ಸಾಸಿವೆ ತಂದ ಜೀವನ್ಮುಖಿ
-ಜಿ.ವಿ.ಜಯಶ್ರೀ,ಪರ್ತಕರ್ತೆ
“Where there’s a will, there’s a way” ಭಾರತಿ ಬಿ.ವಿ. ಅವರ ‘ಸಾಸಿವೆ ತಂದವಳು’ ಕೃತಿಯನ್ನು ಓದಿದಾಗ ಮೇಲಿನ ಸೂಕ್ತಿಗಳಿಗೊಂದು ಅರ್ಥ ಸಿಗುತ್ತದೆ. ಕ್ಯಾನ್ಸರ್ ಲೋಕದಲ್ಲಿ ಬಂಧಿ ಆದಾಗ ಎದುರಿಸಿದ ಕಷ್ಟ ಕೋಟಲೆಗಳನ್ನು ಸರಳವಾಗಿ ಬರೆದು, ಹದವಾದ ಹಾಸ್ಯದ ಸವಿ ನೀಡಿರುವ ಭಾರತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಸಾಗುತ್ತದೆ. ಒಂದು ಸರಳ ಕಾಯಿಲೆಯನ್ನು ದೊಡ್ಡ ಕಾಯಿಲೆಯೆಂದು ಭ್ರಮಿಸುವ ಪೈಕಿಗಳಲ್ಲಿ ಭಾರತಿ ಸಹ ಸೇರಿದ್ದಾರೆ ಎಂದು ತಮ್ಮ ಬಗ್ಗೆ ಹಾಸ್ಯ ಬೆರಸಿ ಹೇಳುತ್ತಾರೆ. ಪೂರಕ ಉದಾಹರಣೆ ಗಳನ್ನು ನೀಡುತ್ತಾ ತಮಗೆ ಬಂದ ಗಂಟಲು ನೋವು ಕ್ಯಾನ್ಸರ್ ಆಗಿ ಮಾರ್ಪಟ್ಟಿರಬಹುದು ಎನ್ನುವ ಆತಂಕ, ತಲೆಸುತ್ತು ಟ್ಯೂಮರ್ ನಿಂದ ಬರುತ್ತಿದೆ ಎನ್ನುವ ಭ್ರಮೆಯಲ್ಲಿ ಮುಳುಗೇಳುವ ಲೇಖಕಿ ಓದಿಕೊಂಡ ಆಧುನಿಕ ಮನದ ಹೆಣ್ಣು ಮಕ್ಕಳ ಪ್ರತೀಕವಾಗಿದ್ದಾರೆ. ತುಂಬಾ ಅತಿ ಅನ್ನಿಸುವ ಭಯಾತಂಕಗಳು ಯಾವುದೇ ಬಗೆಯಲ್ಲೂ ತೊಂದರೆ ಎಸೆಗದ ಸಮಸ್ಯೆಗಳ ಬಗ್ಗೆ ಹೆದರಿಕೆ ಹೊಂದಿದ್ದವಳಿಗೆ ಸ್ತನ ಕ್ಯಾನ್ಸರ್ ತನ್ನ ದೇಹದ ಭಾಗವಾಗಿದೆ ಎಂದು ತಿಳಿದಾಗ ಎಂತಹ ಮನಸ್ಥಿತಿ ಉಂಟಾಗಿರ ಬಹುದು?
ಹುಟ್ಟಿದವನು ಸಾಯಲೇ ಬೇಕು ಎನ್ನುವುದು ಓದುವುದಕ್ಕೆ ಚಂದ. ಲೇಖಕಿ ಸ್ಥಿತಿಯೂ ಅಂತಹುದ್ದೇ ಆದಾಗ ತನ್ನನ್ನು ತಾನು ಕೌನ್ಸಿಲಿಂಗ್ ಮಾಡಿ ಕೊಂಡ ಬಗೆ ಮತ್ತು ಸಮಸ್ಯೆಯನ್ನು ಸರಳವಾಗಿ ತೆಗೆದು ಕೊಳ್ಳುವ ಮನಸ್ತತ್ವ ಬೆಳೆಸಿಕೊಂಡ ಪರಿ ನಿಜಕ್ಕೂ ಮಾದರಿ. ಈ ಪುಸ್ತಕ ಫ್ಯಾಂಟಸಿಗಳನ್ನು ಹೊಂದಿದೆ ಎಂಬ ಭಾವನೆ ಓದುಗನಲ್ಲಿ ಇದ್ದರೆ, ಅದನ್ನು ಆರಂಭಿಕ ಪುಟಗಳೇ ದೂರ ಮಾಡಿ ಬಿಡುತ್ತದೆ.ತನಗೆ ಸ್ತನ ಕ್ಯಾನ್ಸರ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಹೆದರಿರುವಾಗ ಆಕೆಯನ್ನು ಪ್ರಾರಂಭದಲ್ಲೇ ಪರೀಕ್ಷಿಸಿದ ದಾದಿ ಮತ್ತು ವೈದ್ಯರ ವರ್ತನೆ ಈಗ ಸಾಮಾನ್ಯ . ನಂತರ ಅರ್ಬುದ ರೋಗ ಇದೆ ಎನ್ನುವುದು ತಿಳಿದ ಬಳಿಕ ಮುಂದಿನ ಪಯಣದ ಬಗ್ಗೆ ಬರೆಯುತ್ತಾ ಕೀಮೋ ಥೆರಪಿಯ ವರ್ಣನೆ ಮಾಡುತ್ತಾರೆ. ಅದರಲ್ಲಿ ನೀಡುವ ಔಷಧಿಯು ಆಕೆಯನ್ನು ಅಕ್ಷರಶಃ ಬಕಾಸುರಿಯನ್ನಾಗಿ ಮಾಡುವ ಬಗೆ, ಈ ಸಮಸ್ಯೆಯು ಆಕೆ ಸ್ವಾತಂತ್ರ ಮತ್ತು ದೇಹದ ಚೈತನ್ಯ ಕಸಿದ ರೀತಿ ಹೇಳುತ್ತಾ, ವೈದ್ಯರು ತನಗೆ ತಿಳಿಸಿದ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಹೇಳುವ ರೀತಿ ಕಿರಿಕಿರಿ ಉಂಟು ಮಾಡುವುದಿಲ್ಲ.
ಕ್ಯಾನ್ಸರ್ ನಿಂದ ಅವರೇ ಹೇಳಿದಂತೆ ಆಯ್ಕೊಂಡ್ ತಿನ್ನೋ ಕೋಳಿ ಥರ ಇದ್ದವರು ಕಾರಿನಲ್ಲಿ ಓಡಾಡುವ ಪಮೇರಿಯನ್ ಡಾಗ್ ಆಗುವ ಪರಿಸ್ಥಿತಿ. ಇವೆಲ್ಲದರ ನಡುವೆ ಅತಿಯಾದ ನಿತ್ರಾಣ ನೋವು, ಸಂಕಟಗಳ ನಡುವೆ ಅವ್ಯಕ್ತ ಭಯಗಳು, ಅದರ ಬಗ್ಗೆ ತಮ್ಮ ಪತಿ, ಮಗ, ತಾಯಿ ತಂದೆ ದೂರ ಮಾಡಲು ಪ್ರಯತ್ನಿಸಿದ ರೀತಿ ಎಲ್ಲವೂ ಮನಸ್ಪರ್ಶಿ ಆಗುತ್ತದೆ.
ಇದು ಕೇವಲ ಕಾಯಿಲೆಯ ಕಥಾನಕ ಎಂದು ತಿಳಿದರೆ ಸರಿಯಾಗದು,ಇಲ್ಲಿ ಜೀವನಾನುಭ, ಸ್ನೇಹಗಳ ಬಗ್ಗೆ ಇರುವಂತಹ ಕೆಲವು ಕಲ್ಪನೆಗಳು ಭ್ರಮನಿರಸನಗಳು. ಒಟ್ಟಾರೆ ಒಂದು ವಿಷಯ ತೆಗೆದುಕೊಂಡಿದ್ದರೂ ಸಂಪೂರ್ಣ ಬದುಕಿನ ಚಿತ್ರಣವನ್ನು ನೀಡುವಲ್ಲಿ ಸಫಲರಾಗಿದ್ದಾರೆ ಲೇಖಕಿ. ಸುಮಾರು 28 ವರ್ಷಗಳಿಂದ ಸ್ನೇಹಿತೆಯಾಗಿದ್ದವಳು ಸ್ಪಂದಿಸದೇ ಇದ್ದುದನ್ನು ಕೇವಲ ಇಪ್ಪತ್ತು ದಿನದ ಗೆಳೆಯ-ಗೆಳತಿಯರು ಯಾವ ರೀತಿ ಕರುಳ ಬಳ್ಳಿಯಂತೆ ತಮ್ಮ ಪ್ರೀತಿಯನ್ನು ಜೋಡಿಸಿಕೊಂಡರು ಎನ್ನುವ ಸಂಗತಿ ಮನತಟ್ಟಿದರೆ, ಅಡುಗೆಯವಳ ಹುಡುಕಾಟಕ್ಕಾಗಿ ಮಾಡಿದ ಹರಸಾಹಸ, ಅದರಲ್ಲೂ ಆಕೆ ತ್ರಿವೇಣಿ ಕಥೆಗಳನ್ನು ಉದಾಹಣೆಯಾಗಿ ನೀಡುತ್ತಾ, ಉಪ್ಪೇರಿ ಕರಿದು ಜೊತೆಗೆ ಸಜ್ಜಿಗೆ ಮಾಡಿಬಿಡಿ,ಆಲೂಗಡ್ಡೆ ಬೋಂಡಾ ಜೊತೆಗೆ ಜಾಮೂನು ಮಾಡಿ ಬಿಡಿ ಎನ್ನುವ ಬರಹಗಳಿಂದ ಪ್ರೇರಿತ ವಾದವಳಿಗೆ ಸಿಕ್ಕ ಅಡುಗೆಯವಳಿಗೆ ತಾನೇ ನಳಪಾಕದ ಟೀಚರ್ ಆಗುವ ಪರೀಕ್ಷೆ.ಹೀಗೆ ಪ್ರತಿಯೊಂದು ಕಷ್ಟಕರ ಸಂಗತಿಗಳನ್ನು ಸರಳವಾಗಿ ಬಿಡಿಸಿ ಹೇಳುವಾಗ ತನ್ನನ್ನು ಮಾನಸಿಕವಾಗಿ ದೃಢ ಮಾಡಿದ ರಂಗದೊರೈ ಆಸ್ಪತ್ರೆಯ ಅಂಕಾಲಜಿಸ್ಟ್ ಡಾ. ಶ್ರೀನಾಥ್ ಅವರ ಬಗ್ಗೆ ಹೆಚ್ಚು ಬಾರಿ ಸ್ಮರಿಸುತ್ತಾರೆ. ವೈದ್ಯರ ಬಗ್ಗೆ ಇರುವ ಭಕ್ತಿ, ಸ್ಮರಣೆ, ಪ್ರೀತಿ ಏನೆಂದರೂ ಸರಿಯೇ ಆ ಭಾವದ ನವಿರಿನ ಗಾಢತೆ ಓದುಗನಿಗೆ ಉಸಿರು ಕಟ್ಟಿಸುವುದಿಲ್ಲ. ಹಿಂದೆ ಪ್ಲೇಗ್ ನಿಂದ ಮರಣಿಸ್ತಾ ಇದ್ದರು ಎನ್ನುವ ಸಂಗತಿ ನಮಗೆ ಈಗ ಹೇಗೆ ನಿರ್ಲಕ್ಷವಾಗಿದೆಯೋ ಅದೇ ರೀತಿ ಮುಂದೊಂದು ಕ್ಯಾನ್ಸರ್ ಕಾಯಿಲೆಯಿಂದ ಸಾಯುತ್ತಿದ್ದರು ಎಂಬುದು ಕ್ಷುಲ್ಲಕವಾಗಲಿ ಎಂದು ಹೇಳುವುದರ ಮೂಲಕ ತಮ್ಮ ಬರಹಕ್ಕೆ ಅಂತಿಮ ಚುಕ್ಕೆ ಇಡುತ್ತಾರೆ. ಇದರಲ್ಲಿ ಭಾರತಿ ತಿಳಿಸುವ ಸಂಗತಿಗಳು ಜಾಡು ತಪ್ಪಿಲ್ಲ. ಪ್ರಾಯಶಃ ಆಕೆಯಲ್ಲಿನ ಒಳ್ಳೆಯ ಓದುಗಳು ಅಂತಹ ಯಾವುದೇ ಅವಘಡ ಆಗುವುದಕ್ಕೆ ಬಿಟ್ಟಿಲ್ಲ.ಇದು ಎಲ್ಲರೂ ಓದಲೇ ಬೇಕಾದ ಒಂದೊಳ್ಳೆಯ ಕೃತಿ.
(ಈ ಲೇಖನ ಎಚ್ಚರಿಕೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)





ಖ್ಯಾತ ಪತ್ರಕರ್ತ ಕೃಷ್ಣವಟ್ಟಂ ಅವರೂ ಸಹ ಕ್ಯಾನ್ಸರ್ ಗೆದ್ದ ಸಂತ ಅನ್ನುವ ಪುಸ್ತಕ ಬರೆದಿದ್ದಾರೆ ಒಮ್ಮೆ ಅದರ ಬಗ್ಗೆ ಸಹ ಬರೆಯಿರಿ.