ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ ರಂಗದ ಅನಿಶ್ಚಿತತೆ, ಅರಾಜಕತೆ ಮತ್ತೊಮ್ಮೆ ತನ್ನ ವಿರಾಟ್ ರೂಪದ ಪ್ರದರ್ಶನ ನೀಡಿದೆ. ಹದಿನಾರು ಶಾಸಕರ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಆಡಳಿತ ಪಕ್ಷ, ವಿರೋಧ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಸಜ್ಜಾಗಿವೆ.
ಅತ್ತ ಬಿಜೆಪಿ ಹೈಕಮಾಂಡಿನ ಹಿರಿತಲೆಗಳು ಹನ್ನೊಂದು ಮಂದಿ ಬಂಡಾಯ ಶಾಸಕರಲ್ಲಿ ಹತ್ತು ಮಂದಿಯನ್ನು ಕರೆದು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನಿಸಿ ಬಂಡೆದಿದ್ದರೋ ಅದೇ ಯಡಿಯೂರಪ್ಪನ ಮುಂದೆ ಮಂಡಿಯೂರಿ ಶರಣಾಗಿ ನೀವೇ ನಮ್ಮ ನಾಯಕ ಎನ್ನುತ್ತಾ ತಲೆಬಾಗಿ ನಿಂತ ಇವರ ಭಂಗಿ ಅಸಹ್ಯವನ್ನುಂಟು ಮಾಡುತ್ತದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ-ಶಾಶ್ವತ ಮಿತ್ರರಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.
ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೊರಾದುವುದನ್ನೇ ಆಡಳಿತ ಎಂದು ತಿಳಿದಂತಿದೆ. ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ತಮ್ಮದೇ ಪಕ್ಷದ ನಾಯಕರಿಂದ, ಹೊರಗಿನವರಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಪಟ್ಟ ಉಳಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಪಟ್ಟು ಹಾಕುತ್ತಿದ್ದಾರೆ.
ಕಾವಿಯ, ಕಾಸಿನ ಬಲವಿದ್ದರೆ ಸಾಕು
ಹೈಕಮಾಂಡನ್ನೇ ಗೆಲ್ಲುವೆನು
ನೋಟಿನ ಮೂಟೆಯ ಚೆಲ್ಲಿಯಾದರೂ
ಖುರ್ಚಿಗೆ ಅಂಟಿ ಕೂರುವೆನು
ಎನ್ನುತ್ತಾ ನಮ್ಮ ಯಡಿಯೂರಪ್ಪನವರು ತಮ್ಮ ಕುಯುಕ್ತಿಯಿಂದ ಬಿಜೆಪಿ ಹೈಕಮಾಂಡನ್ನೇ ಹೈಜಾಕ್ ಮಾಡಿದ್ದಾರೆ. ಆಪರೇಶನ್ ಕಮಲ ಆರಂಭಿಸಿ ಹೊಸ ಬಗೆಯ ಕುದುರೆ ವ್ಯಾಪಾರವನ್ನು ಪರಿಚಯಿಸಿದ ಕೀರ್ತಿ ಯಡಿಯೂರಪ್ಪನವರದು.
ಅತ್ತ ಯಡಿಯೂರಪ್ಪನವರು ಅನರ್ಹಗೊಂಡಿದ್ದ ಹತ್ತು ಮಂದಿ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಮುದ್ದಾಡುತ್ತಿರುವಾಗಲೇ ಇತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಶಾಸಕರ ಅನರ್ಹತೆ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ಮರುಕ್ಷಣದಿಂದಲೇ ರಾಜ್ಯಪಾಲರು ಯಡ್ಡಿಯನ್ನು ಕೆಡವಲು ಖೆಡ್ಡಾ ತೋಡಲಾರಂಭಿಸಿದರು. ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು.
ರಾಜ್ಯಪಾಲರ ಈ ವರ್ತನೆಯನ್ನು ಖಂಡಿಸಿ ಬಾಯಿಬಡುಕ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯಪಾಲರ ಈ ಕ್ರಮ ಜನಾದೇಶಕ್ಕೆ ವಿರುದ್ಧವಾಗಿದೆ ಎಂದು ಕೂಗಾಡುತ್ತಿರುವ ಈ ನಾಯಕರು ಅಂದು ಹದಿನಾರು ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಮೇಜುಕುಟ್ಟಿ ಸ್ವಾಗತಿಸಿದ್ದರು. ಈಗ ತಮ್ಮ ತಂತ್ರ ತಮಗೇ ಬೂಮರಾಂಗಿನಂತೆ ವಾಪಸ್ ಬಂದಿದೆ.
ಇವರ ರಾಜಕೀಯ ತಂತ್ರ- ಪ್ರತಿತಂತ್ರಗಳ ನಡುವೆ ಮತದಾರ ಹೈರಾಣಾಗಿದ್ದಾನೆ. ಆದರೆ ಬುದ್ಧಿವಂತನಾಗಿಲ್ಲ. ಮತ್ತೆ ಇದೇ ಜನ ಅಧಿಕಾರದ ಗದ್ದುಗೆ ಏರುತ್ತಾರೆ…..ವಿಕೃತ ನಗೆ ಬೀರುತ್ತಾರೆ. ಬನ್ನಿ ಗೆಳೆಯರೇ,ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರೂ, ಶಿಸ್ತಿನ (!?) ಸಿಪಾಯಿಗಳೂ ಆದ ಬಿಜೆಪಿ ಶಾಸಕರು ಪೆರೇಡ್ ಮಾಡಲಿದ್ದಾರೆ….ನೋಡಿ ಆನಂದಿಸೋಣ
ಕೊನೆಗೂ ಹತ್ತು ಮಂದಿ
ಭಿನ್ನ ಶಾಸಕರಿಗೆ ಬುದ್ಧಿ ಬಂದಿದೆಯಂತೆ
ಪ್ರಶ್ನೆಯೊಂದು ಹಾಗೇ ಉಳಿದಿದೆ
ನಮ್ಮ ಜನರಿಗೆ ಬುದ್ಧಿ ಬಂದೀತೇ !!??
(ಚಿತ್ರ ಕೃಪೆ :news.in.msn.com)
“ಅತ್ತಲಿಂದ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೇ ತಡ ಇತ್ತಲಿಂದ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಅಮಾನತ್ತಿನಲ್ಲಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳಿಸಿದರು. ”
ಇವರು ಕಾಂಗ್ರೆಸ್ ರಾಜಕಾರಣಿಯೋ ಅಥವಾ ರಾಜ್ಯಪಾಲರೋ ? ಅನ್ನುವ ಸಂಶಯ ಕಾಡುತ್ತಿದೆ.!!!!
ಇನ್ನು ರಾಷ್ಟ್ರಪತಿ ಆಡಳಿತ ಹೇರಲು ರಾಜ್ಯಪಾಲರು ಕೊಟ್ಟ ಕಾರಣಗಳಲ್ಲೊಂದು ಹೀಗಿದೆ ” ರಾಜ್ಯದಲ್ಲಿ ಕಾಂಗ್ರೆಸ್ಸಿನ ಬವಿಷ್ಯವನ್ನು ನಿರ್ದರಿಸುವುದಕ್ಕೆ ಇದಕ್ಕಿಂತ ಉತ್ತಮ ಕ್ರಮ ಬೇರೊಂದಿಲ್ಲ!!”(ಮೇ 5 ,2011 ರ ಕನ್ನಡಪ್ರಭ ಪುಟ 4 ನೋಡಿ).ಇಂತಹ ರಾಜ್ಯಪಾಲ ಕರ್ನಾಟಕಕ್ಕೆ ಬೇಕೇ?
ಇನ್ನು ಯೆಡಿಯೂರಪ್ಪರ ಭ್ರಷ್ಟಾಚಾರ ನಿರ್ವಿವಾದವಾಗಿ ಖಂಡನಾರ್ಹ ..ಅದರಲ್ಲಿ ಎರಡು ಮಾತಿಲ್ಲ.
ಆದರೆ ಅವರು ಶುರು ಮಾಡಿರುವ ಮಾಡುತ್ತಿರುವ ಹಲವು ಒಳ್ಳೆಯ ಯೋಜನೆಗಳು ನಿಜಕ್ಕೂ ಪ್ರಶಂಸನಾರ್ಹ…..
ಹಾಗಂತ ನಮ್ಮ ಘನತೆವೆತ್ತ (!!??) ರಾಜ್ಯಪಾಲರು ಶುದ್ದಹಸ್ತರೇನು? ಇತರ ರಾಜಕಾರಣಿಗಳು (ಹೆಚ್ ,ಡಿ,ಕೆ .ಸಿದ್ರಾಮಣ್ಣ ಇತ್ಯಾದಿ ) ಕೂಡ ಶುದ್ದ ಹಸ್ತರೇನು?
ಹಾಗೆಯೇ ಇನ್ನೂ ಮುಖ್ಯವಾದ ವಿಷಯ ಬ್ರಷ್ಟಾಚರವನ್ನ ಒಕ್ಕೊರಲಿನಿಂದ ವಿರೋಧಿಸೋಣ ಆದರೆ ಆರಿಸಿ ಬಂದ ಸರಕಾರವನ್ನ ಕಿತ್ತೊಗೆದು ಪುನಃ ಚುನಾವಣೆಯ ಖರ್ಚು ವೆಚ್ಚಗಳನ್ನು ಜನರ ಮೇಲೆ ಹೇರುವ ದುಸ್ಸಾಹಸ ಬೇಡ!!!!!
ಮುಖ್ಯ ವಿಷಯ : ಖಂಡಿತಾ ಯೆಡ್ಡಿಯ ಬ್ರಷ್ಟಾಚಾರದ ಸಮರ್ಥಕ ನಲ್ಲ ನಾನು ಅದು ತಪ್ಪೇ ….
ಶಾಂತಿಯವರೇ, ತಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ವಿಪರ್ಯಾಸದ ವಿಷಯವೇನೆಂದರೆ ಯಡಿಯೂರಪ್ಪನವರ ಭ್ರಷ್ಟ ಆಡಳಿತವನ್ನು ವಿರೋಧಿಸಬೇಕಾದ ವಿರೋಧಪಕ್ಷಗಳು ನರಸತ್ತಂತೆ ಮಲಗಿವೆ. ರಾಜ್ಯಪಾಲರಿಗೆ ಸರ್ಕಾರವನ್ನು ಎಲ್ಲೆಂದರಲ್ಲಿ ಟೀಕೆ ಮಾಡುವುದೇ ಕೆಲಸವಾಗಿದೆ. ಇನ್ನು ಬಿಜೆಪಿಗೆ ಬುದ್ಧಿ ಕಲಿಸಬೇಕಾದ ಮತದಾರ ಎಲ್ಲಾ ಉಪಚುನಾವಣೆಗಳಲ್ಲೂ ಬಿಜೆಪಿಯನ್ನೇ ಗೆಲ್ಲಿಸಿ ರಾಜ್ಯವನ್ನು ಮತ್ತಷ್ಟು ದೋಚಲು ಹುಮ್ಮಸ್ಸು ನೀಡುತ್ತಿದ್ದಾನೆ. ಭ್ರಷ್ಟಾಚಾರದ ವಿಷಯದಲ್ಲಿ ಎಲ್ಲ ಪಕ್ಷಗಳದ್ದು ಒಂದೇ ಸಿದ್ದಾಂತ……”ಅಧಿಕಾರ ದಕ್ಕಿದೆ ಸಿಕ್ಕಿದಷ್ಟು ಬಾಚಿಕೋ”. ನೆನಪಾಗುವುದು ಒಂದೇ ಹಾಡು “ಎಂದು ಆದೇವು ನಾವು ಮುಕ್ತ ಮುಕ್ತ….ಮುಕ್ತ”
ವಿಜಯ ಹೆರಗು ರವರೆ,
ಬೇರೆ ರಾಜಕಾರಣಿಗಳಿಗೆ ಹೋಲಿಸಿದರೆ ಯೆಡ್ಡಿಯ ನುಂಗು ಬಾಕುತನ ನಗಣ್ಯ ಇರಬಹುದೇ? ಅದಕ್ಕೆ ಮತದಾರ ಪುನಃ ಪುನಃ ಬೆ೦ಬಲಿಸುತ್ತಿರಬಹುದೆ? ಯೆಡ್ಡಿಯ ನು೦ಗು ಬಾಕುತನ ಕೇವಲ denotification ಮತ್ತು ಸ್ವಜನ ಪಕ್ಷಪಾತ ಕ್ಕಷ್ಟೇ ಸೀಮಿತ !!!ಉಳಿದ ರಾಜಕಾರಣಿಗಳಂತೆ ಸಿಕ್ಕಿದಲ್ಲೆಲ್ಲ ಮುಕ್ಕಿ ಸಿಕ್ಕಿಬಿದ್ದಿಲ್ಲ !!! ಅದಕ್ಕಾಗಿಯೇ ” ಅನೆ ಕಳ್ಳನಿಗಿಂತ ಅಡಿಕೆ ಕಳ್ಳನೇ ವಾಸಿ” ಅಂತ ಮತದಾರ ಬೆ೦ಬಲಿಸುತ್ತಿರ ಬಹುದೆ೦ಬ ಅನುಮಾನ !!!! ಏನಂತೀರಿ?
ಶಾಂತಿಯವರೇ,
“ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ” ಅನ್ನೋ ಇನ್ನೊಂದು ಮಾತಿದೆ. ಡಿನೋಟಿಫಿಕೇಶನ್, ಸ್ವಜನ ಪಕ್ಷಪಾತಕ್ಕಷ್ಟೇ ಯಡಿಯೂರಪ್ಪ ಸೀಮಿತವಾಗಿಲ್ಲ…..ಯಡ್ಡಿಯ ನುಂಗುಬಾಕತನವನ್ನು ನಗಣ್ಯ ಎಂದರೆ ಅದು ಯಡ್ಡಿಗೆ ಅವಮಾನ ಮಾಡಿದಂತೆ. ಒಂದು ಮಾತು ನಿಜ “ಯಡ್ಡಿ ಗಣ್ಯನಲ್ಲ- ನ-ಗಣ್ಯ”. ಮಠ-ಮಂದಿರಗಳಿಗೆ ಕೋಟಿಗಟ್ಟಲೆ ಹಣನೀಡಿ ಕಾವಿಧಾರಿಗಳನ್ನೇ ಕೊಂಡುಕೊಂಡ ಭೂಪ…..ಕಮಲಕ್ಕೆ ಆಪರೇಶನ್ ಮಾಡಿ ಶಾಸಕರನ್ನೇ ಖರೀದಿ ಮಾಡಿದ ವ್ಯಾಪಾರಿ……ಪಂಚೆ- ಸೀರೆ-ಸರಾಯಿಗಳಿಗೆ ಓಟು ನೀಡುತ್ತಿದ್ದ ಜನರು ಸಾವಿರದ ನೋಟು ಕೇಳುವಂತೆ ಮಾಡಿದ ವ್ಯಕ್ತಿ ಯಡಿಯೂರಪ್ಪ. ‘ಬೇರೆ ಪಕ್ಷದವರನ್ನು ಸಾಚಾ ಎಂದು ನಾನು ಹೇಳುತ್ತಿಲ್ಲ – ಯಡ್ಡಿಯನ್ನು ನೀಚ ಎಂದಷ್ಟೇ ಹೇಳಬಯಸುತ್ತೇನೆ’.
ಹೆರಗು ರವರೆ ,
ಒಪ್ಪಿದೆ ನಿಮ್ಮ ಮಾತನ್ನು ಪೂರ್ಣವಾಗಿ . ಆದರೆ ಮಟ ಮಂದಿರ ಗಳಿಗೆ ಕೋಟಿಗಟ್ಟಲೆ ಹಣ ನೀಡಿ ( ಕಾರಣ ಏನೇ ಇರಬಹುದು ) ಯೆಡ್ಡಿ ತನ್ನ ಜೀವಮಾನ ದಲ್ಲಿ ಯಾರೂ ಮಾಡದ ಮಾಡಲಾಗದ ಉತ್ತಮ ಕೆಲಸ ಮಾಡಿದ್ದಾರೆ ಸರ್. ಯಾಕೆಂದರೆ ನೀವೇ ಹೇಳಿ ಇದುವರೆಗೆ ಹಿಂದೂ ದೇವಾಲಯಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ ಉದಾಹರಣೆ ನನಗೆ ಗೊತ್ತಿಲ್ಲ (ಪುನಃ ಹೇಳುತ್ತೇನೆ ಕಾರಣ ಏನೇ ಇರಬಹುದು ). ನಮ್ಮ ಜಾತ್ಯತೀತ ದೇಶದಲ್ಲಿ ಹಜ್ಜ್ ಯಾತ್ರೆಗೆ ಸರ್ಕಾರದ ಸಬ್ಸಿಡಿ ಸಿಗುತ್ತದೆ. ಆದರೆ ಅಮರನಾಥ ಯಾತ್ರೆಗೆ ಹೋಗಲು ನಾವು ಹೆಚ್ಚಿನ ಶುಲ್ಕ ಕಟ್ಟಬೇಕು(ಸರ್ಕಾರಕ್ಕೆ) ಎಂಥಹ ವಿಪರ್ಯಾಸ? ಜಾತ್ಯತೀತ ನಾಡಲ್ಲಿ?
ಕೊನೆ ಗುಟುಕು : ಯೆಡ್ಡಿಯ ನುಂಗು ಬಾಕುತನ ಖಂಡಿತಾ ಖಂಡನೀಯ ಮತ್ತು ಶಿಕ್ಷಾರ್ಹ ಅಪರಾಧ …..ಎಡ್ಡಿ ಜೊತೆ ಕುಮ್ಮಿ ,ಸಿದ್ದು ಮತ್ತಿತರರೂ(ಮತ್ತು ಬಳಗ =>ಪ್ರಸ್ತುತ ಕರ್ನಾಟಕದ (ದೇಶದ) ರಾಜಕಾರಣಿಗಳು so cald ?) ಖಂಡನರ್ಹರೂ ಮತ್ತು ಶಿಕ್ಷಾರ್ಹರು ಕೂಡ
ಕ್ಷಮಿಸಿ ಅದು ಮೇ 17 2011 ರ ಕನ್ನಡಪ್ರಭ ಎಂದಾಗಬೇಕು .
ಅಯ್ಯೋ .. ಈ ರಾಜಕೀಯ ದೊಂಬರಾಟದಿಂದ ಆರಿಸಿ ಕಳುಹಿಸಿದ ಜನ ಸಾಮಾನ್ಯರು ವಿಕಲಾಂಗಗೊಂಡ ಶಿಲೆಗಳಾಗಿದ್ದೇವೆ
SIr,
Karnatakadalli enu nadeyuta ide antane gottagalla. kittoda rajakaranigalu tamage ista bandange dina talta idare. Naavu yaru namma kelasa enu antane gotiila. Idaralli abivruddi maatu elli.
Ene agali innobbaru ADHIKARA dalli irabaradu, tamage baro yoggete illadiddaru.
Basavaraj jakkali.