ರಷ್ಯಾದಲ್ಲಿ ಭಗವದ್ಗೀತೆ ನಿಷೇಧಕ್ಕೆ ಯಾಕೀ ಕೂಗಾಟ ?
-ಅರವಿಂದ್
ಮಾಧ್ಯಮಗಳಲ್ಲಿ ಹಾಗೂ ಲೋಕಸಭೆಯಲ್ಲಿ ನೆನ್ನೆಯಿಂದಲೂ ಒಕ್ಕೊರಲಿಗಿನ ವಾದ-ವಿವಾದ. ಬಿಜೆಪಿ ಇನ್ನಿತರ ವಿರೋಧಪಕ್ಷಗಳು, ಹಿಂದೂ ಹೋರಾಟಗಾರರು, ಇಸ್ಕಾನು ಎಲ್ಲರದೂ ಒಂದೇ, ಮಾತು. ರಷ್ಯಾದಲ್ಲಿ ಭಗವದ್ಗೀತೆ ನಿಷೇಧ ಬೇಡವೆಂಬ ಕೂಗು. ಇದ್ಯಾಕೋ ಗೊತ್ತಾಗಲಿಲ್ಲ. ರಷ್ಯಾದಲ್ಲಿ ಭಗವದ್ಗೀತೆ ನಿಷೇಧಿಸಿದರೆ ಭಾರತಕ್ಕಾಗುವ ನಷ್ಟವೇನು ? ಹೇಳಿ ಕೇಳಿ ರಷ್ಯಾ ಕಮ್ಯೂನಿಷ್ಟ್ ದೇಶ. ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ. ಅದು ಧರ್ಮವನ್ನು ಅಫೀಮು ಎಂದುಕೊಂಡ ದೇಶ. ಇಂಥ ದೇಶಕ್ಕೆ ಧರ್ಮಗಳಿಂದ ನಾಗರೀಕರನ್ನು ಉದ್ಧಾರ ಮಾಡುವ ರಾಜಕೀಯವೂ ಇಲ್ಲ. ಇಂಥ ದೇಶದಲ್ಲಿ ಭಗವದ್ಗೀತೆಯಾದರೇನು, ಖುರಾನಾದರೇನು ಇನ್ಯಾವುದೇ…. ಇದ್ದರೇನು ಧರ್ಮಗ್ರಂಥಗಳಿಗೆ ವಿಶೇಷ ಮಾನ್ಯತೆಯೂ ಇಲ್ಲ.
ರಷ್ಯಾಕ್ಕೆ ತನ್ನದೇ ಆದ ಇತಿಹಾಸವಿದೆ, ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಅಲ್ಲಿನ ಧರ್ಮಗ್ರಂಥವಿದ್ದಂತೆ. ಇಂಥ ದೇಶದಲ್ಲಿ ಭಗವದ್ಗೀತೆ ನಿಷೇಧಿಸಬಾರದೆಂಬ ಕೂಗು, ಅದಕ್ಕೆ ಬೇಕಾದ ರಾಜತಾಂತ್ರಿಕತೆಯ ರಾಯಭಾರ ಭಾರತಕ್ಯಾಕೆ ಅಂತ ತಿಳಿಯುತ್ತಿಲ್ಲ. ಹೋರಾಟ ಇವೆಲ್ಲ ಅವಶ್ಯಕತೆ ಇದ್ಯಾ ? ಭಾರತದಲ್ಲಿ ಮುಸಲ್ಮಾನ, ಕ್ರ್ಯೆಸ್ತ ಅನುಯಾಯಿಗಳು ಆ ಧರ್ಮದ ಪ್ರಚಾರ ಕ್ಯೆಗೊಂಡರೆ ಅದು ಮತಾಂತರವಾದರೆ, ರಷ್ಯಾಗೂ ಅದು ಅನ್ವಯಿಸುವುದಿಲ್ಲವೇ ? ನಾನಿಲ್ಲಿ ಯಾವುದೇ ಧರ್ಮ ದೊಡ್ಡದು ವಿಶಾಲವಾದದ್ದೂ ಅನ್ನೋ ತುಲನೆಗೆ ಹೇಳುತ್ತಿಲ್ಲ. ಪ್ರತಿ ದೇಶಕ್ಕೂ ಅದರದ್ದೇ ಆದ ಸಂವಿಧಾನ ಕರಡು ಇರುತ್ತದೆ. ರಷ್ಯಾಕ್ಕೆ ಭಗವದ್ಗೀತೆಯ ಅವಶ್ಯಕತೆಯಿಲ್ಲ ಮತ್ತು ಅಲ್ಲಿ ಭಗವದ್ಗೀತೆಯ ಯಾವುದೋ ಅಧ್ಯಾಯದ ಯಾವುದೋ ಸಾಲು ಅಹಿಂಸೆಯನ್ನು ಸೃಷ್ಠಿಮಾಡುತ್ತದೆ ಎಂಬ ಆಲೋಚನೆಯಿದ್ದರೆ ಇರಲಿ ಬಿಡಿ, ಅದರಿಂದ ನಮಗ್ಯಾವ ನಷ್ಟವೂ ಇಲ್ಲ. ಭಗವದ್ಗೀತೆ ಭಾರತದ ಸಂಸ್ಕೃತಿಗೆ ತಳಹದಿಯಾದರೆ, ಅದು ಭಾರತಕ್ಕಾದೀತು. ರಷ್ಯಾವೂ ಭಾರತದಂತೆ ಪಾಲಿಸಬೇಕು ಅನ್ನುವ ಹಠ ಯಾಕೆ ? ಅದೇನೋ ಆಗಬಾರದ್ದು ಮಾಡಬಾರದ್ದು ಮಾಡುತ್ತಿರುವಂತೆ ಕೂಗಾಡುವ ಅವಶ್ಯಕತೆಯೇನಿದೆ. ಮತ್ತಷ್ಟು ಓದು
ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ ?
-ಉಮೇಶ್ ದೇಸಾಯಿ
ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು. ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ
ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನುಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..
ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ. ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ. ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ…ಅವರನ್ನು ನಾವು ನಮ್ಮನ್ನುಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ.