳೇ ಹೆಚ್ಚಿನವು. ಉಳಿದಂತೆ ಈ ವರದಿಯು ನಿಜಕ್ಕೂ ಸಾಮಾಜಿಕ ತಾರತಮ್ಯ, ಅಸ್ಪೃಷ್ಯತಾಚರಣೆ ಎನ್ನುವುಂತಹ ಪ್ರಕರಣಗಳನ್ನು ವಿರಳವಾಗಿ ಹೆಸರಿಸುತ್ತದೆ. ಉಳಿದಂತೆ ನಿಂದನೆ, ಹಲ್ಲೆ, ಭೂ ವಿವಾದ, ಗೋಮಾಳ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಕರಣಗಳೇ ಹೆಚ್ಚಾಗಿವೆ.

ಈ ರೀತಿಯ ವ್ಯಾಜ್ಯಗಳು ಸಾಮಾನ್ಯವಾಗಿ ಜನರ ನಡುವೆ ದಲಿತರೆನಿಸಿಕೊಂಡಿರುವವರ ನಡುವೆ, ದಲಿತರಲ್ಲದವರ ನಡುವೆ ಮತ್ತು ದಲಿತರೆನಿಸಿಕೊಂಡವರು ಮತ್ತು ಅಲ್ಲದವರ ನಡುವೆ ನಡೆಯುತ್ತಲೇ ಇರುತ್ತವೆ. ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ ಇದು ಸಾಮಾನ್ಯ ಸಂಗತಿ. ಆದರೆ,ಈ ರೀತಿಯಲ್ಲಿ ಸಾಮಾನ್ಯವಾಗಿ ದಾಖಲಾಗುವ ಪ್ರಕರಣಗಳಲ್ಲಿ ವಾದಿ ಪ್ರತಿವಾದಿಗಳು ದಲಿತರು ಮತ್ತು ದಲಿತೇತರರು ಆಗಿದ್ದರೆ, ಅದು ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ ಅಷ್ಟೇ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಪ್ರಕರಣವೆಂದು ದಾಖಲಾಗುತ್ತದೆಯಷ್ಟೆ.

ಸಾಮಾನ್ಯವಾಗಿ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ ಅದರಲ್ಲಿ ತಪ್ಪಿತಸ್ಥರು ಮತ್ತು ಮುಗ್ದರ ತೀರ್ಮಾನ ಸಾಧ್ಯವಿಲ್ಲ. ಅದರೆ ಅದೇ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದ ತಕ್ಷಣ ಅಲ್ಲಿ ಅಪರಾಧಿ ಮತ್ತು ಮುಗ್ದರ ತೀರ್ಮಾನವಾಗಿರುತ್ತದೆ. ಹಾಗಾಗಿಯೇ ಅಲ್ಲವೇ? ಇಲ್ಲಿ ಕೇವಲ ಪ್ರಕರಣ ದಾಖಲಾಗಿ ಕನ್ವಿಕ್ಷನ್ ಆಗದಿದ್ದರೂ, ಪೆಂಡಿಂಗ್ ಇದ್ದರೂ, ರಾಜಿಮಾಡಿಕೊಂಡಿದ್ದರೂ ಸಹ ಸರ್ಕಾರದ ಹಣಕಾಸಿನ ಪರಿಹಾರ ನೀಡಲಾಗಿರುತ್ತದೆ. ಅಲ್ಲದೆ ದೂರದಾರರೆನಿಸಕೊಂಡ ಮತ್ತು ದೌರ್ಜನ್ಯಕ್ಕೆ ಒಳಗಾದವರೆನಿಸಿಕೊಂಡ ದಲಿತರೂ ಸಹ ಪ್ರಕರಣಗಳನ್ನು ದಾಖಲು ಮಾಡಿ ಪರಿಹಾರ ಪಡೆದನಂತರ ಇಡೀ ಪ್ರಕರಣದ ಬಗ್ಗೆ ಆಸಕ್ತಿಯನ್ನೇ ತೋರದೆ ಕೆಲಸ ಮುಗಿಯಿತೆಂದು ಸುಮ್ಮನಿದ್ದುಬಿಡುತ್ತಿರುತ್ತಾರೆ.

ಈ ಕಾಯ್ದೆಯಡಿಯಲ್ಲಿ ದಲಿತರ ದೌರ್ಜನ್ಯ ಪ್ರಕರಣಗಳನ್ನು ಪರಿಭಾವಿಸುವುದರಲ್ಲಿಯೇ ಸಮಸ್ಯೆಗಳಿವೆ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಹಳ್ಳಿಯ ದೀನರ ನಿಜವಾದ ಜಾತಿ ತಾರತಮ್ಯ ಅಥವಾ ಅಸ್ಪೃಷ್ಯತೆಯ ಆಚರಣೆಗಳ ಸಮಸ್ಯೆಗಳನ್ನು ಇದು ಹೇಗೆ ಪರಿಹರಿಸುತ್ತದೆ? ಎನ್ನುವ ಪ್ರಶ್ನೆ ಏಳುತ್ತದೆ. ಹೇಳಬೇಕೆಂದರೆ ಅಸ್ಪೃಷ್ಯತೆಯ ಆಚರಣೆಗಳ ಸಂದರ್ಭಕ್ಕಿಂತ ಅತಿಹೆಚ್ಚಾಗಿ ಈ ಕಾಯ್ದೆಯು ಬಳಕೆಯಾಗಿರುವುದೇ ಬೇರೆ ಸಂದರ್ಭಗಳಲ್ಲಿ. ಹಾಗಿದ್ದಪಕ್ಷದಲ್ಲಿ ಮಂತ್ರಿಗಳು ಮತ್ತು ಬುದ್ಧಿಜೀವಿ ವರ್ಗಗಳು ಈ ಕಾಯ್ದೆಯು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ, ಈ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಅತ್ಯಂತ ಕಡಿಮೆ ಇದೆಯೆಂದು ಕಳವಳ ಪಡುವುದರ ಹಿಂದೆ ಯಾವ ವಾಸ್ತವ ಸಮಸ್ಯೆಯ ಕಾಳಜಿ ಇದೆ?

ಮತ್ತಷ್ಟು ಓದು »

29
ಆಕ್ಟೋ

ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೨

– ಷಣ್ಮುಖ ಎ

ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

ಕ್ಷೇತ್ರಾಧ್ಯಯನ ಆಧಾರಿತ ಮಾಹಿತಿಗಳು ಮತ್ತು ವಿಶ್ಲೇಷಣೆ:

The Scheduled Castes and Scheduled Tribes (Prevention of Atrocities) Act, 1989ಈ ಮೇಲಿನ ಪ್ರಶ್ನೆಯನ್ನು ಪರಿಶೀಲಿಸಲು ಒಂದು ಕ್ಷೇತ್ರಾಧಾರಿತ ಸಂಶೋಧನಾ ಪ್ರಾಜೆಕ್ಟ್‍ನ ಮಾಹಿತಿಗಳು ಕೆಲವು ವಿಶೇಷವಾದ ಆಸಕ್ತಿಕರ ಅಂಕಿ-ಅಂಶಗಳನ್ನು ಕೊಡುತ್ತವೆ. ಈ ಕ್ಷೇತ್ರಾಧ್ಯಯನದ ಮಾಹಿತಿಗಳು, ದಾಖಲಾಗುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಅವುಗಳು ಶಿಕ್ಷೆಯಾಗುವ ಪ್ರಕರಣಗಳ ಪ್ರಮಾಣದ ನಡುವಿನ ಅಂತರಕ್ಕೆ ಕಾರಣಗಳ ಬಗ್ಗೆ ಬೇರೆಯದೇ ರೀತಿಯಲ್ಲಿ ಯೋಚಿಸಲು ದಾರಿ ಮಾಡಿಕೊಡುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದ ಆಂತ್ರೋಪಾಲಜಿ ವಿಭಾಗದ ಅಧ್ಯಾಪಕರೊಬ್ಬರು ತಮ್ಮ ಏಳುಜನ ಸಂಶೋದನಾ ಸಹಾಯಕರೊಂದಿಗೆ ಕರ್ನಾಟಕ ಸರ್ಕಾರದ ಪರವಾಗಿ ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಕೇಂದ್ರದ ವತಿಯಿಂದ ಒಂದು ಸಂಶೋಧನಾ ಅಧ್ಯಯನ ಕೈಗೊಂಡಿದ್ದರು. ಇದು ‘ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಮತ್ತು ದೌರ್ಜನ್ಯಕ್ಕೆ ಬಲಿಯಾದವರಿಗೆ ನೀಡಲಾಗಿರುವ ಪರಿಹಾರಗಳ’ ಬಗ್ಗೆ ಮಾಡಲಾದ ಒಂದು ಮೌಲ್ಯಮಾಪನ ಅಧ್ಯಯನವಾಗಿದೆ. ಇದು ಬಾಗಲಕೋಟೆಯೊಂದನ್ನುಳಿದು ಉಳಿದ ಕರ್ನಾಟಕದ ಎಲ್ಲಾ 26 ಜಿಲ್ಲೆಗಳಿಂದ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಪರಿಹಾರಗಳನ್ನು ಪಡೆದ ಫಲಾನುಭವಿ ದಲಿತರನ್ನು ಮತ್ತು ಅಪರಾಧಿಗಳನ್ನು ಗುರುತಿಸಿ ಅವರುಗಳಲ್ಲಿ ಪ್ರತಿಜಿಲ್ಲೆಯಿಂದ ಶೇ. 10ರಷ್ಟು ಜನರನ್ನು ಸಂದರ್ಶನ ನಡೆಸಿದ್ದಾರೆ.

ಮೊದಲಿಗೆ ಅವರ ಅಧ್ಯಯನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಮೂಲಕಾರಣ (Root Cause) ವಾದ ಅಂಶಗಳಾವುವು ಮತ್ತು ಅವುಗಳಲ್ಲಿ ಯಾವ ಯಾವ ರೀತಿಯ ನಡವಳಿಕೆಗಳು ಬರುತ್ತವೆ ಎಂಬುದನ್ನು ಯಾವ ರೀತಿ ಗುರುತಿಸುತ್ತಾರೆ ಎನ್ನುವುದನ್ನು ನೋಡೋಣ.

ದಲಿತರ ಮೇಲಿನ ದೌರ್ಜನ್ಯಕ್ಕೆ ಮೂಲಕಾರಣಗಳು: ಈ ವರದಿಯಲ್ಲಿ ನಮೂದಿಸಿರುವಂತೆ ಪೋಲೀಸರು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವ ಕಾರಣಗಳು ಮತ್ತು ಅಧ್ಯಯನದ ಸಂದರ್ರ್ಭದಲ್ಲಿ ಸಂದರ್ಶಿತ ಮಾಹಿತಿದಾರರು ನೀಡಿದ ಕಾರಣಗಳನ್ನು ತುಲನೆ ಮಾಡಿ ಅವುಗಳನ್ನು ವರ್ಗೀಕರಿಸಿದ್ದಾರೆ. ಅವುಗಳೆಂದರೆ: ಸಾಮಾಜಿಕ ತಾರತಮ್ಯ, ಭೂವಿವಾದ, ರಾಜಕೀಯ ವೈಷಮ್ಯ, ಹಿಂದಿನ ವೈರತ್ವ, ಆರ್ಥಿಕ ವ್ಯವಹಾರಗಳು, ಕಾರ್ಮಿಕ ವ್ಯಾಜ್ಯಗಳು, ಮತ್ತು ಇತರೆ. ಅವುಗಳ ಕುರಿತು ಸಂಕ್ಷಿಪ್ರವಾಗಿ ನೋಡುವುದಾದರೆ,

  • ಸಾಮಾಜಿಕ ತಾರತಮ್ಯ (Social Discrimination): ಈ ವರ್ಗೀಕರಣದಡಿಯಲ್ಲಿ ಅಸ್ಪೃಷ್ಯತೆ ಆಚರಣೆಗಳು ಎನ್ನಬಹುದಾಂತಹ ಅಂಶಗಳನ್ನು ಪಟ್ಟಿಮಾಡಲಾಗಿದೆ ಎನ್ನುತ್ತದೆ ವರದಿ. ಮುಖ್ಯವಾಗಿ, ಸಮಾಜದ ಪ್ರತಿಯೊಂದು ಜಾತಿಗಳು ಪರಸ್ಪರ ವ್ಯವಹರಿಸುವಂತಹ ಪ್ರದೇಶಗಳಾದ ಶಾಲೆಗಳು, ಆಸ್ಪತ್ರೆಗಳು, ಗ್ರಾಮ ಅಥವಾ ಪಟ್ಟಣ ಪಂಚಾಯಿತಿಗಳು, ಮತ್ತಿತರೆ ಕಾರ್ಯಕ್ಷೇತ್ರಗಳಲ್ಲಿ ಮೇಲ್ಜಾತಿಗಳ ಸದಸ್ಯರಿಂದ ಅಸ್ಪೃಷ್ಯತೆಯ ಆಚರಣೆಗಳೆಂದು ಕಂಡುಬಂದ ಅಂಶಗಳು. ಅವುಗಳೆಂದರೆ:
  1. ಶಾಲೆಗಳಲ್ಲಿ ಪರಿಶಿಷ್ಟಜಾತಿಯ ಮಕ್ಕಳನ್ನು ಪ್ರತ್ಯೇಕ ಬೆಂಚ್‍ಗಳಲ್ಲಿ ಕುಳಿತುಕೊಳ್ಳುವಂತೆ ಮಾಡಿರುವುದು.
  2. ವಿಶೇಷ ಸಮಾರಂಭಗಳು, ವಿಧಿ ಆಚರಣೆಗಳು ಹಬ್ಬಗಳ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ಊಟಕ್ಕೆ ಪ್ರತ್ಯೇಕ ಸಾಲಿನಲ್ಲಿ ಕೂರಿಸುವುದು.
  3. ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯದಂತೆ ಪರಿಶಿಷ್ಟ ಜಾತಿಯ ಸದಸ್ಯರನ್ನು ತಡೆಯುವುದು.
  4. ಗ್ರಾಮೀಣ ಪ್ರದೇಶಗಳ ಕೆಲವು ಹೊಟೇಲುಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರುಗಳಿಗೆ ಪ್ರತ್ಯೇಕ ಲೋಟ ಮತ್ತು ತಟ್ಟೆಗಳಲ್ಲಿ ಉಪಾಹಾರ ಪಾನಿಯಗಳನ್ನು ನೀಡಿರುವುದು.
  5. ಹಲವು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯ ಸದಸ್ಯರನ್ನು ದೇವಾಲಯ ಪ್ರವೇಶಕ್ಕೆ ನಿರಾಕರಿಸುವುದು.
  6. ಸಾರ್ವಜನಿಕ ಕೊಳವೆಗಳಿಂದ ನೀರು ಪಡೆಯುವಾಗ ಉನ್ನತ ಜಾತಿಯ ಸದಸ್ಯರು ಪರಿಶಿಷ್ಟ ಜಾತಿಯ ಸದಸ್ಯರೊಂದಿಗೆ ಜಗಳವಾಡುವುದು ಕಂಡುಬರುತ್ತದೆ. ಮೇಲ್ಜಾತಿಯವರು ಕೆಳಜಾತಿಯವರಿಗೆ ಕೆಲವು ಪ್ರದೇಶಗಳಲ್ಲಿ ನೀರು ಹಿಡಿದುಕೊಳ್ಳಲು ಬಿಡುವುದಿಲ್ಲ.

ಮತ್ತಷ್ಟು ಓದು »

28
ಆಕ್ಟೋ

ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧

– ಷಣ್ಮುಖ ಎ

ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ-577451

The Scheduled Castes and Scheduled Tribes (Prevention of Atrocities) Act, 1989ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಮೂಲಕ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಇವೆ. ಈ ರೀತಿಯ ದೌರ್ಜನ್ಯಗಳಿಂದ ದಲಿತರನ್ನು ರಕ್ಷಿಸಿ ಅವರನ್ನು ಅಸ್ಪೃಷ್ಯತೆಯ ಆಚರಣೆಗಳಿಂದ ಮುಕ್ತಿಗೊಳಿಸುವ ಒಂದು ಮಹಾಅಸ್ತ್ರವೆಂಬಂತೆ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆಯನ್ನು ಭಾರತ ಸರ್ಕಾರ 1989ರಲ್ಲಿ ಜಾರಿಗೆ ತಂದಿದೆ. ಈ ಕಾಯಿದೆಯ ಜಾರಿಯಾದ ಎರಡು ದಶಕಗಳ ತರುವಾಯ ಈ ಕಾಯಿದೆಯ ಜಾರಿ ಮತ್ತು ಅದರ ಪರಿಣಾಮದ ಕುರಿತು ಚರ್ಚೆಗಳು ಮತ್ತು ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಈ ಚರ್ಚೆಗಳಲ್ಲಿನ ಸಾಮಾನ್ಯ ನಿಲುವೆಂದರೆ ಅಸ್ಪೃಷ್ಯತೆ ಆಚರಣೆಯ ವಿರುದ್ದ ಪ್ರಬಲವಾದ ಕಾಯಿದೆ ಇದ್ದರೂ ಇದರ ಪರಿಣಾಮಕಾರಿ ಜಾರಿಯಲ್ಲಿ ಅಧಿಕಾರಿಗಳು ಆಸಕ್ತಿವಹಿಸದಿರುವುದರಿಂದ ಈ ಕಾಯಿದೆಯಿಂದ ದಲಿತರಿಗೆ ಸಿಗಬೇಕಾದ ನ್ಯಾಯ ದೊರೆಯುತ್ತಿಲ್ಲ ಎನ್ನುವ ಸಾಮಾನ್ಯ ಆತಂಕ-ಕಾಳಜಿಗಳು ವ್ಯಕ್ತವಾಗುತ್ತಿವೆ.

ಪ್ರಸ್ತುತ ಲೇಖನವು ಈ ಆತಂಕಗಳ ವಾಸ್ತವತೆಯನ್ನು ಪರೀಕ್ಷಿಸಲು ಪ್ರಯತ್ನಿಸಿದೆ.ಸರ್ಕಾರವೇ ನಡೆಸಿರುವ ಈ ಕಾಯಿದೆಯ ಮೌಲ್ಯಮಾಪನ ಅಧ್ಯಯನ ವರಧಿಯ ಅಂಕಿಅಂಶಗಳು ಮತ್ತು ಅದರಲ್ಲಿನ ವಿವರಣೆಗಳನ್ನು ಆದರಿಸಿ ಈ ಕಾನೂನಿನಡಿಯಲ್ಲಿ ದಾಖಲಾಗಿರುವವ ಪ್ರಕರಣಗಳ ವಾಸ್ತವ ಸ್ಥಿತಿಯನ್ನು ಇಲ್ಲಿ ಪರೀಕ್ಷಿಸಲಾಗಿದೆ.

ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ, ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ದಲಿತರು ಈ ಕಾನೂನಿನಿಂದ ದೊರೆಯುವ ಪರಿಹಾರ ಪಡೆದ ನಂತರ ಪ್ರಕರಣದ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುವುದೇ ಪ್ರಕರಣಗಳು ಇತ್ಯರ್ಥಗೊಳ್ಳದಿರಲು ಮುಖ್ಯ ಕಾರಣವೆಂದು ಗುರುತಿಸುತ್ತದೆ. ಜೊತೆಗೆ, ಈ ಕಾನೂನಿನಡಿಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಕಾರಣಕ್ಕೆ ದಾಖಲಾಗುವ ಪ್ರಕರಣಗಳು ಅತಿಕಡಿಮೆ ಇದ್ದು ಇತರೇ ಜಗಳ-ವ್ಯಾಜ್ಯಗಗಳೇ ಈ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವ ಅಂಶವನ್ನು ಎತ್ತಿ ತೋರಿಸುತ್ತವೆ.ಈ ರೀತಿಯಲ್ಲಿ ಈ ಕಾಯಿದೆಯು ಅಸ್ಪೃಷ್ಯತೆಯ ಆಚರಣೆಯಲ್ಲದ ವಿಚಾರಗಳಿಗೆ (ದುರು)ಉಪಯೋಗವಾಗುತ್ತಿರುವುದಕ್ಕೆ ಈ ಕಾಯಿದೆ ರೂಪುಗೊಂಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿಯೆ ಸಮಸ್ಯೆ ಇರಬೇಕೆಂದು ಈ ಲೇಖನವು ತರ್ಕಿಸುತ್ತದೆ.

ಮುಖ್ಯವಾಗಿ, ಭಾರತೀಯ ಸಮಾಜದ ಕುರಿತ ಜಾತಿವ್ಯವಸ್ಥೆಯ ಚೌಕಟ್ಟಿನ ಹಿನ್ನೆಲೆಯಲ್ಲಿ ಕೆಳಜಾತಿ-ಮೇಲ್ಜಾತಿಗಳ ಕುರಿತು ವಸಾಹತುಶಾಹಿ ಸ್ಟೀರಿಯೋಟೈಪುಗಳು ಸಮಾಜವಿಜ್ಞಾನದಲ್ಲಿ ಹರಡಿಕೊಂಡಿದೆ. ಜಾತಿಗಳ ಕುರಿತ ಈ ರೀತಿಯ ಸ್ಟೀರಿಯೋಟೈಪುಗಳನ್ನು ಆಧರಿಸಿದ ನಿರೂಪಣೆಗಳಿಂದ ಹುಟ್ಟಿಕೊಂಡಿರುವ ಬೌದ್ಧಿಕ ವಲಯದಲ್ಲಿನ ಸಾಮಾನ್ಯ ಗ್ರಹಿಕೆಗಳು ಈ ಕಾಯಿದೆ ರೂಪಿತಗೊಳ್ಳಲು ಕಾರಣವಾಗಿದೆ. ಈ ಸಾಮಾನ್ಯಗ್ರಹಿಕೆಗಳು ಇಲ್ಲಿಯ ವಾಸ್ತವ ಸ್ಥಿತಿಯಾಗಿರದೇ ಇರುವುದರಿಂದ ಈ ಕಾಯಿದೆಯಿಂದ ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನ್ಯಾಯಪಡೆಯುವುದಕ್ಕಿಂತ ಹೆಚ್ಚಾಗಿ ಲಾಭ ಪಡೆಯುವ ಕಡೆಗಷ್ಟೇ ಒಲವಿದೆ. ಅಲ್ಲದೆ ದಲಿತರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಈ ಕಾಯಿದೆಯು ಹಲವು ಹೊಸ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂದು ಈ ಲೇಖನವು ವಾದಿಸುತ್ತದೆ. ಮತ್ತಷ್ಟು ಓದು »

22
ಆಕ್ಟೋ

ದೀಪಾವಳಿ ಅಭ್ಯಂಜನ!

ತುರುವೇಕೆರೆ ಪ್ರಸಾದ್

Deepaಪ್ರತಿವರ್ಷ ದೀಪಾವಳಿ ಬರುತ್ತದೆ, ಹೋಗುತ್ತದೆ. ವರ್ಷದಿಂದ ವರ್ಷಕ್ಕೆ ದೀಪಾವಳಿ ಸಂಭ್ರಮದಲ್ಲಿ ನನ್ನ ಬೆಲೆ ಮಾತ್ರ ನಮ್ಮ ರೂಪಾಯಿ ತರ ಕೆಳಕ್ಕೆ ಕೆಳಕ್ಕೆ ಜಾರುತ್ತಲೇ ಹೋಗುತ್ತಾ ಪಾತಾಳ ಮುಟ್ಟುತ್ತಿದೆ. ಮದುವೆಯಾದ ಹೊಸದರಲ್ಲಿ ಢಂ..ಢಮಾರ್ ಅನ್ನುತ್ತಿದ್ದ ದೀಪಾವಳಿ ಈಗ ಟುಸ್ಸಾಗಿದೆ. ಆಗಿನ ಉಪಚಾರಕ್ಕೂ ಈಗಿನ ಸಂಭ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೇಗೆ ಎಂದಿರಾ? ಕೇಳಿ ಹೇಳ್ತೀನಿ..!

ಮದುವೆಯಾದ ಹೊಸದರಲ್ಲಿ ದೀಪಾವಳಿಗೆಂದು ಮಾವನ ಮನೆಗೆ ಹೋದಾಗ ಅದೇನು ಉಪಚಾರ? ಅದೇನು ಗೌರವ..? ಬೆಳಿಗ್ಗೆ ಎದ್ದ ಕೂಡಲೇ ಹೆಂಡತಿ ಟವಲ್ ಹಿಡಿದು ನಗುನಗುತ್ತಾ ಹಿಂದೆಯೇ ಬರುತ್ತಿದ್ದಳು. ಮನೆಯ ಬಾಗಿಲುದ್ದಕ್ಕೂ ಅಕ್ಕ ಪಕ್ಕದಲ್ಲಿಟ್ಟಿರುತ್ತಿದ್ದ ಕೆರಕ( ಸಗಣಿ ಉಂಡೆ) ತುಳಿಯದಂತೆ ಎಚ್ಚರ ವಹಿಸುತ್ತಿದ್ದಳು. ಸಗಣಿಯನ್ನು ಮೈ ಕೈಗೆಲ್ಲಾ ಬಳಿದುಕೊಂಡು ತಟಪಟ ತಟ್ಟುತ್ತಾ ಕೆರಕನ ಸೃಷ್ಟಿಯಲ್ಲಿ ನಿರತರಾಗಿರುತ್ತಿದ್ದ ಚಿಲ್ಟಾರಿಗಳನ್ನು ಏಯ್! ಸ್ವಲ್ಪ ಇರ್ರೋ! ಇವರಿಗೆ ಸಿಡಿಯುತ್ತೆ ಎಂದು ನನ್ನನ್ನು ಸೆರಗಲ್ಲಿ ಮರೆಮಾಡಿಕೊಂಡು ಬಚ್ಚಲಿಗೆ ಕರೆದೊಯ್ಯುತ್ತಿದ್ದಳು. ಒಮ್ಮೆ ಬಾಗಿಲ ಪಕ್ಕ ಇಟ್ಟಿದ್ದ ಇಂತದ್ದೊಂದು ಸಗಣಿ ಉಂಡೆಯನ್ನು ತುಳಿದೇ ಬಿಟ್ಟಿದ್ದೆ. ಆಗಂತೂ ನನ್ನ ಹೆಂಡತಿ ಬಾಂಬ್ ತುಳಿದೆ ಎನ್ನುವಂತೆ ಮನೆಯವರ ಮೇಲೆಲ್ಲಾ ಎಗರಾಡಿ ನನ್ನ ಕಾಲಿಗೆ ಎರಡು ಮೂರು ಟ್ರಿಪ್ ಅಭಿಷೇಕ ಮಾಡಿಸಿ, ಅದಕ್ಕೆ ಘಂ ಎನ್ನುವ ಗಂದದೆಣ್ಣೆ ಪೂಸಿ ಪುಣ್ಯಾಹ ಮಾಡಿ ಸಗಣಿ ವಾಸನೆಯಿಂದ ಮುಕ್ತವಾಗಿಸಿದ್ದಳು.

ಈಗ ಮದುವೆಯಾಗಿ 20 ವರ್ಷಗಳ ನಂತರ ಸೀನೇ ಬೇರೆ! ದೀಪಾವಳಿ ಪ್ರಾರಂಭವಾಗುವುದೇ ನನ್ನ ಸುಗುಣೆ ಹೆಂಡತಿಯ ಸಗಣಿ ಸುಪ್ರಭಾತದಿಂದ! ಏನ್ರೀ! ಇನ್ನು ಮಲಗೇ ಇದೀರಿ? ಸಗಣಿ ಯಾವಾಗ್ರೀ ಹಾಕೋದು?’ ಎಂದು ಕೂಗಿದರೆ ಅಕ್ಕ ಪಕ್ಕದ ಮನೆಯವರು ಏನಂದ್ಕೊಬೇಕು ಹೇಳಿ? ಗಂಡ ಸಗಣಿ ಹಾಕುವ ದನ ಎಂಬ ಸತ್ಯ ಜಗಜ್ಜಾಹೀರಾದರೆ ನನ್ನ ಮರ್ಯಾದೆ ಗತಿ ಏನು ಎಂದು ಇವಳು ಸ್ವಲ್ಪವಾದರೂ ಯೋಚಿಸಿದ್ದಾಳಾ? ನಾನು ಮೇಲೆದ್ದು ಸಗಣಿ ಹಾಕುವ ದನ ಹುಡುಕಿ ಮನೆ ಮನೆ, ಹಟ್ಟಿ ಹಟ್ಟಿ ತಿರುಗಬೇಕಿತ್ತು. ಯಾರದ್ದೋ ಕೊಟ್ಟಿಗೆಯಲ್ಲಿ ಸಗಣಿಗಾಗಿ ಕಾದು ನಿಂತವರ ಹಿಂದೆ ನಿಂತು ದನ ಕೊಟ್ಟಿಗೆಯಲ್ಲಿ ಸಗಣಿ ಹಾಕುವ ತನಕ ಕಾದು ಆ ಸಗಣಿ ಭೂಸ್ಪರ್ಶ ಮಾಡುವ ಮುಂಚೆಯೇ ಡೈವ್ ಹೊಡೆದು ಅದನ್ನು ಅಂಗೈಯಲ್ಲಿ ಹಿಡಿಯಬೇಕಿತ್ತು.ಆಗ ನನಗೆ ಚಿಕ್ಕ ಹುಡುಗನಾಗಿದ್ದಾಗ ಉಡುಸಲಮ್ಮ ಉತ್ಸವದ ಮುಂದೆ ಸೋಮಂಗೆ ಬಾಳೆಹಣ್ಣಿನ ರಸಾಯನ ಮಣೆ ಹಾಕಿದಾಗ ಹುಡುಗರು ಅದಕ್ಕೆ ಮುಗಿ ಬೀಳುತ್ತಿದ್ದುದು ನೆನಪಾಗುತ್ತಿತ್ತು. ದೇವರೇ ಎಂತ ಕಾಲ ಬಂತಪ್ಪ ? ಎಂದು ಸಗಣಿಯನ್ನು ಎರಡೂ ಕೈಲಿ ಹಿಡಿದು ಬರುವಾಗ ದಾರಿಯುದ್ದಕ್ಕೂ ಆಂಟಿಯರು ಕಿಸಕ್ಕನೇ ನಗುತ್ತಿದ್ದರು. ಕೆಲವರಂತೂ ತಲೆಲಿರೋದನ್ನ ಕೈಗೆ ಯಾಕೆ ತಕ್ಕೊಂಡ್ರಿ?’ ಅಂತ ತಮಾಷೆ ಮಾಡಿದ್ದೂ ಇತ್ತು. ಇನ್ನು ಕೆಲವರು ಆಂಟಿಯರು ದಡಾರನೆ ಮನೆಯಿಂದಾಚೆ ಹೊಸಲು ದಾಟಿ ಓಡಿ ಬಂದು ಅಂಕಲ್! ಒಂದು ಗಜುಗ ಸಗಣಿ ಕೊಡ್ತೀರಾ? ನಮ್ಮೆಜಮಾನರು ಸಗಣಿ ಹುಡುಕಿಕೊಂಡು ಎಲ್ಲಿ ಹಾಳಾಗಿ ಹೋದ್ರೋ! ಇನ್ನೂ ಬಂದಿಲ್ಲ ಎಂದು ಸಗಣಿ ಹುಡುಕಲು ಹೋದ ಗಂಡಂದಿರಿಗೆ ಹಿಡಿಶಾಪ ಹಾಕುತ್ತಾ ನನ್ನ ಕೈಯ್ಯಿಂದ, ಮೊರದಿಂದ ಸಗಣಿ ಬಾಚಿಕೊಂಡು ಹೋಗುತ್ತಿದ್ದರು.

ಮತ್ತಷ್ಟು ಓದು »

19
ಆಕ್ಟೋ

ಇತಿಹಾಸದಿಂದ ಏನನ್ನೂ ಕಲಿಯಲು ಸಿದ್ಧರಾಗಿದ್ದಲ್ಲಿ,ಮರುಕಳಿಸುವ ಇತಿಹಾಸವನ್ನೇ ನೋಡಬೇಕಾಗುತ್ತದೆ

 – ಮಯೂರಲಕ್ಷ್ಮಿ

ಇತಿಹಾಸಜಾರ್ಜ ಸಂತಾಯನ ಎನ್ನುವ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ಇತಿಹಾಸವನ್ನು ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾನೆ.

ಒಂದು ದೇಶದ ಸಂಸ್ಕೃತಿಯ ದ್ಯೋತಕ ಅದರ ಪರಂಪರೆ ಧ್ಯೇಯ ನಿಷ್ಠೆ ಮತ್ತು ಅದರ ಇತಿಹಾಸವನ್ನೂ ಅವಲಂಬಿಸಿದೆ.

ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶಗಳು ಸುಭಿಕ್ಷವಾಗುವುದು ತನ್ನಲ್ಲಿ ಅಂತರ್ಗತವಾಗಿರುವ ಐತಿಹಾಸಿಕ ಮೌಲ್ಯಗಳ ಜಾಗೃತಿಯಿಂದ ಮಾತ್ರ.

ತಮ್ಮ ಅಸಾಧಾರಣ ಇಚ್ಛಾಶಕ್ತಿಯಿಂದ ಅಪರಿಮಿತ ಸಂಕಲ್ಪಶಕ್ತಿಯಿಂದ ಇತಿಹಾಸವನ್ನೇ ನಿರ್ಮಿಸಿದವರ ಸಂಖ್ಯೆ ಅತ್ಯಾಧಿಕ. ಇಂತಹ ಇತಿಹಾಸದ ಅರಿವು ಶಿಕ್ಷಣದಿಂದ ಮಾತ್ರ ಸಾಧ್ಯವೇ? ಹಾಗಿದ್ದಲ್ಲಿ ಇತಿಹಾಸವನ್ನು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಇತಿಹಾಸ ಇರಬೇಕೋ ಅಥವಾ ಐಚ್ಛಿಕವಾಗಿ ಕಲಿಯಬೇಕೋ ಎನ್ನುವ ಪ್ರಶ್ನೆ ಮೂಡುವುದು.

ಒಂದು ವ್ಯವಸ್ಥೆಯಲ್ಲಿ ಸಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಇತಿಮಿತಿಗಳನ್ನರಿತು ಅವಲೋಕಿಸಿದಾಗ ನಮ್ಮ ಮುಂದಿನ ದೇಶದ ರೂವಾರಿಗಳಾದ ಇಂದಿನ ಯುವಶಕ್ತಿಗೆ ಇತಿಹಾಸವನ್ನೂ ಇತಿಹಾಸದಿಂದ ನಾವು ಕಲಿತಿರುವ ಮತ್ತು ಕಲಿಯಬೇಕಾಗಿರುವುದನ್ನೂ ಅರಿಯಬೇಕಾದ ಇತಿಹಾಸ ಪ್ರಜ್ಞೆ ಇದೆಯೇ? ಅಥವಾ ಜಾಗೃತವಾಗಿಲ್ಲವೇ? ನಮ್ಮ ತರುಣ ಪೀಳಿಗೆಯನ್ನು ಗತವೈಭವ ಎನ್ನುವ ನಮ್ಮ ಇತಿಹಾಸದತ್ತ ಸಂಪರ್ಕಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ಮತ್ತಷ್ಟು ಓದು »

17
ಆಕ್ಟೋ

ಶ್ರೇಣಿಕೃತ ವ್ಯವಸ್ಥೆ ಜಾತಿಗಳಿಗೆ ಮಾತ್ರ ಸೀಮಿತವೇ?

– ಪ್ರಸನ್ನ ಬೆಂಗಳೂರು

ಜಾತಿ ವ್ಯವಸ್ಥೆಕನ್ನಡಪ್ರಭದಲ್ಲಿ ರಾಕೇಶ್ ಶೆಟ್ಟಿಯವರ ಲೇಖನವನ್ನು ಅರ್ಥ ಮಾಡಿಕೊಳ್ಳದ ಕೆಲವರು ಜಾಲತಾಣದಲ್ಲಿ ಆ ಲೇಖನದ ವಿಶ್ಲೇಷಣೆಗಿಳಿದು ವ್ಯಂಗ್ಯ ವಿಡಂಬನೆ ಮೂಲಕ ಆ ಲೇಖನದ ಬಿಸಿಯನ್ನು ತಗ್ಗಿಸಲು ಪ್ರಯತ್ನಿಸಲು ನಿಂತರು. ಲೇಖನವನ್ನು ಬರೆಯಲು ಷಣ್ಮುಖ ಅರ್ಮುಗಂ ಅವರೂ ಕೂಡ ಹಲವಾರು ಬಾರಿ ಒತ್ತಾಯಿಸಿದ್ದರೂ ಸಹ ಯಾವುದೇ ವಿಷಯ ನನ್ನೊಳಗೆ ಕುದ್ದು ಖೋವ ಆಗದೆ ಬರಹ ರೂಪಕ್ಕಿಳಿಯಲಾಗದು ಎಂಬ ಕನ್ನಡದ ಅತ್ಯುತ್ಕೃಷ್ಹ ಸಾಹಿತಿ ಭೈರಪ್ಪನವರ ಮಾತಿನಂತೆ ಆ ವಿಷಯ ನನ್ನೊಳಗೆ ಹರಳುಗಟ್ಟಲು ಬಿಟ್ಟಿದ್ದೆ. ಪುರೋಹಿತಶಾಹಿ ಎಂದರೇನು ಎನ್ನುವುದನ್ನು ನಾನಿಲ್ಲಿ ವಿವರಿಸಲು ಹೊರಟಿಲ್ಲ. ಅಂತಹ ಯಾವ ವ್ಯವಸ್ಥೆಯೂ ಇಲ್ಲವೆಂದು ಈಗಾಗಲೆ CSLC ತಂಡ ಧೃಢಪಡಿಸಿದೆ. ಆದರೆ, ಜಾತಿ ವ್ಯವಸ್ಥೆಯ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಿರುತ್ತವೆ. ಜಾತಿ ಇಲ್ಲವೆ? ಪದ್ದತಿ ಇಲ್ಲವೆ? ವ್ಯವಸ್ಥೆ, ಶ್ರೇಣಿ ಇಲ್ಲವೆ? ಎಂಬ ಪ್ರಶ್ನೆಗಳು ಏಳುವುದು ಸಾಮಾನ್ಯ.

ಈ ಸಂಶೋಧನಾ ತಂಡದ ಪ್ರಕಾರ ಹೇಳುವುದಾದರೆ, ಭಾರತೀಯ ಸಮಾಜವು ವ್ಯವಸ್ಥಿತವಾಗಿ ಯೂರೋಪಿಯನ್ನರು ಹೇಳುವಂತೆ ಇರಲಿಲ್ಲ. ಯೂರೋಪಿಯನ್ನರು ಅವರ ಕನ್ನಡಕದಲ್ಲಿ ಭಾರತೀಯ ಸಮಾಜವನ್ನು ನೋಡಿ ಅವರ ಸಮಾಜಕ್ಕೆ ಸಮೀಕರಿಸಿಕೊಂಡು ಅನರ್ಥೈಸಿ ಕಥೆಗಳನ್ನು ಹೆಣೆದರು. ಆ ಕಥೆಗಳನ್ನೇ ‘ವಾಸ್ತವ ಸತ್ಯ’ ವೆಂದು ನಂಬಿಕೊಂಡ ನಮ್ಮ ಮೂರ್ಖಶಿಖಾಮಣಿಗಳು ಈಗ ಕೂಗಾಟ ಅರಚಾಟ, ಹಾರಾಟ ಓರಾಟಗಳಲ್ಲಿ ತೊಡಗಿದ್ದಾರೆ. ಹೀಗೆ ಭಾರತದ ಕುರಿತ ಯುರೋಪಿಯನ್ನರ ಚಿತ್ರಣ ಮತ್ತು ಅವುಗಳನ್ನೇ ಸತ್ಯವೆಂದು ನಂಬಿ ಆ ನಕಲುಗಳನ್ನೇ ಪುನರುತ್ಪಾದಿಸುತ್ತಿರುವ ಚಿಂತನೆಗಳ ಮಿತಿಯನ್ನು, ವಿಫಲತೆಯನ್ನು ಎತ್ತಿ ತೋರಿಸುವ ಮೂಲಕ ವಾಸ್ತವವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ಈ ಸಂಶೋಧನಾ ತಂಡ ಶೋಧಿಸುತ್ತಿದೆ. ಅದರಲ್ಲಿ ಬಹುತೇಕ ಯಶಸ್ಸನ್ನೂ ಕಂಡಿದೆ. ಆದರೆ ಇದನ್ನೆಲ್ಲಾ ಹೇಳ ಹೊರಟರೆ ಈ ಎಡಬಿಡಂಗಿಗಳಿಗೆ ತಮ್ಮ ಮೂಲಕ್ಕೆ ಪೆಟ್ಟು ಬಿದ್ದು ಹೊಟ್ಟೆಹೊರೆಯುವಿಕೆ ನಿಂತು ಹೋಗುತ್ತದೆಂಬ ಭಯದಿಂದ ಶತಾಯಗತಾಯ ಅದನ್ನು ವಿರೋಧಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿ ರಾಜಕೀಯ ಒತ್ತಡ ತಂದು ಆ ಕೇಂದ್ರವನ್ನು ಮುಚ್ಚಿಸಿದ್ದೂ ಅದಕ್ಕಾಗಿ ಖುಷಿ ಪಟ್ಟಿದ್ದೂ ಆಯ್ತು.

ಜಾತಿ, ಶ್ರೇಣಿಕರಣ, ಪುರೋಹಿತಶಾಹಿ ಪರಿಕಲ್ಪನೆಗಳಲ್ಲಿನ ಸಮಸ್ಯೆಗಳನ್ನು ವಿವರಿಸಲು ತಮ್ಮ ಸಂಶೋಧನಾ ಭಾಷೆ ಮತ್ತು ಗ್ರಾಂಥಿಕ ಶಬ್ಧಗಳು ಮತ್ತು ಪಠ್ಯ ಪುಸ್ತಕ ಮಾದರಿ ಶಬ್ಧಗಳ ಮೂಲಕ ವಿವರಿಸಲು ಸಂಶೋಧಕರು ತೊಡಗುವುದು ಸಾಮಾನ್ಯರಾದ ನಮಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಇದೇನೋ ಸಂಶೋಧಕರಿಗೆ ಮಾತ್ರ ಸೀಮಿತ ಎಂದು ಸುಮ್ಮನಾಗುವ ಸಾಧ್ಯತೆಯೂ ಇದೆ.

ಮತ್ತಷ್ಟು ಓದು »

16
ಆಕ್ಟೋ

ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು…

-ಗುರುರಾಜ್ ಕೊಡ್ಕಣಿ

ಮಂಗಳಯಾನಸುಮಾರು ಮೂರು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ  ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ ಇಪ್ಪತ್ನಾಲ್ಕನೆಯ ತಾರೀಕಿನ೦ದು ಮ೦ಗಳನ ಕಕ್ಷೆ ಸೇರಿಕೊ೦ಡಿದ್ದು ಈಗ ಇತಿಹಾಸ.ನಿಜಕ್ಕೂ ಇದೊ೦ದು ಐತಿಹಾಸಿಕ ಸಾಧನೆ.ಈ ವಿಜಯದ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದೆದುರು ಸಾಬೀತುಪಡಿಸಿದ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸ೦ಸ್ಥೆಯಾಗಿರುವ ಇಸ್ರೋ, ಇ೦ಥದ್ದೊ೦ದು ಸಾಧನೆ ಮಾಡಿರುವ ವಿಶ್ವದ ನಾಲ್ಕನೆಯ ಸ೦ಸ್ಥೆಯೆನಿಸಿಕೊ೦ಡಿತು.ಇದಕ್ಕೂ ಮೊದಲು ಅಮೇರಿಕಾ,ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸ೦ಸ್ಥೆಗಳು ಇ೦ಥಹ ಯಶಸ್ಸನ್ನು ಸಾಧಿಸಿದ್ದವು.ಅಲ್ಲದೆ ಈ ಸಾಧನೆಯನ್ನು ಮಾಡಿರುವ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎ೦ದರೇ ನಮಗೆ ಹೆಮ್ಮೆಯೆನಿಸಬಹುದು.ವಿಚಿತ್ರವೆ೦ದರೆ ವೈಜ್ನಾನಿಕ ಕ್ಷೇತ್ರದಲ್ಲಿ ಭಾರತಕ್ಕಿ೦ತ ಬಹು ದೂರ ಸಾಗಿರುವ ಚೀನಾ ದೇಶಕ್ಕೆ ಕುಜಗ್ರಹವಿನ್ನೂ ಕೈವಶವಾಗಿಲ್ಲ.ಸುಮಾರು ಸಾವಿರದ ಮುನ್ನೂರು ಕೇಜಿಗಳಷ್ಟು ತೂಗುವ ಉಪಗ್ರಹವನ್ನು ಅರವತ್ತಾರು ಕೋಟಿ ಕಿಲೋಮೀಟರುಗಳಷ್ಟು ದೂರಕ್ಕೆ ಕಳುಹಿಸಲು ಇಸ್ರೋ ಮಾಡಿರುವ ಖರ್ಚು ಕೇವಲ ನಾನೂರೈವತ್ತು ಕೋಟಿ ರೂಪಾಯಿಗಳು.ವಿಶ್ವದ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಮ೦ಗಳಯಾನವನ್ನು ಸಫಲಗೊಳಿಸಿರುವ ದೇಶವೆನ್ನುವ ಹಿರಿಮೆಯೂ ನಮ್ಮದೇ.ವರ್ಷಗಟ್ಟಲೇ ಕಷ್ಟಪಟ್ಟು ದುಡಿದು ಅ೦ಗಾರಕನನ್ನು ಗೆದ್ದ ಇಸ್ರೋದ ವಿಜ್ನಾನಿಗಳು ಅ೦ತಿಮ ಕ್ಷಣಗಳಲ್ಲಿ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.ದೊಡ್ಡದೊ೦ದು ಮಹತ್ವಾಕಾ೦ಕ್ಷೆಯ ಯಜ್ನವೊ೦ದರ ಸಫಲತೆಯ ಅದ್ಭುತ ತೃಪ್ತಿ ಅವರದ್ದು.

ಆದರೆ ಈ ಸ೦ಭ್ರಮಾಚರಣೆಯ ನ೦ತರ ನಡೆದ ಕೆಲವು ಘಟನೆಗಳು ನಮ್ಮ ಕೆಲವು ಪ್ರಗತಿಪರ ಬರಹಗಾರರ ಮತ್ತು ಹಲವು ರಾಜಕಾರಣಿಗಳ ರುಗ್ಣ ಮಾನಸಿಕತೆ ಹಿಡಿದ  ಕನ್ನಡಿಯ೦ತಿದ್ದವು.ಹೀಗೊ೦ದು ಯಶಸ್ಸಿನ ನ೦ತರ ಚಿಕ್ಕದೊ೦ದು ಅಭಿನ೦ದನಾ ಭಾಷಣವನ್ನು ಮಾಡಿದ ನಮ್ಮ ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರು,’ಇ೦ಥಹ ಆಕಾಶಯಾನದ ಕನಸು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಇತ್ತು’ ಎ೦ದುಬಿಟ್ಟರು.ನಮ್ಮ ಕೆಲವು ಪುಢಾರಿಗಳಿಗೆ ಅಷ್ಟು ಸಾಕಾಯಿತು.’ಈ ಮ೦ಗಳಯಾನದ ಯಶಸ್ಸಿಗೆ ನಾವು ಮೊಟ್ಟಮೊದಲು ಸ್ಮರಿಸಬೇಕಾಗಿರುವುದು ಸ್ವತ೦ತ್ರ ಭಾರತದ ಮೊದಲ ಪ್ರಧಾನಿ ನೆಹರೂರವರನ್ನು’ ಎ೦ದು ದಿಗ್ವಿಜಯ್ ಸಿ೦ಗ್ ಟ್ವೀಟಿಸಿದ್ದರೇ,’ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರಕಾರವನ್ನು ಸ್ಮರಿಸದೆ ಕೃತಘ್ನರ೦ತೆ ನಡೆದುಕೊ೦ಡರು’ ಎ೦ಬರ್ಥದಲ್ಲಿ ಕಾ೦ಗ್ರೆಸ್ಸಿನ ವಕ್ತಾರ ಸ೦ಜಯ್ ಝಾ ನುಡಿದರು. ಈ ಯೋಜನೆಗೆ ಸರ್ಕಾರಿ ನಿಧಿಯೇ ಬಳಕೆಯಾಗಿದ್ದರೂ ಇ೦ಥಹ ಗೆಲುವಿಗೆ ವಿಜ್ನಾನಿಗಳೇ ಪ್ರತ್ಯಕ್ಷ ಕಾರಣ ಹೊರತು ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಅರಿಯದಷ್ಟು ಸ೦ವೇದನಾರಹಿತರೇನಲ್ಲ ನಮ್ಮ ರಾಜಕೀಯ ನಾಯಕರು.ಆದರೂ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಅಭೂತಪೂರ್ವ ಯಶಸ್ಸಿನ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲ ಪ್ರಮುಖ ಪಕ್ಷಗಳು ಹೆಣಗಾಡಿದವು.ವೈಜ್ನಾನಿಕ ಯಶಸ್ಸನ್ನೂ ಸಹ ರಾಜಕೀಯದಾಟಕ್ಕೆ ಬಳಸಿಕೊ೦ಡ ರಾಜಕೀಯ ನೇತಾರರ ಚರ್ಯೆ ದೇಶದ ನಾಗರಿಕರಲ್ಲಿ ಪ್ರಜಾ ಪ್ರತಿನಿಧಿಗಳೆಡೆಗೊ೦ದು ತಿರಸ್ಕಾರ ಮೂಡಿಸಿದ್ದು ಸುಳ್ಳಲ್ಲ.

ಮತ್ತಷ್ಟು ಓದು »

16
ಆಕ್ಟೋ

ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!

– ತುರುವೇಕೆರೆ ಪ್ರಸಾದ್

Jayalilthaತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.

ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.

ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.

ಮತ್ತಷ್ಟು ಓದು »

15
ಆಕ್ಟೋ

ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2

– ಮು.ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯ‘ನಿಲುಮೆ’ಯಲ್ಲಿ 13-8-14ರಂದು ಪ್ರಕಟವಾದ ಈ ಸರಣಿಯ ಮೊದಲ ಭಾಗದಲ್ಲಿ (ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1) ಹೇಳಿದಂತೆ ‘ಕನ್ನಡ ಪ್ರಭ’ದಲ್ಲಿ ಪ್ರಕಟವಾದ ನನ್ನ  ‘ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?’ ಎಂಬ ಲೇಖನಕ್ಕೆ  ಓದುಗರಿಂದ ಐದು ಪ್ರತಿಕ್ರಿಯೆಗಳು ಬಂದಿದ್ದವು. ಆ ಪ್ರತಿಕ್ರಿಯೆಗಳ ಮುಖ್ಯಾಂಶಗಳನ್ನು ಮೊದಲಿಗೆ ನೋಡೋಣ

(1) ಸಾಹಿತ್ಯವೆಂದರೆ ನಮ್ಮೊಳಗಿನ ಅನುರಣ – ಜಿ ಎಸ್ ನಾಗೇಶ್ ಗುಬ್ಬಿ  (29-4-12)
ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?  ಎಂದು ಪ್ರಶ್ನಿಸಿ, ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ತಾವೇ ನೀಡಿದ್ದು ವಿಚಿತ್ರವೆನಿಸಿತು.  ಜತೆಗೆ ದೈನಂದಿನ ಒತ್ತಡಗಳಿಂದಾಗಿ ಸಾಹಿತ್ಯ ಕಡೆಗಣಿಸಲ್ಪಡುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅವರು ದ್ವಂದ್ವದಲ್ಲಿದ್ದಾರೆಂಬುದು ಸ್ಪಷ್ಟ. ಅವರ ಅಭಿಪ್ರಾಯಕ್ಕೆ ನನ್ನ ಆಕ್ಷೇಪವಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಸಾಹಿತ್ಯವೆಂದರೆ ಪುಸ್ತಕದ ಓದು ಅಥವಾ ಕವಿ ಸಾಹಿತಿಗಳ ಜೀವನವನ್ನು ಅರಿಯುವುದೆಂದು ತಪ್ಪಾಗಿ ಭಾವಿಸಿದ್ದಾರೆ. ಕವಿಗಳು ಸಾಹಿತಿಗಳು ವ್ಯಕ್ತಿ ಶೋಧದಲ್ಲಿ ನಿರತರಾದವರಲ್ಲ. ಸಮಷ್ಟಿ ಶೋಧ ಅವರ ಮೂಲ ಉದ್ದೇಶ. ಕೇವಲ ದೊಡ್ಡ ದೊಡ್ಡ ಕವಿಗಳನ್ನು ಸಾಹಿತಿಗಳನ್ನು ಓದಿಕೊಂಡ ಮಾತ್ರಕ್ಕೆ ನನಗೆ ಸಾಹಿತ್ಯ ಗೊತ್ತು ಎಂದು ಪರಿಭಾವಿಸಿದರೆ ಅವರಿಗಿಂತ ಮೂರ್ಖರು ಮತ್ತೊಬ್ಬರಿರಲಾರರು. ‘ಹಾಗೆಂದು ಅವರನ್ನು ಓದಬಾರದೆಂದಲ್ಲ. ಆದರೆ ನಿಮ್ಮೊಳಗೆ ನಿಮ್ಮದೇ ಆದ ಚಿಂತನೆಗಳಿಲ್ಲದಿದ್ದರೆ ಅದು ದಕ್ಕಲಾರದು’. ನಮ್ಮ ದೈನಂದಿನ ಜೀವನವನ್ನು ನಾನಾ ಉದಾಹರಣೆಗಳನ್ನು ಕೊಟ್ಟು ಶ್ರೀರಂಗ ಅವರು ಟೀಕಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಹೋಂ ವರ್ಕ್ ಮುಗಿಸಿಕೊಳ್ಳುವ ಮಕ್ಕಳಿದ್ದಾರೆ. ಅಸೈನ್ ಮೆಂಟುಗಳನ್ನು ಅಚ್ಚುಕಟ್ಟಾಗಿ ರೆಡಿಮಾಡಿಕೊಳ್ಳುವ ಬಿ. ಎಡ್., ಡಿ.ಎಡ್.  ವಿಧ್ಯಾರ್ಥಿಗಳನ್ನು ಕಾಣಬಹುದು. ಭೈರಪ್ಪನವರ ಒಳಹೊಕ್ಕಂತೆ, ಅನಂತಮೂರ್ತಿಯವರನ್ನು ಆವಾಹಿಸಿಕೊಂಡಂತೆ ಚರ್ಚೆಗಿಳಿಯುವ ಸಾಹಿತ್ಯಾಭಿಮಾನಿಗಳಿದ್ದಾರೆ. ಇನ್ನು ಟಿ. ವಿ. ಧಾರಾವಾಹಿಗಳನ್ನು ನೋಡುತ್ತಾ ಸಾಂಸಾರಿಕ ಕಲಹಗಳಿಗೆ ಕಾರಣಗಳನ್ನು, ಪರಿಣಾಮಗಳನ್ನು ಅರಿಯುತ್ತಾ ತಮ್ಮ ಸಂಸಾರ ಹಾಗಾಗಬಾರದೆಂದು ಅಪೇಕ್ಷಿಸಿದ, ತಪ್ಪನ್ನು ತಿದ್ದಿಕೊಂಡ ಅನೇಕ ಕುಟುಂಬಗಳನ್ನು ಕಂಡಿದ್ದೇನೆ. ಚೆನ್ನಾಗಿ ನಿದ್ದೆ ಮಾಡಿ ಮೇಲೆದ್ದ ತಕ್ಷಣ ಸೊಗಸಾದ ಕವನ ರಚಿಸಿ ಬೆರಗುಗೊಳಿಸಿದವರಿದ್ದಾರೆ. ಭಾನುವಾರ ಶಾಪಿಂಗ್ ಮಾಲ್ ನಲ್ಲಿ ಅಡ್ಡಾಡುತ್ತಲೇ ಅಲ್ಲಿನ ‘ಸಾಲ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಸ್ಲೋಗನ್ ನೋಡಿ  ಸಾಲ ಮತ್ತು ಸ್ನೇಹದ ಬಗ್ಗೆ ಆಲೋಚನಾಪರರಾಗುವವರನ್ನು ಕಾಣುತ್ತೇವೆ. ಇವತ್ತಿನ ಶಾಪಿಂಗ್ ಮಾಲ್ ಗಳಂತೂ ಸಾಹಿತ್ಯ ಮತ್ತು ಸಂಸ್ಕೃತಿಯ ತವರೇ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಪ್ರಜ್ಞೆ ಇದ್ದರೆ ಸಾಕು. ಯಾವುದೇ ಸ್ಥಳದಲ್ಲಿದ್ದರೂ ಸಾಹಿತ್ಯಿಕ ಚಿಂತನೆಯನ್ನು ಅಂತರ್ಗತಗೊಳಿಸಿಕೊಳ್ಳಲು ಸಾಧ್ಯವಿದೆ. ಇಷ್ಟಕ್ಕೂ ಸಾಹಿತ್ಯದ ಅಧ್ಯಯನವೆಂದರೆ ಜನಜೀವನ, ಮಾನವನ ನಡುವಳಿಕೆಗಳ, ಸಮುದಾಯಗಳ ನಡುವಿನ ಸಂವೇದನೆಗಳನ್ನು ಕುರಿತದ್ದು. ಆದ್ದರಿಂದ ವಿಶೇಷವಾದ ಓದೇನೂ ಬೇಕಾಗಿಲ್ಲ. ಸಾಹಿತ್ಯವೆಂದರೆ ಕೇವಲ ಶಬ್ದಗಳ ಆಡಂಬರವಲ್ಲ.

ಮತ್ತಷ್ಟು ಓದು »