ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 22, 2014

25

ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿದ ಅನಂತಮೂರ್ತಿ

‍ನಿಲುಮೆ ಮೂಲಕ

-ಡಾ ಅಶೋಕ್ ಕೆ ಆರ್. 

kirananna_n

ಜಾತ್ಯತೀತವಾಗಿಯೇ ಬದುಕಿ ಬರೆದು ಬೆಳೆದ ಅವರು ಕುಮಾರಸ್ವಾಮಿ, ದೇವೇಗೌಡರನ್ನು ಇದ್ದಕ್ಕಿದ್ದಂತೆ ಬೆಂಬಲಿಸಿಬಿಡುತ್ತಾರೆ, ಕೆಲವೇ ವರುಷಗಳಲ್ಲಿ ಜೀವನಪರ್ಯಂತ ವಿರೋಧಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸನ್ನು ಸಿದ್ಧರಾಮಯ್ಯನವರ ಮೇಲಿನ ನಂಬುಗೆಯಿಂದ ಗೆಲ್ಲಿಸಿ ಎಂದು ಪತ್ರಿಕಾ ಹೇಳಿಕೆ ಕೊಡುತ್ತಾರೆ. ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಅದರಷ್ಟೇ ಅಪಾಯಕಾರಿ ಎಂಬ ಅರಿವಿದ್ದೂ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಹೇಳಿಬಿಡುತ್ತಾರೆ. ಇನ್ನೊಂದೈದು ವರುಷಗಳು ಅವರು ಬದುಕಿದ್ದರೆ ಮೋದಿ ಸಂಪೂರ್ಣ ಸರಿಯಿಲ್ಲದಿದ್ದರೂ ಪರ್ಯಾಯಗಳಿಲ್ಲದ ಕಾರಣ, ಇರುವ ಪರ್ಯಾಯಗಳು ಮೋದಿಗಿಂತ ಅಪಾಯಕಾರಿಯಾಗಿರುವ ಕಾರಣ ಮೋದಿಯನ್ನೇ ಗೆಲ್ಲಿಸಿದರೆ ಒಳ್ಳೆಯದೇನೋ ಎಂದು ಹೇಳಿಕೆ ನೀಡಿದ್ದರೂ ಅನಂತಮೂರ್ತಿಯವರ ಬಗೆಗೆ ಅಚ್ಚರಿಯಾಗುತ್ತಿರಲಿಲ್ಲ. ಇದು ಅವಕಾಶವಾದಿತನ, ಸ್ವಾರ್ಥಕ್ಕಾಗಿ ಕ್ಷಣಕ್ಕೊಂದು ಬಣ್ಣ ಬದಲಿಸುವ ನೀಚತನ – ಇನ್ನು ಅನೇಕಾನೇಕ ರೀತಿಯಲ್ಲಿ ಅವರನ್ನು ಟೀಕಿಸಿದ್ದರೂ ಅವರದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತಿರಲಿಲ್ಲವೇನೋ. ಯಾಕೆಂದರೆ ಅನಂತಮೂರ್ತಿ (ನಾನವರನ್ನು ಅವರ ಬರಹಗಳ ಮೂಲಕ ತಿಳಿದುಕೊಂಡಂತೆ) ಇದ್ದಿದ್ದೇ ಹಾಗೆ. ಸತ್ಯವೆಂಬುದು ಅವತ್ತಿನ ಆ ಮಟ್ಟಿಗಿನ ವಾಸ್ತವವೇ ಹೊರತು ಅದು ಸರ್ವಕಾಲಿಕ ಸತ್ಯವಾಗಲು ಸಾಧ್ಯವೇ ಇಲ್ಲ ಎಂಬುದು ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.

ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ – ಯು.ಆರ್.ಎ

ಅನಂತಮೂರ್ತಿ ಕೆಲವರಿಗೆ ಮೇಷ್ಟ್ರಾಗಿ, ಕೆಲವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯಾಗಿ, ಇನ್ನು ಹಲವರಿಗೆ ಚಳುವಳಿಕಾರನಾಗಿ ದಕ್ಕಿದರೆ ಬಹುತೇಕರಿಗೆ ಅವರು ದಕ್ಕಿದ್ದು ಅವರ ಬರಹಗಳ ಮೂಲಕ ಲೇಖಕರಾಗಿ. ಅವರ ಕೆಲವು ಇತ್ತೀಚಿನ ಲೇಖನಗಳನ್ನು ಓದುತ್ತಿದ್ದಾಗ ಅವರ ಹಳೆಯ ಲೇಖನಗಳಲ್ಲಿ ಇದಕ್ಕೆ ತದ್ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಂತಿತ್ತಲ್ಲ ಎಂಬ ಆಲೋಚನೆ ಮೂಡಿದರೆ ಅದು ಸಮಾಜದ ಚಲನಶೀಲತೆಯ ಬಗೆಗಿನ ನಂಬುಗೆಯನ್ನು ಧೃಡಪಡಿಸುತ್ತಿತ್ತೇ ಹೊರತು ಅನಂತಮೂರ್ತಿಯವರ ಅನುಕೂಲ ಸಿದ್ಧಾಂತವನ್ನಲ್ಲ. ಒಂದು ಇಸಂಅನ್ನು ಒಪ್ಪಿಕೊಂಡವರು ಆ ಇಸಂನಲ್ಲಿ ತಪ್ಪುಗಳಿದ್ದಾಗ್ಯೂ ಅದನ್ನೇ ಅಪ್ಪಿ ಒಪ್ಪಬೇಕೆನ್ನುವವರಿಗೆ ಅನಂತಮೂರ್ತಿ ದ್ವಂದ್ವದ ಮೂರ್ತಿಯಾಗಿ ಕಂಡಿದ್ದರೆ ಅಚ್ಚರಿಪಡಬೇಕಿಲ್ಲ. ಹಳೆಯ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ಒಪ್ಪುವ ಗುಣ ಎಲ್ಲರಲ್ಲೂ ಕಾಣುವುದು ಕಷ್ಟಸಾಧ್ಯ.

ಅನಂತಮೂರ್ತಿ ಎಂದ ಕೂಡಲೇ ನೆನಪಾಗುವುದು ಅವರ ಸಂಸ್ಕಾರ, ಭಾರತೀಪುರ, ಭವ ಕಾದಂಬರಿಗಳು, ಕಥೆಗಳು ಮತ್ತು ಓದಿ ಅರ್ಥೈಸಿಕೊಂಡವರಿಗೆ ಕವಿತೆಗಳು (ಕವಿತೆಗೂ ನನಗೂ ದೂರ, ಅವರ ಇಲ್ಲಿಯವರೆಗಿನ ಕವಿತೆಗಳನ್ನು ಕಷ್ಟಪಟ್ಟು ಓದಿದ್ದೆ). ಭವ ಏನೂ ಅರ್ಥವಾಗದೆ ಬೋರು ಹೊಡೆಸಿದರೆ ಸಂಸ್ಕಾರ ಬೆಚ್ಚಿ ಬೀಳಿಸಿತ್ತು, ಪ್ರತಿ ಓದಿನಲ್ಲೂ ಹೊಸತೇನನ್ನಾದರೂ ಸೂಚಿಸುತ್ತಿತ್ತು. ಭಾರತೀಪುರದ ಜಗನ್ನಾಥ ಜಾತಿಯಿಂದ ಮೇಲ್ಮೆ ಪಡೆದಿದ್ದೇವೆಂದು ನಂಬುವ ಪ್ರತಿ ಮನೆಯಲ್ಲೂ ಹುಟ್ಟಬಾರದೇ ಎಂದೆನ್ನಿಸಿತ್ತು. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದ ಕಾರಣಕ್ಕೋ ಏನೋ ಅವರ ಕಾದಂಬರಿಗಳಲ್ಲಿ ಜಾತೀಯತೆ ಅಳಿಯಲು ಉಚ್ಛ ಸಮುದಾಯಗಳೆನ್ನಿಸಿಕೊಂಡವರಿಂದಲೇ ಬದಲಾವಣೆ ಬರಬೇಕು ಎನ್ನುವ ಚಿತ್ರಣವಿರುತ್ತಿತ್ತು. ಅವರ ಕಥೆ, ಕಾದಂಬರಿ, ಕವಿತೆಗಳಿಗಿಂತ ಹೆಚ್ಚು ಶ್ರೇಷ್ಟವಾದದ್ದೆಂದರೆ ವಿವಿಧ ಕಾಲಘಟ್ಟದಲ್ಲಿ ಅವರು ಬರೆದ ಸಮಕಾಲೀನ ಸಂದರ್ಭಕ್ಕನುಗುಣವಾದ ಲೇಖನಗಳು. ಅವರ ದೂರದರ್ಶಿತ್ವಕ್ಕೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಶಾಲೆಗಳಲ್ಲಿರಬೇಕು, ಸಮಾಜ ವಿಜ್ಞಾನವನ್ನು ಕನ್ನಡದಲ್ಲೂ, ಗಣಿತ ಮತ್ತು ವಿಜ್ಞಾನವನ್ನು ಇಂಗ್ಲೀಷಿನಲ್ಲೂ ಪಠ್ಯವಾಗಿಸಬೇಕು ಎಂಬವರ ವಿಚಾರವೇ ಸಾಕು. ಅಂದೇ ಅದು ಅನುಷ್ಠಾನಗೊಂಡಿದ್ದರೆ ಇವತ್ತಿನ ಮಕ್ಕಳಲ್ಲಿ ಕನ್ನಡ ಅಧೋಗತಿಗಿಳಿಯುತ್ತಿರಲಿಲ್ಲ, ಕನ್ನಡದ ಬಗ್ಗೆ ಅಸಡ್ಡೆಯೂ ಬೆಳೆಯುತ್ತಿರಲಿಲ್ಲ.

ಲೇಖಕನಾದವನು ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಕಾಫಿ ಹೀರುತ್ತ, ಅಭ್ಯಾಸವಿದ್ದರೆ ಸಿಗರೇಟು ಸೇದುತ್ತಾ ಬರೆಯುತ್ತಾ ಕುಳಿತರೆ ಸಾಕು ಎಂಬ ಮನಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮಲ್ಲನೇಕರು ಮಾಡುತ್ತಿರುವುದೇ ಅಷ್ಟನ್ನು. ಲೇಖಕನ ಕೆಲಸ ಬರೆಯುವುದು ಉಳಿದಿದ್ದರ ಉಸಾಬರಿ ಯಾಕೆಂದು ಕೇಳುವುದು ಒಂದು ಕೋನದಲ್ಲಿ ಸರಿಯೆಂದೇ ತೋರುತ್ತದಾದರೂ ರಹಮತ್ ತರೀಕೆರೆಯವರು ಒಂದೆಡೆ ಬರೆದಿರುವಂತೆ “ಕನ್ನಡದ ಮಟ್ಟಿಗೆ ಸಾಹಿತ್ಯದ ವಿದ್ಯಾರ್ಥಿ ಆಗುವುದು ಎಂದರೇನೇ ರಾಜಕೀಯ ಪ್ರಜ್ಞೆ ಪಡೆಯುವುದು” ಎಂದು ಹೇಳಿರುವುದರ ಅರ್ಥ ಅನಂತಮೂರ್ತಿಯವರನ್ನು ನೋಡಿದರೆ ತಿಳಿಯುತ್ತದೆ. ಸಮಾಜದಲ್ಲಿ ಇಂತಹದೊಂದು ಘಟನೆ ನಡೆದಿದೆ, ಅದರ ಬಗ್ಗೆ ನನ್ನ ಅಭಿಪ್ರಾಯ ಈ ರೀತಿಯದ್ದಾಗಿದೆ, ಅದು ತಪ್ಪೋ ಸರಿಯೋ ಎಂಬುದನ್ನು ಕಾಲ ನಿರ್ಧರಿಸುತ್ತದೆ ಎಂಬ ಮನೋಭಾವ ಅನಂತಮೂರ್ತಿಯವರದು.

‘ಅನಂತಮೂರ್ತಿಯವರು ಈ ರೀತಿಯಾಗಿ ಹೇಳಿದರು, ಈ ರೀತಿಯಾಗಿ ಬರೆದರು’ ಎಂದು ಒಬ್ಬರ್ಯಾರೋ ಹೇಳಿದ್ದನ್ನು ಮತ್ತೊಬ್ಬರು ಮತ್ತೊಂದು ರೀತಿಯಲ್ಲಿ ಹೇಳಿ ಕೊನೆಗೆ ಅನಂತಮೂರ್ತಿಯವರು ನಿಜವಾಗಿಯೂ ಹೇಳಿದ್ದೇನು, ಬರೆದಿದ್ದೇನು ಎಂಬುದೇ ತಿಳಿಯದಾದ ಪರಿಸ್ಥಿತಿ ನಿರ್ಮಾಣವಾಗಿದ್ದೇ ಅಧಿಕ. ಇತ್ತೀಚಿನ ‘ದೇವರ ಮೂರ್ತಿ ಮೇಲೆ ಉಚ್ಛೆ ಉಯ್ಯುವಂತೆ ಅನಂತಮೂರ್ತಿ ಹೇಳಿದ್ದರು’ ಎಂದು ಕಲುಬುರ್ಗಿಯವರು ಹೇಳಿ ವಿವಾದವಾಗಿತ್ತು. ಎಲ್ಲರೂ ಅನಂತಮೂರ್ತಿಯವರ ಮೇಲೆ ಮುಗಿಬಿದ್ದರು. ಅವರು ಬರೆದಿದ್ದೇ ಬೇರೆ, ಕಲುಬುರ್ಗಿಯವರು ಹೇಳಿದ್ದೇ ಬೇರೆ ಎಂಬುದರಿವಾದ ನಂತರವೂ ಅನೇಕರು ಇನ್ನೂ ಅವರ ಮೇಲೆ ಕಿಡಿಕಾರುತ್ತಾರೆ! ಅನಂತಮೂರ್ತಿಯವರನ್ನು ಜನರು ಅರ್ಥ ಮಾಡಿಕೊಂಡದ್ದಕ್ಕಿಂತ ಓದಿದವರು ತಿರುಚಿದ ಸಂಗತಿಗೆ, ಓದದೇ ವ್ಯಕ್ತಪಡಿಸಿದವರ ಅಭಿಪ್ರಾಯಕ್ಕೆ ಕೊಟ್ಟ ಮಹತ್ವದ ಕಾರಣಕ್ಕೆ ಅವರನ್ನು ಅಪಾರ್ಥ ಮಾಡಿಕೊಂಡವರೇ ಹೆಚ್ಚು. ವಿಚಾರಾತ್ಮಕ ನಿಂದನೆ ಮಾಡದೆ ವೈಯಕ್ತಿಕ ಕುಟಿಲತೆಯಿಂದ ಅನಂತಮೂರ್ತಿಯವರನ್ನು ಟೀಕಿಸಿದವರು ಅವರ ಪುಸ್ತಕಗಳನ್ನೊಮ್ಮೆ ಈಗಲಾದರೂ ಓದಿಕೊಳ್ಳಬೇಕು. ಯಾಕೆಂದರೆ ಇನ್ನವರ ಪುಸ್ತಕ ಮತ್ತು ವಿಚಾರಗಳಷ್ಟೇ ನಮ್ಮ ಬಳಿ ಉಳಿದಿವೆ.

***********************
ಚಿತ್ರ ಕೃಪೆ : ಕಿರಣ್ ಮಾಡಾಳು

25 ಟಿಪ್ಪಣಿಗಳು Post a comment
  1. hemapathy
    ಆಗಸ್ಟ್ 22 2014

    ನಿಮ್ಮ ಅನಿಸಿಕೆ ನಿಜ ಡಾ.ಅಶೋಕ್ ರವರೇ! ನಾವು ಒಬ್ಬ ಮುತ್ಸದ್ಧಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಮಾಡಿಕೊಳ್ಳುತ್ತೇವೆ.

    ಉತ್ತರ
  2. ಆಗಸ್ಟ್ 22 2014

    [[ಅವರು ಬರೆದಿದ್ದೇ ಬೇರೆ, ಕಲುಬುರ್ಗಿಯವರು ಹೇಳಿದ್ದೇ ಬೇರೆ ]]
    ಅವರು ಬರೆದದ್ದು ಏನು, ಕಲಬುರ್ಗಿಯವರು ಹೇಳಿದ್ದು ಏನು, ಎಂಬುದನ್ನು ನೀವು ನಿಮ್ಮ ಲೇಖನದಲ್ಲಿ ಸ್ಪಷ್ಟ ಪಡಿಸಿದ್ದರೆ, ಅಷ್ಟರಮಟ್ಟಿಗೆ ಅಪಾರ್ಥ ದೂರವಾಗುತ್ತಿತ್ತು ಅಲ್ಲವೆ?
    ಈಗಲಾದರೂ ಸತ್ಯವನ್ನು ಹೇಳಿ ಗೊಂದಲ ದೂರ ಮಾಡಿ.

    ಉತ್ತರ
    • ಆಗಸ್ಟ್ 23 2014

      ನಮ್ಮೂರಿನ ಕಡೆ ರಾತ್ರಿ ಹೊತ್ತು ಹೊರಗಿದ್ದಾಗ ದೆವ್ವ ಬಂತು ಎಂದರೆ ಸುತ್ತ ಉಚ್ಛೆ ಉಯ್ದು ಮಧ್ಯದಲ್ಲಿ ನಿಂತರೆ ದೆವ್ವ ನಮ್ಮನ್ನು ಹಿಡಿಯುವುದಿಲ್ಲ ಎಂದಿತ್ತು ಅವರ ಬರಹ…

      ಉತ್ತರ
  3. Nagshetty Shetkar
    ಆಗಸ್ಟ್ 22 2014

    ಅನಂತಮೂರ್ತಿ ಸಾಯುತ್ತಾರೆ ಅಂತ ಸುಳಿಹು ಸಿಕ್ಕ ಕೂಡಲೇ ಬರೆದಿಟ್ಟು ಅವರ ಅಂತಿಮ ಕ್ಷಣಕ್ಕೆ ಕಾಯುತ್ತ ಕುಳಿತ ಬರಹ ಇದು. ನಿಲುಮೆ ಕೂಡ ಈ ಸಮಯಕ್ಕಾಗಿ ಕಾಯುತ್ತಿತ್ತು ಅಂತ ಕಾಣುತ್ತದೆ.

    ಉತ್ತರ
    • ಆಗಸ್ಟ್ 25 2014

      ಖಂಡಿತವಾಗಿ ಇದು ಅನಂತಮೂರ್ತಿಯವರ ಸಾವಿಗೆ ಕಾಯುತ್ತ ಬರೆದ ಲೇಖನವಲ್ಲ! ಯಾರ ಸಾವಿಗೂ ಕಾದು ಕುಳಿತುಕೊಳ್ಳುವಷ್ಟರ ಮಟ್ಟಿಗೆ ನನ್ನ ಸಂಸ್ಕೃತಿ ವಿಕೃತವಾಗಿಲ್ಲ!
      – ಡಾ ಅಶೋಕ್ ಕೆ ಆರ್.

      ಉತ್ತರ
  4. ರಮ್ಮಿಗ
    ಆಗಸ್ಟ್ 22 2014

    ಏನಿದು ನಿಲುಮೆಯಲ್ಲಿ ಅನಂತಮೂರ್ತಿಯವರ ಗುಣಗಾನ?!!

    ಉತ್ತರ
  5. ಸಂತೋಷ
    ಆಗಸ್ಟ್ 22 2014

    ಶ್ರಾದ್ಧಾಂಜಲಿ ಅನಂತಮೂರ್ತಿಯವರಿಗೆ.

    ಅವರ ಕೊಡುಗೆ ಕನ್ನಡಕ್ಕೆ ಅಪಾರ.

    ಉತ್ತರ
  6. Nagshetty Shetkar
    ಆಗಸ್ಟ್ 23 2014

    ಅನಂತಮೂರ್ತಿ ನಮ್ಮ ಕಾಲದ ಶ್ರೇಷ್ಠ ಕಾಯಕ ಯೋಗಿ. ಬಸವಣ್ಣನವರ ಮಾರ್ಗವನ್ನು ಸಾಹಿತ್ಯದಲ್ಲಿ ಆಚರಿಸಿದ ಮಹಾ ಶರಣ. ಅಂತಹ ದಿಗ್ಗಜನಿಗೆ ಈ ವರ್ಷದ ಬಸವಶ್ರೀ ಪ್ರಶಸ್ತಿ ಕೊಟ್ಟು ಗೌರವಿಸುವ ಕೆಲಸ ಮಾಡಿದ್ದು ದರ್ಗಾ ಸರ್ ಅವರ ನೇತೃತ್ವದ ಸಮಿತಿ. ಎಲ್ಲ ರಾಜಕೀಯ ಒತ್ತಡಗಳ ನಡುವೆಯೂ ಅನಂತಮೂರ್ತಿ ಅವರಿಗೆ ಪ್ರಶಸ್ತಿ ಕೊಡಲು ನಿರ್ಧರಿಸಿದ ದರ್ಗಾ ಸರ್ ಸಮಿತಿ ನಿಜಕ್ಕೂ ಹೊಗಳಿಕೆಗೆ ಅರ್ಹ. ಅನಂತಮೂರ್ತಿ ಅವರು ಕನ್ನಡ ಸಾಹಿತ್ಯದಲ್ಲಿ ಬಿತ್ತಿದ ಕ್ರಾಂತಿಯ ಕಿಡಿ ಸಮಾಜದ ಪ್ರತಿಗಾಮಿ ಶಕ್ತಿಗಳನ್ನು ಸದೆ ಬಡಿಯುವ ಶಕ್ತಿಯಾಗಿ ಬೆಳೆಯುತ್ತಿದೆ. ವಚನಕಾರರ ಹಾದಿಯಲ್ಲಿ ನಡೆಯುವ ಮೂಲಕ ನಾವೆಲ್ಲಾ ಅನಂತಮೂರ್ತಿ ಅವರಿಗೆ ನಮನ ಸಲ್ಲಿಸಬಹುದಾಗಿದೆ.

    ಉತ್ತರ
    • ವಿಜಯ್ ಪೈ
      ಆಗಸ್ಟ್ 24 2014

      ಕೆಲವರ ಕೈ ಎಲ್ಲಿಯಾದರೂ ಬೆಂಕಿ ಹತ್ತಿದ್ದು ನೋಡಿದ್ರೆ..ಕಿಸೆಯಲ್ಲಿ ಬೀಡಿ ಪಟ್ಟಣ ತಡಕುವುದಂತೆ..ಒಂದು ಕಡ್ಡಿ ಉಳಿಸಬಹುದಲ್ಲ ಅಂತ. ಈ ಸಾಹೇಬರು ಇಲ್ಲಿ ಕೂಡ ಕೂಡ ತಮ್ಮ ಕಂಪನಿಯ ಪುಂಗಿನಾದ ಮುಂದುವರೆಸಿದ್ದನ್ನು ನೋಡಿ ಈ ಮಾತು ನೆನಪಿಗೆ ಬಂತು!.

      ಉತ್ತರ
  7. vittal m bhajantri
    ಆಗಸ್ಟ್ 23 2014

    ಶ್ರಾದ್ಧಾಂಜಲಿ
    ಅನಂತಮೂರ್ತಿಯವರಿಗೆ.
    ಅವರ ಕೊಡುಗೆ ಕನ್ನಡಕ್ಕೆ
    ಅಪಾರ.ಪ್ರತಿಯೋಬ್ಬ ಕನ್ನಡಿಗರ ಮನದಲ್ಲಿ ಪ್ರತಿ ಕ್ಷಣಕ್ಕೂ ನೆನಫಿರಲಿ ಅವರ ಹೆಸರು

    ಉತ್ತರ
  8. Nagshetty Shetkar
    ಆಗಸ್ಟ್ 24 2014

    “ಅನಂತಮೂರ್ತಿ ಅವರ ಅಂತ್ಯಕ್ರಿಯೆ ಇಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಗ್ರಾಮದ ಆವರಣದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವದೊಂದಿಗೆ ವೈದಿಕ ವಿಧಿ ವಿಧಾನಗಳ ಪ್ರಕಾರ ನಡೆಯಿತು.”

    ಮೇಷ್ಟ್ರು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಮಾತ್ರ ಅವರನ್ನು ಸತ್ತರೂ ಬಿಡಲಿಲ್ಲ. :((((((((((((((((((

    ಉತ್ತರ
    • Nagshetty Shetkar
      ಆಗಸ್ಟ್ 24 2014

      “ಪುರೋಹಿತ ಸೂರ್ಯನಾರಾಯಣ ಶಾಸ್ತ್ರಿ ನೇತೃತ್ವದ ತಂಡ, ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟಿತು. ಅಂತ್ಯಕ್ರಿಯೆಯಲ್ಲಿ ವೈದಿಕರು ಲಯಬದ್ಧವಾಗಿ ಪಠಿಸುತ್ತಿದ್ದ ವೇದ ಮಂತ್ರಗಳು ಕಲಾಗ್ರಾಮದ ತುಂಬ ಧ್ವನಿಸಿದವು.”

      ಮೇಷ್ಟರ ಆತ್ಮಕ್ಕೆ ಇದರಿಂದ ಬಹಳ ನೋವಾಗಿರುತ್ತದೆ ಅನುಮಾನವೇ ಇಲ್ಲ.

      ಉತ್ತರ
      • ವಿಜಯ್ ಪೈ
        ಆಗಸ್ಟ್ 24 2014

        ನಿಮಗಾದ ದು:ಖಕ್ಕೆ ಖೇದವಿದೆ..ಸಮಾಧಾನ ಮಾಡಿಕೊಳ್ಳಿ.
        [ಮೇಷ್ಟರ ಆತ್ಮಕ್ಕೆ ಇದರಿಂದ ಬಹಳ ನೋವಾಗಿರುತ್ತದೆ ಅನುಮಾನವೇ ಇಲ್ಲ.]
        ಮುಂದೊಂದು ದಿನ ತಿಳಿದುಬರಬಹುದು. ಅಲ್ಲಿ ತನಕ ಶಾಂತಿಯಿರಲಿ!

        ಉತ್ತರ
      • shripad
        ಆಗಸ್ಟ್ 24 2014

        ಇದಕ್ಕೂ ಮುಂಚೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಾಡಿದ ನಿಮ್ಮ ಕ್ರಾಂತಿ ಗೀತೆಗಳು, ಯೇಸು ಸುವಾರ್ತೆಗಳು ಹಾಗೂ ಕುರಾನ್ ವಚನಗಳು ಮೆಜೆಸ್ಟಿಕ್ ವರೆಗೆ ಅನುರಣಿಸಿವೆ!

        ಉತ್ತರ
      • ಆಗಸ್ಟ್ 25 2014

        http://www.mediasyndicate.in/20140824141812

        “…..There was one more reason for the children to take the decision. U. R. Ananthamurthy had performed the Shraddha rituals of his parents in accordance with the tradition. He had gone to Gaya for this purpose……”

        ಉತ್ತರ
    • prasad
      ಆಗಸ್ಟ್ 25 2014

      It was his wish to be cremated with vaidik rituals.

      ಉತ್ತರ
      • ಆಗಸ್ಟ್ 25 2014

        This is a lie. Sir wanted his body to be given to a hospital for the benefit of medical students.

        ಉತ್ತರ
        • shripad
          ಆಗಸ್ಟ್ 25 2014

          ಆಯ್ತು ಬಿಡಿ. ಅವರ ಇಚ್ಛೆಯನ್ನು ಅವರ ಮನೆಯವರು ನಿಮ್ಮಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಿಲ್ಲ ಅನಿಸುತ್ತದೆ. ಅಷ್ಟಕ್ಕೂ ಯುಆರ್ ಎ ಲಿಂಗಕ್ಯರಾಗಿದ್ದಾರೆ ಎಂದೇ ತಿಳಿಯೋಣ ಏನು ತಪ್ಪು?

          ಉತ್ತರ
          • shripad
            ಆಗಸ್ಟ್ 25 2014

            ಲಿಂಗೈಕ್ಯ ಎಂದಾಗಬೇಕು. ಐತ್ವವೇ ಐಕ್ಯವಾಗಿತ್ತು, ಕ್ಷಮಿಸಿ.

            ಉತ್ತರ
        • prasad
          ಆಗಸ್ಟ್ 25 2014

          @Shetkar,

          http://www.firstpost.com/india/ananthamurthy-cremated-full-state-honours-1678615.html
          The last rites were conducted as per Hindu traditions fulfiling the wishes of Ananthamurthy, who was equally brilliant in Kannada and English writing

          ಉತ್ತರ
          • Nagshetty Shetkar
            ಆಗಸ್ಟ್ 29 2014

            _http://www.vartamaana.com/2014/08/26/%E0%B2%A8%E0%B2%BE%E0%B2%B0%E0%B2%A3%E0%B2%AA%E0%B3%8D%E0%B2%AA-%E0%B2%AC%E0%B3%8D%E0%B2%B0%E0%B2%BE%E0%B2%B9%E0%B3%8D%E0%B2%AE%E0%B2%A3%E0%B2%A4%E0%B3%8D%E0%B2%B5%E0%B2%B5%E0%B2%A8%E0%B3%8D%E0%B2%A8/

            “ಸಂಸ್ಕಾರದಂತಹ ‘ಕ್ಲಾಸಿಕ್’ ಕಾದಂಬರಿಯನ್ನು ಬರೆದಂತಹ ಅನಂತಮೂರ್ತಿಯವರ ಸಂಸ್ಕಾರದ ರೀತಿ ನನಗಂತೂ ಸ್ವಲ್ಪವೂ ಸರಿಬರಲಿಲ್ಲ. 24bidತನ್ನ ಬ್ರಾಹ್ಮಣತ್ವವನ್ನು ಯಾವತ್ತೂ ಓರೆಗಲ್ಲಿಗೆ ಹಚ್ಚಿದಂತೆ ಬದುಕುತ್ತಿದ್ದ ಅವರಿಗೆ ಈ ರೀತಿಯ ವೇದ ಮಂತ್ರ ಘೋಷದ ಸಂಸ್ಕಾರ ಬೇಕಿತ್ತೆ? ಖಾಸಗೀ ವಾಹಿನಿಗಳ ದೃಶ್ಯ ವೈಭವ ಶ್ರೀಕಂಠದತ್ತ ಒಡೆಯರ್ ಸಂಸ್ಕಾರವನ್ನು ನೆನಪಿಸುವ ರೀತಿಯಲ್ಲಿತ್ತು. ಈ ಸಂಸ್ಕಾರದ ಅಗತ್ಯವಿತ್ತೇ?”

            ಉತ್ತರ
            • ಸೆಪ್ಟೆಂ 1 2014

              Nagshetty Shetkar ಅವರೇ,

              ನಿಮ್ಮ ನಂಬಿಕೆ ನಿಮಗೆ, ಅನಂತಮೂರ್ತಿಯವರ ನಂಬಿಕೆ ಅನಂತಮೂರ್ತಿಯವರಿಗೆ.
              ನೀವು ಅವರನ್ನು ಅವರ ಕಾದಂಬರಿಯ ಪಾತ್ರಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವಿರಿ. ಆದರೆ, ಅವರು ಕಾದಂಬರಿಯಲ್ಲಿ ಒಂದು ರೀತಿ ಕಂಡರೆ, ‘ನಿಜ’ವಾದ ಅನಂತಮೂರ್ತಿ ಬೇರೆಯೇ ಆಗಿದ್ದರು ಎನ್ನುವುದು ನಿಮಗೆ ಅರ್ಥವಾಗುತ್ತಿಲ್ಲ.

              ಅನಂತಮೂರ್ತಿಯವರ ತಾಯಿ-ತಂದೆಯರು ತೀರಿಕೊಂಡಾಗ, ತಮ್ಮ ಮನೆಯ ನಂಬಿಕೆಗಳಾದ ವೈದಿಕ ಆಚರಣೆಗಳನ್ನೇ ಮಾಡಿದ್ದು ನಿಮಗೆ ತಿಳಿದಿಲ್ಲವೇ? ಅದು ಅವರ ತಂದೆ-ತಾಯಿಯರ ಆಸೆ ಎಂದೇ ನೀವು ಹೇಳುತ್ತೀರಿ ಎಂದಿಟ್ಟುಕೊಳ್ಳೋಣ.
              ಮುಂದೆ ಅನಂತಮೂರ್ತಿಯವರ ಮನೆಯ ‘ಗೃಹಪ್ರವೇಶ’ ನಡೆಯಿತು. ಅಂದು ಅವರು ತಮ್ಮ ಮನೆಗೆ ಹಸುವನ್ನು ತರಿಸಿ, ಅದರ ಬಾಲವನ್ನು ಹಿಡಿದುಕೊಂಡು ಹೊಸ ಮನೆಯ ಒಳಗೆ ಪ್ರವೇಶಿಸಿದ್ದರು. ಇದನ್ನೇನೂ ಅವರು ಬೇರೆಯವರ ಒತ್ತಾಯಕ್ಕೆ ಮಾಡಿದ್ದಲ್ಲ ಅಲ್ಲವೇ?

              ಅನಂತಮೂರ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರನ್ನು ಕನ್ನಡದ ಪ್ರಸಿದ್ಧ ಪತ್ರಿಕೆಯೊಂದು ಸಂದರ್ಶಿಸಿತ್ತು. ಆ ಸಂದರ್ಶನದಲ್ಲಿ ಅವರು, “ಕನ್ನಡದ ಮಕ್ಕಳು ರಾಮಾಯಣ, ಮಹಾಭಾರತ ಓದಬೇಕು. ನಮ್ಮ ಬೇರುಗಳಿಗೆ ನಾವು ಮರಳಬೇಕು (We should go back to our roots)” ಎಂದು ಹೇಳಿದ್ದರು.
              ನಮ್ಮ ಬೇರುಗಳಿಗೆ ಮರಳುವುದಕ್ಕೆ ರಾಮಾಯಣ, ಮಹಾಭಾರತ ಓದಬೇಕೆಂದು ಅನಂತಮೂರ್ತಿಯವರು ಏಕೆ ಹೇಳಿದರು? ಮತ್ತು ರಾಮಾಯಣ-ಮಹಾಭಾರತಗಳು ವೈದಿಕ ಭಾರತದ ಪ್ರತಿಕೃತಿಗಳೇ ಅಲ್ಲವೇ?

              ನೀವು ತಿಳಿದಿದ್ದ ಅನಂತಮೂರ್ತಿಯೇ ಬೇರೆ. ‘ನಿಜ’ವಾದ ಅನಂತಮೂರ್ತಿಯೇ ಬೇರೆ.
              ಹೊರಗೆ ಕಾಣುತ್ತಿದ್ದ ಅನಂತಮೂರ್ತಿ ಬೇರೆ, ‘ಒಳಗಿದ್ದ’ ಅನಂತಮೂರ್ತಿ ಬೇರೆ.

              ನಿಮ್ಮ ಪ್ರತಿಕ್ರಿಯೆಯನ್ನು ಓದುತ್ತಿದ್ದರೆ, ನಿಮಗೆ ಅನಂತಮೂರ್ತಿಯಂತಹ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಸಾಹಿತಿಗಳು ತೀರಿಕೊಂಡದ್ದು ದುಃಖವೆನಿಸಿಲ್ಲ. ಆದರೆ, ಅವರು ಸತ್ತಾಗ ಆಚರಿಸಿದ ಆಚರಣೆಗಳೇ ಹೆಚ್ಚು ದುಃಖ ತಂದಿವೆ.
              ಮೊದಲು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದನ್ನು, ಮನುಷ್ಯರ ದುಃಖಗಳಿಗೆ ಸ್ಪಂದಿಸುವುದನ್ನು ಕಲಿಯಿರಿ.
              ಜಾತಿ-ಆಚರಣೆಗಳು-ಸಂಪ್ರದಾಯ-ಪ್ರಗತಿವಾದ ಇಂತಹ ‘ಮೂಢನಂಬಿಕೆ’ಗಳೇಲ್ಲಾ ಆಮೇಲೆ.

              ಉತ್ತರ
              • Nagshetty Shetkar
                ಸೆಪ್ಟೆಂ 1 2014

                “ನಿಮಗೆ ಅನಂತಮೂರ್ತಿಯಂತಹ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಸಾಹಿತಿಗಳು ತೀರಿಕೊಂಡದ್ದು ದುಃಖವೆನಿಸಿಲ್ಲ”

                ಅವರ ಅಗಲಿಕೆ ಖಂಡಿತ ದುಃಖವನ್ನುಂಟು ಮಾಡಿದೆ. ಆದರೆ ಮೇಷ್ಟರು ತೀರಿಕೊಂಡದ್ದು ಸಕಾಲದಲ್ಲೇ ಅಂತ ನನ್ನ ಅಭಿಪ್ರಾಯ. ಮೇಷ್ಟರಿಗೆ ೮೦ಕ್ಕೂ ಹೆಚ್ಚು ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅವರ ಆರೋಗ್ಯ ಸರಿ ಇರಲಿಲ್ಲ. ಅವರು ಇನ್ನೂ ಕೆಲ ವರ್ಷ ಬದುಕಿದ್ದರೆ ಅವರ ಬದುಕಿನಲ್ಲಿ ಸ್ವಾರಸ್ಯವಿರುತ್ತಿರಲಿಲ್ಲ. ಕುಟುಂಬದವರಿಗೂ ಹಿಂಸೆ ಆಗುತ್ತಿತ್ತು. ಮತ್ತು ಅವರ ಚಿಕಿತ್ಸೆಗೆ ಹಣ ಕೊಡಲು ಸರಕಾರ ಮುಂದಾಗುತ್ತಿತ್ತೆ?

                ಉತ್ತರ
  9. ವಿಜಯ್ ಪೈ
    ಆಗಸ್ಟ್ 25 2014

    ಪ್ರಶ್ನಿಸಬಹುದಾಗಿದ್ದು ಸಾಕಷ್ಟಿದೆ. ಗೊಂದಲ ಹುಟ್ಟಿಸುವ ದ್ವಂಧ್ಮಗಳು ಸಾಕಷ್ಟಿವೆ. ಆದರೆ ಟೀಕೆ-ಟಿಪ್ಪಣಿಗೆ ಇದು ಸಮಯವಲ್ಲ. ಒಟ್ಟಿನಲ್ಲಿ ಸತ್ಯ ಕೂಡ ಚಲನಶೀಲ ಎಂದರಿವು ಮೂಡಿಸಿಕೊಂಡು, ಅದಕ್ಕೆ ಉದಾಹರಣೆಯಾದರು ಅ.ಮೂಗಳು. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ.

    ಉತ್ತರ
  10. Nagshetty Shetkar
    ಸೆಪ್ಟೆಂ 2 2014

    “ಈಗ ಅವರ ಶಿಷ್ಯರೆಂದು ಹೆಮ್ಮೆ ಪಡುವ ನಾವು ನಿರ್ಧರಿಸಿದ್ದೇವೆ. ಗುರುಗಳು ತಮ್ಮ ಬದುಕಿನ ಉದ್ದಕ್ಕೂ ಮಾಡಿದ, ಸಂಘ ಪರಿವಾರದವರ ಕೋಮುವಾದ ಮತ್ತು ಫ್ಯಾಸಿಸ್ಟ್ ಮನೋಭಾವದ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ನಮ್ಮ ಗುರು ಅನಂತಮೂರ್ತಿಯವರು ನಿಜವಾದ ಪ್ರಜಾಪ್ರಭುತ್ವವಾದಿಗಳಾಗಿದ್ದರು, ಸರ್ವೋದಯ ಬಯಸುವ ಸಮಾಜವಾದಿ ಆಗಿದ್ದರು. ಅವರ ಕನಸಿನ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ತಾತ್ವಿಕ ಹೋರಾಟ ನಡೆಸುವುದೇ ನಾವು ನಮ್ಮ ಗುರುಗಳಿಗೆ ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿಯಾಗಿರುತ್ತದೆ.”

    _http://ladaiprakashanabasu.blogspot.in/2014/09/blog-post_1.html

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments