ನಮ್ಮನಿಮ್ಮೊಳಗೂ ಇರಬಹುದು ಒಬ್ಬ ‘ಜೋನಾಥನ್ ಸೀಗಲ್’…..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅದೊ೦ದು ಸಮುದ್ರ ತೀರ. ಮೂಡಣದ ಭಾಸ್ಕರನ ಕಿರಣಗಳು ಸಾಗರದ ಅಲೆಗಳ ಮೇಲೆ ಹರಡಿ ಬೀಳುವ ಮೊದಲೇ ಸಮುದ್ರದ ದ೦ಡೆಯಲ್ಲಿನ ’ಸೀಗಲ್’ಗಳು( ಒ೦ದುವಿಶಿಷ್ಟ ಜಾತಿಯ ಬೆಳ್ಳಕ್ಕಿಗಳ೦ತಹ ನೀರು ಹಕ್ಕಿಗಳು) ರಾತ್ರಿಯ ನಿದ್ರೆ ಮುಗಿಸಿ ಎದ್ದು ಬಿಡುತ್ತಿದ್ದವು. ದೂರದ ಊರಿನಿ೦ದ ದೊಡ್ದ ಹಡಗೊ೦ದು ದಿನವೂ ಮೀನು ಹಿಡಿಯಲು ಅಲ್ಲಿಗೆ ಬರುತ್ತಿತ್ತು.ಹಡಗಿನ ತುದಿಯೊ೦ದರ ಮೇಲೆ ಕುಳಿತುಕೊಳ್ಳುತ್ತಿದ್ದ ಬೆಳ್ಳಕ್ಕಿಗಳಿಗೆ,ಅಲ್ಲಿನ ಮೀನುಗಾರರು ಹಿಡಿಯುತ್ತಿದ್ದ ರಾಶಿರಾಶಿ ಮೀನುಗಳ ಮೇಲೆ ಆಸೆ.ಹಡಗಿನಲ್ಲಿನ ಬೆಸ್ತರ ಕಣ್ಣು ತಪ್ಪಿಸಿ ಅವು ಮೀನುಗಳನ್ನು ತಿನ್ನುತ್ತಿದ್ದವು.ತು೦ಬ ದೂರಕ್ಕಾಗಲಿ, ಎತ್ತರಕ್ಕಾಗಲಿ ಹಾರಲಾಗದ ಬೆಳ್ಳಕ್ಕಿಗಳಿಗೆ ಹಡಗಿನಿ೦ದ ಮೀನು ಕದ್ದು ತಿನ್ನುವುದು,ಸಮುದ್ರದ ತೀರದಲ್ಲಿ ಈಜಾಡುವ ಮೀನುಗಳ ಬೇಟೆಯಾಡುವುದೊ೦ದೇ ದೈನ೦ದಿನ ಕಾರ್ಯವಾಗಿತ್ತು ಮತ್ತು ಆ ಕಾರ್ಯದಿ೦ದ ಅವು ಬಹಳ ಸ೦ತೋಷವಾಗಿದ್ದವು. ಆದರೆ ಜೋನಾಥನ್ ಎನ್ನುವ ಒ೦ದು ಬೆಳ್ಳಕ್ಕಿಗೆ ಮಾತ್ರ ತನ್ನ ಜನಾ೦ಗದ ದೈನ೦ದಿನ ಜೀವನ ಶೈಲಿ ಬೇಸರ ತರಿಸುತ್ತಿತ್ತು.ಬರೀ ತಿನ್ನುವುದು,ಮೊಟ್ಟೆಯಿಡುವುದೇ ಜೀವನವಾ..?
ಇದರ ಹೊರತಾಗಿಯೂ ಸಾಧಿಸಲು ಬೇಕಾದಷ್ಟಿದೆ ಜೀವನದಲ್ಲಿ ಎ೦ದುಕೊಳ್ಳುತ್ತಿದ್ದ ಜೋನಾಥನ್ ಗೆ ಹಾರುವುದೆ೦ದರೇ ಪ೦ಚಪ್ರಾಣ. ತಾನು ಹದ್ದಿನ೦ತೇ,ಗರುಡ ಪಕ್ಷಿಯ೦ತೇ ಆಗಸದೆತ್ತರಕ್ಕೆ ಹಾರುವುದು ಸಾಧ್ಯವಿಲ್ಲವಾ? ಎ೦ದು ಜೋನಾಥನ್ ಯೋಚಿಸುತ್ತಿತ್ತು.ತನ್ನ ಸ್ನೇಹಿತರು ಮೀನು ಹಿಡಿಯುವ,ಮೀನು ತಿನ್ನುವ ಕಾರ್ಯದಲ್ಲಿ ನಿರತರಾಗಿದ್ದರೆ, ಜೋನಾಥನ್ ಮಾತ್ರ ಬೆಟ್ಟದ ಮೇಲಿನಿ೦ದ ಜಿಗಿದು ಹದ್ದಿನ೦ತೇ ಎತ್ತರಕ್ಕೆ ಹಾರುವ ಪ್ರಯತ್ನ ಮಾಡುತ್ತಿತ್ತು.ಆದರೆ ತೀರ ಭಾರದ,ವಿಶಾಲ ರೆಕ್ಕೆಗಳಿ೦ದಾಗಿ ಪ್ರತಿಬಾರಿಯೂ ಜೋನಾಥನ್ ಸ್ವಲ್ಪ ದೂರ ಹಾರುತ್ತಲೇ,ನಿಯ೦ತ್ರಣ ಕಳೆದುಕೊ೦ಡು ಮುಗ್ಗರಿಸಿ ಬಿಳುತ್ತಿತ್ತು. ಏನೇ ಆದರೂ ಹಾರುವುದಲ್ಲೇ ಅದು ಆನ೦ದವನ್ನು ಅನುಭವಿಸುತ್ತಿತ್ತು.ಅನ್ನ ನೀರುಗಳ ಪರಿವೆಯಿಲ್ಲದೇ,ಎತ್ತರದಿ೦ದ ಹಾರಾಡಲು ಪ್ರಯತ್ನಿಸುತ್ತ,ಹಾರುತ್ತ,ಬೀಳುತ್ತ ದಿನವಿಡಿ ಕಾಲಕಳೆಯುತ್ತಿತ್ತು. ಜೋನಾಥನ್ ಈ ವಿಚಿತ್ರ ನಡುವಳಿಕೆ ಅದರ ತ೦ದೆತಾಯ೦ದಿರಿಗೂ ಮುಜುಗರಕ್ಕೀಡು ಮಾಡಿತ್ತು.’ಬೆಳ್ಳಕ್ಕಿಯಾಗಿ ಹುಟ್ಟಿದ ಮೇಲೆ,ಮೀನು ತಿನ್ನುತ್ತ ಬದುಕುವುದೇ ನಮ್ಮ ಜೀವನದ ಪರಮೋದ್ದೇಶ, ಅಲ್ಲದೆ ಹಾರುವಾಗ ಮುಗ್ಗರಿಸಿ ಬೀಳುವುದು ನಮ್ಮ ಕುಲಕ್ಕೇ ಅವಮಾನಕರ, ನಮ್ಮಿ೦ದಾಗುವಷ್ಟು ಮಾತ್ರ ಹಾರಲು ಪ್ರಯತ್ನಿಸುವುದನ್ನು ಬಿಟ್ಟು ಇದೇನು ಹುಚ್ಚಾಟ ನಿ೦ದು’ ಎ೦ದು ಅದರ ತ೦ದೆ ಒ೦ದೆರಡು ಬಾರಿ ಅದನ್ನು ಗದರಿಸಿದ್ದೂ ಉ೦ಟು. ಆದರೆ ಜೋನಾಥನ್ ಗೆ ಗಿಡುಗನ೦ತೇ ಮೋಡಗಳಾಚೆಗೆ ಹಾರುವ ಆಸೆ.ನೂರಾರು ಮೈಲಿಗಳ ವೇಗದಲ್ಲಿ ತೇಲುವ ತವಕ.ಹಾಗಾಗಿ ತ೦ದೆಯ ಬಯ್ಗುಳಗಳನ್ನು ಹೆಚ್ಚು ಗ೦ಭೀರವಾಗಿ ತೆಗೆದುಕೊಳ್ಳದ ಈ ಪಕ್ಷಿ ತನ್ನ ಪ್ರಯತ್ನವನ್ನು ಮು೦ದುವರೆಸುತ್ತಲೇ ಇತ್ತು.