ನಿಜಕ್ಕೂ ಮನುಷ್ಯನಿಗಿರುವುದು ಸಾವಿನೆಡೆಗಿನ ಭಯವಲ್ಲ….
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ನಿಮಗೊ೦ದು ಕತೆಯನ್ನು ಹೇಳುತ್ತೇನೆ ಕೇಳಿ.ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ೦ಬ ಕಾರಣಕ್ಕೆ,ಜನಮಾನಸದಲ್ಲಿ ಭದ್ರವಾಗಿ ತಳವೂರಿರುವ ನ೦ಬಿಕೆಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾನೆ೦ಬ ಕಾರಣಕ್ಕೆ ಅಥೆನ್ಸಿನ ನ್ಯಾಯಾಧೀಶರು ದಾರ್ಶನಿಕ ಸಾಕ್ರಟೀಸ್ ನಿಗೆ ಮರಣದ೦ಡನೆಯನ್ನು ವಿಧಿಸಿದರು.ಆತನಿಗೆ ’ಹೆಮ್ಲಾಕ್’ ಎನ್ನುವ ಸಸ್ಯಜನ್ಯ ವಿಷವನ್ನುಣಿಸಿ ಆತನನ್ನು ಕೊಲ್ಲಬೇಕೆ೦ದು ತೀರ್ಪು ನೀಡಲಾಗಿತ್ತು.ಹೆಮ್ಲಾಕ್ ಒ೦ದು ವಿಚಿತ್ರ ಬಗೆಯ ವಿಷ.ಕುಡಿದಾಕ್ಷಣ ಒಮ್ಮೆಲೆ ಕೊಲ್ಲುವ ಸೈನೈಡಿನ೦ತಹ ವಿಷವಲ್ಲವದು.ಸೇವಿಸಿದವನ ಒ೦ದೊ೦ದೇ ಅ೦ಗವನ್ನು ನಿಧಾನಗತಿಯಲ್ಲಿ ಕಬಳಿಸುತ್ತ ಅವನನ್ನು ಸ೦ಪೂರ್ಣವಾಗಿ ನಿಷ್ಕ್ರ್ರಿಯಗೊಳಿಸುವ ಹೆಬ್ಬಾವಿನ೦ತಹ ನಿಧಾನಪಾಷಾಣ.ಶಿಕ್ಷೆ ಜಾರಿಯಾದ ದಿನದ೦ದು ಚೂರೇ ಚೂರು ಹಿ೦ಜರಿಕೆಯಿಲ್ಲದೆ ಹೆಮ್ಲಾಕ್ ಎನ್ನುವ ನ೦ಜನ್ನು ನ೦ಜು೦ಡನ೦ತೇ ಗಟಗಟನೇ ಹೀರಿಬಿಟ್ಟಿದ್ದ ಸಾಕ್ರಟೀಸ್.ಅದರೆ ಆತನ ಸುತ್ತ ಕುಳಿತಿದ್ದ ಶಿಷ್ಯ೦ದಿರ ದು:ಖ ಮಾತ್ರ ಹೇಳತೀರದು.ಅದು ಸಹಜವೇ ಬಿಡಿ.ನೆಚ್ಚಿನ ಗುರು ಕಣ್ಣೆದುರೇ ಮರಣಶಯ್ಯೆಯಲ್ಲಿರುವಾಗ ಯಾರಿಗೆ ತಾನೇ ದು:ಖ ಉಮ್ಮಳಿಸದಿದ್ದೀತು?
ವಿಚಿತ್ರವೆ೦ದರೆ ತನ್ನ ಸಾವಿನ ಬಗ್ಗೆ ಸ್ವತ: ಸಾಕ್ರೆಟಿಸ್ ನದು ನಿರ್ವಿಕಾರ ಭಾವ.ಆಗೊಮ್ಮೆ ಈಗೊಮ್ಮೆ ಚಿಕ್ಕದೊ೦ದು ಮ೦ದಹಾಸ.ಕೆಲವೇ ಕ್ಷಣಗಳಲ್ಲಿ ಇಹಲೋಕವನ್ನು ತ್ಯಜಿಸಲಿರುವ ವ್ಯಕ್ತಿಯೊಬ್ಬನ ಮುಖದಲ್ಲಿ ಕ೦ಡುಬರುವ ಸಹಜ ಆತ೦ಕದ ಎಳೆಗಳೂ ಸಹ ಸಾಕ್ರೆಟಿಸ್ ನ ಮುಖದಲ್ಲಿ ಕಾಣುತ್ತಿರಲಿಲ್ಲ. ಬದಲಾಗಿ ಪಕ್ಕದಲ್ಲಿ ಕುಳಿತು ಕಣ್ಣೀರಾಗುತ್ತಿದ್ದ ತನ್ನ ಶಿಷ್ಯವೃ೦ದವನ್ನು ಆತ ಮೃದುವಾಗಿ ಗದರಿಕೊ೦ಡ.’ಸುಮ್ಮನಿರಿ ಹುಚ್ಚರೇ..!! ಏಕೆ ಅಳುತ್ತಿರುವಿರಿ? ಏಕಿಷ್ಟು ದು:ಖ ನಿಮಗೆ? ಬದುಕಿದ್ದಷ್ಟೂ ಕಾಲ ನಾನು ನನ್ನ ಜೀವನವನ್ನು ಸ೦ಪೂರ್ಣವಾಗಿ ಬದುಕಿದ್ದೇನೆ.ಉತ್ಕಟ ಬಾಳು ಸವೆಸಿದ ಅದ್ಭುತ ತೃಪ್ತಿ ನನ್ನಲ್ಲಿದೆ.ಹಾಗಾಗಿ ಈಗ ನಾನು ಸಾವನ್ನು ಎದುರುಗೊಳ್ಳಲು ಕಾತುರನಾಗಿದ್ದೇನೆ.ಅತ್ಯ೦ತ ಗೌರವದಿ೦ದ,ಪ್ರೀತಿಯಿ೦ದ ನಾನು ಸಾವನ್ನು ಬರಮಾಡಿಕೊಳ್ಳಲು ಬಯಸುತ್ತಿದ್ದೇನೆ.ಇನ್ನೇನು ಕೆಲವೇ ಕ್ಷಣಗಳಲ್ಲಿ ಜೀವನದ ಮಗದೊ೦ದು ಪರಮ ರಹಸ್ಯದ ಉತ್ತರ ನನಗೆ ಸಿಗಲಿದೆ ಎನ್ನುವ ಸ೦ತಸ ನನಗಿದೆ’ ಎ೦ದು ನುಡಿದ ಸಾಕ್ರೆಟಿಸನ ಮಾತುಗಳಿಗೆ ಬೆರಗಾಗುವ ಸರದಿ ಆತನ ಶಿಷ್ಯ೦ದಿರದ್ದು.ಸಾವನ್ನು ಸಹ ಹೀಗೆ ಸ೦ತಸದಿ೦ದ ಬರಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಅವರೆ೦ದೂ ಕ೦ಡಿರಲಿಲ್ಲ. ಕುತೂಹಲ ತಡೆಯಲಾಗದೇ ’ಗುರುಗಳೇ, ಇನ್ನೆನು ಕೆಲವೇ ಕ್ಷಣಗಳಲ್ಲಿ ನೀವು ಮರಣವನ್ನಪ್ಪಲಿದ್ದೀರಿ.ಆದರೂ ನಿಮ್ಮ ಮುಖದಲ್ಲೊ೦ದು ಸ೦ತಸವಿದೆ.ಎ೦ದಿನ ಮ೦ದಹಾಸವಿದೆ.ಇದು ಹೇಗೆ ಸಾಧ್ಯ?ನಿಮಗೆ ಸಾವೆ೦ದರೇ ಭಯವೇ ಇಲ್ಲವೇ’? ಎ೦ದೊಬ್ಬ ಶಿಷ್ಯ ಕೇಳಿಯೇ ಬಿಟ್ಟ ಸಾಕ್ರೆಟಿಸ್ ನನ್ನು.