ಹಿಂದುಳಿದವರನ್ನು ತುಳಿಯುತ್ತಿರುವವರು ಯಾರು?
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
2012-13 ನೇ ಸಾಲಿನಿಂದ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವ ವಿಧಾನವನ್ನು ಜಾರಿಗೆ ತಂದಿದೆ. ಈ ಮೊದಲು ಮುದ್ರಿತ ಅರ್ಜಿಯನ್ನು ಸಲ್ಲಿಸುವ ಪದ್ಧತಿ ಬಳಕೆಯಲ್ಲಿದ್ದುದ್ದರಿಂದ ಹೊಸ ವಿಧಾನದ ಪರಿಣಾಮ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿಳಂಬವಾಗುವುದರ ಜೊತೆಗೆ ತೊಂದರೆ ಸಹ ಆಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ನನ್ನನ್ನು ಸಂಪರ್ಕಿಸಿದ್ದುಂಟು. ಕಳೆದ ವರ್ಷ ಸುಮಾರು ಇಪ್ಪತ್ತಕ್ಕಿಂತ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವಾಗ ನನ್ನನ್ನು ಅಚ್ಚರಿಗೊಳಿಸಿದ ಸಂಗತಿ ಎಂದರೆ ಆ ಯಾವೊಬ್ಬ ವಿದ್ಯಾರ್ಥಿಯೂ ಬಡತನದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಎಂಟರಿಂದ ಹತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿತ್ತು.ಆ ಎಲ್ಲ ವಿದ್ಯಾರ್ಥಿಗಳ ಪಾಲಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂಗತಿ ನನ್ನನ್ನು ಇನ್ನಷ್ಟು ಅಚ್ಚರಿಗೊಳಿಸಿತು. ವಿದ್ಯಾರ್ಥಿಗಳ ಪಾಲಕರು ತಮ್ಮ ಕೆಲಸಕ್ಕೆ ಒಂದೆರಡು ದಿನಗಳ ರಜೆ ಪಡೆದು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದರು. ಸರ್ಕಾರಿ ಕೆಲಸ, ಉನ್ನತ ಹುದ್ದೆ, ಕೈತುಂಬ ಸಂಬಳ ಹೀಗಿದ್ದೂ ಅವರುಗಳು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆಯಲು ಪಡುತ್ತಿದ್ದ ಪರಿಪಾಟಲು ನೋಡಿ ನಿಜಕ್ಕೂ ಹಿಂದುಳಿದ ವರ್ಗದವರನ್ನು ಕೈಹಿಡಿದೆತ್ತಿ ಮುಖ್ಯವಾಹಿನಿಗೆ ತಂದು ನಿಲ್ಲಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನ ಅದರ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎನ್ನುವ ಪ್ರಶ್ನೆ ಆ ಕ್ಷಣ ನನ್ನಲ್ಲಿ ಮೂಡಿತು.
ನಿಜಗನ್ನಡ ವ್ಯಾಕರಣ
– ಹರೀಶ್ ಆತ್ರೇಯ
ಪ್ರಾಣಿಗಳೆಲ್ಲವುದರ ಮುಖ್ಯ ಲಕ್ಷಣಗಳಲ್ಲಿ ಶಬ್ದವನ್ನು ದ್ವನ್ಯಂಗಗಳ ಮೂಲಕ ಹೊರಡಿಸುವುದೂ ಒಂದು. ಗಾಳಿಯನ್ನು ಬಾಯಿಯ ಮೂಲಕ ನಿರ್ದಿಷ್ಟ ತಡೆ ನೀಡಿ ಹೊರಬಿಡುವಾಗ ಶಬ್ದ (ಧ್ವನಿ)ವುಂಟಾಗುತ್ತದೆ. ಕೇವಲ ಶ್ರವಣೇಂದ್ರಿಯಗಳ ಅನುಭವಕ್ಕೆ ಮಾತ್ರ ಬರುವ ಈ ಶಬ್ದವು ಜೀವನ ಇಷ್ಟದಂತೆ ಹೊರಬೀಳುತ್ತದೆ. ಈ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗೂ ತಮ್ಮ ಅಭಿಪ್ರಾಯವನ್ನು ಇತರ ಜೀವಿಗಳಿಗೆ ತಿಳಿಸುವ ಮಾಧ್ಯಮಗಳಲ್ಲಿ ಶಬ್ದ ಮಾಧ್ಯಮ ಪಂಚಭೂತಾತ್ಮಕವಾಗಿ ಅತ್ಯುತ್ತಮ ಮಾಧ್ಯಮವೆನಿಸಿದೆ. ಇಂತಹ ಶಬ್ದದ ಉತ್ಪಾದನೆ ಮಾಡುವ ಪ್ರಾಣಿವರ್ಗದಲ್ಲಿ ಮಾನವ ವಿಭಿನ್ನಜೀವಿ ಈ ಶಬ್ದದ ಉತ್ಪಾದನೆ ಮಾಡುವ ಧ್ವನ್ಯಂಗಗಳನ್ನು ವಿಶಿಷ್ಟ ರೀತಿಯಲ್ಲಿ ದಂಡಿಸಿಕೊಂಡು ವಿಚಿತ್ರ ರೀತಿಯ ಶಬ್ದಗಳನ್ನು ಹೊರಡಿಸುವ ಮೂಲಕ ಭಾವನೆಗಳನ್ನು ಹೊರಗೆಡುವುದಕ್ಕೆ ನಾನಾ ಶಬ್ದಗಳನ್ನು ಉತ್ಪಾದಿಸಬಲ್ಲವನಾಗಿದ್ದಾನೆ.
ನಾಡು-ನುಡಿ : ಮರುಚಿಂತನೆ – ನೆಹರು ಸೆಕ್ಯುಲರಿಸಂ ಯಾರ ವಾರಸುದಾರ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ನೆಹರು ಅವರು ಮಹಾತ್ಮಾ ಗಾಂಧಿಯವರ ಪಟ್ಟದ ಶಿಷ್ಯ. ಅಷ್ಟಾಗಿಯೂ ನೆಹರೂ ಅವರ ನೀತಿಗಳು ಹಾಗೂ ಕಾರ್ಯಕ್ರಮಗಳು ದೇಶವನ್ನು ಗಾಂಧಿವಾದದ ವಿರುದ್ಧ ದಿಶೆಗೆ ಒಯ್ದವು ಎಂಬುದಾಗಿ ವಿದ್ವಾಂಸರ ಅಂಬೋಣ. ಉದಾಹರಣೆಗೆ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ, ಆಧುನೀಕರಣದ ಕುರಿತ ವಿರೋಧ, ಇವೆಲ್ಲವೂ ನೆಹರೂ ಯುಗದ ನಂತರ ರಾಜಕಾರಣದ ಕಸದ ಬುಟ್ಟಿ ಸೇರಿದ್ದು ಈಗ ಇತಿಹಾಸವಾಗಿದೆ. ಹಾಗಾಗಿ ಯಾರೂ ಈ ವಿಷಯದಲ್ಲಿ ನೆಹರೂ ಅವರು ಗಾಂಧಿಯವರ ಶಿಷ್ಯತ್ವವನ್ನು ಪೂರೈಸಿದರು ಎನ್ನುವ ಸಾಹಸಕ್ಕೆ ಹೋಗಲಾರರು. ಆದರೆ ಅಷ್ಟಾಗಿಯೂ ಕೂಡ ನೆಹರೂ ಅವರು ಗಾಂಧಿಯವರ ಶಿಷ್ಯರಾಗಿ ಉಳಿದುಕೊಳ್ಳುವುದು ಸೆಕ್ಯುಲರ್ ನೀತಿಯಲ್ಲಿ ಎಂಬುದು ನೆಹರೂ ಅವರ ಪರ ವಿರೋಧಿಗಳಿಬ್ಬರಲ್ಲೂ ಮನೆಮಾಡಿರುವ ಅನ್ನಿಸಿಕೆ. ಭಾರತದಲ್ಲಿ ಹಿಂದುತ್ವವಾದಿಗಳನ್ನು ನಿಯಂತ್ರಿಸುವ ಹಾಗೂ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವ ಕುರಿತಂತೆ ತಮ್ಮ ಗುರುವಿನ ಆಲೋಚನೆಗಳನ್ನು ನೆಹರೂ ಕಾರ್ಯರೂಪಕ್ಕೆ ಸಮರ್ಥವಾಗಿ ಇಳಿಸಿದವರು ಎಂಬುದರಲ್ಲಿ ಇಂದು ಯಾರಿಗಾದರೂ ಸಂದೇಹವಿದೆ ಎನ್ನಿಸುವುದಿಲ್ಲ. ಈ ಮೇಲಿನ ಕೊನೆಯ ಅಂಶವನ್ನು ಮಾತ್ರ ಕಾಂಗ್ರೆಸ್ಸು ಒತ್ತಿ ಹೇಳಿ ತಾನು ಗಾಂಧೀಜಿಯವರ ನಿಜವಾದ ವಾರಸುದಾರ ಎನ್ನುತ್ತ ಬಂದಿದೆ. ಆದರೆ ನೆಹರು ಸೆಕ್ಯುಲರಿಸಂಗೆ ಗಾಂಧಿಯವರ ವಾರಸುದಾರಿಕೆ ಎಷ್ಟಿದೆ?
ಇಂದು ಗಾಂಧೀ ಸೆಕ್ಯುಲರಿಸಂ ಅಂತ ಪ್ರತ್ಯೇಕವಾಗಿ ಯಾವುದೂ ಕಣ್ಣಿಗೆ ಕಾಣುವುದಿಲ್ಲ. ನೆಹರು ಸೆಕ್ಯುಲರಿಸಮ್ಮಿನ ಇಂದಿನ ವಾರಸುದಾರರ ಚಿಂತನೆಗೂ ಗಾಂಧೀ ಚಿಂತನೆಗೂ ಇರುವ ಬಿರುಕುಗಳನ್ನು ಗಮನಿಸಿದರೆ ಈ ವಾರಸುದಾರಿಕೆಯ ಸ್ವರೂಪವು ಸ್ಪಷ್ಟವಾಗಬಹುದು. ನೆಹರೂ ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸೆಕ್ಯುಲರಿಸಂಗೆ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯವನ್ನು ಬಿಟ್ಟರೆ ಅದರಲ್ಲಿ ಸೆಕ್ಯುಲರ್ ಆದದ್ದು ಏನೂ ಕಾಣಿಸುವುದಿಲ್ಲ. ಹಾಗೂ ಹಿಂದೂ ಸಂಪ್ರದಾಯಗಳ ಕುರಿತು ಜಿಗುಪ್ಸೆ, ಅವಹೇಳನವೂ ಕೂಡ ಈ ಸೆಕ್ಯುಲರಿಸಂನ ಒಂದು ಲಕ್ಷಣ. ಅಂದರೆ ಹಿಂದೂ ಪರಂಪರೆಯು ಅನೈತಿಕ ಸಮಾಜ ವ್ಯವಸ್ಥೆಯನ್ನು, ಅರ್ಥಾತ್ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆ, ಸಮಸ್ತ ಸಂಸ್ಕೃತ ಗ್ರಂಥಗಳೆಲ್ಲವೂ ಬ್ರಾಹ್ಮಣೇತರರ ಶೋಷಣೆಗಾಗಿಯೇ ರಚನೆಯಾಗಿವೆ, ಈ ಸಮಾಜವನ್ನು ಆದಷ್ಟೂ ಹಿಂದೂ ಸಂಪ್ರದಾಯಗಳ ಹಿಡಿತದಿಂದ ಹೊರತಂದ ಹೊರತೂ ಅದರ ಉದ್ಧಾರ ಸಾಧ್ಯವಿಲ್ಲ ಎನ್ನುವುದೇ ಇಂದಿನ ಸೆಕ್ಯುಲರಿಸಂ ಆಗಿದೆ. ಈ ಸೆಕ್ಯುಲರಿಸಂ ಪ್ರಕಾರ ಹಿಂದೂ ಸಂಪ್ರದಾಯಗಳಲ್ಲಿನ ಮೌಢ್ಯದ ನಿರ್ಮೂಲನೆಗಾಗಿ ಕಾನೂನುಗಳನ್ನು ಮಾಡುವುದೇ ಮುಖ್ಯ ಕಾರ್ಯಕ್ರಮ.
“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು
– ರಾಕೇಶ್ ಶೆಟ್ಟಿ
ಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,“ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು” ಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, “ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯ… ರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.
ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ’ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ’ಹಿಂದೂ ಎಂಬ ಧರ್ಮವೇ ಇಲ್ಲ’ ಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ’ ಎನ್ನುತ್ತಾ ಮುಂದುವರೆದೂ ’ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನು’ ಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ’ಹಿಂದು ಧರ್ಮಕ್ಕೆ ಸೇರಿದ ಮಠ” ಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ’ಸನಾತನಿ ಹಿಂದೂ’ ಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ’ಹಿಂದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.
ಕನ್ನಡನಾಡಿನ ಅನರ್ಘ್ಯ ರತ್ನಗಳು
– ರೋಹಿತ್ ಚಕ್ರತೀರ್ಥ
ನಮ್ಮ ನಾಡು ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿ. ಇಲ್ಲಿ ಶತಶತಮಾನಗಳಿಂದ ಅನೇಕಾನೇಕ ಸಂತರು, ಪ್ರಾಜ್ಞರು, ವಿಚಾರವಾಧಿಗಳು ಆಗಿಹೋಗಿದ್ದಾರೆ. ಈಗಿನ ಇಪ್ಪತ್ತೊಂದನೇ ಶತಮಾನದಲ್ಲೂ ಅಂತಹ ಪುಣ್ಯಪುರುಷರು ಮತ್ತೆಮತ್ತೆ ನಮ್ಮ ಈ ಕರುನಾಡಿನಲ್ಲಿ ಹುಟ್ಟಿಬರುತ್ತಲೇ ಇರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ ಎಂದೇ ತಿಳಿಯಬೇಕು. ಇಂದಿನ ಈ ಸುದಿನದಂದು ಅಂತಹ ಕೆಲ ಪುಣ್ಯಪುರುಷ/ಮಹಿಳೆಯರನ್ನು, ಸಮಾಜದ ಚಿಂತನೆಯ ಧಾಟಿಯನ್ನೇ ಬದಲಾಯಿಸಬಲ್ಲ ಪ್ರವರ್ತಕರನ್ನು ನೆನೆಯೋಣ.
ಪ್ರೊ. ಭಗ್ವಂತ – ಇವರೊಬ್ಬ ಸಮಾಜಸುಧಾರಕ ಕಮ್ ಪಂಡಿತ ಕಮ್ ವಿಚಾರವಾದಿ ಕಮ್ ಜಾತ್ಯತೀತ ಕಮ್ ಇನ್ನೇನೇನೋ ಆಗಿರುವ ಪುಣ್ಯಪುರುಷರು. ಇವರು ಜಗತ್ತಿನ ಉಳಿದೆಲ್ಲಾ ದೇಶಗಳನ್ನು ಬಿಟ್ಟು ನಮ್ಮ ಭರತಖಂಡವನ್ನು, ಅದರಲ್ಲೂ ಕರ್ನಾಟಕವನ್ನು ತನ್ನ ಅವತಾರಕ್ಕಾಗಿ ಆರಿಸಿಕೊಂಡದ್ದೇ ನಮ್ಮೆಲ್ಲರ ಪುಣ್ಯ. ಭಗ್ವಂತ್ ಅವರು ತನ್ನ ದಿವ್ಯಚಕ್ಷುಗಳಿಂದ ಈ ಸಮಾಜದ ಧರ್ಮ-ಪಂಥಗಳಲ್ಲಿ ಅಡಗಿರುವ ವಾರೆಕೋರೆಗಳನ್ನು ಹೊರಗೆಳೆದುಹಾಕಿ ಸಮಾಜಕ್ಕೆ ಭರಿಸಲಾರದ ಸಹಾಯ ಮಾಡಿದ್ದಾರೆ. ಇವರಿಗೆ ಹಿಂದೂ ಧರ್ಮದ ಭಗವದ್ಗೀತೆ ಎಂದರೆ ತುಂಬಾ ಪ್ರೀತಿ. ಅದನ್ನು ನೂರಾರು ಸಲ ಪಾರಾಯಣ ಮಾಡಿ, ಇದುವರೆಗೆ ಪಂಡಿತವರೇಣ್ಯರಿಗೆ ಕಾಣದ ಅರ್ಥಗಳನ್ನು ಹುಡುಕಿ ಹೊರತೆಗೆದ ಸಾಹಸಿ ಅವರು. ಭಗ್ವಂತ್ ಭಾರತದಲ್ಲಲ್ಲದೆ ದೂರದ ಸೌದಿಯಲ್ಲೋ ವ್ಯಾಟಿಕನ್ನಲ್ಲೋ ಹುಟ್ಟಿ ಅಲ್ಲಿನ ಧರ್ಮಗ್ರಂಥಗಳನ್ನು ಈ ರೀತಿ ಹೊಗಳಿದ್ದರೆ ಅವರಿಗೆ ಅಲ್ಲಿನ ಮಠಾಧಿಪತಿಗಳು ಮತ್ತು ಸರ್ಕಾರಗಳು ಅಲೌಕಿಕ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದವು. ಮತ್ತಷ್ಟು ಓದು 
ಆಚಾರವಿಲ್ಲದ ನಾಲಿಗೆ…
– ಎಸ್.ಎನ್.ಭಾಸ್ಕರ್,ಬಂಗಾರಪೇಟೆ
“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ” – ಪುರಂದರದಾಸರ ಈ ಪದ ನೆನಪಾಗುತ್ತಿದೆ. ಇತ್ತೀಚೆಗಷ್ಟೇ ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಹೇಳಿ ಸುದ್ದಿ ಮಾಡಿದ್ದ ದೇವನಾಮಾಂಕಿತ ಬುದ್ದಿಜೀವಿಯೊಂದು ಮತ್ತೊಮ್ಮೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟು ಸುದ್ದಿ ಮಾಡಿದೆ. ನಿಜಕ್ಕೂ ಖೇದವೆನಿಸುತ್ತದೆ. ಒಂದಿಡೀ ಜನಾಂಗದ ಆರಾಧ್ಯ ದೈವವಾಗಿರುವ, ಮರ್ಯಾದ ಪುರುಷೋತ್ತಮ, ಆದರ್ಶ ಪುರುಷನಾಗಿ ದೈವಸ್ಥಾನದಲ್ಲಿ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿರುವ ಶ್ರೀ ರಾಮನನ್ನು ಕುರಿತು ಈ ರೀತಿ ಅನಗತ್ಯವಾದ ಹೇಳಿಕೆಗಳನ್ನು ನೀಡುವುದರಿಂದ ಅವರಿಗೆ ಆಗುವ ಲಾಭವಾದರೂ ಏನೋ? ಆಗಸದೆಡೆ ಮುಖಮಾಡಿ ಉಗುಳಿದರೆ ನಷ್ಟ ಯಾರಿಗೆ?
ಅಲ್ಲಾ ಸ್ವಾಮಿ… ಈ ರೀತಿ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಸ್ವಸ್ಥ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದೇನೆ ಎಂಬ ಅರಿವಾದರೂ ನಿಮಗುಂಟೆ ? ಅಥವಾ ಸೋ ಕಾಲ್ಡ್ ’ಸೆ(ಸಿ)ಕ್ಯುಲರ್” ಸಿದ್ದಾಂದತದೆಡೆಗೆ ತಮ್ಮ ಅತೀವ ಬದ್ದತೆಯನ್ನು ಈ ರೀತಿ ಸಮಾಜಕ್ಕೆ ತೋರ್ಪಡಿಸುತ್ತಿರುವಿರೇ? ವೇದಿಕೆಗಳ ಮೇಲೆ ನಿಂತು ಈ ರೀತಿ ಭಾಷಣ ಮಾಡಿ ಸುತ್ತ ನೆರೆದಿರುವ ಭಟ್ಟಂಗಿಗಳ ಚಪ್ಪಾಳಿ ಗಿಟ್ಟಿಸುತ್ತಾ ಸುದ್ದಿಯಾಗುವುದು ಯಾರನ್ನು ಓಲೈಸಲು? ಈ ರೀತಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರವೂ ಮೌನವಾಗಿರುವುದು ನಿಜಕ್ಕೂ ಸೋಜಿಗವೇ ಸರಿ. ಕ್ರಮ ಕೈಗೊಳ್ಳಲು ಯಾರಾದರೂ ದೂರು ನೀಡುವವರೆಗೆ ಕಾಯಬೇಕೆಂಬ ನಿಯಮವೇನೂ ಇಲ್ಲವಲ್ಲ. ಬಹು ಸಂಖ್ಯಾತ ಜನ ಸಮೂಹದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಬಗ್ಗೆ ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳುವ ಕಾರ್ಯ ಏಕೆ ಸರ್ಕಾರದಿಂದ ಆಗುತ್ತಿಲ್ಲ. ಪ್ರಮೋದ್ ಮುತಾಲಿಕ್ ರವರ ಭಾಷಣಕ್ಕೆ ನಿಷೇಧ ಹೇರುವ ಸರ್ಕಾರ ಇವರಿಗೂ ಏಕೆ ನಿಷೇಧ ಹೇರಬಾರದು? ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಳ್ಳುವುದು ಸರ್ಕಾರದ ಹಾಗೂ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಅಲ್ಲವೇ..? ಮತ್ತೇಕೆ ಈ ಮೌನ. ಯಾರ ಓಲೈಕೆಗಾಗಿ..?






