ಎಂಥಾ ಮರುಳಯ್ಯಾ ಇದು…
– ಚಾಮರಾಜ ಸವಡಿ
ತುಂಬ ದಿನಗಳ ಹಿಂದೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ನೆನಪಾಗುತ್ತಿದೆ. ಓದುಗರನ್ನು ಈ ಪರಿ ಸೆಳೆಯುವಲ್ಲಿ ನೀವು ಯಶಸ್ವಿಯಾಗಿದ್ದು ಹೇಗೆ? ಎಂಬಂರ್ಥದ ಪ್ರಶ್ನೆಗೆ ಯಂಡಮೂರಿ ಉತ್ತರ: ಅವರ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ.
ಇವತ್ತು ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ವಿಷಯಗಳನ್ನು ನೋಡಿದಾಗ ನನಗೆ ಈ ಮಾತು ಪದೆ ಪದೆ ನೆನಪಿಗೆ ಬರತೊಡಗಿದೆ.
ಸ್ವಾಮಿಗಳು, ಕಪಟ ಜ್ಯೋತಿಷಿಗಳು, ಬಹುತೇಕ ರಾಜಕಾರಣಿಗಳು, ಟಿವಿಗಳು, ಪತ್ರಿಕೆಯವರು, ಸರ್ಕಾರಿ ನೌಕರರು, ವಕೀಲರು, ವೈದ್ಯರು- ಹೀಗೆ ನೀವು ಯಾವುದೇ ರಂಗ ನೋಡಿದರೂ ಸಾಕು, ಯಂಡಮೂರಿ ಹೇಳಿದ ಮಾತು ಸತ್ಯ ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಪ್ರತಿಯೊಬ್ಬರೂ ಜನರ ದೌರ್ಬಲ್ಯ ಹಾಗೂ ಅನಿವಾರ್ಯತೆಗಳನ್ನೇ ಬಳಸಿಕೊಳ್ಳುವವರು. ಎಲ್ಲೋ ಒಬ್ಬಿಬ್ಬರು ಪುಣ್ಯಾತ್ಮರು ಇರಬಹುದು. ಆದರೆ, ಬಹುತೇಕರ ಜೀವನ ನಡೆಯುತ್ತಿರುವುದೇ ಜನರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಿಂದ.
ಸಾಮಾನ್ಯ ವ್ಯಕ್ತಿಯಂತೆ ಓಡಾಡಿಕೊಂಡವ ಕಾವಿ ಬಟ್ಟೆ ಧರಿಸಿದ ಕೂಡಲೇ ಆತ ಸ್ವಾಮೀಜಿಯಾಗಿಬಿಡುತ್ತಾನೆ. ಕಿಂಚಿತ್ತೂ ವಿಚಾರ ಮಾಡದೇ ಆತನ ಕಾಲಿಗೆ ಬೀಳಲು ಜನ ಹಾತೊರೆಯತೊಡಗುತ್ತಾರೆ. ಖಾಲಿ ಓಡಾಡಿಕೊಂಡವ, ಒಂದಕ್ಕೆರಡು ಪಟ್ಟು ಹಣ ಕೊಡುತ್ತೇನೆ ಎಂದ ಕೂಡಲೇ ಸಾಲ ಮಾಡಿ ಹಣ ಕೊಡಲು ಜನ ಮುಂದಾಗುತ್ತಾರೆ. ಜ್ಯೋತಿಷಿಗಳು ಹೇಳಿದಂತೆ ನಡೆದುಕೊಳ್ಳುವವರು, ಜಾಹೀರಾತು ನೋಡಿ ಔಷಧಿ ಕೊಳ್ಳುವವರು, ಕೆಲಸಕ್ಕೆ ಹಣ ಕಟ್ಟುವವರು, ಅರ್ಧ ರೇಟಿಗೆ ಚಿನ್ನ ಕೊಳ್ಳಲು ಹಾತೊರೆಯುವವರು, ಕೆಲಸ ಕೊಡುತ್ತೇನೆ ಎಂದರೆ ಕರೆದಲ್ಲಿಗೆ ಹೋಗುವವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಮಾತಿಗೆ ಬಂದರೆ, ಅವರೂ ರಾಜಕಾರಣಿಗಳನ್ನು, ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು, ನಕಲಿ ವೈದ್ಯರನ್ನು, ವಂಚಕರನ್ನು ಬೈಯುವವರೇ. ಆದರೆ, ತಮಗೆ ಲಾಭವಾಗುತ್ತದೆ ಎಂದು ಅನಿಸಿದ ತಕ್ಷಣ ವಿವೇಚನೆ ಮರೆತುಬಿಡುತ್ತಾರೆ. ಕಣ್ಣು ಮುಚ್ಚಿಕೊಂಡು ಹಳ್ಳಕ್ಕೆ ಬೀಳುತ್ತಾರೆ.
ನಮಗೆಲ್ಲಾ ಅನುಕರಣೆಯ ಚಪಲ. ಗುಪ್ತವಾಗಿ ಲಾಭ ಮಾಡಿಕೊಳ್ಳುವ ಆಸೆಬುರುಕತನ. ಜನ ಗುರುತಿಸಲಿ ಎಂಬ ಆಸೆ. ಯಾರಿಗೋ ಏನೋ ದಕ್ಕಿತು ಎಂಬುದನ್ನು ಕೇಳಿದ ಮನಸ್ಸು ಮರ್ಕಟನಂತಾಗುತ್ತದೆ. ಸಾರಾಸಾರ ವಿವೇಚನೆ ಮಾಡದೇ ಧುಮುಕುತ್ತದೆ. ಬೇಗ ಲಾಭ ಮಾಡಿಕೊಳ್ಳುವ ಆಸೆ ವಾಸ್ತವವನ್ನು ಮರೆಸುತ್ತದೆ. ಕಷ್ಟಪಡದೇ, ಶೀಘ್ರವಾಗಿ ಹಣ, ಮನ್ನಣೆ, ಲಾಭ ಗಳಿಸುವ ಆಸೆ ನಮಗೆಲ್ಲ. ಭೂಮಿಗೆ ವಿಷ ಉಣಿಸಿಯಾದರೂ ಹೆಚ್ಚು ಬೆಳೆಯುವ ದುರಾಸೆ, ಕಂದಮ್ಮನನ್ನು ಕೊಂದಾದರೂ ನಿಧಿ ಪಡೆಯುವ ನೀಚತನ, ಇದ್ದುದನ್ನೆಲ್ಲ ಮಾರಿಯಾದರೂ ಚುನಾವಣೆ ಗೆಲ್ಲುವ ಹುಮ್ಮಸ್ಸು, ಕೋತಿಯಂತೆ ಆಡಿಯಾದರೂ ಕ್ಯಾಮೆರಾಗಳಲ್ಲಿ ಕಾಣಿಸಿಕೊಳ್ಳುವ ಚಪಲತೆ ಹುಟ್ಟುವುದೇ ಇದರಿಂದಾಗಿ. ಒಮ್ಮೆ ಇದು ರೂಢಿಯಾದರೆ ಮುಗಿಯಿತು, ಮತ್ತೆ ಮತ್ತೆ ಮಾಡುವಂತೆ ಪ್ರಚೋದಿಸುತ್ತದೆ. ಕ್ರಮೇಣ ಅದೇ ಚಟವಾಗುತ್ತದೆ.
ಮೆಚ್ಚಿನ ನಟ ಟೀಂ ಇಂಡಿಯಾದ ಟಿ-ಷರ್ಟ್ ಧರಿಸಿ ಕ್ರಿಕೆಟ್ ನೋಡಿದ ಎಂದ ಕೂಡಲೇ ಅವನ ಅಭಿಮಾನಿಗಳು ಅಂಥವೇ ಟಿ-ಷರ್ಟ್ ಕೊಂಡು, ತೊಟ್ಟು ಬೀಗುತ್ತಾರೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಸಾಲು ಸಾಲು ಆತ್ಮಹತ್ಯೆಗಳಾಗುತ್ತವೆ. ಯಾವುದೋ ಸಿನಿಮಾ ಯಶಸ್ವಿಯಾದರೆ, ಅಂಥವೇ ಮಾದರಿಯ ಸಿನಿಮಾಗಳು ರೀಲು ಸುತ್ತಿಕೊಂಡು ಬರುತ್ತವೆ. ಟಿವಿಯೊಂದರಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೋ, ಧಾರಾವಾಹಿಯೋ ಜನಪ್ರಿಯವಾದರೆ, ಇತರ ಚಾನೆಲ್ಗಳೂ ಅವನ್ನೇ ಅನುಸರಿಸುತ್ತವೆ. ಪ್ರತಿಯೊಬ್ಬರಿಗೂ ಅನುಕರಣೆಯ ಚಪಲ. ಶೀಘ್ರ ಯಶಸ್ಸು ಗಳಿಸುವ ಹುಚ್ಚು. ಸ್ವಂತಿಕೆಯ ಕಷ್ಟದ ಮಾರ್ಗ ಯಾರಿಗೆ ಬೇಕು?
ಹೀಗಾಗಿ ಟಿವಿ ಕ್ಯಾಮೆರಾಗಳು ಸೀದಾ ಬೆಡ್ರೂಮಿಗೇ ನುಗ್ಗುತ್ತಿವೆ. ಜನ ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ. ಅಲ್ಲೆಲ್ಲೋ ವಂಚಕನೊಬ್ಬನನ್ನು ಜನ ಅಟ್ಟಾಡಿಸಿ ಹೊಡೆದ ಸುದ್ದಿ ಬಿತ್ತರವಾಗುತ್ತಿದ್ದಂತೆ, ನೋಡಿದ ಊರುಗಳಲ್ಲೆಲ್ಲ ಜನರ ಕೈ ತುಡಿಯುತ್ತದೆ. ನಮ್ಮೂರಲ್ಲೂ ಅಂಥ ಒಂದು ಪ್ರಕರಣ ಸಿಗಬಾರದೇ ಎಂದು ಹಪಹಪಿಸುತ್ತಾರೆ. ಯಾವುದೋ ಊರಿನ ಗುಹೆಯಲ್ಲಿ ವಿಚಿತ್ರ ಸದ್ದು ಕೇಳುತ್ತಿದೆ ಎಂಬ ಕಾರ್ಯಕ್ರಮ ಬಿತ್ತರವಾಗುತ್ತಿದ್ದಂತೆ, ನಮ್ಮೂರಲ್ಲೂ ಅಂಥ ವಿಚಿತ್ರ ಶಬ್ದ ಬರುವ ಸ್ಥಳಗಳಿವೆ, ಬನ್ನಿ ಎಂಬ ಕರೆಗಳು ಟಿವಿ ಕಚೇರಿಗಳಿಗೆ ಬರತೊಡಗುತ್ತವೆ. ಇವತ್ತು ಸೂರ್ಯನ ಚಟುವಟಿಕೆ ಹೆಚ್ಚಾಗಿ, ಆಯಸ್ಕಾಂತೀಯ ಅಲೆಗಳು ಭೂಮಿಗೆ ಅಪ್ಪಳಿಸುತ್ತವೆ. ಮಧ್ಯಾಹ್ನದ ನಂತರ ಮೊಬೈಲ್ ಬಳಸಬೇಡಿ ಅಂತ ಒಂದು ಎಸ್ಸೆಮ್ಮೆಸ್ ಹಾಕಿ ಸುಮ್ಮನೇ ಕೂತರೆ, ಎರಡೇ ನಿಮಿಷದಲ್ಲಿ ಅದೇ ಸಂದೇಶ ನಿಮ್ಮ ಮೊಬೈಲ್ಗೆ ಫಾರ್ವರ್ಡ್ ಆಗಿರುತ್ತದೆ. ಸರಿಯಾ, ತಪ್ಪಾ ಎಂದು ಕೂಡ ಯೋಚಿಸದೇ ಜನ ಸಮೂಹಸನ್ನಿಗೆ ಒಳಗಾದವರಂತೆ ವರ್ತಿಸತೊಡಗುತ್ತಾರೆ.
ಜನರ ಈ ದೌರ್ಬಲ್ಯಗಳನ್ನು ಚೆನ್ನಾಗಿ ಬಳಸಿಕೊಂಡವ ಯಶಸ್ವಿ ವ್ಯಕ್ತಿ ಎನಿಸಿಕೊಳ್ಳುತ್ತಿದ್ದಾನೆ. ಪಿಗ್ಗಿ ಬಿದ್ದ ಮೂರ್ಖ ಮುಗ್ಧನೆಂಬ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಾನೆ. ಇವರ ನಡುವೆ ವಿವೇಚನೆಯ ಮಾತು ವ್ಯರ್ಥ ಪ್ರಲಾಪದಂತೆ ಕೇಳಿಸುತ್ತದೆ. ದುರ್ಘಟನೆಯಲ್ಲಿ ಹೆಣ ಬಿದ್ದರೂ, ಟಿವಿ ಕ್ಯಾಮೆರಾಗಳು ಬರುವವರೆಗೆ ಅಂತ್ಯ ಸಂಸ್ಕಾರ ಮಾಡದೇ ಕಾಯುವವರಿದ್ದಾರೆ. ಸುದ್ದಿ ಕಚೇರಿಗಳಿಗೆ ಫೋನ್ ಮಾಡಿಯೇ ದಿಢೀರ್ ಪ್ರತಿಭಟನೆ ಮಾಡುವವರು ಹೆಚ್ಚಾಗಿದ್ದಾರೆ. ಪೀಪ್ಲಿ ಲೈವ್ ಹಳ್ಳಿ ಹಳ್ಳಿಗೂ ಹೊಕ್ಕಿದೆ. ಮನೆಮನೆಗಳನ್ನೂ ತುಂಬಿಕೊಂಡಿದೆ. ಸುದ್ದಿ ಯಾವುದು, ಲದ್ದಿ ಯಾವುದು ಎಂಬ ಭೇದವೇ ಮರೆಯಾಗುತ್ತಿದೆ.
ನನಗೆ ಮತ್ತೆ ಮತ್ತೆ ಯಂಡಮೂರಿ ವೀರೇಂದ್ರನಾಥ್ ಮಾತು ನೆನಪಾಗುತ್ತದೆ. ಅವರ ಆ ಸಂದರ್ಶನ ಓದಿದಾಗ ನಾನಿನ್ನೂ ಪಿಯುಸಿಯಲ್ಲಿದ್ದೆ. ಆ ಮಾತು ಓದಿ ನನಗೆ ಸಿಟ್ಟು ಬಂದಿತ್ತು. ಓದುಗರನ್ನು ಈ ವ್ಯಕ್ತಿ ಹೀಗೆ ಹೀಯಾಳಿಸಿದ್ದಾರಲ್ಲ ಎಂದು ಕೋಪಿಸಿಕೊಂಡಿದ್ದೆ. ಒಂದಷ್ಟು ದಿನ ಅವರ ಕಾದಂಬರಿಗಳನ್ನು ಓದುವುದನ್ನೂ ಬಿಟ್ಟಿದ್ದೆ. ಮುಂದೆ ಪತ್ರಿಕೋದ್ಯಮ ಹೊಕ್ಕು, ಅದರ ರಾಡಿ-ರಂಗುಗಳನ್ನು ಅತಿ ಹತ್ತಿರದಿಂದ ನೋಡತೊಡಗಿದಾಗ, ನನಗೆ ಯಂಡಮೂರಿ ಅವರ ನೇರವಂತಿಕೆ ಇಷ್ಟವಾಗತೊಡಗಿತು.
ಆದರೆ, ಆ ಮಾತಿನ ವಾಸ್ತವ ಜೀರ್ಣಿಸಿಕೊಳ್ಳಲು ಮಾತ್ರ ಇವತ್ತಿಗೂ ಕಷ್ಟವಾಗುತ್ತಿದೆ.
(ಚಿತ್ರ ಕೃಪೆ : boltakarachi.blogspot.com)





ಸವಡಿಯವರೇ, ಸಕಾಲಿಕ ಲೇಖನ. ಯಂಡಮೂರಿ ಹೇಳಿದ್ದು ನಿತ್ಯ ಸತ್ಯ. ಜೀರ್ಣಿಸಲು ಕಷ್ಟ ಇಲ್ಲ. ಯಶಸ್ಸು ಬರೋದೆ ಹಾಗೆ. ಯಶಸ್ಸಿನ ಬೆನ್ನೇರಿದವನು ಜನರ ಯಾವ ದೌರ್ಬಲ್ಯವನ್ನು ಹಿಡಿಯುತ್ತಾನೆ, ತನ್ನ ಕೃತ್ಯಗಳಿಂದ ಜನರಿಗೆ ಎಷ್ಟು ಉಪಯೋಗ ಮಾಡುತ್ತಾನೆ ಅನ್ನೋದು ಮುಖ್ಯ. ಜನರ ಲಾಭದೊಂದಿಗೆ ತಾನೂ ಹೆಸರು ಗಳಿಸಲಿ, ಆ ಮೂಲಕ ಇನ್ನೂ ನಾಲಕ್ಕು ಜನರಿಗೆ ಪ್ರೇರೇಪಣೆಯಾಗಲಿ. ಜನರ ದೌರ್ಬಲ್ಯವನ್ನು ತನ್ನ ಲಾಭಕ್ಕೆ ಮಾತ್ರ ಬಳಸಿದರೆ ಅದು ಮೋಸ. ಅದನ್ನು ನೀವು ಇಲ್ಲಿ ಹೇಳಿದ್ದೀರ.
ಯಶಸ್ಸು ಪಡೆಯುವುದಕ್ಕೂ ಇತರರ ದೌರ್ಬಲ್ಯಗಳನ್ನು ಬಳಸಿಕೊಳ್ಳುವುದಕ್ಕೂ ಹತ್ತಿರದ ಸಂಬಂಧ ಇದೆ, ನಿಜ. ಆದರೆ, ಪ್ರತಿಯೊಂದು ಯಶಸ್ಸಿಗೂ ಇದೇ ಮಾನದಂಡವಾದರೆ ಕಷ್ಟ. ಆಗ, ಒಬ್ಬರ ಕಾಲೆಳೆದೇ ಇನ್ನೊಬ್ಬನು ಮೇಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಒಟ್ಟಾರೆ ಪ್ರಗತಿಗೆ ಕುಂದುಂಟಾಗುತ್ತದೆ. ಇನ್ನೊಬ್ಬರಿಗೆ ಅವಕಾಶ ನೀಡಿಯೂ ಪ್ರಗತಿ ಸಾಧಿಸುವುದು ಸಾಧ್ಯವಿದೆ. ತಮಾಷೆಯ ಸಂಗತಿ ಎಂದರೆ, ಜನ ದಡ್ಡರು. ಅದನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವವ ಬುದ್ಧಿವಂತ ಅನಿಸಿಕೊಳ್ಳುತ್ತಿದ್ದಾನೆ.
ಚಾಮರಾಜ್,
ತಮ್ಮ ಒಂದೊಂದು ಮಾತಿಗೂ ನನ್ನ ಸಹಮತ ಇದೆ. ಏಕೆಂದರೆ ಎಲ್ಲವೂ ನನ್ನ ಮನದ ಮಾತುಗಳೇ ಎಂದನಿಸುತ್ತಿದೆ ನನಗೆ.
ಕಾವಿ ಬಟ್ಟೆ ತೊಟ್ಟು, ಮನೆ ಮನೆಗೆ ಭೇಟಿ ನೀಡಿ ಭಿಕ್ಷೆ ಬೇಡುವ ಅಪರಿಚಿತ ಪುರುಷರ ಪಾದಗಳಿಗೆ ನಮಸ್ಕರಿಸಿ, ಭಿಕ್ಷೆ ನೀಡುವ ಹೆಂಗಸರನ್ನೂ ಕಂಡಿದ್ದೇನೆ ನಾನು. ಉತ್ತರ ಭಾರತದಲ್ಲಂತೂ ಇದು ಬಹಳ ಜಾಸ್ತಿ. ಶನಿವಾರಗಳಂದು ಅಂಥವರಿಗೆ ವಿಶೇಷ ಗೌರವ.
ಸ್ತ್ರೀಯಾದವಳಿಗೆ ತನ್ನ ಪತಿಯಲ್ಲದೇ, ಪರಪುರುಷನ ಪಾದ ನಮಸ್ಕಾರ ಸಲ್ಲ ಎನ್ನುವ ಮಾತನ್ನು ಎಲ್ಲೋ ಓದಿರುವ ಅಥವಾ ಕೇಳಿರುವ ನೆನಪು.
ಮೊನ್ನೆಯೂ ಝೀ ಕನ್ನಡ ವಾಹಿನಿಯಲ್ಲಿ, ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ, ಬ್ರಹ್ಮಾಂಡ ನರೆಂದ್ರ ಬಾಬು ಶರ್ಮರ ಪಾದ ಮುಟ್ಟಿ ಆಶೀರ್ವಾದ ಬೇಡುತ್ತಿದ್ದ ಸ್ತ್ರೀಯರನ್ನು ಕಂಡಾಗ ಮನ ಮರುಗಿತ್ತು.
ನೀತಿ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನೇ ಮರೆತು, ಸಂದೇಶ ನೀಡಿದವರ ವ್ಯಕ್ತಿ ಪೂಜೆ ಮಾಡುವ ಪದ್ದತಿ ನಮ್ಮ ನಾಡಿನಲ್ಲಿ ಇಂದು ನಿನ್ನೆಯದಲ್ಲ. ಇದು ಮುಂದುವರಿಯುತ್ತಲೂ ಇರುತ್ತದೆ. ಏಕೆಂದರೆ, ಶಾಲೆಗಳಲ್ಲಿ ನೀತಿ ಪಾಠಗಳಿಗೆ ಈಗೀಗ ಅವಕಾಶಗಳೇ ಕಡಿಮೆ. ಬಾಳುವ ರೀತಿಯನ್ನು ಕಲಿಸುವ ವಿದ್ಯೆ ನೀಡುವ ವಿದ್ಯಾಲಯಗಳು ಇಲ್ಲ ಎನ್ನುವಷ್ಟು ಕಡೀಮೆಯಾಗಿವೆ,
ಧನ ಗಳಿಸುವುದಕ್ಕೆ ಸಹಕಾರಿಯಾಗುವ, ಪರೀಕ್ಷೆ ಮತ್ತು ಅಂಕವನ್ನೇ ಕೇಂದ್ರೀಕೃತವಾಗಿಸಿಕೊಂಡಿರುವ, ವಿದ್ಯೆಯನ್ನು ನೀಡುವ ವಿದ್ಯಾಲಯಗಳೇ ಊರೆಲ್ಲಾ ಈಗೀಗ. ವಿದ್ಯಾಲಯಗಳಿರುವುದೇ ಧನಗಳಿಸುವುದಕ್ಕೆ. ಹಾಗಾಗಿ ಅಲ್ಲಿ ದೊರೆಯುವ ವಿದ್ಯೆಯೂ ಧನ ಗಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಗಳನ್ನು ತಯಾರು ಮಾಡುತ್ತದೆ.
ಹೆಗಡೆಯವರೇ, ಪಾದ ನಮಸ್ಕಾರ ಯಾವುದೇ ಹಿರಿಯರಿಗೆ ಮಾಡಬಹುದಲ್ಲವೇ? ಹಿರಿತನಕ್ಕೆ ಕೊಡುವ ಗೌರವ. ಇತರರಿಗೆ ಸಲ್ಲವಾದರೆ ಪತಿಗೆ ಮಾತ್ರ ಏಕೆ?
ರವಿ,
ಈ ಬಗ್ಗೆ ನನಗೆ ಖಾತ್ರಿ ಇಲ್ಲ.
ಎಲ್ಲೋ ಓದಿದ / ಕೇಳಿದ ನೆನಪು.
ಹಾಗಾಗಿ ಈ ಬಗ್ಗೆ ಪ್ರತ್ಯುತ್ತರ/ಪ್ರತಿವಾದ ಇಲ್ಲ.
ಆದರೂ ಏಕಾಂತದಲ್ಲಿ, ಅಪರಿಚಿತರ ಮುಂದೆ ಸ್ತ್ರೀಯರು ಶಿರಬಾಗುವುದು ತನ್ನ ಸುರಕ್ಷೆಯ ದೃಷ್ಟಿಯಿಂದಲೂ ಸಲ್ಲ ಎಂದು ನನ್ನ ಅನಿಸಿಕೆ.
ನಿಜ ಹೆಗ್ಡೆಯವರೇ, ಉಡುಪು ನೋಡಿ ಮರುಳುಗಾಗುವವರೇ ಹೆಚ್ಚು. ಅವರು ವ್ಯಕ್ತಿಯ ಯೋಗ್ಯತೆಯನ್ನು ಉಡುಪಿನಿಂದ ಅಳೆಯುತ್ತಾರೆಯೇ ವಿನಾ ಅವನ ವ್ಯಕ್ತಿತ್ವದಿಂದಲ್ಲ. ಹೀಗಾಗಿ ವಂಚಕರು ವೇಷ ಮರೆಸುವುದು ಹೆಚ್ಚಾಗಿದೆ. ಮೋಸ ಹೋಗುವವರೂ ಹೆಚ್ಚಾಗುತ್ತಿದ್ದಾರೆ.
ಕಾಲು ಮುಟ್ಟಿ ನಮಸ್ಕರಿಸುವುದು ಗೌರವಕ್ಕೆ ಎಂದಾದರೂ, ಅದಕ್ಕೆ ಪಾತ್ರರಾದವರು ಎಷ್ಟು ಜನ ಇದ್ದಾರೆ? ತೀರ ಅಪರಿಚಿತರ ಪಾದಗಳಿಗೆ ನಮಸ್ಕರಿಸುವುದು ಮೌಢ್ಯವೇ ಸರಿ.
ನೀತಿ ಸಂದೇಶ ನೀಡುವುದು ಅದನ್ನು ಬಾಳುವುದಕ್ಕಿಂತ ಹೆಚ್ಚು ಸುಲಭ. ಹೀಗಾಗಿ, ಸಾಧಕರಿಗಿಂತ ಬೋಧಕರ ಸಂಖ್ಯೆಯೇ ಹೆಚ್ಚಾಗಿದೆ.
http://www.espncricinfo.com/indian-premier-league-2011/content/image/514518.html
ಜನ ಮರುಳೋ, ಜಾತ್ರೆ ಮರುಳೊ?