ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2016

7

ದೇವಾಲಯ ಪ್ರವೇಶದ ಕುರಿತು ತಪ್ಪು ತಿಳಿವಳಿಕೆಗಳು

‍ನಿಲುಮೆ ಮೂಲಕ

– ಡಾ. ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಶನಿಸಿಂಗಾಣಪುರಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ. ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರಿಗೆ ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೇ ಎಂಬುದು ಅವರ ತರ್ಕ.

ಹಿಂದೂ ಎನ್ನುವುದು ಇಸ್ಲಾಂ ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತ ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪೀ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು,ಅವುಗಳ ಅಭಿವೃದ್ಧಿ,ಜನಪ್ರಿಯತೆ,ನಿರ್ವಹಣೆ,ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ.ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವಕೊಟ್ಟೇ ಅಲ್ಲಿಗೆ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ,ಮತಗಳಿಗೆ,ಕುಲಗಳಿಗೆ,ಪ್ರದೇಶಗಳಿಗೆ,ಊರುಗಳಿಗೆ,ಗಲ್ಲಿಗಳಿಗೆ ಪ್ರತ್ಯೇಕದೇವಾಲಯಗಳು ಇರುವುದು.

ಇಂಥ ದೇವಾಲಯಗಳಲ್ಲಿನ ರಿವಾಜುಗಳು ಕೂಡ ಅಷ್ಟೇ ವೈವಿಧ್ಯಪೂರ್ಣವಾಗಿರುತ್ತವೆ. ಕೆಲವೆಡೆ ಹೆಂಗಸರಿಗೆ ಪ್ರವೇಶವಿಲ್ಲವಾದರೆ ಕೆಲವೆಡೆ ಗಂಡಸರಿಗೇ ಪ್ರವೇಶವಿಲ್ಲ, ಕೆಲವೆಡೆ ಹೆಂಗಸರನ್ನೇ ಇಟ್ಟು ಪೂಜಿಸುತ್ತಾರೆ, ಕೆಲವೆಡೆ ಅಸ್ಪೃಶ್ಯರಿಗೆ ಪ್ರವೇಶವಿಲ್ಲ, ಇನ್ನೂ ಕೆಲವೆಡೆ ಅಸ್ಪೃಶ್ಯರಾದಿಯಾಗಿ ಎಲ್ಲರಿಗೂ ಮುಟ್ಟಿ ದರ್ಶನದ ವ್ಯವಸ್ಥೆ ಇರುತ್ತದೆ. ಕೆಲವೆಡೆ ಬ್ರಾಹ್ಮಣರ ಎಡೆಯ ಮೇಲೆ ಕೆಳಜಾತಿಯವರು ಹೊರಳಾಡಿದರೆ, ಕೆಲವೆಡೆ ಮೇಲ್ಜಾತಿಗಳ ಬೆನ್ನನ್ನು ದಲಿತ ಪೂಜಾರಿಗಳು ತುಳಿದು ಸಾಗುತ್ತಾರೆ. ಕೆಲವೆಡೆ ಅಂಗಿ ಬಿಚ್ಚದೇ ಭಕ್ತಾದಿಗಳಿಗೆ ಪ್ರವೇಶ ಇಲ್ಲವಾದರೆ ಕೆಲವೆಡೆ ಸ್ವತಃ ಪೂಜಾರಿಗಳೇ ಸ್ವೆಟರ್, ಮಫ್ಲರ್ ಸಮೇತ ಪೂಜೆ ಮಾಡುತ್ತಾರೆ. ಹೆಂಗಸರ ಕಾಲಿಗೆ ಗಂಡಸರು ಬೀಳುವುದೂ, ಅಸ್ಪೃಶ್ಯರ ಕಾಲಿಗೆ ಬ್ರಾಹ್ಮಣರು ಬೀಳುವುದೂ ಇಂಥ ದೇವಾಲಯಗಳ ವೈವಿಧ್ಯಪೂರ್ಣ ರಿವಾಜುಗಳ ಪಟ್ಟಿಯಲ್ಲೇ ಬರುತ್ತವೆ. ಇಂಥ ಯಾವುದೋ ದೇವಾಲಯದಲ್ಲಿ ಹೆಂಗಸರನ್ನು ಒಳಗೆ ಬಿಟ್ಟುಕೊಂಡಿಲ್ಲ ಹಾಗಾಗಿ ಅವರು ಸ್ತ್ರೀಯರನ್ನು ಕೀಳುಭಾವದಿಂದ ನೋಡುತ್ತಾರೆ ಎನ್ನುವವರು ಪುರುಷರನ್ನೇ ಒಳಗೆ ಬಿಟ್ಟುಕೊಳ್ಳದ ದೇವಾಲಯಗಳಲ್ಲಿ ಸ್ತ್ರೀಯರಿಗೆ ಪುರುಷರ ಕುರಿತು ಕೀಳು ಭಾವನೆ ಇದೆ ಎನ್ನಬೇಕಾಗುತ್ತದೆ. ಮೇಲ್ಜಾತಿಯವರ ಬೆನ್ನನ್ನು ತುಳಿಯುವ ಅಸ್ಪೃಶ್ಯರು ಮೇಲ್ಜಾತಿಗಳನ್ನು ಕೀಳಾಗಿ ನೋಡುತ್ತಿದ್ದಾರೆ ಎನ್ನಬೇಕಾಗುತ್ತದೆ. ಹಾಗಾಗಿ ಕೆಲವು ಆಚರಣೆಗಳನ್ನು ಮಾತ್ರ ಹಿಂದೂಗಳ ಲಿಂಗ ತಾರತಮ್ಯ, ಜಾತಿ ತಾರತಮ್ಯಕ್ಕೆ ಉದಾಹರಣೆ ಮಾಡಿ ಸಾರ್ವತ್ರೀಕರಿಸುವುದು ಅವಾಸ್ತವಿಕವಾಗುತ್ತದೆ. ಅಂಥ ಮಾತನ್ನಾಡುವವರು ಈ ದೇವಾಲಯಗಳಿಗೇ ಹೋಗದವರು ಮಾತ್ರ.

ಇನ್ನು ಈ ಸಂದರ್ಭದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಮಾತನ್ನಾಡಲಾಗುತ್ತಿದೆ. ಭಾರತೀಯ ದೇವಾಲಯಗಳನ್ನು ಚರ್ಚು ಮಸೀದಿಗಳಂಥ ಪ್ರಾರ್ಥನಾ ಸ್ಥಳಗಳು ಎಂದು ತಪ್ಪಾಗಿ ಕಲ್ಪಿಸಿದ್ದರಿಂದ ಈ ಎಲ್ಲ ಆವಾಂತರಗಳು. ಭಾರತೀಯರಿಗೆ   ದೇವಾಲಯಕ್ಕೆ ಹೋಗಿಯೇ ದೇವರನ್ನು ಪೂಜೆ ಮಾಡಬೇಕು ಅಥವಾ ಪೂಜೆ ಮಾಡಿಯೇ ಸದ್ಗತಿಯನ್ನು ಪಡೆಯಬೇಕು ಎಂಬ ನಿರ್ಬಂಧವಿಲ್ಲ.  ಹಾಗಾಗಿ ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದರಿಂದ ಯಾವುದೇ ಭಾರತೀಯನ ಧಾರ್ಮಿಕ ಹಕ್ಕು ಚ್ಯುತಿಯಾಗುವುದಾಗಲೀ, ಸಾಮಾಜಿಕ ಸ್ಥಾನಮಾನವು ಭ್ರಷ್ಟವಾಗುವುದಾಗಲೀ ಇಲ್ಲಿ ಸಾಧ್ಯವಿಲ್ಲ. ಪರಮಾತ್ಮನ ಸಾಕ್ಷಾತ್ಕಾರಕ್ಕೆ  ಅಥವಾ ಸದ್ಗತಿಗೆ ದೇವಾಲಯಗಳೊಂದೇ ಸಾಧನ ಎಂಬುದಾಗಿ ನಮ್ಮ ಯಾವ ಮಹಾ ಪುರುಷರೂ ಹೇಳಿಲ್ಲ, ಯಾವ ಗ್ರಂಥಗಳೂ ಸಾರಿಲ್ಲ. ಹಾಗೆ ಸಾರಿದವರನ್ನು ಅಜ್ಞಾನಿಗಳು ಎಂದೇ ನಮ್ಮ ಪರಂಪರೆ ಹೇಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಮಾತನಾಡುವವರಿಗೆ ನಮ್ಮ ಪರಂಪರೆಯ ಕುರಿತು ಈ ಅಜ್ಞಾನವಿದೆ ಎನ್ನಲಡ್ಡಿಯಿಲ್ಲ. ಇದಕ್ಕಿಂತ ತಮಾಷೆಯ ವಿಷಯವೆಂದರೆ ಈ ಹೋರಾಟಗಾರರು ತಾವೇ ಗೌರವಿಸದ ಸದ್ಗತಿಯ ಹಕ್ಕನ್ನು ಇತರರಿಗೆ ಕೊಡಿಸುವ ಸಲುವಾಗಿ ಹೋರಾಡುತ್ತಿರುವುದು.

ಈ ಧಾರ್ಮಿಕ ಹಕ್ಕು ಎಂಬುದು ನಮಗೆ ಪಾಶ್ಚಾತ್ಯರಿಂದ ಬಂದ ಬಳುವಳಿ. ಆದರೆ ಪ್ರಸ್ತುತ ಚಳವಳಿಯಲ್ಲಿ ತೊಡಗಿರುವವರಿಗೆ ಒಂದು ವಿಷಯ ಗೊತ್ತಿದ್ದಂತಿಲ್ಲ. ಪಾಶ್ಚಾತ್ಯರು ಧಾರ್ಮಿಕ ಹಕ್ಕು ವಯಕ್ತಿಕ ಆಯ್ಕೆ ಎಂದು ಹೇಳುತ್ತಾರೆ. ಪ್ರತೀ ವ್ಯಕ್ತಿಗೂ ತನ್ನ ಸದ್ಗತಿಗೆ ಬೇಕಾದ ರಿಲಿಜನ್ನನ್ನು ಆಯ್ದುಕೊಳ್ಳುವ ಹಕ್ಕು ದೈವದತ್ತವಾಗಿದೆ. ಅನ್ಯರು ಅದರಲ್ಲಿ ಹಸ್ತಕ್ಷೇಪ ಮಾಡಿದರೆ ಅದು ಧಾರ್ಮಿಕ ಹಕ್ಕಿನ ಹರಣವೇ ಆಗುತ್ತದೆ. ಹಾಗಾಗೇ ಬಲಾತ್ಕಾರದ ಮತಾಂತರವನ್ನು ಧಾರ್ಮಿಕ ಹಕ್ಕಿನ ಚ್ಯುತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರಸ್ತುತ ಚರ್ಚೆಯಲ್ಲಿ ಇವರೆಲ್ಲ ಸಮಸ್ತ ಭಕ್ತ ಸ್ತ್ರೀ ಸಮುದಾಯದ ಧಾರ್ಮಿಕ ಹಕ್ಕಿನ ಕುರಿತು ಮಾತನಾಡುತ್ತಿದ್ದಾರೆ. ಹಾಗೂ ಇವರು ಆ ಭಕ್ತ ಸಮುದಾಯಕ್ಕೆ ಸೇರಿಲ್ಲ. ಹಾಗಾದರೆ ಇವರು ಅವರ ಹಿತಾಸಕ್ತಿಯನ್ನು ಹೇಗೆ ಪ್ರತಿನಿಧಿಸಬಲ್ಲರು? ಎಂಬ ಪ್ರಶ್ನೆ ಏಳುತ್ತದೆ. ಈ ಹೋರಾಟ ಮಾಡುವವರು ಭಕ್ತ ಸ್ತ್ರೀಯರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆಯೆ? ಆ ಸ್ತ್ರೀಯರು ‘ಈ ಸಂಪ್ರದಾಯವು ಇರಲಿ’ ಎಂದು ಹೇಳಿದ ಪಕ್ಷದಲ್ಲಿ ಧಾರ್ಮಿಕ ಹಕ್ಕಿನ ಕುರಿತು ಹೋರಾಡುವವರೇ ಅದನ್ನು ಉಲ್ಲಂಘಿಸಿದ ಹಾಗಾಗುವುದಿಲ್ಲವೆ? ಈ ಪ್ರಶ್ನೆಗೆ ಅವರಿಗಿರುವುದು ಒಂದೇ ಉತ್ತರ: ಅದೆಂದರೆ ಈ ಸ್ತ್ರೀಯರೆಲ್ಲ ಮುಗ್ಧರು, ತಿಳಿವಳಿಕೆಯಿಲ್ಲದವರು, ಇಲ್ಲ ಸೋಗಲಾಡಿಗಳು. ಇಂಥ ಉತ್ತರಗಳು ಸ್ತ್ರೀ ಘನತೆಯ ಪರವಾಗಿ ಹೋರಾಡುವವರಿಗೆ ಬೇಕೆ?

ಇನ್ನು ಈ ಹೊರಾಟವನ್ನು ಮಾಡುತ್ತಿರುವವರಲ್ಲಿ ಇಬ್ಬಂದಿತನವೂ ಇದೆ. ಶಬರಿಮಲೆಯ ಆಚರಣೆಯನ್ನು ಪ್ರಶ್ನಿಸಿ ಪಿಐಎಲ್ ಹಾಕಿದವರು ಒಬ್ಬ ಮುಸ್ಲಿಂ. ಇಸ್ಲಾಂನಲ್ಲಿ ಸ್ತ್ರೀಯರಿಗೆ ಸಾರ್ವತ್ರಿಕವಾಗಿ ಪ್ರಾರ್ಥನೆಯಲ್ಲಿ ಸಹಭಾಗಿತ್ವವಿಲ್ಲ. ಹಾಗಿರುವಾಗ ಶಬರಿಮಲೆಗೆ ಹೋಗುವ ಸ್ತ್ರೀಯರ ಸಮಾನತೆಗೆ ಚ್ಯುತಿ ಬಂದಿತೆನ್ನುವುದು ಮಾತ್ರ ಸಮಸ್ಯೆಯಾಗಿದ್ದುದು ಆಶ್ಚರ್ಯ.ಇಂಥ ಹೋರಾಟಗಳ  ಮಿತಿಯನ್ನು ತಿಳಿಸಲು ಇದು ಒಂದು ಉದಾಹರಣೆ ಅಷ್ಟೆ.ಶಬರಿಮಲೆಯಲ್ಲಿ,ಶನಿ ಸಿಂಗಣಾಪುರಗಳಲ್ಲಿ, ಅಥವಾ ಇನ್ನೂ ಇಂಥ ಕ್ಷೇತ್ರಗಳಲ್ಲಿ ಇರುವ ಆಚರಣೆಗಳು ಆಯಾ ಕ್ಷೇತ್ರಗಳು ಹಾಗೂ ಅವುಗಳ ರಿವಾಜಿಗೆ ಸಂಬಂಧಪಟ್ಟವು ಅಷ್ಟೆ.ಅವನ್ನು ಸ್ತ್ರೀಯರ ಸಮಾನತೆಯ ಹಾಗೂ ಹಕ್ಕುಗಳ ಸಮಸ್ಯೆಗಳನ್ನಾಗಿ ನೋಡುವುದೇ ತಪ್ಪು. ಅದರಿಂದ ಹುಟ್ಟುವುದು ವಿವಾದ ಹಾಗೂ ಪ್ರಕ್ಷುಬ್ದತೆಯೇ ವಿನಃ ಸ್ತ್ರೀ ಸಮಾನತೆಯಲ್ಲ.

ಹಿಂದೂಯಿಸಂನಲ್ಲಿ ಎಲ್ಲೆಲ್ಲೂ ಸುಳ್ಳು, ಅನೈತಿಕತೆ ಹಾಗೂ ಮೌಢ್ಯಗಳೇ ತುಂಬಿವೆ ಎಂಬುದು ವಿದ್ಯಾವಂತ ಹಿಂದೂಗಳ ಸಾಮಾನ್ಯ ಜ್ಞಾನವೇ ಆಗಿಬಿಟ್ಟದೆ. ಹಾಗಾಗಿ ಕಣ್ಣಿಗೆ ಕಾಣಿಸಿದ ಆಚರಣೆಗಳೆಲ್ಲವೂ ಒಂದಿಲ್ಲೊಂದು ಹಕ್ಕುಗಳನ್ನು ಹತ್ತಿಕ್ಕುತ್ತಿರುವಂತೆ ಕಾಣುತ್ತದೆ. ಅದಕ್ಕೆ ಸರಿಯಾಗಿ ಪೂಜಾರಿಗಳೂ ಋತುಸ್ರಾವ, ಮೈಲಿಗೆ ಅಂತೆಲ್ಲ ತುಪ್ಪ ಹೊಯ್ಯುತ್ತಿರುತ್ತಾರೆ. ಋತುಸ್ರಾವವು ದೇವಾಲಯಗಳಿಗೆ ಸಮಸ್ಯೆಯಾಗಿದ್ದೇ ಹೌದಾಗಿದ್ದರೆ ಉಳಿದ ದೇವಾಲಯಗಳಲ್ಲಿ ಸ್ತ್ರೀಯರನ್ನು ಏಕೆ ಬಿಟ್ಟುಕೊಳ್ಳುತ್ತಾರೆ? ಅವಕ್ಕೆಲ್ಲ ಚಳವಳಿಗಳೇ ನಡೆದವೆ? ಈಗ ಸ್ತ್ರೀಯರಿಗೆ ವೇದಗಳನ್ನು, ಪೌರೋಹಿತ್ಯವನ್ನು ಕಲಿಸಲಾಗುತ್ತಿದೆ. ದಲಿತ ಸ್ತ್ರೀಯರನ್ನೇ ಪೂಜಾರಿಗಳನ್ನಾಗಿ ಮಾಡುವ ಪ್ರಯೋಗಗಳನ್ನೂ ನೋಡಿದ್ದೇವೆ. ಅವು ಯಾವ ಹಿಂದೂಗಳಿಗೂ ಸಮಸ್ಯೆಯಾಗಿ ಕಾಡಿಲ್ಲ. ಅಂದರೆ ಇಲ್ಲಿ ಮೇಲ್ನೋಟಕ್ಕೆ ಕಾಣಿಸುವುದೆಂದರೆ ಅದು ಆಯಾ ದೇವಾಲಯಗಳ ರಿವಾಜು ಹಾಗೂ ಭಕ್ತರು ಅವನ್ನು ಮಾನ್ಯಮಾಡಿಯೇ ಆ ಕ್ಷೇತ್ರಗಳಿಗೆ ಹೋಗುತ್ತಾರೆ. ಹಾಗಾಗಿ ಇಂಥ ಆಚರಣೆಗಳನ್ನು ಮಾಡುವವರಿಗೇ ಅವು ಸಮಸ್ಯೆಯಾಗಿ ಕಾಡುವವ ವರೆಗೂ ಅದೊಂದು ನಿವಾರಿಸಬೇಕಾದ ಸಮಸ್ಯೆಯಲ್ಲ. ಅವಕ್ಕೆ ಸಂಬಂಧ ಪಡದವರ ಹಸ್ತಕ್ಷೇಪವಂತೂ ಅನಗತ್ಯ ಹಿಂಸೆಗೆ ಎಡೆಮಾಡುತ್ತದೆ. ಅಂಥದ್ದೊಂದು ಸಂದರ್ಭ ಬಂದಾಗ ಅವರೇ ಮತ್ತೊಂದು ಪುರಾಣವನ್ನು ಕಟ್ಟಿಕೊಂಡು ಹೊಸ ಆಚರಣೆಗಳನ್ನು ಮಾನ್ಯಮಾಡುತ್ತಾರೆ. ನಮ್ಮ ಯಾವ ದೇವಾಲಯಗಳ ಪೂಜಾ ವಿಧಿಗಳೂ ಆಚಂದ್ರಾರ್ಕವಾಗಿ ಇರುವಂಥವಲ್ಲ. ಅವು ಕಾಲದಿಂದ ಕಾಲಕ್ಕೆ ಭಕ್ತರ ಒಲವುಗಳಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡೇ ಬಂದಿವೆ.ದೇವಾಲಯಗಳ ದೇವರುಗಳೇ ಬದಲಾಗಿವೆ,ಆಚರಣೆ ಬದಲಾಗುವುದು ಏನು ಮಹಾ?

7 ಟಿಪ್ಪಣಿಗಳು Post a comment
  1. ಫೆಬ್ರ 1 2016

    ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ಉಪಯೋಗಹೀನ ದೇವರುಗಳಿಗೆ ಅದರಲ್ಲೂ 33 ಕೋಟಿ ದೇವರುಗಳಿಗೆ ದೇವಸ್ಥಾನಗಳನ್ನು ಕಟ್ಟಿಸಿರುವುದಾದರೂ ಏತಕ್ಕೆನ್ನುವುದು ಯಾರಿಗಾದರೂ ಅರಿವಾಗಿದೆಯೆ? ಪುರಾತನ ಕಾಲದಲ್ಲಿದ್ದ ಬುದ್ಧಿಹೀನ ಮಾನವರು ಪ್ರಕೃತಿ ವಿಕೋಪಕ್ಕೆ ಹೆದರಿ ಸೃಷ್ಟಿಸಿದ್ದೇ ದೇವರೆಂಬ ಲಿಂಗರಹಿತ ವ್ಯಕ್ತಿ. ಅದನ್ನು ನಿಲ್ಲಿಸಿ, ಮಲಗಿಸಿ, ಕೂಡಿಸಿ ತರಹೇವಾರಿ ರೂಪುಗಳನ್ನು ಕೊಟ್ಟು, ದೇವಸ್ಥಾನಗಳನ್ನು ಕಟ್ಟಿ, ವಿಗ್ರಹದ ಮುಂದೆ ಗೋಲಕವನ್ನಿಟ್ಟು, ಆ ದೇವರುಗಳನ್ನು ಭಿಕ್ಷುಕರನ್ನಾಗಿ ಮಾಡಿ, ಅದರಲ್ಲಿ ಮೂಢರು ಹಾಕುವ ಹಣವನ್ನು ಕದ್ದು ಮಜಾ ಮಾಡುವವರನ್ನು ಸೃಷ್ಟಿಸಿದವರೂ ಈ ಮೂಢರೇ. ಸಾಲದ್ದಕ್ಕೆ ತಮ್ಮ ಎಲ್ಲಾ ಆನಂದಕ್ಕೂ ಹೆಂಗಸರನ್ನು ಉಪಯೋಗಿಸಿಕೊಳ್ಳುತ್ತಾ ಎರುಬೇಧವನ್ನು ಸೃಷ್ಟಿಸಿದವರು ಇವರೇ. ಇಂತಹ ಯಃಕಶ್ಚಿತ್ ವಿಚಾರವನ್ನು ಅರ್ಥ ಮಾಡಿಕೊಂಡು ದೇವರಿಂದ, ದೇವಸ್ಥಾನಗಳಿಂದ ದೂರವಿದ್ದು, ಅವಿವೇಕೀ ಮಾನವರಿಂದ ತುಂಬಿ ಹೋಗಿರುವ, ಈ ಅಶಾಶ್ವತ ಲೋಕದಲ್ಲಿ ಹುಟ್ಟಿದ ತಪ್ಪಿಗೆ ತಮಗೆ ಬೇಕಾದ ಸುಖ ಸಂತೋಷಗಳನ್ನು ತಮಗೆ ಹೇಗೆ ಬೇಕೋ ಪಡೆದುಕೊಂಡು, ಸಾಕೆಂಬಷ್ಟು ಅನುಭವಿಸಿಬಿಟ್ಟು, ಕೈ ಝಾಡಿಸಿ ಹೊರಟು ಬಿಡಬಾರದೆ – ಈ ಹೆಂಗಸರು?

    ಉತ್ತರ
  2. ಫೆಬ್ರ 2 2016

    ದೇವಾಲಯಗಳ ವೈವಿಧ್ಯಪೂರ್ಣ ರಿವಾಜುಗಳ ಪಟ್ಟಿಯಲ್ಲಿ

    [೧] ಕೆಲವೆಡೆ ಹೆಂಗಸರಿಗೆ ಪ್ರವೇಶವಿಲ್ಲ
    [೨] ಕೆಲವೆಡೆ ಗಂಡಸರಿಗೆ ಪ್ರವೇಶವಿಲ್ಲ
    [೩] ಕೆಲವೆಡೆ ಹೆಂಗಸರನ್ನೇ ಇಟ್ಟು ಪೂಜಿಸುತ್ತಾರೆ
    [೪] ಕೆಲವೆಡೆ ಅಸ್ಪೃಶ್ಯರಿಗೆ ಪ್ರವೇಶವಿಲ್ಲ
    [೫] ಕೆಲವೆಡೆ ಅಸ್ಪೃಶ್ಯರಾದಿಯಾಗಿ ಎಲ್ಲರಿಗೂ ಮುಟ್ಟಿ ದರ್ಶನದ ವ್ಯವಸ್ಥೆ ಇರುತ್ತದೆ
    [೬] ಕೆಲವೆಡೆ ಬ್ರಾಹ್ಮಣರ ಎಡೆಯ ಮೇಲೆ ಕೆಳಜಾತಿಯವರು ಹೊರಳಾಡುತ್ತಾರೆ
    [೭] ಕೆಲವೆಡೆ ಮೇಲ್ಜಾತಿಗಳ ಬೆನ್ನನ್ನು ದಲಿತ ಪೂಜಾರಿಗಳು ತುಳಿದು ಸಾಗುತ್ತಾರೆ
    [೮] ಕೆಲವೆಡೆ ಅಂಗಿ ಬಿಚ್ಚದೇ ಭಕ್ತಾದಿಗಳಿಗೆ ಪ್ರವೇಶ ಇಲ್ಲ
    [೯] ಕೆಲವೆಡೆ ಸ್ವತಃ ಪೂಜಾರಿಗಳೇ ಸ್ವೆಟರ್, ಮಫ್ಲರ್ ಸಮೇತ ಪೂಜೆ ಮಾಡುತ್ತಾರೆ
    [೧೦] ಹೆಂಗಸರ ಕಾಲಿಗೆ ಗಂಡಸರು ಬೀಳುವುದು
    [೧೧] ಅಸ್ಪೃಶ್ಯರ ಕಾಲಿಗೆ ಬ್ರಾಹ್ಮಣರು ಬೀಳುವುದು

    ಎಂದೆಲ್ಲ ಕೊಟ್ಟಿದ್ದೀರಿ. ಇವುಗಳಲ್ಲಿ ಒಂದೆರಡು ವಿಷಯಗಳನ್ನು ಬಲ್ಲೆ.
    ದಯವಿಟ್ಟು ಈ ಪ್ರತಿಯೊಂದಕ್ಕೂ ೧-೨ ಉದಾಹರಣೆಗಳನ್ನು ಕೊಡಬಲ್ಲಿರಾದರೆ
    ಎಲ್ಲರಿಗೂ ಅನುಕೂಲವಾದೀತು. ಅಲ್ಲವೇ ?

    ಉತ್ತರ
  3. Goutham
    ಫೆಬ್ರ 2 2016

    ತಪ್ಪುಗಳ ಸಮರ್ಥನೆಗೊಂದು ಲೇಖನ

    ಉತ್ತರ
  4. ಫೆಬ್ರ 3 2016

    ದೇವಾಲಯಗಳ ವೈವಿಧ್ಯಪೂರ್ಣ ರಿವಾಜುಗಳ ಪಟ್ಟಿಯಲ್ಲಿ

    [೧] ಕೆಲವೆಡೆ ಹೆಂಗಸರಿಗೆ ಪ್ರವೇಶವಿಲ್ಲ
    [೨] ಕೆಲವೆಡೆ ಗಂಡಸರಿಗೆ ಪ್ರವೇಶವಿಲ್ಲ
    [೩] ಕೆಲವೆಡೆ ಹೆಂಗಸರನ್ನೇ ಇಟ್ಟು ಪೂಜಿಸುತ್ತಾರೆ
    [೪] ಕೆಲವೆಡೆ ಅಸ್ಪೃಶ್ಯರಿಗೆ ಪ್ರವೇಶವಿಲ್ಲ
    [೫] ಕೆಲವೆಡೆ ಅಸ್ಪೃಶ್ಯರಾದಿಯಾಗಿ ಎಲ್ಲರಿಗೂ ಮುಟ್ಟಿ ದರ್ಶನದ ವ್ಯವಸ್ಥೆ ಇರುತ್ತದೆ
    [೬] ಕೆಲವೆಡೆ ಬ್ರಾಹ್ಮಣರ ಎಡೆಯ ಮೇಲೆ ಕೆಳಜಾತಿಯವರು ಹೊರಳಾಡುತ್ತಾರೆ
    [೭] ಕೆಲವೆಡೆ ಮೇಲ್ಜಾತಿಗಳ ಬೆನ್ನನ್ನು ದಲಿತ ಪೂಜಾರಿಗಳು ತುಳಿದು ಸಾಗುತ್ತಾರೆ
    [೮] ಕೆಲವೆಡೆ ಅಂಗಿ ಬಿಚ್ಚದೇ ಭಕ್ತಾದಿಗಳಿಗೆ ಪ್ರವೇಶ ಇಲ್ಲ
    [೯] ಕೆಲವೆಡೆ ಸ್ವತಃ ಪೂಜಾರಿಗಳೇ ಸ್ವೆಟರ್, ಮಫ್ಲರ್ ಸಮೇತ ಪೂಜೆ ಮಾಡುತ್ತಾರೆ
    [೧೦] ಹೆಂಗಸರ ಕಾಲಿಗೆ ಗಂಡಸರು ಬೀಳುವುದು
    [೧೧] ಅಸ್ಪೃಶ್ಯರ ಕಾಲಿಗೆ ಬ್ರಾಹ್ಮಣರು ಬೀಳುವುದು

    ಎಂದೆಲ್ಲ ಕೊಟ್ಟಿದ್ದೀರಿ. ಇವುಗಳಲ್ಲಿ ಒಂದೆರಡು ವಿಷಯಗಳನ್ನು ಬಲ್ಲೆ.
    ದಯವಿಟ್ಟು ಈ ಪ್ರತಿಯೊಂದಕ್ಕೂ ೧-೨ ಉದಾಹರಣೆಗಳನ್ನು ಕೊಡಬಲ್ಲಿರಾದರೆ
    ಎಲ್ಲರಿಗೂ ಅನುಕೂಲವಾದೀತು. ಅಲ್ಲವೇ ?

    ಉತ್ತರ
  5. Devu Hanehalli
    ಫೆಬ್ರ 3 2016

    Of course, I don’t consider anyone UNTOUCHABLE and I don’t consider myself as a Brahmin. If others consider so, it is not my problem. Having said that I would like to state the following. I am from Tulunadu where three Dalit castes are priestly (Archaka – this is not the right word, I know) classes and they perform the rituals of over 95 per cent of the gods in the region. Though I am an atheist, I attend all these rituals as they are the parts of my culture, heritage and tradition (not religion). When they give `prasada’ I touch his feet irrespective of the `fact’ that whether he is a Dalit, Billava etc. There is nothing great in it. All do that – without fuss.

    With the 11 points mentioned above by Mr. Hegade. If one can’t find at least one example for each, he/she is unfit to analyse the subject. Forget human beings, you go to Rajastan, they fall flat before mice and rats too!

    Mr. Hemapathy needs some basic lessons in evolution, sustainability and development of … of everything. Diversity is the basic requirement for evolution. From culture, politics to environment, microbes it holds good. Why do Christians and Muslims have been `practicing’ Crusade and Jehad for the last 2000 years? They don’t believe in DIVERSITY. We have taken them as a model for our own doom!! Go to some German university now. They have embraced Indian model for conservation – conservation of everything. May the non-existent God bless you!!!!!

    ಉತ್ತರ
  6. rajaram hegde
    ಫೆಬ್ರ 3 2016

    ತಮಿಳುನಾಡಿನ ಓಂ ಶಕ್ತಿ ದೇವಾಲಯವು ತುಂಬಾ ಸುಪ್ರಸಿದ್ಧ. ಅಲ್ಲಿ ಗಂಡಸರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೆಂಗಸರು ಮಾತ್ರ ಹೋಗಿ ಪೂಜಿಸಬಹುದು. ಗಂಡಸರು ಹೊರಗೇ ನಿಂತು ಪೂಜಿಸುತ್ತಾರೆ. ಅದೊಂದೇ ಅಲ್ಲ ಕರ್ನಾಟಕದಲ್ಲಿಯೇ ಅನೇಕಅಂಥ ಗ್ರಾಮ ದೇವತೆಗಳ ಗುಡಿಗಳಿವೆ ಎಂದು ಕೇಳಿದ್ದೇನೆ. ಇನ್ನು ಮುಟ್ಟಿ ದರ್ಶನವು ಮಹಾರಾಷ್ಟ್ರದಿಂದ ಉತ್ತರಕ್ಕೆ ಇರುವ ಲಿಂಗಗಳ ದೇವಾಲಯಗಳಲ್ಲಿ ಸಾಮಾನ್ಯ. ಮುಟ್ಟಿ ದರ್ಶನ ವಿಲ್ಲದಿದ್ದಲ್ಲೂ ಕೂಡ ಶಿವಲಿಂಗದ ಬಳಿ ಎಲ್ಲರೂ ಹೋಗುತ್ತಾರೆ. ಕಾಶಿಯಲ್ಲಿ ಕೂಡಇದೇ ಪದ್ಧತಿಯಿದೆ.ಕರ್ನಾಟಕದಲ್ಲಿ ಗೋಕರ್ಣದಲ್ಲಿ ಅಸ್ಪೃಶ್ಯರಾದಿಯಾಗಿಎಲ್ಲರೂ ಮಹಾಬಲೇಶ್ವರ ಲಿಂಗವನ್ನು ಮುಟ್ಟಿ ಪೂಜಿಸುತ್ತಾರೆ. ಗರ್ಭಗುಡಿಯೊಳಗೆ ಅರ್ಚಕರು ಮಾತ್ರ ಹೋಗುವ ಕಟ್ಟಳೆ ಇರುವುದು ದಕ್ಷಿಣ ಭಾರತದಲ್ಲಿ ಮಾತ್ರ ಎಂದು ಕಾಣುತ್ತದೆ. ಹಾಗೂ ಅಸ್ಪೃಶ್ಯರನ್ನು ಒಳಗೆ ಬಿಟ್ಟುಕೊಳ್ಳದಿರುವ ಸಮಸ್ಯೆ ಕೂಡ ದಕ್ಷಿಣ ಭಾರತದ ಕೆಲವು ದೇವಾಲಯಗಳಿಗೆ ವಿಶಷ್ಟವಾದುದು. ಮೇಲ್ಜಾತಿಗಳ ಬೆನ್ನ ಮೇಲೆ ದಲಿತ ಪೂಜಾರಿಗಳು ದೇವತೆಗಳನ್ನು ಹೊತ್ತು ಸಾಗುವುದು ಕೂಡ ಕರ್ನಾಟಕದಲ್ಲೇ ಅನೇಕ ಕಡೆಗಳಲ್ಲಿ ಕಂಡುರುತ್ತದೆ. ಹರಪನ ಹಳ್ಳಿಯ ಬಳಿ, ತುಮಕೂರಿನ ಬಳಿ ಇರುವ ಗ್ರಾಮಗಳಲ್ಲಿ ಇಂಥ ಆಚರಣೆಯ ಕುರಿತು ನಾನು ಪತ್ರಿಕೆಯ ವರದಿಗಳನ್ನು ಫೋಟೋಗಳನ್ನು ನೋಡಿದ್ದೇನೆ. ಇನ್ನು ಹೆಂಗಸರು ಹಾಗೂ ಹರಿಜನರ ಮೈಮೇಲೆ ಬರುವ ದೇವತೆಗಳು ಕೂಡಇವೆ. ನಮ್ಮ ಊರಿನ ಬಳಿ ಕಾನಳ್ಳಿ ಎಂಬಲ್ಲಿ ಅಮ್ಮನವರ ದೇವಾಲಯದಲ್ಲಿ ಅವಳು ಹರಿಜನ ವ್ಯಕ್ತಿಯ ಮೈಮೇಲೆ ಬಂದಾಗಎಲ್ಲಾ ಜಾತಿಗಳ ಜನರೂ ಕಷ್ಟ ಪರಿಹಾರಕ್ಕಾಗಿ ಹೋಗಿ ಅಡ್ಡ ಬೀಳುತ್ತಾರೆ, ಈ ವ್ಯಕ್ತಿ ಮೊದಲು ಅಲ್ಲಿನ ಬ್ರಾಹ್ಮಣರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮೈಮೇಲೆ ಬರಲು ಪ್ರಾರಂಭವಾದ ಮೇಲೂ ಕೆಲವು ವರ್ಷ ಕೆಲಸಕ್ಕೆ ಬರುತ್ತಿದ್ದ. ನಂತರ ಈಗಅವನೇ ದೊಡ್ಡ ಗುಡಿ ಕಟ್ಟಿಸಿ ಪೂಜಾರಿಯಾಗಿದ್ದಾನೆ. ಇಂಥಉದಾಹರಣೆಗಳು ಬೇರೆಡೆಗೂ ಇವೆ ಎಂದು ಕೇಳಿದ್ದೇನೆ. ನಮ್ಮಲ್ಲಿ ಸ್ತ್ರೀ ಸನ್ಯಾಸಿಗಳು, ಅಮೃತಾನಂದಮಯಿ, ಮಾತೆ ಮಹಾದೇವಿ ಇತ್ಯಾದಿ ಉದಾಹರಣೆಗಳಂತೂ ಎಲ್ಲರಿಗೂ ಗೊತ್ತು. ಸ್ತ್ರೀಯರಿಗೆ ಪಾದ ಮುಟ್ಟಿ ನಮಸ್ಕರಿಸುವುದು ತಾಯಿಯನ್ನೇ ದೇವರೆಂದು ಪ್ರತಿಪಾದಿಸುವ ಭಾರತೀಯರಿಗೆ ಸಹಜವಾಗಿಯೇ ಕಾಣಿಸುತ್ತದೆ. ನಮ್ಮ ದೇವಾಲಯಗಳಲ್ಲಿ ದೇವಿ/ಶಕ್ತಿಯರ ದೇವಾಲಯಗಳೇ ಪ್ರಧಾನವಾಗಿವೆ. ನೇಪಾಳದಲ್ಲಿ ಬಹುಶಃ ಪಶುಪತಿನಾಥ ದೇವಾಲಯದಲ್ಲಿ ಅಂತ ಕಾಣುತ್ತದೆ,ಕುಮಾರಿಯೊಬ್ಬಳನ್ನು ಪೀಠದ ಮೇಲಿಟ್ಟು ಪೂಜಿಸುವುದನ್ನು ಮಾಧ್ಯಮಗಳು ಆಗಾಗ ವರದಿ ಮಾಡಿವೆ. ನಾನು ಉತ್ತರಾಖಂಡದ ಪ್ರವಾಸಕ್ಕೆ ಹೋದಾಗ ಹಿಮಾಲಯದ ಕೊರೆಯುವ ಚಳಿಯ ಪ್ರದೇಶಗಳಲ್ಲಿ ದೇವಾಲಯಗಳಅರ್ಚಕರು ಸ್ವೆಟರ್ ಮಫ್ಲರ್ ಗಳನ್ನು ಧರಿಸಿಯೇ ಪೂಜೆ ಮಾಡುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದೆ.ಬಹುಶಃ ಕಾಶಿಯಲ್ಲೂ ಚಳಿಗಾಲದಲ್ಲಿ ಈ ದೃಶ್ಯವನ್ನು ನೋಡಿದ ನೆನಪು.
    ಹಿಂದೂಯಿಸಂ ಕುರಿತು ಸ್ಟೀರಿಯೋಟೈಪುಗಳನ್ನು ಇಟ್ಟುಕೊಂಡಿರುವವರಿಗೆ ಇಂಥ ಉದಾಹರಣೆಗಳು ಆಶ್ಚರ್ಯ ಹುಟ್ಟಿಸಬಹುದು,ಇವೆಲ್ಲ ಅಪವಾದಗಳು ಎಂದೂ ಅನ್ನಿಸಬಹುದು. ಆದರೆ ಇಂಥ ಬಹಳ ದೃಷ್ಟಾಂತಗಳು ಇವೆ. ಅವನ್ನು ಕುರಿತು ಕೇಳಿ ಮರೆತುಬಿಡುತ್ತೇವೆ. ನಮ್ಮ ಸ್ಟೀರಿಯೋಟೈಪುಗಳಿಗೆ ಸೂಕ್ತವಾದ ಉದಾಹರಣೆಗಳನ್ನು ಮಾತ್ರ ನೆನಪಿಟ್ಟುಕೊಳ್ಳುತ್ತೇವೆ.

    ಉತ್ತರ
    • Ckvmurthy
      ಫೆಬ್ರ 6 2016

      Chetan nag,Goutam, Aytaa nimma,mukhakke sariyada mangalarahi, Rajaramahgdeavaru sariyada mahity illade baryeauvadilla.Nimma niluvgalannu swalpa badlyisikolli.Navee bahala buddhvantru emba ahsmbhava bidi.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments