ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2012

6

ಸೇನೆ-ಸರ್ಕಾರದ ನಡುವೆ ಬಡವಾಗದಿರಲಿ ನನ್ನ ಭಾರತ

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಆವತ್ತು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತ ನೆಹರೂ ದೇಶದ ಒಂದಿಂಚು ನೆಲವನ್ನು ಚೀನಿಗಳೀಗೆ ಬಿಟ್ಟುಕೊಡುವುದಿಲ್ಲ.ಎಂತಾ ಯುದ್ಧಕ್ಕಾದರೂ ಸೈನ್ಯ ತಯಾರಿದೆ ಅನ್ನುತ್ತಲೇ  ತಮ್ಮ ಕೋಟಿನಿಂದ ತೆಗೆದ ಕೆಂಪು ಗುಲಾಬಿಯನ್ನ ಜನರ ಕಿವಿಗಿಟ್ಟರು.ಅವರ ಭಾಷಣದ ನಂತರದ ಇತಿಹಾಸ ನಿಮಗೆ ಗೊತ್ತಿರಲೇಬಹುದು.ಆ ಕಹಿ ನೆನಪಿಗೆ ೫೦ ವರ್ಷ ಆಗೋ ಸಮಯದಲ್ಲಿ ಮತ್ತೊಮ್ಮೆ ಕಳೆದವಾರ ಸಂಸತ್ತಿನಲ್ಲಿ ರಕ್ಷಣಾ ಸಚಿವ ಆಂಟನಿಯವರೂ ಸಹ ಭಾರತದ ಸೈನ್ಯ ಬಲಿಷ್ಟವಾಗಿದೆ,ಯುದ್ಧ ಸನ್ನದ್ಧವಾಗಿದೆ ಅಂದಿದ್ದಾರೆ.ನೆಹರೂ ಅವರಿಗೂ-ಅವ್ರ ಕಾಲಕ್ಕೂ ತುಲನೆ ಮಾಡಿದರೆ ಆಂಟನಿ ಅವರನ್ನ ಸ್ವಲ್ಪ ನಂಬಬಹುದು ಅನ್ನಿಸುತ್ತದೇ.ಆದರೆ…

ಕಳೆದ ವಾರ ನಡೆದ ವಿದ್ಯಾಮಾನಗಳಿವೆಯಲ್ಲ ಅವೆಲ್ಲ ಗಾಬರಿ ಹುಟ್ಟಿಸುವಂತವು.ಇದಕ್ಕೆ ಮುನ್ನುಡಿ ಬರೆದಿದ್ದು ಜನರಲ್.ವಿ.ಕೆ ಸಿಂಗ್…! ಜನ್ಮ ದಿನಾಂಕದ ರಗಳೆಯ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದವ್ರು, ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತ ತಮಗೆ ೧೪ ಕೋಟಿ ಲಂಚ ನೀಡಲು ಬಂದ ಪ್ರಸಂಗದ ಬಗ್ಗೆ ಬಾಯಿಬಿಡುವ ಮೂಲಕ.ಮತ್ತೆ ಆ ವಿಷಯವನ್ನ ನಾನು ರಕ್ಷಣಾ ಮಂತ್ರಿ ಆಂಟನಿ ಅವರಿಗೂ ಹೇಳಿದ್ದೆ ಅನ್ನುವುದು ಬೆಂಕಿಗೆ ತುಪ್ಪ ಸುರಿದಂತಾಗಿ ಹೋಯಿತು.ಸಂಸತ್ತಿನಲ್ಲಿ ಆಂಟನಿ ’ಅವರು ಮೌಕಿಕವಾಗಿ ಹೇಳಿದ್ದರು ನಾನು ಏನು ತಾನೇ ಮಾಡಲಿ” ಅಂತೆಲ್ಲ ಗೋಳಾಡುವಾಗಲೇ, ಜನರಲ್ ಪ್ರಧಾನಿ ಅವ್ರಿಗೆ ಬರೆದ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ರಹಸ್ಯವಾಗಿರಬೇಕಿದ್ದ ಪತ್ರ ಸೋರಿಕೆಯಾಗಿದ್ದು.!

ಆ ಪತ್ರದ ಮೇಲಿನ ಚರ್ಚೆಯೆಲ್ಲ ಇನ್ನು ನಿಂತಿಲ್ಲ.ಪತ್ರ ಸೋರಿಕೆ ಮಾಡಿದವರು ದೇಶ ದ್ರೋಹಿಗಳು ಅನ್ನುವುದು ನಿಜವೇ,ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನುವುದು ಸಹ ಒಪ್ಪುವಂತದ್ದೆ.ಆದರೆ ಅಂತ ಸುದ್ದಿ ಸಿಕ್ಕಾಗ ಅದು ದೇಶದ ರಕ್ಷಣೆಯ ಪ್ರಶ್ನೆ ಅದನ್ನ ಹೀಗೆ ಟಿ.ಆರ್.ಪಿ ಗೋಸ್ಕರ ಬಳಸಿಕೊಳ್ಳಬಾರದು ಅಂತ ನಮ್ಮ ಮಿಡಿಯಾಗಳಿಗೇಕೆ ಅನ್ನಿಸಲಿಲ್ಲ? ಪತ್ರ ಸೋರಿಕೆ ಮಾಡಿದವರದು ದೇಶ ದ್ರೋಹವ ಅನ್ನುವುದಾದರೆ ಅದನ್ನ ಇಡಿ ಶತ್ರು ದೇಶಗಳಿಗೂ ಗೊತ್ತಾಗುವಂತೆ ಮಾಡಿದ್ದು ದೇಶ ದ್ರೋಹತನವಲ್ಲವಾ? ಜನರಲ್ ಮೇಲೆ ಮುಗಿ ಬಿದ್ದ ರಾಜಕಾರಣಿಗಳಿಗೆ ಈ ಬಗ್ಗೆ ಕೇಳಬೇಕು ಅಂತಾ ಯಾಕೆ ಅನ್ನಿಸುತ್ತಿಲ್ಲ? ಇಂತ ಸನ್ನಿವೇಶದಲ್ಲಿ ದೇಶದ ಜನರ,ಸೈನ್ಯದ ಮನೋಸ್ಥೈರ್ಯ ಹೆಚ್ಚಿಸುವ ಜವಬ್ದಾರಿಯುತ ಕೆಲಸ ಮಾಡುವ ಬದಲು ‘ಪಾಕಿಸ್ತಾನ ಸೈನ್ಯ ಒಳ ಬಂದರೆ ಭಾರತ ಚಿತ್ರಾನ್ನ’ ಅನ್ನುವ ಕಾರ್ಯಕ್ರಮಗಳೆಲ್ಲ ಬೇಕಾ? (ಗೆಳೆಯರೊಬ್ಬರು ಇಂತ ಕಾರ್ಯಕ್ರಮ ಪ್ರಸಾರ ಮಾಡಿದವರಿಗೆ ಒಳ್ಳೆ ಪಂಚ ಲೈನ್ ಕೊಟ್ಟರು ‘ಕನ್ನಡಿಗರು ಸಿಡಿದೆದ್ದರೆ ನಿಮ್ಮ ಚಾನೆಲ್ ಸಹ ಚಿತ್ರಾನ್ನ’).

ಸೈನ್ಯ ಮತ್ತು ಸರ್ಕಾರದ ಸಂಬಂಧ ದೇಶಕ್ಕೆ ಬಹಳ ಮಹತ್ವವಾದದ್ದು.ಸೈನ್ಯದ ಶಿಸ್ತು ಸರ್ಕಾರದೊಂದಿಗಿನ ಗುದ್ದಾಟದಿಂದ ಹಾಳಾಗಬಾರದು,ಸೇನೆ ಸರ್ಕಾರ ನಿರ್ಧಾರಗಳಲ್ಲಿ ಮೂಗು ತೂರಿಸಲೂಬಾರದು.ಹಾಗೇಯೆ ಸರ್ಕಾರದ ರಾಜಕೀಯ ಸೈನ್ಯದೊಳಗೆ ಎಂದಿಗೂ ನುಸುಳಬಾರದು.ನುಸುಳಿದರೆ ಏನಾಗುತ್ತದೆ ಅನ್ನಲು ಭಾರತಕ್ಕೆ ೬೨ರ ಉದಾಹರಣೆ ಇದ್ದೆ ಇದೆ.ಟಿಬೆಟ್ ಅನ್ನು ಆಕ್ರಮಿಸಿದ ನಂತರ ಚೀನಿಗಳು, ಗಡಿಯುದ್ದಕ್ಕೂ ರಸ್ತೆ,ಬಂಕರ್ಗಳನ್ನ ನಿರ್ಮಿಸಿದರು,ಸೇನಾ ಜಮಾವಣೆ ಮಾಡಿದರು.ಆದರೆ ನಮ್ಮ ‘ಕೆಂಪು ಗುಲಾಬಿ’ಯ ನಾಯಕ ಅವರ ಅಧಿಕಾರಿ ವರ್ಗ,ವಿರೋಧ ಪಕ್ಷ ಎಲ್ಲ ಎಲ್ಲರೂ ಧೀರ್ಘ ನಿದ್ರೆಯಲಿದ್ದರು. ಜನರಲ್ ತಿಮ್ಮಯ್ಯನಂತಹ ದಕ್ಷ ಮಿಲಿಟರಿ ಅಧಿಕಾರಿ ಮುಂದೆ ಇಂತ ಅನಾಹುತವನ್ನ ಊಹಿಸಿ ಮಿಲಿಟರಿ ಬಲಪಡಿಸ ಹೊರಟರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ರಕ್ಷಣಾ ಮಂತ್ರಿ ಕೃಷ್ಣನ್ ಮೆನನ್!ಈತನ ರಾಜಕೀಯದಿಂದ ಬೇಸತ್ತ ತಿಮ್ಮಯ್ಯ ರಾಜಿನಾಮೆ ನೀಡ ಹೊರಟರೆ ತಡೆದು,ನಂತರ ಸದನದಲ್ಲಿ ಆ ವೀರ ಯೋಧನ ಬಗ್ಗೆ ಕೇವಲವಾಗಿ ಮಾತಾಡಿದ್ದರು ನೆಹರೂ.

ತಿಮ್ಮಯ್ಯ ನಿವೃತ್ತಿಯಾಗುತ್ತಲೇ, ರಾಜಕೀಯವನ್ನ ದೇಶದ ಸೈನ್ಯದೊಳಗೆ ನುಗ್ಗಿಸಿ,ಹುಡುಕಿ ಹುಡುಕಿ,ಅರ್ಹತೆ ಹಾಗು ಅನುಭವ ಎರಡು ಇಲ್ಲದ ‘ಕೌಲ್ ಮತ್ತೆ ಥಾಪರ್’ ಅನ್ನುವವರನ್ನ ಕರೆದು ಪಟ್ಟ ಕಟ್ಟಿ,ಆ ಜಾಗಕ್ಕೆ ನ್ಯಾಯವಾಗಿ ಬರಬೇಕಾಗಿದ್ದ ದಕ್ಷ ಅಧಿಕಾರಿ ‘ಜನರಲ್ ಥೋರಟ್’ ರಂತ ಅಧಿಕಾರಿ ಇವರ ಹುಚ್ಚತಕ್ಕೆ ಮಣಿಯುತ್ತಿರಲಿಲ್ಲವಾದ್ದರಿಂದ ಅವರಿಗೆ ಪಿಂಚಣಿ ಮಂಜೂರು ಮಾಡಿ ಬಿಟ್ಟರು! ಅವರ ಹಿಂದೆಯೇ ಸಿಡಿದ್ದೆದು ರಾಜಿನಾಮೆ ನೀಡಿ ಹೋದವರು ಮತ್ತೊಬ್ಬ ಹಿರಿಯ ದಕ್ಷ ಅಧಿಕಾರಿ ‘ಜನರಲ್ ವರ್ಮಾ’. ‘ಫಾರ್ವರ್ಡ್ ಫಾಲಸಿ’ ಎಂಬ ಆಕ್ರಮಣಕಾರಿ ಕ್ರಮಕ್ಕೆ ಈ ಇಬ್ಬರು ಜನರಲ್ಗಳು ಸೊಪ್ಪು ಹಾಕಲಿಲ್ಲ ಎಂಬುದೇ ಅವರ ಮೇಲೆ ಕೆಂಪು ಗುಲಾಬಿಗೆ ಮುನಿಸು ಬರಲು ಕಾರಣ.ಭಾರತದ ಮಿಲಿಟರಿಯಲ್ಲಿ ಹೊಲಸು ರಾಜಕೀಯ ಈ ಪರಿ ರಾದ್ದಾಂತ ಮಾಡುತ್ತಲೇ, ಬಂದಿತ್ತು ಇಸವಿ ೧೯೬೨!

ಅತ್ತ ಚೀನಿಗಳು ಸರ್ವ ಸನ್ನದ್ಧರಾಗಿದ್ದರೆ ಇತ್ತ  ನಮ್ಮ ನಾಯಕರಿಗೆ (?) ಇದ್ಯಾವುದರ ಪರಿವೆ ಇರಲಿಲ್ಲ.ಅವರಿನ್ನು ಕೆಂಪು ಗುಲಾಬಿ, ಬಿಳಿ ಪಾರಿವಾಳದ ಗುಂಗಿನಿಂದ ಹೊರ ಬಂದಿರಲೇ ಇಲ್ಲ.ವಿಪರ್ಯಾಸವೆಂದರೆ ಅಲ್ಲಿ ದೂರದ ತವಾಂಗ್,ನಮ್ಕಾಚು,ಬೋಮ್ದಿಲದಲ್ಲಿ ನಮ್ಮ ಸೈನಿಕರು ಚೀನಿಗಳ ಗುಂಡಿಗೆ ಎದೆಯೊಡ್ಡಿ ಧರೆಗುರುಳುತಿದ್ದರೆ,ಆ ನಾಯಕ ಮಾತ್ರ ಅದೇ ಬಿಳಿ ಪಾರಿವಾಳ,ಕೆಂಪು ಗುಲಾಬಿಯ ಗುಂಗಿನಲ್ಲಿ ವಿದೇಶ ಪ್ರವಾಸದಲ್ಲಿದ್ದರು, ಅವರ ಜೊತೆಗೆ ಅವನೊಬ್ಬ ರಕ್ಷಣಾ ಮಂತ್ರಿ ಅವನದು ಪ್ರವಾಸವೇ, ಇನ್ನುಳಿದ ಜನರಲ್ ಕೌಲ ಕಾಶ್ಮೀರದಲ್ಲಿ ರಜೆಯ ಮೋಜಿನಲ್ಲಿದ್ದ.

ಛೆ! ಅದೆಂತ ಅವಮಾನಕರ ಸೋಲು.ನಿಜವೇನೆಂದರೆ ಆ ಯುದ್ಧದಲ್ಲಿ ನಾವು ಆಕ್ರಮಣ ಮಾಡಲೇ ಇಲ್ಲ ನಮ್ಮದೇನಿದ್ದರೂ ರಕ್ಷಣಾತ್ಮಕ ಆಟ. ಜೇಬಿನಲ್ಲಿದ್ದ ಹಿಡಿ ಕಾಡತೂಸು ಖಾಲಿಯಾಗುವವರೆಗಷ್ಟೇ ನಮ್ಮ ಸೈನಿಕರ ಹೋರಾಟ, ಆಮೇಲೆ ಚೀನಿ ಶತ್ರುವಿನ ಆರ್ಭಟ! ಒಂದು ಬೆಚ್ಚನೆಯ ಅಂಗಿ,ಬೂಟು,ಬಂದೂಕು,ಬಾಂಬು,ಕನ್ನಡಕ,ಸರಿಯಾದ ಆಹಾರ,ಶಸ್ತ್ರ ಬಲ,ಸೈನ್ಯ ಬಲ ಯಾವುದನ್ನು ಕೊಡದೆ ನಮ್ಮ ಯೋಧರನ್ನ ಯುದ್ಧ ಭೂಮಿಗೆ ಕಳಿಸಿತ್ತು ನಮ್ಮ ಘನ ಸರ್ಕಾರ! ನಮ್ಮ ನಾಯಕರ ಹುಚ್ಚಾಟಕ್ಕೆ ಬಲಿಯಾದ ಯೋಧರ ಸಂಖ್ಯೆ ೨-೩ ಸಾವಿರ!

ಜನರಲ್ ಸಿಂಗ್ ಅವ್ರ ಈಗಿನ ಪತ್ರದಲ್ಲಿನ ಎಚ್ಚರಿಕೆಯ ಮೇಲಿನ ಕುರಿತ ಯೋಜನೆ ಮತ್ತು ಅದನ್ನ ಸೋರಿಕೆ ಮಾಡಿದವರ ಮೇಲಿನ ಕ್ರಮದ ಬಗ್ಗೆ ಯೋಚನೆ ಮಾಡುವುದು ಪ್ರಸ್ತುತ ಕೆಲಸವಾಗಬೇಕಿತ್ತು.ಆದರೆ ಆಗಿದ್ದಾದರೂ ಏನು?ವಿಷಯದ ಬಗ್ಗೆ ಚರ್ಚಿಸುವುದು ಬಿಟ್ಟು ವಿಷಯ ಹೊರಹಾಕಿದವನ ಬಗ್ಗೆಯೇ ಹೆಚ್ಚು ಗಮನ ಹರಿಯಿತು. ಈಗಲೂ ಲಾಲು,ಮುಲಾಯಂರಂತಹ ರಾಜಕಾರಣಿಗಳು ಸತ್ಯ ಹೇಳಿದ ಸಿಂಗ್ ಮೇಲೆ ಏರಿ ಹೋಗುತ್ತಿರುವುದು ಬೇಜವಬ್ದಾರಿತನವಲ್ಲಾವಾ? ಇವರೆಲ್ಲ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟ ನಾಯಕರು.

ಪ್ರಾಮಾಣಿಕ ಪ್ರಧಾನಿಯ ಕ್ಯಾಬಿನೆಟ್ ನಲ್ಲಿರುವ ಪ್ರಾಮಾಣಿಕ ಮಂತ್ರಿ ಆಂಟನಿ ಅಂದು ಲಂಚದ ಬಗ್ಗೆ ಅಷ್ಟೇಕೆ ಸಿರಿಯಸ್ ಆಗಲಿಲ್ಲ ಅನ್ನುವ ಪ್ರಶ್ನೆ ಯಾಕೆ ಯಾವ ರಾಜಕೀಯ ಪಕ್ಷಗಳಿಂದ ಬರುತ್ತಿಲ್ಲ? ಇವೆಲ್ಲ ಮಾಮೂಲಿ ಅಂತಲೇ ಅರ್ಥವಲ್ಲವಾ? ನಾನು ತಿನ್ನುವುದಿಲ್ಲ ಅನ್ನುವುದಷ್ಟೇ ಪ್ರಾಮಾಣಿಕತೆಯಾ ಅಥವಾ ಬೇರೆಯವರು ತಿನ್ನುವುದು ಗೊತ್ತಿದ್ದೂ ತೆಪ್ಪಗಿರುವುದು ಪ್ರಾಮಾಣಿಕತೆಯಾ? ಕೆಲಸಕ್ಕೆ ಬಾರದೆ ಇರೋ ಪ್ರಾಮಾಣಿಕತೆಯಿಂದ ದೇಶಕ್ಕೆನು ಪ್ರಯೋಜನ? ಕೊಲೆಗೆ ಸಹಾಯ ಮಾಡಿದ್ದು ಕೊಲೆ ಮಾಡಿದಂತೆ ಅನ್ನುವ ಲಾ ಪಾಯಿಂಟು ಪ್ರಾಮಾಣಿಕರ ಕೇಸಿನಲ್ಲಿ  ಯಾಕೆ ಅಪ್ಪ್ಲೈ ಆಗುವುದಿಲ್ಲ?

ಜೀಪ್ ಹಗರಣದಿಂದ ಶುರುವಾಗಿ ಬೋಫೋರ್ಸ್,ಶವ ಪೆಟ್ಟಿಗೆ ಮತ್ತೀಗ ತತ್ರ ಟ್ರಕ್ ವರೆಗೂ ಬಂದು ನಿಂತ ಹಗರಣಗಳು,ವ್ಯವಹಾರಗಳು ಕುದುರುವ ರೀತಿ ಎಲ್ಲ ಪಕ್ಷಗಳ ನಾಯಕರಿಗೆ ತಿಳಿದೇ ಇರುತ್ತದೆ.ಆದರೆ ಬಾಯಿಬಿಡಲಾಗದಷ್ಟು ಬಾಯಿಗೆ ಎಣಿಸುವ ಕೆಲಸ ಸಿಕ್ಕಿಬಿಡುತ್ತದೆಯಾ?

ಇಂತ ನಾಯಕರೆ ತುಂಬಿರುವ ಪಕ್ಷ,ಸಂಸತ್ತಿನ ಮೇಲೆ ನಾವು ನಂಬಿಕೆ ಇಡಬೇಕು ಅದು ಈ ದೇಶದ ಪ್ರಜಪ್ರಭುತ್ವದ ಧರ್ಮ ಮತ್ತದೇ ಭಾರತೀಯರ ಪಾಲಿನ ಕರ್ಮ…!
ಕಡೆಗೆ ಭಾರತವನ್ನ ಬಿಕರಿಗಿಡದಿದ್ದರೆ ಅದೇ ನಮ್ಮ ಪುಣ್ಯ…!

6 ಟಿಪ್ಪಣಿಗಳು Post a comment
  1. ರವಿ ಕುಮಾರ್ ಜಿ's avatar
    ರವಿ ಕುಮಾರ್ ಜಿ
    ಏಪ್ರಿಲ್ 4 2012

    ಸರಿಯಾಗಿ ಹೇಳಿದ್ದೀರಿ , ಆದರೆ ನಮಗೆ ಟಿ ಅರ್ ಪಿ ನೇ ಮುಕ್ಯ ! ವ್ಯಾಪಾರಾನೆ ಮುಖ್ಯ ! ಅಧಿಕಾರಕ್ಕೆ ಬರೋದು ಮಾತ್ರ ಮುಖ್ಯ ! ನಾವೇನು ಮಾಡಲಿ?
    ನನಗೆ ತಿಳಿದಿರೋ ಮಟ್ಟಿಗೆ (ಎಷ್ಟು ಸತ್ಯವೋ ಗೊತ್ತಿಲ್ಲ ) ಅತೀ ಹೆಚ್ಚೂ ಬ್ರಷ್ಟಾಚಾರ (ರಾಜಕಾರಣಿ ಗಳನ್ನು ಬಿಟ್ಟರೆ) ನಡೆಯುತ್ತಿರೋದು ಸೈನ್ಯದಲ್ಲಿ(ಡಿಫೆನ್ಸ್) ಅಂತೆ!
    ನಮ್ಮ ಕರ್ಮವೋ ಏನೋ?

    Reply
    • Suraj B Hegde's avatar
      Suraj B Hegde
      ಏಪ್ರಿಲ್ 5 2012

      ಜೀವ ಕೊಟ್ಟು ಕಾಪಾಡ್ತಾರಲ್ಲ, ಜನರನ್ನ-ದೇಶವನ್ನ, ತಿನ್ಲಿ ಬಿಡಿ, ನಮ್ ಒಳ್ಳೆದಕ್ಕೆ ಅಂತ ಒಂದ್ ಕಿಂಚಿತ್ [ಅಂದ್ರೆ ತಪ್ಪಾಗತ್ತೆ, ಜಾಸ್ತೀನೆ] ಕೆಲ್ಸ [ಮಾಡಿದಾರೆ ಮತ್ತು] ಮಾಡ್ತಾರೆ ಸೈನ್ಯದವರು… ಅವ್ರದ್ದು ಈ ಹುಟ್ಟಾ ದರಿದ್ರ ರಾಜಕೀಯದವರಂತೆ ತಿಂದು ತಿಂದು ಬೊಗಳೆ ಬೊಗಳೋ ಬೌ ಬೌ ಅಲ್ಲವಲ್ಲ! [ಕೆಲವು ನೀಯತ್ತಿನವನ್ನು ಬಿಟ್ಟು]

      Reply
      • ರಾಕೇಶ್ ಶೆಟ್ಟಿ's avatar
        ಏಪ್ರಿಲ್ 7 2012

        ಸೂರಜ್.
        ತಪ್ಪು ಯಾರು ಮಾಡಿದ್ರೂ ತಪ್ಪೇ ಅಲ್ವಾ? ಅಷ್ಟಕ್ಕು ಗಡಿಯಲ್ಲಿ ನಿಂತು ಗುಂಡಿಗೆ ಎದೆಯೊಡ್ಡುವ ಜವಾನನಲ್ಲ ತಿನ್ನುವುದು ಎಸಿ ರೂಮಿನಲ್ಲಿ ಕೂರುವ ಕಳ್ಳರ ಜೇಬು ಸೇರುತ್ತದೆ ಅದು

        Reply
        • Suraj B Hegde's avatar
          Suraj B Hegde
          ಏಪ್ರಿಲ್ 21 2012

          ನಿಜ ಸರ್…

          Reply
  2. Gerald bhat's avatar
    ಏಪ್ರಿಲ್ 21 2012

    Nice article

    Reply
  3. ramegowda harijana's avatar
    ಏಪ್ರಿಲ್ 21 2012

    bhale chennagideri.Hinge varokkondu sala bandu hanke ugitha erri namma nayakarige.khare heliddri nehru bagge.

    Reply

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments