ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨
-ಡಾ.ಶ್ರೀಪಾದ ಭಟ್, ತುಮಕೂರು
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಕವಿಕಾಣದ್ದನ್ನು ವಿಮರ್ಶಕ ಕಂಡ!
ಕಾವ್ಯದಲ್ಲಿ ಕವಿ ಊಹಿಸದೇ ಇರುವ ಸಂಗತಿಯನ್ನು ಕೂಡ ವಿಮರ್ಶಕ ಖಚಿತವಾಗಿ ಹೇಳಬಲ್ಲ ಎಂಬ ಕಾರಣಕ್ಕೆ ಈ ಮಾತು. ಕುವೆಂಪು ಅವರು ಹೇಳಿದ್ದು: ರವಿ ಕಾಣದ್ದನ್ನು ಕವಿ ಕಂಡ. ಇದನ್ನು ಮುಂದುವರೆಸಿದ ಹಿರಣ್ಣಯ್ಯ ಕವಿ ಕಾಣದ್ದನ್ನು ಕುಡುಕ ಕಂಡ ಎಂದಿದ್ದರು. ಕನ್ನಡ ವಿಮರ್ಶೆಗಳನ್ನು ಅವಲೋಕಿಸಿದವರು ಆರಂಭದ ನನ್ನ ಮಾತನ್ನು ಒಪ್ಪಬಹುದು. ಇದಕ್ಕೆ ನಿದರ್ಶನವೊಂದಿದೆ. ಮೈಸೂರಿನಲ್ಲಿ ಕೆ.ಎಸ್ ನರಸಿಂಹಸ್ವಾಮಿಯವರ ಕಾವ್ಯ ಕುರಿತ ವಿಚಾರಗೋಷ್ಠಿ ನಡೆದಿತ್ತು. ಖ್ಯಾತರಾದ ಸ್ಥಾಪಿತ ವಿಮರ್ಶಕರೊಬ್ಬರು ಕೆಎಸ್ನ ಕಾವ್ಯದ ಜನಪ್ರಿಯ ಗೀತೆಯ ’ಪದುಮಳು ಒಳಗಿಲ್ಲ’ ಎಂಬ ಸಾಲನ್ನು ವಿಮರ್ಶಿಸುತ್ತ ಪದುಮ ಹೆಣ್ಣು ಕುಲದ ಪ್ರತೀಕ. ಗಂಡಸರು ಹೆಣ್ಣನ್ನು ಎಂದೂ ಒಳಗೆ ಬಿಟ್ಟುಕೊಂಡೇ ಇಲ್ಲ. ಆದ್ದರಿಂದ ಪದುಮಳು ಒಳಗಿಲ್ಲ ಎಂದರೆ ಹೆಣ್ಣನ್ನು ಗಂಡಸರು ತಮ್ಮ ವ್ಯಾವಹಾರಿಕ ಪ್ರಪಂಚದಿಂದ ಯಾವಾಗಲೂ ಹೊರಗೇ ಇಟ್ಟಿದ್ದಾರೆ ಎಂದರ್ಥ! ಎನ್ನುತ್ತ ವಿಶೇಷ ವ್ಯಾಖ್ಯಾನ ಮಾಡಿದರು. ಕೆಎಸ್ನ ಅವರನ್ನು ಒಮ್ಮೆ ಭೇಟಿಯಾದಾಗ ಪದ್ಯದ ಅರ್ಥ ಹಿಂಗಂತಲ್ಲಾ ಸಾರ್? ಅಂದೆ. ಅದೇನೋಪ್ಪ, ನಾನಂತೂ ಪದ್ಯ ಬರೆಯುವಾಗ ಅದನ್ನೆಲ್ಲ ಖಂಡಿತ ಯೋಚಿಸಿರಲಿಲ್ಲ. ಅದೇನಿದ್ದರೂ ಮುಟ್ಟು-ಮೈಲಿಗೆ ಅರ್ಥದಲ್ಲಿ ಹೊಳೆದ ಸಹಜ ಸಾಲು ಎಂದಿದ್ದರು. ಹೀಗಾಗಿಯೇ ಹೇಳಿದ್ದು: ಕವಿ ಕಾಣದ್ದನ್ನು ವಿಮರ್ಶಕ ಕಂಡ ಎಂದು. ಇರಬಹುದು. ಅನೇಕಾರ್ಥಗಳನ್ನು ಹೊಳೆಸಿದಾಗಲೇ ನಿಜವಾದ ಕಾವ್ಯವಾಗುವುದು. ಅಲ್ಲವೇ?