ಭಾರತದ ಭವಿಷ್ಯ ಮತ್ತು ನಮ್ಮ ಪಾತ್ರ
– ಡಾ. ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ.ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಆಯೋಜಿಸಲಾಗಿತ್ತು. ಇದು ಅವರ ಭಾಷಣವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾತ್ರ. ಒಂದು ಚಿಕ್ಕ ಗುಂಪಿಗೆ ಅವರು ನೀಡಿದ ಸ್ಪೂರ್ತಿದಾಯಕ ಮಾತುಗಳು ಉಳಿದವರಿಗೂ ದೊರಕಲಿ ಎಂಬುದು ಈ ಬರಹದ ಆಶಯವಾಗಿದೆ. ಭಾರತದ ಭವಿಷ್ಯದ ಸ್ವರೂಪವೇನು? ಹಾಗೂ ಅದರಲ್ಲಿ ಯುವಕರ ಪಾತ್ರವೇನು ಎಂಬ ಪ್ರಶ್ನೆಗಳು ಇಂದು ನಮ್ಮನ್ನು ಕಾಡಲು ಪ್ರಾರಂಭಿಸಿವೆ. ಇದಕ್ಕೆ ಉತ್ತರ ಹುಡುಕುವ ಮುನ್ನ ಭಾರತದ ಭೂತ ಮತ್ತು ವರ್ತಮಾನವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಇಂದು ಭಾರತವನ್ನು ನೋಡುವ ಸಾಮಾನ್ಯವಾದ ಒಂದು ಕ್ರಮವಿದೆ, ಅದೆಂದರೆ ಭಾರತ ಎಂಬುದು ಕೊಳಕಾದ ದೇಶ, ಹಿಂದುಳಿದ ಮತ್ತು ಮುಂದುವರೆಯುತ್ತಿರುವ ದೇಶ, ಆಧುನೀಕತೆಯ ಬೆನ್ನುಹತ್ತಿ ಇತ್ತೀಚೆಗಷ್ಟೆ ಕಣ್ಣು ಬಿಡುತ್ತಿರುವ ನಾಡು, ಭ್ರಷ್ಟಾಚಾರ, ದೌರ್ಜನ್ಯ ಇನ್ನೂ ಮುಂತಾದ ನಕಾರಾತ್ಮಕ ಅಂಶಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ಸದಾ ಭಾರತವನ್ನು ತೆಗಳುವ ವಿಧಾನವನ್ನು ರೂಢಿಸಿಕೊಂಡಿದ್ದೇವೆ. ಹೀಗೆ ತೆಗಳುವುದಕ್ಕೆ ಶತಮಾನಗಳಷ್ಟು ಹಳೆಯದಾದ ಇತಿಹಾಸವೂ ಇದೆ. ಭಾರತದ ಮೇಲೆ ಎರಡು ರೀತಿಯ ದಾಳಿಗಳು ವಿದೇಶಿಗರಿಂದ ನಡೆದಿವೆ. ಬ್ರಿಟೀಷರ ಆಕ್ರಮಣ ಪ್ರಾರಂಭವಾಗುವ ತನಕ ನಡೆದಿದ್ದೆಲ್ಲವೂ ದೈಹಿಕ ಆಕ್ರಮಣಗಳು, ಅಂದರೆ ಪ್ರದೇಶಗಳನ್ನು, ರಾಜರನ್ನು ಗೆಲ್ಲುವಂತಹ, ಸಂಪತ್ತನ್ನು ಲೂಟಿ ಮಾಡುವ ಚಟುವಟಿಕೆಗಳಲ್ಲಿ ಕೊನೆಯಾಗುತ್ತಿದ್ದವು. ಆದರೆ ಬ್ರಿಟೀಷರಿಂದ ಪ್ರಾರಂಭವಾದ ಭಾರತದ ಮೇಲಿನ ಆಕ್ರಮಣ ಅತ್ಯಂತ ದುರಂತಮಯವಾದುದ್ದಾಗಿದೆ.