ವಿಷಯದ ವಿವರಗಳಿಗೆ ದಾಟಿರಿ

ಜುಲೈ 14, 2014

19

“ಎಲ್ಲರ” ಕಲ್ಪನೆಗೆ ಎಟುಕದ ಕನ್ನಡ ಭಾಷೆಯ ಆಯಾಮಗಳು

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಶಂಕರ ಬಟ್ಭಾಷೆಗಳನ್ನು ಆರ್ಯ ಭಾಷೆ, ದ್ರಾವಿಡ ಭಾಷೆ ಎಂದು ವಿಂಗಡಿಸುವದು ತಪ್ಪೇ. ಯಾಕೆಂದರೆ ಆರ್ಯ ಮತ್ತು ದ್ರಾವಿಡ ಎಂಬ ಕಲ್ಪನೆಯೇ ತಪ್ಪು. ಇರಲಿ. ಬೇಕಾದರೆ ಉತ್ತರದ ಭಾಷೆಗಳು, ದಕ್ಷಿಣದ ಭಾಷೆಗಳು ಎಂದು ಬೇಕಾದರೆ ವಿಂಗಡಿಸಿಕೊಳ್ಳಬಹುದು. ಕನ್ನಡ ವಿಕಾಸ ೫-೬ ನೇ ಶತಮಾನಗಳ ನಂತರ ಅತಿ ಶೀಘ್ರವಾಗಿ ಆಯಿತು. ೧೫ನೇ ಶತಮಾನದ ಹೊತ್ತಿಗೆ ಕನ್ನಡ ಎಂಬ ಭಾಷೆ ಒಂದು ಪ್ರಾಂತ್ಯದ ಭಾಷೆಯಾಗಿ ರೂಪುಗೊಂಡಿತು. ಇದಿಷ್ಟು “ಎಲ್ಲರ” ಬಳಿ ಇರುವ ಮಾಹಿತಿ. ಆದರೆ ಕನ್ನಡ ಭಾಷೆ ಯಾವ ರಾಜಕೀಯ ಮತ್ತು ಇತಿಹಾಸಗಳ ಅಡಿಯಲ್ಲಿ ಬೆಳೆಯಿತು, ಯಾವ ಕಲ್ಪನೆಯೊಂದಿಗೆ ಅದು ವಿಕಾಸವಾಯಿತು, ಬೇರೆ ಭಾಷೆಗಳಲ್ಲಿ ಕಂಡು ಬರದ ಹೊಸ ಪ್ರಯೋಗಗಳು ಕನ್ನಡ ವ್ಯಾಕರಣಗಳಲ್ಲಿ ಯಾಕಾಯಿತು, ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳಬೇಕು.

ಯಾವ ರೀತಿ ಹಿಂದೂ ಎಂಬುದು ಧರ್ಮವಾದರೂ ಕೂಡ, ಉಳಿದ ಧರ್ಮಗಳನ್ನು ಒಳಗೊಳ್ಳುವ ತಾತ್ವಿಕವಾಗಿ ಎಲ್ಲ ಮತಗಳನ್ನು ಮೀರಿ ನಿಲ್ಲುವ ವ್ಯವಸ್ಥೆಯೋ, ಅಂತೆಯೇ ಕನ್ನಡ ಕೂಡ ಭಾಷೆಯಷ್ಟೇ ಅಲ್ಲ, ಉಳಿದ ಭಾಷೆಗಳ ಅಂಶಗಳನ್ನು ಒಳಗೊಳ್ಳುವ, ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಸಾಮಾಜಿಕ ಭಾಷೆ ಎನ್ನುವದು ನನ್ನ ಮತ. ಕನ್ನಡ ಭಾಷೆಯ ಮೂಲ ಉದ್ದೇಶ ಉತ್ತರ ಹಾಗೂ ದಕ್ಷಿಣದ ಜನಗಳ ನಡುವೆ ಸಂವಹನವಾಹಿನಿಯಾಗಿ ನಿಂತು ಒಂದು ರಾಷ್ಟ್ರವನ್ನು ಕಟ್ಟುವದು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳನ್ನೂ ಕೊಡುತ್ತೇನೆ.

ಉದಾಹರಣೆಗೆ ವ್ಯಾಕರಣದಲ್ಲಿ ಬರುವ ಪ್ರತ್ಯಯಗಳನ್ನೇ ತೆಗೆದುಕೊಳ್ಳಿ. ಕನ್ನಡ ಸಂಸ್ಕೃತದ ಪ್ರತ್ಯಗಳನ್ನು ಮತ್ತು ದಕ್ಷಿಣ ಭಾಷೆಗಳ ಪ್ರತ್ಯಯಗಳನ್ನು ಬೇರೆ ಬೇರೆ ಶಬ್ದಗಳೊಂದಿಗೆ ಸರಾಗವಾಗಿ ಸೇರಿಸಿಕೊಳ್ಳಬಲ್ಲದು. -ಇಸು ಪ್ರತ್ಯಯ ಕನ್ನಡದ್ದು ಆದರೆ ಇದರ ವ್ಯಾಪ್ತಿ ಕನ್ನಡ ಶಬ್ದಗಳನ್ನು ಮೀರಿ ಹೋಗಬಲ್ಲದು, ಕುಣಿ, ನಡೆ ಮುಂತಾದ ಕನ್ನಡ ಶಬ್ದಗಳೊಂದಿಗೆ ಸೇರಿ ಕುಣಿಸು, ನಡೆಸು ಎಂದಾಗುವದು. ಅಂತೆಯೇ ಸಂಸ್ಕೃತ ಶಬ್ದಗಳೊಡನೆಯೋ ಬೆರೆಯಬಹುದು. ನಟ್+ಇಸು=ನಟಿಸು, ವರ್ಣ್+ಇಸು=ವರ್ಣಿಸು ಇತ್ಯಾದಿ. ಇತ್ತೀಚೆಗೆ ಇಂಗ್ಲೀಷ ಕೂಡ ಸೇರಿಕೊಂಡಿದೆ, ಕ್ಲಿಕ್ಕಿಸು, ಗೂಗಲಿಸು ಇತ್ಯಾದಿ. ಹಾಗೆಯೇ ಸಂಸ್ಕೃತದ ಪ್ರತ್ಯಯಗಳನ್ನು ಕನ್ನಡದ ಶಬ್ದಗಳೊಂದಿಗೂ ಬೆರೆಸಿಕೊಳ್ಳಬಹುದು. ಉದಾ -ತನ, ಮತ್ತು -ವಂತ ಗಳು ಸಂಸ್ಕೃತದ್ದು ಬುದ್ಧಿವಂತ, ಕಪಟತನ ಇತ್ಯಾದಿ. ಕನ್ನಡ ಶಬ್ದಗಳು ಇವುಗಳ ಜೊತೆಗೂ ಬೆರೆಯಬಲ್ಲದು. ಗೆಳೆತನ, ಬಡತನ, ಹಣವಂತ ಇತ್ಯಾದಿ. ಇಲ್ಲಿ ಗೆಳೆ, ಬಡ, ಹಣ ಗಳು ಇಲ್ಲಿಯ ಶಬ್ದಗಳು.

ಇದು ಕೇವಲ ಒಂದು ಉದಾಹರಣೆಯಷ್ಟೇ. ನಮ್ಮಲ್ಲಿ ಸಂಸ್ಕೃತ ಸಂಧಿಗಳು, ಕನ್ನಡ ಸಂಧಿ ಸಮಾಸಗಳು ಎಲ್ಲ ಮಿಶ್ರವಾಗಿವೆ ನಿಜ. ಆದರೆ ಇದು ಏಕೆ ಆಗಿದೆ ಎನ್ನುವದು ಮಹತ್ವ. ಯಾಕೆಂದರೆ ಇದು ಕನ್ನಡದ ಮೂಲ ಉದ್ದೇಶದೊಂದಿಗೆ ಅಂಟಿಕೊಂಡಿದೆ. ಒಂದು ಸನಾತನ ಧರ್ಮೀಯರಿಗೆ ರಕ್ಷಣೆ ಕೊಡುವ, ಪರದೇಶದ ವೈರಿಗಳಿಂದ ರಕ್ಷಣೆ ಕೊಡುವ ಒಂದು ಅಖಂಡ ಭಾರತದ ಕಲ್ಪನೆಯನ್ನು ಮಾಡಿ ಅದರಲ್ಲಿ ಕಾರ್ಯಪ್ರವೃತ್ತರಾಗಿದ್ದರೆ ಅದು ಕನ್ನಡ ನಾಡಿನ ರಾಜರಲ್ಲಿ ಮಾತ್ರ. ಚಾಲುಕ್ಯರು ಪ್ರಯತ್ನಿಸಿದರು, ಹೊಯ್ಸಳರು ಪ್ರಯತ್ನಿಸಿದರು, ವಿಜಯನಗರದ ಅರಸರು ಪ್ರಯತ್ನಿಸಿದರು. ಈ ಎಲ್ಲ ರಾಜ ಮನೆತನಗಳ ಉದ್ದೇಶ ಕೇವಲ ರಾಜ್ಯ ವಿಸ್ತರಣೆಯಲ್ಲ. ಬೇರೆ ಧರ್ಮೀಯರಿಂದ, ಪರದೇಶೀಯರಿಂದ ಇಲ್ಲಿಯ ಧರ್ಮೀಯರನ್ನು ರಕ್ಷಿಸಿ, ಒಂದು ಅಖಂಡ ಭಾರತವನ್ನು ಸ್ಥಾಪಿಸುವ ಕನಸನ್ನು ಹೊಂದಿದವರು. ಅದಕ್ಕಾಗಿ ಕೇವಲ ಕಾದಾಡುವದಷ್ಟೇ ಅಲ್ಲ, ಎಲ್ಲ ರಾಜರೊಡನೆ ಮೈತ್ರಿ ಸಾಧಿಸಿ, ಒಂದಾಗುವತ್ತ ಹೆಜ್ಜೆ ಇಟ್ಟವರು. ವಿಜಯನಗರದ ಸ್ಥಾಪನೆಯ ಕಥೆಗಳನ್ನೊಮ್ಮೆ ಓದಿದರೆ ಇದು ಸ್ಪಷ್ಟ.

ಹೀಗಾಗಿ ಕನ್ನಡದ ಉಗಮವನ್ನು ನಾವು ಈ ದೃಷ್ಟಿಯಿಂದ ನೋಡಬೇಕು. ತಮಿಳರು ವಣಕ್ಕಂ ಎಂದಂತೆ ನಾವು ನಮಸ್ಕಾರಕ್ಕೆ ಬೇರೊಂದು ಪದ ಉಪಯೋಗಿಸುವದಿಲ್ಲ. ದೇವತೆಗಳಿಗೆ, ಆರುಮೊಗ, ತಿರುಮೊಗ, ಮುರುಗ, ತಿರುಮುರುಗ ಎಂಬ ಹೊಸ ಹೊಸ ಹೆಸರು ಇಟ್ಟಿಲ್ಲ. ಕಾರಣ ನಮಗೆ ಹೊಸ ಹೊಸ ಶಬ್ದಗಳನ್ನು ಹುಟ್ಟಿಸುವದು ಚಾಳಿಯಲ್ಲ. ಕನ್ನಡ ಹುಟ್ಟಿದ್ದು ಈ ಚಾಳಿಯಿಂದಾಗಿ ಅಲ್ಲ. ಅದು ಉತ್ತರ ಮತ್ತು ದಕ್ಷಿಣದ ಒಂದು ಕೊಂಡಿಯಾಗಿ ಬಂದಿದ್ದು. ಆರುಮೊಗ ಎಂಬ ತಮಿಳು ಶಬ್ದವನ್ನು ಸ್ವಲ್ಪ ತಲೆ ಉಪಯೋಗಿಸಿ ಅರ್ಥ ಕಂಡುಕೊಳ್ಳಬಹುದೋ, ಹಾಗೇ ಕನ್ನಡಿಗರು ಷಣ್ಮುಖವನ್ನೂ ಅರ್ಥೈಸಿಕೊಳ್ಳುತ್ತಾರೆ.

ಹೀಗಾಗಿ ಕನ್ನಡದಲ್ಲಿ ಸಂಸ್ಕೃತದ ಬೆರೆಕೆಯನ್ನು, ದ್ರಾವಿಡರ ಮೇಲಿನ ಆರ್ಯರ ದಬಾಳಿಕೆ ಎಂದು ಅರ್ಥೈಸುವದು ಅರ್ಥಹೀನ. ಆಗಿನ ಕಾಲದಲ್ಲಿ ಕನ್ನಡಿಗರು ಒಗ್ಗಟ್ಟಿಗಾಗಿ ಶ್ರಮಿಸಿದ್ದರು. ಅದನ್ನು ಸಾಧಿಸಲು ಅವರಿಗೆ ದಕ್ಷಿಣ ಮತ್ತು ಉತ್ತರದ ಭಾಷೆಗಳ ಅರಿವು ಬೇಕಾಗುತ್ತಿತ್ತು. ಹೀಗಾಗಿ ಉತ್ತರ ಮತ್ತು ದಕ್ಷಿಣ ಭಾಷೆಗಳ ಎರಡೂ ವ್ಯಾಕರಣಗಳಿಗೆ ಒಗ್ಗಿಕೊಂಡು, ಎರಡೂ ಭಾಷೆಗಳ ಸತ್ವ, ಶಬ್ದಗಳನ್ನು ಹೀರಿಕೊಂಡು ಬೆಳೆಯಿತು. ಮತ್ತು ಇಂಥ ಒಂದು ವಿಸ್ತಾರವಾದ ಕನ್ನಡ ನಮ್ಮ ಪೂರ್ವಜರಿಗೆ ಉತ್ತರ ಹಾಗೂ ದಕ್ಷಿಣ ಇವರೀರ್ವರೊಡನೆ ವ್ಯವಹಾರ ಮಾಡಲು ಯಾವ ಶಬ್ದಗಳ ಅಗತ್ಯವಿತ್ತೋ ಅದನ್ನು ಕಲಿಸಿಕೊಟ್ಟಿತು. ಹೀಗಾಗಿ ನಾನು ಕನ್ನಡಿಗ ಎಂಬುದು ನನಗೆ ಹೆಮ್ಮೆಯೂ ಹೌದು, ಗರ್ವವೂ ಹೌದು.

19 ಟಿಪ್ಪಣಿಗಳು Post a comment
  1. neelanjana's avatar
    ಜುಲೈ 15 2014

    ಈ ಬರಹದಲ್ಲಿ ಒಂದು ಭಾಷೆಯನ್ನು “ಪ್ರಯತ್ನಮಾಡಿ” ಹುಟ್ಟಿಸುವ ಸಾಧ್ಯತೆಯಿದೆ ಎಂಬ ಸಾರಾಂಶ ಹೊರಡುತ್ತಿದೆ – ಆದರೆ, ಯಾವುದೇ ಹುಟ್ಟಿಸಿದ ಭಾಷೆ ಜನಮನದಲ್ಲಿ ನಿಲ್ಲಲಾರದು. ಕನ್ನಡವು ಬೇರೆ ಭಾಷೆಗಳಿಗಿಂದ ಹೆಚ್ಚು ಸುಲಭವಾಗಿ ತನ್ನ ಪ್ರತ್ಯಗಗಳನ್ನು ಬೇರೆ ಭಾಷೆಯಿಂದ ಬಂದ ಪದಗಳಿಗೆ ಸೇರಿಸುವುದಕ್ಕೆ ಅನುವು ಮಾಡಿ ಕೊಡಬಹುದು ( ಅದೂ ಪೂರ್ತಿ ನಿಜವೆಂದು ಹೇಳಲಾಗದು, ಏಕೆಂದರೆ ತಮಿಳಿನಲ್ಲೂ ಈ ರೀತಿಯ ಪ್ರಯೋಗಗಳು ಇದ್ದೇ ಇವೆ) – ಎಂಬುದನ್ನು ಸ್ವಲ್ಪ ಮಟ್ಟಿಗೆ ಒಬ್ಬಬಹುದಾದರೂ, ಅದು “ಹೀಗಿರಬೇಕೆಂದು” ಮಾಡಿದ ಬದಲಾವಣೆಗಳಲ್ಲ.

    ಅಲ್ಲದೇ “ಕನ್ನಡ ವಿಕಾಸ ೫-೬ ನೇ ಶತಮಾನಗಳ ನಂತರ ಅತಿ ಶೀಘ್ರವಾಗಿ ಆಯಿತು. ೧೫ನೇ ಶತಮಾನದ ಹೊತ್ತಿಗೆ ಕನ್ನಡ ಎಂಬ ಭಾಷೆ ಒಂದು ಪ್ರಾಂತ್ಯದ ಭಾಷೆಯಾಗಿ ರೂಪುಗೊಂಡಿತು” ಎಂಬ ಸಾಲುಗಳೂ ತಪ್ಪು ಅಭಿಪ್ರಾಯ ತೋರುತ್ತಿವೆ. ಯಾವುದರ ೫-೬ನೇ ಶತಮಾನದ ನಂತರ? ಕ್ರಿಸ್ತನ ನಂತರ ಐದು-ಆರನೇ ಶತಮಾನದಲ್ಲಿ ಕನ್ನಡ ಬರೆದ ಮೊದಲ ದಾಖಲೆಗಳು ಹೆಚ್ಚು ಕಾಣಸಿಗುತ್ತಿದೆ ಅಂದ ಮಾತ್ರಕ್ಕೆ ಕನ್ನಡ ಅದಕ್ಕೆ ಮೊದಲು ಇರಲಿಲ್ಲವೇನು? ಇದ್ದೇ ಇತ್ತು!

    ಕನ್ನಡ ೧೫ನೇ ಶತಮಾನದ ವೇಳೆಗೆ ಒಂದು ಪ್ರಾಂತ್ಯದ ಭಾಷೆಯಾಗಿ ರೂಪುಗೊಂಡಿತು ಅನ್ನುವುದೂ ಇದೇ ಕಾರಣಗಳಿಗಾಗಿ ಸರಿಯಿಲ್ಲ. ಕದಂಬರ ಕಾಲದಿಂದಲೇ “ಒಂದು ಪ್ರಾಂತ್ಯದ” = ಬನವಾಸಿ ನಾಡು/ಕುಂತಲ/ಕರ್ನಾಟದ ಭಾಷೆ ಕನ್ನಡವೇ ತಾನೇ?

    ಅಥವಾ ಲೇಖಕರು ಬೇರೇನೋ ಹೇಳಹೊರಟಿದ್ದಾರೆಯೇ ಇಲ್ಲಿ?

    ಉತ್ತರ
  2. bhaskara's avatar
    bhaskara
    ಜುಲೈ 15 2014

    ಕೆಲಸವಿಲ್ಲದವ ತೌು ಕುಟ್ಟಿದ ಅಂದ ಹಾಗೆ… ಇರುವ ಸವಿಗನ್ನಡವನ್ನ ಉಳಿಸಿ ಬೆಳೆಸುವುದನ್ನ ಬಿಟ್ಟು , ಎಕ್ಕುಟ್ಟಿಸಿ ಹಾಳು ಮಾಡಲು ಹೊರಟಿದ್ದಾರೆ ಇವ”ರೆಲ್ಲರೂ” !!

    ಉತ್ತರ
  3. sambhav jain's avatar
    sambhav jain
    ಜುಲೈ 15 2014

    ನೀಲಾಂಜನ ಅವರು ಹೇಳಿರುವುದು ಸರಿ. ಈ ಲೇಖನದಲ್ಲಿ ಬಹಳಷ್ಟು ತಪ್ಪುಗಳು ನುಸುಳಿರುವಂತೆ ಕಾಣುತ್ತದೆ. ಇತಿಹಾಸ ಮತ್ತು ಭಾಷೆಗೆ ಸಂಬಂಧಿಸಿದಂತೆ ಇಲ್ಲಿ ಕೊಟ್ಟಿರುವ ಕೆಲವು ಮಾಹಿತಿ ಸರಿಯಲ್ಲ.

    ಉದಾಹರಣೆಗೆ, ಆರ್ಯ, ದ್ರಾವಿಡ ಭಾಷೆಗಳನ್ನು ದಕ್ಷಿಣ, ಉತ್ತರ ಎಂದು ವಿಂಗಡಿಸಲು ಆಗುವುದಿಲ್ಲ. ಏಕೆಂದರೆ ದ್ರಾವಿಡ ಮೂಲದ ಹಲವು ಭಾಷೆಗಳು ಉತ್ತರದ ಬಿಹಾರ, ಒರಿಸ್ಸಾ, ಮತ್ತು ಪಾಕಿಸ್ತಾನದ ಬಲೂಚಿಸ್ತಾನದ ವರೆಗೂ ಹರಡಿವೆ. ಇದೇ ರೀತಿಯಲ್ಲಿ ಆರ್ಯ ಭಾಷೆಯಾದ ಕೊಂಕಣಿ, ದಕ್ಷಿಣದಲ್ಲಿದೆ. ಸಿಂಹಳ ಭಾಷೆಯಂತೂ ಬೇರೆ ಎಲ್ಲ ದ್ರಾವಿಡ ಭಾಷೆಗಳಿಗಿಂತ ದಕ್ಷಿಣದಲ್ಲಿದೆ.

    ಉತ್ತರ
  4. KP Bolumbu's avatar
    ಜುಲೈ 15 2014

    ವಾಸ್ತವವಾದಿ ನೆಲೆಗಟ್ಟಿಲ್ಲದೆ ಕಲ್ಪನೆಯ ಪಾಯದ ಮೇಲೆ ಕಟ್ಟಲಾಗಿರುವ ಸೌಧವಿದು.
    ” -ಇಸು ಪ್ರತ್ಯಯ ಕನ್ನಡದ್ದು ಆದರೆ ಇದರ ವ್ಯಾಪ್ತಿ ಕನ್ನಡ ಶಬ್ದಗಳನ್ನು ಮೀರಿ ಹೋಗಬಲ್ಲದು, ಕುಣಿ, ನಡೆ ಮುಂತಾದ ಕನ್ನಡ ಶಬ್ದಗಳೊಂದಿಗೆ ಸೇರಿ ಕುಣಿಸು, ನಡೆಸು ಎಂದಾಗುವದು. ಅಂತೆಯೇ ಸಂಸ್ಕೃತ ಶಬ್ದಗಳೊಡನೆಯೋ ಬೆರೆಯಬಹುದು. ನಟ್+ಇಸು=ನಟಿಸು, ವರ್ಣ್+ಇಸು=ವರ್ಣಿಸು ಇತ್ಯಾದಿ.”
    ~ ಬಹಳ ಉಡಾಫೆಯ ಹೇಳಿಕೆಯಾಗಿದೆ. ಇದನ್ನು ಹೋಲುವ ಪ್ರತ್ಯಯಗಳು ಎಲ್ಲಾ ಭಾಷೆಯಲ್ಲಿಯೂ ಇವೆ. ಕಣ್ಣುತೆರೆದು ಬೇರೆಡೆ ನೋಡಿದರೆ ಕಾಣಬಹುದಾದಂಥವು.
    “ಬೇರೆ ಧರ್ಮೀಯರಿಂದ, ಪರದೇಶೀಯರಿಂದ ಇಲ್ಲಿಯ ಧರ್ಮೀಯರನ್ನು ರಕ್ಷಿಸಿ, ಒಂದು ಅಖಂಡ ಭಾರತವನ್ನು ಸ್ಥಾಪಿಸುವ ಕನಸನ್ನು ಹೊಂದಿದವರು.”
    ~ ಇದನ್ನು ಸ್ಪಷ್ಟಪಡಿಸುವ ಪುರಾವೆಗಳನ್ನು ಒದಗಿಸಿರಿ.

    ಉತ್ತರ
  5. shripadt's avatar
    shripadt
    ಜುಲೈ 15 2014

    ಕನ್ನಡ ಭಾಷೆಯ ಬಗ್ಗೆ ಮೊದಲ ಬಾರಿ ಪ್ರೀತಿ ಹುಟ್ಟಿದವರು ಮಾತನಾಡಿದಂತಿದೆ ಈ ಲೇಖನ.

    ಉತ್ತರ
  6. valavi's avatar
    valavi
    ಜುಲೈ 18 2014

    ನಿಲಾಂಜನರ ಮಾತಿಗೆ ನನ್ನ ಸಹಮತವಿದೆ. ದ್ರಾವಿಡ ಭಾಷೆ ಎಂದರೇನು ತಪ್ಪು ತಿಳಿತಿಲ್ಲ. ಹಾಗೆ ದ್ರಾವಿಡ ಭಾಷೆ ಕೇವಲ ದಕ್ಷಿಣದವರ ಸೊತ್ತೇನಲ್ಲ. ಉತ್ತರದಲ್ಲೂ ಅನೇಕ ಕಡೆ ದ್ರಾವಿಡ ಭಾಷೆ ಇದೆ. ಜೈನ್ ಎನ್ನುವವರು ಮೇಲಿನ ಕಮೆಂಟಿನಲ್ಲಿ ಹೇಳಿಯೂ ಇದ್ದಾರೆ.

    ಉತ್ತರ
  7. ಸಂತೋಷ's avatar
    Maaysa
    ಜುಲೈ 18 2014

    ತುಂಬಾ ತಪ್ಪು ಮಾಹಿತಿಯುಳ್ಳ ಬರಹವಿದು.

    ನಾನು ‘ಎಲ್ಲರಕನ್ನಡ’ (ಇದು ‘ಎಲ್ಲರ ಕನ್ನಡ’ ಎಂದು ಬರೆದರೆ ಸರಿ-ವ್ಯಾಕರಣ) ಎಂದು ಹೇಳಿಕೊಳ್ಳುತ್ತಿರುವ ಒಂದು ಬಗೆ ಕನ್ನಡವನ್ನು ಮೆಚ್ಚುವುದಿಲ್ಲ.

    ಕೆಲವು ಅಂಶಗಳು.
    1. ಕನ್ನಡವು ಸಂಸ್ಕೃತವು ರಚನೆಯಲ್ಲೇ ವಿಭಿನ್ನವಾದ ಭಾಷೆಗಳು. ಆದುದರಿಂದ ಭಾಷಾಕುಟುಂಬಗಳ ವ್ಯವಸ್ಥೆಯಲ್ಲಿ ಸ್ವಭಾವತಃ ವಿಭಿನ್ನಕುಟುಂಬಸದಸ್ಯಭಾಷೆಗಳು. ಕನ್ನಡವು ‘ದ್ರಾವಿಡ’/ದಕ್ಷಿಣದ್ರಾವಿಡ ಭಾಷಾಕುಟುಂಬಸದಸ್ಯಭಾಷೆ ಹಾಗು ಸಂಸ್ಕೃತವು ಇಂಡೋ-ಯುರೋಪಿಯನ್ ಭಾಷಾಕುಟುಂಬಸದಸ್ಯಭಾಷೆ. ಸಂಸ್ಕೃತಕ್ಕೆ ಆರ್ಯಭಾಷೆಯೆಂಬ ಒಂದು ಬಿರುದು ಇದೆ. ಅದರ ಅರ್ಥ ‘ಸುಸಂಸ್ಕೃತರ ಉತ್ತಮರ ಬ್ರಾಹ್ಮಣರ ಪಂಡಿತರ ಭಾಷೆ’ ಎಂದು.

    2. ಇಂದಿನ ಆಡುಗನ್ನಡವು ಬೆರೆಸಿಸಿಕೊಳ್ಳುವ ಅನ್ಯಭಾಷಾಪದಗಳು ಹೆಚ್ಚು ಸಂಸ್ಕೃತದದ್ದಲ್ಲ. ಸಂಸ್ಕೃತಪದಗಳಿಗಿಂತ ಹೆಚ್ಚು ಉರ್ದು(ಅರಬ್ಬಿ, ಪಾರಸಿ,), ಪ್ರಾಕೃತಮೂಲದ (ಮರಾಠಿ, ಹಿಂದಿ), ಐರೋಪ್ಯಮೂಲದ (ಇಂಗ್ಲೀಷು, ಪೋರ್ಚುಗೀಸು) ಮುಂದವು ಹೆಚ್ಚು.

    3. ಸಂಸ್ಕೃತಭಾಷಾಭಿಮಾನಿಗಳು ಪ್ರಸ್ತುತ ಲೇಖನವ ಮುಖಾಂತರ ತಾವೆ ಸಂಸ್ಕೃತ ಹಾಗು ಕನ್ನಡಗಳನ್ನು ಪೈಪೋಟಿಗೆ ಎಸಗುವುದು ಸಾಧುವಲ್ಲ.

    ಉತ್ತರ
  8. kiranmalenadu's avatar
    ಜುಲೈ 19 2014

    ಆರ್ಯನ್ನರು ದ್ರಾವಿಡರ ಮೇಲೆ ಪ್ರಭಾವ ಬೀರಿದರೆ ಹೊರತು ಅತಿಕ್ರಮಿಸಲಿಲ್ಲ. ನನ್ನ ವಿಚಾರಧಾರೆ ಹೀಗಿದೆ
    ೧. ಕ್ರಿ ಪು ೨೦೦೦ ಸುಮಾರಿನಲ್ಲಿ ಪರ್ಶಿಯದಿಂದ ಆರ್ಯನ್ನರು ಬಂದಿದ್ದು ಹೌದು.
    ೨. ಹಲಾವರು ಜನಾಂಗಗಳು ಆರ್ಯನ್ನರ ಸಂಸ್ಕೃತಿಗೆ ಒಗ್ಗಿಕೊಂಡರೆ ಹೊರತು ಆಕ್ರಮಣ ಮಾಡಲಿಲ್ಲ (ವಲಸೆ ಬಂದರೆ ಹೊರತು ಆಕ್ರಮಣ ಮಾಡಲಿಲ್ಲ)
    ೩. ಈ ಕಾಲವನ್ನು ಋಗ್ವೇದದ ಕಾಲ ಎಂದು ಕರೆಯುತ್ತಾರೆ.
    ೫. ಋಗ್ವೇದದಲ್ಲಿ ‘ಮಗಧ’ ದ ಹೆಸರು ಇಲ್ಲ .
    ೬. ಹಳೆಯ ಪರ್ಶ್ಯಾದ ಜೋರಾಷ್ಟ್ರಿಯನ್ನರ ಅವೆಸ್ತಾ ಗ್ರಂಥಕ್ಕು ಋಗ್ವೇದಕ್ಕೂ ಹಲವಾರು ಸಾಮ್ಯತೆಗಳಿವೆ.
    Word ——– Sanskrit ——- Avestan
    gold————hiranya——— zaranya
    army———– séna———– haena
    spear———–rsti ———– arsti
    sovereignty———–ksatra ———–xsaθra
    lord———– ásura———– ahura
    sacrifice———– yajñá———– yasna
    sacrificing priest———– hótar———– zaotar
    sacrificing drink———– sóma———– haoma
    member of religious community———–aryamán———– airyaman
    god———– devá———– daeva
    Sarsavati River——-Sarsvarti————-Haraxavati
    ೭. ಸಿಂದು’ ಕಣಿವೆ ನಾಗರೀಕತೆ'(ಹರಪ್ಪ ಮತ್ತು ಮೆಹಂಜಾದಾರೋ)ಯ ಕೊನೆಯ ಭಾಗದಲ್ಲಿ ಆರ್ಯನ್ನರ ವಲಸೆ ನಡೆಯಿತು. ಈ ನಾಗರಿಕತೆಯಲ್ಲಿ ಬರುವ ‘ಪಶುಪತಿನಾಥ’ ಆರ್ಯ ದೇವರೇ ಆಗಿದ್ದಾನೆ,ಅರ್ಥದಲ್ಲಿ ಈ ನಾಗರೀಕತೆಯ ಮೇಲು ಆರ್ಯನ್ನರ ಪರಿಣಾಮ ಬೀರಿತ್ತು.
    ೮. ದಕ್ಷಿಣ ಭಾರತದ ಪ್ರಾಚೀನ ದ್ರಾವಿಡ ನಾಗರಿಕತೆಯ ಮೇಲು ಆರ್ಯನ್ನರು ಪ್ರಭಾವ ಬೀರಿದರು.
    ೯. ದಕ್ಷಿಣ ಭಾರತದ ಪ್ರಾಚೀನ ರಾಜ ವಂಶಗಳಾದ ಕದಂಬ,ಚೋಳ,ಪಲ್ಲವ,ಚಾಲುಕ್ಯರ ದೊರೆಗಳ ಹೆಸರು ಗಳು ಆರ್ಯ/ಹಿಂದೂ ಹೆಸರುಗಳೇ ಆಗಿವೆ.
    ೧೦. ಇಂಡೋ ಆರ್ಯರ ನುಡಿ ಮತ್ತು ದ್ರಾವಿಡ ನುಡಿ ಬೇರೆ ಬೇರೆಯೇ. ದ್ರಾವಿಡ ನುಡಿಗಳಲ್ಲಿ ಸಂಸ್ಕೃತದ ಪ್ರಭಾವ ಇರುವುದಕ್ಕೆ ಆರ್ಯರ ಪ್ರಭಾವವೇ ಆಗಿದೆ.
    ೧೧. ಅತಿ ಹೆಚ್ಹು ಬೆಂಬಲಿತ ಕ್ರುಗನ್ನರ ಸಿದ್ದಾಂತ ಕೂಡ ಇದನ್ನೇ ಹೇಳುತ್ತದೆ( ಮದ್ಯ ಪ್ರಾಚ್ಯದಿಂದ ಇಂಡೋ -ಯುರೋಪಿಯನ್ನರು ಯುರೋಪಿನೆದೆಗು ಹಾಗು ಇತ್ತ ಭಾರತದೆಡೆಗು ವಲಸೆ ಬಂದರು ಅಂತ )
    ೧೨. ಮದ್ಯ ಪ್ರಾಚ್ಯದ ಹಿತ್ತೆಟ್ಟಿ ಮತ್ತು ಮಿತ್ತಾನಿ ರಾಜ ವಂಶಗಳಿಗು ಅರ್ಯನ್ನರಿಗೂ ಹಲವಾರು ಹೋಲಿಕೆಗಳಿವೆ !

    ಉತ್ತರ
    • valavi's avatar
      valavi
      ಜುಲೈ 19 2014

      kiranmalenadu ಅವರೆ ಆರ್ಯನ್ನರು ದ್ರಾವಿಡರ ಮೇಲೆ ಪ್ರಭಾವ ಬೀರಿದರೆ ಹೊರತು ಅತಿಕ್ರಮಿಸಲಿಲ್ಲ. ನನ್ನ ವಿಚಾರಧಾರೆ ಹೀಗಿದೆ
      ೧. ಕ್ರಿ ಪು ೨೦೦೦ ಸುಮಾರಿನಲ್ಲಿ ಪರ್ಶಿಯದಿಂದ ಆರ್ಯನ್ನರು ಬಂದಿದ್ದು ಹೌದು.
      ೨. ಹಲಾವರು ಜನಾಂಗಗಳು ಆರ್ಯನ್ನರ ಸಂಸ್ಕೃತಿಗೆ ಒಗ್ಗಿಕೊಂಡರೆ ಹೊರತು ಆಕ್ರಮಣ ಮಾಡಲಿಲ್ಲ (ವಲಸೆ ಬಂದರೆ ಹೊರತು ಆಕ್ರಮಣ ಮಾಡಲಿಲ್ಲ)
      ೩. ಈ ಕಾಲವನ್ನು ಋಗ್ವೇದದ ಕಾಲ ಎಂದು ಕರೆಯುತ್ತಾರೆ.
      ೫. ಋಗ್ವೇದದಲ್ಲಿ ‘ಮಗಧ’ ದ ಹೆಸರು ಇಲ್ಲ . ಹೀಗೆ ನೀವು ಹೇಳಿದ್ದೀರಿ. ಆದರೆ ಋಗ್ವೇದದಲ್ಲಿ ಅನೇಕ ಕಡೆಗಳಲ್ಲಿ ತುಂಬಿ ಹರಿಯುವ ಸರಸ್ವತಿ ನದಿಯ ವರ್ಣನೆ ಇದೆಯಲ್ಲ್??? ಆದರೆ ಸರಸ್ವತಿ ನದಿ ಬತ್ತಿ ಹೋಗಿ ವಿಜ್ಞಾನಿಗಳ ಪ್ರಕಾರ5000 ವರ್ಷಗಳಾಗಿವೆ ಎನ್ನುತ್ತಾರಲ್ಲ? ಅಂದ ಮೇಲೆ ಆರ್ಯರು ಹೊರಗಿಂದ ಬಂದರೆಂದು ಹೇಗೆ ಹೇಳುತ್ತೀರಿ? ಇನ್ನು ಸಂಸ್ಕೃತ ಹೋಲುವ ಅನೇಕ ಶಬ್ದಗಳನ್ನು ಹೇಳಿರುವಿರಿ. ಇವತ್ತು ಇಂಗ್ಲೀಷ ಹೇಗೆ ಜಗತ್ತಿನ ಹೆಚ್ಚು ಭಾಷೆಗಳಲ್ಲಿ ಹಾಸು ಹೊಕ್ಕಾಗಿದೆಯೋ ಹಾಗೆ ಅವತ್ತು ಪ್ರಸಿದ್ದಿಯಲ್ಲಿದ್ದ ಸಂಸ್ಕೃತವು ಆ ರಿತಿಯಲ್ಲಿ ಜಗತ್ತಿನ ಭಾಷೆಯಲ್ಲಿ ಬಳಕೆ ಆಗಿರಬಹುದು. ಅಥವಾ ಇಂಗ್ಲೀಶರಂತೆ ಭಾರತೀಯರು ಅವತ್ತು ಬೇರೆ ದೇಶಗಳಲ್ಲಿ ವಲಸೆ ಹೋಗಿ ತಮ್ಮ ಭಾಷೆ ತಮ್ಮ ಸಂಸ್ಕೃತಿ ಬೆಳೆಸಿರಬಹುದಲ್ಲವೆ??? ಹಾಗೊಂದು ತರ್ಕವನ್ನು ನಾವೇಕೆ ಮಾಡಬಾರದು????????

      ಉತ್ತರ
  9. ಗಿರೀಶ್'s avatar
    ಗಿರೀಶ್
    ಜುಲೈ 19 2014

    ೧. ಕ್ರಿ ಪು ೨೦೦೦ ಸುಮಾರಿನಲ್ಲಿ ಪರ್ಶಿಯದಿಂದ ಆರ್ಯನ್ನರು ಬಂದಿದ್ದು ಹೌದು.
    ೨. ಹಲಾವರು ಜನಾಂಗಗಳು ಆರ್ಯನ್ನರ ಸಂಸ್ಕೃತಿಗೆ ಒಗ್ಗಿಕೊಂಡರೆ ಹೊರತು ಆಕ್ರಮಣ ಮಾಡಲಿಲ್ಲ (ವಲಸೆ ಬಂದರೆ ಹೊರತು ಆಕ್ರಮಣ ಮಾಡಲಿಲ್ಲ)

    ಕಿರಣ್ ಅವರು ಆರ್ಯರ ಆಕ್ರಮ ಸಿದ್ದಾಂತವನ್ನು ಹಿಂಬಾಗಿಲ ಮೂಲಕ ಒಳ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ವಾಮಿ ಕಿರಣ್ ಅವರೆ ಎಚ್ಚೆತ್ತುಕೊಳ್ಳಿ ಆರ್ಯನ್ನರ ಆಕ್ರಮಣ ಎನ್ನುವುದು ಒಂದು ಪೊಳ್ಳು ಸಿದ್ದಾಂತ. ಅದು ಆಕ್ರಮಣವೋ ವಲಸೆಯೋ ಅದು ಆಗಲಿಲ್ಲ. ಅಕಸ್ಮಾತ್ ಆಗಿದ್ದಿದ್ದರೆ ವಲಸಿಗರು ಪ್ರಭಾವ ಬೀರುತ್ತಿರಲಿಲ್ಲ. ಕಾರಣ ವಲಸಿಗರು ಸ್ಥಳೀಯರಲ್ಲಿ ಬೆರೆತು ಕಳೆದು ಹೋಗುತ್ತಿದ್ದರು. ವಲಸಿಗರು ಕಡಿಮೆ ಇರುತ್ತಾರೆ ಅವರು ಪ್ರಭಾವ ಬೀರಲು ಸಾಧ್ಯವಿಲ್ಲ ಬದಲಿಗೆ ಇಲ್ಲಿನ ಜನಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಇದು ಕನಿಷ್ಠ ಸಾಮಾನ್ಯಜ್ಞಾನ. ಬ್ರೀಟೀಷರು ಮುಸಲ್ಮಾನರು ಆಕ್ರಮಿಸಿದರು ಹೇರಿದರು (ನಿಮ್ಮ ಹಿಂದಿಯ ಹೇರಿಕೆ ಅಪಾಲಾಪದಂತೆ) ಅದಕ್ಕೆ ಅದು ಇಲ್ಲಿ ಬೆರೆಯಿತು. ಆರ್ಯರ ಆಕ್ರಮಣವೆಂಬುದು ಪೊಳ್ಳು ಎಂಬುದನ್ನು ಸಂಶೋಧಕರು ಈಗಾಗಲೆ ನಿರೂಪಿಸಿದ್ದಾರೆ. ಅದನ್ನೇ ಹಿಡಿದು ಜೋತಾಡಬೇಡಿ. ನಿಮ್ಮ ಮೊದಲನೆ ಸಿದ್ದಾಂತವೇ ಇಲ್ಲವೆಂದ ಮೇಲೆ ಮಿಕ್ಕ ನಿಮ್ಮೆಲ್ಲ ಬಡಬಡಿಕೆಗಳು ಜೊಳ್ಳೆ. :p

    ಉತ್ತರ
    • ಸಂತೋಷ's avatar
      Maaysa
      ಜುಲೈ 19 2014

      1. ಆರ್ಯರ ಒಳವಲಸೆಯು ಆಗಿದೆಯೋ ಇಲ್ಲವೋ ಎಂಬುದು, ಆರ್ಯರು ಯಾರು ಎಂಬುದನ್ನು ಡಿಪೈನ್-ಮಾಡಿದ ಮೇಲೆ.

      2. ನರ್ಮದಾನದಿಯ ಉತ್ತರಕ್ಕೆ ಕನ್ನಡಜನಾದಿ ‘ದ್ರಾವಿಡಭಾಷಾ’ ಜನಾಂಗದವರು ನಾಗರಿಕತಾಸ್ಥಾಮನೆಗೈದು ಇದ್ದಿದ್ದು ಸಾಬೀತಿಸಿಲ್ಲ.

      3. ಸಿಂಧುನದಿತಟನಾಗರಿಕತೆಯು ‘ದ್ರಾವಿಡಭಾಷಾ’ ಜನಾಂಗಗಳದ್ದು ಎಂಬುದಕ್ಕೆ ಯಾವ ಪುರಾವೆಯೇ ಇಲ್ಲ. ಅದು ಬರೀ ಊಹೆ. ದ್ರಾವಿಡಭಾಷಾ ಜಾನಪದದಲ್ಲಿ ಸಿಂಧು, ಸರಸ್ವತಿ.. ಮುಂತಾದವು ಇವೆಯೇ?
      ಸಿಂಧುನದಿತಟನಾಗರಿಕತೆ ಒಂದು ವೈದಿಕನಾಗರಿಕತೆ ಎನ್ನಬಹುದು.

      ನನ್ನ ಪ್ರಕಾರ.

      1. ಹೆಸರುಗಳು ಏನೇ ಇರಲಿ, ಆರ್ಯರು ಹಾಗು ದ್ರಾವಿಡರು ಭಾರತದ(ಸಿಂಧು-ಸರಸ್ವತಿ ನದಿಯಿಂದ ದಕ್ಷಿಣಸಾಗರದ ವರೆಗಿನ ಭೂ) ಮೂಲನಿವಾಸಿಗಳೇ. ಆದರೆ ಆ ಎರಡು ಜನಾಂಗಗುಂಪುಗಳು ಮೂಲತಃ ಭಾಷೆ, ಸಂಸ್ಕೃತಿ, ಊಟ ಮುಂತಾದವುಗಳಲ್ಲಿ ವಿಭಿನ್ನವಾದವು. ಆದರೆ ಈ ಎರಡುಗುಂಪುಗಳ ನಡುವೆ ಇರುವ ಸರಹದ್ದು ಕರಾವಕ್ಕಾಗಿ ಗುರುತಿಸುವುದು ಕಷ್ಟ. ಐತಿಹಾಸಿಕವಾಗಿ ನರ್ಮದೆಯ ದಕ್ಷಿಣಕ್ಕೆ ‘ದ್ರಾವಿಡ’ಜನಾಂಗದ ನೆಲೆ!!

      ಉತ್ತರ
    • kiranmalenadu's avatar
      ಜುಲೈ 19 2014

      ಆಯ್ತು ಗುರುಗಳೇ ! ಆರ್ಯ ದ್ರಾವಿಡ ಸಿದ್ಧಾಂತಗಳನ್ನ ಬದಿಗೆ ಇಡೋಣ ಏಕೆಂದರೆ ನೀವು ದ್ರಾವಿಡ ಭಾಷೆಗಳನ್ನು ಸೃಷ್ಟಿ ಮಾಡಿದ್ದೀರಿ ಅಂತ ಕಾಣುತ್ತೆ ಅಲ್ವ !?
      ಹಾಗಾದರೆ ಈಗ ಹೇಳಿ ದ್ರಾವಿಡ ಭಾಷೆಗಳು ಹಾಗು ಇಂಡೋ ಯುರೊಪಿಅಯನ್ ಭಾಷೆಗಳಿಗೆ ಏಕೆ ಸಾಮ್ಯತೆ ಇಲ್ಲ ?
      ಇಂಡೋ ಯುರೋಪಿಯನ್ : ಇಂಗ್ಲಿಷ್, ಸಂಸ್ಕೃತ ,ಲ್ಯಾಟಿನ್, ಪ್ರಕೃತ ,ಗ್ರೀಕ್, ಹಿಂದಿ ,ಫ್ರೆಂಚ್,ಬೆಂಗಾಲಿ,ಜರ್ಮನ್,ಸಿಂಹಳಿ……
      ದ್ರಾವಿಡ:ಕನ್ನಡ,ತೆಲುಗು,ಮಲಯಾಳಂ,ತಮಿಳು,ತುಳು,ಬ್ರಾಹುಯಿ.

      ಉತ್ತರ
      • ಸಂತೋಷ's avatar
        Maaysa
        ಜುಲೈ 20 2014

        ಹೆಸರುಗಳು ಏನೇ ಇರಲಿ, ಆರ್ಯರು ಹಾಗು ದ್ರಾವಿಡರು ಭಾರತದ(ಸಿಂಧು-ಸರಸ್ವತಿ ನದಿಯಿಂದ ದಕ್ಷಿಣಸಾಗರದ ವರೆಗಿನ ಭೂ) ಮೂಲನಿವಾಸಿಗಳೇ. ಆದರೆ ಆ ಎರಡು ಜನಾಂಗಗುಂಪುಗಳು ಮೂಲತಃ ಭಾಷೆ, ಸಂಸ್ಕೃತಿ, ಊಟ ಮುಂತಾದವುಗಳಲ್ಲಿ ವಿಭಿನ್ನವಾದವು.

        ಉತ್ತರ
  10. kiranmalenadu's avatar
    ಜುಲೈ 19 2014

    ಆಯ್ತು ಗುರುಗಳೇ ! ಆರ್ಯ ದ್ರಾವಿಡ ಸಿದ್ಧಾಂತಗಳನ್ನ ಬದಿಗೆ ಇಡೋಣ ಏಕೆಂದರೆ ನೀವು ದ್ರಾವಿಡ ಭಾಷೆಗಳನ್ನು ಸೃಷ್ಟಿ ಮಾಡಿದ್ದೀರಿ ಅಂತ ಕಾಣುತ್ತೆ ಅಲ್ವ !?
    ಹಾಗಾದರೆ ಈಗ ಹೇಳಿ ದ್ರಾವಿಡ ಭಾಷೆಗಳು ಹಾಗು ಇಂಡೋ ಯುರೊಪಿಅಯನ್ ಭಾಷೆಗಳಿಗೆ ಏಕೆ ಸಾಮ್ಯತೆ ಇಲ್ಲ ?
    ಇಂಡೋ ಯುರೋಪಿಯನ್ : ಇಂಗ್ಲಿಷ್, ಸಂಸ್ಕೃತ ,ಲ್ಯಾಟಿನ್, ಪ್ರಕೃತ ,ಗ್ರೀಕ್, ಹಿಂದಿ ,ಫ್ರೆಂಚ್,ಬೆಂಗಾಲಿ,ಜರ್ಮನ್,ಸಿಂಹಳಿ……
    ದ್ರಾವಿಡ:ಕನ್ನಡ,ತೆಲುಗು,ಮಲಯಾಳಂ,ತಮಿಳು,ತುಳು,ಬ್ರಾಹುಯಿ.

    ಉತ್ತರ
  11. ಸಂತೋಷ's avatar
    Maaysa
    ಜುಲೈ 19 2014

    ಆರ್ಯ ಜನಾಂಗದ ಒಳವಲಸೆ ಥಿಯರಿಗೂ.. ಈ ಭಾಷಾವಿಜ್ಞಾನಕ್ಕೂ… ಕಲ್ಪಿತಗಳನ್ನು ಬಳಸಿ ವಾದಗಳು !! ಹಾಗೂ ಇದಕ್ಕೆ ‘ಎಲ್ಲರ ಕನ್ನಡ’ವೆಂಬುದರ ತಳುಕು.

    ಇವಿಷ್ಟನ್ನು ಬೇರೆ ಬೇರೆ ಅಸಂಬಂಧವಿಷಯವಸ್ತುಗಳನ್ನಾಗಿ ನೋಡಬೇಕು.

    ‘ಎಲ್ಲರ ಕನ್ನಡ’ಎಂದು ಕೇವಲ ಅಲ್ಪಪ್ರಾಣದಲ್ಲಿ ಪ್ರಸ್ತುತ ಕನ್ನಡವನ್ನು ಬರೆಯುವುದೇ ತಪ್ಪು. ಏಕೆಂದರೆ ಲೇಖನಕನ್ನಡಕ್ಕೂ ಸಂಭಾಷಣಾಕನ್ನಡಕ್ಕೂ vocabularyಯಲ್ಲೇ ಅನೇಕ ವ್ಯತ್ಯಾಸಗಳಿವೆ.

    ಉದಾ. “ಧೂಮಪಾನ ನಿಷೇಧಿಸಿದೆ” ಎಂಬುದನ್ನು “ದೂಮಪಾನ ನಿಶೇದಿಸಿದೆ” ಎಂದು ಬರೆದರೂ ಅದು ಎಲ್ಲರಿಗೂ ಸುಲಭವಾಗಿ ಹಾಗು ಸಂಭಾಷಣಾಕನ್ನಡದ ವ್ಯಾಕರಣಕ್ಕೆ ಹೊಂದದು. ಅದಕ್ಕೆ ಆ ವಿಷಯವನ್ನು “ಸಿಗರೇಟುಬೀಡಿ ಸೇದಬಾರದು”/”ಹೊಗೆಬತ್ತಿ ಸೇದೋ ಹಾಗಿಲ್ಲ” ಹೀಗೆ ಹೇಳುತ್ತೇವೆ.

    ‘ಎಲ್ಲರಕನ್ನಡ’ವು ಸುಮ್ಮನೆ ಈಗಿನ ಲೇಖನಕನ್ನಡವನ್ನೇ ಅಲ್ಪಪ್ರಾಣದಲ್ಲಿ ಬರೆಯುವ ಒಂದು ಹೇಸಿಗೆ! ಇದರ ಜತೆ ಹಲವು ಸಲ ತಿಳಿಯಲು ಕಷ್ಟಕರವಾದ ಹಾಗು ಕೆಲವು ಸಲ ವ್ಯಾಕರಣಕ್ಕೂ ಹೊಂದದ ‘ಹೊಸ ಪದಗಳನ್ನು’ ಕಲಸುವುದು ಒಂದು ಬಗೆಯ ವಿಕೃತಿ.

    ನನಗಂತೂ ಈ ‘ಎಲ್ಲರಕನ್ನಡ’ಕ್ಕೆ ಹೆಚ್ಚು ಗಂಭೀರತೆ ತೋರಿಸುವ ಅಗತ್ಯವೇ ತೋಚುವುದಿಲ್ಲ. ಆ ಬಗೆಗೆ ಸರಕಾರದ ಇಲ್ಲವೇ ಸಾಹಿತ್ಯಕಾರರ ಮನ್ನಣೆಯಾಗಲಿ ಸಿಗುವುದಿಲ್ಲ.

    ಉತ್ತರ
  12. R's avatar
    R
    ಜುಲೈ 29 2014

    Ellara kannada itself is a wrong concept.

    ಉತ್ತರ
  13. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    jayakumarcsj@.com

    ಉತ್ತರ

Leave a reply to ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಚಡ್ಯ ಜಿಲ್ಲೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments