ಜನರಕ್ಷಾ ಯಾತ್ರೆ : ಕಮ್ಯುನಿಸ್ಟರ ಭದ್ರಕೋಟೆಯಲ್ಲಿ ಕಂಪನ
– ಅಂಜಲಿ ಜಾರ್ಜ್ ಮತ್ತು ಜಯಶಂಕರ್
ಮೂಲ ಲೇಖನ : https://swarajyamag.com/politics/kannurs-jana-raksha-yatra-turning-the-tide-on-the-communists
ಪಿಣರಾಯಿ, ಕೇರಳದ ಮಾರ್ಕ್ಸಿಸ್ಟರಿಗೆ ಬಹಳ ಪ್ರಮುಖವಾಗಿರುವ ಒಂದು ಸಣ್ಣ ಗ್ರಾಮ. ೧೯೩೯ರಲ್ಲಿ ಪಿಣರಾಯಿಗೆ ಸಮೀಪವಿರುವ ಪರಪ್ಪುರಂ ಎಂಬ ಸ್ಥಳದಲ್ಲಿ ಕಮ್ಯುನಿಸ್ಟರು ತಮ್ಮ ಕಾರ್ಯಚಟುವಟಿಕೆಯನ್ನು ಮೊದಲ ಬಾರಿಗೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪಿಣರಾಯಿ ಕೇರಳದ ಕಮ್ಯುನಿಸ್ಟರ ಭದ್ರಕೋಟೆ ಎಂದೇ ಕರೆಯಲ್ಪಡುತ್ತದೆ. ಒಂದು ಕಾಲದಲ್ಲಿ ಕೇವಲ ಕೆಂಪುದ್ವಜಗಳಷ್ಟೇ ಹಾರಾಡುತ್ತಿದ್ದ ಪ್ರದೇಶ ಇದಾಗಿತ್ತು. ಕಮ್ಯುನಿಸ್ಟ್ ಪಾರ್ಟಿಯ ಹತೋಟಿಯಲಿದ್ದ ಈ ಗ್ರಾಮದಲ್ಲಿ ವಿರೋಧಕ್ಕೆ ಆಸ್ಪದವೇ ಇರಲಿಲ್ಲ. ವಿರೋಧಿ ಧ್ವನಿಗಳನ್ನು ಯಾವುದೇ ಕರುಣೆಯಿಲ್ಲದೆ ಮೆಟ್ಟಿಹಾಕಲಾಗುತ್ತಿತ್ತು. ಬಿಜೆಪಿ ಹಾಗು ಸಂಘದ ಕಾರ್ಯಕರ್ತರಾದ ಹುತಾತ್ಮ ಉತ್ತಮನ್ ಹಾಗು ಅವರ ಮಗ ಹುತಾತ್ಮ ರೆಮಿತ್ ರನ್ನು ಇದೇ ಕಮ್ಯುನಿಸ್ಟರು ಕೊಂದದ್ದು ೧೪ ದಿನಗಳ ಜನರಕ್ಷಾಯಾತ್ರೆಗೆ ಮುನ್ನುಡಿ ಬರೆಯಿತು. ಕಮ್ಯುನಿಸ್ಟರು ಮಾಡಿರುವ ರಾಜಕೀಯ ಹತ್ಯೆಗಳನ್ನು ಎತ್ತಿ ತೋರಿಸುತ್ತಿರುವ ಈ ಯಾತ್ರೆ ಕೆಲವು ದಿನದ ಹಿಂದೆ ಪಿಣರಾಯಿ ಗ್ರಾಮವನ್ನು ಪ್ರವೇಶಿಸಿ ಮುಂದುವರೆಯಿತು. ಕೇರಳದ ರಾಜಕೀಯ ಚರಿತ್ರೆಯಲ್ಲಿ ಇದೊಂದು ಮಹತ್ತರ ತಿರುವು
೧೯೭೭ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕತ್ವವನ್ನು ಕಂಡ ಬಹಳಷ್ಟು ಮಾರ್ಕ್ಸಿಸ್ಟ್ ನಾಯಕರು ಮತ್ತು ಕಾರ್ಯಕರ್ತರು ಸಂಘವನ್ನು ಸೇರಿಕೊಂಡರು. ಇದಕ್ಕೆ ಬಹುಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐಎಂ) ಕುಯುಕ್ತಿಯಿಂದ ಕಾಂಗ್ರೆಸ್ಸಿನ ಜೊತೆ ಸೇರಿಕೊಂಡು ಸರಕಾರ ರಚಿಸಿತ್ತು ಹಾಗು ಎರಡನೆಯದಾಗಿ, ಸಂಘ ಈ ಹೋರಾಟದ ಮುಂಚೂಣಿಯಲ್ಲಿದ್ದು,ಇಂದಿರಾ ಗಾಂಧಿಯನ್ನು ಎದುರಿಸುವ ಸಾಹಸ ಮಾಡಿತ್ತು, ಇದರ ಫಲ ಸ್ವರೂಪವಾಗಿ ಸಾವಿರಾರು ಸ್ವಯಂಸೇವಕರು ಬಂಧನಕ್ಕೆ ಒಳಗಾಗಿದ್ದರು.. ತಮ್ಮ ನಾಯಕರ ಹೊಣೆಗೇಡಿತನ ಹಾಗು ಕಪಟತನದಿಂದ ಬೇಸತ್ತ ಜನರನ್ನು ಸ್ವಯಂಸೇವಕ ಸಂಘದ ಸನ್ನದ್ಧತೆ ಹಾಗೂ ಜವಾಬ್ದಾರಿಯುತ ನಡವಳಿಕೆ ಆಕರ್ಷಿಸಿತು.