ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 10, 2015

9

ಬೆತ್ತಲೆ ಅಲೆಮಾರಿ ಇದ್ದಕ್ಕಿದ್ದಂತೆ ನಾಗರಿಕ ಮಾನವನಾದ! – ಭಾಗ ೨

‍ನಿಲುಮೆ ಮೂಲಕ

– ಪ್ರೇಮಶೇಖರ

ವಿಶ್ವದಲ್ಲಿ ಮಾನವ ಏಕಾಂಗಿಯಲ್ಲ : ಒಂದು ಜಿಜ್ಞಾಸೆ – ಭಾಗ ೧

ಅನ್ಯಗ್ರಹ ಜೀವಿಗಳುಯುಎಫ್‍ಓಗಳಲ್ಲಿನ ‘ಅನ್ಯಲೋಕ’ ಜೀವಿಗಳು ಮನುಷ್ಯರನ್ನು,ಹೆಚ್ಚಾಗಿ ಸ್ತ್ರೀಯರನ್ನು ಅಪಹರಿಸುವ ಲೆಕ್ಕವಿಲ್ಲದಷ್ಟು ಪ್ರಕರಣಗಳು ವರದಿಯಾಗಿವೆ.ಈ ಬಗ್ಗೆ ಕೂಲಂಕಶವಾಗಿ “ವೈಜ್ಞಾನಿಕ ತನಿಖೆ” ನಡೆಸಿರುವ ಸಂಶೋಧಕರ ಪ್ರಕಾರ ಕೆಲವು ಅಪವಾದಗಳ ಹೊರತಾಗಿ ಎಲ್ಲ ‘ಅಪಹರಣ’ಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜರುಗುತ್ತವೆ.

ಅನ್ಯಲೋಕ ಜೀವಿಗಳು ಮನುಷ್ಯ ಸ್ತ್ರೀಯರ ಮೇಲೆ ಜೈವಿಕ ಪ್ರಯೋಗಗಳನ್ನು ನಡೆಸುತ್ತಿರುವಂತಿದೆ.ನಿದ್ರಿಸುತ್ತಿರುವ ಸ್ತ್ರೀಯರನ್ನು ಹಾಸಿಗೆಯಿಂದಲೇ ಎತ್ತಿಕೊಂಡು ತಮ್ಮ ವಾಹನದಲ್ಲಿ ಕೊಂಡೊಯ್ದು ಅವರ ಗರ್ಭಾಶಯಗಳಿಂದ ಅಂಡಾಣುಗಳನ್ನು ತೆಗೆದುಕೊಳ್ಳುತ್ತಾರೆ.ಆ ಅಂಡಾಣುಗಳನ್ನು ಬೇರಾವುದೋ ವೀರ್ಯಾಣುಗಳಿಂದ ಫಲಿತಗೊಳಿಸಿ ಅದೇ ಸ್ತ್ರೀಯರನ್ನು ಮತ್ತೆ ಹೊತ್ತೊಯ್ದು ಫಲಿತ ಅಂಡಾಣುಗಳನ್ನು ಅವರ ಗರ್ಭಾಶಯಗಳಲ್ಲಿಟ್ಟು ಅವರಿಗರಿವಿಲ್ಲದಂತೆ ಬೆಳೆಸಿ, ಕೆಲವಾರಗಳ ನಂತರ ಅವರನ್ನು ಮತ್ತೆ ಎತ್ತಿಕೊಂಡು ಹೋಗಿ ಭ್ರೂಣಗಳನ್ನು ತೆಗೆದುಕೊಳ್ಳುತ್ತಾರೆ.ಒಂದೆರಡು ವರ್ಷಗಳ ನಂತರ ಅದೇ ಮಹಿಳೆಯರನ್ನು ಮತ್ತೆ ತಮ್ಮ ವಾಹನದಲ್ಲಿ ಬೇರೆಲ್ಲಿಗೋ ಕರೆದುಕೊಂಡು ಹೋಗಿ ದಪ್ಪತಲೆಯ ವಿಚಿತ್ರ ಮಕ್ಕಳನ್ನು ತೋಳಲ್ಲಿಟ್ಟು “ಇದು ನಿನ್ನ ಮಗು, ಇದನ್ನು ಮುದ್ದು ಮಾಡು.ವಾತ್ಸಲ್ಯದ,ಭಾವನಾತ್ಮಕ ಸಾಮೀಪ್ಯದ ಅಗತ್ಯ ಈ ಮಗುವಿಗಿದೆ” ಎಂದು ಹೇಳುತ್ತಾರೆ.ಆ ಜೀವಿಗಳು ಭೂಮಿಯ ಗಂಡಸರನ್ನೂ ಎತ್ತಿಕೊಂಡು ಹೋಗಿ ಬಲವಂತವಾಗಿ ವೀರ್ಯ ಸಂಗ್ರಹಣೆ ಮಾಡಿಕೊಳ್ಳುವ ಉದಾಹರಣೆಗಳೂ ಇವೆ.ಬಹುಷಃ ತಮ್ಮ ಸ್ತ್ರೀಜೀವಿಗಳ ಅಂಡಾಣು ಜತೆ ಮನುಷ್ಯ ಪುರುಷರ ವೀರ್ಯಾಣುವಿನ ಸಂಗಮವನ್ನವರು ಮಾಡುತ್ತಿರಬಹುದು.ತಮ್ಮ ಸ್ತ್ರೀಜೀವಿಗಳ ಜತೆ ಭೂಮಿಯ ಪುರುಷರ ಲೈಂಗಿಕ ಸಮಾಗಮಕ್ಕೆ ಅನ್ಯಲೋಕಜೀವಿಗಳು ಅವಕಾಶ ಮಾಡಿಕೊಟ್ಟ ಉದಾಹರಣೆಗಳೂ ಇವೆ.

ಅಪಹರಣಕ್ಕೊಳಗಾಗುವ ಸ್ತ್ರೀಯರ ಜತೆ ಇರುವವರಿಗೆ ಅಪಹರಣದ ಬಗ್ಗೆ ಏನೊಂದೂ ತಿಳಿಯದಂತೆ ಆ ಜೀವಿಗಳು ಎಚ್ಚರಿಕೆ ವಹಿಸುತ್ತವೆ.ಸ್ತ್ರೀಯನ್ನು ಬೆಡ್‍ರೂಮ್‍ನಿಂದ ಅಪಹರಿಸಿ ಮತ್ತೆ ತಂದು ಬಿಡುವವರೆಗೂ ಜತೆಯಲ್ಲಿ ಮಲಗಿರುವವರಿಗೆ ಅದರ ಸುಳಿವು ಸಿಗದ ಹಾಗೆ, ಅವರಿಗೆ ಗಾಢನಿದ್ರೆ ಬರುವ ಹಾಗೆ ಮಾಡುತ್ತಾರೆ.  ಅಂದರೆ ಅವರನ್ನು ಒಂದು ಅರ್ಥದಲ್ಲಿ ‘ಸ್ವಿಚ್ ಆಫ್’ ಮಾಡಿಬಿಡುತ್ತಾರೆ.ಎಲ್ಲೋ ಬಹಳ ಅಪರೂಪಕ್ಕೆ ಸ್ವಿಚ್ ಆಫ್ ಕ್ರಿಯೆ ಸರಿಯಾಗಿ ಆಗಿರುವುದಿಲ್ಲ.ಅಂಥವರಿಗೆ ಜತೆಯಲ್ಲಿ ಮಲಗಿದ್ದವರು ಸ್ವಲ್ಪಹೊತ್ತು ‘ಕಾಣೆ’ಯಾಗಿದ್ದುದು ಗೋಜಲುಗೋಜಲು ಪ್ರಶ್ನೆಯಾಗಿ ಕಾಡುತ್ತದೆ.

ಪ್ರತೀಸಲ ಹೊತ್ತೊಯ್ದಾಗಲೂ ವಿವರಗಳೆಲ್ಲವನ್ನೂ ಆ ಸ್ತ್ರೀಪುರುಷರ ಜಾಗೃತ ಮನಸ್ಸಿನಿಂದ ಅಳಿಸಿಬಿಡುತ್ತಾರೆ.“ನಿನಗೆ ಇದ್ಯಾವುದೂ ನೆನಪಿರುವುದಿಲ್ಲ” ಎಂದೂ ಹೇಳುತ್ತಾರೆ!  ಹೀಗಾಗಿ ನೂರಕ್ಕೆ ತೊಂಬತ್ತೊಂಬತ್ತರಷ್ಟು ಜನರಿಗೆ ತಮಗಾದದ್ದೇನು ಎಂದು ನೆನಪಿರುವುದಿಲ್ಲ.ಕೆಲವರಿಗೆ ಅರೆಬರೆ ಗೋಜಲುಗೋಜಲು ಕನಸಿನ ಹಾಗೆನಿಸುತ್ತಿರುತ್ತದೆ.ಆದರೆ ಇಡೀ ಪ್ರಕರಣ ಅವರೆಲ್ಲರ ಸುಪ್ತಮನಸ್ಸಿನಲ್ಲಿ ಇಡಿಯಾಗಿ ದಾಖಲಾಗಿರುತ್ತದೆ.ಸಂಮೋಹಿನಿಯ ಮೂಲಕ ಮನೋವೈದ್ಯರು ಎಲ್ಲ ವಿವರಗಳನ್ನೂ ಹೊರತೆಗೆಯಬಹುದು.ಇದುವರೆಗೆ ಅಪಹರಣ ಹಾಗೂ ಪ್ರಯೋಗಗಳ ಬಗ್ಗೆ ನಮಗೆ ದಕ್ಕಿರುವ ಬಹುತೇಕ ವಿವರಗಳೆಲ್ಲವೂ ಸಂಮೋಹಿನಿಯಿಂದಲೇ.ಅವುಗಳನ್ನು ನಡೆಸಿ ದಾಖಲಿಸಿರುವವರು ವಿಶ್ವಾಸಾರ್ಹ ವೈದ್ಯಕೀಯ ವಿಜ್ಞಾನಿಗಳು.

ತಮ್ಮೆಲ್ಲಾ ಚಟುವಟಿಕೆಗಳನ್ನು ಗುಟ್ಟಾಗಿಡಲು ಅನ್ಯಲೋಕಜೀವಿಗಳು ವಹಿಸುವ ಕಟ್ಟೆಚ್ಚರದ ಹೊರತಾಗಿಯೂ, ಅಪಹರಣಕ್ಕೊಳಗಾದ ಮನುಷ್ಯರ ದೇಹಗಳಲ್ಲಿ ಕೆಲವೊಂದು ಕುರುಹುಗಳು ಉಳಿದೇ ಇರುತ್ತವೆ.ಹೊಟ್ಟೆತೊಳೆಸುವುದು, ಊಟ ಸೇರದಿರುವುದು, ನಿದ್ರಾಹೀನತೆಯಂತಹ ಸಣ್ಣಪುಟ್ಟ ತೊಂದರೆಗಳು ಅವರನ್ನು ಕಾಡುತ್ತವೆ.  ಏನೋ ಆಗಿದೆ, ನಾಳೆ ಸರಿಯಾಗಬಹುದೆಂದು ಬಹುತೇಕರು ನಿರ್ಲಕ್ಷ ಮಾಡುವುದು ಸಾಮಾನ್ಯವಾದರೂ ಇಂಥವರನ್ನು ವೈದ್ಯಕೀಯವಾಗಿ ತಪಾಸಣೆ ನಡೆಸಿದ ವಿಜ್ಞಾನಿಗಳು ಅಚ್ಚರಿಯ ವಿಷಯವೊಂದನ್ನು ಪತ್ತೆಹಚ್ಚಿದ್ದಾರೆ.ಅನ್ಯಲೋಕ ಜೀವಿಗಳ ವಾಹನ ಅಥವಾ ಉಪಕರಣಗಳಲ್ಲಿ ಅಣುಶಕ್ತಿ ಉಪಯೋಗವಾಗುತ್ತಿರಬಹುದು.ಹೀಗಾಗಿ ಅಪಹರಣಕ್ಕೊಳಗಾದವರು ಕ್ಷೀಣ ಅಣುವಿಕಿರಣಕ್ಕೆ ಒಳಗಾಗುವುದು ಕಂಡುಬಂದಿದೆ.ಅವರ ಅನಾರೋಗ್ಯದ ಕುರುಹುಗಳು ಅಣುವಿಕಿರಣದ ಪರಿಣಾಮ.

ಈ ‘ಸಣ್ಣಪುಟ್ಟ’ ಅನಾರೋಗ್ಯವಲ್ಲದೇ, ಅಪಹರಣಕ್ಕೊಳಗಾದ ಹೆಚ್ಚಿನ ಮನುಷ್ಯರ ಶರೀರದಲ್ಲಿ ಕೆಲವು ಗುರುತುಗಳು ಅಂದರೆ ಚರ್ಮ ಅಲ್ಲಲ್ಲಿ ತುಸು ಸುಟ್ಟಂತಿರುವುದು, ವಕ್ರವಕ್ರವಾಗಿ ಎಳೆದಂತಹ ಸೂಕ್ಷ್ಮ ಗೆರೆಗಳಿರುವುದು ಕಂಡುಬಂದಿದೆ.  ಅಪಹರಣದ ನೆನಪೇ ಇಲ್ಲದ ಮನುಷ್ಯರು ಸಹಜವಾಗಿಯೇ ಈ ಸೂಕ್ಷ್ಮ ಗಾಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.  ಏನೋ ಅಲರ್ಜಿ ಆಗಿದೆ, ಎಲ್ಲೋ ಏನೋ ತಾಗಿ ಗಾಯವಾಗಿದೆ ಎಂದುಕೊಂಡು ನಿರ್ಲಕ್ಷ ಮಾಡುವುದೇ ಹೆಚ್ಚು.  ಆದರೆ ಸಂಶೋಧಕರು ಮತ್ತೊಂದು ಅಚ್ಚರಿಯ ವಿಷಯವನ್ನು ಪತ್ತೆಹಚ್ಚಿದ್ದಾರೆ.ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ಮನುಷ್ಯರ ಶರೀದದಲ್ಲಿ,ಮುಖ್ಯವಾಗಿ ಹಣೆಯ ಮೇಲ್ಭಾಗದಲ್ಲಿ ಹಾಗೂ ಕಾಲುಗಳ ಹೆಬ್ಬೆರಳುಗಳಲ್ಲಿ,ಆ ಜೀವಿಗಳು ಅತಿಸೂಕ್ಷ್ಮ ಚಿಪ್‍ಗಳನ್ನು ಸೇರಿಸಿರುವುದು ಕಂಡುಬಂದಿದೆ.ನಮ್ಮಲ್ಲಿ ಹುಲಿ ಮುಂತಾದ ಪ್ರಾಣಿಗಳ ಬಗ್ಗೆ ಸಂಶೋಧನೆ ನಡೆಸುವ ವಿಜ್ಞಾನಿಗಳು ಆ ಪ್ರಾಣಿಗಳ ಶರೀರದಲ್ಲಿ ಸೇರಿಸುವಂತಹ ಟ್ರ್ಯಾಕರ್‍ಗಳು ಅವು.ಪ್ರಯೋಗಕ್ಕೊಳಗಾಗುತ್ತಿರುವ ಮನುಷ್ಯರು ಒಂದೆಡೆಯಿಂದ ಮತ್ತೊಂದೆಡೆಗೆ ಹೋದರೆ ಅದನ್ನು ತಿಳಿಯಲು ಆ ಜೀವಿಗಳು ಉಪಯೋಗಿಸುವ ತಂತ್ರ ಅದಿರಬಹುದು.

ಆ ಜೀವಿಗಳು ಇದೆಲ್ಲವನ್ನೂ ಮಾಡುತ್ತಿರುವುದು ತಮ್ಮ ಹಾಗೂ ಮನುಷ್ಯರ ಜೀನ್ಸ್‍ಗಳನ್ನು ಉಪಯೋಗಿಸಿ ಹೊಸ ಮನುಷ್ಯಸಂತತಿಯನ್ನು ಸೃಷ್ಟಿಸುವ ಉದ್ದೇಶ ದಿಂದಿರಬಹುದು.ಈ ಮಾತಿಗೆ ಪೂರಕವಾಗಿ, ಇದುವರೆಗಿನ ಮಾನವನ ವಿಕಾಸದಲ್ಲಿ ಅನ್ಯಲೋಕ ಜೀವಿಗಳ ಪಾತ್ರವಿದೆಯೆಂದು ವಿದ್ವಾಂಸರು ವಾದಿಸಿರುವುದರ ಕಿರುಪರಿಚಯ ಮಾಡಿಕೊಳ್ಳೋಣ.

ಸುಮಾರು ಹದಿನೆಂಟು ದಶಲಕ್ಷ ವರ್ಷಗಳಷ್ಟು ಹಿಂದೆಯೇ ಅನ್ಯಲೋಕದ ಜೀವಿಗಳು ಭೂಮಿಗೆ ಬಂದು ಮನುಷ್ಯನ ವಿಕಾಸಕ್ಕೆ ತಮ್ಮನ್ನ ಮುಡಿಪಾಗಿಸಿರಿಕೊಂಡರು ಎಂದು ಜಾರ್ಜ್ ಹಂಟ್ ವಿಲಿಯಂಸನ್ ಎಂಬ ವಿದ್ವಾಂಸರು 1958ನೇ ಇಸವಿಯಲ್ಲಿ ಪ್ರಕಟಿಸಿದ “ಸೀಕ್ರೆಟ್ ಪ್ಲೇಸಸ್ ಆಫ್ ದ ಲಯನ್” ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ.  ಲೂಯಿಸ್ ಪಾವೆಲ್ಸ್ ಮತ್ತು ಜಾಕ್ಸ್ ಬರ್ಜಿಯರ್ ತಮ್ಮ “ಮಾರ್ನಿಂಗ್ ಆಫ್ ದ ಮ್ಯಾಜೀಷಿಯನ್ಸ್” ಕೃತಿಯಲ್ಲಿ ಈ ವಿಷಯವನ್ನು ಮತ್ತೂ ವಿವರವಾಗಿ ಪ್ರತಿಪಾದಿಸುತ್ತಾರೆ.ಈ ವಾದವನ್ನು ದೊಡ್ಡದಾಗಿ ಮಂಡಿಸಿದ್ದು ಎರಿಕ್ ವಾನ್ ಡ್ಯಾನಿಕೆನ್ ಎನ್ನುವ ಸ್ವಿಸ್ ವಿದ್ವಾಂಸ, ತನ್ನ “ಚಾರಿಯಟ್ಸ್ ಆಫ್ ದ ಗಾಡ್ಸ್?” ಕೃತಿಯಲ್ಲಿ.ಡ್ಯಾನಿಕೆನ್ ಅನೇಕ ಅಮೂಲ್ಯ ವಿವರಗಳನ್ನು ಕಲೆಹಾಕಿ ವಿಶ್ಲೇಷಿಸಿದ್ದರೂ ಅವರ ಅತ್ಯುತ್ಸಾಹವೇ ಈ ಬಗೆಯ ಚಿಂತನೆಗಳು ಅವಿಶ್ವಾಸಾರ್ಹವೆನಿಸಲು,ನಿರಾಕರಣೆಗೊಳ್ಳಲು ಕಾರಣವಾದವು.ಡ್ಯಾನಿಕೆನ್ ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಹೊರಟದ್ದೇ ಇದಕ್ಕೆ ಕಾರಣ.  ಅಷ್ಟೇ ಅಲ್ಲ, “ಗೋಲ್ಡ್ ಆಫ್ ದ ಗಾಡ್ಸ್” ಕೃತಿಯಲ್ಲಿ ಉದ್ದೇಶಪೂರ್ವಕವಾಗಿ ಕಲ್ಪನೆಗಳನ್ನು ಸತ್ಯವೆಂಬಂತೆ ಅವರು ಪ್ರತಿಪಾದಿಸಹೊರಟರು.  ಆದರೆ ಆನಂತರದ ಗ್ರಹಾಂ ಹ್ಯಾನ್‍ಕಾಕ್, ಝಕಾರಿಯಾ ಸಿಟ್ಚಿನ್, ಜ್ಯಾಕ್ಸ್ ವ್ಯಾಲಿ ಮುಂತಾದ ವಿದ್ವಾಂಸರು ತಮ್ಮ ವಾದಸರಣಿಗಳನ್ನು ಎಲ್ಲರೂ ಪರಿಶೀಲಿಸಬಹುದಾದ ಲಿಖಿತ, ಪ್ರಾಕ್ತನ ಹಾಗೂ ಇನ್ನಿತರ ಆಕರಗಳ ಆಧಾರಗಳ ಭದ್ರ ಬುನಾದಿಯ ಮೇಲೆ ನಿರ್ಮಿಸುತ್ತಿರುವುದರಿಂದ ಭೂಮ್ಯಾತೀತ ಬುದ್ಧಿವಂತಿಕೆ ಮತ್ತು ಮಾನವವಿಕಾಸದ ಬಗೆಗಿನ ಚಿಂತನೆಗಳು ಮತ್ತೊಮ್ಮೆ ವಿಶ್ವಾಸಾರ್ಹತೆ ಗಳಿಸಿಕೊಳ್ಳತೊಡಗಿದವು.

ಇವರೆಲ್ಲವ ವಾದಗಳನ್ನು ಹೀಗೆ ಸಂಗ್ರಹಿಸಬಹುದು:

ಡಾರ್ವಿನ್‍ನ ವಿಕಾಸವಾದದ ಪ್ರಕಾರ ಕಲ್ಲಿನಿಂದ ಆಯುಧಗಳನ್ನು ತಯಾರಿಸುವ ಸಾಮರ್ಥ್ಯವಿದ್ದ ಹೋಮೋ ಹ್ಯಾಬಿಲಿಸ್ ಮಾನವನ ಉಗಮ ಇಪ್ಪತ್ತಮೂರು ಲಕ್ಷ ವರ್ಷಗಳ ಹಿಂದೆ ಘಟಿಸಿತು. ಹದಿನೆಂಟು ಲಕ್ಷ ವರ್ಷಗಳ ಹಿಂದೆ ನೆಟ್ಟಗೆ ನಿಲ್ಲಬಲ್ಲ ಹೋಮೋ ಎರೆಕ್ಟಸ್ ಮಾನವ ಕಾಣಿಸಿಕೊಂಡ.ಎರಡು ಲಕ್ಷ ವರ್ಷಗಳ ಹಿಂದೆ ಹೋಮೋ ಸೇಪಿಯನ್ ನಿಯಾಂಡರ್‍ಥಾಲೆನ್ಸಿಸ್ ಅಥವಾ ನಿಯಾಂಡರ್‍ಥಾಲ್ ಮನುಷ್ಯನ ಉಗಮವಾಯಿತು.ಈ ಮಾನವ ಪ್ರಭೇದ ಅಸ್ತಿತ್ವದಲ್ಲಿದ್ದದ್ದು ಇಂದಿಗೆ ಸುಮಾರು ಮೂವತ್ತು-ಮೂವತ್ತೈದು ಸಾವಿರ ವರ್ಷಗಳ ಹಿಂದಿನವರೆಗೆ.ಗಮನಿಸಬೇಕಾದ ಅಂಶವೆಂದರೆ ಹೋಮೋ ಹ್ಯಾಬಿಲಿಸ್ ಮನುಷ್ಯನ ಆಯುಧಗಳಿಗೂ ನಿಯಾಂಡರ್‍ಥಾಲ್ ಮನುಷ್ಯನ ಆಯುಧಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.  ಇದರರ್ಥ, ಹೋಮೋ ಹ್ಯಾಬಿಲಿಸ್‍ನಿಂದ ನಿಯಾಂಡರ್‍ಥಾಲ್‍ವರೆಗೆಗಿನ ಇಪ್ಪತ್ತೆರಡು ಲಕ್ಷ ವರ್ಷಗಳಿಗೂ ಹೆಚ್ಚಿನ ಆವಧಿಯಲ್ಲಿ ಮಾನವನ ಬುದ್ಧಿಶಕ್ತಿಯ ಬೆಳವಣಿಗೆ ಅತಿ ನಿಧಾನವಾಗಿ ಸಾಗಿಬಂದಿತು.  ಆದರೆ ಮೂವತ್ತೈದುಸಾವಿರ ವರ್ಷಗಳ ಹಿಂದೆ ಹೋಮೋ ಸೇಪಿಯನ್ ಸೇಪಿಯನ್ (ಬುದ್ಧಿವಂತ ಬುದ್ಧಿವಂತ ಮನುಷ್ಯ!) ಅಥವಾ ಆಧುನಿಕ ಮಾನವ ಉಗಮವಾದದ್ದೇ ವಿಕಾಸಪಥದಲ್ಲಿ ನಾಗಾಲೋಟ ಕಾಣಿಸಿಕೊಂಡಿತು.

ಅಧುನಿಕ ಮಾನವ ತನ್ನೆಲ್ಲಾ ಪೂರ್ವಜರಿಂದ ಸಂಪೂರ್ಣ ಬೇರೆಯಾಗಿದ್ದ, ವ್ಯವಸ್ಥಿತ ಸಾಮಾಜಿಕ ಬದುಕನ್ನಾರಂಭಿಸಿದ ಆತ ಹಿಂದಿನವರಂತೆ ಬೆತ್ತಲೆ ನರವಾನರನಾಗಿರಲಿಲ್ಲ.ಆತನ ಆಯುಧ ಮತ್ತು ಉಪಕರಣಗಳನ್ನು ತಯಾರಿಸುವ ಕಲೆ ಅಚ್ಚರಿಯೆನ್ನುವ ಮಟ್ಟಿಗೆ ಕುಶಲತೆ ಉಳ್ಳದ್ದಾಗಿತ್ತು.ಎಲ್ಲಕ್ಕಿಂತ ಮುಖ್ಯವಾಗಿ ಈ ಮನುಷ್ಯ ಮಾತಾಡಬಲ್ಲವನಾಗಿದ್ದ! ಡಾರ್ವಿನ್‍ನ ವಿಕಾಸವಾದದ ಪ್ರಕಾರ ಮನುಷ್ಯ ಈ ಮಟ್ಟಕ್ಕೆ ವಿಕಾಸ ಹೊಂದಲು ಇನ್ನೂ ಲಕ್ಷಾಂತರ ವರ್ಷಗಳಾಗಬೇಕಿತ್ತು.  ಅಂದರೆ ಈ ಇಪ್ಪತ್ತೊಂದನೇ ಶತಮಾನದ ನಾವು ಇನ್ನೂ ಕಲ್ಲಿನ ಆಯುಧಗಳನ್ನು ಹಿಡಿದು ಬೆತ್ತಲೆಯಾಗಿ ಅಲೆಯುತ್ತಿರಬೇಕಿತ್ತು! ಇದೆಲ್ಲದರ ಅರ್ಥ ಮೂವತ್ತೈದು ಸಾವಿರ ವರ್ಷಗಳ ಹಿಂದೆ ವಿಕಾಸಪಥದಲ್ಲೇನೋ ಅಸಾಮಾನ್ಯವಾದುದು ಘಟಿಸಿದೆ!

ಇದಕ್ಕೆ ಕಾರಣವಾದದ್ದು ಅನ್ಯಲೋಕ ಜೀವಿಗಳಿರಬಹುದು ಎಂಬುದು ಮೇಲೆ ಉಲ್ಲೇಖಿಸಲ್ಪಟ್ಟಿರುವ ವಿದ್ವಾಂಸರ ಅಭಿಮತ.“ದೇವರುಗಳ ಪುತ್ರರು ಮನುಷ್ಯನ ಪುತ್ರಿಯರನ್ನು ಪತ್ನಿಯರನ್ನಾಗಿ ತೆಗೆದುಕೊಂಡರು…” ಎಂಬ ಮಾತು ಬೈಬಲ್‍ನ ಆದಿಕಾಂಡದ ಆರನೆಯ ಅಧ್ಯಾಯದಲ್ಲಿದೆ.ಈ ಮಾತುಗಳು ಅನ್ಯಲೋಕದ ಬುದ್ಧಿವಂತ ಜೀವಿಗಳು ಭೂಮಿಯಲ್ಲಿದ್ದ ನಿಯಾಂಡರ್‍ಥಾಲ್ ಸ್ತ್ರೀಯರ ಜತೆ ಜೈವಿಕ ಪ್ರಯೋಗ ನಡೆಸಿ ಆಧುನಿಕ ಮಾನವನ ಉಗಮಕ್ಕೆ ಕಾರಣರಾಗಿರಬಹುದು ಎನ್ನುವುದನ್ನು ಸೂಚಿಸುತ್ತಿರಬಹುದೆಂದು ಅವರ ವಿವರಣೆ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ.ಮಾನವ ನಾಗರಿಕತೆಯ ತೊಟ್ಟಿಲೆಂದು ಕರೆಯಲಾಗುವ ಮೆಸಪಟೋಮಿಯಾ(ಇಂದಿನ ಇರಾಕ್ ಮತ್ತು ಸಿರಿಯಾ) ಮತ್ತು ಲೆವಾಂಟ್ (ಪಶ್ಮಿಮ ಏಶಿಯಾದ ಮೆಡಿಟರೇನಿಯನ್ ತೀರಪ್ರದೇಶಗಳು) ಮತ್ತಷ್ಟು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ.  ಈಶಾನ್ಯ ಇರಾಕ್‍ನ “ಶನಿದರ್” ಎಂಬಲ್ಲಿನ ಗುಹೆಯೊಂದು ಮನುಷ್ಯವಿಕಾಸದ ಜೀವಂತ ವಸ್ತುಸಂಗ್ರಹಾಲಯವೆಂದೇ ಕರೆಸಿಕೊಳ್ಳುತ್ತದೆ.  ಇಲ್ಲಿ ದೊರೆತಿರುವ ಕುರುಹುಗಳ ಪ್ರಕಾರ ಮೂವತ್ತೈದುಸಾವಿರ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಉಗಮವಾದ ಆಧುನಿಕ ಮಾನವನ ನಾಗರಿಕ ಬದುಕು ಕ್ರಮೇಣ ಇಳಿಮುಖವಾಗುತ್ತಾ ಸಾಗಿ ಮುಂದಿನ ಇಪ್ಪತ್ತು ಸಾವಿರ ವರ್ಷಗಳಲ್ಲಿ ಸಂಪೂರ್ಣ ಅವನತಿ ಕಂಡಿತು.ಆದರೆ, ಹನ್ನೊಂದು ಸಾವಿರ ವರ್ಷಗಳ ಹಿಂದೆ ಇಲ್ಲಿ ಮತ್ತೆ ಸಂಪೂರ್ಣ ನಾಗರಿಕ ಮನುಷ್ಯ ಕಾಣಿಸಿಕೊಂಡ!  ಅವನೆಷ್ಟು ನಾಗರಿಕನಾಗಿದ್ದನೆಂದರೆ ಆತ ವ್ಯವಸಾಯ ಕಲಿತಿದ್ದ, ನಾಯಿ ಸಾಕಿದ್ದ, ಮನೆ ಕಟ್ಟಿಕೊಂಡು ಬದುಕತೊಡಗಿದ್ದ!  ಇದೇ ಸಮಯದಲ್ಲಿ ಸಿಂಧೂ ಕಣಿವೆಯಲ್ಲಿ ಇದ್ದಕ್ಕಿದ್ದಂತೆ ನವನವೀನ ನಾಗರಿಕತೆಯೊಂದು ಕಾಣಿಸಿಕೊಂಡಿತು.ಒಂಬತ್ತು ಸಾವಿರ ವರ್ಷಗಳ ಹಿಂದೆ ಅಲ್ಲಿ ವಿಶಾಲ, ವ್ಯವಸ್ಥಿತ ನಗರವೊಂದು ಅಸ್ತಿತ್ವದಲ್ಲಿದ್ದ ಕುರುಹುಗಳು ಗುಜರಾತ್‍ನ ತೀರದಿಂದ ಅನತೀದೂರದಲ್ಲಿ ಕ್ಯಾಂಬೆ ಕೊಲ್ಲಿಯ ನೀರಿನಾಳದಲ್ಲಿ 2001ರಲ್ಲಿ ಪತ್ತೆಯಾಗಿವೆ.ಪಶ್ಚಿಮ ಏಶಿಯಾ ಮತ್ತು ಸಿಂಧೂ ಕಣಿವೆಯ ನಾಗರಿಕತೆಗಳು ಬೇರೆಲ್ಲಿಂದಲೋ ಎತ್ತಿತಂದು ಇಲ್ಲಿ ನಾಟಿ ಹಾಕಿದಂತೆ ತೋರುತ್ತವೆ.  ಇದನ್ನು ಮಾಡಿದವರಾರು?

ಮೂವತ್ತೈದು ಸಾವಿರ ವರ್ಷಗಳ ಹಿಂದೆ ತಾವು ‘ಸೃಷ್ಟಿಸಿದ’ ಆಧುನಿಕ ಮಾನವ ತಮ್ಮ ಉದ್ದೇಶಕ್ಕೆ ‘ಹೊಂದಿಕೆಯಾಗದ’ ದಾರಿಯಲ್ಲಿ ಸಾಗತೊಡಗಿದಾಗ ಅನ್ಯಲೋಕ ಜೀವಿಗಳು ಮತ್ತೊಮ್ಮೆ ವಿಕಾಸಪಥದಲ್ಲಿ ‘ಮಧ್ಯಪ್ರವೇಶ’ ಮಾಡಿ ಮನುಷ್ಯನಲ್ಲಿ ಅಗತ್ಯ ಬದಲಾವಣೆ ಮಾಡಿದರೆ?  ಇಂದು ಅವರ ಉದ್ದೇಶ ಮತ್ತೊಮ್ಮೆ ಸೋಲುತ್ತಿದೆಯೇ?  ನಾವು ಹೋಮೋ ಸೇಪಿಯನ್ ಸೇಪಿಯನ್‍ರಿಗಿಂತ ಬೇರೆಯಾದ ಮನುಷ್ಯಜೀವಿಗಳ ಸೃಷ್ಟಿಯಲ್ಲಿ ಅವರೀಗ ತೊಡಗಿರಬಹುದೇ?  ಅವರು ಮನುಷ್ಯರನ್ನು, ಮುಖ್ಯವಾಗಿ ಸ್ತ್ರೀಯರನ್ನು ಅಪಹರಿಸುವ ಬಗ್ಗೆ ಲೇಖನದ ಪ್ರಾರಂಭದಲಿ ನೀಡಿರುವ ವಿವರಗಳು ಮಾನವ ವಿಕಾಸದ ಬಗೆಗಿನ ಅವರ ಜೈವಿಕ ಪ್ರಯೋಗಗಳು ಈಗಲೂ ಮುಂದುವರಿಯುತ್ತಿರಬಹುದೆಂಬ ಸೂಚನೆ ನೀಡುತ್ತವೆಯೇ?  ಹಾಗಿದ್ದರೆ ಅವರ ಉದ್ದೇಶವೇನಿರಬಹುದು?  ಅವರು ಬಂದದ್ದೆಲ್ಲಿಂದ?  ನಮ್ಮ ಬಗ್ಗೆ ಅವರ ಆಸಕ್ತಿ ಏಕೆ?

ಈ ಪ್ರಶ್ನೆಗಳನ್ನು ಮುಂದಿನವಾರ ಚರ್ಚೆಗೆತ್ತಿಕೊಳ್ಳುತ್ತೇನೆ.

ಕೃಪೆ : ವಿಜಯವಾಣಿ ದೈನಿಕ

9 ಟಿಪ್ಪಣಿಗಳು Post a comment
  1. hemapathy
    ಏಪ್ರಿಲ್ 10 2015

    ಇವನ್ನೆಲ್ಲಾ ನಂಬುವಂತಹ ವೈಜ್ಞಾನಿಕ ಆಧಾರಗಳು ಎಲ್ಲರಿಗೂ ದೊರೆಯದಿರುವುದರಿಂದಾಗಿ ನಂಬಲಸಾಧ್ಯ. ಇವೆಲ್ಲಾ ಅಂತ ಕಂತೆ ಪುರಾಣಗಳಾಗಿಯೇ ಉಳಿಯುತ್ತವೆ. ಇವೆಲ್ಲಾ ಓದಲು ಮಾತ್ರ ಚೆನ್ನಾಗಿದೆ. ಮಾನವ ತನ್ನ ಊಹಾ ಶಕ್ತಿಯನ್ನು ಉಪಯೋಗಿಸಿಕೊಂಡು ನೂರಾರು ದಂತಕಥೆಗಳನ್ನು ಬರೆಯುತ್ತಲೇ ಬಂದಿದ್ದಾನೆ. ಅವುಗಳಿಗೆ ಉದಾಹರಣೆಯೆಂದರೆ – ಭಗವದ್ಗೀತೆ, ರಾಮಾಯಣ, ಮಹಾಭಾರತ, ಅಲ್ಲಾವುದ್ದೀನ್ ಅದ್ಭುತ ದೀಪ ಮುಂತಾದವುಗಳು. ಇವುಗಳನ್ನು ಓದಿ ಮರೆತುಬಿಡಬೇಕು.

    ಉತ್ತರ
    • sudarshana rao
      ಏಪ್ರಿಲ್ 10 2015

      ಊಹಾಶಕ್ತಿಯನ್ನ ಬಳಸಿ, ಕುಟಿಲ ಉದ್ದೇಶವನ್ನೂ ಒಳಗೊಂಡು, ಎರಡನೆಯ ಮಹಾಯುದ್ಧಕ್ಕೆ ಮೂಲಕಾರಣವನ್ನೂ ಒದಗಿಸಿದ ಹಸೀ ಸುಳ್ಳು ಎಂದಾದ, ಆರ್ಯ ದ್ರಾವಿಡ ಭೇದ, ಮ್ಯಾಕ್ಸ್ ಮುಲ್ಲ್ರರ್ ಬರೆದ, ಮೆಕಾಲೆ ಎಲ್ಲರಿಗೂ ಹಂಚಿದ ಇತಿಹಾಸವನ್ನು ಮರೆಯಲು ಬಹಳ ಕಷ್ಟವಾಗುವುದು ಅನಿವಾರ್ಯ.
      ನಮ್ಮದೇ ನೆಲದ ಐತಿಹಾಸಿಕ ಕಥೆಗಳು ಕಹಿ, ಅನ್ಯರ ಮಿಥ್ಯೇತಿಹಾಸಗಳು ಸಿಹಿ. ಕಾರಣ ಪಟ್ಟಭದ್ರ ಬುದ್ಧಿಜೀವಿಗಳ ಬೇಳೆ ಅದರಿಂದಲೇ ಬೇಯಬೇಕು.

      ಉತ್ತರ
    • sudarshana rao
      ಏಪ್ರಿಲ್ 10 2015

      What you call scientific is the method ‘The West’ has adapted. What doesn’t fit their view point is wrong and false. What doesn’t go with their life style is inferior,what doesn’t agree with their view is false.
      All the so called siculars get carried away with it.

      ಉತ್ತರ
      • Nagshetty Shetkar
        ಏಪ್ರಿಲ್ 10 2015

        you are simply bullshitting. scientific method is independent of culture. it honors only truth.

        ಉತ್ತರ
  2. BNS
    ಏಪ್ರಿಲ್ 11 2015

    ಪ್ರೇಮಶೇಖರ ಅವರು ಮತ್ತೊಮ್ಮೆ ವಿವಾದಿತ ವಿಷಯವೊಂದರ ಬಗ್ಗೆ ಬರೆಯ ಹೊರಟಿದ್ದಾರೆ ಎಂದುಕೊಂಡೆ. ಓದಿದ ನಂತರ ನಿರಾಳವಾಯಿತು, ಸದ್ಯ! ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅನ್ಯಲೋಕದಲ್ಲಿ ಇರಬಹುದಾದ ಜೀವ/ ಜೀವಿಗಳ ಬಗ್ಗೆ ಇಂದು ನಮಗೆ ಇರುವ ಜ್ಞಾನ, ಕಲ್ಪನೆಗಿಂತ ಬಹಳ ಕಡಿಮೆ. ಹೀಗಾಗಿ ಇರುಳ ಕತ್ತಲೆಯಲ್ಲಿ ಕಂಡ ಹಗ್ಗವನ್ನು ಹಾವೆಂದು ಭ್ರಮಿಸುವ, ಮತ್ತು ಆ ಹಾವಿಗೆ ಹೆದರುವ ರೀತಿಯಲ್ಲಿ ನಮ್ಮ ವರ್ತನೆ ಇದೆ.

    ಅನ್ಯಲೋಕದ ಜೀವಿಗಳು ನಮ್ಮ ಜೀವನವನ್ನು ‘ಕಂಟ್ರೋಲ್’ ಮಾಡುತ್ತಿರಬಹುದು ಎನ್ನುವ ಶಂಕೆಗೆ ಮುಖ್ಯಕಾರಣ, ಅವರು ನಮಗಿಂತ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರಿದಿರಬಹುದು ಎನ್ನುವ ಹೆದರಿಕೆ. ಅವರ ವಿಜ್ಞಾನ, ತಂತ್ರಜ್ಞಾನ ನಮಗಿಂತ ‘ಭಿನ್ನ’ವಾಗಿರುವ ಸಾಧ್ಯತೆ ಕೂಡಾ ಇದೆ. ಆದರೆ ‘ಭೀತಿವಾದಿ’ಗಳು ಇದನ್ನು ಸುಲಭಕ್ಕೆ ಒಪ್ಪಲಾರರು. ದಕ್ಷಿಣ ಆಫ್ರಿಕಾವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ನಿರ್ಮಿತವಾದ ‘ಡಿಸ್ಟ್ರಿಕ್ಟ್ ೯ (District 9)’ ಎಂಬ ಚಲನಚಿತ್ರ ಇಂತಹ ಅನ್ಯಲೋಕಜೀವಿಗಳು ನಮ್ಮಭೂಮಿಗೆ ಬಂದ ಕತೆಯನ್ನು ಹೇಳುತ್ತದೆ. ಅವರನ್ನು ನಮ್ಮಷ್ಟೇ ಬಲಹೀನರಾಗಿ, ಆದರೆ ‘ಭಿನ್ನವಾಗಿ’ ತೋರಿಸುವ ಚಿತ್ರ ಅದು. ಸಹ ಓದುಗರು ಅವಕಾಶ ಸಿಕ್ಕರೆ ನೋಡಿ.

    ಮನುಷ್ಯನ ವಿಕಾಸದಲ್ಲಿ ಹಲವು ಹಂತಗಳ ‘ಜ್ಞಾನಸ್ಫೋಟ’ ನಡೆದಿದೆ, ಹಾಗೂ ಇಂಥ ಜ್ಞಾನಸ್ಫೋಟ ಕೆಲವೊಮ್ಮೆ ದೀರ್ಘವಾಗಿ, ಮತ್ತು ಕೆಲವೊಮ್ಮೆ ಹ್ರಸ್ವವಾಗಿ ನಡೆದಿದೆ. ಐತಿಹಾಸಿಕವಾಗಿ ಯೂರೋಪಿನ ‘ರಿನೈಸಾನ್ಸ್’ ಮತ್ತು ಉದ್ಯಮಿಕ ಕ್ರಾಂತಿ ಇಂತಹ ಜ್ಣಾನಸ್ಫೋಟಕ್ಕೆ ಅನುಕ್ರಮವಾಗಿ ಉದಾಹರಣೆಗಳಾಗಿರಬಹುದು. ತೀರ ಇತ್ತೀಚಿನ ಕಂಪ್ಯೂಟರ್ ಕ್ರಾಂತಿ ಇಂದಿನ ಮಾಹಿತಿಸ್ಫೋಟಕ್ಕೆ ಕಾರಣ ಎನ್ನುವುದನ್ನು ಕಣ್ಣೆದಿರೇ ನೋಡುತ್ತಿದ್ದೇವೆ. ಇದು ಸಾಧ್ಯವಾಗುವುದಕ್ಕೆ ಕಾರಣ, ಜ್ಞಾನದ ಸುಲಭ ವಿತರಣೆ! ಮೂವತ್ತೈದು ಸಾವಿರ ವರ್ಷಗಳ ಹಿಂದಿನ ಮಾನವನಿಗೂ ಇಪ್ಪತ್ತುಸಾವಿರ ವರ್ಷದ ಹಿಂದಿನ ಮಾನವನಿಗೂ ಇದ್ದ ಸಂಕೀರ್ಣತೆಯ ವ್ಯತ್ಯಾಸಕ್ಕೆ ಕಾರಣ ಇಂತಹ ಜ್ಞಾನಸ್ಫೋಟವೇ ಹೊರತು ಹೊರಗಿನ ‘ಇಂಟರ್ವೆನ್ಷನ್’ ಅಲ್ಲ ಎಂದು ಹೇಳುತ್ತಾ, ನಾನು ಪ್ರೇಮಶೇಖರರ ಬಲೂನಿಗೆ ಸೂಜಿಚುಚ್ಚುವ ವಿಷಾದವನ್ನು ಹೊರುತ್ತೇನೆ! ದೌರ್ಭಾಗ್ಯವೆಂದರೆ, ಇಂತಹ ಜ್ಞಾನಸ್ಫೋಟದ ತುತ್ತತುದಿಯಲ್ಲಿ ಅಹಂಕಾರಿಗಳ, ಅಜ್ಞಾನಿಗಳ ಕೈಗೆ ಅಧಿಕಾರ, ಅಥವಾ ಶಕ್ತಿ ಸಿಕ್ಕಿ ಅದು ಸಮೂಹ ನಾಶದಲ್ಲಿ ಕೊನೆಗೊಂಡಿದೆ. ಎರಡನೆಯ ಮಹಾಯುದ್ಧ ಇಂತಹ ಒಂದು ಸಮೂಹನಾಶದ ಘಟನೆ. ಐತಿಹಾಸಿಕವಾಗಿ ನೋಡುವುದಾದರೆ ಮಹಾಭಾರತ ಯುದ್ಧ ಮತ್ತು ಯಾದವೀ ಕಲಹ ಕೂಡಾ ಇಂತಹ ಸಮೂಹ ನಾಶವೇ!

    ಯು ಎಫ್ ಓ ಗಳು ಇಲ್ಲ ಎಂದು ಹೇಳಲು ಅಥವಾ ಇವೆ ಎಂದು ಹೇಳಲು ಇರುವ ‘ಎವಿಡೆನ್ಚ್’ ಬಹಳ ಕಡಿಮೆ. ತಮಾಶೆಗೆ ಹೇಳುವುದಾದರೆ ‘ಇಂಡಿಪೆಂಡೆನ್ಸ್ ಡೇ’ ಎನ್ನುವ ಆಂಗ್ಲ ಚಲನಚಿತ್ರವೊಂದರಲ್ಲಿ ಅಮೆರಿಕದ ಅಧ್ಯಕ್ಷರ ಜತೆ ಚಕಮಕಿಯ ಮಾತುಕತೆ ಮಾಡುವ ಒಬ್ಬ ವೃದ್ಧ.. ‘ಏಲಿಯನ್ಸ್ ಬಂದದ್ದು ಸುಳ್ಳೇ? ಏರಿಯಾ ೫೧ ಏನು?’ ಎಂದು ಕೇಳುತ್ತಾನೆ. ಆಗ ಅಧ್ಯಕ್ಷರು ಅದು ಸುಳ್ಳು ಸುದ್ದಿ ಎಂದು ಸಂತೈಸಲು ಪ್ರಯತ್ನಿಸುತ್ತಾರೆ. ಅವರ ‘ಸೆಕ್ರೆಟರಿ ಆಫ್ ಸ್ಟೇಟ್’ ಅದು ತಪ್ಪು, ಆ ಸುದ್ದಿ ನಿಜವೆಂದು ಹೇಳುತ್ತಾನೆ. ಆಗ ಚಕಿತರಾದ ಅಧ್ಯಕ್ಷರು ಈ ಸುದ್ದಿಯನ್ನು ತನ್ನಿಂದ ಬಚ್ಚಿಟ್ಟಿದ್ದೇಕೆ? ಎಂದು ಕೇಳುತ್ತಾರೆ. ಆಗ ಸೆಕ್ರೆಟರಿ ಹೇಳುತ್ತಾನೆ.. ‘ಏಕೆಂದರೆ, ತಮಗೆ ಅದನ್ನು ಅಲ್ಲಗಳೆಯಲು ಸುಲಭವಾಗಲಿ’ ಅಂತ. ಅಂತಹ ರುಜುವಾತು ಇದ್ದರೂ ಅದು ರಕ್ಷಣಾಪಡೆಗಳ, ಏಜೆನ್ಸಿಗಳ ವಶದಲ್ಲಿ ಇದ್ದಿರಬಹುದು, ಮತ್ತು ಸರ್ಕಾರಗಳ ನೇತೃತ್ವ ಹೊಂದಿರುವವರ ಜತೆ ಈ ಮಾಹಿತಿಯನ್ನು ರಕ್ಷಣಾಪಡೆಗಳು ಹಂಚಿಕೊಳ್ಳದೆ ಇರಬಹುದು..

    ಉತ್ತರ
  3. BNS
    ಏಪ್ರಿಲ್ 11 2015

    ಅಪೂರ್ಣವೆನ್ನಿಸಿದ ನನ್ನ ಅನಿಸಿಕೆಯನ್ನು ಮುಂದುವರಿಸಿ, ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ:

    ಹಿಂದಿನ ಪ್ರತಿಕ್ರಿಯೆಯಲ್ಲಿ ಹೇಳಿದಂತೆ, ಸರ್ಕಾರಗಳ ಮುಖಂಡರೊಟ್ಟಿಗೆ ರಕ್ಷಣಾ ಪಡೆಗಳು ಎಲ್ಲ ರಹಸ್ಯಗಳನ್ನೂ ಹಂಚಿಕೊಳ್ಳದೆ ಇರಬಹುದು. ಆದರೆ, ಎರಡು ದೇಶಗಳ ನಡುವಿನ ವ್ಯವಹಾರದಲ್ಲಿ ಪರಸ್ಪರ ವಿರುದ್ಧ ಉದ್ದೇಶಗಳಿಗೇ ಕೆಲಸ ಮಾಡುವ ರಕ್ಷಣಾ ಪಡೆಗಳು ಕೇವಲ ಈ ಉದ್ದೇಶಕ್ಕೆಂದು ಒಗ್ಗಟ್ಟಾಗಿ ವ್ಯವಹರಿಸುತ್ತವೆ ಎನ್ನುವುದು ನಂಬಲು ಕಷ್ಟಸಾಧ್ಯ!

    ಉತ್ತರ

Trackbacks & Pingbacks

  1. ಮಂಗಳನ ಅಂಗಳದಿಂದ ನೆಫಿಲಿಂ ನೆಲಕ್ಕೊಂದು ಯಾನ – ಭಾಗ ೩ | ನಿಲುಮೆ
  2. ಈ ಭೂಮಿಯೆಂಬ ಗ್ರಹವೊಂದು ರಿಮ್ಯಾಂಡ್ ಹೋಮ್ | ನಿಲುಮೆ
  3. ಗಟ್ಟಿದನಿಯಲ್ಲಿ ಹೇಳುತ್ತಿದ್ದೇನೆ: “ನಮಗೆ ಸಾವೇ ಇಲ್ಲ” | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments