ರಾಮ ಜನ್ಮಭೂಮಿ/ಬಾಬರಿ ವಿವಾದ : ಭೂತಕಾಲದ ತಪ್ಪುಗಳು ಭವಿಷ್ಯಕ್ಕೆ ಭಾರವಾಗಬಾರದು
– ರಾಕೇಶ್ ಶೆಟ್ಟಿ
ಮುಂಬೈನಿಂದ ನಾನು ಬೆಂಗಳೂರಿಗೆ ಹೊರಟಿದ್ದ ಸೆಪ್ಟಂಬರ್ ೩೦,೨೦೧೦ರ ಗುರುವಾರದ ಆ ದಿನ ಉಳಿದ ದಿನಗಳಂತೆ ಇರಲಿಲ್ಲ.ಒಂದು ಬಗೆಯ ಕುತೂಹಲ,ಕಾತರ,ಆತಂಕಗಳು ಭಾರತದ ಬಹುತೇಕರಲ್ಲಿ ಮನೆ ಮಾಡಿದ್ದ ದಿನವದು.ಅಲಹಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆಯ “ರಾಮ ಜನ್ಮ ಭೂಮಿ/ಬಾಬರಿ ಮಸೀದಿ” ವಿವಾದದ ಕುರಿತು ತೀರ್ಪು ನೀಡುವ ದಿನವಾಗಿತ್ತದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದವು,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಕಣ್ಗಾವಲಿತ್ತು.ಜನರ ಜೊತೆಗೆ ವಿಶೇಷವಾಗಿ ಟಿ.ಆರ್.ಪಿ ಮಾಧ್ಯಮಗಳು ಕೂಡ ಸಂಯಮದಿಂದ ವರ್ತಿಸಬೇಕು ಎನ್ನುವ ಮನವಿಗಳು ಸರ್ಕಾರದಿಂದಲೇ ಬರುತಿತ್ತು.ಮಧ್ಯಾಹ್ನ ೩.೩೦ರ ಸುಮಾರಿಗೆ ತೀರ್ಪು ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡುತಿದ್ದವು.ನನ್ನ ವಿಮಾನವಿದ್ದಿದ್ದು ಸಂಜೆಯ ವೇಳೆಗೆ.ಆದರೆ,ಬಾಬರಿ ಮಸೀದಿ ಧರಾಶಾಹಿಯಾದ ಮೇಲೆ ಭೀಕರ ದಂಗೆಗೆ ಸಾಕ್ಷಿಯಾಗಿದ್ದ ಮುಂಬೈನಲ್ಲಿ ತೀರ್ಪು ಹೊರಬಂದ ಮೇಲೆ ಏನಾದರೂ ಆಗಬಾರದ್ದು ಶುರುವಾದರೇ,ಅದಕ್ಕೂ ಮುಖ್ಯವಾಗಿ ನಾನು ಹೋಗಬೇಕಾದ ದಾರಿಯಲ್ಲೇ “ಅತಿ ಸೂಕ್ಷ್ಮ ಪ್ರದೇಶ”ಗಳು ಇದ್ದವಾದ್ದರಿಂದ,ಸೇಫರ್ ಸೈಡ್ ಎಂಬಂತೆ ತುಸು ಬೇಗವೇ ನಾನು ಮತ್ತು ನನ್ನ ಸಹುದ್ಯೋಗಿ ಕ್ಯಾಬ್ ಹತ್ತಿಕೊಂಡೆವು.
ಕ್ಯಾಬ್ ಹೊರಟಂತೇ,ಡ್ರೈವರ್ ಅನ್ನು ಮಾತಿಗೆಳೆದೆ.”ಇವತ್ತು ತೀರ್ಪು ಬರಲಿಕ್ಕಿದೆಯಲ್ಲ.ನಿಮಗೇನನ್ನಿಸುತ್ತದೆ,ಆ ಜಾಗ ಯಾರಿಗೆ ಸೇರಿಬೇಕು ನಿಮ್ಮ ಪ್ರಕಾರ?”.ಅವರು ನನ್ನತ್ತ ತಿರುಗಿ “ತಪ್ಪು ತಿಳಿಯಬೇಡಿ ಸರ್.ನಿಮ್ಮ ಪ್ರಶ್ನೆಯೇ ಸರಿಯಿಲ್ಲ.ಜಾಗ ಯಾರಿಗೆ ಸೇರಬೇಕು ಎನ್ನುವುದು ‘ಅಹಂ’ನ ಪ್ರಶ್ನೆಯಾಗುತ್ತದೆ.ಆ ಅಹಂ ಮುಂದೇ ಪ್ರತಿಷ್ಟೆ, ದ್ವೇಷವನ್ನಷ್ಟೇ ಹೊರಡಿಸುತ್ತದೆ.ಅಸಲಿಗೆ ಇದು “ನಂಬಿಕೆ”ಯ ಪ್ರಶ್ನೆ.ಈ ಸಮಸ್ಯೆಯ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ,ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ.ಆ ಜಾಗ ರಾಮ ಜನ್ಮಭೂಮಿಯೆಂಬುದು ಹಿಂದೂಗಳ ನಂಬಿಕೆಯಾಗಿದೆ.ಮೊಘಲ ಬಾಬರ್ ಆದೇಶಂತೆ ಅಲ್ಲಿದ್ದ ಮಂದಿರವೊಂದನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿರುವ ವಾದವಿದೆಯಲ್ಲ ಸರ್ ಅದು ನಿಜವೇ ಆದರೆ,ಅಲ್ಲಿ ಮಂದಿರವೇ ನಿರ್ಮಾಣವಾಗಬೇಕು.ಯಾಕೆಂದರೆ ರಾಮ,ರಾಮಾಯಣ,ಕೃಷ್ಣ,ಮಹಾಭಾರತವೆಲ್ಲ ಈ ದೇಶದ ಜನರಿಗೆ ಕೇವಲ ಪುರಾಣಗಳಲ್ಲ.ಅವು ಜನರ ಜೀವನದ ಭಾಗಗಳು.ಹೀಗಿರುವಾಗ ಅಲ್ಲಿನ ಜನರ ನಂಬಿಕೆಗಳಿಗೆ ಬೆಲೆ ಕೊಟ್ಟು ಬಾಬರಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದ.