ಬದುಕುವ ಹಾದಿಯ ತೋರಿಸಿ ಹೋದ ಮಹಾನಾಯಕ
– ರಾಕೇಶ್ ಶೆಟ್ಟಿ
ಹಿಂದೊಮ್ಮೆ ಗೆಳೆಯರ ಜೊತೆಗೆ ರಾಜಕೀಯ ಮಾತನಾಡುವಾಗ,ನರೇಂದ್ರ ಮೋದಿಯವರ ನಂತರ ಆ ಜಾಗಕ್ಕೆ ಅವರಷ್ಟೇ ಸಮರ್ಥ ಹಾಗೂ ಅವರಂತಹದ್ದೇ ವ್ಯಕ್ತಿತ್ವವುಳ್ಳ ಮತ್ತೊಬ್ಬ ವ್ಯಕ್ತಿ ಬಿಜೆಪಿಯಲ್ಲಿದ್ದಾರೆಯೇ? ಎಂಬ ಪ್ರಶ್ನೆ ಬಂದಿತ್ತು. ಇದ್ದಾರೆ! ಆ ವ್ಯಕ್ತಿಯ ಹೆಸರು ಮನೋಹರ್ ಪರಿಕ್ಕರ್ ಎಂದಿದ್ದೆ. ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದಾಗ ಅವರನ್ನು ಹತ್ತಿರದಿಂದ ನೋಡುವ,ಒಡನಾಡುವ ಅವಕಾಶ ಸಿಕ್ಕಿತ್ತು. ಯಾವುದೇ ಹಮ್ಮುಬಿಮ್ಮಿಲ್ಲದ ಸರಳ ವ್ಯಕ್ತಿತ್ವ ಅವರದ್ದು.
ಪ್ರಧಾನಿ ಮೋದಿಯವರು, ಪರಿಕ್ಕರ್ ಅವರಿಗೆ ತಮ್ಮ ಸಂಪುಟದ ಅತಿ ಮಹತ್ವದ ರಕ್ಷಣಾ ಖಾತೆಯನ್ನು ನೀಡಿದ್ದರು. ಪರಿಕ್ಕರ್ ಅವರು ಒಲ್ಲದ ಮನಸ್ಸಿನಿಂದಲೇ ತಮ್ಮ ರಾಜಕೀಯ ಅಖಾಡ ಗೋವಾವನ್ನು ಬಿಟ್ಟು ದೆಹಲಿಗೆ ಬಂದಿದ್ದರು.ಒಳ್ಳೆಯ ಪ್ಯಾಕೇಜುಗಳು ಯಾವಾಗಲೂ ಲಿಮಿಟೆಡ್ ಎಡಿಷನ್ನಿನಲ್ಲಿ ಬರುತ್ತವಂತೆ. ಪರಿಕ್ಕರ್ ಅವರ ವಿಷಯದಲ್ಲಿ ಈ ಮಾತು ನಿಜವಾಗಿ ಹೋಯಿತು. ೬೩ ನಿಜಕ್ಕೂ ಸಾಯುವ ವಯಸ್ಸಲ್ಲ. ವರ್ಷದ ಹಿಂದೆ ಅವರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಇದೆ ಎಂದಾಗಲೇ ಸ್ವಚ್ಛ ಹಾಗೂ ದಕ್ಷ ರಾಜಕಾರಣದೆಡೆಗೆ ಆಸಕ್ತಿಯಿರುವವರ ಮನಸ್ಸುಗಳು ಮುದುಡಿ ಹೋಗಿತ್ತು. ಒಂದು ವರ್ಷ ಕ್ಯಾನ್ಸರಿನೊಂದಿದೆ ಬಡಿದಾಡುತ್ತಲೇ ಇದ್ದರೂ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅವರು ಮರೆಯಲೇ ಇಲ್ಲ.ತೀರಾ ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದ ನಡುವೆಯೇ ದೈನಂದಿನ ಕೆಲಸಗಳನ್ನು ನಿರ್ವಹಿಸಿದ್ದರು.ಸದನದಲ್ಲಿ ಬಜೆಟ್ ಕೂಡ ಮಂಡಿಸಿದ್ದರು ಪುಣ್ಯಾತ್ಮ.