ಯಕ್ಷಗಾನದಲ್ಲಿ ಏಸುಕ್ರಿಸ್ತ
– ವಿನಾಯಕ ಹಂಪಿಹೊಳಿ
ಏಸುಕ್ರಿಸ್ತನ ಜೀವನ ಕಥೆಯನ್ನು ಯಕ್ಷಗಾನದ ಆಟದ ರೂಪದಲ್ಲಿ ತೋರಿಸುವ ಪ್ರಯತ್ನವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಇಂಥದೊಂದು ಪ್ರಯತ್ನವು ಕ್ರಿಶ್ಚಿಯಾನಿಟಿಯನ್ನು ಹರಡುವ ಹುನ್ನಾರದ ಭಾಗವೆಂದು ಭಾವಿಸಿದೆ. ಏಸುಕ್ರಿಸ್ತನ ಜೀವನವನ್ನು ಭಾರತೀಯ ಕಲೆಯೊಂದರ ಮೂಲಕ ತೋರಿಸಿ, ಏಸುವು ಇಡೀ ಮಾನವ ಸಮುದಾಯವನ್ನು ರಕ್ಷಿಸಲು ಹುಟ್ಟಿದ್ದಾನೆ ಎಂಬ ಕ್ರಿಶ್ಚಿಯಾನಿಟಿಯ ನಂಬಿಕೆಯೊಂದನ್ನು ಹರಡಿ, ಜನರನ್ನು ಮತಾಂತರಗೊಳಿಸುವ ಯೋಜನೆಯ ಒಂದು ಭಾಗ ಎಂಬುದು ಮೊದಲನೇ ಗುಂಪಿನ ವಾದವಾಗಿದೆ. ಹೀಗಾಗಿ ಇಂಥ ಪ್ರಯೋಗಗಳು ಉಚಿತವಲ್ಲ ಎಂಬುದು ಈ ಗುಂಪಿನವರ ಅಭಿಪ್ರಾಯ.
ಇನ್ನೊಂದು ಗುಂಪು ಇಂಥ ಹೊಸ ಪ್ರಯತ್ನವನ್ನು ಸ್ವಾಗತಿಸುತ್ತದೆ. ಕಲೆಗೆ ಯಾವುದೇ ನಿರ್ಬಂಧಗಳಿರಕೂಡದು. ಯಕ್ಷಗಾನವು ಯಾರೊಬ್ಬರ ಸೊತ್ತೂ ಅಲ್ಲ. ಭಾರತದಲ್ಲಿರುವ ಕ್ರಿಶ್ಚಿಯನ್ನರು ತಮ್ಮ ಯಕ್ಷಗಾನ ಕಲೆಯಲ್ಲಿ ಏಸುವನ್ನೇಕೆ ರೂಪಿಸಿಕೊಳ್ಳಬಾರದು ಎನ್ನುವದು ಎರಡನೇ ಗುಂಪಿನವರ ವಾದವಾಗಿದೆ. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯಬೇಕು. ಈ ರೀತಿಯ ಪ್ರಯೋಗಗಳು ಕೋಮು ಸೌಹಾರ್ದಕ್ಕೆ ಅಡಿಗಲ್ಲಾಗಿರುತ್ತವೆ. ಆ ನಿಟ್ಟಿನಲ್ಲಿ ಇಂಥ ಪ್ರಯೋಗಗಳನ್ನು ಅನುಮತಿಸಬೇಕು ಎನ್ನುವದು ಈ ಗುಂಪಿನವರ ಅಭಿಪ್ರಾಯವಾಗಿದೆ.
ಯಕ್ಷಗಾನದಲ್ಲಿ ಏಸುವಿನ ಕತೆಯನ್ನು ಅಳವಡಿಸುವದು ಚರ್ಚುಗಳ ಹುನ್ನಾರವೇ ಆಗಿರಬೇಕೆಂಬುದು ಕೇವಲ ಅನುಮಾನವಷ್ಟೇ ಆಗಿದೆ, ಒಂದು ವೇಳೆ ಅದು ಹುನ್ನಾರವೇ ಆಗಿದ್ದರೂ, ಆಗಿರದಿದ್ದರೂ ಅದೊಂದೇ ಕಾರಣವು ಅಂತಹ ಪ್ರಯೋಗಗಳನ್ನು ನಿಲ್ಲಿಸಲು ಸಮರ್ಥವಾದ ವಾದವಾಗುವದಿಲ್ಲ. ಅಲ್ಲದೇ ಕಲಾವಿದನಿಗೆ ಸ್ವಾತಂತ್ರ್ಯವಿರಬೇಕೆಂಬುದು ಎಲ್ಲರಿಗೂ ಒಪ್ಪಿತವಾಗುವ ಅಂಶವೇ ಆಗಿದೆ. ಹೀಗಾಗಿ ಯಕ್ಷಗಾನದಲ್ಲಿ ಏಸುವಿನ ಕತೆಯು ಅಳವಡಿಸಲ್ಪಡಬಾರದು ಎನ್ನುವ ವಾದವು ತರ್ಕಬದ್ಧವಾಗಿ ಯೋಚಿಸಿದಾಗ ಸಮರ್ಪಕವೆಂದು ಅನಿಸುವದಿಲ್ಲ.