ವಿಷಯದ ವಿವರಗಳಿಗೆ ದಾಟಿರಿ

Archive for

31
ಮಾರ್ಚ್

ಮತದಾರರ ಮೋದಿ Vs ಬೆಂಗಳೂರು ಮಾಫಿಯಾ

– ರಾಕೇಶ್ ಶೆಟ್ಟಿ 

‘ನಾವು ಗೆದ್ದಿರುವ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಅಣ್ಣ. ಈ ಹಿಂದೆ ಯುಟಿ ಖಾದರ್ ಅಪ್ಪನ ಕಾಲದಲ್ಲೇ ಉಳ್ಳಾಲದಲ್ಲಿ ಬಿಜೆಪಿಯಿಂದ ಜಯರಾಮ ಶೆಟ್ಟರು ಗೆದ್ದಿದ್ದರು. ನಂತರದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೋಪಿಸಿಕೊಂಡು ದಳಕ್ಕೆ ಹೋಗಿ ಸ್ಪರ್ಧಿಸಿ ವೋಟ್ ಡಿವೈಡ್ ಮಾಡಿದರು.ಹಾಗೆ ಕಾಂಗ್ರೆಸ್ಸಿನ ಯು.ಟಿ ಫರೀದ್ ಗೆದ್ದರು. ಉಳ್ಳಾಲ ನಮ್ಮ ಕೈ ಬಿಟ್ಟು ಹೋಯಿತು. ಅಲ್ಲಿಂದ ಇಲ್ಲಿನವರೆಗೆ ನಮಗೆ ಆ ಕ್ಷೇತ್ರವನ್ನು ಮತ್ತೆ ಗೆಲ್ಲಲಿಕ್ಕಾಗಿಲ್ಲ ನೋಡಿ’ ನನ್ನ ತಮ್ಮನಂತಹ ಮಿತ್ರ ರಾಜೇಶ್ ನರಿಂಗಾನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ ಮಾತು ನನಗೀಗ ನೆನಪಾಯ್ತು. ನೆನಪು ಮಾಡಿಸಲು ಕಾರಣವಾಗಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಒಳಬೇಗುದಿ.

ಬೆಂಗಳೂರು ದಕ್ಷಿಣದ ಬಗ್ಗೆ ಮಾತನಾಡುವ ಮೊದಲು, ರಾಜರಾಜೇಶ್ವರಿ ನಗರ,ಜಯನಗರದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಬೇಕು.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಅತಿ ಪ್ರಮುಖ ನಾಯಕರು ಹಠಾತ್ ನಿಧನರಾಗುವ ಮೂಲಕ ಪಕ್ಷಕ್ಕೆ ನಷ್ಟವಾಗಿದೆ. ಆದರೆ ಈ ರೀತಿಯ ಹಠಾತ್ ಆಘಾತಗಳು ಈ ಪಕ್ಷದ ಆರಂಭದಿಂದಲೇ ಶುರುವಾಗಿದೆ. ಪಕ್ಷದ ಆಧಾರ ಸ್ತಂಭದಂತಿದ್ದ ಶ್ಯಾಂ ಪ್ರಸಾದ್ ಮುಖರ್ಜಿ,ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕೊಲೆಗಳು ಮೊದಲನೇ ಆಘಾತಗಳು. ಅದರಿಂದ ಚೇತರಿಸಿಕೊಂಡೇ ಪಕ್ಷ ಇಲ್ಲಿವರೆಗೂ ಬಂದು ನಿಂತಿದೆ. ಪ್ರಮೋದ್ ಮಹಾಜನ್,ಗೋಪಿನಾಥ್ ಮುಂಡೆ,ಪರಿಕ್ಕರ್, ಅನಂತಕುಮಾರ್,ವಿಜಯಕುಮಾರ್ ಇವೆಲ್ಲ ಇತ್ತೀಚಿನ ಆಘಾತಗಳು.

ಮತ್ತಷ್ಟು ಓದು »

29
ಮಾರ್ಚ್

2019 : ನವಭಾರತ Vs ಬ್ರಿಟಿಷ್ ಇಂಡಿಯಾ ನಡುವಿನ ಚುನಾವಣೆ

– ರಾಕೇಶ್ ಶೆಟ್ಟಿ

೨೦೧೯ ಚುನಾವಣೆಯ ದಿನಾಂಕ ಘೋಷಣೆಯಾಗಿ ಮೊದಲ ಹಂತದ ಚುನಾವಣೆಯೂ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದೂ ಹೋಗಲಿದೆ. ಈ ಬಾರಿಯ ಚುನಾವಣೆಯ ಮೇಲೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಕಣ್ಣೂ ಇದೆ. ೨೦೧೪ರ ಚುನಾವಣೆಯೂ ಹೀಗೆಯೇ ಇತ್ತು.೨೦೧೪ರ ಚುನಾವಣೆ ಭಾರತದ ರಾಜಕೀಯದಲ್ಲಿ ಢಾಳಾಗಿ ಮಿಳಿತವಾಗಿರುವ  ಜಾತಿ,ಹಣ,ರಿಲಿಜಿಯನ್,ಓಲೈಕೆ ಇತ್ಯಾದಿಗಳನ್ನು ಜನತೆಯೇ ನಿವಾಳಿಸಿ ಬಿಸಾಡಿದ,ದೇಶದ ಚಿಂತನೆಯ ದಿಕ್ಕನ್ನು ಬದಲಿಸಿದ ಚುನಾವಣೆ ಎನ್ನಬಹುದು.

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದ ಚುನಾವಣಾ ರಾಜಕೀಯವನ್ನು ಬಹುಶಃ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಮೊದಲನೆಯದು ೪೭ ರಿಂದ ೭೦ರ ದಶಕದವರೆಗಿನ ನೆಹರೂ ಕುಟುಂಬದ ರಾಜಕಾರಣ (ಶಾಸ್ತ್ರೀಜಿಯವರ ಸಮಯ ಬಿಟ್ಟು). ೭೦ರ ದಶಕದ ಆದಿಯಿಂದ ೯೦ರ ದಶಕದವರೆಗಿನ ಇಂದಿರಾ ಕಾಂಗ್ರೆಸ್ಸಿನ ಸರ್ವಾಧಿಕಾರಿ ತುರ್ತುಪರಿಸ್ಥಿತಿ ವಿರೋಧಿ ಹಾಗೂ ರಾಮಜನ್ಮಭೂಮಿ ಚಳವಳಿಯರವರೆಗಿನ ರಾಜಕಾರಣ. ೯೦ರ ದಶಕದ ಆದಿಯಿಂದ – ೨೦೧೩ರ ಕೊನೆಯವರೆಗಿನ ಸೆಕ್ಯುಲರಿಸಂ-ಹಿಂದುತ್ವದ ರಾಜಕಾರಣ. ಈ  ನಾಲ್ಕು ಭಾಗಗಳಲ್ಲಿ ನಿಚ್ಚಳ ಬಹುಮತದ ಸರ್ಕಾರಗಳು ರೂಪುತಳೆದಿದ್ದು ನೆಹರೂ ಕಾಲದ ಸ್ವಾತಂತ್ರ್ಯ ಹೋರಾಟದ ಹ್ಯಾಂಗ್ ಓವರ್ ಹಾಗೂ ವಿರೋಧ ಪಕ್ಷಗಳಿಲ್ಲದ ಕಾಲದಲ್ಲಿ,ಇಂದಿರಾ  ಹತ್ಯೆಯ ನಂತರದ ಚುನಾವಣೆಯಲ್ಲಿ ಹಾಗೂ ಕಳೆದ ೨೦೧೪ ರ ಚುನಾವಣೆಯಲ್ಲಿ.

ಮೊದಲ ಎರಡು ಚುನಾವಣೆಯ ವಿಷಯಗಳೇನೂ ಚರ್ಚಿಸ ಬೇಕಾದ ವಿಷಯಗಳೇನೂ ಅಲ್ಲ. ಇನ್ನುಳಿಯುವುದು ೨೦೧೪ರ ಚುನಾವಣೆಯ ವಿಷಯ. ಯಾಕೆ ೨೦೧೪ರ ಚುನಾವಣೆಯ ವಿಷಯ ಮುಖ್ಯವಾಗುತ್ತದೆ ಎಂದರೇ,ಯಾವುದೇ ಜಾತಿ-ರಿಲಿಜಿಯನ್-ಓಲೈಕೆ-ಬಿಟ್ಟಿ ಭಾಗ್ಯ ಯೋಜನೆಗಳಿಲ್ಲದೇ, ಗುಜರಾತಿನಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಅಭಿವೃದ್ಧಿಯ,ನವಭಾರತದ ಕನಸು ಕಟ್ಟಿಕೊಟ್ಟಿದ್ದರು ನರೇಂದ್ರ ಮೋದಿಯವರು.ಆದರೆ ವಿಪಕ್ಷಗಳಿಗೆ ಮೋದಿಯವರ ಅಭಿವೃದ್ಧಿ ಅಜೆಂಡದ ಅಸ್ತ್ರ್ರಕ್ಕೆ ಪ್ರತಿಯಾಗಿ ವಿಭಿನ್ನವಾದ ಅಥವಾ ಅದಕ್ಕಿಂತಲೂ ಉತ್ತಮವಾದ ಅಜೇಂಡಾವನ್ನು ಸೆಟ್ ಮಾಡಲಾಗಲೇ ಇಲ್ಲ. ಅವರು ೨೦೦೨ರ ಗುಜಾರಾತಿನಲ್ಲೇ ಉಳಿದುಹೋದರು. ಇತ್ತ ಮೋದಿಯವರು ನವಭಾರತದ ಅಲೆಯಲ್ಲಿ ೨೦೧೪ರ ಮೇ ತಿಂಗಳಲ್ಲಿ ಸಂಸತ್ತಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಮತ್ತಷ್ಟು ಓದು »

27
ಮಾರ್ಚ್

ಆಕಾಶದಿಂದ ಅಂತರಿಕ್ಷದೆಡೆಗೆ ತಲೆಯೆತ್ತಿದ ಭಾರತ

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

ASATಸರಿ, ಇವತ್ತು ಭಾರತ ತನ್ನದೇ ಒಂದು ಉಪಗ್ರಹವನ್ನ, ತನ್ನದೇ ಮಿಸೈಲ್ ಉಪಯೋಗಿಸಿ ಹೊಡೆದುರುಳಿಸ್ತು. “ಮಿಷನ್ ಶಕ್ತಿ”ಯನ್ನು ಒಂದು ಅಭೂತಪೂರ್ವ ಸಾಧನೆ ಎಂದು ಹೊಗಳಲಾಯ್ತು. ಏನಿದು ಮಿಷನ್ ಶಕ್ತಿ? ಯಾಕೆ ಈ ಪ್ರಾಜೆಕ್ಟ್’ಗೆ ಇಷ್ಟು ಮಹತ್ವ? ಮಿಸೈಲ್ ತಂತ್ರಜ್ಞಾನ ಜಗತ್ತಿನ ಎಲ್ಲರ ಬಳಿಯೂ ಇದೆ. ಪಾಕಿಸ್ಥಾನದ ಬಳಿಯೂ ಇದೆ. ಮೊನ್ನೆಯಷ್ಟೆ ನಾವು SPICE ಮಿಸೈಲ್ ಬಳಸಿ, ಬಾಲಾಕೋಟ್’ನಲ್ಲಿ ಭಯೋತ್ಪಾದಕರ ಬಾಲ ಕಟ್ ಮಾಡಿದ್ದೀವಲ್ಲ. ಇದೂ ಇನ್ನೊಂದು ಅಂತಹದ್ದೇ ಸಾಧನೆ ತಾನೆ? ಅದಕ್ಕೆ ಇಷ್ಟು ದೊಡ್ಡ ಗಲಾಟೆಯಾಕೆ? ಮಿಸೈಲ್ ಒಂದಕ್ಕೆ ಸಂಬಂಧಿಸಿದ ಈ ಪ್ರಕಟಣೆಯನ್ನ ರಕ್ಷಣಾ ಇಲಾಖೆಯ ಬದಲು, ಪ್ರಧಾನಿ ಯಾಕೆ ಕೊಟ್ಟದ್ದು? ಈ ಪ್ರಶ್ನೆಗಳು ನಿಮ್ಮ ತಲೆಯಲ್ಲಿದ್ದರೆ, ಈ ಲೇಖನ ನಿಮಗೆ ಸಹಾಯಕವಾಗಲ್ಲದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಚರ್ಚೆ ಮಾಡೋಣ. ಮತ್ತಷ್ಟು ಓದು »

25
ಮಾರ್ಚ್

ಕೇರಳ ವರ್ಮ ಪಳಸಿ ರಾಜ.

– ವರುಣ್ ಕುಮಾರ್

(ವಾರಕ್ಕೊಂದು ವೀರರು)

220px-Veera_Kerala_Varma_Pazhassi_Raja೧೭೯೭, ಕೇರಳದ ವಯನಾಡಿನ ಪೆರಿಯಪಾಸ್ ಎಂಬ ಪ್ರದೇಶವನ್ನು ಬ್ರಿಟೀಷ್ ಕರ್ನಲ್ ಡೋ ಮತ್ತು ತುಕಡಿಯು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಕಾಡಿನ ಮಧ್ಯೆ ಪಯಣವನ್ನು ಮುಂದುವರೆಸಿದರು. ಆದರೆ ಅಂತಹ ದಟ್ಟ ಅರಣ್ಯವಾದಲ್ಲಿ ಒಂದು ಸಣ್ಣ ಶಬ್ದ ಕೇಳಿ ಬಂದರೂ ಎಂತಹವರ ಎದೆಯನ್ನು ಒಂದು ಕ್ಷಣ ನಡುಗಿಸದೇ ಬಿಡದು. ಅಂತಹ ಭಯ ಕರ್ನಲ್ ಡೋ ಅವನಲ್ಲಿಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಕೇರಳದ ಸಿಂಹದ ಬಗ್ಗೆ ಭಯವಿತ್ತು. ಇಂತಹ ಭಯದಲ್ಲಿ ಮುಂದುವರೆಯುತ್ತಿರುವಾಗ ಅನಿರೀಕ್ಷಿತವಾದ ದಾಳಿ ತನ್ನ ತಂಡದ ಮೇಲೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ನೂರಕ್ಕೂ ಅಧಿಕ ತನ್ನ ಸೈನಿಕರನ್ನು ಕರ್ನಲ್ ಕಳೆದುಕೊಂಡನು. ‌ಈ ಭಯಂಕರ ಕಾದಾಟದಲ್ಲಿ ೩೦೦ಕ್ಕೂ ಮಿಕ್ಕಿ ಸೈನಿಕರು ಗಾಯಾಳಾದರು. ದಾಳಿ ನಡೆಸಿದ ತಂಡ ಬ್ರಿಟೀಷರಿಗೆ ದಾಳಿ ಎಲ್ಲಿಂದ ನಡೆಯುತ್ತಿದೆ ಎಂಬ ಸಣ್ಣ ಊಹೆಯೂ ಸಿಗದ ರೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿದ್ದರು. ದೇಶಾದ್ಯಂತ ಆನೆ ನಡೆದಿದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯಕ್ಕೆ ದೊರೆತ ದೊಡ್ಡ ಮರ್ಮಾಘಾತವಾಗಿತ್ತು. ಈ ರೀತಿ ಗೆರಿಲ್ಲಾ ಮಾದರಿ ದಾಳಿಯನ್ನು ರೂಪಿಸಿ ಬ್ರಿಟೀಷರ ಬೆನ್ನೆಲುಬಲ್ಲಿ ಚಳುಕು ಹುಟ್ಟಿಸಿದ ವೀರ ಕೇರಳದ ಸಿಂಹ ಕೇರಳ ವರ್ಮ ಪಳಸಿ ರಾಜ. ಮತ್ತಷ್ಟು ಓದು »

20
ಮಾರ್ಚ್

ನೋಡಿ ಸ್ವಾಮಿ .. ನಾವಿರೋದು ಹೀಗೆ.. !!

-‌ ಸುಜಿತ್‌ ಕುಮಾರ್

downloadಮೊನ್ನೆ ಆ ದೃಶ್ಯಗಳನ್ನು ನೋಡಿ ಯಾಕೋ ನಮ್ಮ ಶಂಕರ್ ನಾಗ್ ನೆನಪಾದ್ರು. ಅದು ಶಂಕರ್ ನಾಗ್ ಅನ್ನೋದಕ್ಕಿಂತ ಶಂಕರ್ ನಾಗ್ ಅಭಿನಯದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದ ಟೈಟಲ್ ಹಾಡು ನೆನಪಾಯಿತು ಎನ್ನಬಹುದು. ನಗರದ ಗಲ್ಲಿಮೂಲೆಗಲ್ಲಿ ತನ್ನ MAT ಬೈಕಿನ ಮೇಲೆ ಕೂತು ಹಾಡುತ್ತಾ ಸಾಗುವ ಚಿತ್ರದ ದೃಶ್ಯದ ತುಣುಕು, ದಿನ ಬೆಳಗಾದರೆ ಬೆಳ್ಳನೆಯ ಬಟ್ಟೆಗಳನ್ನು ತೊಟ್ಟು ‘ನಾನೇ ಸಾಚಾ ಆತ ಮಾತ್ರ ನೀಚ’ ಎಂಬಂತೆ ಎಲ್ಲೆಂದರಲ್ಲಿ ಬೈಯುವ ಭಾಷಣಗಳನ್ನು ಮಾಡುತ್ತಾ ಓಟಿಗಾಗಿ ಊರೂರು ಸುತ್ತುತ್ತಾ ಕೊನೆಗೆ ಅಪ್ಪಿ ತಪ್ಪಿ ಆತನೇ ಎದುರಿಗೆ ಪ್ರತ್ಯಕ್ಷವಾದರೆ ‘ಹಿಂದಿ ಚೀನೀ ಬಾಯಿ ಬಾಯಿ’ ಎಂಬುವಂತೆ ತಬ್ಬಿಕೊಂಡು ಮುತ್ತಿಡುವುದೊಂದೇ ಬಾಕಿ ಏನೋ ಎಂಬ ಧಾಟಿಯಲ್ಲಿ ನಟಿಸುತ್ತಾ ನಿಲ್ಲುವ ರಾಜಕಾರಣಿಗಳನ್ನು ನೆನೆಪಿಸುತ್ತಿತ್ತು. ಅವರುಗಳ ಹಿಂದೆಯೇ ನಮ್ಮ ಶಂಕರ್ ಗುರು ‘ನೋಡಿ ಸ್ವಾಮಿ ಇವ್ರ್ ಇರೋದೇ ಹೀಗೆ’ ಎಂದು ಹಾಡಿದಂತೆ ಭಾಸವವಾಗುತ್ತಲಿತ್ತು. ನಿಂತ ನೆರಳಿಗೆ ಆಗದ ಮಾಜಿ ಸಿಎಮ್ ಗಳಿಬ್ಬರು ವೇದಿಕೆಯೊಂದರ ಮೇಲೆ ಕೈ ಕೈ ಕುಲುಕುತ್ತಾ ‘ಪಾಲಿಟಿಕ್ಸ್ ಅಪಾರ್ಟ್, ನಾವಿಬ್ಬರು ಅತ್ಯುತ್ತಮ ಸ್ನೇಹಿತರು’ ಎಂದಾಗ ನೆರೆದಿದ್ದ ನೂರಾರು ಅಭಿಮಾನಿಗಳು ತಲೆಯನ್ನು ಕೆರೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಮಿಕ ಮಿಕ ನೋಡತೊಡಗಿದಂತೂ ಸುಳ್ಳಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಾಗಿ ಅಂತವರ ಬಾಯಿಂದ ಇಂಥ ಹಿರಿಯ ಮಾತುಗಳು ಬರುವುದು ತಪ್ಪೇನಿಲ್ಲ. We Should Appreciate that. ಆದರೆ ಇಂದು ಹೀಗಂದು ನಾಳೆ ಮತ್ತದೇ ಮೈ ಮೈ.. ತು ತು .. ಎಂದು ಬೆಂಕಿಕಾರುವ ಮಾತುಗಳಾದರು ಏತಕ್ಕೆ ಸ್ವಾಮಿ? ಮಿಗಿಲಾಗಿ ಇಂತಹ ಪೊಳ್ಳು ಮಾತುಗಳ ಸರದಾರರಾಗಿ ಅವರುಗಳಿಗೇ ಇರದ ವೈರತ್ವವನ್ನು ಒಬ್ಬ ಕಾಮನ್ ಸಿಟಿಸನ್ ಆಗಿ ನಾವ್ಯಕ್ಕೆ ಕಟ್ಟಿಕೊಳ್ಳಬೇಕು ಹೇಳಿ? ಮತ್ತಷ್ಟು ಓದು »

19
ಮಾರ್ಚ್

ಕ್ಯಾರೆಟ್ ಅಂದ್ರೆ ಕ್ಯಾ ಅನ್ನುತ್ತಿದ್ದವರನ್ನು, ವಾಹ್ ಎನ್ನಿಸಿದ ವಲ್ಲಭಬಾಯಿ

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

D1XMuOVWkAAfYQ1ನಿಮಗ್ಗೊತ್ತೇ! 1940ರ ಆಸುಪಾಸಿನಲ್ಲಿ ಕ್ಯಾರೆಟ್ ಅನ್ನೋದನ್ನ ಮನುಷ್ಯರೂ ತಿನ್ನಬಹುದು ಅನ್ನೋ ವಿಷಯ ಗುಜರಾತಿನ ಜನರಿಗೆ ತಿಳಿದೇ ಇರಲಿಲ್ಲ. ಆಗೆಲ್ಲ ಜಮೀನಿನಲ್ಲಿ ಬೆಳೆದ ಕ್ಯಾರೆಟ್ ಅನ್ನು ಬರೀ ದನ-ಕರುಗಳಿಗೆ ತಿನ್ನಲಷ್ಟೇ ಕೊಡುತ್ತಿದ್ದರು. ಜಮೀನಿನಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುತ್ತಿದ್ದ ಕ್ಯಾರೆಟ್ ಅನ್ನು, ಹುಲ್ಲು, ಕಲಗಚ್ಚಿನ ನೀರಿನೊಂದಿಗೆ ಸೇರಿಸಿ ಜಾನುವಾರುಗಳಿಗೆ ಆಹಾರವಾಗಿ ಕೊಡುತ್ತಿದ್ದರು.

ಗುಜರಾತಿನ ಜುನಾಗಡ್ ಜಿಲ್ಲೆಯ ಖಾಮ್ಡ್ರೋಲ್ ಎಂಬ ಗ್ರಾಮದ ವಲ್ಲಭಭಾಯ್ ಎಂಬ ಹುಡುಗ, ತನ್ನಮನೆಯಲ್ಲೂ ಹೀಗೇ ಕ್ಯಾರೆಟ್ ಅನ್ನು ಜಾನುವಾರಿಗೆ ತಿನ್ನಿಸುವಾಗ, ಒಂದು ದಿನ ಆಕಸ್ಮಿಕವಾಗಿಯೋ ಅಥವಾ ವಯೋಸಹಜ ಕುತೂಹಲದಿಂದಲೋ ಒಂಚೂರು ಕ್ಯಾರೆಟ್ ಅನ್ನು ತಾನೇ ತಿಂದ. ಸಿಹಿಸಿಹಿಯಾಗಿದ್ದ ಆ ಕ್ಯಾರೆಟ್ ಆತನ ಕಣ್ಣರಳಿಸಿತು. ಅಪ್ಪನಿಗೆ “ನಾವು ನಮ್ಮ ಹೊಲದಲ್ಲಿ ಬರೀ ಬೇಳೆ, ಶೇಂಗಾ, ಜೋಳ, ನವಣೆ ಮತ್ತು ರಜ್ಕೋ (ಮೇವಿಗೆ ಬಳಸುವ ಹುಲ್ಲು) ಮಾತ್ರ ಬೆಳೀತಾ ಇದ್ದೀವಿ. ಈ ಇದಿದೆಯಲ್ಲಾ ಕೆಂಪನೆ ಈ ಉದ್ದನೆಯದ್ದು, ಇದನ್ನ ಇನ್ನೂ ಹೆಚ್ಚೆಚ್ಚು ಬೆಳೆದು ಜನರಿಗೆ ಮಾರಬೇಕಪ್ಪಾ. ಚೆನ್ನಾಗಿದೆ ಇದು” ಅನ್ನೋ ಸಲಹೆ ಕೊಟ್ಟದ್ದಕ್ಕೆ, ಅಪ್ಪನಿಂದ ತಲೆಮೇಲೊಂದು ಪಟಕ್ಕನೆ ಪೆಟ್ಟು ಬಿತ್ತಷ್ಟೇ. ಈತನ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಅಪ್ಪನ ಲೇವಡಿಯನ್ನ ಇವನೂ ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ, ಮರುದಿನ ಬೆಳಿಗ್ಗೆ ತಾನೇ ಕ್ಯಾರೆಟ್ಟುಗಳನ್ನ ಅಗೆದು, ತೊಳೆದು ಎರಡು ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ. ಇದು 1943ರ ಕಥೆ. ಆಗಿನ್ನೂ ಅವನಿಗೆ 13 ವರ್ಷ ವಯಸ್ಸು. ಐದನೇ ಕ್ಲಾಸಿಗೇ ಶಾಲೆಗೆ ಹೋಗುವುದನ್ನ ನಿಲ್ಲಿಸಿದ್ದ ವಲ್ಲಭನಿಗೆ, ತಮ್ಮ 5 ಎಕರೆ ಜಮೀನಿನಲ್ಲಿ ಅಪ್ಪನಿಗೆ, ಮನೆಯಲ್ಲಿ ಅಮ್ಮನಿಗೆ ಸಹಾಯಮಾಡುವುದೇ ಕೆಲಸವಾಗಿತ್ತು. ಕ್ಯಾರೆಟ್ಟಲ್ಲದಿದ್ದರೆ ರಜ್ಕೋ ಮೂಟೆ ಹೊತ್ತು ಮಾರಲು ಹೋಗುತ್ತಿದ್ದವ, ಇವತ್ತು ಕ್ಯಾರೆಟ್ ಮೂಟೆ ಹಿಡಿದುಹೊರಟ. ಮತ್ತಷ್ಟು ಓದು »

18
ಮಾರ್ಚ್

ಬದುಕುವ ಹಾದಿಯ ತೋರಿಸಿ ಹೋದ ಮಹಾನಾಯಕ

– ರಾಕೇಶ್ ಶೆಟ್ಟಿ

ಹಿಂದೊಮ್ಮೆ ಗೆಳೆಯರ ಜೊತೆಗೆ ರಾಜಕೀಯ ಮಾತನಾಡುವಾಗ,ನರೇಂದ್ರ ಮೋದಿಯವರ ನಂತರ ಆ ಜಾಗಕ್ಕೆ ಅವರಷ್ಟೇ ಸಮರ್ಥ ಹಾಗೂ ಅವರಂತಹದ್ದೇ ವ್ಯಕ್ತಿತ್ವವುಳ್ಳ ಮತ್ತೊಬ್ಬ ವ್ಯಕ್ತಿ ಬಿಜೆಪಿಯಲ್ಲಿದ್ದಾರೆಯೇ? ಎಂಬ ಪ್ರಶ್ನೆ ಬಂದಿತ್ತು. ಇದ್ದಾರೆ! ಆ ವ್ಯಕ್ತಿಯ ಹೆಸರು ಮನೋಹರ್ ಪರಿಕ್ಕರ್ ಎಂದಿದ್ದೆ. ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದಾಗ ಅವರನ್ನು ಹತ್ತಿರದಿಂದ ನೋಡುವ,ಒಡನಾಡುವ ಅವಕಾಶ ಸಿಕ್ಕಿತ್ತು. ಯಾವುದೇ ಹಮ್ಮುಬಿಮ್ಮಿಲ್ಲದ ಸರಳ ವ್ಯಕ್ತಿತ್ವ ಅವರದ್ದು.

ಪ್ರಧಾನಿ ಮೋದಿಯವರು, ಪರಿಕ್ಕರ್ ಅವರಿಗೆ ತಮ್ಮ ಸಂಪುಟದ ಅತಿ ಮಹತ್ವದ ರಕ್ಷಣಾ ಖಾತೆಯನ್ನು ನೀಡಿದ್ದರು. ಪರಿಕ್ಕರ್ ಅವರು ಒಲ್ಲದ ಮನಸ್ಸಿನಿಂದಲೇ ತಮ್ಮ ರಾಜಕೀಯ ಅಖಾಡ ಗೋವಾವನ್ನು ಬಿಟ್ಟು ದೆಹಲಿಗೆ ಬಂದಿದ್ದರು.ಒಳ್ಳೆಯ ಪ್ಯಾಕೇಜುಗಳು ಯಾವಾಗಲೂ ಲಿಮಿಟೆಡ್ ಎಡಿಷನ್ನಿನಲ್ಲಿ ಬರುತ್ತವಂತೆ. ಪರಿಕ್ಕರ್ ಅವರ ವಿಷಯದಲ್ಲಿ ಈ ಮಾತು ನಿಜವಾಗಿ ಹೋಯಿತು. ೬೩ ನಿಜಕ್ಕೂ ಸಾಯುವ ವಯಸ್ಸಲ್ಲ. ವರ್ಷದ ಹಿಂದೆ ಅವರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಇದೆ ಎಂದಾಗಲೇ ಸ್ವಚ್ಛ ಹಾಗೂ ದಕ್ಷ ರಾಜಕಾರಣದೆಡೆಗೆ ಆಸಕ್ತಿಯಿರುವವರ ಮನಸ್ಸುಗಳು ಮುದುಡಿ ಹೋಗಿತ್ತು. ಒಂದು ವರ್ಷ ಕ್ಯಾನ್ಸರಿನೊಂದಿದೆ ಬಡಿದಾಡುತ್ತಲೇ ಇದ್ದರೂ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅವರು ಮರೆಯಲೇ ಇಲ್ಲ.ತೀರಾ ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದ ನಡುವೆಯೇ ದೈನಂದಿನ ಕೆಲಸಗಳನ್ನು ನಿರ್ವಹಿಸಿದ್ದರು.ಸದನದಲ್ಲಿ ಬಜೆಟ್ ಕೂಡ ಮಂಡಿಸಿದ್ದರು ಪುಣ್ಯಾತ್ಮ.

ಮತ್ತಷ್ಟು ಓದು »

10
ಮಾರ್ಚ್

ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!

– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು

ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.

ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.

ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮತ್ತಷ್ಟು ಓದು »

1
ಮಾರ್ಚ್

ಕಾಲು ಶತಮಾನ ಜನಮಾನಸವನ್ನು ಆಳಿದ ಕತೆಯೊಂದರ ಕತೆ!

– ಸುಜಿತ್‌ ಕುಮಾರ್‌

Yash-Chopra-SRKಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು.  ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಪಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಯೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ ‘ಇಸ್ಟೈಲ’ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ  ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್! ಮತ್ತಷ್ಟು ಓದು »