ಜ್ಞಾನಿಗಳಿಗೆ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹ ಬುದ್ದಿವಂತರಿಗೆ ಸಾವಿದೆ!
– ಮಹೇಂದ್ರ ಕುಮಾರ್
ಸ್ವಾಮಿ ವಿವೇಕಾನಂದರು ಮತ್ತು ದಾವೂದ್ ಇಬ್ರಾಹಿಂ, ಇಬ್ಬರೂ ಸಮಾನ ಬುದ್ದಿವಂತರು. ಸ್ವಾಮಿ ವಿವೇಕಾನಂದರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡಿಸಿಕೊಂಡರು. ಆದರೆ ದಾವೂದ್ ಇಬ್ರಾಹಿಂ ದುರುಪಯೋಗ ಪಡಿಸಿಕೊಂಡ. ಈ ಹೇಳಿಕೆಯನ್ನು ದೇಶದ ಮಹಾನ್ ರಾಷ್ಟ್ರಭಕ್ತಿಯ ಪ್ರತೀಕ ಎಂದು ಹೇಳಿಕೊಳ್ಳುವ ಭಾರತೀಯ ಜನತಾಪಕ್ಷದ, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಏಕಾಏಕಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಾಯಿಂದ ಉದುರಿರುವ ಅಣಿಮುತ್ತುಗಳು..
ಹೇಳಿಕೇಳಿ ಈತ ದೇಶಭಕ್ತರನ್ನು ಹುಟ್ಟು ಹಾಕುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು. ಪ್ರತೀ ವರ್ಷ ವಿವೇಕಾನಂದ ಜಯಂತಿಯನ್ನು ಆಚರಿಸುವ ಪಕ್ಷದ ರಾಷ್ಟ್ರನಾಯಕ. ಇಷ್ಟೇ ಅಲ್ಲದೇ ರಾಷ್ಟ್ರೀಯ ಕಾರ್ಯಕಾರಣಿಗಳಿಂದ ಹಿಡಿದು ಸಣ್ಣ ಸಣ್ಣ ಕಾರ್ಯಕ್ರಮಗಳವರೆಗೂ ವಿವೇಕಾನಂದರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷದ ಮುಂದಾಳು.
ಈ ಹೇಳಿಕೆಯನ್ನು ಕೊಡುವಾಗ ಒಂದೋ ತಲೆ ಕೆಟ್ಟಿರಬೇಕು, ಇಲ್ಲವಾದಲ್ಲಿ ವಿವೇಕಾನಂದರ ಬಗ್ಗೆ ಮತ್ತು ಅವರ ಆದರ್ಶ ಚಿಂತನೆಗಳ ಬಗ್ಗೆ ಯಾವುದೇ ಅರಿವಿಲ್ಲದೇ ಒಬ್ಬ ಸಾದಾರಣ ಇವರ ನಾಯಕರೆಂದು ಭಾವಿಸಿರಬೇಕು.. ವಿವೇಕಾನಂದರ ಬಗ್ಗೆ ಸಣ್ಣ ಅರಿವೂ ನಿತಿನ್ ಗಡ್ಕರಿಗೆ ಇದ್ದಿದ್ದೇ ಆದಲ್ಲಿ ಆತನ ಬಾಯಿಂದ ಈ ಮಾತುಗಳು ಹೊರಬರುತ್ತಿರಲಿಲ್ಲ. ಇವರುಗಳಿಗೆ ಆದರ್ಶ ವ್ಯಕ್ತಿಗಳು ಬಳಕೆಗೆ ಮಾತ್ರಾ…
ಜನರನ್ನ ದಿಕ್ಕುತಪ್ಪಿಸಲು ಇವರ ಪ್ರೇರಣಾದಾಯಕ ಆದರ್ಶಗಳನ್ನ ತಿರುಚಿ ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಬುದ್ದಿವಂತಿಕೆ ಇರುವ ಇವರುಗಳು ಯಾವುದಾದರೂ ಒಳ ಅಜೆಂಡಾ ಇಟ್ಟುಕೊಂಡು ಅಸಹ್ಯಕರ ಮಾನಸಿಕತೆಯಿಂದ ಈ ಮಾತುಗಳನ್ನ ಹೇಳಿರುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ..ದಾವೂದ್ ಬುದ್ದಿವಂತ ಹಾಗೆಯೇ ನಿತಿನ್ ಗಡ್ಕರಿ ಸಹಾ ಬುದ್ದಿವಂತ. ದಾವೂದ್ ತನ್ನ ಬುದ್ದಿವಂತಿಕೆಯನ್ನ ಸಮಾಜ ಘಾತುಕ ಕೆಲಸಕ್ಕೆ ಬಳಸಿದ. ಗಡ್ಕರಿ ತನ್ನ ಉಧ್ಯಮ ಬೆಳೆಸಲು, ಪಕ್ಷದ ಅಧಿಕಾರವಿರುವ ರಾಜ್ಯಗಳಿಂದ ಹಣ ಸಂಗ್ರಹಿಸಲು ಸಂಘ(ಆರ್ ಎಸ್ ಎಸ್) ದೊಂದಿಗೆ ಸೇರಿ ಬಿಜೆಪಿ ಚುಕ್ಕಾಣಿ ಹಿಡಿದು ಜನರನ್ನ ದಾರಿ ತಪ್ಪಿಸಿ ಪಕ್ಷ ಬೆಳೆಸಲು.. ಹೋಲಿಕೆ ಸರಿಯಾಗುತಿತ್ತು ತಾನೇ…?
ವಾಜಪೇಯಿ, ಲಾಲಕೃಷ್ಣ ಅಡ್ವಾಣಿ, ನರೇಂದ್ರ ಮೋದಿ ಇವರೆಲ್ಲಾ ಬುದ್ದಿವಂತರೇ ಆದರೆ ಕೊನೇ ಪಕ್ಷ ಇವರಿಗೆ ದಾವೂದ್ ನ ಬುದ್ದಿವಂತಿಕೆಯನ್ನ ಹೋಲಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತದ್ದರಲ್ಲಿ ಚೇತನದ ಚಿಲುಮೆ, ದೇಶದ ಯುವಕರ ಸ್ಫೂರ್ತಿ, ಪ್ರಪಂಚವೇ ಗೌರವಿಸುವ ಸ್ವಾಮಿ ವಿವೇಕಾನಂದರೊಂದಿಗೆ ದಾವೂದ್ ನ ಬುದ್ದಿವಂತಿಕೆಯನ್ನು ಹೋಲಿಸಿದಾಗ ನೀವು(ಸಂಘ ಪರಿವಾರ) ಸಹಿಸಿಕೊಳ್ಳುತ್ತೀರಿ, ಬಾಯಿಗೆ ಬೀಗ ಹಾಕಿಕೊಳ್ಳುತ್ತೀರಿ ಎಂದಾದರೆ ನಿಮಗೂ ದಾವೂದ್ ಗೂ ಯಾವುದೇ ವ್ಯತ್ಯಾಸವಿಲ್ಲ. ಮುಖಗಳು ಮಾತ್ರಾ ಬೇರೆ ಬೇರೆ ಅಷ್ಟೆ.
ಗಡ್ಕರಿ ಹೇಳಿಕೆಗೆ ಹೊಸ ವ್ಯಾಖ್ಯಾನಗಳನ್ನು ಸಂಘ ಮತ್ತು ಬಿಜೆಪಿ ಕೊಡಲು ಪ್ರಯತ್ನಿಸುತ್ತಿದೆ. ಸ್ವಾಮೀ ವಿವೇಕಾನಂದರ ಸ್ಫೂರ್ತಿಯ ಮಾತುಗಳನ್ನು ನೀವು ಬುದ್ದಿವಂತಿಕೆಗೆ ಹೋಲಿಸುವುದಾದರೆ ನೀವು ಆ ದಿವ್ಯ ಚೇತನಕ್ಕೆ ಅವಮಾನ ಮಾಡುತಿದ್ದೀರಿ ಎಂದೇ ಅರ್ಥ. ಬುದ್ದಿವಂತಿಕೆ ಎಂಬ ಪದಬಳಕೆಯಾಗುವುದು ಯಾವಗ ಮತ್ತು ಎಂತಹಾ ವ್ಯಕ್ತಿಗಳ ಮೇಲೆ ಎಂಬುದನ್ನ ಮೊದಲು ನೀವು ಅರ್ಥ ಮಾಡಿಕೊಳ್ಳಬೇಕು. ಟಾಟಾ ಬಿರ್ಲಾ, ಧೀರೂ ಬಾಯಿ ಅಂಬಾನಿ, ಲಕ್ಷ್ಮಿ ಮಿತ್ತಲ್, ವಾರೆನ್ ಬಾಫೆಟ್, ಬಿಲ್ ಗೇಟ್ಸ್, ಅಥವಾ ಇನ್ನೊಂದು ಮುಖದಲ್ಲಿ ನೋಡುವುದಾದರೆ ಪ್ರಚಲಿತದಲ್ಲಿರುವ ನಿಮ್ಮಂತಹಾ ರಾಜಕಾರಣಿಗಳು.
ಅದೇ ಕವಿಗಳನ್ನ, ಸಾಹಿತಿಗಳನ್ನ, ವಿಧ್ವಾಂಸರನ್ನ, ಸಮಾಜ ಸುಧಾರಕರನ್ನ ಆದರ್ಶಗಳನ್ನ ಮೈವೆತ್ತ ಮಹಾನ್ ವ್ಯಕ್ತಿಗಳನ್ನ ಅದೇರೀತಿ ಭಕ್ತಿಯ ಸುಧೆಯನ್ನು ಹರಿಸಿ ಅದರಲ್ಲೇ ಸಮಾಜಕ್ಕೆ ಹೊಸ ಹೊಸ ದಿಕ್ಕು ಕೊಟ್ಟ ಕನಕ ದಾಸರನ್ನ, ಪುರಂದರ ದಾಸರನ್ನ, ಬಸವಣ್ಣನವರನ್ನ, ನಾರಾಯಣ ಗುಗುರುಗಳನ್ನ. ಇತ್ತೀಚಿನ ವ್ಯಕ್ತಿಗಳ ಬಗ್ಗೆ ಹೇಳುವುದಾದರೆ ಕುವೆಂಪು, ಬೇಂದ್ರೆ, ಸಿದ್ದಗಂಗಾ ಶ್ರೀಗಳು ಇವರ್ಯಾರನ್ನೂ ಬುದ್ದಿವಂತರು ಅಂತ ಕರೆಯೊಲ್ಲ.. ಜ್ನಾನಿಗಳು ಅಂತ ಕರೀತಾರೆ. ಇನ್ನು ಪ್ರಪಂಚಕ್ಕೆ ಸ್ಫೂರ್ತಿ ತುಂಬಿದ ಕೋಟಿ, ಕೋಟಿ ಯುವಕರ ಮನಸಿನಾಳದ ಮಾರ್ಗದರ್ಶಕ ಸ್ವಾಮಿ ವಿವೇಕಾನಂದರನ್ನ ಬುದ್ದಿವಂತ ಎಂಬ ಪದಬಳಸಿ ಅವಮಾನಿಸಿದ್ದೂ ಅಲ್ಲದೇ ದಾವೂದ್ ನಂತಹಾ ನಿಕೃಷ್ಟ ಮೂರು ಕಾಸಿನ ದೇಶ ದ್ರೋಹಿಯ ಹೆಸರಿನೊಂದಿಗೆ ತಳುಕು ಹಾಕಿ ಮಾತಾಡಿರುವ ನಿತಿನ್ ಗಡ್ಕರಿಯನ್ನು ಏನೆನ್ನಬೇಕು ಎನ್ನುವುದನ್ನ ನೀವೇ ತೀರ್ಮಾನಿಸಿ.
ಈ ಭೂಮಿ ಇರುವವರೆಗೆ, ಸೂರ್ಯ-ಚಂದ್ರರಿರುವ ವರೆಗೆ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮ ಹಂಸರಾಧಿಯಾಗಿ ಅಂತರಾಳದ ಕಣ್ಣಿನಿಂದ ಸಮಾಜಕ್ಕೆ ಮಾರ್ಗದರ್ಶನಗೈದ ಯಾವುದೇ ಜ್ನಾನಿಗಳಿಗೂ ಸಾವಿಲ್ಲ. ಆದರೆ ಗಡ್ಕರಿ, ದಾವೂದ್ ನಂತಹಾ ಬುದ್ದಿವಂತರಿಗೆ ಸಾವಿದೆ!
ತಮ್ಮ ಓಟ್ ಬ್ಯಾಂಕ್ ಗಾಗಿ ಏನು ಬೇಕಾದರೂ ಹೇಳಿ, ಏನುಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಸಮಾಜ ಘಾತುಕ ಮಾನಸಿಕತೆಗೆ ಕಡಿವಾಣ ಬೀಳದಿದ್ದಲ್ಲಿ ಸ್ವತಂತ್ರ ಪೂರ್ವದ ಸ್ಥಿತಿಗಿಂತಲೂ ಭೀಕರ ಸ್ಥಿತಿಯನ್ನ ನಾವೇ ನಿರ್ಮಾಣ ಮಾಡಿಕೊಳ್ಳುತ್ತೇವೆ.ಗಡ್ಕರಿ ಕೊಟ್ಟ ಇದೇ ಹೇಳಿಕೆಯನ್ನ ಸಂಘಪರಿವಾರ, ಬಿಜೆಪಿಯ ಹೊರಗಿನ ಯಾರಾದರೂ ಕೊಟ್ಟಿದ್ದರೆ ಇಂದಿನ ದೇಶದ ಪರಿಸ್ಥಿತಿಯನ್ನ ಊಹಿಸಿಕೊಳ್ಳಿ. ಅದೆಷ್ಟು ಪ್ರತಿಭಟನೆಗಳು, ಆಕಾಶ ಭೂಮಿ ಒಂದಾಗುವಂತೆ ವಿವೇಕಾನಂದರನ್ನ ಅವಮಾನಿಸಿದ್ದೀರೀ.. ವಿವೇಕಾನಂದರನ್ನ ಅವಮಾನಿಸಿದ್ದೀರೀ.. ಎಂಬಂತಹಾ ಹೋರಾಟಗಳು ನಾವು ನೋಡುತ್ತಿದ್ದೆವು ತಾನೇ..?
ಆದರೆ ಗಡ್ಕರಿ ಬಾಯಿಯಿಂದ ಬಂದ ಈ ಮಾತಿಗೆ ಸಂಘ ತುಟಿ ಪಿಟಿಕ್ ಎನ್ನುತ್ತಿಲ್ಲ.. ಬಿಜೆಪಿ ಮಾತಾಡುತ್ತಿಲ್ಲ.. ಅಂದರೆ ಏನಿದರ ಅರ್ಥ? ನೀವೇ ಊಹಿಸಿಕೊಳ್ಳಿ..
ನಿಮ್ಮ ಸ್ವಾರ್ಥ, ಕುತಂತ್ರಗಳಿಗೆ ಇಂತಹಾ ಮಹಾನ್ ವ್ಯಕ್ತಿಗಳನ್ನ, ಆದರ್ಶಗಳನ್ನ ಬಲಿತೆಗೆದುಕೊಳ್ಳುತ್ತೀರಿ ಅಂತಾದರೆ ನಿಮ್ಮನ್ನ ಯಾವ ಗುಂಪಿಗೆ ಸೇರಿಸಬೇಕು? ದೇಶಭಕ್ತರ ಗುಂಪಿಗೋ.. ದೇಶದ್ರೋಹಿಗಳ ಗುಂಪಿಗೋ…?
ಕೊನೆಯದಾಗಿ ಈ ಹೇಳಿಕೆಯ ಹಿಂದಿರುವ ಮರ್ಮ ನನಗೆ ಅನ್ನಿಸಿದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಸಂಘದ ಮಾನಸ ಪುತ್ರ ಬೇರೆ. ಅರಗಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಜನರ ದಿಕ್ಕನ್ನು, ವಿರೋಧ ಪಕ್ಷಗಳ ಗಮನವನ್ನು ಬೇರೆಡೆಗೆ ಸೆಳೆದು ಗಡ್ಕರಿಯ ರಾಜೀನಾಮೆ ಪಡೆಯಲು ಈ ತಂತ್ರ ಹಣೆದಿರಬಹುದಾ…?
ಯಾಕೆಂದರೆ ಗಡ್ಕರಿಯ ರಾಜೀನಾಮೆಯನ್ನು ಭ್ರಷ್ಟಾಚಾರದ ಆರೋಪದ ಮೇಲೆ ಪಡೆದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಯಾವ ಮುಖ ಹೊತ್ತು ಜನರೆದುರು ಹೋಗುವುದು..?ಆ ಕಾರಣಕ್ಕಾಗಿ ಗಡ್ಕರಿ ಬಾಯಲ್ಲಿ ಇಂತಹಾ ಹೇಳಿಕೆಯನ್ನು ಕೊಡಿಸಿ,ಗಡ್ಕರಿ ರಾಜೀನಾಮೆಯನ್ನು ಪಡೆದು ನಾವು ವಿವೇಕಾನಂದರಿಗೆ ಮತ್ತು ಅವರ ಆದರ್ಶ ಗಳಿಗೆ ನಿಷ್ಟರು ಎಂಬ ಪೋಜು ಕೊಟ್ಟು ಮುಂದಿನ ವರ್ಷ ಬರುವ ವಿವೇಕಾನಂದರ ನೂರೈವತ್ತನೇ ಜಯಂತಿಗೆ ಬರ್ಜರಿ ತಯಾರಿ ನಡೆಸುವ ತಂತ್ರ ಹನೆದಿರಬಹುದಾ..? ಒಂದು ಕಡೆ ಭ್ರಷ್ಟಾಚರದ ಆರೋಪ ಹೊತ್ತಿರುವ ಗಡ್ಕರಿಯ ರಾಜೀನಾಮೆಯನ್ನ ಸಿದ್ದಾಂತದ ಕಾರಣಕ್ಕೆ ಪಡೆದಂತೆ ಇನ್ನೊಂದು ಕಡೆ ಇತ್ತೀಚೆಗಿನ ಒಟ್ಟಾರೆ ಪಕ್ಷದೊಳಗಿನ ಗೊಂದಲವನ್ನ ಬೇರೆಡೆಗೆ ತಿರುಗಿಸುವ ತಂತ್ರ.
ಯಾಕೆಂದರೆ ಅಧಿಕಾರವನ್ನು ಪಡೆಯುವುದಕ್ಕಾಗಿ ಯಾರನ್ನೂ ಬಲಿಕೊಡಲು ಹೇಸದ ಇವರುಗಳು ಸ್ವಾಮೀ ವಿವೇಕಾನಂದರನ್ನೂ ಮತ್ತು ಅವರ ವ್ಯಕ್ತಿತ್ವ ಆದರ್ಶಗಳಿಗೆ ಮಸಿ ಬಳಿಯುವ ಪ್ರಯತ್ನ ಗಡ್ಕರಿ ಮೂಲಕ ಮಾಡಿರಲೂ ಬಹುದು..ಆದರೆ ಒಂದಂದಂತೂ ಸತ್ಯ, ಪದೇ ಪದೇ ಜನರನ್ನ ದಾರಿತಪ್ಪಿಸಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರಂತಹಾ ಅಗೋಚರ ಮಾರ್ಗದರ್ಶಕರು ನಮ್ಮೊಂದಿಗಿರುವಾಗ ಮತ್ತು ಇಂತಹಾ ಲಕ್ಷಾಂತರ ಜ್ನಾನಿಗಳ ತಪಸ್ಸು ಈ ದೇಶದ ಅಂತಃ ಸತ್ವ ಆಗಿರುವಾಗ ಗಡ್ಕರಿ, ದಾವೂದ್ ರಂತವರ ಬುದ್ದಿವಂತಿಕೆ ಕೆಲಸ ಮಾಡುವುದಿಲ್ಲ. ಜ್ನಾನಿಗಳ ಮಾರ್ಗದರ್ಶನವೇ ಕೆಲಸ ಮಾಡುವುದು..
ಚಿತ್ರ ಕೃಪೆ : facenfacts.com
Nijavagiyu vivekanandarannu tilididdare nivu gadkari avara bagge iriti bareyuttiralilla, obba vyaktiya bagge matanaduvaga nammanna mattu holike maduva vyaktitva enthaddu endu nodikolluvudolitu. vivekanandara munditukondu bareda avivekada lekhana, Doddavyaktiyannu daddatanadinda muttidavarau doddavaragilla, daddare aagiddare nenapirali.
ಮಹೇಂದ್ರ ಕುಮಾರ್ ಅವರೇ, ನಿಮ್ಮ ಅನಾರೋಗ್ಯಕರ ಮನಸ್ಸಿನಿಂದ ಇದಕ್ಕಿಂತ ಉತ್ತಮ ಲೇಖನ ನಿರೀಕ್ಷಿಸುವ ಹಾಗಿಲ್ಲ.
ಗಡ್ಕರಿಯವರು ಮಾತನಾಡುತ್ತಿದ್ದ ವಿಷಯದಲ್ಲಿ ವಿವೇಕಾನಂದ ಹಾಗೂ ದಾವೂದ್ರ ಬುದ್ಧಿವಂತಿಕೆಯನ್ನು ಹೋಲಿಸಿಲ್ಲ. ಅದನ್ನು ಉದಾಹರಣೆಯನ್ನಾಗಿ ಬಳಸಿಕೊಂಡಿದ್ದಾರೆ ಅಷ್ಟೇ.
ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ನುಡಿ ನೋಡಿ:
ರಾಮನಿರ್ದಂದು ರಾವಣನೊಬ್ಬನಿರ್ದನಲ……
ನಿಮ್ಮ ವಿವೇಚನೆಗೆ ಪ್ರಾಯಶಃ ಇಲ್ಲಿ ರಾಮನನ್ನು ರಾವಣನಿಗೆ ಹೋಲಿಸಿದ್ದಾರೆ ಎನ್ನಿಸಿದರೂ ಆಶ್ಚರ್ಯವಿಲ್ಲ.
> ಜನರನ್ನ ದಿಕ್ಕುತಪ್ಪಿಸಲು ಇವರ ಪ್ರೇರಣಾದಾಯಕ ಆದರ್ಶಗಳನ್ನ ತಿರುಚಿ ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ
ನೀವಿಲ್ಲಿ ತಿರುಚುತ್ತಿದ್ದೀರಲ್ಲ ಹಾಗೆ ಎಂದು ನಿಮ್ಮ ಊಹೆ ಇರಬಹುದು! ಸಂಘ ಎಂದೂ ಯಾವ ವಿಷಯವನ್ನೂ ತಿರುಚಿಲ್ಲ. ಅಂತಹದ್ದೇನಾದರೂ ಕಂಡುಬಂದಿದ್ದರೆ, ಆ ವಿಷಯಗಳನ್ನು ನೇರವಾಗಿ ಪ್ರಸ್ತಾಪಿಸಿ. ರಸ್ತೆಯಲ್ಲಿ ಆನೆ ನಡೆದು ಹೋಗುತ್ತಿರುವಾಗ ನಾಯಿಗಳು ಬೊಗಳುತ್ತಿರುತ್ತವೆ….ಭಯದಿಂದ. ಸತ್ವವಿಲ್ಲದ ನಿಮ್ಮ ಲೇಖನಗಳು ಆ ನಾಯಿಯ ಬೊಗಳುವಿಕೆಯನ್ನು ನೆನಪಿಗೆ ತರುತ್ತದೆ ಅಷ್ಟೇ!
ನಿಮಗೆ ಗಡ್ಕರಿ, ಬಿಜೆಪಿ, ಸಂಘ, ವಿಶ್ವಹಿಂದೂ ಪರಿಷತ್, ಇತ್ಯಾದಿಗಳನ್ನು ಹೀಯ್ಯಾಳಿಸುವ, ತೆಗಳುವ ಗೀಳು ಇರಬಹುದು. ಪ್ರಾಯಶಃ ನೀವು ಸೇರಿರುವ “ಜಾತ್ಯಾತೀತ ಮಕ್ಕಳ ಪಕ್ಷ”ದಲ್ಲಿ ಉಳಿಯಲು ಹಾಗೂ ಬೆಳೆಯಲು ಅದರ ಅಗತ್ಯ ನಿಮಗಿರಬಹುದು. ಹೀಗಾಗಿ, ನಿಮ್ಮಿಂದ ಇಂತಹ “ಮುತ್ತಿನಂತ ಮಾತುಗಳು ಹೊರಬರುತ್ತಿವೆ” ಎಂದು ಭಾವಿಸುವೆ.
1
ಮಹೇಂದ್ರಕುಮಾರ್ ಅವರು ಸಂಘಪರಿವಾರವನ್ನು ದ್ವೇಷಿಸುತ್ತ, ಎ.ಕೆ.ಸುಬ್ಬಯ್ಯನವರಿಂದ ಪ್ರೇರಣೆ ಪಡೆದು ಅವರ ಹಾದಿಯಲ್ಲೇ ನಡೆಯುಂತೆ ತೋರಿತ್ತಿದೆ.ಶುಭವಾಗಲಿ ನಿಮಗೆ.
ನಿಲುಮೆಯಲ್ಲಿ ಇ೦ತಹ ಲೇಖನ ಜಾಸ್ತಿ ಆಗುತ್ತಿದೆ. ಬ್ಯಾಲೇನ್ಸ್ ಇಲ್ಲ. ಬರಿ ಆರ್ ಎಸ್ ಎಸ್ ದೂಷನೆ. ಸ್ವಲ್ಪ ಇನ್ನೊ೦ದು ಸೈಡ್ ಬಗ್ಗೆನೂ ಬರೆಯಿರಿ ಅಥವಾ ಎರಡನ್ನು ನಿರ್ಲಕ್ಷಿಸಿ. ಒ೦ದೇ ಸೈಡ್ ವಾಲುವುದು ಅನಾರೋಗ್ಯಕರ ಬೆಳವಣಿಗೆ.
ಪ್ರಮೋದ್,
ನಿಲುಮೆಯ ಬಗ್ಗೆ ನಿಮಗೆ ಚೆನ್ನಾಗಿಯೇ ತಿಳಿದಿದೆ ಅಂದುಕೊಳ್ಳುತ್ತೇನೆ. ನಮಗೆ ಬಂದ ಲೇಖನವನ್ನು ನಾವು ಪ್ರಕಟಿಸುತ್ತೇವೆ. ಆರ್.ಎಸ್.ಎಸ್ ಪರವಾಗಿ ಈ ವಿಷ್ಯದಲ್ಲಿ ಬರೆದು ಕಳಿಸಿದರೆ ಅದಕ್ಕೂ ನಿಲುಮೆಯಲ್ಲಿ ಜಾಗವಿದೆ
satyake anthima jaya danyavada………..
nanage jds bjp kgrs yela onde nimagala yuchane badalayeshi kule nanage rajakiyada agthya ila ok nanu natakada desha baktha ala
nima nayakaru galada ct ravi sunilkumar hage nanu yavathu chunavanege niludila sumane yake ole vicharagalana mathaduvaga dari thapisuva kelasa maduthiri nana yuchanegalu thapu anishidare cal madi mathadi ok yake andare nivugalu mugdaru antha nana bavane 8861888666
ಮಹೇಂದ್ರ ಕುಮಾರ್ ರವರ ಮೇಲಿನ ಲೇಖನ ಸಮರ್ಥನೀಯ.. ವಿವೇಕಾನಂದರನ್ನ ರಾಜಕೀಯಾತೀತವಾಗಿ ಪ್ರೀತಿಸುವ ಯಾರಿಗೂ ಅದರಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಯೋಚಿಸುವ ಯಾರಿಗೂ ಅರ್ಥವಾಗುತ್ತೆ ಗಡ್ಕರಿ ಕೊಟ್ಟ ಇದೇ ಹೇಳಿಕೆಯನ್ನ ಬೇರೆ ಯಾರೇ ಕೊಟ್ಟಿದ್ದರೂ ದೇಶಕ್ಕೆ ಬೆಂಕಿ ಬೀಳುತ್ತಿತ್ತು. ದಾವೂದ್ ಮತ್ತು ವಿವೇಕಾನಂದರ ಬೌದ್ದಿಕ ಮಟ್ಟ (ಐಕ್ಯೂ) ಒಂದೇ ಅನ್ನುವುದಾದರೆ ಬಿನ್ ಲಾಡೆನ್ ನ ಬೌದ್ದಿಕ ಮಟ್ಟ ದೊಡ್ಡದು (ಗಡ್ಕರಿ ಪ್ರಕಾರ). ಈಗಡ್ಕರಿ ಹೇಳಿಕೆಯಿಂದ ದಾವೂದ್ ಗಂತೂ ತುಂಬಾ ಖುಷಿಯಾಗಿರುತ್ತೆ. ಗಡ್ಕರಿಯ ಇಂತಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ (ಹಿಂದೆ ನಾನೂ ಸಹಾ) ಬಾಲಿಶತನ ಅಥವಾ ಅವಕಾಶವಾದಿತನ ಕಂಡರೆ ಬೇಸರವಾಗುತ್ತೆ. ಮೇಲಿನ ಲೇಖನದಲ್ಲಿ ಮಹೇಂದ್ರಕುಮಾರ್ ಸತ್ಯವನ್ನ ಅನಾವರಣ ಗೊಳಿಸಿದ್ದಾರೆ. ಆದರೆ ನೀವುಗಳು ವಿಚಾರದ ಚರ್ಚೆ ಬಿಟ್ಟು ವಯಕ್ತಿಕ ಚರ್ಚೆಗೆ ಇಳಿದಿರೋದು ನಿಮ್ಮ ಬೌದ್ದಿಕ ಮಟ್ಟದ ಸಮಸ್ಯೆ ಇರಬಹುದಾ,,? ಒಮ್ಮೆ ಮನಸಿನೊಳಗೆ ವಿವೇಕಾನಂದರ ಬದಲು ಗುರೂಜಿಯನ್ನೋ, ಹೆಗಡೆವಾರ್ ರನ್ನೋ ಕಲ್ಪಿಸಿಕೊಳ್ಳಿ ನಿಮ್ಮ ಮನಸಿಗೆ ಖುಷಿ ಕೊಡಬಹುದು.. ಆದರೆ ವಿವೇಕಾನಂದರಂತಹಾ ಮಹಾನ್ ಬೌದ್ದಿಕ ಮಟ್ಟದ ವ್ಯಕ್ತಿಯನ್ನ ಒಬ್ಬ ಚಿಲ್ಲರೆ ಖಳನಾಯಕನೊಂದಿಗೆ ಹೋಲಿಸಿರುವುದನ್ನ ಸಮರ್ಥಿಸಿಕೊಳ್ಳ ಬೇಡಿ ಅಸಹ್ಯವಾಗುತ್ತೆ…
ಮಹೇಂದ್ರಜೀ..
ನಾನೂ ಸಹಾ ಸಂಘದ ಕಾರ್ಯಕರ್ತ. ನನ್ನದು ಸೆಕೆಂಡ್ ಇಯರ್ ಓಟಿಸಿ ಆಗಿದೆ. ಆದರೆ ನಾನೂ ಇವಾಗ ಸಂಘದ ಚಟುವಟಿಕೆಯಿಂದ ಹೊರಬಂದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದೇನೆ. ಆದರೆ ನಾನು ದೇಶ, ದರ್ಮ ಮತ್ತೆ ಸ್ವಾಮಿ ವಿವೇಕಾನಂದರ ವಿಚಾರಗಳಿಗೆ ಸದಾ ಬದ್ದ ನೀವು ಮೇಲೆ ಪ್ರಸ್ಥಾಪಿಸಿರುವ ವಿಚಾರಗಳಿಗೆ ನನ್ನ ಸಹಮತವಿದೆ. ವಿವೇಕಾನಂದರನ್ನ ಬುದ್ದಿವಂತರು ಅಂತ ಕರೆಯುವುದು ಮತ್ತು ಅದನ್ನ ಸಮರ್ಥಿಸಿಕೊಳ್ಳುವುದು ಮೂರ್ಖತನದ ಪರಮಾವಧಿ…
ನಾನು ಸಂಘದ ಚಟುವಟಿಕೆಯಿಂದ ಹೊರ ಬಂದಿದ್ದರೂ ಸಹಾ ಸಂಘವನ್ನು ಎಂದೂ ಟೀಕಿಸಿದವನಲ್ಲ. ಆದರೆ ಸಂಘದ ಇತ್ತೀಚೆಗಿನ ನಿಲುವುಗಳನ್ನು ಗಮನಿಸಿದಾಗ ಮನಸಿಗೆ ತುಂಬಾ ನೋವಾಗುತ್ತೆ. ಮತ್ತೆ ಮೇಲೆ ಕೆಲವು ನನ್ನ ಸ್ನೇಹಿತರ ಪ್ರತಿಕ್ರಿಯೆಗಳನ್ನ ಗಮನಿಸಿದಾಗ ಆಶ್ಚರ್ಯವಾಗುತ್ತೆ.
ಇರಲಿ ಬಿಡಿ ನೀವು ಜೆಡಿಎಸ್ ಸೇರಿದಾಗ ನಮಗೂ ಬೇಸರವಾಗಿತ್ತು. ಆದರೆ ನೀವು ರಾಜಕೀಯವಾಗಿ ಹೆಚ್ಚು ತೊಡಗಿಸಕೊಂಡಂತೆ ಕಾಣುತ್ತಿಲ್ಲ. ಸರಿ ಬಿಡಿ, ಅದೆಲ್ಲಾ ನಿಮ್ಮ ಸ್ವಂತದ್ದು. ನಮಗೆ ನಿಮ್ಮ ವಿಚಾರಧಾರೆ, ಕಾಳಜಿ, ಚಿಂತನೆ, ದೇಶದ ಬಗೆಗಿನ ಬದ್ದತೆ ನಿಮ್ಮ ಫೇಸ್ ಬುಕ್ ಮತ್ತು ಬ್ಲಾಗ್ ಗಮನಿಸಿದಾಗ ಬದಲಾಗಿಲ್ಲ ಅನ್ನಿಸಿತು.
ಮತ್ತೆ ರಾಜಕೀಯವಾಗಿ ಯಾರೂ ಸರಿ ಇಲ್ಲ ಬಿಡಿ. ಬಿಜೆಪಿಯಂತೂ ಸಂಘ ಮತ್ತು ಹಿಂದುತ್ವದ ಕಾರ್ಯಕರ್ತರು ತಲೆ ಎತ್ತದಂತೆ ಮಾಡಿದೆ. ಸಾಮಾಜಿಕ ನ್ಯಾಯವನ್ನೂ ಕೊಟ್ಟಿಲ್ಲ.. ಕೊನೇ ಪಕ್ಷ ಇರುವವರೊಳಗೆ ಉತ್ತಮನ್ಯಾರು ಅಂತ ಗಮನಿಸಿದರೆ ನಿಮ್ಮ ಹೆಚ್.ಡಿ. ಕುಮಾರಸ್ವಾಮಿಯವರೇ ಪರ್ವಾಗಿಲ್ಲ..
ಹೋಗಲಿ ಬಿಡಿ, ನಮಗ್ಯಾಕೆ ರಾಜಕೀಯ..? ಮೇಲಿನ ಲೇಖನವಂತೂ ಸಮಯೋಚಿತವಾಗಿದೆ. ನಿಮ್ಮ ವಿವೇಕಾನಂದರ ಬಗೆಗಿನ ಕಾಳಜಿ ಮತ್ತು ಪ್ರೀತಿ ಗಮನಿಸಿದರೆ ನೀವು ಸಂಘ ಬಿಟ್ಟಿರಬಹುದು ಆದರೆ ವಿಚಾರದಾರೆಗಳನ್ನ ಬಿಟ್ಟಿಲ್ಲ ಅನ್ನಿಸಿತು.
ಗಡ್ಕರಿಯವರ ಹೇಳಿಕೆಯ ಬಗ್ಗೆ ಯಾಕಿಷ್ಟು ಹಾಹಾಕಾರ ಅಂತ?
ಅಷ್ಟಕ್ಕೂ ಅವರು ವಿವೇಕಾನಂದರನ್ನು ದಾವೂದಿಗೆ ಹೋಲಿಸಿಲ್ಲ. ವಿವೇಕಾನಂದರಿಗೂ ದಾವೂದಿಗೂ ಎಷ್ಟು ಅಂತರ ಎಂದು ಎತ್ತಿ ತೋರಿಸಿ ಹೇಳುವುದೇ ಅವರ ಉದ್ದೇಶವಾಗಿದ್ದಂತೆ ಕಾಣುತ್ತದೆ. ಅವರು ಹೋಲಿಸಿರುವುದು ಇಬ್ಬರ ಜಾಣ್ಮೆಯ ಮಟ್ಟವನ್ನು ಮಾತ್ರ. ಆ ಮಾಹಿತಿ ಗಡ್ಕರಿಯವರಿಗೆ ಎಲ್ಲಿ ಮತ್ತು ಹೇಗೆ ದೊರೆಯಿತೋ, ಅವರೇ ಹೇಳಬೇಕು. ಒಟ್ಟಿನಲ್ಲಿ, ಒಬ್ಬ ದಿಟ್ಟ ಸಮಾಜ ಸುಧಾರಕನ ಹೆಸರಿನ ಜೊತೆ ಒಬ್ಬ ಹೇಡಿ ಸಮಾಜ ಘಾತುಕನ ಹೆಸರನ್ನು ಸೇರಿಸಿ ನುಡಿಯುವ ಎಡವೆಟ್ಟನ್ನು ಅವರು ಮಾಡಬಾರದಿತ್ತು.
ಓದಿದ ಕನ್ನಡಿಗರೆ ಬಿ.ಜೆ.ಪಿ. ಯಂತಹ ದಾರಿ ತಪ್ಪಿಸುವ, ಸಂಚು ರೂಪಿಸಿ ತಮ್ಮ ಏಳಿಗೆಗಾಗಿ ಕರ್ನಾಟಕವನ್ನು, ಭಾರತವನ್ನು ಮಣ್ಣು ಪಾಲು ಮಾಡಲು ಹೇಸದ ಪಕ್ಷದ ಗೀಳಿನಿಂದ ಹೊರಬನ್ನಿ.
ಕರ್ನಾಟಕದ ಮೂಲಕ ಭಾರತವನ್ನು ಮುನ್ನಡೆಸುವ ಕರ್ನಾಟಕ ಪಕ್ಷ ಹೊರ ಹೊಮ್ಮಲು ಕರೆಕೊಡಿ, ಓಗೊಡಿ.