ಜನ ಮನ್ನಣೆ
– ಮಧು ಚಂದ್ರ, ಭದ್ರಾವತಿ
ಇಂದು ಅತ್ಯಂತ ಪ್ರಸ್ತುತದಲ್ಲಿರುವ ಪದ ಎಂದರೆ ” ಜನ ಮನ್ನಣೆ “. ಅದಕ್ಕಾಗಿ ನಾವು ಏನೆಲ್ಲಾ ಮಾಡುತ್ತೇವೆ. ದಾನ ಮಾಡಿದಾಗ ನಮ್ಮ ಹೆಸರು, ಶಂಕು ಸ್ಥಾಪನೆ ಮಾಡಿದಾಗ ನಮ್ಮ ಹೆಸರು( ಕಾಮಗಾರಿ ಆಗುತ್ತೋ ಇಲ್ಲವೋ), ಕಂಡ ಕಂಡಲೆಲ್ಲ ಹೆಸರು ರಾರಜಿಸುವುದಕ್ಕೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡುತ್ತೇವೆ. ಆದರೆ ಅದನ್ನು ಇಂದಿನ ಮಾನವ ಕೇವಲ ಕ್ಷಣಕ್ಕೆ ಮಾತ್ರ ಪರಿಗಣಿಸಿ ನಂತರ ಕಡೆಗಣಿಸುತ್ತಾನೆ. ಅವರಾರು ತಮ್ಮ ಹೆಸರನ್ನು ಕಡೆಯವರೆಗೂ ಉಳಿಸಿಕೊಂಡು ಮನ್ನಣೆ ಪಡೆಯಲು ಸಾಧ್ಯವಾಗದೆ ಅಳಿದು ಹೋಗುತ್ತಾರೆ .ಇಂದು ಸೇವಾ ಮನೋಭಾವವಿಲ್ಲದ ದಾನ ಕೇವಲ ಪ್ರಚಾರಕ್ಕೆ ಮಾತ್ರ ನಿಮಿತ್ತ. ಅಂದರೆ ದಾನಿಗಳು ಇರುವವರೆಗೂ ಮಾತ್ರ, ಅವರಳಿದ ಮೇಲೆ ಅವು ಸಹ ಅಳಿಯುತ್ತದೆ. ಅವು ಎಂದೂ ಜನರ ಮನದಲ್ಲಿ ಉಳಿಯುವುದೇ ಇಲ್ಲ. ಸ್ವಾರ್ಥದ ಸೇವೆ ಎಲ್ಲಿಯೂ ಸಲ್ಲುವುದಿಲ್ಲ. ನಿಸ್ವಾರ್ಥ ಸೇವೆ ಇಂದು ಕಣ್ಮರೆಯಾಗುತ್ತಿದೆ. ನಿಸ್ವಾರ್ಥ ಸೇವೆ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನಿಮ್ಮ ಮುಂದೆ ನೀಡುತ್ತಿದ್ದೇನೆ. ಆಮೇಲೆ ಸೇವೆ ಎನ್ನುವ ಪದಕ್ಕೆ ಸಮಾನಾರ್ಥಕ ಪದ ನೀವೇ ನಿರ್ಧರಿಸಿ.
ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾದ ನಂತರ ಪ್ರತಿದಿನವೂ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಿದ್ದರು. ಅ ಸಮಯದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತರ ಹೆಸರಿನ ಫಲಕಗಳು, ಗುರುತುಗಳು ಸಹ ಇರಲಿಲ್ಲ. ಓಮ್ಮೆ ಆಂಧ್ರದ ಹಳ್ಳಿಯ ರೈತನೊಬ್ಬ ಕನ್ನಂಬಾಡಿ ಆಣೆಕಟ್ಟನ್ನು ಸಂದರ್ಶಿಸಿದನು. ಅಲ್ಲಿದ್ದ ಕಾವೇರಿಯ ಮೂರ್ತಿಗೆ ನಮಸ್ಕರಿಸಿ ಅಣೆಕಟ್ಟಿನ ಸೊಬಗನ್ನು ಸವಿಯುತ್ತಿದ್ದನು. ಹೀಗಿರುವಾಗ ಅಲ್ಲಿಗೆ ಬಂದ ಹಿರಿಯರೊಬ್ಬರು ಅಲ್ಲೇ ಇದ್ದ ಮಕ್ಕಳ ಹತ್ತಿರ ರೈತನಿಗೆ ” ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದವರು ಯಾರು ಗೊತ್ತೇ? ” ಎಂದು ಕೇಳಲು ಹೇಳಿದರು.
ಅಗ ರೈತನು ” ಏಮಂಡಿ, ಆ ಮಹಾನುಭಾವಲು ವಿಶ್ವೇಶ್ವರಯ್ಯಗಾರು ಚೆಸಿಂದಿಕಾದ ” (‘ ಏನು ಸ್ವಾಮಿ , ಆ ಮಹಾನುಭಾವ ವಿಶ್ವೇಶ್ವರಯ್ಯನವರು ಕಟ್ಟಿಸಿದ್ದಲ್ಲವೇ ? ‘) ಎಂದು ಉತ್ತರಿಸಿದನು.
ನಿಜವಾದ ಸೇವೆಗೆ ಶಿಲೆಯ ಮೇಲಿನ ಶಾಸನವಾಗಲಿ, ಫ್ಲೆಕ್ಸ್ ಬ್ಯಾನರ್ ಅಗಲಿ ಬೇಕಿಲ್ಲ. ಸೇವೆಯು ನಿರಂತರವಾಗಿ ತಲುಪುವ ಹಾಗಿರಬೇಕು. ಅಗ ಮಾತ್ರ ಜನಮನ್ನಣೆ ಪಡೆದು ಚಿರಸ್ಥಾಯಿಯಾಗಿರುತ್ತದೆ. ನಮ್ಮವರು ಇದರಿಂದ ಕಲಿಯುವುದು ಯಾವಾಗ ಎಂದು ನೀವೇ ಹೇಳಬೇಕು.
***********************************************************************
ಚಿತ್ರ ಕೃಪೆ : ಅಂತರ್ಜಾಲ