ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…!
– ನಿಲುಮೆ
ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).
ಹಿಂದೊಮ್ಮೆ ರಾಕೇಶ್ ಶೆಟ್ಟಿಯವರ ‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !? ಅನ್ನುವ ಲೇಖನವನ್ನ ಮೈಸೂರು ಮೂಲದ ಯುವರಾಜಕಾರಣಿಯೊಬ್ಬರು ಕದ್ದಿದ್ದು ಅಲ್ಲದೇ ಅವರ ಹೆಸರನ್ನ ತೆಗೆದು ತನ್ನದೇ ಹೆಸರು/ಪೋಟೋ ಹಾಕಿಕೊಂಡಿದ್ದರು.ಕಡೆಗೆ ಎಚ್ಚರಿಸಿದ ಮೇಲೆ ತಪ್ಪಾಯಿತು ಅಂದಿದ್ದರು.ಅವ್ರಿಗೇನೋ ಬೌದ್ದಿಕ ಹಕ್ಕು ಅನ್ನುವುದೆಲ್ಲ ತಿಳಿದಿರಲಿಕ್ಕಿಲ್ಲ ಅಂದುಕೊಳ್ಳೋಣ.ಆದರೆ,ಕಂಡೋರಿಗೆಲ್ಲ ಬುದ್ದಿ ಹೇಳೊ ಪತ್ರಿಕೆಯವರಿಗೆ ಬೌದ್ದಿಕ ಹಕ್ಕು ಅನ್ನುವುದರ ಅರಿವಿಲ್ಲವೇ? ಈ ಇಬ್ಬರೂ ಲೇಖಕರು ಬೇರೊಂದು ಪತ್ರಿಕೆಗೆ ಬರೆಯುವವರು ಅದನ್ನ ಅನುಮತಿಯಿಲ್ಲದೆ ಪ್ರಕಟಿಸುವುದು ಪತ್ರಿಕಾ ಧರ್ಮವಲ್ಲ ಅನ್ನುವುದನ್ನ ನಾವು ಹೇಳಿಕೊಡಬೇಕಾ? ಸದಾಶಿವ ರಾವ್ ಅವರು ಆ ಪತ್ರಿಕೆಗೆ ಈ ಬಗ್ಗೆ ಪತ್ರ ಬರೆದು ಕೇಳಿದಾಗ ’ಇನ್ಮುಂದೆ ಈ ರೀತಿ ಆಗುವುದಿಲ್ಲ,ತಪ್ಪಾಗಿದೆ’ ಅಂದಿದ್ದಾರೆ.ಆದರೆ ರಶ್ಮಿಯವರು ಕರೆ ಮಾಡಿದರೂ ಸರಿಯಾಗಿದೆ ಉತ್ತರಿಸದೆ ನಿರ್ಲಕ್ಷಿಸಿದ್ದಾರೆ…! ಇದೆಂತ ಉದ್ಧಟತನ?
ವಿಷಯ ಹೆಚ್ಚು ಜನರಿಗೆ ತಲುಪಿಸುವ ಉದ್ದೇಶವೇನೋ ಒಳ್ಳೆಯದೇ,ಆದರೆ ಅದಕ್ಕೊಂದು ನೀತಿ-ರೀತಿ ಅನ್ನುವುದು ಇರುತ್ತದೆ.ಇದು ಕೇವಲ ಈ ಪತ್ರಿಕೆಯೊಂದರ ಚಾಳಿಯಲ್ಲ ಕೆಲವೊಂದು ಪತ್ರಿಕೆಗಳು ಈ ಹಿಂದೆ ಹೀಗೆ ಮಾಡಿರುವ ಉದಾಹರಣೆಗಳು ನಮಗೆ ಹಲವು ಬ್ಲಾಗುಗಳಲ್ಲಿ ಸಿಗುತ್ತವೆ.ಇನ್ಮುಂದಾದರೂ ಪತ್ರಿಕೆಗಳು ಪತ್ರಿಕಾ ಧರ್ಮವನ್ನ ಪಾಲಿಸಲಿ ಅನ್ನುವುದು ನಮ್ಮ ಆಶಯ.ಇಲ್ಲದಿದ್ದರೇ ಬುದ್ದಿ ಹೇಳೊ ಮಾಧ್ಯಮದ ಮಂದಿಯ ಬುದ್ದಿ ಎಲ್ಲಿದೆ ಅಂತ ಜನ ಕೇಳುವಂತಗಾಬಾರದು ನೋಡಿ…!
ಸದಾಶಿವ ರಾವ್ ಅವರು ’ಆ’ ಪತ್ರಿಕೆಗೆ ಬರೆದೆ ಪತ್ರವಿಲ್ಲಿದೆ.
ಪ್ರೀತಿಯ ಸ೦ಪಾದಕರಿಗೆ
ಅರೆಹೊಳೆ ಸದಾಶಿವ ರಾವ್ ಮಾಡುವ ನಮಸ್ಕಾರಗಳು
ದಿನಾ೦ಕ ೨೮.೦೪.೨೦೧೧ರ ತಮ್ಮ ಸ೦ಚಿಕೆಯಲ್ಲಿ ಪ್ರಕಟಿಸಿದ ನನ್ನ ಲೇಖನದ ಬಗ್ಗೆ ಬರೆಯಬೇಕಾದ ಅನಿವಾರ್ಯತೆ ಬ೦ತು.
ಮೊದಲಾಗಿ ನೀವು ‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು ಎ೦ಬ ನನ್ನ ಲೇಖನವನ್ನು ನನ್ನ ಅನುಮತಿ ಅಥವಾ ಅವಾಗಾಹನೆಗೆ ತರದೇ ಪ್ರಕಟಿಸಿದ್ದು ಬೇಸರವೆನಿಸಿತು. ಮತ್ತೆ ಲೇಖನದ ಪೂರ್ಣ ಪಾಠ ಪ್ರಕಟಿಸದೆ, ಲೇಖನದ ಒಟ್ಟು ಆಶಯ ಅಸ್ಪಷ್ಟ ವಾಗುವ೦ತೆ ಮಾಡಿದ್ದಿರಿ. ಲೇಖನದ ಶಿರ್ಶಿಕೆಗು ನೀವು ಪ್ರಕಟಿಸಿರುವ ‘ತು೦ಡು ಲೇಖನ’ ಕ್ಕೂ ಎಲ್ಲಿಯೂ ಸ೦ಬ೦ಧವೇ ಇಲ್ಲದ೦ತಾಗಿದೆ.
ಇನ್ನು ಒ೦ದು ಮುಖ್ಯ ವಿಚಾರವೆ೦ದರೆ, ನಾನು ನೇರವಾಗಿ ಅ ಲೇಖನವನ್ನು ತಮಗೆ ಕಳುಹಿಸಿರಲಿಲ್ಲ. ಅದು ನಾನು ನಿಯಮಿತವಾಗಿ ಬರೆಯುವ ಪತ್ರಿಕೆ ಹಾಗು ನಿಲುಮೆಗೆ ಅ೦ಕಣಕ್ಕೆ೦ದು ನಾನು ಸಿದ್ದ ಪಡಿಸಿದ ಲೇಖನ. ನನ್ನ ಅನಿಸಿಕೆಯ೦ತೆ ನೀವು ಅದನ್ನು ನಿಲುಮೆಯ ಮೂಲಕ ತೆಗೆದುಕೊ೦ಡಿದ್ದೀರಿ. ತಾವು ನಿಲುಮೆಯ ಕ್ರಪೆಯನ್ನು ಆ ಲೇಖನದಲ್ಲಿ ನಮುದಿಸಿದ್ದರೆ, ಈ ಯಾವ ಗೊ೦ದಲಗೂ ಉದ್ಭವಿಸುತ್ತಿರಲಿಲ್ಲವಾಗಿತ್ತು. ಅದನ್ನು ನೀವು ಮಾಡದ್ದು ಮತ್ತೊ೦ದು ಬೇಸರದ ವಿಚಾರ.
ಯಾವುದೇ ಪ್ರಕರಣವನ್ನು ಎಳೆಯುವುದು ನನಗಿಷ್ಟವಿಲ್ಲ. ಆದರೆ ತಾವು ಈ ವಿಷಯದಲ್ಲಿ ಪತ್ರಿಕಾ ಧರ್ಮವನ್ನು ನಿರ್ಲಕ್ಷಿಸಿದ್ದಿರಿ ಎ೦ಬುದು ಕ೦ಡು ಬರುತ್ತದೆ . ಇನ್ನು ಮು೦ದೆ ಇ೦ತಹಾ ಯಾವುದೇ ಬರಹಗಳನ್ನು ಬೇರೆಡೆಯಿ೦ದ ತೆಗೆದುಕೊ೦ಡಲ್ಲಿ, ದಯವಿಟ್ಟು ಅನುಮತಿಯೊ೦ದಿಗೆ ಅಥವಾ ಕನಿಷ್ಠ ಯಾರ ಕ್ರಪೆಯೆ೦ಬ ವಿಷಯದೊ೦ದಿಗೆ ಪ್ರಕಟಿಸುವಿರಾಗಿ ಭಾವಿಸುತ್ತೇನೆ.
ನಿಮ್ಮ ಉತ್ತರದ ನಿರಿಕ್ಷೆಯಲ್ಲಿರುತ್ತೇನೆ.





ನನಗೆ ಒಂದು ಯೋಚನೆಯಿದೆ.
ಬ್ಲಾಗಿಗರೆಲ್ಲ ಸೇರಿಕೊಂಡು ಒಂದು ಏಜೆನ್ಸಿಯನ್ನೇಕೆ ಮಾಡಿಕೊಳ್ಳಬಾರದು. ಎಲ್ಲ ಬ್ಲಾಗುಗಳ ಯಾವುದೇ ಬರಹವನ್ನ ಯಾವುದೇ ಪತ್ರಿಕೆ ಪಡೆದುಕೊಳ್ಳಬಹುದು. ಆದರೆ, ತಮ್ಮ ಪತ್ರಿಕೆಯಲ್ಲಿ ಇತರ ಲೇಖನಗಳಿಗೆ ಕೊಡುವ ಸಂಭಾವನೆಯನ್ನು ಕೊಡಮಾಡಬೇಕು. ಮತ್ತು ಏಜೆನ್ಸಿಯವರು ಪತ್ರಿಕೆ ಮತ್ತು ಬ್ಲಾಗಿಗರ ನಡುವೆ ಸಂಪರ್ಕ ಸೇತುವಾಗಬೇಕು.
ಈ ಐಡಿಯಾ ತುಂಬಾ ದಿನದಿಂದ ಇತ್ತು. ಈ ಸಂದರ್ಭದಲ್ಲಿ ಹೊರಬಂದಿದೆ.
ಗಣೇಶ್. ಕೆ.
ನೈತಿಕತೆ ಇಲ್ಲದ ಪತ್ರಿಕೆಗಳಿಗೆ ಸಮಾಜ ಸುಧಾರಣೆಯ ಜವಾಬ್ದಾರಿ ಬೇರೆ. ಅಂತ ಪತ್ರಿಕೆ ಯಾವುದೇ ಇರಲಿ, ನಿಲುಮೆ ಹೆಸರು ಪ್ರಕಟಿಸಬೇಕು. ಇದರಲ್ಲಿ ಮುಲಾಜಿಲ್ಲ. ನಾಲ್ಕು ಜನರಿಗೆ ತಿಳಿದಾಗಲೇ, ಎಚ್ಚರದಿಂದ ಇರ್ತಾರೆ. ನಿಲುಮೆ, ದಯವಿಟ್ಟು ಪತ್ರಿಕೆ ಹೆಸರು ಪ್ರಕಟಿಸಿ. ನಿಲುಮೆಗೆ ಹೊಸದೊಂದು ಪುಟ ಸೇರಿಸಿ. ಅದರಲ್ಲಿ ನಿಲುಮೆಯ ಲೇಖನಗಳ ಹಕ್ಕುಗಳ ಬಗ್ಗೆ ಬರೆಯಿರಿ, ಕಾಪಿರೈಟ್ ಅಥವಾ ಕ್ರಿಯೇಟಿವ್ ಕಾಮನ್ಸ್ ಲಯ್ಸೆನ್ಸಿಂಗ್ ಮಾಹಿತಿ ಹಾಕಿ. (http://creativecommons.org/)
ಹೌದು ನಾನು ಬರೆಯುತ್ತಿರುವ ಬ್ಲಾಗ್ ಲೇಖನಗಳು ಸಹ ಸ್ಥಳೀಯ ಪತ್ರಿಕೆಯೊಂದು ನನಗೆ ಅರಿವಿಲ್ಲ ಪ್ರಕಟಿಸಿದೆ ಎಂಡು ಮಿತ್ರರು ನೋಡಿ ಹೇಳಿದ ಮೇಲೆ ಅರಿವಿಗೆ ಬಂತು. ನೈತಿಕತೆ ಇಲ್ಲದ ಇಂತಹ ಪತ್ರಿಕೆಗಳು ಮತ್ತು ಸಂಪಾದಕರು ಇಂದಿನ ಸಮಾಜದ ನಿರ್ದೇಶಕರು ಎಂದು ಊಹಿಸುವಾಗ ಗಾಬರಿಯಾಗುತ್ತದೆ. ಉಡುಪಿಯ ಪ್ರತಿಷ್ಠಿತ ವೃತ್ತ ಪತ್ರಿಕೆಯೊಂದು ನನಗೆ ಅರಿವಿಲ್ಲದೆ ನನ್ನ ಬ್ಲಾಗ್ ಲೇಖನ ಬೆರೆದು ಪ್ರಕಟಿಸಿ ಅನಾವಶ್ಯಕ ಗೊಂದಲ ಹಾಗು ಮಾನಸಿಕ ನೋವನ್ನು ನನಗೆ ತಂದಿತ್ತು. ಅದರ ಬಗ್ಗೆ ಬರೆದ ಲೇಖನ ಇಲ್ಲಿದೆ ನೋಡಿ http://yakshachintana.blogspot.com/2010/10/blog-post.html
ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…! ನಿಜಕ್ಕು ಸಕಾಲಿಕ ಲೇಖನ. ಧನ್ಯವಾದಗಲು
ಅಯ್ಯಯ್ಯ್ಯೋ… ಹಾಗಾದರೆ.. ನಮ್ದೆಷ್ಟು ಕಳವಾಗಿದೆಯೋ…?!
ನನಗೂ ಇಂಥದ್ದೇ ಅನುಭವವಾಗಿದೆ.. ಪತ್ರಿಕಾ ರಂಗದ ಬನಿಯನ್ ಟ್ರೀ.. ಮೂಲಕ….
ಏನದು ಬನಿಯನ್ ಟ್ರೀ ?!
ಇದು ತುಂಬಾ ಬೇಸರದ ಸಂಗತಿ.ಒಂದು ಹಂತದಲ್ಲಿ, ನಿಲುಮೆ ಮತ್ತು ಅದರ ಸೃಜನ ಶೀಲತೆ ಮನ್ನಣೆಯನ್ನು ನಾಡಿಗೆ ಪರಿಚಯಿಸಿ ಹುಬ್ಬೇರಿಸುವಂತೆ ಮಾಡಿತು.ಇನ್ನೊಂದು ಹಂತದಲ್ಲಿ ಪತ್ರಿಕೆಯಲ್ಲಿ ಬರುವ ಬರಹಗಳ ಮೌಲ್ಯವನ್ನು ಪ್ರಶ್ನಿಸುವಂತೆ ಮಾಡಿತು.ಹಾಗಾದರೆ, ಅಷ್ಟು ವರ್ಷಗಳಿಂದ ಪತ್ರಿಕೆ ನಡೆಸಿ ಮನೆ ಮಾತಾಗಿದ್ದ ಪತ್ರಿಕೆಗಳಿಗೆ ಒಬ್ಬ ಸೃಜನಶೀಲ ಬರಹಗಾರರ ಗುಂಪೊಂದನ್ನು ಸೃಷ್ಟ್ಹಿಸಲು ಸಾಧ್ಯವಾಗಲಿಲ್ಲವೇ? ಇದಕ್ಕೆ ನಲ್ಮೆಯ ” ನಿಲುಮೆ” ಸಂಪಾದಕರು ಮತ್ತು ಸಹೋದ್ಯೋಗಿ ಬರಹಗಾರ ಮಿತ್ರರು ಕಟ್ಟುನಿಟ್ಟಿನ ವ್ಯವಸ್ಥೆಯನ್ನು ತರಬಹುದೆಂದು ಆಶಿಸುತ್ತೇನೆ.ಮಾಹಿತಿಗೆ ಅನಂತ ಧನ್ಯವಾದಗಳು.
ಅನುಮತಿ ಪಡೆದು ಹಾಕೋಕೆ ಏನ್ ರೋಗ ಅಂತ? ತಾವು ಪತ್ರಿಕೆಯವರು ಏನು ಮಾಡಿದರೂ ನಡೆಯುತ್ತದೆ ಅಂದುಕೊಂಡಿರಬಹುದು.
ಥೂ !!! ನಾಚಿಕೆಯಾಗಬೇಕು ಆ ಸಂಪಾದಕನಿಗೆ, ಇಂಥ ಹೇಸಿಗೆ ಕೆಲಸ ಮಾಡೋಕಾ ಆ ಸಂಪಾದಕ ಪತ್ರಿಕೆ ನಡೆಸ್ತಿರೋದು, ಆ ಪತ್ರಿಕೆಯ ಸಂಪಾದಕ ನಿಜಕ್ಕೂ ನಿಯತ್ತಿದ್ದವನೆ ಆಗಿದ್ರೆ, ಇದೆ ನಿಲುಮೆಯಲ್ಲಿ ಸಾರ್ವಜನಿಕ ಕ್ಷಮೆ ಕೇಳಲಿ. ಇಂಥವರಿಂದಲೇ ಪತ್ರಿಕಾ ಧರ್ಮ ಹಾಳಾಗಿ ಹೋಗಿರೋದು. ಲೇಖನಗಳು ಇಲ್ಲ ಅಂದ್ರೆ ಲೇಖಕರ ಅನುಮತಿ ಪದೆದಾದ್ರು ಲೇಖನ ಪ್ರಕಟಿಸೋ ಏರ್ಪಾಡು ಮಾಡಿಕೊಳ್ಳಲ್ಲಿ. ಯೋಗ್ಯತೆ ಇಲ್ಲ ಅಂದ್ರೆ ಪತ್ರಿಕೆಯ ಕಚೇರಿಗೆ ಬಾಗಿಲು ಹಾಕಿ ಮನೇಲಿ ಕೂತ್ಕೊಳ್ಳಲಿ .
ರಾಕೇಶ್ ಶೆಟ್ಟಿಯವರ ಲೇಖನ ಕದ್ದ ಮಹಾನುಭಾವನ ಲೇಖನವನ್ನು ನಾನು ನೋಡಿದ್ದೇ. ಪುಣ್ಯಾತ್ಮ ರಾಕೇಶ್ ಶೆಟ್ಟಿಯವರ ಪೋಟೋ ತೆಗೆದು ತನ್ನ ಪೋಟೋ ಹಾಕೊಂಡಿದ್ದ .
—
ಅರವಿಂದ್
ಹೌದು. ನನ್ನ ಈ ಮೈಲ್ ಗೆ ‘ಕರಾವಳಿ’ಯ ಈ ಪತ್ರಿಕೆಯ ಸ೦ಪಾದಕರು ಮರಳಿ ದೂರವಾಣಿಯ ಮೂಲಕ ಮಾತಾಡಿ, ಇದು ಕಣ್ತಪ್ಪಿನಿ೦ದಾದ ಅಚಾತುರ್ಯವೆ೦ದು ಹೇಳಿ, ಮು೦ದೆ ಹೀಗಾಗದ೦ತೆ ಜಾಗ್ರತೆವಹಿಸುವ ಮಾತಾಡಿದ್ದಾರೆ. ಆದರೆ ಇದು ಅವರ ಮೊದಲಸಲದ ತಪ್ಪಲ್ಲವೆ೦ಬುದನ್ನು ತಿಳಿದನ೦ತರ ಮತ್ತು ರಶ್ಮಿಯವರೊ೦ದಿಗೆ ಅವರು ವರ್ತಿಸಿದ ರೀತಿ ಕೇಳಿ, ಇದು ಅವರ ಪತ್ರಿಕಾ ಧರ್ಮದ ಉದ್ದೇಶಿತ ಉಲ್ಲ೦ಘನೆಯ ಮತ್ತೊ೦ದು ‘ಅಲೆ’ ಎ೦ದು ನನಗನಿಸುತ್ತಿದೆ. ಇದು ಖ೦ಡನೀಯ
ಇದು ಕರಾವಳಿ ಅಲೆಯ ಕೆಲಸವೇ? ಇವತ್ತು ಸಂಪಾದಕೀಯದ ಲೇಖನ “ಕನ್ನಡಪ್ರಭ ಓದುಗರಿಗೆ ಈ ಹಳಸಲು ಅಡುಗೆ ಬೇಕಾಗಿತ್ತಾ?” ಪ್ರಕಟವಾಗಿದೆ. ಕಣ್ತಪ್ಪಿನ ರೋಗ ಇನ್ನೂ ಗುಣವಾಗಿಲ್ಲ ಕಾಣತ್ತೆ
ಕನ್ನಡ ಪ್ರಭ ಕುರಿತಾದ ಲೇಖನಕ್ಕೆ ಕೃಪೆ ಹಾಕುವ ಸೌಜನ್ಯ ತೋರಿದ್ದಾರೆ. ಸ್ವಲ್ಪ ಗಮನಿಸಿ ….
ಹೊಸದಿಗಂತ ತಾವೇನೂ ಕಡಿಮೆಯಿಲ್ಲ ಎಂಬುದನ್ನು ತೋರಿಸ ಹೊರಟಿದೆ ಓದಿ: