ವಿಷಯದ ವಿವರಗಳಿಗೆ ದಾಟಿರಿ

ಜುಲೈ 14, 2011

2

ಅಯೊಡಿನ್ ಹೆಸರಿನ ಮಹಾದ್ರೋಹ.!!!

‍ರಾಕೇಶ್ ಶೆಟ್ಟಿ ಮೂಲಕ

-ಶ್ರೀ ಹರ್ಷ ಸಾಲೀಮಠ

ಅಯೊಡಿನ್‍ಯುಕ್ತ ಉಪ್ಪಿನ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಸಾಕಷ್ಟಿದೆ. ಸರ್ಕಾರದ ಈ ಕುಮ್ಮಕ್ಕಿನ ಹಿಂದೆ ಅನೇಕ ದುಷ್ಟ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಅಯೊಡಿನ್ ನಮ್ಮ ದೇಹಕ್ಕೆ ಮೈಕ್ರೊ ಪ್ರಮಾಣದಲ್ಲಿ ಬೇಕಾದ ಅಂಶ. ಅಯೋಡಿನ್ ಅಂಶ ನಮ್ಮ ದೇಹದಲ್ಲಿ ಕಡಿಮೆಯಾದಾಗ ಥೈರಾಯಿಡ್ ಗ್ರಂಥಿ ಅಯೋಡಿನ್ ಅನ್ನು ಹೆಚ್ಚಾಗಿ ಹೀರಿಕೊಳ್ಳಲು ಊದಿಕೊಳ್ಳತೊಡಗುತ್ತದೆ. ಇದೇ ಗಾಯ್ಟರ್ ರೋಗ.
ಗಾಯ್ಟರ್ ಅಥವಾ ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡುಬರುವುದೇ ವಿರಳ. ಅಯೋಡಿನ್ ಕೊರತೆಯನ್ನು ದೊಡ್ಡ ಗಂಡಾಂತರವೆಂಬಂತೆ ಬಿಂಬಿಸಿ ಅಯೋಡೀಕರಿಸಿದ ಉಪ್ಪನ್ನು ಬಲವಂತವಾಗಿ ಎಲ್ಲರಿಗೂ ತಿನ್ನಿಸಲಾಗುತ್ತಿದೆ. ಗಳಗಂಡ ರೋಗ ನಮ್ಮ ದೇಶದಲ್ಲಿ ಕಂಡು ಬರುವುದು ಲಡಾಕ್, ಶಿಮ್ಲಾ ರೀತಿಯ ಅತಿ ಹೆಚ್ಚಿನ ಮಣ್ಣಿನ ಸವೆತ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ. ಎಲ್ಲಾ ಸೇರಿದರೇ ಅಯೋಡಿನ್ ಕೊರತೆಯನ್ನು ಎದುರಿಸುತ್ತಿರುವುದು ಶೇ.೨ ರಷ್ಟು ಜನರು ಮಾತ್ರ. ಶೇ.೨ರ ಕೊರತೆಯನ್ನು ನೀಗಿಸುವುದಕ್ಕಾಗಿ ಉಳಿದ ಶೇ.೯೮ ರಷ್ಟು ಜನರಿಗೆ ಅಯೋಡಿನ್ ತಿನ್ನಿ ಎಂದು ಪ್ರಚಾರ ಮಾಡಲಾಗುತ್ತಿದೆ.

ಅನೇಕ ವ್ಯಕ್ತಿಗಳಲ್ಲಿ ಅಯೋಡಿನ್ ಅಲರ್ಜಿ ಇರುತ್ತದೆ. ಗಳಗಂಡ ಚಿಕಿತ್ಸೆಗಾಗಿ ಅಯೋಡಿನ್ ನೀಡಬೇಕಾದರೂ ಈ ಅಲರ್ಜಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲರ್ಜಿ ಇರುವ ವ್ಯಕ್ತಿಗಳಲ್ಲಿ ಚಿಕ್ಕ ಪ್ರಮಾಣದ ಅಯೋಡಿನ್ ಸಹ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಲ್ಲುದು. ಇದಲ್ಲದೇ ದೇಹದಲ್ಲಿ ಅಯೋಡಿನ್‍ನ ಅನವಶ್ಯಕ ಹೆಚ್ಚಳದಿಂದಾಗಿ ಖಿನ್ನತೆ, ಉಸಿರಾಟದ ತೊಂದರೆಗಳು ನಪುಂಸಕತ್ವ, ಕೂದಲುದುರುವಿಕೆ,ಚರ್ಮದ ರೋಗಗಳು , ಗಳಗಂಡ ನಿಶ್ಯಕ್ತಿ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ. ಅಯೋಡಿನ್ ತಿನ್ನುವುದನ್ನು ಕಡಿಮೆ ಮಾಡುವುದರಿಂದ ಗಂಟಲಿನ ಕ್ಯಾನ್ಸರ್ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಜಪಾನ್‍ನಲ್ಲಿ ಸಂಶೋಧನೆಗಳು ತಿಳಿಸುತ್ತವೆ. ಅಯೋಡಿನ್ ಕೊರತೆ ಇರುವ ಜರ್ಮನಿ ದೇಶದಲ್ಲಿ ಗಂಟಲು ಕ್ಯಾನ್ಸರ್ ಕೂಡ ಕಡಿಮೆಯೆ. ಅಲ್ಲದೇ ಗರ್ಭಿಣಿ ಸ್ತ್ರೀಯರಿಗೂ ಅಯೋಡಿನ್ ಅಪಾಯ ಉಂಟುಮಾಡುತ್ತದೆ.

ನಮ್ಮ ದೇಹಕ್ಕೆ ಬೇಕಾದುದಕ್ಕಿಂತ ಹೆಚ್ಚಿನ ಪ್ರಮಾಣದ ಅಯೋಡಿನ್ ಸೇವಿಸಿದರೆ ಅಪಾಯ ಖಂಡಿತ ತಪ್ಪಿದ್ದಲ್ಲ. ವಿಶ್ವ ಆರೊಗ್ಯ ಸಂಸ್ಥೆಯ ನಿಯಮದ ಪ್ರಕಾರ ಒಂದು ದಿನಕ್ಕೆ ಮನುಷ್ಯನೊಬ್ಬ ತೆಗೆದುಕೊಳ್ಳಬಹುದಾದ ಅಯೋಡಿನ್ ಪ್ರಮಾಣ ಹೆಚ್ಚೆಂದರೆ ೨೦೦ ಮೈಕ್ರೊಗ್ರಾಮ್‍ಗಳು. ಸಧ್ಯದಲ್ಲಿ ನಾವು ಸೇವಿಸುತ್ತಿರುವ ಪ್ರಮಾಣ ಇದಕ್ಕಿಂತ ಎಷ್ಟೊ ಪಟ್ಟು ಹೆಚ್ಚು. ಅನೇಕ ಕಡೆ ಅಯೊಡೀಕರಿಸುವ ನೆಪದಲ್ಲಿ ಪೊಟಾಶಿಯಮ್ ಅಯೊಡೈಡ್‍ನ್ನು ಸಾಗರದ ಉಪ್ಪಿನ ಮೇಲೆ ಸಿಂಪಡಿಸಲಾಗುತ್ತದೆ. ಈ ರೀತಿ ಎರಚಲಾದ ಅಯೋಡಿನ್ ನಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಸುರಕ್ಷಿತ ಹಾಗೂ ದೇಹ ಇದನ್ನು ಅರಗಿಸಿಕೊಳ್ಳಬಹುದೆ ಎಂಬುದರ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ.
ಹಾಲೆಂಡ್ ಮತ್ತು ಟಾಸ್ಮೆನಿಯಾದಲ್ಲಿ ಅಯೋಡಿನ್ ಉಪ್ಪನ್ನು ಕಡ್ಡಾಯವನ್ನಾಗಿ ಮಾಡಲಾಯಿತು. ನಂತರ ಅಲ್ಲಿನ ಪುರುಷರಲ್ಲಿ ಗಂಟಲಿನ ನಂಜು ಹೆಚ್ಚಾಗಿದ್ದು ಕಂಡು ಬಂದು ಈ ಕಡ್ಡಾಯವನ್ನು ಹಿಂತೆಗೆದುಕೊಳ್ಳಲಾಯಿತು. ಇಂಗ್ಲೆಂಡ್ ಪ್ರಜೆಗಳಲ್ಲಿಯೂ ಒಂದು ಕಾಲದಲ್ಲಿ ಅಯೋಡಿನ್ ಕೊರತೆ ಇತ್ತು. ಆಗ ಇಂಗ್ಲೆಂಡ್ ಸರ್ಕಾರವು ಅಯೋಡಿನ್ ಉಪ್ಪನ್ನು ಕಡ್ಡಾಯ ಮಾಡುವುದರ ಬದಲಾಗಿ ತನ್ನ ಪ್ರಜೆಗಳಿಗೆ ಸರಿಯಾದ ಆಹಾರ ಪದ್ಧತಿಯ ಬಗ್ಗೆ ಮಾರ್ಗದರ್ಶನ ಮತ್ತು ಶಿಕ್ಷಣವನ್ನು ನೀಡಿತು. ನಾರ್ವೆ ಇತ್ಯಾದಿ ದೇಶಗಲಲ್ಲಿಯೂ ಅಯೋಡಿನ್ ರಹಿತ ಉಪ್ಪಿನ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿದೆ.

ಅಯೋಡೀಕರಿಸಿದ ಉಪ್ಪನ್ನು ವಿರೋಧಿಸಲು ಸಾಕಷ್ಟು ಆರ್ಥಿಕ ಹಿನ್ನೆಲೆಯುಳ್ಳ ಕಾರಣಗಳೂ ಇವೆ. ಮೊದಲು ಉಪ್ಪು ಒಂದು ಅಥವಾ ಎರಡು ರೂಪಾಯಿಗೆ ಲಭ್ಯವಿತ್ತು. ಈಗ ಎಂಟರಿಂದ ಹನ್ನೆರಡು ರೂಪಾಯಿ ಆಗಿದೆ. ಅರ್ಧಕ್ಕರ್ಧ ಬಡವರೇ ಇರುವ ನಮ್ಮ ದೇಶದಲ್ಲಿ ಉಪ್ಪನ್ನು ಇಷ್ಟೊಂದು ಹಣ ಕೊಟ್ಟು ಕೊಂಡುಕೊಳ್ಳಲು ಬಹಲ ಜನರಿಗೆ ಸಾಧ್ಯವಾಗುವುದಿಲ್ಲ. ಅಯೋಡಿಕರಿಸದ ಉಪ್ಪನ್ನು ಮಾರಲು ಸರ್ಕಾರ ಅನುಮತಿ ನೀಡುವುದಿಲ್ಲವಾದ್ದರಿಂದ ಅನಿವಾರ್ಯವಾಗಿ ಬಡವರೂ ಸಹ ಎಂಟು ರೂಪಾಯಿ ತೆತ್ತು ಉಪ್ಪನ್ನು ಕೊಳ್ಳಬೇಕಾಗಿದೆ.
ಇಲ್ಲಿ ನಡೆಯುವ ಇನ್ನೂ ಒಂದು ಮೋಸ ಎಂದರೆ ಉಪ್ಪಿಗೆ ಅಯೋಡಿನ್ ಸೇರಿಸಲು ೨ ಪೈಸೆ ಸಾಕು. ಆದರೆ ಅಯೋಡಿನ್ ಹಾಕಿದ್ದೇವೆ ಎಂದು ಖರ್ಚಿಗಿಂತ ಅನೇಕ ಪಟ್ಟು ಹಣವನ್ನು ಉಪ್ಪು ಮಾರುವ ಕಂಪನಿಗಳು ಜನರಿಂದ ಪೀಕುತ್ತಿವೆ. ಅಯೊಡಿನ್ ಉಪ್ಪಿನ ನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದಿಂದ ಹೊತ್ತೊಯ್ದಿರುವ ಸಂಪತ್ತು ವರ್ಷಕ್ಕೆ ಹದಿನೈದು ಸಾವಿರ ಕೋಟಿ ರೂಪಾಯಿಗಳು! ಹಳ್ಳಿಯ ರೈತರಿಗೆ ರಾಸುಗಳ ಮೇವಿಗಾಗಿ ಕ್ವಿಂಟಾಲ್‍ಗಟ್ಟಲೆ ಉಪ್ಪು ಬೇಕಾಗುತ್ತದೆ. ತೆಂಗಿನ ಬೆಳೆಗಾಗಿ ನೀರಿಗೆ ಸೇರಿಸಲು ಉಪ್ಪು ಬೇಕಾಗುತ್ತದೆ. ಉಪ್ಪಿನ ಬೆಲೆಯಲ್ಲಿ ಎಂಟು ಪಟ್ಟು ಹೆಚ್ಚಳದಿಂದಾಗಿ ಈ ಬಡರೈತರಿಗೆಲ್ಲಾ ತೊಂದರೆಯಾಗುತ್ತದೆ.
ಅಯೋಡಿನ್ ಸೇರಿಸಲು ಉಪ್ಪನ್ನು ಸಾಕಷ್ಟು ಸಂಸ್ಕರಿಸಬೇಕಾಗುತ್ತದೆ. ಹೀಗೆ ಸಂಸ್ಕರಿಸುವಾಗ ಉಪ್ಪಿನಲ್ಲಿ ಪ್ರಾಕೃತಿಕವಾಗಿ ಇರಬಹುದಾದ ಅನೇಕ ಅಂಶಗಳು ನಾಶವಾಗಿ ಹೋಗುತ್ತವೆ. ಇದರಿಂದ ಉಪ್ಪು ಹೆಚ್ಚು ಕಟುವಾಗುತ್ತದೆ. ಆದ್ದರಿಂದಲೇ ಸಹಜ ಉಪ್ಪಿಗಿಂತ ಸಂಸ್ಕರಿತ ಉಪ್ಪನ್ನು ಅಡಿಗೆಗೆ ಕಡಿಮೆ ಹಾಕುವಂತೆ ಜಾಹೀರಾತು ನೀಡುತ್ತಾರೆ.
ಅಯೋಡಿನ್ ನಮ್ಮ ದೇಹಕ್ಕೆ ನಾವು ತಿನ್ನುವ ತರಕಾರಿ ಹಣ್ಣುಗಳ ಮೂಲಕವೇ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಕರಾವಳಿಯಲ್ಲಿರುವವರಿಗೆ ಅಯೋಡಿನ್ ತಿನ್ನುವ ಅವಶ್ಯಕತೆಯೇ ಇಲ್ಲ. ನಾವು ತಿನ್ನುವ ಸೊಪ್ಪು ತರಕಾರಿಗಳು ಸಾಕಷ್ಟು ಅಯೋಡಿನ್ ಹೊಂದಿರುತ್ತವೆ. ಅಯೋಡಿನ್ ರಹಿತ ಉಪ್ಪು ಲಭ್ಯತೆ ಇಲ್ಲದಿರುವಾಗ ಸೈಂಧವ ಲವಣವನ್ನು ಉಪಯೋಗಿಸಬಹುದು. ಅಯೋಡಿನ್ ಉಪ್ಪಿಗಿಂತ ಇದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಬಹುದು. ಇಲ್ಲವೇ ಉಪ್ಪನ್ನು ತಿನ್ನದಿದ್ದರೆ ಇನ್ನೂ ಒಳ್ಳೆಯದು. ಬೊಜ್ಜೂ ಕಡಿಮೆಯಾಗುತ್ತದೆ.
ಅಯೋಡಿನ್‍ಯುಕ್ತ ಉಪ್ಪು ಬಹುರಾಷ್ಟ್ರೀಯ ಕಂಪನಿಗಳ ಹಣ ಮಾಡುವ ತಂತ್ರವಲ್ಲದೇ ಇನ್ನೇನೂ ಅಲ್ಲ. ಈ ಉಪ್ಪಿನಲ್ಲಿ ಬೂಸಾ ತಿಂದ ರಾಜಕಾರಣಿಗಳ ಕೈವಾಡವನ್ನೂ ತಳ್ಳಿಹಾಕುವಂತಿಲ್ಲ. ಉಪ್ಪಿನ ಮೇಲಿದ್ದ ಕರವನ್ನು ಬಾಪೂ ದಂಡಿ ಯಾತ್ರೆಯ ಮೂಲಕ ಕಿತ್ತು ಹಾಕಿಸಿದರು. ಈಗ ನಾವು ಅಯೋಡಿನ್ ಮೂಲಕ ತೆರಿಗೆಯನ್ನು ಕಟ್ಟುತ್ತಿದ್ದೇವೆ. ಅಯೋಡಿನ್ ಪ್ರಚಾರ ನೀಡಿದಷ್ಟು ಒಳ್ಳೆಯದಲ್ಲ. ಸಾಧ್ಯವಾದಷ್ಟು ಅಯೋಡಿನ್ ರಹಿತ ಉಪ್ಪು ಉಪಯೋಗಿಸಲು ಪ್ರಯತ್ನಿಸಿ ರೋಗಗಳಿಂದ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಬಚಾವಾಗಬಹುದು.
ಲೇಖನವನ್ನು ಬಹಳ ಸೌಮ್ಯ ಭಾಷೆಯಲ್ಲಿ ಬರೆದಿದ್ದೇನೆ. ಆದರೆ ವಿಷಯ ನಾನು ಹೇಳಿದ್ದಕ್ಕಿಂತ ನೂರಾರು ಪಟ್ಟು ಹೆಚ್ಚು ಗಂಭೀರವಾಗಿದೆ. ಅಯೋಡಿನ್ ಬೇಗ ದೂರ ಮಾಡಿದಷ್ಟೂ ಹೆಚ್ಚು ಉಪಯೋಗ ನಮ್ಮ ದೇಹಕ್ಕೆ ಮತ್ತು ದೇಶಕ್ಕೆ ಆಗುತ್ತದೆ.
ಆಕರಗಳು :
1. http://www.petitiononline.com/pil0001/petition.html
http://www.karmayog.org/iodisedsalt/iodisedsalt_3665.htm
http://www.narasan.at/en/berichte/jod.html4. http://www.diagnose-me.com/treat/T26559.
5. http://www.seriouseats.com/2008/06/iodized-salt-good-sources-of-iodine.html
. http://www.indiatogether.org/2006/jul/hlt-saltmess.htm

 

 

***********

chitrakrupe : healthjockey.com

2 ಟಿಪ್ಪಣಿಗಳು Post a comment
  1. ಪ್ರಿಯ ಬ್ಲಾಗಿಗರೆ,
    ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
    ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

    ತಮ್ಮ ವಿಶ್ವಾಸಿ
    ಬೇಳೂರು ಸುದರ್ಶನ
    ಸಲಹಾ ಸಮನ್ವಯಕಾರ, ಕಣಜ ಯೋಜನೆ
    (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
    ಈ ಮೈಲ್: projectmanager@kanaja.net
    http://www.kanaja.in
    ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
    ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
    ಬೆಂಗಳೂರು – 560100
    ದೂರವಾಣಿ: ೯೭೪೧೯೭೬೭೮೯

    ಉತ್ತರ
  2. nanjundaraju's avatar
    ಆಕ್ಟೋ 12 2011

    ಮಾನ್ಯರೇ, ನಿಮ್ಮ ಲೇಖನ ಚೆನ್ನಾಗಿದೆ. ನಿಮಗೆ ಧನ್ಯವಾದಗಳು. ಉಪ್ಪು ಎಂಬುದು, ರುಚಿಗೆ ಅತ್ಯಾವಶ್ಯಕ ನಿಜ. ಆದರೆ, ನಾವು ಇದೂವರೆಗೂ ಉಪ್ಪು ಕರ ರಹಿತವೆಂದು ತಿಳಿದಿದ್ದೆವು. ಈ ಅಯೋಡಿನ್ ನೆಪದಲ್ಲಿ ನಮ್ಮ ಉಪ್ಪು ತಯಾರಿಕಾ ಕಾರ್ಮಿಕರಿಗೆ ಸಿಗುವ ಲಾಭವನ್ನು ದರೋಡೆ ಮಾಡಿ ವಿದೇಶಿ ಕಂಪನಿಗಳು ಪಡೆಯುತ್ತಿವೆ ಎಂಬುದು ನಿಮ್ಮ ಲೇಖನದಿಂದ ತಿಳಿದುಬರುತ್ತದೆ. ಈ ಬಗ್ಗೆ ಸರ್ಕಾರ ಸುಮ್ಮನಿರಬಾರದು. ತಯಾರಿಕಾ ಕಂಪನಿಗಳ ಮೇಲೆ ದರ ನಿಗದಿ ಮಾಡುವಂತೆ ತಾಕೀತು ಮಾಡಿ. ಸಮುದ್ರದ ದಂಡೆಗಳಲ್ಲಿ ಉಪ್ಪು ತಯಾರು ಮಾಡುವ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಸಿಗುವಂತೆ ಮಾಡಿ. ನ್ಯಾಯಯುತ ಬೆಲೆಗೆ ಬಳಕೆದಾರರಿಗೆ ಸಿಗುವಂತೆ ವ್ಯವಸ್ಠೆ ಮಾಡಿದರೆ ಉತ್ತಮವಲ್ಲವೇ? ವಂದನೆಗಳೊಡನೆ.

    ಉತ್ತರ

Leave a reply to nanjundaraju ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments